‘ಮುತ್ತಿನಾ ಹನಿಗಳು…’ ಹಾಡಿನ ಬಗ್ಗೆ ಮುತ್ತಿನಂಥ ಮಾತಾಡಿದ್ದರು ಆರ್‌ಎನ್‌ಜೆ…

August 3, 2009

180px-Rajan-Nagendra

ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ…
ಚಿತ್ರ: ಬಯಸದೇ ಬಂದ ಭಾಗ್ಯ. ಗೀತೆರಚನೆ: ಆರ್.ಎನ್. ಜಯಗೋಪಾಲ್.
ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ. ಸಂಗೀತ: ರಾಜನ್-ನಾಗೇಂದ್ರ

ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ
ಮನವು ಅರಳಿ ಹೊಸತನ ತರುತಿದೆ
ನನ್ನಲ್ಲಿ ಹೋಯ್ ನಿನ್ನಲ್ಲಿ ||ಪ||
ಮುಗಿಲಿನಾ ಆಟಕೆ ಮಿಂಚಿನಾ ಓಟಕೆ
ಗಗನ ಹೆದರಿ ನಡುಗಿದೆ ಗುಡುಗಿದೆ
ನನ್ನಂತೆ ಹೋಯ್ ನಿನ್ನಂತೆ ||ಅ.ಪ||

ಗಾಳಿಯೂ ಬೀಸಿದೆ ಕಿವಿಯಲೀ ಹಾಡಿದೆ
ಈ ಹೆಣ್ಣು ಚೆನ್ನ ಗುಣದಲ್ಲಿ ಚಿನ್ನ
ಬಿಡಬೇಡವೆಂದಿದೆ
ಮಾತಿಗೆ ಸೋಲದೆ ಆತುರ ತೋರದೆ
ನಿನ್ನಿಂದ ಇಂದು ದೂರಾಗು ಎಂದು
ಬಿರುಗಾಳಿ ನೂಕಿದೆ ||೧||

