
ಸರಳತೆ, ದಕ್ಷತೆ, ಪ್ರಾಮಾಣಿಕತೆ ಅಂದಾಕ್ಷಣ ನೆನಪಾಗುವ ಹೆಸರು ಲಾಲ್ಬಹದ್ದೂರ್ ಶಾಸ್ತ್ರಿ ಅವರದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಮತ್ತು ನೆಹರೂಗೆ ಅತ್ಯಾಪ್ತ ರಾಗಿದ್ದವರು ಲಾಲ್ಬಹದ್ದೂರ್ ಶಾಸ್ತ್ರಿ . ಅದೊಂದು ಸಂದರ್ಭದಲ್ಲಿ ಜವಾಹರಲಾಲ್ ನೆಹರೂ ಅವರು ಮಾತಾಡುತ್ತಾ – ಶಾಸ್ತ್ರೀಜಿ ಅವರಿಗಿಂತ ಉತ್ತಮ ಸ್ನೇಹಿತನನ್ನು, ಸಹೋ ದ್ಯೋಗಿಯನ್ನು ಯಾರೂ ಬಯಸಲಾರರು. ಅವರು ಅತ್ಯಂತ ಸರಳರು, ನಿಷ್ಠರು, ಪ್ರಾಮಾಣಿ ಕರು, ಉನ್ನತ ಧ್ಯೇಯ ವಾದಿಗಳು ಮತ್ತು ಕಠಿಣ ಪರಿಶ್ರಮಗಳು ಎಂದಿದ್ದರು.
ನೆಹರೂ ಸಂಪುಟದಲ್ಲಿ ಒಮ್ಮೆ ರೈಲ್ವೆ ಹಾಗೂ ಇನ್ನೊಮ್ಮೆ ಗೃಹಖಾತೆಯ ಸಚಿವರಾಗಿದ್ದ ಶಾಸ್ತ್ರೀಜಿ, ಮುಂದೆ ಪ್ರಧಾನಿಗಳೂ ಆದರು. ಈ ಸಂದರ್ಭದಲ್ಲಿ ನಡೆದ ಪ್ರಸಂಗವಿದು. ಆಗ ಉಳಿದೆಲ್ಲ ರಾಜಕಾರಣಿಗಳ ಬಳಿಯೂ ಎರಡು ಮೂರು ಕಾರುಗಳಿದ್ದವು. ಆದರೆ ಗೃಹಸಚಿವ ಅನ್ನಿಸಿಕೊಂಡ ನಂತರ ಕೂಡ ಶಾಸ್ತ್ರಿಯವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು ಮಧ್ಯಮ ವರ್ಗದ ಮಕ್ಕಳು ಹೋಗುತ್ತಿದ್ದ ಕುದುರೆ ಬಂಡಿಯಲ್ಲೇ ಶಾಲೆಗೆ ಕಳಿಸುತ್ತಿದ್ದರು.
ಕೇಂದ್ರ ಸಚಿವ ಎಂದು ಕರೆಸಿಕೊಂಡ ಮೇಲಾದರೂ ಓಡಾಡಲು ಒಂದು ಕಾರು ಬೇಡವೆ ಎಂಬುದು ಶಾಸ್ತ್ರಿಯವರ ಹೆಂಡತಿ ಹಾಗೂ ಮಕ್ಕಳ ವಾದವಾಗಿತ್ತು. ಈಗ ಓಡಾಡಲು ಸರಕಾರದ ಕಾರ್ ಇದೆ. ಇನ್ನೊಂದು ಕಾರ್ನ ಅಗತ್ಯವಾದರೂ ಏನು ಎಂದು ಪ್ರಶ್ನಿಸಿ ಶಾಸ್ತ್ರೀಜಿ ಎಲ್ಲರ ಬಾಯಿಮುಚ್ಚಿಸಿದ್ದರು. ಆದರೆ, ವರ್ಷಗಳ ನಂತರ ಪ್ರಧಾನಿ ಪಟ್ಟಕ್ಕೇ ಶಾಸ್ತ್ರೀಜಿ ಬಂದು ಕೂತರಲ್ಲ? ಆಗ ಅವರ ಮಕ್ಕಳೆಲ್ಲ ಒಟ್ಟಾಗಿ ಹೋಗಿ ‘ಸ್ವಂತ ಕಾರು ತಗೋಬೇಕು ಎಂಬ ಆಸೆಯನ್ನು ಈಗಲಾದರೂ ಈಡೇರಿಸಿ’ ಎಂದರು.
ಅದಕ್ಕೆ ಒಪ್ಪಿದ ಶಾಸ್ತ್ರೀಜಿ, ಅವತ್ತೇ ಸಂಜೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಹಾಗೂ ಒಂದು ಹೊಸ ಕಾರಿನ ಬೆಲೆ ಎಷ್ಟಾಗುತ್ತದೆ ಎಂದು ವಿಚಾರಿಸಿ ತಿಳಿಸುವಂತೆ ಆದೇಶಿಸಿದರು. ಮರುದಿನ ಬೆಳಗ್ಗೆ ಸಂಕೋಚದಿಂದಲೇ ಅವರ ಮುಂದೆ ನಿಂತ ಆಪ್ತಕಾರ್ಯದರ್ಶಿ ‘ಸರ್, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನಾಲ್ಕು ಸಾವಿರ ರೂ.ಗಳಿದೆ ಹಾಗೂ ಹೊಸ ಕಾರ್ನ ಬೆಲೆ ಹನ್ನೆರಡು ಸಾವಿರ ರೂ. ಆಗುತ್ತದೆ’ ಎಂದರು!
ಭಾರತದಂಥ ಬೃಹತ್ ದೇಶದ ಪ್ರಧಾನಿಯಾಗಿದ್ದ ಸಮಯದಲ್ಲಿ ಕೂಡ ಅವರ ಬಳಿ ಆಪತ್ಕಾಲದ ನಿಧಿ ಎಂಬಂತೆ ಇದ್ದುದು ಕೇವಲ ನಾಲ್ಕು ಸಾವಿರ ರೂ. ಎಂದು ತಿಳಿದು ಶಾಸ್ತ್ರಿಯವರ ಮಕ್ಕಳಿಗೆಲ್ಲ ಶಾಕ್ ಆಯಿತು. ಆದರೆ, ಶಾಸ್ತ್ರೀಜಿ, ಅದೇನೂ ದೊಡ್ಡ ಸಂಗತಿಯಲ್ಲ ಎಂಬಂತೆ ತಮ್ಮ ಬ್ಯಾಂಕ್ ಬ್ಯಾಲೆನ್ಸ್ನ ವಿವರ ಪಡೆದ ನಂತರವೂ ಹಸನ್ಮುಖಿಯಾಗಿಯೇ ಇದ್ದರು. ನಂತರ ಸರಕಾರದಿಂದ ಸಾಲ ಪಡೆದು ಹೊಸ ಕಾರು ಖರೀದಿಸಿ, ಮಕ್ಕಳ ಬಯಕೆಯನ್ನು ಪೂರೈಸಿದರು.
***
ಅಂದಿನ ರಾಜಕಾರಣಿಗಳು ಹಾಗಿದ್ದರು. ಆದರೆ ಇಂದಿನವರು…?
ಇಂತಹ ವಿಷಯ ನಮ್ಮ ರಾಜಕಾರಿಣಿಗಳಿಗೆ ತಪ್ಪೀ ಹೇಳಬೇಡಿ. ದಂತ ಕಥ ಎಂದಾರು!!