ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ!

ಒಂದು ಕಾಲವಿತ್ತು.

ಆಗೆಲ್ಲ, ಭವಿಷ್ಯ ತಿಳಿಯ ಬೇಕು ಅನ್ನುವವರು, ಸೀದಾ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಆಂಗೈ ತೋರಿಸುತ್ತಿದ್ದರು. ಕವಡೆ ಬಿಡುತ್ತಿದ್ದರು. ನಂತರ, ಅವರು ಹೇಳಿದ್ದಕ್ಕೆಲ್ಲ ‘ಸರಿ ಸ್ವಾಮಿ, ನಿಜ ಸ್ವಾಮಿ, ಹೌದು ಸ್ವಾಮಿ’ ಎಂದು ಹೂಂಗುಟ್ಟಿ ಎದ್ದು ಬರುತ್ತಿದ್ದರು. ಜ್ಯೋತಿಷಿಗಳ ಬಳಿಗೆ ಹೋಗಲು ಒಪ್ಪದವರು-ತಮ್ಮ ಹೆಸರಿನ ಮೊದಲಕ್ಷರ ಯಾವ ರಾಶಿಯದು ಎಂದು ತಿಳಿದು, ಕುತೂಹಲದಿಂದಲೇ ಪಂಚಾಂಗದ ಕಡೇ ಪುಟಗಳಲ್ಲಿದ್ದ ಭವಿಷ್ಯ ಓದುತ್ತಿದ್ದರು. ಮುಂದೆ, ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಆಧಾರದ ಮೇಲೆ ಭವಿಷ್ಯ ಹೇಳುವ/ನೋಡುವ ಸ್ಕೀಮು ಜಾರಿಗೆ ಬಂತು. ಭವಿಷ್ಯವನ್ನು ನಂಬದವರು ಕೂಡ ಒಂದು ಕುತೂಹಲದಿಂದ ಅದನ್ನು ಓದಿ, ಕೇಳಿ, ತಿಳಿದು ಖುಷಿಪಟ್ಟರು. ಸ್ವಾರಸ್ಯವೆಂದರೆ, ಈ ಎರಡೂ ವೆರೈಟಿಯ ಭವಿಷ್ಯಗಳಲ್ಲಿ ಹೆಚ್ಚು-ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇದ್ದವು. ಹೇಗೆಂದರೆ, ಜ್ಯೋತಿಷ್ಯ ಹೇಳುವವರು ಪರಿಚಿತರೇ ಆಗಿದ್ದರೆ; ನಮ್ಮಿಂದ ಉಪಕಾರಕ್ಕೆ ಒಳಗಾಗಿದ್ದರೆ-ಕಂಡದ್ದನ್ನು (?!) ಕಂಡಹಾಗೆ ಹೇಳುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಹಾಗೆಯೇ, ಜನ್ಮದಿನಾಂಕ ತಪ್ಪಾಗಿ ನಮೂದಾಗಿದ್ದರೆ, ಆಗ ಕೂಡ ಭವಿಷ್ಯದ ಸಾಲುಗಳಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿತ್ತು.
ಹೀಗಿರುವಾಗ, ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ.
