
ಗಾಂಧೀಜಿ ಅಂದರೆ ಏನು?
ಈ ಪ್ರಶ್ನೆಗೆ ಹತ್ತು ಜನ, ಹತ್ತು ಬಗೆಯ ಉತ್ತರ ಕೊಡಬಹುದು. ಈ ಸಂಬಂಧ ಒಂದಿಷ್ಟು ಸ್ಯಾಂಪಲ್ಗಳನ್ನು ಹೇಳುವುದಾದರೆ-ಗಾಂಧೀಜಿ ಅಂದರೆ ಮಹಾತ್ಮ. ಗಾಂಧೀಜಿ ಅಂದರೆ ಬಾಪೂ. ಗಾಂಧೀಜಿ ಅಂದರೆ ಸತ್ಯಾಗ್ರಹ. ಗಾಂಧೀಜಿ ಅಂದರೆ ಉಪವಾಸ. ಗಾಂಧೀಜಿ ಅಂದರೆ ಅಹಿಂಸೆ. ಗಾಂಧೀಜಿ ಅಂದರೆ ಪ್ರಾಮಾಣಿಕತೆ. ಗಾಂಧೀಜಿ ಅಂದರೆ ಸರಳತೆ. ಗಾಂಧೀಜಿ ಅಂದರೆ ಸತ್ಯ. ಗಾಂಧೀಜಿ ಅಂದರೆ ಬ್ರಿಟಿಷರೊಂದಿಗೆ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧೀರ. ಗಾಂಧೀಜಿ-ಅಸ್ಪೃಶ್ಯತೆಯ ನಿವಾರಣೆಗೆ ಎದ್ದು ನಿಂತ ಸಂತ. ಇದೆಲ್ಲದರ ಜತೆಗೆ-ಗಾಂಧಿ ಜಯಂತಿ ಎಂದರೆ- ಆ ಮಹಾತ್ಮನ ಹ್ಯಾಪಿ ಬರ್ತ್ಡೇ; ಮತ್ತು ಗಾಂಧಿ ಮಾರ್ಗವೆಂದರೆ-ಎಂ.ಜಿ. ರಸ್ತೆ!
ಹೌದು, ಗಾಂಧೀಜಿಯ ಬಗ್ಗೆ, ಗಾಂಧಿ ಜಯಂತಿಯ ಬಗ್ಗೆ ಮತ್ತು ಗಾಂಧಿ ಮಾರ್ಗದ ಬಗ್ಗೆ ನಮಗೆ ಗೊತ್ತಿರುವುದೇ ಇಷ್ಟು. ಹೆಚ್ಚಿನ ಸಂದರ್ಭದಲ್ಲಿ ಎಲ್ಲರೂ ಗಾಂಧೀಜಿಯನ್ನು ಊZಠಿeಛ್ಟಿ ಟ್ಛ ಟ್ಠ್ಟ Zಠಿಜಿಟ್ಞ ಎಂದು ಕರೆದು ಸುಮ್ಮನಾಗಿಬಿಡುತ್ತಾರೆ. ಹೀಗೆ ಹೇಳುವ ಬದಲು, ಗಾಂಧೀಜಿಯೆಂದರೆ, ಯಾರಿಗೂ ನಿಲುಕದ ಅತಿ ಮಾನವನಲ್ಲ. ಸುಮಾರು ನೂರಾ ಮೂವತ್ತೊಂಬತ್ತು ವರ್ಷಗಳ ಹಿಂದೆ ಎಲ್ಲರಂತೆಯೇ ಹುಟ್ಟಿ, ಬೆಳೆದು ಮುಂದೆ ‘ಮಹಾತ್ಮ’ ಅನ್ನಿಸಿಕೊಂಡಾತ ಎಂದು ಹೇಳಲು ಮರೆತೇಬಿಡುತ್ತಾರೆ. ಇರಲಿ, ‘ಕರಮಚಂದ ಗಾಂಧಿ ಹಾಗೂ ಪುತಲಿಬಾಯಿಯ ಮಗನಾಗಿ, ೧೮೬೯, ಅಕ್ಟೋಬರ್ ೨ ರಂದು ಪೋರಬಂದರ್ನಲ್ಲಿ ಗಾಂಧೀಜಿ ಜನಿಸಿದರು. ಎಂಬ ಹಳೆಯ ವಿವರಣೆಯ ಬದಲು; ಗಾಂಧೀಜಿಯ ಬದುಕಿನ ಕೆಲವೊಂದು ಸ್ವಾರಸ್ಯಕರ ಪ್ರಸಂಗಗಳು ಇಲ್ಲಿವೆ.