ನೋಟದಾ ಮಿಂಚಿಗೆ ಮಾತಿನಾ ಗುಡುಗಿಗೆ
ನಾನಂದು ಹೆದರಿ ಮೈಯೆಲ್ಲ ಬೆವರಿ
ಊರಾಚೆ ಓಡಿದೆ
ಹೆಣ್ಣಿಗೆ ಹೆದರುವಾ ಗಂಡಿನಾ ಶೌರ್ಯವಾ
ನಾನಂದು ಕಂಡೆ ಹುಡುಗಾಟಕೆಂದೆ
ದಿನವೆಲ್ಲ ಕಾಡಿದೆ ||೨||
ಕೆಲವು ಹಾಡುಗಳೇ ಹಾಗೆ; ಅವು ಯಾವುದೋ ಆಕಸ್ಮಿಕ ಸಂದರ್ಭದಲ್ಲಿ ಕೈ ಹಿಡಿದಿರುತ್ತವೆ; ದಿಢೀರನೆ ಎದುರಾಗುವ ಪಕ್ಕದೂರಿನ ಬೆಡಗಿಯ ಹಾಗೆ!’ ನಂತರ, ದಶಕಗಳ ಕಾಲವೂ ಮಧುರ ನೆನಪಾಗಿಯೇ ಉಳಿಯುತ್ತದೆ; ಕಳೆದು ಹೋದ ಗೆಳತಿಯ ಪಿಸುಮಾತಿನ ಹಾಗೆ!! ಸ್ವಾರಸ್ಯವೆಂದರೆ, ಹೀಗೆ ಕಾಡುವ ಹಾಡುಗಳಲ್ಲಿ ಹೆಚ್ಚಿನವು ಯಾರದೋ ಟೀಕೆಗೆ, ಛಾಲೆಂಜಿಗೆ ಉತ್ತರವೆಂಬಂತೆ ಸಿದ್ಧಗೊಂಡಿರುತ್ತವೆ.
ಆರ್. ರಾಮಮೂರ್ತಿ ನಿರ್ಮಾಣ-ನಿರ್ದೇಶನದ ‘ಬಯಸದೇ ಬಂದ ಭಾಗ್ಯ’ ಚಿತ್ರದ ಸೂಪರ್‌ಹಿಟ್ ಗೀತೆ ‘ಮುತ್ತಿನಾ ಹನಿಗಳು…’ ಸಹ, ಹಿಂದಿಯ ಸಂಗೀತ ನಿರ್ದೇಶಕರೊಬ್ಬರು ‘ಕನ್ನಡದಲ್ಲೇನಿದೆ ಮಹಾ ಬಿಡ್ರೀ’ ಎಂದು ಲಘುವಾಗಿ ಮಾತಾಡಿದ್ದಕ್ಕೆ ಉತ್ತರರೂಪವಾಗಿ ಸೃಷ್ಟಿಯಾದ ಗೀತೆ ಎಂಬುದಕ್ಕೆ ಪೂರ್ವಪೀಠಿಕೆಯಾಗಿ ಮೇಲಿನ ಮಾತು ಹೇಳಬೇಕಾಯಿತು.
ಅಂದಹಾಗೆ ಈ ಹಾಡು ಸೃಷ್ಟಿಯಾದ ಸಂದರ್ಭ ಹೀಗಿದೆ; ಗೀತೆರಚನೆಕಾರ ಆರ್.ಎನ್. ಜಯಗೋಪಾಲ್ ಅವರು ೧೯೭೭ರಲ್ಲಿ ಇಂಡಿಯನ್ ಪರ್‌ಫಾರ್ಮರ್‍ಸ್ ರೈಟ್ಸ್ ಸೊಸೈಟಿಗೆ ಉಪಾಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಅವರು ಅದೇ ಸಂಘದ ನಿರ್ದೇಶಕರಾಗಿದ್ದರು. ಈ ಸಂಘದ ಕಚೇರಿ ಮುಂಬಯಿಯಲ್ಲಿತ್ತು. ಅದೊಮ್ಮೆ ಮಂಡಳಿಯ ಸಭೆಗೆಂದು ಮುಂಬಯಿಗೆ ಹೋದ ಆರ್.ಎನ್.ಜೆ. ಅವರಿಗೆ, ಅಲ್ಲಿ ಹಿಂದಿಯ ಸಂಗೀತ ನಿರ್ದೇಶಕ ದಲಾಲ್‌ಸೇನ್ ಅವರು ಭೇಟಿಯಾದರು. ಅದೂ ಇದೂ ಮಾತಾಡುತ್ತಾ ಗೀತೆರಚನೆಯ ಕಡೆಗೆ ಮಾತು ಹೊರಳಿತು. ಆಗ ದಲಾಲ್ ಹೇಳಿದರಂತೆ: ‘ನೀವು ಏನೇ ಹೇಳಿ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ನಮ್ಮ ಮನಸ್ಸಿನ ಭಾವನೆಗೆ ತಕ್ಕ ಹಾಗೆ ಹಾಡು ಬರೆಯಬಹುದು. ಆದರೆ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ನಮಗೆ ಇಷ್ಟಬಂದ ಹಾಗೆ ಹಾಡು ಬರೆಯಲು ಸಾಧ್ಯವಿಲ್ಲ…’
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆರ್.ಎನ್.ಜೆ. ‘ನಿಮ್ಮ ಆಲೋಚನೆಯೇ ತಪ್ಪು. ಹಿಂದಿ ಹಾಗೂ ಉರ್ದುವಿನಲ್ಲಿ ಇದೆಯಲ್ಲ? ಅಷ್ಟೇ ಮಧುರವಾದ ಶಬ್ದ ಸಂಪತ್ತು ಕನ್ನಡದಲ್ಲೂ ಇದೆ. ಯಾವುದೇ ವಿಷಯವಾಗಿ ಬೇಕಾದರೂ ಹತ್ತಲ್ಲ, ನೂರಲ್ಲ, ಸಾವಿರ ಮಂದಿ ಒಪ್ಪುವಂಥ ಹಾಡುಗಳನ್ನು ಕನ್ನಡದಲ್ಲಿ ಬರೆಯಬಹುದು’ ಅಂದರಂತೆ.
ಈ ಮಾತನ್ನು ಒಪ್ಪದ ದಲಾಲ್ ಸೇನ್- ‘ಮಳೆ, ಗುಡುಗು, ಮಿಂಚು… ಈ ಪದಗಳನ್ನೋ ಅಥವಾ ಈ ಸಂದರ್ಭವನ್ನೋ ಇಟ್ಟುಕೊಂಡು ಒಂದು ಡ್ಯುಯೆಟ್ ಸಾಂಗ್ ಬರೀರಿ ನೋಡೋಣ’ ಎಂದು ಸವಾಲು ಹಾಕಿದರಂತೆ.
ಈ ಸವಾಲಿಗೆ ಒಪ್ಪಿಕೊಂಡ ಆರ್‌ಎನ್‌ಜೆ, ಅವತ್ತು ಮಧ್ಯಾಹ್ನವೇ ಹೋಟೆಲಿಗೆ ಬಂದು ಯೋಚಿಸುತ್ತಾ ಕೂತರು. ಮಳೆ, ಮಿಂಚು, ಗುಡುಗು- ಈ ಸಂದರ್ಭದಲ್ಲೇ ಒಂದು ಡ್ಯುಯೆಟ್ ಸಾಂಗ್ ಬರಬೇಕು ಅಂದರೆ- ಮಳೆಯನ್ನು ಕಂಡು ನಾಯಕ-ನಾಯಕಿ ಸಂತೋಷದಿಂದ ಹಾಡುವಂತಿರಬೇಕು ತಾನೆ ಎಂದು ಯೋಚಿಸಿದರು. ಅದೇ ಸಂದರ್ಭದಲ್ಲಿ ಮಳೆ ಬರ್‍ತಾ ಇರುತ್ತೆ ಅಂದರೆ, ಅವರಿಬ್ಬರ ಸುತ್ತಲೂ ಮಳೆನೀರು ಹರೀತಾ ಇರುತ್ತೆ. ಈ ಮಧ್ಯೆಯೇ ಆಗಸದಿಂದ ಒಂದೊಂದು ಹೊಸ ಹನಿ ಬಿದ್ದಾಗಲೂ ಒಂದು ಮುತ್ತಿನ ಹನಿ ಬಿದ್ದಂತೆ ಭಾಸವಾಗುತ್ತೆ’ ಎಂಬ ಐಡಿಯಾ ಕೂಡ ಆರ್‌ಎನ್‌ಜೆಗೆ ಬಂತಂತೆ. ಅದನ್ನೇ ನೆಪಮಾಡಿಕೊಂಡ ಆರ್.ಎನ್.ಜೆ, ‘ಮುತ್ತಿನಾ ಹನಿಗಳೂ ಸುತ್ತಲೂ ಮುತ್ತಲೂ/ಮನವು ಅರಳಿ ಹೊಸತನ ತರುತಿದೆ/ ನನ್ನಲ್ಲಿ ನಿನ್ನಲ್ಲಿ…’ ಎಂದು ಪಲ್ಲವಿ ಬರೆದರು. ಒಂದೆರಡು ನಿಮಿಷಗಳಲ್ಲಿಯೇ ಅನುಪಲ್ಲವಿ ಕೂಡ ಹೊಳೆಯಿತು. ಅದನ್ನೂ ಬರೆದುಕೊಂಡು ಕಡೆಯ ಸಾಲುಗಳ ಮಧ್ಯೆ ‘ಹೋಯ್’ ಎಂಬ ಇನ್ನೊಂದು ಹೊಸ ಪದ ಸೇರಿಸಿದರು. ಹಿಂದೆಯೇ ಈ ಹೊಸ ಹಾಡಿಗೆ ತಾವೇ ಒಂದು ಟ್ಯೂನ್ ಕೂಡ ಸಿದ್ಧಪಡಿಸಿದರು.
ಸಂಜೆಯಾಗುತ್ತಿದ್ದಂತೆಯೇ ದಲಾಲ್‌ಸೇನ್ ಅವರನ್ನು ಭೇಟಿಮಾಡಿ- ‘ಮಧ್ಯಾಹ್ನ ಕನ್ನಡದಲ್ಲಿ ಏನಿದೆ ಮಹಾ? ಆ ಪದಗಳಲ್ಲಿ ಹಾಡು ಬರೆಯಲು ಆಗಲ್ಲ ಅಂದಿದ್ರಿ ಅಲ್ವ? ನಿಮ್ಮ ಅಭಿಪ್ರಾಯ ಸುಳ್ಳು ಎಂದು ತೋರಿಸೋಕೆ ಹಾಡು ಬರ್‍ಕೊಂಡು ಬಂದಿದೀನಿ, ಕೇಳಿ’ ಎಂದರು. ಕನ್ನಡ ಬಾರದಿದ್ದರೂ ಆ ಟ್ಯೂನ್ ಮತ್ತು ಹಾಡಿನ ಲಯವನ್ನು ಅರ್ಥ ಮಾಡಿಕೊಂಡ ದಲಾಲ್‌ಸೇನ್- ‘ಭೇಷ್, ಭೇಷ್, ನಿಮ್ಮ ಹಾಡು ಚೆನ್ನಾಗಿದೆ. ಈಗಿನಿಂದಲೇ ನನ್ನ ಅಭಿಪ್ರಾಯ ಬದಲಿಸಿಕೊಳ್ತೇನೆ’ ಎಂದು ಉದ್ಗರಿಸಿದರಂತೆ.
ನಂತರ ಚೆನ್ನೈಗೆ ಬಂದ ಆರ್.ಎನ್.ಜೆ. ಆಕಸ್ಮಿಕವಾಗಿ ಆರ್. ರಾಮಮೂರ್ತಿಯವರನ್ನು ಭೇಟಿಯಾದರು. ಮಾತಿನ ಮಧ್ಯೆ- ದಲಾಲ್ ಸೇನ್ ಅವರನ್ನು ಭೇಟಿಯಾಗಬೇಕಾಗಿ ಬಂದ ಸಂದರ್ಭ ಹಾಗೂ ಆಗ ಸೃಷ್ಟಿಯಾದ ಗೀತೆಯ ಬಗ್ಗೆ ಹೇಳಿಕೊಂಡರು. ಹಾಡಿನ ಪಲ್ಲವಿ ಹಾಗೂ ಅನುಪಲ್ಲವಿಯನ್ನು ಕೇಳಿದ ರಾಮಮೂರ್ತಿ- ‘ನಮ್ಮ ಸಿನಿಮಾದಲ್ಲಿ ಕಥಾನಾಯಕ ಸಾಧು. ನಾಯಕಿ ಬಹಳ ಜೋರಿನವಳು. ಹೀರೊಯಿನ್ ಮನೆಯಲ್ಲಿ ಹೀರೊ ಬಾಡಿಗೆಗೆ ಇರ್‍ತಾನೆ. ಹೀಗಿದ್ದಾಗಲೇ ಮಳೆ ಬಂದು ರೂಂನಲ್ಲಿ ನೀರು ತುಂಬಿಕೊಂಡಿರುತ್ತೆ. ಇದನ್ನೇ ನೆಪ ಮಾಡಿಕೊಂಡ ಹೀರೊ ‘ನಿಮ್ಮ ಮನೆ ಹೇಗಿದೆ ಅಂತ ನೋಡಿ ಬನ್ರೀ’ ಎಂದು ನಾಯಕಿಯನ್ನು ಕರೆಯುತ್ತಾನೆ. ಆಕೆ ಬಂದವಳೇ, ಮಳೆ ನೀರು ಮೋರಿಯಲ್ಲಿ ಹರಿದುಹೋಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡುತ್ತಾಳೆ. ಇದನ್ನು ಕಂಡಾಗ ಹೀರೊಗೆ ಅವಳಲ್ಲಿ ಪ್ರೀತಿ ಹುಟ್ಟುತ್ತೆ. ಆಗ ಒಂದು ಕನಸಿನ ಹಾಡು ಶುರುವಾಗಬೇಕು. ನೀವು ಬರೆದಿರುವ ಹಾಡು ಆ ಸಂದರ್ಭಕ್ಕೆ ಹೊಂದುತ್ತೆ. ಈ ಹಾಡನ್ನು ನಮಗೆ ಕೊಡಿ ಸಾರ್’ ಎಂದರಂತೆ.
ಇದಕ್ಕೆ ಒಪ್ಪದ ಆರ್.ಎನ್.ಜೆ.- ‘ನಿಮ್ಮ ಚಿತ್ರಕ್ಕೆ ಈಗಾಗಲೇ ಚಿ. ಉದಯಶಂಕರ್ ಸಂಭಾಷಣೆ-ಹಾಡು ಬರೀತಿದ್ದಾರೆ. ಒಬ್ಬರು ಕೆಲಸ ಮಾಡುತ್ತಿರುವ ಸಿನಿಮಾದಲ್ಲಿ ಇನ್ನೊಬ್ಬರು ಮಧ್ಯೆ ಪ್ರವೇಶಿಸಬಾರದು ಎಂದು ನಾವಿಬ್ರೂ ಒಪ್ಪಂದ ಮಾಡ್ಕೊಂಡಿದೀವಿ. ಪರಿಸ್ಥಿತಿ ಹೀಗಿರುವಾಗ ನಾನು ಏನು ಮಾಡಲಿ? ಒಂದು ವೇಳೆ ನಾನು ಹಾಡು ಬರೆಯಲು ಒಪ್ಪಿದ್ರೆ ನನ್ನ ಗೆಳೆಯನ ಅವಕಾಶ ಕಿತ್ತೊಂಡ ಹಾಗಾಗುತ್ತೆ. ಹಾಗಾಗಿ ನಾನು ಬರೆಯೊಲ್ಲ’ ಅಂದರಂತೆ.
ತಕ್ಷಣವೇ ರಾಮಮೂರ್ತಿಯವರು ಚಿ. ಉದಯಶಂಕರ್ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದ್ದಾರೆ. ಮರುದಿನವೇ ಆರ್.ಎನ್.ಜೆ.ಯವರನ್ನು ಭೇಟಿ ಮಾಡಿದ ಉದಯಶಂಕರ್- ‘ಕಥೆಯ ಸಂದರ್ಭಕ್ಕೆ ನಿನ್ನ ಹಾಡು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೆ. ಈ ಹಾಡಿನ ಅಗತ್ಯ ನಮಗೆ ತುಂಬಾ ಇದೆ. ಹಾಗಾಗಿ ಹಾಡನ್ನು ಪೂರ್ತಿ ಮಾಡಿ ಕೊಡು. ನಾವು ಬಳಸಿಕೊಳ್ತೇವೆ’ ಅಂದರಂತೆ. ಆರ್.ಎನ್.ಜೆ. ಗೆಳೆಯನ ಮಾತಿಗೆ ಒಪ್ಪಿದರು. ಅನುಮಾನವೇ ಬೇಡ; ಈ ಹಾಡಿನಿಂದಾಗಿ ಸನ್ನಿವೇಶದ ತೀವ್ರತೆ ಹೆಚ್ಚಿತು.
೧೯೭೭ರಲ್ಲಿ ‘ಬಯಸದೇ ಬಂದ ಭಾಗ್ಯ’ ಬಿಡುಗಡೆಯಾಯಿತಲ್ಲ? ಆಗ ಒಂದು ಅಚಾತುರ್ಯ ನಡೆದುಹೋಯಿತು. ಆ ಸಂದರ್ಭದಲ್ಲಿ, ಬಿಡುಗಡೆಯಾದ ಎಲ್ಲ ಚಿತ್ರಗಳ ಆಡಿಯೋ ಹಕ್ಕುಗಳನ್ನು ಪಡೆದುಕೊಂಡ ಎಚ್‌ಎಂವಿ ಸಂಸ್ಥೆ ಹಾಡುಗಳನ್ನು ಗ್ರಾಮಾಫೋನ್ ತಟ್ಟೆಗಳಲ್ಲಿ ಅಳವಡಿಸಿ ಬಿಡುಗಡೆ ಮಾಡುತ್ತಿತ್ತು. ಹೀಗೆ ಬಿಡುಗಡೆಯಾದ ಗ್ರಾಮಾಫೋನ್ ತಟ್ಟೆಗಳಲ್ಲಿ ಗೀತೆರಚನೆ: ಚಿ. ಉದಯಶಂಕರ್ ಎಂದು ಮುದ್ರಿಸಲಾಗಿತ್ತು! ಈ ಗ್ರಾಮಾಫೋನ್ ತಟ್ಟೆಗಳ ನೆರವಿನಿಂದಲೇ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಆಕಾಶವಾಣಿಯವರು, ಇದು ಚಿ. ಉದಯಶಂಕರ್ ರಚನೆಯ ಗೀತೆ ಎಂದೇ ಹೇಳುತ್ತ ಬಂದರು. ಆಗಿರುವ ಪ್ರಮಾದವನ್ನು ಯಾರೂ ಗಮನಿಸಲೇ ಇಲ್ಲ!
೨೦೦೫ರ ವೇಳೆಗೆ ಆರ್.ಎನ್.ಜೆ. ಅವರೊಂದಿಗೆ ಮುಕ್ತವಾಗಿ ಮಾತಾಡುತ್ತಾ ಈ ವಿಷಯ ಪ್ರಸ್ತಾಪಿಸಿದ ಮಲ್ಲಿಗೆ ಮಾಸಿಕದ ಸಂಪಾದಕರಾದ ಎನ್.ಎಸ್. ಶ್ರೀಧರಮೂರ್ತಿಯವರು- ‘ಸರ್, ನೀವು ಬರೆದ ಹಾಡು ಅದು. ಆದರೆ ಎಚ್‌ಎಂವಿ ಹಾಗೂ ಆಕಾಶವಾಣಿಯವರ ಅಚಾತುರ್ಯದಿಂದಾಗಿ ಚಿ. ಉದಯಶಂಕರ್ ಹೆಸರಲ್ಲಿ ಪ್ರಸಾರ ಆಗ್ತಿದೆ. ಇದನ್ನೆಲ್ಲ ವಿವರವಾಗಿ ಬರೆದು ಒಂದು ಪತ್ರ ಕೊಡಿ. ನಾನು ಆಕಾಶವಾಣಿಯ ಅಕಾರಿಗಳೊಂದಿಗೆ ಮಾತಾಡಿ ಸರಿ ಮಾಡಿಸ್ತೇನೆ’ ಅಂದರಂತೆ.
ಈ ಸಲಹೆಗೆ ಒಪ್ಪದ ಆರ್‌ಎನ್‌ಜೆ- ‘ಛೆ ಛೆ, ಹಾಗೆ ಮಾಡೋದು ಬೇಡ. ಸಿನಿಮಾ ಬಿಡುಗಡೆಯಾಗಿ ಈಗಾಗಲೇ ೨೮ ವರ್ಷ ಆಗಿಹೋಗಿದೆ. ಇಲ್ಲಿಯವರೆಗೂ ಅದು ಚಿ. ಉದಯಶಂಕರ್ ರಚನೆ ಎಂದೇ ಪ್ರಸಾರವಾಗಿದೆ. ಹಾಗಾಗಿ ಅದನ್ನು ಬದಲಿಸುವ ಅಗತ್ಯವಿಲ್ಲ. ಅವನಾದರೂ ನನ್ನ ಜೀವದ ಗೆಳೆಯ ತಾನೆ? ಅವನ ಹೆಸರಲ್ಲೇ ಪ್ರಸಾರವಾಗಲಿ’ ಎಂದರಂತೆ. ನಂತರ ಮುಂದುವರಿದು- ‘ನೋಡಿ ಶ್ರೀಧರಮೂರ್ತಿ, ದೀಪ ಯಾವುದಾದರೇನು? ಬೆಳಕು ಕೊಡುವುದಷ್ಟೇ ಮುಖ್ಯ. ನಮ್ಮ ಉದಯಶಂಕರ್ ಒಂದು ದೀಪ. ಹಾಗೇ ನಾನೂ ಒಂದು ದೀಪ. ನಮ್ಮ ಕೆಲಸವೆಂದರೆ, ಸುಂದರವಾದ ಹಾಡುಗಳನ್ನು ಪ್ರೇಕ್ಷಕರಿಗೆ ನೀಡುವುದು! ಈಗ ಆ ಕೆಲಸವಾಗಿದೆ. ಹಾಡಿನಲ್ಲಿ ಯಾರ ಹೆಸರಿದ್ದರೆ ತಾನೆ ಏನಂತೆ?’ ಎಂದರಂತೆ.
ಪರಿಣಾಮ ಏನಾಗಿದೆಯೆಂದರೆ- ಆಕಾಶವಾಣಿಯ ದಾಖಲೆಗಳಲ್ಲಿ ‘ಮುತ್ತಿನಾ ಹನಿಗಳು’ ಹಾಡು ಚಿ. ಉದಯಶಂಕರ್ ಹೆಸರಲ್ಲೇ ಇದೆ! ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ಮಾತ್ರ ಆರ್.ಎನ್. ಜಯಗೋಪಾಲ್ ಹೆಸರು ಕಾಣಿಸುತ್ತದೆ!
ಅಂದಹಾಗೆ, ಇವತ್ತು ಆರ್.ಎನ್. ಜಯಗೋಪಾಲ್ ಕುಟುಂಬ ಬೆಂಗಳೂರಿನಲ್ಲಿ ‘ಆರ್‌ಎನ್‌ಜೆ’ ಪ್ರಶಸ್ತಿ ವಿತರಣೆ ಸಮಾರಂಭ ನಡೆಸುತ್ತಿದೆ. ಆ ನೆಪದಲ್ಲಿ ಆರ್‌ಎನ್‌ಜೆಯವರನ್ನು ನೆನಪು ಮಾಡಿಕೊಂಡಾಗ- ಸ್ನೇಹ, ಪ್ರೇಮ, ಸವಾಲು… ಎಲ್ಲಕ್ಕೂ ಸಾಕ್ಷಿ ಹೇಳುವ ಈ ಹಾಡು ಕೈಹಿಡಿಯಿತು!
‘ಹಾಡೇ ಮಾತಾಡೇ…’ ಎನ್ನುವ ಮೊದಲೇ ತನ್ನ ಕಥೆ ಹೇಳಿತು…
ಈಗ ನೀವೇ ಹೇಳಿ, ಕಾಡುವ ಹಾಡುಗಳ ಕಥೆ ಅಂದ್ರೆ ಸುಮ್ನೇನಾ?