ಕೆಲವರಿರುತ್ತಾರೆ. ಅವರ ಪತ್ರಗಳು ಮಾರುದ್ದ ಇರುತ್ತವೆ ನಿಜ. ಆದರೆ ಆ ಪತ್ರಗಳಲ್ಲಿ ಒಂದೇ ವಿಷಯವನ್ನೂ ಮತ್ತೆ ಮತ್ತೆ ರಿಪೀಟ್ ಮಾಡಿರುತ್ತಾರೆ. ಅದನ್ನು ಓದಿದವರು- ‘ಹುಚ್ಚು, ಮುಂಡೇದು, ಒಂದೇ ವಿಷಯವನ್ನು ಹತ್ತು ಬಾರಿ ಬರ‍್ದಿದೆ. ಮಾಡೋಕೆ ಕೆಲ್ಸ ಇಲ್ಲ ಅನ್ಸುತ್ತೆ’ ಎಂದು ಗೊಣಗುತ್ತಾರೆ. ಹೀಗೆ, ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರಲ್ಲ? ಅಂಥವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ರಿಸ್ಕ್‌ಗೆ ಕೈ ಹಾಕಲು ಹೆದರಿಕೆ ಇರುತ್ತದೆ. ಬೇರೆಯವರು ನಮ್ಮ ಮಾತನ್ನು ಲಕ್ಷ್ಯಗೊಟ್ಟು, ಕೇಳಲಾರರು ಎಂಬ ಶಂಕೆಯಿರುತ್ತದೆ. ಗೆಳೆಯ/ಗೆಳತಿ ನನ್ನ ಪತ್ರದ ಪ್ರತಿ ಸಾಲುಗಳನ್ನೂ ಓದುತ್ತಾನೋ(ಳೋ) ಇಲ್ಲವೋ ಎಂಬ ಅನುಮಾನವಿರುತ್ತದೆ. ಹೀಗೆ ಓದಿ ಹಾಗೆ ಮರೆತುಬಿಟ್ಟರೆ… ಎಂಬ ಸಂಕಟವಿರುತ್ತದೆ. ಈ ಕಾರಣದಿಂದಲೇ ಅವರು ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರೆ. ತೀರಾ ಸಾಮಾನ್ಯ ಎಂಬಂಥ ವಿಷಯ ಬರೆಯುವ ಮೊದಲೇ, ಇದು ಬಹಳ ಗುಟ್ಟಿನ ವಿಷಯ. ನೀನು ಒಬ್ಬನೇ (ಳೇ) ಇದ್ದಾಗ ಓದು ಪ್ಲೀಸ್… ಎಂದೂ ಸೇರಿಸಿ ರುತ್ತಾರೆ! ಪತ್ರವನ್ನು ಪೋಸ್ಟ್/ಕೊರಿಯರ್ ಮಾಡಿದ ಮರುದಿನವೇ ಫೋನ್ ಮಾಡಿ- ‘ಕಾಗದ ಬಂತಾ? ಲೆಟರ್ ಸಿಕ್ತಾ?’ ಎಂದು ಮೇಲಿಂದ ಮೇಲೆ ಕೇಳಿ ಪ್ರಾಣ ತಿನ್ನುತ್ತಾರೆ.
ಕೆಲವರು, ತಮ್ಮ ಪತ್ರವನ್ನು ದೊಡ್ಡ ಅಕ್ಷರ ಗಳಿಂದ ಆರಂಭಿಸುತ್ತಾರೆ. ಆದರೆ ಪತ್ರದ ಕೊನೆ ತಲುಪುವ ವೇಳೆಗೆ ಅವರು ಹೇಳಬೇಕಿರುವ ವಿಷಯದಲ್ಲಿ ಮುಕ್ಕಾಲು ಭಾಗವನ್ನಷ್ಟೇ ಹೇಳಿರುತ್ತಾರೆ. ಉಳಿದದ್ದನ್ನೂ ಹೇಳಲೇ ಬೇಕಲ್ಲ? ಕಾರಣಕ್ಕೆ ಮಾರ್ಜಿನ್‌ನಲ್ಲಿರುವ ಜಾಗದಲ್ಲಿ ಅಕ್ಷರ ಇನ್ನಿಲ್ಲದ ಸರ್ಕಸ್ ಮಾಡಿ ಜೋಡಿಸುತ್ತಾರೆ! ಇಂಥ ಅಕ್ಷರಗಳ ಒಡೆಯರಿಗೆ, ಜೀವನದಲ್ಲಿ ಒಂದು ಯೋಜನೆ, ಶಿಸ್ತು ಇರುವುದಿಲ್ಲ. ತಿಂಗಳ ಮೊದಲಿನಲ್ಲಿ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಓಡಾಡುವ ಈ ಜನ, ತಿಂಗಳ ಕಡೆಗೆ-ಥತ್ ಜೇಬು ಖಾಲಿ ಎಂದು ಹೇಳಿಕೊಂಡೇ ಅಡ್ಡಾಡುತ್ತಿರುತ್ತಾರೆ.