* ಎಲ್ಲರೂ ಬಲ್ಲಂತೆ ಗಾಂಧೀಜಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದವರು. ಯೌವನದ ದಿನಗಳಲ್ಲಿ ಅವರು ನಿಜಕ್ಕೂ ಸೊಗಸುಗಾರ ಪುಟ್ಸಾಮಿ. ಟಿಪ್ಟಾಪ್ ಆದ ಪ್ಯಾಂಟು- ಶರ್ಟು, ಮೇಲೊಂದು ಕೋಟು, ಕೊರಳಿಗೆ ಟೈ, ಶೂಗೆ ದಿನ ದಿನವೂ ಪಾಲಿಶ್… ಇದು ಲಾಯರ್ ಗಾಂಧೀಜಿಯ ಉಡುಗೆಯಾಗಿತ್ತು. ಆದರೆ, ಅದೊಂದು ಸಂದರ್ಭದಲ್ಲಿ ಕೂಲಿ ರೈತರ ಪರ ಹೋರಾಟ ಕ್ಕೆಂದು ಮದ್ರಾಸಿಗೆ ಬಂದ ವರಿಗೆ- ಒಂದು ಲಂಗೋಟಿ, ಒಂದು ಮುಂಡಾಸು ಸುತ್ತಿಕೊಂಡೇ ರೈತರು ಕೆಲಸ ಮಾಡುತ್ತಿರುವುದು ಕಾಣಿಸಿತು. ಛೆ, ನನ್ನ ದೇಶದ ಜನ ಹೀಗೆ ಬಟ್ಟೆಯಿಲ್ಲದೆ ದುಡಿಯುತ್ತಿರುವಾಗ ನಾನು ಶೋಕಿ ಮಾಡುವುದು ಸರಿಯಲ್ಲ ಅನ್ನಿಸಿತು. ಅಂದಿನಿಂದಲೇ ಒಂದು ತುಂಡು ಪಂಚೆ, ಒಂದು ಮುಂಡಾಸಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡರು ಗಾಂಧೀಜಿ.
* ಗಾಂಧೀಜಿಯ ಸಾಬರಮತಿ ಆಶ್ರಮ ನಡೆಯುತ್ತಿದ್ದುದು ದಾನಿಗಳು, ಶ್ರೀಮಂತರು ಉದಾರವಾಗಿ ನೀಡಿದ ಹಣದಿಂದ. ಸಹಜ ವಾಗಿಯೇ ಅವರೆಲ್ಲ ಮೇಲ್ವರ್ಗದವರೇ ಆಗಿದ್ದರು. ಇಂಥ ಸಂದರ್ಭದಲ್ಲಿ ಗಾಂಧೀಜಿ ಅಸ್ಪೃಶ್ಯತೆಯನ್ನು ತೊಡೆದು ಹಾಕಿ ಎಂದದ್ದಲ್ಲದೆ, ತಮ್ಮ ಆಶ್ರಮಕ್ಕೇ ಹರಿಜನರನ್ನು ಕರೆತಂದರಲ್ಲ, ಆಗ ಶ್ರೀಮಂತ ದಾನಿಗಳೆಲ್ಲ ಒಬ್ಬೊಬ್ಬರಾಗಿ ಆಶ್ರಮದಿಂದ ಎದ್ದು ಹೋದರು. ಶ್ರೀಮಂತರೆಲ್ಲ ಎದ್ದು ಹೋದಾಗ ಆಶ್ರಮ ನಡೆಸುವುದೇ ಕಷ್ಟವಾಯಿತು. ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದವರು ಇದನ್ನೇ ಹೇಳಿದಾಗ ಗಾಂಧೀಜಿ ನಿರ್ಲಿಪ್ತರಾಗಿ-ದೇವರಿದ್ದಾನೆ ಬಿಡು. ಏನಾದ್ರೂ ದಾರಿ ತೋರಿಸ್ತಾನೆ ಎಂದರು.