ಹೃದಯ ಸಮುದ್ರ ಕಲಕಿ…

August 3, 2009

180px-Doddarangegowda

ಚಿತ್ರ : ಆಶ್ವಮೇಧ ಗೀತ ರಚನೆ : ಡಾ. ದೊಡ್ಡರಂಗೇಗೌಡ
ಗಾಯನ : ಡಾ. ರಾಜ್‌ಕುಮಾರ್ ಸಂಗೀತ : ಸಂಗೀತ ರಾಜಾ

ಹೃದಯ ಸಮುದ್ರ ಕಲಕಿ
ಹೊತ್ತಿದೆ ದ್ವೇಷದ ಬೆಂಕಿ
ರೋಷಾಗ್ನಿ ಜ್ವಾಲೆ ಉರಿದುರಿದು
ದುಷ್ಟ ಸಂಹಾರಕೆ ಸತ್ಯ ಝೇಂಕಾರಕೆ
ಪ್ರಾಣ ಒತ್ತೆ ಇಟ್ಟು ಹೋರಾಡುವೆ
ದಿಟ್ಟ ಹೆಜ್ಜೆ ಇಟ್ಟು ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ ||ಪ||

ಸೂರ್ಯ ಚಂದ್ರರೇ ನಿನ್ನ ಕಂಗಳು
ಗಿರಿಶೃಂಗವೇ ನಿನ್ನ ಅಂಗವೂ
ದಿಕ್ಪಾಲಕರೇ ನಿನ್ನ ಕಾಲ್ಗಳು
ಮಿಂಚು ಸಿಡಿಲೂ ನಿನ್ನ ವೇಗವು
ಜೀವಜೀವದಲಿ ಬೆರೆತು ಹೋದ
ಭಾವಭಾವದಲಿ ಕರಗೀ ಹೋದ
ಜೀವಾಶ್ವವೇ ದೂರಾದೆಯಾ, ಪ್ರಾಣಾಶ್ವವೇ ಮರೆಯಾದೆಯಾ
ದಿಟ್ಟ ಹೆಜ್ಜೆ ಇಟ್ಟು, ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ… || ೧ ||

ವಿಷವ್ಯೂಹವಾ ಕುಟ್ಟಿ ಕೆಡವಲು
ವೀರ ಪೌರುಷ ಎತ್ತಿ ಹಿಡಿದು
ಛದ್ಮವೇಷವಾ ಹೊರಗೆಳೆಯಲು
ಕ್ಷಾತ್ರ ತೇಜದಾ ಕತ್ತಿ ಹಿಡಿದು
ಖೂಳ ರಾಕ್ಷಸರ ಕೊಚ್ಚಿ ಕಡಿವೆ
ನೀತಿ ನೇಮಗಳ ಬಿತ್ತಿ ಬೆಳೆವೆ
ಆಕಾಶವೇ ಮೇಲ್ಬೀಳಲಿ, ಭೂತಾಯಿಯೇ ಬಾಯ್ಬಿರಿಯಲಿ
ದಿಟ್ಟ ಹೆಜ್ಜೆ ಇಟ್ಟು, ಯಜ್ಞ ದೀಕ್ಷೆ ತೊಟ್ಟು
ನಡೆಸುವೆ ಅಶ್ವಮೇಧ… ಅಶ್ವಮೇಧ… ಅಶ್ವಮೇಧ… || ೨ ||