ಪತ್ರ ಬರೆದು ಮುಗಿಸಿದ ನಂತರ, ‘ಮರೆತ ಮಾತು’ ಎಂದು ಬರೆದು ಅದರ ಕೆಳಗೆ ಒಂದು ದಪ್ಪ ಗೆರೆ ಎಳೆದು, ಅದುವರೆಗೂ ಹೇಳದಿದ್ದ ಒಂದು ವಿಚಾರವನ್ನು ಹೇಳುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕುತ್ತಿರುತ್ತಾರೆ. ಸ್ವಾರಸ್ಯ ವೆಂದರೆ, ಇದು ಅವರ ಪ್ಲಸ್ ಪಾಯಿಂಟ್ ಮಾತ್ರವಲ್ಲ, ಮೈನಸ್ ಪಾಯಿಂಟೂ ಆಗಿರುತ್ತದೆ. ಏಕೆಂದರೆ, ಬದುಕಿನ ಬಗ್ಗೆ ಒಂದು ಪ್ಲಾನ್ ಇರುವುದಿಲ್ಲವಲ್ಲ? ಅದೇ ಕಾರಣಕ್ಕೆ ಅವರು ಸ್ವಲ್ಪ ಸೋಮಾರಿಯ ಬದುಕು ಸಾಗಿಸಲು ಶುರುಮಾಡುತ್ತಾರೆ. ಈ ಕಾರಣದಿಂದಲೇ ಜತೆಗಿದ್ದವರ ಟೀಕೆಗೆ, ತಾತ್ಸಾರಕ್ಕೆ ಗುರಿಯಾಗುತ್ತಾರೆ.
ಎರಡು ಸಾಲುಗಳ ಮಧ್ಯೆ ಸ್ವಲ್ಪ ಜಾಸ್ತಿ ಎನ್ನುವಷ್ಟು ಅಂತರಬಿಟ್ಟು ಬರೀತಾರಲ್ಲ? ಅವರಿಗೆ ನಾನುಂಟು ಮೂರು ಲೋಕವುಂಟು ಎಂಬ ಭ್ರಮೆಯಿರುತ್ತದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಅಹಮಿಕೆಯಿರುತ್ತದೆ. ಬಡಾಯಿ ಕೊಚ್ಚಿಕೊಳ್ಳುವ ಹವ್ಯಾಸವಿರುತ್ತದೆ. ಹತ್ತು ಮಂದಿಯನ್ನು ‘ಇಂಪ್ರೆಸ್’ ಮಾಡುವ ‘ಕಲೆ’ ಸಿದ್ಧಿಸಿರುತ್ತದೆ. ಈ ಕಾರಣದಿಂದಲೇ ಅವರನ್ನು ಹಲವರು ಟೀಕಿಸುತ್ತಾರೆ. ಬಯ್ಯುತ್ತಾರೆ. ರೇಗಿಸುತ್ತಾರೆ. ಗೇಲಿ ಮಾಡುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜನ ಕೇರ್ ಮಾಡುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ಹತ್ತು ಮಂದಿಯ ಮುಂದೆ ‘ಪುಂಗಿ ಊದಲು’ ಹೊರಟೇ ಬಿಡುತ್ತಾರೆ.
‘ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂಬಂಥ ಕೆಟಗರಿಯ ಜನ-ತಮ್ಮ ಪತ್ರಗಳಲ್ಲಿ ಆದಷ್ಟೂ ಹೊಸ ಪದಗಳನ್ನು ಬಳಸುತ್ತಾರೆ. ಆ ಮೂಲಕ
ಓದುವವರನ್ನು ಕನ್‌ಫ್ಯೂಸ್‌ಗೆ ಕೆಡವುತ್ತಾರೆ. ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು, ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಬೇಕು ಎಂಬ ಹಪಹಪಿಯಿಂದಲೇ ಅವರು ಹೀಗೆ ಮಾಡಿರುತ್ತಾರೆ. ಸ್ವಾರಸ್ಯವೆಂದರೆ, ಹಾಗೆ ಬಳಸಿದ ಪದ ಅಥವಾ ವಿಷಯದ ಬಗ್ಗೆ ಅವರಿಗೇ ಸಮಗ್ರವಾಗಿ ಗೊತ್ತಿರುವುದಿಲ್ಲ. ಯಾರಾದರೂ ಪಟ್ಟು ಹಿಡಿದು ಪ್ರಶ್ನೆ ಹಾಕಿದರೆ, ಏನಾದರೂ ಹಾರಿಕೆಯ ಉತ್ತರ ಕೊಟ್ಟು ಕಾಗೆ ಹಾರಿಸುತ್ತಾರೆ.