ಮರುದಿನವೇ ಒಂದು ಪವಾಡ ನಡೆದು ಹೋಯಿತು. ಶ್ರೀಮಂತನೊಬ್ಬ ಅನಿರೀಕ್ಷಿತವಾಗಿ ಆಶ್ರಮಕ್ಕೆ ಬಂದು ಆ ಕಾಲಕ್ಕೆ ತುಂಬ ದೊಡ್ಡ ಮೊತ್ತ ನೀಡಿ, ಬಾಪೂ, ನಿಮಗಿದು ನನ್ನ ಅಲ್ಪ ಕಾಣಿಕೆ ಎಂದು ಹೋಗಿಯೇ ಬಿಟ್ಟ.
* ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ
ಗಾಂಧೀಜಿಯ ಭಾಷಣ ವೆಂದರೆ-
ಸಾವಿರ ಸಾವಿರ ಸಂಖ್ಯೆ ಯಲ್ಲಿ ಜನ ಸೇರು ತ್ತಿದ್ದರು. ಆದರೆ, ಇದೇ ಗಾಂಧೀಜಿ, ವಕೀಲರಾಗಿದ್ದ ದಿನಗಳಲ್ಲಿ ವಾದ ಮಾಡಲು ನಿಂತರೆ ಥರಥರನೆ ನಡುಗುತ್ತಿದ್ದರು! ಅವರು ಮೊತ್ತಮೊದಲ ಕೇಸ್ ಕೈಗೆತ್ತಿಕೊಂಡಾಗ-ನ್ಯಾಯಾಲಯದಲ್ಲಿ ಹೇಗೆ ಮಾತಾಡಬೇಕು ಎಂಬ ಬಗ್ಗೆ ಇಡೀ ದಿನ ರಿಹರ್ಸಲ್ ಮಾಡಿದ್ದರು. ಆದರೆ ಕೋರ್ಟ್ಗೆ ಬಂದು, ತಮ್ಮ ಎದುರಾಳಿ ವಕೀಲರನ್ನೂ, ನ್ಯಾಯಾಧೀಶರನ್ನೂ, ನೆರದಿದ್ದ ಜನರನ್ನೂ ಕಂಡಾಗ ಅವರಿಗೆ ತಲೆ ಸುತ್ತಿ ಬಂದಂತಾಯಿತು. ಉರು ಹೊಡೆದಿದ್ದೆಲ್ಲ ಮರೆತುಹೋಯಿತು. ತಕ್ಷಣವೇ, ನಾನು ವಾದ ಮಾಡಲಾರೆ. ಕ್ಷಮಿಸಿ ಎಂದವರೇ ನ್ಯಾಯಾಲಯದಿಂದ ಎದ್ದು ಬಂದೇ ಬಿಟ್ಟರು.
* ಹೋರಾಟ, ಕಾರ್ಯಕ್ರಮ, ಒಪ್ಪಂದದಂಥ ಕೆಲಸಗಳಿಗೆ ಸಂಬಂಧಿಸಿದಂತೆ ವಿದೇಶಗಳಿಗೆ ಗಾಂಧೀಜಿ ಆಗಿಂದಾಗ್ಗೆ ಹೋಗಬೇಕಾಗುತ್ತಿತ್ತು. ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು ೧೫ ಬಾರಿ ವಿದೇಶ ಪ್ರವಾಸ ಮಾಡಿದ್ದರು. ಆದರೆ, ಒಂದೇ ಒಂದು ಬಾರಿಯೂ ವಿಮಾನದಲ್ಲಿ ಪ್ರಯಾಣಿಸಲಿಲ್ಲ. ಅವರದೇನಿದ್ದರೂ ಸಮುದ್ರಯಾನ. ಹಾಗೊಮ್ಮೆ ಲಂಡನ್ನಿಂದ ಡರ್ಬಾನ್ಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ, ಹಡಗಿನಲ್ಲಿ ಕುಳಿತೇ ಗಾಂಧೀಜಿ ೨೭೫ ಪುಟಗಳ ಪುಸ್ತಕವೊಂದನ್ನು ಬರೆದರು. ಅದರ ಹೆಸರು- ‘ಹಿಂದ್ ಸ್ವರಾಜ್’.