ಇವತ್ತಿಗೂ ಎಲ್ಲ ಗಾಯಕರಿಗೂ ಸವಾಲಾಗಿರುವ; ಕೇಳುಗರಿಗೆ ತುಂಬ ಪ್ರಿಯವಾಗಿರುವ ಗೀತೆ – ‘ಹೃದಯ ಸಮುದ್ರ ಕಲಕಿ…’ ಈ ಮಧುರ ಹಾಡಿನ ಹಿಂದಿರುವ ಕಥೆಯಾದರೂ ಎಂಥಾದ್ದು ಎಂಬ ಕುತೂಹಲದಿಂದಲೇ ಅಶ್ವಮೇಧದ ನಿರ್ದೇಶಕ ಸಿ.ಆರ್. ಸಿಂಹ ಅವರನ್ನು ಭೇಟಿಯಾದರೆ, ಈ ಮಧುರ ಗೀತೆ ಸೃಷ್ಟಿಯಾದ ಸಂದರ್ಭವನ್ನು ಅಷ್ಟೇ ಮಧುರವಾಗಿ ವಿವರಿಸಿದರು ಸಿಂಹ. ಅದನ್ನೆಲ್ಲ ಅವರ ಮಾತುಗಳಲ್ಲಿ ಕೇಳಿದರೇ ಚೆಂದ. ಓವರ್ ಟು ಸಿ.ಆರ್. ಸಿಂಹ :
ಇದು ೧೯೯೦-೯೧ರ ಮಾತು. ಕುಮಾರ್ ಬಂಗಾರಪ್ಪ ಅಭಿನಯದ ‘ಅಶ್ವಮೇಧ’ ಚಿತ್ರದ ಪೂರ್ವಸಿದ್ಧತೆ ನಡೆದಿತ್ತು. ಕಥೆ-ಚಿತ್ರಕಥೆ-ನಿರ್ದೇಶನದ ಜವಾಬ್ದಾರಿ ನನ್ನದಾಗಿತ್ತು. ಚಿತ್ರದಲ್ಲಿ ಎಷ್ಟು ಹಾಡುಗಳಿರಬೇಕು ಹಾಗೂ ಅವು ಯಾವ ಸಂದರ್ಭದಲ್ಲಿ ಬರಬೇಕು ಎಂಬ ಚರ್ಚೆ ನಡೆಯಿತು. ನಾಯಕನಿಗೆ ಕುದುರೆಯೆಂದರೆ ಇಷ್ಟ. ಆತ ಆ ಕಾರಣದಿಂದಲೇ ಒಂದು ಮಜಭೂತಾದ ಕುದುರೆಯನ್ನು ಸಾಕಿಕೊಂಡಿರುತ್ತಾನೆ. ಅದಕ್ಕೆ ಜೀವದ ಗೆಳೆಯನ ಸ್ಥಾನ ನೀಡಿರುತ್ತಾನೆ. ನಾಯಕನ ಮನೆ-ಮನ ಎರಡರಲ್ಲೂ ಅದಕ್ಕೆ ತುಂಬ ಪ್ರಾಮುಖ್ಯತೆ ಇರುತ್ತದೆ. ಹೀಗಿರುವಾಗ, ನಾಯಕನನ್ನು ‘ಮುಗಿಸುವ’ ಉದ್ದೇಶದಿಂದ ಖಳನಾಯಕ ಹಾರಿಸಿದ ಗುಂಡು, ಆಕಸ್ಮಾತ್ತಾಗಿ ಕುದುರೆಗೆ ತಗುಲಿ ಅದು ಅಸುನೀಗುತ್ತದೆ. ತನ್ನ ಜೀವದ ಜೀವವೇ ಆಗಿದ್ದ ಕುದುರೆಯ ಆಗ್ನಿ ಸಂಸ್ಕಾರ ಮುಗಿದಾಕ್ಷಣವೇ ಅದರ ಸಾವಿಗೆ ಕಾರಣರಾದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾಯಕ ನಿರ್ಧರಿಸುತ್ತಾನೆ. ಆ ಸಂದರ್ಭಕ್ಕೆ ಕ್ರೋಧ, ಆವೇಶ ಹಾಗೂ ದುಃಖಭರಿತ ಹಾಡೊಂದನ್ನು ಹಾಕಬೇಕು; ಅದನ್ನೇ ಟೈಟಲ್ ಸಾಂಗ್ ಮಾಡಬೇಕು ಅನ್ನಿಸಿತು.
ಇದನ್ನೇ ಸಂಗೀತ ನಿರ್ದೇಶಕರಾಗಿದ್ದ ಸಂಗೀತ ರಾಜಾ ಹಾಗೂ ಗೀತ ರಚನೆಕಾರ ದೊಡ್ಡ ರಂಗೇಗೌಡರಿಗೆ ತಿಳಿಸಿದೆ. ಮೂವರೂ ನಂದಿ ಬೆಟ್ಟಕ್ಕೆ ಹೋಗಿ ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಟ್ಯೂನ್ ಹಾಗೂ ಹಾಡು ಸಿದ್ಧಪಡಿಸುವುದೆಂದು ನಿರ್ಧರಿಸಿದೆವು. ಹಾಗೆಯೇ ಮಾಡಿದೆವು. ಸಂಗೀತ ರಾಜಾ, ನನಗೆ ಹತ್ತಾರು ಟ್ಯೂನ್‌ಗಳನ್ನು ಕೇಳಿಸಿದರು. ಯಾವುದೂ ಇಷ್ಟವಾಗಲಿಲ್ಲ. ಆಗಲೇ ಅವರಿಗೆ ಮತ್ತೆ ನೆನಪಿಸಿದೆ. ‘ನಿಮ್ಮ ಟ್ಯೂನ್‌ನಲ್ಲಿ ಶೋಕರಸ, ಕ್ರೋಧರಸ ಮತ್ತು ರೌದ್ರರಸ ಇರಬೇಕು. ಅಂಥ ಟ್ಯೂನ್ ಕೊಡಿ…’
ಸ್ವಲ್ಪ ಹೊತ್ತಿನ ನಂತರ ಸಂಗೀತ ರಾಜಾ, ಹೊಸದೊಂದು ಟ್ಯೂನ್ ಕೇಳಿಸಿದರು. ಅದು ನನಗೆ ಬಹಳ ಹಿಡಿಸಿತು. ತಕ್ಷಣವೇ ಅದನ್ನು ದೊಡ್ಡರಂಗೇಗೌಡರಿಗೆ ಕೇಳಿಸಿ- ‘ಸಾರ್, ಈ ಹಾಡನ್ನು ನೀವು ವಿಶೇಷ ಮುತುವರ್ಜಿ ವಹಿಸಿ ಬರೀಬೇಕು ಅನ್ನೋದು ನನ್ನಾಸೆ. ಹಾಡಿನಲ್ಲಿ ನಾಯಕನಿಗೆ ಕುದುರೆಯ ಮೇಲಿನ ಪ್ರೀತಿ, ಅದರ ವರ್ಣನೆ, ಅದರ ಅಗಲಿಕೆಯಿಂದ ಆದ ನೋವು ಹಾಗೂ ಖಳನಾಯಕರ ಮೇಲಿನ ರೊಚ್ಚು… ಇದೆಲ್ಲ ಬರಬೇಕು’ ಎಂದೆ.
‘ಸರಿ, ಸರಿ’ ಎಂದ ಗೌಡರು ಕೆಲ ಸಮಯದ ಬಳಿಕ ಹಾಡಿನೊಂದಿಗೆ ಬಂದು ಹೇಳಿದರು : ‘ಬಹಳ ಯೋಚಿಸಿ, ಒಳ್ಳೆಯ ವಿಷಯಗಳನ್ನು ಬಳಸಿ ಈ ಹಾಡು ಬರೆದಿದ್ದೇನೆ. ಕುದುರೆಯ ಕಂಗಳು ಸೂರ್ಯ-ಚಂದ್ರರ ಹಾಗೆ, ಅದರ ಒಡಲು ಗಿರಿಶೃಂಗದ ಹಾಗೆ, ವೇಗ-ಮಿಂಚು ಸಿಡಿಲಿನ ಹಾಗೆ ಎಂದು ವಿವರಿಸಿದರು. ಕುಮಾರ್ ಬಂಗಾರಪ್ಪ ಸೇರಿದಂತೆ ಎಲ್ಲರಿಗೂ ಹಾಡಿನ ಸಾಹಿತ್ಯ ಇಷ್ಟವಾಯಿತು. ನಂತರ, ಈ ಹಾಡನ್ನು ಯಾರಿಂದ ಹಾಡಿಸುವುದು ಎಂಬ ವಿಷಯ ಚರ್ಚೆಗೆ ಬಂತು. ಹಾಡಿನ ಸಾಹಿತ್ಯ ಓದಿದಾಗಲೇ ಇದನ್ನು ರಾಜ್‌ಕುಮಾರ್ ಅವರಿಂದಲೇ ಹಾಡಿಸಬೇಕೆಂಬ ಐಡಿಯಾ ಬಂದಿತ್ತು. ಅದನ್ನೇ ಕುಮಾರ್ ಬಂಗಾರಪ್ಪ ಅವರಿಗೆ ತಿಳಿಸಿ- ಹೇಗಾದರೂ ಮಾಡಿ ಅಣ್ಣಾವ್ರ ಬಳಿ ಈ ವಿಷಯ ಪ್ರಸ್ತಾಪಿಸಿ. ಅವರು ಒಪ್ಪಿಬಿಟ್ಟರೆ ನಮ್ಮ ಸಿನಿಮಾಕ್ಕೆ ಒಂದು ತೂಕ ಇರುತ್ತೆ. ಈ ಹಾಡು ಅಮರವಾಗುತ್ತೆ’ ಎಂದೆ.
ಈ ಮಾತು ಕೇಳಿದ ಕುಮಾರ್ ಬಂಗಾರಪ್ಪ ಹೌಹಾರಿ- ‘ಸಾರ್, ಅಣ್ಣಾವ್ರು ಮಹಾನ್ ನಟರು. ಅವರೆಲ್ಲಿ, ನಾನೆಲ್ಲಿ? ಅಂಥವರನ್ನು ನನ್ನ ಪಾತ್ರಕ್ಕೆ ಹಿನ್ನೆಲೆಯಾಗಿ ಬರುವ ಹಾಡಿಗೆ ಧ್ವನಿಯಾಗಿ ಎಂದು ಕೇಳುವುದು ಹೇಗೆ? ಇಲ್ಲ, ಇಲ್ಲ. ಅಂಥ ಮಹಾನ್ ನಟನ ಮುಂದೆ ನಿಂತು ಮಾತಾಡಲು ನನಗೆ ಧೈರ್ಯವಿಲ್ಲ’ ಅಂದುಬಿಟ್ಟರು.
‘ಹಾಗಲ್ಲ ಸಾರ್, ಈ ಹಾಡನ್ನು ಅಣ್ಣಾವ್ರು ಹಾಡಿದ್ರೆ ಮಾತ್ರ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ. ನೀವು ದಯವಿಟ್ಟು ಪ್ರಯತ್ನಿಸಿ’ ಎಂದು ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಒತ್ತಾಯಿಸಿದೆ. ಅವರು ಹಿಂಜರಿಯುತ್ತಲೇ ಒಪ್ಪಿದರು. ಅಷ್ಟೇ ಅಲ್ಲ, ಅದೊಂದು ದಿನ ಸಮಯ ನೋಡಿ ಡಾ. ರಾಜ್ ಅವರಿಗೆ ಈ ವಿಷಯ ತಿಳಿಸಿಯೂಬಿಟ್ಟರು. ಒಂದೆರಡು ನಿಮಿಷ ಯೋಚಿಸಿದ ಅಣ್ಣಾವ್ರು ‘ಸರಿಯಪ್ಪಾ, ಹಾಡ್ತೀನಿ’ ಅಂದರಂತೆ.
ಈ ಸುದ್ದಿ ಕೇಳಿ ನಮಗೆಲ್ಲ ಆದ ಸಂತೋಷಕ್ಕೆ ಪಾರವೇ ಇಲ್ಲ. ಸಾಮಾನ್ಯವಾಗಿ ಎಲ್ಲ ಸಂದರ್ಭಗಳಲ್ಲೂ ಟ್ರ್ಯಾಕ್ ಸಿಂಗರ್ ಒಬ್ಬರಿಂದ ಹಾಡಿಸಿ ಅದನ್ನೇ ಹಿನ್ನೆಲೆ ಗಾಯಕರಿಗೆ ಕೇಳಿಸಲಾಗುತ್ತದೆ. ನಂತರ ಹಾಡಿನ ರೆಕಾರ್ಡಿಂಗ್ ಆಗುತ್ತದೆ. ಟ್ರ್ಯಾಕ್ ಸಿಂಗರ್‌ನಿಂದ ಹಾಡಿಸಿದರೆ – ಅದೇ ಧ್ವನಿ ಉಳಿದುಹೋಗುತ್ತದೆ ಅನ್ನಿಸಿತು. ಹಾಗಾಗಿ ಟ್ರ್ಯಾಕ್ ಸಿಂಗರ್‌ನಿಂದ ಹಾಡಿಸಲೇ ಇಲ್ಲ. ಬದಲಿಗೆ ವಾಯ್ಸ್ ಬರುವ ಕಡೆಯಲ್ಲೆಲ್ಲ ವಯಲಿನ್ ವಾದನ ಬಳಸಿ ಹಾಡನ್ನು ಸಿದ್ಧಗೊಳಿಸಲಾಗಿತ್ತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ನಡೆಸಲು ನಿರ್ಧರಿಸಿ, ಟ್ಯೂನ್ ಹಾಗೂ ಹಾಡಿನ ಸಾಹಿತ್ಯವನ್ನು ಟೇಪ್ ಮಾಡಿಸಿ ಡಾ|| ರಾಜ್ ಅವರಿಗೆ ತಲುಪಿಸಲಾಗಿತ್ತು.
ಕಡೆಗೂ ನಾವೆಲ್ಲ ಅಂದುಕೊಂಡ ದಿನ ಬಂದೇಬಂತು. ಅವತ್ತು ಸಂಜೆ ಸೋದರ ವರದಪ್ಪ ಅವರೊಂದಿಗೆ ರಾಜ್ ಸ್ಟುಡಿಯೋಗೆ ಬಂದರು. ತಕ್ಷಣವೇ ರಾಜ್ ಅವರ ಬಳಿ ಹೋಗಿ ಮೆಲುದನಿಯಲ್ಲಿ ಹೀಗೆ ವಿನಂತಿಸಿದೆ : ‘ಸಾರ್, ರೆಕಾರ್ಡಿಂಗ್‌ಗೆ ಎಲ್ಲ ಸಿದ್ಧವಿದೆ. ಆದರೆ ಒಂದು ವಿನಂತಿ. ನೀವು ಈ ಹಾಡನ್ನು ನಿಮ್ಮ ಎಂದಿನ ಧ್ವನಿಯಲ್ಲಿ ಹಾಡುವ ಬದಲು, ಹಿಂದೆ ನಾಟಕವಾಡುತ್ತಿದ್ದ ಸಂದರ್ಭದಲ್ಲಿ ಸ್ಟೇಜಿನ ಮೇಲೆ ಭಾವಾವೇಶದಿಂದ ಹಾಡ್ತಿದ್ರಲ್ಲ? ಹಾಗೆ ಹಾಡಿ…’
ಅದಕ್ಕೆ ರಾಜ್- ಇಲ್ಲ ಸಿಂಹ ಅವರೇ, ಅದು ಆಗಿನ ಕಾಲ. ನನಗೂ ಆಗ ಚಿಕ್ಕ ವಯಸ್ಸಿತ್ತು. ಹಾಡ್ತಿದ್ದೆ. ಈಗ ಅದೆಲ್ಲ ಹೇಗೆ ಸಾಧ್ಯ? ಹಾಗೆ ಹಾಡಲು ಸಾಧ್ಯವಿಲ್ಲ’ ಎಂದುಬಿಟ್ಟರು. ಇದೇ ಸಂದರ್ಭಕ್ಕೆ ವರದಪ್ಪನವರೂ ನಮ್ಮ ಬಳಿ ಬಂದರು. ಆಗ ರಾಜ್- ‘ನೋಡು ವರದಪ್ಪಾ, ಹಿಂದೆ ಬೇಡರ ಕಣ್ಣಪ್ಪ, ಸಾಹುಕಾರ ನಾಟಕಗಳಲ್ಲಿ ಹಾಡ್ತಿದ್ದೆನಲ್ಲ? ಆ ಕಂಠದ, ಆ ಧಾಟಿಯ ಹಾಡು ಬೇಕಂತೆ ಇವರಿಗೆ…’ ಎಂದರು. ಆ ವೇಳೆಗಾಗಲೇ ಹಾಡಿನ ಸಾಹಿತ್ಯ ಹಾಗೂ ಟ್ಯೂನ್ ಕೇಳಿಸಿಕೊಂಡಿದ್ದ ವರದಪ್ಪನವರು- ‘ಹೌದು, ಸಿಂಹ ಹೇಳ್ತಿರೋದು ಸರಿಯಾಗಿದೆ. ಹಾಗೇ ಹಾಡಿ’ ಎಂದುಬಿಟ್ಟರು! ಇದೇ ಸಂದರ್ಭಕ್ಕೆ ನನ್ನ ಇಂಗಿತದಂತೆ ಅಲ್ಲಿಗೆ ಬಂದ ಸೌಂಡ್ ಎಂಜಿನಿಯರ್ ರಾಮನಾಥನ್, ರಾಜ್ ಅವರನ್ನು ಉದ್ದೇಶಿಸಿ- ‘ಸಾರ್, ನಮ್ಮ ನೆರವಿಗೆ ಈಗ ಕಂಪ್ಯೂಟರ್ ತಂತ್ರeನವಿದೆ. ಇಡೀ ಹಾಡನ್ನು ಒಮ್ಮೆಗೇ ಹೇಳಬೇಕಿಲ್ಲ. ಸಮಯ ತಗೊಂಡು ಹಾಡಿ. ನಂತರ ನಾನು ಎಲ್ಲವನ್ನೂ ಒಟ್ಟಿಗೆ ಜೋಡಿಸಿಕೊಳ್ತೇನೆ ಸಾರ್. ಆದರೆ, ಸಿಂಹ ಅವರ ಬೇಡಿಕೆಯ ಧ್ವನಿಯಲ್ಲೇ ಹಾಡಿ ಸಾರ್’ ಎಂದು ವಿನಂತಿಸಿಕೊಂಡರು.
ಎಲ್ಲರ ಬೇಡಿಕೆಗೆ ಒಪ್ಪಿದವರಂತೆ ಒಮ್ಮೆ ನಸುನಕ್ಕ ರಾಜ್- ‘ಸರಿ, ನೋಡೋಣ’ ಎಂದರು. ನಂತರ ಸ್ಟುಡಿಯೋದೊಳಗೆ ಹೋಗಿ ಹಾಡಲು ನಿಂತರು. ಸಂಗೀತ ಶುರುವಾಯಿತು. ನಾವು ಬಯಸಿದಂತೆಯೇ ವಿಶೇಷ ದನಿಯಲ್ಲಿ ರಾಜ್ ಹಾಡಲು ಆರಂಭಿಸಿದಾಗ ಕೇಳುತ್ತ ಕೂತವರಿಗೆಲ್ಲ ರೋಮಾಂಚನ.
ಎರಡನೇ ಚರಣದಲ್ಲಿ ‘ಕ್ರೂರ ರಾಕ್ಷಸರ ಕೊಚ್ಚಿ ಕಡಿವೆ’ ಎಂಬ ಸಾಲಿದೆ. ಆ ಸಾಲು ಬರುವ ಮೊದಲು ರಾಜ್ ಅವರಿದ್ದ ಕ್ಯಾಬಿನ್‌ಗೆ ನುಸುಳಿದ ನಾನು- ‘ಸಾರ್, ಈಗ ಬರುವ ಒಂದು ಸಾಲನ್ನು ನೀವು ಆಂಗಿಕ ಪ್ರದರ್ಶನದೊಂದಿಗೆ ಅನುಭವಿಸಿಕೊಂಡು ಹಾಡಿ’ ಎಂದು ವಿನಂತಿಸಿದೆ. ಡಾ. ರಾಜ್ ಅದಾಗಲೇ ಆ ಹಾಡಿನಲ್ಲಿ ಎಷ್ಟೊಂದು ತಲ್ಲೀನರಾಗಿದ್ದರೆಂದರೆ- ‘ಗೊತ್ತಾಯ್ತು ಬಿಡಿ, ಗೊತ್ತಾಯ್ತು. ಹಾಗೇ ಹಾಡ್ತೀನಿ, ಕೇಳಿ ಹೋಗಿ’ ಎಂದರು. ನಂತರ, ಹಿರಣ್ಯಕಶಿಪುವಿನ ಹೊಟ್ಟೆ ಬಗೆಯುವ ನರಸಿಂಹನ ಭಾವಾವೇಶದಲ್ಲಿ ಎರಡನೇ ಚರಣವನ್ನು ಹಾಡಿ ಮುಗಿಸಿದರು.
ನಂತರ, ಸ್ಟುಡಿಯೋದಲ್ಲಿರುವ ದೊಡ್ಡ ಥಿಯೇಟರ್ ಹಾಲ್‌ನಲ್ಲಿ ಎಲ್ಲರೂ ಕೂತು ಹಾಡು ಕೇಳಿದೆವು. ಹಾಡು ಮುಗಿದ ನಂತರ ರಾಜ್- ‘ಇನ್ನೊಂದ್ಸಲ ಹಾಕಿ’ ಎಂದರು. ಎರಡನೇ ಬಾರಿ ಹಾಡು ಕೇಳಿದವರೇ ಸ್ವಲ್ಪ ಸಮಯ ನನ್ನನ್ನೇ ದಿಟ್ಟಿಸಿ ನೋಡಿದರು. ಇಬ್ಬರಲ್ಲೂ ಮಾತಿಲ್ಲ. ನಂತರ ತಮ್ಮ ಮುಷ್ಟಿಯಿಂದ ನನ್ನ ಭುಜವನ್ನು ಗುದ್ದಿ- ‘ಅಂತೂ ಹಾಡಿಸಿಬಿಟ್ರಿ ನೀವು’ ಎಂದರು ಅಭಿಮಾನದಿಂದ. ಆಗಿನ ಸಂತೋಷದಲ್ಲಿ ನನಗೆ ಮಾತೇ ಹೊರಡಲಿಲ್ಲ. ನಂತರ ಸಾವರಿಸಿಕೊಂಡು- ‘ಹೌದು ಸಾರ್, ಇದು ಬಹುದಿನದ ಕನಸು. ಇಂದು ನನಸಾಯಿತು’ ಎಂದೆ.
ಮುಂದೆ ನಡೆದದ್ದು ಈಗ ಇತಿಹಾಸ. ಅಣ್ಣಾವ್ರ ಹಾಡಿನಿಂದ, ಅಶ್ವಮೇಧ ಸಿನಿಮಾ ಸೂಪರ್‌ಹಿಟ್ ಆಯಿತು. ಈಗ ಹದಿನೆಂಟು ವರ್ಷಗಳ ನಂತರ ಕೂಡ ಚಿತ್ರಪ್ರೇಮಿಗಳು ಈ ಹಾಡನ್ನು ಕೊಂಡಾಡುವುದನ್ನು ಕಂಡಾಗ ‘ನನ್ನ ಪ್ರಯತ್ನ ಮೆಚ್ಚಿ ಡಾ. ರಾಜ್ ಕೂಡಾ ಮೇಲಿನಿಂದ ನನ್ನನ್ನು ಹರಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಈ ಹಾಡು ಸೃಷ್ಟಿಯಾದ ಸಂದರ್ಭ ಈಗಷ್ಟೇ ನಡೆಯಿತೇನೋ ಎಂಬಂತೆ ನನ್ನ ಕಣ್ಮುಂದೆ ಹಾದುಹೋಗುತ್ತದೆ…’
ಇಷ್ಟು ಹೇಳಿ ಕ್ಷಣ ಮೌನವಾದರು ಸಿಂಹ.