ಒಂದು ಸಾಲು ಬರೆಯುವುದು, ನಂತರ ಅದನ್ನು ಹೊಡೆದು ಹಾಕುವುದು; ಒಂದು ಪದ ಬರೆಯುವುದು, ನಂತರ ಅದನ್ನೂ ಹೊಡೆದು ಹಾಕಿ ಬೇರೊಂದು ಪದ ಬರೆಯುವುದು-ಹೀಗೆ ಮಾಡು ತ್ತಾರಲ್ಲ? ಆ ಜನ ‘ಅಯ್ಯೋಪಾಪ’ ಎಂಬ ವರ್ಗಕ್ಕೆ ಸೇರಿದವರು. ಹೇಗೆ ಬರೆದರೆ ಏನಾಗಿಬಿಡುತ್ತೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹಾಗಾಗಿ ಅವರು, ಮಾಡಿದ ತಪ್ಪನ್ನು ತುಂಬ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯವಿರಲಿ, ಅದನ್ನು ಹತ್ತು ಮಂದಿ ಒಪ್ಪಿಕೊಂಡರೆ ಹಿಂದೆ ಮುಂದೆ ಯೋಚಿಸದೆ ಹನ್ನೊಂದನೆಯವರಾಗಿ ತಾವೂ ಒಪ್ಪಿಬಿಡುತ್ತಾರೆ.
ಕೆಲವರಿರುತ್ತಾರೆ. ಅವರ ಅಕ್ಷರಗಳು ಮಣಿ ಪೋಣಿಸಿದಷ್ಟು ಮುದ್ದು ಮುದ್ದಾಗಿರುತ್ತವೆ. ಅವರ ಬರಹದಲ್ಲಿ ತಪ್ಪುಗಳಿರುವುದಿಲ್ಲ. ಉತ್ಪ್ರೇಕ್ಷೆ ಇರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲಿ ಕೆಲವರಲ್ಲಿ ವಿಪರೀತ ಧಾರಾಳತನ; ರೇಜಿಗೆ ಹುಟ್ಟಿಸುವಂಥ ಜಿಪುಣತನ-ಎರಡೂ ಇರುತ್ತದೆ. ಸ್ವಾರಸ್ಯವೆಂದರೆ, ಈ ಮುದ್ದು ಅಕ್ಷರಗಳ ಮಂದಿಗೆ ಬೊಂಬಾಟ್ ಎಂಬಂಥ ‘ಗೆಳೆಯರ ಬಳಗ’ ಇರುತ್ತದೆ. ಅಭಿಮಾನಿಗಳ ವೃಂದ ವಿರುತ್ತದೆ. ಇವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದರೂ, ಅದೇನು ಕಾರಣವೋ ಏನೋ; ಶತ್ರುಗಳು ಅನಿಸಿಕೊಂಡ ಜನ ಕೂಡ ಅವರನ್ನು ಇಷ್ಟಪಡುತ್ತಾರೆ. ಮುದ್ದಾದ ಅಕ್ಷರಗಳ ಮಂದಿಗೆ ಹತ್ತು ಮಂದಿಯ ಸಂಕಟ ಕೇಳುವುದರಲ್ಲಿ, ಅದಕ್ಕೊಂದು ಪರಿಹಾರ ಹೇಳುವುದರಲ್ಲಿ ಏನೋ ಸಂತಸ! ಆದರೆ, ತಮ್ಮ ನೋವನ್ನು ಹೆಚ್ಚಿನ ಸಂದರ್ಭದಲ್ಲಿ ಹೇಳಿಕೊಳ್ಳುವುದೇ ಇಲ್ಲ. ಈ ಕಾರಣದಿಂದಲೇ ಹಲವರು- ‘ಅವನಿಗೇನ್ರಿ ಕಷ್ಟ,! ಮಹಾರಾಜ, ಮಹಾರಾಜನ ಥರಾ ಇದಾನೆ…’ ಎಂದು ಮಾತಾಡಿಕೊಳ್ಳುತ್ತಾರೆ. ಎಷ್ಟೊಂದು ಖುಷಿಯಾಗಿ ದ್ದಾನಲ್ಲ ಎಂದುಕೊಂಡು ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡಾ…