* ಗಾಂಧೀಜಿ ಕೈಗೆ ವಾಚು ಕಟ್ಟುತ್ತಿರಲಿಲ್ಲ. ಬದಲಿಗೆ, ಸೊಂಟದಲ್ಲಿ ಒಂದು ಸ್ಟಾಫ್ ವಾಚ್ ಇಟ್ಟುಕೊಳ್ಳುತ್ತಿದ್ದರು. ಯಾವುದೇ ಕಾರ್ಯಕ್ರಮವಿರಲಿ, ಒಂದೇ ಒಂದು ನಿಮಿಷ ತಡವಾಗಿ ಅವರು ಹೋದವರಲ್ಲ. ಅದೊಂದು ಸಂದರ್ಭದಲ್ಲಿ ಮಾತ್ರ ಯಡವಟ್ಟಾಗಿ ಹೋಯಿತು. ಒಂದು ಕಾರ್ಯಕ್ರಮಕ್ಕೆ ತಾವೇ ಬರುವುದಾಗಿ ಗಾಂಧೀಜಿ ಒಪ್ಪಿದ್ದರು. ಕಾರ್ಯಕ್ರಮದ ಸಿದ್ಧತೆ ಕೂಡ ಜೋರಾಗಿ ನಡೆದಿತ್ತು. ಆದರೆ, ಮನೆಯಿಂದ ಹೊರಡುವುದೇ ತುಸು ತಡವಾಯಿತು. ಪರಿಣಾಮ, ಕಾರ್ಯಕ್ರಮ ಶುರುವಾಗಲು ಇನ್ನು ಐದೇ ನಿಮಿಷ ಬಾಕಿ ಇದೆ ಅನ್ನುವಾಗ ಆ ಜಾಗದಿಂದ ಒಂದು ಕಿ.ಮೀ. ಹಿಂದಿದ್ದರು ಗಾಂಧೀಜಿ. ಹೇಗಾದರೂ ಸರಿ, ಸಮಯಕ್ಕೆ ಸರಿಯಾಗಿ ಆ ಜಾಗ ತಲುಪಬೇಕು ಅನಿಸಿದ ತಕ್ಷಣ-ಒಂದೇ ಸಮನೆ ಓಡಲು ಶುರು ಮಾಡಿದರು. ಹಾಗೆ ಎಕ್ಸ್ಪ್ರೆಸ್ ವೇಗದಲ್ಲಿ ಓಡಿ ಮೂರೇ ನಿಮಿಷದಲ್ಲಿ ಆ ಜಾಗ ತಲುಪಿದರು. ನಂತರ ಎರಡು ನಿಮಿಷ ರೆಸ್ಟ್ ತೆಗೆದುಕೊಂಡರು. ಮರುಕ್ಷಣವೇ, ಗಾಂಧೀಜಿಯ ಭಾಷಣ ಶುರುವಾಗಿ ಹೋಯಿತು!
* ಅದೊಂದು ಸಭೆ. ಅಲ್ಲಿ ಗಾಂಧೀಜಿಯ ಭಾಷಣವಿತ್ತು. ಸಭೆಗೆ ಅವರ ವಿರೋಧಿಗಳೂ ಬಂದಿದ್ದರು. ಗಾಂಧಿಯ ಭಾಷಣ ಶುರುವಾಗುವ ಮೊದಲೇ ವಿರೋಧಿಗಳ ಪೈಕಿ ಒಬ್ಬ ವೇದಿಕೆ ಹತ್ತಿ ಗಾಂಧೀಜಿಯನ್ನು ಯದ್ವಾ ತದ್ವಾ ಬೈದ. ನಂತರ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಬಾವುಟ ನೀಡಿದ. ಆಗ ಗಾಂಧಿ ಹೇಳಿದರಂತೆ: ‘ಸರಿ, ಇದನ್ನು ನಿನ್ನ ನೆನಪಿಗೆ ಇಟ್ಕೋತೀನಿ. ಗೆಳೆಯಾ, ನಿನ್ನ ಮನಸನ್ನಾದರೂ ಬೆಳ್ಳಗೆ ಇಟ್ಟುಕೋ…’
* ಒಂದು ಹಳ್ಳಿ. ಅಲ್ಲಿ ಒಬ್ಬ ಯುವಕನಿದ್ದ. ಅವನು ಪೋಲಿಯಲ್ಲ, ಅಪಾಪೋಲಿ. ಕುಡಿತ, ಜೂಜು, ಸಿಗರೇಟು ಅವನಿಗೆ ನಿತ್ಯದ ‘ಹಾಬಿ’ ಆಗಿತ್ತು. ಹೀಗಿದ್ದಾಗಲೇ ಊರಿಗೆ ಬಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರು- ‘ಧೂಮಪಾನ ಮಾಡಬಾರದು, ಮದ್ಯಪಾನ ಮಾಡಬಾರದು, ಮಾಂಸ ತಿನ್ನಬಾರದು’ ಎಂದು ಗಾಂಧೀಜಿ ಹೇಳಿದ್ದಾರೆ ಎಂದರು. ಈ ಮಾತು ಯುವಕನ ಮನಸ್ಸಿಗೆ ನಾಟಿತು. ಛೆ, ಗಾಂಧೀಜಿ ಹೇಳಿದ ಮೇಲೆ ಅದನ್ನು ಪಾಲಿಸದೆ ಇರುವುದು ಹೇಗೆ ಅಂದುಕೊಂಡ. ಅಂದಿನಿಂದಲೇ ಎಲ್ಲ ದುರಭ್ಯಾಸಗಳಿಗೂ ಸಲಾಂ ಹೊಡೆದ.