ಕಾಲಿಲ್ಲ ಆದರೂ ನೃತ್ಯ ಕಲಾವಿದೆ!

July 25, 2009

ಕೃತಕ ಕಾಲುಗಳಿಂದ ನರ್ತಿಸಿ ನಾಟ್ಯ ರಾಣಿ ಅನ್ನಿಸಿಕೊಂಡ ಸುಧಾ ಚಂದ್ರನ್ ಬಗ್ಗೆ ಕೇಳಿದ್ದೀರಿ. ಅಂಥದೇ ಸಾಧನೆಯ ರಶ್ಮಿ ಔರಸಂಗಳ ಸಾಧನೆಯ ಚರಿತೆ ಇಲ್ಲಿದೆ…

ನಮ್ಮ ಕಥಾನಾಯಕಿಯ ಹೆಸರು ರಶ್ಮಿ ಔರಸಂಗ. ಹತ್ತನೇ ತರಗತಿ ಓದುತ್ತಿರುವ ಈಕೆ ಗುಲ್ಬರ್ಗಾದಿಂದ ಐವತ್ತು ಕಿಲೋಮೀಟರ್ ದೂರವಿರುವ ಸೇಡಂನಲ್ಲಿದ್ದಾಳೆ. ವಿಶೇಷವೇನೆಂದರೆ, ಗುಲಬರ್ಗಾ ಸೀಮೆಯಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೂ, ಅಲ್ಲಿ ಈ ಹುಡುಗಿಯ ನೃತ್ಯ ಕಾರ್ಯಕ್ರಮ ಇದ್ದೇ ಇರುತ್ತದೆ. ಈಕೆ ವೇದಿಕೆಗೆ ಬಂದರೆ ಸಾಕು, ಜನ ಮೈಮರೆಯುತ್ತಾರೆ. ಅಪರೂಪದಲ್ಲಿ ಅಪರೂಪದ್ದು ಎಂಬಂಥ ಈ ಬಾಲೆಯ ನೃತ್ಯ ಪ್ರದರ್ಶನ ಕಂಡು ಅಚ್ಚರಿಗೆ ಈಡಾಗುತ್ತಾರೆ. ಸಂಭ್ರಮದಿಂದ ಚಪ್ಪಾಳೆ ಹೊಡೆಯುತ್ತಾರೆ. ಖುಷಿಯಿಂದ ‘ಒನ್ಸ್ ಮೋರ್’ ಕೂಗುತ್ತಾರೆ. ಅದಕ್ಕೆ ಪ್ರತಿಯಾಗಿ ಈ ರಶ್ಮಿ ಮತ್ತೆ ನೃತ್ಯ ಮುಂದುವರಿಸುತ್ತಾಳಲ್ಲ? ಆಗ ಮಾತ್ರ ಒನ್ಸ್ಮೋರ್ ಕೂಗಿದವರೇ ಸಂತೋಷದಿಂದ ಬಿಕ್ಕಳಿಸಲು ಶುರು ಮಾಡಿಬಿಡುತ್ತಾರೆ. ಈ ಹುಡುಗಿಯ ನೃತ್ಯ ಕಂಡು ಹೀಗೆ ಜನ ಭಾವಪರವಶರಾಗಿ ಕಂಬನಿ ಮಿಡಿಯಲು ಕಾರಣವೂ ಇದೆ. ಏನೆಂದರೆ- ಈ ಹುಡುಗಿಗೆ ಸೊಂಟದಿಂದ ಕೆಳಗಿನ ಭಾಗ ಸ್ವಾನದಲ್ಲಿಲ್ಲ! ಇನ್ನೂ ಸ್ವಲ್ಪ ವಿವರವಾಗಿ ಹೇಳಬೇಕೆಂದರೆ- ಒಂದರ್ಥದಲ್ಲಿ ಈಕೆಗೆ ಕಾಲುಗಳಿಲ್ಲ!!

‘ಕಾಲುಗಳೇ ಇಲ್ಲ’ ಎಂಬಂಥ ಸಂಕಟದ ಮಧ್ಯೆಯೇ ಈ ಹುಡುಗಿ- ಗುರುಗಳ ನೆರವಿಲ್ಲದೆಯೇ ನೃತ್ಯ ಕಲಿತಿದ್ದಾಳೆ. ವ್ಹೀಲ್ಚೇರ್ ಮೇಲೆ ಕುಳಿತು ಒಬ್ಬಳೇ ಅಭ್ಯಾಸ ಮಾಡಿದ್ದಾಳೆ. ತನ್ನ ಹಾವ-ಭಾವವನ್ನು ಕನ್ನಡಿಯಲ್ಲಿ ನೋಡಿಕೊಂಡೇ ತಪ್ಪುಗಳನ್ನು ತಿದ್ದಿಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಓದುವುದರಲ್ಲೂ ವಿಶೇಷ ಮುತುವರ್ಜಿ ತೋರಿ ಅಧ್ಯಾಪಕರಿಂದ besಣ sಣuಜeಟಿಣ ಅನ್ನಿಸಿಕೊಂಡಿದ್ದಾಳೆ. ಆ ಮೂಲಕ ಛಲವೊಂದಿದ್ದರೆ, ಸಾಸಬೇಕು ಎಂಬ ಹುಮ್ಮಸ್ಸು ಜತೆಗಿದ್ದರೆ ಅಂಗವೈಕಲ್ಯವನ್ನು ಖಂಡಿತ ಮೆಟ್ಟಿ ನಿಲ್ಲಬಹುದು ಎಂದು ಸಕಲೆಂಟು ಮಂದಿಗೂ ತೋರಿಸಿಕೊಟ್ಟಿದ್ದಾಳೆ. ತನ್ನ ಸಾಧನೆಯಿಂದ ಸಾವಿರಾರು ಮಂದಿಗೆ ಮಾದರಿಯಾಗಿದ್ದಾಳೆ.

ಈ ವಿವರಣೆಯನ್ನೆಲ್ಲ ಕೇಳಿದವರಿಗೆ- ‘ರಶ್ಮಿ ಯಾವಾಗಿನಿಂದ ಕಾಲುಗಳ ಸ್ವಾನ ಕಳೆದುಕೊಂಡಳು? ಅದಕ್ಕೆ ಚಿಕಿತ್ಸೆ ಕೊಡಿಸಲಿಲ್ಲವಾ? ಅಥವಾ ಚಿಕಿತ್ಸೆ ಫಲಕಾರಿಯಾಗಲಿಲ್ಲವಾ? ಕಾಲುಗಳೇ ಸ್ವಾನದಲ್ಲಿಲ್ಲದ ಸಂದರ್ಭದಲ್ಲಿ ಆಕೆ ಎದುರಿಸಿದ ಸವಾಲುಗಳಾದರೂ ಎಂಥವು? ಕಾಲುಗಳೇ ಇಲ್ಲ ಎಂಬಂಥ ಸಂದರ್ಭದಲ್ಲೂ ಆಕೆಗೆ ನೃತ್ಯ ಕಲಿಯಬೇಕೆಂಬ ಹಟ ಬಂದದ್ದಾದರೂ ಹೇಗೆ? ಅದಕ್ಕೆ ಕಾರಣವಾದ ಸಂದರ್ಭ ಯಾವುದು?’ ಎಂಬಿತ್ಯಾದಿ ಪ್ರಶ್ನೆಗಳು ಕಾಡಬಹುದು. ಅಂಥ ಎಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ಹೇಳಿದರೆ, ರಶ್ಮಿಯ ಹೋರಾಟದ ಬದುಕಿನದ್ದೇ ಒಂದು ಚೆಂದದ ಕಥೆ.
***