ಕೆಲವರ ಗುಣ ಹೀಗೆ: ಅವರು ಪತ್ರ ಬರೆಯುವುದು ಫುಲ್‌ಸ್ಕೇಪ್ ಹಾಳೆಯಲ್ಲೇ. ಅದರ ಎರಡೂ ಬದಿಯಲ್ಲಿ ಜಾಗವಿದೆ ಎಂದು ಅವರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಒಂದಕ್ಕೊಂದು ಸಾಲು ಅಂಟಿಕೊಳ್ಳುವಂತೆ ಪತ್ರ ಬರೆದಿರುತ್ತಾರೆ. ಅಕ್ಷರಗಳು ಸಣ್ಣದಿರುತ್ತವೆ. ಪುಟ ತಿರುಗಿಸಿ ಬರೆದರೆ ಏನೋ ಕಳೆದುಹೋಗುತ್ತೆ ಎಂದು ಕೊಂಡವರಂತೆ ಹಾಳೆಯ ಕೊನೆಗೇ ಇರುವೆ ಗಾತ್ರದ ಅಕ್ಷರಗಳಲ್ಲಿ ಮಾತು ಮುಗಿಸಿರುತ್ತಾರೆ. ಅನುಮಾನವೇ ಬೇಡ. ಇಂಥ ಕೈ ಬರಹದ ಜನ ಜಿಪುಣರು. ಅವರ ಜಿಪುಣತನದ ಬಗ್ಗೆ ತಮಾಷೆಗಳಿರುತ್ತವೆ, ಕಥೆಗಳಿರುತ್ತವೆ. ಆದರೂ ಈ ಜನ ಜಿಪುಣತನದಿಂದ ಆಚೆಗೆ ಬರುವುದಿಲ್ಲ. ಹೋಗಲಿ, ಫುಲ್‌ಸ್ಕೇಪ್ ಹಾಳೆಯ ಇನ್ನೊಂದು ಬದಿಯಲ್ಲಿ ಬರೆಯುವ ಉದಾರತೆಯನ್ನೂ ತೋರುವುದಿಲ್ಲ.
ಪದಗಳ ಮಧ್ಯೆ ಹೆಚ್ಚು ಗ್ಯಾಪ್ ಬಿಟ್ಟು ಬರೆಯುತ್ತಾರಲ್ಲ? ಅಂಥ ಹೆಣ್ಣು ಮಕ್ಕಳಿಗೆ ಹತ್ತು ಮಂದಿ ಮೆಚ್ಚುವಂಥ ಸೌಂದರ್ಯವಿರುತ್ತದೆ. ಫ್ಯಾಷನಬಲ್ ಆಗಿ ಮಾತಾಡುವ ‘ಕಲೆ’ ಅವರಿಗೆ ಒಲಿದಿರುತ್ತದೆ. ಒಂದು ದೊಡ್ಡ ಸಾಧನೆ ಮಾಡುವಂಥ ಕೆಪ್ಯಾಸಿಟಿ ಅವರಿಗಿರುತ್ತದೆ ನಿಜ. ಆದರೆ, ‘ಸಾಧನೆ’ಗೆ ಶ್ರಮಿಸುವ ಉತ್ಸಾಹವೇ ಇವರಿಗಿರುವುದಿಲ್ಲ. ಅಂಥ ದೊಡ್ಡ ಶ್ರದ್ಧೆಯೂ ಇರುವುದಿಲ್ಲ. ಹಾಗಾಗಿ, ದೊಡ್ಡ ‘ಎತ್ತರ’ ತಲುಪಿಕೊಳ್ಳಬಲ್ಲ ಸಾಮರ್ಥ್ಯವಿದ್ದರೂ ಇವರು ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿಯುತ್ತಾರೆ.