ಇವರು ನಮ್ಮ್ ಗಾಂಧೀ ತಾತ…!!!
ಮಣಿ,
ಸ್ವಾಗತ!
ಗಾಂಧೀಜಿಯ ಬಗ್ಗೆ ಸೊಗಸಾಗಿ ತಿಳಿಸಿಕೊಟ್ಟಿದ್ದೀರ.
ಧನ್ಯವಾದಗಳು
ಕುಮಾರಸ್ವಾಮಿ
ಪುಣೆ
ಈ ಬ್ಲಾಗಿನ ಬಗ್ಗೆ ಕೇಳಿದ್ದೆ, ನೋಡಿದ್ದೆ, ಆದರೆ ಇವರದ್ದೇ ಅಂತ ತಿಳಿದಿರಲೇ ಇಲ್ಲ.
ಗಾಂಧೀಜಿಯವರ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಸಮಗ್ರವಾಗಿ ನಿರೂಪಿಸಿದ್ದೀರಿ. ಈ ಅಮೂಲ್ಯ ಕೃತಿಯ ಮುಂದೆ ನನ್ನ ಟೋಪಿಯನ್ನು ಕೆಳಗಿಡುತ್ತಿರುವೆ.
ಈಗಿನ ಮಕ್ಕಳಿಗೆ ಗಾಂಧೀಜಿ ಎಂದ್ರೆ, ನೆನಪಾಗೋದು, ಇಂದಿರಾ, ಸೋನಿಯಾ, ರಾಜೀವ ಇತ್ಯಾದಿ. ಬಾಪೂ ಬಗ್ಗೆ ಏನೇನು ತಿಳಿಯದೇ, ಅವರ ಹೆಸರನ್ನು ಎಲ್ಲೆಡೆಯೂ ಉಪಯೋಗಿಸುತ್ತಿರುವವರಿಗೆ ಈ ಪುಟ್ಟ ಲೇಖನವು ಸ್ವಲ್ಪ ತಿಳಿವು ನೀಡುತ್ತಿದೆ. ಬಾಪೂಜೀ ಅವರ ಬಗ್ಗೆ ಇದೇ ತರಹದ ಇನ್ನೂ ಹೆಚ್ಚಿನ ಮಾಹಿತಿಯನ್ನು ಧಾರಾವಾಹಿಯಾಗಿ ಪ್ರಕಟಿಸಬೇಕೆಂದು ಕೋರುವೆ. ನಮ್ಮ ದೇಶದ ನಾಯಕರುಗಳ ಬಗ್ಗೆ ಇಂತಹ ಕೃತಿಗಳ ಮೂಲಕ ಇನ್ನೂ ಹೆಚ್ಚಿನ ಬೆಳಕು ಚೆಲ್ಲಿ ಸಾರ್.
ಉತ್ತಮ ಕೆಲಸ ಅನೂಚಾನವಾಗಿ ನಡೆಯಲಿ
ಗುರುದೇವ ದಯಾ ಕರೊ ದೀನ ಜನೆ