ರಶ್ಮಿಯ ತಂದೆಯ ಹೆಸರು ಸುಂದ್ರೇಶ್ ಔರಸಂಗ. ಅವರು, ಸೇಡಂನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಎಂಜಿನಿಯರ್. ತಾಯಿಯ ಹೆಸರು ಅನಿತಾ. ಇವರು ಅದೇ ವಾಸವದತ್ತಾ ವಿದ್ಯಾ ವಿಹಾರ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ. ಈ ದಂಪತಿಗೆ, ೧೯೯೪ರ ಮೇ ೨೩ರಂದು ಹುಟ್ಟಿದ ಕಂದಮ್ಮನೇ ರಶ್ಮಿ. ಹಾಲುಗಲ್ಲದ ಕಂದಮ್ಮನನ್ನು ಕಂಡು ವೈದ್ಯರು ಖಿನ್ನರಾಗಿ ಹೇಳಿದರಂತೆ: ‘ಮಗು ಮುದ್ದು ಮುದ್ದಾಗಿದೆ. ಆದರೆ ಏನೋ ಕೊರತೆ ಕಾಣಿಸ್ತಾ ಇದೆ. ಮುಖ್ಯವಾಗಿ ಸೊಂಟದಿಂದ ಕೆಳಗಿನ ಭಾಗದಲ್ಲಿ ಸ್ಪರ್ಶಜ್ಞಾನ ಇರುವಂತೆ ಕಾಣುತ್ತಿಲ್ಲ. ತಕ್ಷಣವೇ ಒಂದು ಆಪರೇಷನ್ ಮಾಡಬೇಕು…’ಪರಿಣಾಮ ರಶ್ಮಿಗೆ, ಕೇವಲ ಒಂದೂವರೆ ತಿಂಗಳು ತುಂಬಿದ ಸಂದರ್ಭದಲ್ಲಿಯೇ ಪೂನಾದ ಆಸ್ಪತ್ರೆಯಲ್ಲಿ ಆಪರೇಷನ್ ನಡೆದೇ ಹೋಯಿತು. ಆದರೆ ಪ್ರಯೋಜನವೇನೂ ಆಗಲಿಲ್ಲ. ಮತ್ತೆ ಪರೀಕ್ಷಿಸಿದ ವೈದ್ಯರು- ‘ಮಗುವಿನ ಬೆನ್ನಮೂಳೆಯಲ್ಲಿ ಏನೋ ತೊಂದರೆಯಿದೆ. ಮಗು ಬೆಳೆಯುತ್ತಾ ಹೋದಂತೆ ಈ ತೊಂದರೆ ತಂತಾನೇ ಸರಿಹೋಗಬಹುದು. ಸರಿಯಾಗದೆಯೂ ಇರಬಹುದು. ಒಂದು ವೇಳೆ, ಇದೇ ರೀತಿಯ ತೊಂದರೆ ಮುಂದುವರಿದರೆ- ಆಕೆ ಬದುಕಿಡೀ ವ್ಹೀಲ್ಚೇರ್ನೊಂದಿಗೇ ಇರಬೇಕಾಗುತ್ತದೆ. ಹಾಗಾಗದಿರಲಿ ಎಂದು ಪ್ರಾರ್ಥಿಸೋಣ’ ಎಂದರಂತೆ.
ವೈದ್ಯರ ಮಾತು ಕೇಳಿದ ಸುಂದ್ರೇಶ್- ಅನಿತಾ ದಂಪತಿ ಆ ಕ್ಷಣದಿಂದಲೇ ಮಗುವಿನ ಬಗ್ಗೆ ವಿಶೇಷ ಕಾಳಜಿ ವಹಿಸಿದರು. ಮಗುವಿಗೆ ಒಳಿತಾಗಲಿ ಎಂಬ ಸದಾಶಯದಿಂದ ಪೂಜೆ ಮಾಡಿಸಿದರು. ಹರಕೆ ಕಟ್ಟಿಕೊಂಡರು. ಅದೇ ಸಂದರ್ಭದಲ್ಲಿ ಗುಲ್ಬರ್ಗಾ, ಬಾಂಬೆ, ಹೈದ್ರಾಬಾದ್, ಬೆಂಗಳೂರಿನಲ್ಲಿರುವ ಎಲ್ಲ ಅತ್ಯುತ್ತಮ ಆಸ್ಪತ್ರೆಗಳನ್ನೂ ಸುತ್ತಿ ಬಂದರು. ಈ ಓಡಾಟದಿಂದ, ಚಿಕಿತ್ಸೆಗಳಿಂದ ದುಡ್ಡು ಖರ್ಚಾಯಿತೇ ವಿನಃ ಮಗುವಿನ ಆರೋಗ್ಯ ಸುಧಾರಿಸಲಿಲ್ಲ. ಕಡೆಗೊಂದು ದಿನ ಈ ಮಗುವಿಗೆ- ವ್ಹೀಲ್ಚೇರ್ ಕೊಡಿಸುವುದೊಂದೇ ಮಾರ್ಗ ಎಂಬ ನಿಷ್ಠುರ ಸತ್ಯ ಗೊತ್ತಾದಾಗ ಅದೊಂದು ರಾತ್ರಿ ಸುಂದ್ರೇಶ್-ಅನಿತಾ ದಂಪತಿ ಹೀಗೆ ನಿರ್ಧರಿಸಿದರಂತೆ: ‘ಮುಂದೆ ಇನ್ನೊಂದು ಮಗುವಾದರೆ, ಭವಿಷ್ಯದ ದಿನಗಳಲ್ಲಿ ಅವನ (ಳ)ನ್ನು ಕಂಡು ರಶ್ಮಿಗೆ- ಛೆ, ನಾನು ಹೀಗಿದ್ದೀನಲ್ಲ ಎಂಬ ಸಂಕಟ ಕಾಡಬಹುದು. ಅಥವಾ, ಮೊದಲಿನದು ಅಂಗವಿಕಲ ಮಗು ಎಂಬ ಕಾರಣಕ್ಕೆ ಇವಳ ಬಗ್ಗೆ ನಮಗೇ ಒಂದಿಷ್ಟು ಅನಾದರ ಬೆಳೆದು ಬಿಡಬಹುದು. ಹಾಗಾಗಿ, ರಶ್ಮಿಯನ್ನೇ ತುಂಬ ಮುದ್ದಾಗಿ ಬೆಳೆಸೋಣ.

ಎಲ್ಲ ಸವಾಲುಗಳನ್ನೂ ಎದುರಿಸುವಂತೆ ಅವಳನ್ನು ಮಾನಸಿಕವಾಗಿ ‘ಸಿದ್ಧ’ಗೊಳಿಸೋಣ. ನಮಗೆ ಎರಡನೇ ಮಗು ಬೇಡವೇ ಬೇಡ! ಮಗುವಿನ ಭವಿಷ್ಯದ ಬಗ್ಗೆ ಮಾತಾಡುತ್ತ ಸುಂದ್ರೇಶ್-ಅನಿತಾ ದಂಪತಿ, ಪರಸ್ಪರರಿಗೆ ಕಾಣದಂತೆ ಕಂಬನಿ ಒರೆಸಿಕೊಂಡೇ ಇಂಥದೊಂದು ನಿರ್ಧಾರಕ್ಕೆ ಬಂದರಲ್ಲ? ಅವತ್ತು ಮಾತ್ರ ದೇವತೆಗಳಂಥ ದೇವತೆಗಳೂ ಭಾವಪರವಶರಾಗಿ ಕಂಬನಿ ಮಿಡಿದರಂತೆ!

ಮರುದಿನದಿಂದಲೇ ವ್ಹೀಲ್ ಚೇರ್ನಲ್ಲಿ ಕೂರಿಸಿಯೇ ಮಗುವನ್ನು ಶಾಲೆಗೆ ಕಳಿಸುವ ಪರಿಪಾಠ ಆರಂಭವಾಯಿತು. ಹೇಳಿ ಕೇಳಿ ಹೆಣ್ಣುಮಗು. ಅದಕ್ಕೆ ಸೊಂಟದ ಕೆಳಗಿನ ಭಾಗವೇ ಸ್ವಾನದಲ್ಲಿಲ್ಲ. ಇಂಥ ಸಂದರ್ಭದಲ್ಲಿ ಬೇರೆ ಯಾವುದಾದರೂ ಶಾಲೆಗೆ ಸೇರಿಸಿದರೆ, ಮಗುವಿಗೆ ತಬ್ಬಲಿತನ ಕಾಡಬಹುದು. ಏಕಾಂಗಿ ಅನ್ನಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇನ್ನೊಬ್ಬರ ನೆರವಿನಿಂದಲೇ ಶೌಚಾಲಯಕ್ಕೆ ಹೋಗಬೇಕಾದಂಥ ಸಂದರ್ಭದಲ್ಲಿ ತುಂಬ ಸಂಕೋಚ ಮತ್ತು ಸಂಕಟವಾಗಬಹುದು ಅನಿಸಿದ್ದರಿಂದ, ತಾವು ನೌಕರಿಗಿದ್ದ ವಾಸವದತ್ತಾ ವಿದ್ಯಾವಿಹಾರ ಶಾಲೆಗೇ ಮಗಳನ್ನೂ ಸೇರಿಸಿಕೊಂಡರು ಅನಿತಾ.
ಆಗ ಎದುರಾದ ಸಮಸ್ಯೆಗಳ ಬಗ್ಗೆ ಅನಿತಾ ಹೇಳುತ್ತಾರೆ: ‘ದಿನ ಕಳೆದಂತೆಲ್ಲ ದೇಹ ಬೆಳೆಯಿತೇ ಹೊರತು ಕಾಲಿನ ಚಲನೆಯಾಗಲಿಲ್ಲ. ಪರಿಣಾಮ, ಆಕೆಯನ್ನು ಎಲ್ಲಿಗೇ ಕರೆದೊಯ್ಯಬೇಕೆಂದರೂ ವ್ಹೀಲ್ಚೇರ್ನಲ್ಲೇ ಕರೆದೊಯ್ಯಬೇಕಿತ್ತು. ಇಲ್ಲವಾದರೆ ಎತ್ತಿಕೊಂಡು ಹೋಗಬೇಕಿತ್ತು. ಇದೆಲ್ಲಕ್ಕಿಂತ ಹಿಂಸೆ ಅನಿಸುತ್ತಿದ್ದುದು ಶೌಚಾಲಯಕ್ಕೆ ಹೋಗಬೇಕಾಗಿ ಬಂದಾಗ. ಪ್ರತಿಯೊಬ್ಬರೂ ತುಂಬ ಏಕಾಂತ ಬಯಸುವ; ಏಕಾಂತದಲ್ಲಿ ಕೆಲ ನಿಮಿಷದ ಮಟ್ಟಿಗೆ ಇರಲೇಬೇಕಾದ ಜಾಗ ಅದು. ವಿಪರ್ಯಾಸವೆಂದರೆ, ಅಲ್ಲಿ ಕೂಡ ನಾನು ಮಗಳೊಂದಿಗೆ ನಿಲ್ಲಬೇಕಿತ್ತು. ಇಲ್ಲಿ ನಾಚಿಕೊಳ್ಳುವಂಥದ್ದು; ಸಂಕಟ ಪಡುವಂಥದ್ದು ಏನೇನೂ ಲ್ಲ ಮಗಳೇ. ಇದೆಲ್ಲಾ ಕಾಮನ್. ಪುಟ್ಟ ಮಕ್ಕಳು ಶೌಚಕ್ಕೆ ಹೋದಾಗ ಅಮ್ಮಂದಿರು ಕ್ಲೀನ್ ಮಾಡ್ತಾರೆ ಅಲ್ವ? ಇದೂ ಹಾಗೇನೇ ನೀನು ನನ್ನ ಪಾಲಿಗೆ ಎಂದೆಂದೂ ಪುಟ್ಟ ಮಗೂನೇ ಎಂದು ಧೈರ್ಯ ಹೇಳಬೇಕಿತ್ತು. ಈ ಕೆಲಸವನ್ನು ನಾನು ತುಂಬ ಸಂಭ್ರಮದಿಂದ ಮಾಡಿದೆ. ಈ ಸಂದರ್ಭದಲ್ಲಿಯೇ ರಶ್ಮಿಯಂಥ ಮಕ್ಕಳಿಗೆ ಭಾರತೀಯ ಶೈಲಿಯ ಶೌಚಾಲಯಕ್ಕಿಂತ ಪಾಶ್ಚಾತ್ಯ ಶೈಲಿಯ ಶೌಚಾಲಯವಿದ್ದರೆ ತುಂಬ ಅನುಕೂಲ ಎಂದು ಕೊಲ್ಲಾಪುರದಲ್ಲಿರುವ ಹೆಲ್ಪರ್ಸ್ ಆಫ್ ದ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಮುಖ್ಯಸ್ಥೆ ನಸೀಮಾ ಹುರಜುಕ್ ಸಲಹೆ ಮಾಡಿದರು. ತಕ್ಷಣವೇ ಅಂಥದೊಂದು ವ್ಯವಸ್ಥೆ ಮಾಡಿಕೊಟ್ಟೆ. ಒಂದು ಸಂತೋಷವೆಂದರೆ, ನಮ್ಮ ಎಲ್ಲ ಭಾವನೆಗಳನ್ನೂ ರಶ್ಮಿ ಅರ್ಥಮಾಡಿಕೊಂಡಳು. ಕೆಲವೇ ದಿನಗಳಲ್ಲಿ ಯಾರ ನೆರವೂ ಇಲ್ಲದೆ ಶೌಚಾಲಯಕ್ಕೆ ಹೋಗಿಬರುವುದನ್ನು ಅಭ್ಯಾಸ ಮಾಡಿಕೊಂಡಳು. ಅದನ್ನು ಕಂಡಾಗ ನನಗೆ, ನನ್ನ ಮಗಳು ಯುದ್ಧಕ್ಕೆ ಕಳಿಸಿದರೂ ಗೆದ್ದು ಬರ್ತಾಳೆ ಅನ್ನಿಸಿಬಿಡ್ತು…’ ಅಂದಹಾಗೆ, ಕಾಲುಗಳು ಸ್ವಾನದಲ್ಲೇ ಇಲ್ಲದಿದ್ದರೂ, ನೃತ್ಯ ಮಾಡಲು ರಶ್ಮಿ ಆರಂಭಿಸಿದಳಲ್ಲ; ಅದೂ ಕೂಡ ಆಕಸ್ಮಿಕವಾಗಿ ನಡೆದು ಹೋದ ಪವಾಡವೇ. ರಶ್ಮಿಯ ತಾಯಿ ಅನಿತಾ ಅವರಿಗೆ ಪ್ರತಿವರ್ಷವೂ ಸ್ಕೂಲ್ಡೇ ಸಂದರ್ಭದಲ್ಲಿ. ಮಕ್ಕಳಿಗೆ ಡ್ಯಾನ್ಸ್ ಕಲಿಸುವ ಜವಾಬ್ದಾರಿ ವಹಿಸಲಾಗುತ್ತಿತ್ತು. ಈಗ ಅದನ್ನೇ ನೆನಪು ಮಾಡಿಕೊಂಡು ಅನಿತಾ ಹೇಳುತ್ತಾರೆ: ‘ವಾರ್ಷಿಕೋತ್ಸವದ ಸಂದರ್ಭದಲ್ಲಿ ಡ್ಯಾನ್ಸ್ ಕಾರ್ಯಕ್ರಮ ನೋಡಿ ರಶ್ಮಿ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಳು. ಆಗೆಲ್ಲ ನನಗೆ ವಿಪರೀತ ಸಂಕಟವಾಗುತ್ತಿತ್ತು. ನನ್ನ ಮಗುವಿಗೇ ಕಲಿಸಲಾಗದ ನಾನು ಬೇರೆಯವರಿಗೆ ಹೇಳಿಕೊಡೋದ್ರಿಂದ ಬಂದ ಭಾಗ್ಯವೇನು ಅನ್ನಿಸುತ್ತಿತ್ತು. ಆಗೆಲ್ಲ ಒಬ್ಬಳೇ ಮೌನವಾಗಿ ಕಂಬನಿ ಸುರಿಸುತ್ತಿದ್ದೆ. ಅಂಥ ಸಂದರ್ಭದಲ್ಲಿ ಸದ್ದಿಲ್ಲದೇ ಬಂದು ಹೆಗಲು ತಟ್ಟುತ್ತಿದ್ದ ನನ್ನ ಪತಿ ಸುಂದ್ರೇಶ್- ‘ಅಳಬೇಡ. ಸಂತೋಷದ ದಿನಗಳು ಹತ್ತಿರದಲ್ಲೇ ಇವೆ’ ಅಂತಿದ್ರು…’