ಅಕ್ಷರಗಳನ್ನು ಒತ್ತಿ ಒತ್ತಿ ಬರೆಯುತ್ತಾರಲ್ಲ? ಅವರು ದೂರ್ವಾಸನ ವಂಶದವರು. ತಕ್ಷಣವೇ ಸಿಟ್ಟಾಗುತ್ತಾರೆ. ಯಕ್ಕಾಮಕ್ಕಾ ಬಯ್ಯುತ್ತಾರೆ. ಗೆಟ್‌ಔಟ್ ಅಂದೂಬಿಡುತ್ತಾರೆ. ಅಂದಹಾಗೆ, ಇವರೊಳಗೆ ‘ಸ್ವಾರ್ಥ’ ಹೆಚ್ಚಿರುತ್ತದೆ. ಪ್ರತಿಯೊಂದು ಕೆಲಸವನ್ನೂ ಅವರು ಲೆಕ್ಕಾಚಾರದಿಂದಲೇ ಮಾಡುತ್ತಾರೆ. ಎದುರು ನಿಂತವರಿಗೆ ಒಂದು ನಮಸ್ಕಾರ ಹೊಡೆಯ ಬೇಕಾಗಿ ಬಂದರೆ, ಅದರಿಂದ ಏನಾದರೂ ಉಪಯೋಗವಿದೆಯಾ ಎಂದೇ ಯೋಚಿಸುತ್ತಾರೆ.
ಚಿತ್ತುಗಳಿಲ್ಲದೆ ಅಕ್ಷರಗಳಿಂದ ಪತ್ರ ಆರಂಭಿಸಿ ಗಡಿಬಿಡಿಯಲ್ಲಿ ಮುಗಿಸುವ ಜನರಿದ್ದಾರಲ್ಲ? ಅಂಥವರಿಗೆ ತಾಳ್ಮೆ ಕಡಿಮೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅವರು ಮೊದಲು ತೋರಿದ ಉತ್ಸಾಹವನ್ನು ಕಡೆಗೆ ತೋರುವುದಿಲ್ಲ. ಈ ಕಾರಣದಿಂದಲೇ ಅವರು ‘ಯಡವಟ್ರಾಯ’ ಎಂದು ಕರೆಸಿಕೊಳ್ಳುತ್ತಾರೆ. ಒಂದು ಕೆಲಸದಲ್ಲಿ ಯಶಸ್ಸು ಪಡೆಯುವ ಮೊದಲೇ ಇನ್ನೊಂದಕ್ಕೂ ಕೈ ಹಾಕಿ ಫಜೀತಿಗೆ ಸಿಕ್ಕಿಕೊಳ್ಳುತ್ತಾರೆ.
ಕೆಲವರು ಫುಲ್‌ಸ್ಕೇಪ್ ಹಾಳೆಯಲ್ಲಿಯೇ ಬರೆದಿರುತ್ತಾರೆ. ಹಾಳೆಯ ತುಂಬಾ ಬರೆದಿರುತ್ತಾರೆ. ಆದರೆ ಅಲ್ಲಿ ಫುಲ್‌ಸ್ಟಾಪ್, ಕಮಾ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆ… ಯಾವುದೂ ಇರುವುದಿಲ್ಲ. ಒಂದು ವಾಕ್ಯ ಮುಗಿದದ್ದು ಎಲ್ಲಿ? ಹೊಸ ವಾಕ್ಯ ಶುರುವಾಗಿದ್ದೆಲ್ಲಿ ಎಂಬುದೇ ಓದುವವರಿಗೆ ಅರ್ಥವಾಗುವುದಿಲ್ಲ. ಹೀಗೆ ಬರೀತಾರಲ್ಲ- ಅವರಿಗೆ ತಮ್ಮ ಮನಸ್ಸಿನ ಮೇಲೇ ನಿಯಂತ್ರಣವಿರುವುದಿಲ್ಲ. ಅವರ ಕೈ ಮತ್ತು ಬುದ್ಧಿ ಒಟ್ಟೊಟ್ಟಾಗಿ ಓಡುವುದಿಲ್ಲ.
ಪತ್ರಗಳ ಮಧ್ಯೆ, ತಮ್ಮದೇ ಬರವಣಿಗೆಯ ಮಧ್ಯೆ ಏಕಾಏಕಿ ಬೇರೊಂದು ಭಾಷೆಯ ಪದ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇಂಥವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದು ನೌಕರಿಯಲ್ಲಿ, ಒಂದು ಕೆಲಸದಲ್ಲಿ, ಒಂದು ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿ ಈ ಜನ ಹೆಚ್ಚು ದಿನ ಇರುವುದಿಲ್ಲ. ಸಣ್ಣ ಬೇಸರವಾದರೂ ಸಾಕು, ತಕ್ಷಣ ಮನಸ್ಸು ಬದಲಿಸಿ ಎದ್ದುಹೋಗಿಬಿಡುತ್ತಾರೆ. ಇಂಥವರು, ವಹಿಸಿ ಕೊಂಡ ಕೆಲಸವನ್ನು ಹತ್ತುಮಂದಿ ಒಪ್ಪುವಂತೆ ಮಾಡುತ್ತಾರೆ ನಿಜ. ಆದರೆ, ಅವರು ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ, ಹತ್ತು ಮಂದಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದೂ ಇಲ್ಲ.