ಈ ಸಂದರ್ಭದಲ್ಲಿಯೇ ರಶ್ಮಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಅನ್ನಿಸುವಂಥ ಸಂದರ್ಭ ಬಂದೇ ಬಂತು. ಟಿವಿಯಲ್ಲಿ ಅವತ್ತು ‘ಫನ್ಹಾ’ ಎಂಬ ಹಿಂದಿ ಚಿತ್ರವೊಂದು ಪ್ರಸಾರವಾಯಿತು. ಆ ಚಿತ್ರದಲ್ಲಿ ಕುರುಡಿಯೊಬ್ಬಳು ಡ್ಯಾನ್ಸ್ ಮಾಡಿ ಎಲ್ಲರಿಂದ ಬೇಷ್ ಅನ್ನಿಸಿಕೊಳ್ಳುವ ದೃಶ್ಯವಿದೆ. ಸಿನಿಮಾ ಮುಗಿದ ಕ್ಷಣದಲ್ಲೇ- ‘ಕುರುಡಿಯೇ ಡ್ಯಾನ್ಸ್ ಮಾಡಿದಳು ಅಂದ ಮೇಲೆ ಕಣ್ಣಿರುವ ನಾನೂ ಒಂದು ಕೈ ನೋಡಬಾರದೇಕೆ?’ ಎಂದುಕೊಂಡಳು ರಶ್ಮಿ. ಈ ಸಂದರ್ಭದಲ್ಲೇ ಎನ್ಡಿಟಿವಿಯಲ್ಲಿ ನೃತ್ಯ ನಿರ್ದೇಶಕಿ ಸರೋಜ್ಖಾನ್ ನಡೆಸಿಕೊಡುವ ‘ನಚಲೇ’ ಎಂಬ ಕಾರ್ಯಕ್ರಮವೂ ಪ್ರಸಾರವಾಯಿತು. ಅದನ್ನು ನೋಡಿದ ನಂತರ ಅದೇ ಫನ್ಹಾ ಚಿತ್ರದ ‘ಯಹಾಂ ಹರ್ ಕದಂ/ಕದಂ ಪೇ ಧರತಿ ಬದಲೇ ರಂಗ್/ ಮೇರಾ ದೇಶ್ ರಂಗೀಲಾ’ ಹಾಡನ್ನು ರೆಕಾರ್ಡ್ ಮಾಡಿಕೊಂಡು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತೇ ಡ್ಯಾನ್ಸ್ ಪ್ರಾಕ್ಟೀಸ್ಗೆ ಶುರು ಮಾಡಿದಳು. ಒಂದು ಕೈಯಲ್ಲಿ ವ್ಹೀಲ್ಚೇರ್ ತಿರುಗಿಸುತ್ತಲೇ ಇನ್ನೊಂದು ಕೈಯಿಂದ ಅಭಿನಯ ಮಾಡಲು ಕಲಿತೂಬಿಟ್ಟಳು.

ಅದೊಂದು ದಿನ ಹೀಗೇ ಅಭ್ಯಾಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮನೆಗೆ ಬಂದ ತಂದೆ ಸುಂದ್ರೇಶ್ ಔರಸಂಗ, ಮಗಳ ನೃತ್ಯಾಭ್ಯಾಸ ಹಾಗೂ ಅವಳ ಮುಖದ ಭಾವಾಭಿನಯ ಕಂಡು ಬೆರಗಾದರಂತೆ. ಮರುಕ್ಷಣವೇ ಮಗಳನ್ನು ಬಾಚಿ ತಬ್ಬಿಕೊಂಡು ಮುದ್ದಾಡಿ – ‘ಮುಂದುವರಿಸು ಮಗಳೇ. ನಿನ್ನ ಜತೆಗೆ ನಾವಿರ್ತೇವೆ’ ಎನ್ನುತ್ತಾ ಭಾವುಕರಾದಂತೆ.ಅಂದಿನಿಂದ ಮನೆಯಲ್ಲೇ ಶುರುವಾಯಿತು- ಈ ಕಾಲಿಲ್ಲದ ಹುಡುಗಿಯ ನೃತ್ಯಾಭ್ಯಾಸ. ತನಗಿದ್ದ ಅಂಗವೈಕಲ್ಯದ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದವಳಂತೆ ತುಂಬ ಕಡಿಮೆ ಅವಯಲ್ಲೇ ಡ್ಯಾನ್ಸ್ ಕಲಿತೇಬಿಟ್ಟಳು. ನೃತ್ಯ ಕಲಾವಿದರ ಪರಿಣಿತಿಗೆ ಕನ್ನಡಿ ಹಿಡಿಯುವ ಕಣ್ಣು ಮುಖದ ಕದಲಿಕೆಯ ವಿಷಯದಲ್ಲಂತೂ, ಫನ್ಹಾ ಚಿತ್ರದ ನೃತ್ಯಗಾರ್ತಿಯೇ ಬೆರಗಾಗುವಷ್ಟರ ಮಟ್ಟಿಗೆ ಪಳಗಿ ಹೋಗಿದದಳು.
ಕಡೆಗೊಂದು ದಿನ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿಯೇಬಿಟ್ಟಿತು. ಅದು ೨೦೦೮, ಅಕ್ಟೋಬರ್ ೧೭. ಅವತ್ತು ಹೈದ್ರಾಬಾದ್ನಲ್ಲಿ ಹೆಲ್ಪರ್ಸ್ ಆಫ್ ದಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್ಯಕ್ರಮವಿತ್ತು. ಶೌಚಾಲಯ ಬಳಕೆಯ ವಿಷಯದಲ್ಲಿ ಸಲಹೆ ನಸೀಮಾ ಅವರೇ ರಶ್ಮಿಯ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಿದ್ದರು. ಅವತ್ತು ರಶ್ಮಿಯ ವ್ಹೀಲ್ ಚೇರ್ ನೃತ್ಯ ನೋಡಿದವರೆಲ್ಲ ಒಂದೇ ಸಮನೆ ಒನ್ಸ್ ಮೋರ್ ಕೂಗಿದರು. ಖುಷಿಯಿಂದ ಚಪ್ಪಾಳೆ ಹೊಡೆದರು. ಈ ಹುಡುಗಿಯ ಸಾಧನೆಗೆ, ಛಲಕ್ಕೆ ಕೈಮುಗಿದರು. ನೃತ್ಯ ಮುಗಿಯುತ್ತಿದ್ದಂತೆಯೇ ವೇದಿಕೆಗೆ ಬಂದು ರಶ್ಮಿಯ ಆಟೊಗ್ರಾಫ್ ಪಡೆದರು. ಜತೆಯಲ್ಲಿ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.
***

ಈಗ ಏನೇನಾಗಿದೆ ಅಂದರೆ, ವ್ಹೀಲ್ ಚೇರ್ ನೃತ್ಯದ ಮೂಲಕ ರಶ್ಮಿ ಗುಲ್ಬರ್ಗಾ ಸೀಮೆಯಲ್ಲಿ ದೊಡ್ಡ ಹೆಸರಾಗಿದ್ದಾಳೆ. ಅಲ್ಲಿನ ಪೀಠಾಪತಿ ಶರಣಬಸಪ್ಪ ಅಪ್ಪ ಅವರು ರಶ್ಮಿಯ ನೃತ್ಯ ಪ್ರತಿಭೆಯನ್ನು ಕಂಡು ಬೆರಗಾಗಿದ್ದಾರೆ. ಈಕೆಯ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿ ಬೆನ್ನು ತಟ್ಟಿದ್ದಾರೆ. ಅಂಥದೇ ಪ್ರೋತ್ಸಾಹ ವಾಸವದತ್ತಾ ವಿದ್ಯಾ ವಿಹಾರ ಶಾಲೆಯ ಪ್ರಾಚಾರ್ಯರಾದ ನೀತಾ ಪುರೋಹಿತ್ ಅವರಿಂದಲೂ ದೊರಕಿದೆ. ಶಾಲೆಯ ೨೫ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರಶ್ಮಿಯ ನೃತ್ಯ ಏರ್ಪಡಿಸಿದ್ದ ಅಲ್ಲಿನ ಆಡಳಿತ ಮಂಡಳಿ- ‘ಈ ವಿದ್ಯಾರ್ಥಿನಿ ನಮ್ಮೆಲ್ಲರ ಹೆಮ್ಮೆ’ ಎಂದು ಖುಷಿಯಿಂದ ಹೇಳಿಕೊಂಡಿದೆ.
ಇದನ್ನೆಲ್ಲ ಕಂಡು ಸಹಜವಾಗಿಯೇ ಖುಷಿಯಾಗಿರುವ ಸುಂದ್ರೇಶ್-ಅನಿತಾ ದಂಪತಿ ಹೇಳುತ್ತಾರೆ: ಈ ಹಿಂದೆಲ್ಲಾ ಮಗಳಿಗೆ ಕಾಲು ಸ್ವಾನದಲ್ಲಿ ಇಲ್ಲವಲ್ಲ ಎಂದು ನೆನೆದು ಅಳ್ತಾ ಇದ್ವಿ. ಈಗ ಕಾಲಿಲ್ಲದಿದ್ರೂ ಮಗಳು ಎಂಥ ದೊಡ್ಡ ಸಾಧನೆ ಮಾಡಿದಳಲ್ಲ ಎಂದು ನೆನಪಾಗಿ ಆನಂದಬಾಷ್ಪ ಸುರಿಸ್ತಾ ಇದೀವಿ. ಇಂಥ ಕಂದಮ್ಮನ ಅಪ್ಪ-ಅಮ್ಮ ಅಂತ ಹೇಳಿಕೊಳ್ಳೋಕೆ ನಮಗೆ ಹೆಮ್ಮೆ ಆಗ್ತಾ ಇದೆ…’
ಈಗ ಹೇಳಿ: ರಶ್ಮಿಯ ಸಾಧನೆಯ ಕಥೆ ಓದಿದ ಮೇಲೆ ಈ ಹುಡುಗಿ ನಮ್ಮ ಅಕ್ಕನೋ ತಂಗಿಯೋ ಆಗಿರಬೇಕಿತ್ತು ಅನಿಸೋದಿಲ್ವ?
ಅಂದ ಹಾಗೆ ರಶ್ಮಿ ಮನೆಯ ಮೊಬೈಲ್ ನಂಬರ್: ೯೪೪೯೮ ೭೬೬೫೮.