ಒಂದು ಪತ್ರದಲ್ಲಿ ಸ್ವಲ್ಪ ಜಾಸ್ತಿಯೇ ಮಾರ್ಜಿನ್ ಬಿಟ್ಟು ಬರೆಯುತ್ತಾರಲ್ಲ? ಅಂಥವರು ಹಣಕಾಸಿನ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ -ತಮಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಗೆಳೆಯರ ಮುಂದೆ, ನಾನು ಧಾರಾಳಿ ಎಂದು ತೋರಿಸಿಕೊಳ್ಳಲೂ ಪ್ರಯತ್ನಿಸುತ್ತಾರೆ!
ಕೆಲವರಿಗೆ, ಅತೀ ಎಂಬಂಥ ಆತ್ಮವಿಶ್ವಾಸವಿರುತ್ತದೆ. ನಾನು ಯಾವತ್ತೂ ತಪ್ಪು ಮಾಡೋದೇ ಇಲ್ಲ ಎಂಬ ‘ಅಹಂ’ ಇರುತ್ತದೆ. ಇಂಥ ವರು ಪ್ರತಿಯೊಂದನ್ನೂ ಸಂಕ್ಷಿಪ್ತವಾಗಿ ಬರೆಯುತ್ತಾರೆ ನಿಜ. ಆದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದನ್ನೇ ಮರೆತುಬಿಟ್ಟಿರುತ್ತಾರೆ. uಛಿ ZಜZಜ್ಞಿ, ನಾನು, ಅಂದ್ರೆ ಸುಮ್ನೇನಾ ಎಂಬ ಅಹಮಿಕೆಯೇ ಅವರ ಕೆಲಸ ಕೆಡಿಸಿರುತ್ತದೆ.
ಅದು ಪತ್ರವಿರಬಹುದು, ನೋಟ್ಸ್ ಇರಬಹುದು, ಅರ್ಜಿ ಇರ ಬಹುದು… ಅದರಲ್ಲೂ ಕೆಲವೇ ಶಬ್ದಗಳಲ್ಲಿ ಮಾತು ಮುಗಿಸಿ ಕಡೆಗೆ ಸಹಿ ಮಾಡುವುದನ್ಣೇ ಮರೆಯುವ ಭೂಪತಿಗಳೂ ಇರುತ್ತಾರೆ. ಅನು ಮಾನವೇ ಬೇಡ; ಅವರೆಲ್ಲ ಸೋಮಾರಿ ಸುಬ್ಬಣ್ಣರೇ ಆಗಿರುತ್ತಾರೆ!
* * * *
ಒಂದು ಸರಳ ಸತ್ಯ ಏನೆಂದರೆ, ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ಹಾಗಾಗಿ, ಬರೆಯಲು ಬಾರದವರಿಗೆ ಭವಿಷ್ಯ ಇಲ್ಲವೆ ಎಂಬ ಕೊಂಕು ಪ್ರಶ್ನೆ ಬೇಡ. ಪರಿಚಿತರ, ಗೆಳೆಯ/ಗೆಳತಿಯರ, ಬಂಧುಗಳ ಹಳೆಯ ಪತ್ರವೋ, ಬರಹದ ಸ್ಯಾಂಪಲ್ಲೋ ಜತೆಗಿದ್ದರೆ ಅದನ್ನು ಅಂಗೈಲಿ ಹಿಡಿದುಕೊಂಡೇ ಲೇಖನ ಓದಿ. ಆಗ, ‘ಎದುರಿಗಿಲ್ಲದವರ ನಡವಳಿಕೆಯ’ ದಿವ್ಯ ದರ್ಶನವಾಗಿ- ‘ಅರೆ ಹೌದಲ್ವಾ?’ ಅನಿಸಬಹುದು, ಏನೂ ಅನ್ನಿಸದೆಯೂ ಇರಬಹುದು!

One Comment

  1. eduction & love


RSS Feed for this entry

Leave a Comment