ಆಷಾಢ ಅಂದ್ರೆ ಸುಮ್ನೇನಾ?

July 7, 2009

ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.
‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: ‘ಗೊತ್ತಿದೆಯಲ್ವ ನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, ನಲವತ್ತೆಂಟು ಬಾರಿ ಫೋನ್ ಮಾಡಿ ಮಾತಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ ಅಣ್ಣನ ಮನೆಗೇ ಹೋದೆ. ಸಂಪ್ರದಾಯದ ನೆಪದಲ್ಲಿ ಅವರು ಅರ್ಧಗಂಟೆ ವಾಕ್ ಹೋಗೋಕೂ ಬಿಡಲ್ಲ ಅನ್ನಿಸ್ತು. ಅದಕ್ಕೇ ಉಪಾಯ ಮಾಡ್ದೆ, ದೇವಸ್ಥಾನಕ್ಕೆ ಬರುವಂತೆ ಅವಳಿಗೆ ಐಡಿಯಾ ಕೊಟ್ಟೆ. ಅವಳೂ ಖುಷಿಯಿಂದ ಒಪ್ಪಿದ್ಲು. ದೇವಸ್ಥಾನದಲ್ಲಿ ಐದು ನಿಮಿಷ ಇದ್ದು ಸೀದಾ ಮಲ್ಟಿಪ್ಲೆಕ್ಸ್ಗೆ ಸಿನಿಮಾಕ್ಕೆ ಹೋದ್ವಿ. ಅಲ್ಲಿ ಇಬ್ರೂ ಪರಸ್ಪರ ಭೇಟಿಯಾಗಿದ್ದು ಆಯ್ತು. ಬೇಟೆ ಆಡಿದ್ದೂ ಆಯ್ತು! ನಮ್ಮ ಮದುವೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹಾಗಿರುವಾಗ ಸಂಪ್ರದಾಯದ ನೆಪದಲ್ಲಿ ದೂರ ಮಾಡೋಕೆ ನೋಡಿದ್ರೆ ನಾವಾದ್ರೂ ಹೇಗೆ ಇರೋಕಾಗ್ತದೆ ಹೇಳು…. ಈ ಆಷಾಢದ ಮನೆ ಹಾಳಾಗ!’
ಹೀಗೆಂದವನೇ, ಗೆಳೆಯ ಮಾತು ನಿಲ್ಲಿಸಿದ.
***
‘ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು’ ಎಂಬ ಮಾತು ಗೆಳೆಯನ ನೆಪದಲ್ಲಿ ಮತ್ತೆ ನೆನಪಾಯಿತು. ಹಿಂದೆಯೇ, ನಮ್ಮ ಮಧ್ಯೆ ಇವತ್ತಿಗೂ ವ್ರತದಂತೆ ಆರಣೆಯಲ್ಲಿರುವ- ‘ಆಷಾಢದಲ್ಲಿ ಹೊಸ ಮನೆ ಖರೀದಿಸಬಾರದು, ಮನೆ ಬದಲಿಸಬಾರದು, ವಾಹನ ಕೊಳ್ಳಬಾರದು, ಆಸ್ತಿ ಮಾರಬಾರದು, ಮನೆ ನಿರ್ಮಾಣಕ್ಕೆ ಪಾಯ ಹಾಕಬಾರದು, ಮದುವೆಯೂ ಸೇರಿದಂತೆ ಯಾವೊಂದು ಶುಭ ಕಾರ್ಯವೂ ಆಷಾಢ ಮಾಸದಲ್ಲಿ ನಡೆಯಬಾರದು…’ ಎಂಬಿತ್ಯಾದಿ ಮಾತುಗಳೆಲ್ಲ ಸಾಲು ದೀಪದ ಬೆಳಕಿನಂತೆ ಕಣ್ಮುಂದೆ ಬಂದು ಹೋದವು. ಆಗಲೇ ಹುಟ್ಟಿಕೊಂಡದ್ದು ಈ ಪ್ರಶ್ನೆಗಳ ಗುಚ್ಛ: ಅಲ್ಲ, ಆಷಾಢದಲ್ಲಿ ಅದ್ಯಾಕೆ ಮದುವೆಯಾಗಬಾರದು? ಯಾಕೆ ಹೊಸ ಮನೆ ಕಟ್ಟಿಸಬಾರದು ಖರೀದಿಸಬಾರದು? ಗಂಡ-ಹೆಂಡತಿ ಜೊತೆಯಾಗಿದ್ದರೆ ಈ ಆಷಾಢಕ್ಕೇನು ಕಷ್ಟ? ಈ ಮಾಸದಲ್ಲಿ ಕೂಡ ಅದದೇ ಭಾನುವಾರ, ಸೋಮವಾರ, ಮಂಗಳವಾರ… ವಗೈರೆಗಳೇ ಇದ್ದರೂ ಹೊಸದಾಗಿ ವಾಹನ ಖರೀದಿಸಬಾರದು ಎಂದರೆ ಏನರ್ಥ? ಆಷಾಢದ ನೂರೆಂಟು ಲೆಕ್ಕಾಚಾರಗಳ ಮಧ್ಯೆಯೂ ದಿನಸಿ, ಸಾಂಬಾರ ಪದಾರ್ಥಗಳು ಹಾಗೂ ತರಕಾರಿಯನ್ನು ದಿನದಿನವೂ ಖರೀದಿಸುವ ಜನ, ಆಸ್ತಿ ಖರೀದಿಯ ವಿಷಯ ಬಂದಾಗ ಮಾತ್ರ ಹಾವು ತುಳಿದವರಂತೆ ಬೆಚ್ಚುವುದೇಕೆ? ಒಂದು ವೇಳೆ ಯಾರಾದರೂ ಕಿಲಾಡಿಗಳು, ಈ ಆಷಾಢ ಮಾಸ ತುಂಬಾ ಕೆಟ್ಟದು. ಹಾಗಾಗಿ ಒಂದಿಡೀ ತಿಂಗಳು ಯಾರೂ ಊಟ ಮಾಡಬಾರದು, ಸ್ನಾನ ಮಾಡಬಾರದು ಮತ್ತು ಉಸಿರಾಡಲೂಬಾರದು ಎಂದು ಹೇಳಿಬಿಟ್ಟರೆ…?!
ಇಂಥದೊಂದು ಯೋಚನೆ ಬಂದೊಡನೆ ನಗು ಬಂತು. ಹಿಂದೆಯೇ ಆಷಾಢದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲ ಜನ ಹಾಗೂ ಪರಿಸರದ ‘ಬದಲಾದ ಚಿತ್ರವೂ’ ಕಣ್ಮುಂದೆ ಹಾದು ಹೋಯಿತು; ಬ್ಲಾಕ್ ಅಂಡ್ ವೈಟ್ ಸಿನಿಮಾದ ದೃಶ್ಯಗಳ ಹಾಗೆ…
ಹೌದಲ್ಲವಾ? ಉಳಿದೆಲ್ಲ ಸಂದರ್ಭಗಳಲ್ಲೂ ಆಕಾಶ ಶುಭ್ರವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಆದರೆ, ಆಷಾಢ ಮಾಸ ಬಂತೆಂದರೆ ಸಾಕು, ಆಕಾಶವೆಂಬೋ ಆಕಾಶ ಕೂಡ ಸ್ವಲ್ಪ ಮಂಕಾಗುತ್ತದೆ, ಮಸುಕಾದಂತೆ ಕಾಣಿಸುತ್ತದೆ. ರೈಲಿನ ಎಂಜಿನ್ನಿಂದ ಹೊರಟ ಹೊಗೆಯಂತೆ ಕಾಣುವ ಕಡುಗಪ್ಪು ಮೋಡಗಳು ಆಕಾಶದ ಚೆಲುವನ್ನೇ ಹಾಳು ಮಾಡಿರುತ್ತವೆ. ಈ ಮೋಡಗಳಲ್ಲಿರುವ ಅಷ್ಟೂ ಮಳೆ ನೀರನ್ನು ಸುರಿಸಿ, ದುಗುಡ, ದುಮ್ಮಾನವನ್ನು ಕಳೆದುಕೊಳ್ಳಬೇಕೆಂಬ ಬಯಕೆ ಆಗಸಕ್ಕಿರುತ್ತದೆ, ನಿಜ. ಆದರೆ, ತುಂಬ ಸಂದರ್ಭದಲ್ಲಿ ಮೋಡಗಳು ಮಳೆ ಸುರಿಸುವುದೇ ಇಲ್ಲ. ಬದಲಿಗೆ, ಅಮ್ಮನೊಂದಿಗೆ ‘ಠೂ’ ಬಿಟ್ಟು ಮನೆಯ ಇನ್ನೊಂದು ಮೂಲೆಗೆ ಬಂದು ಮುಖ ಊದಿಸಿಕೊಂಡು ಕೂರುವ ಮಗುವಿನಂತೆ, ಅದೇ ಆಗಸದ ಇನ್ನೊಂದು ತುದಿಗೆ ಬಂದು ಕೂತುಬಿಡುತ್ತವೆ. ಪರಿಣಾಮ, ಈ ಆಷಾಢದ ಸಂದರ್ಭದಲ್ಲಿ ಆಕಾಶದಂಥ ಆಕಾಶ ಕೂಡ ಎಲ್ಲ ಇದ್ದರೂ ಏನೂ ಇಲ್ಲ ಎಂಬಂಥ ನೋವಿನಿಂದ ಕಂಗಾಲಾಗಿರುತ್ತದೆ. ಅದಕ್ಕೇ ಹೇಳಿದ್ದು- ಆಷಾಢ ಎಂದರೆ ಖಿನ್ನತೆ. ಆಷಾಢ ಎಂದರೆ ಯಾತನೆ, ಆಷಾಢ ಎಂದರೆ ದುಗುಡ ಮತ್ತು ಆಷಾಢವೆಂದರೆ ವಿರಹ!
ಹೀಗೆ ಅಂದುಕೊಂಡಾಕ್ಷಣ ಮನಸ್ಸು ಮತ್ತೆ ಅದೇ ಹಳೆಯ ಪ್ರಶ್ನೆಗೇ ಬಂದು ನಿಲ್ಲುತ್ತದೆ: ‘ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರ ಮಾಡ್ತಾರಲ್ಲ ಯಾಕೆ?’
ಹಿರಿಯರ ಜಾಣತನವನ್ನೇ ಅಂದಾಜು ಮಾಡಿಕೊಂಡು ಹೇಳುವುದಾದರೆ- ಮದುವೆಗಳ ಸೀಜನ್ ಆರಂಭವಾಗುವುದೇ ಜೇಷ್ಠ ಮಾಸದಲ್ಲಿ. ಆ ತಿಂಗಳು- ಮದುವೆ, ನಂತರದ ಒಂದಿಷ್ಟು ಶಾಸ್ತ್ರ, ದೇವಸ್ಥಾನ, ಗೆಳೆಯರ ಮನೆಗಳಿಗೆ ಯಾತ್ರೆ ಇತ್ಯಾದಿಗಳಲ್ಲೇ ಮುಗಿದು ಹೋಗುತ್ತದೆ. ಈ ಮಧ್ಯೆಯೇ ‘ಹೊಸ ಬದುಕಿನ ರಸಮಯ ಕ್ಷಣಗಳ’ ರುಚಿ ಗಂಡ-ಹೆಂಡತಿ, ಇಬ್ಬರಿಗೂ ಆಗಿರುತ್ತದೆ. ಪರಿಣಾಮ, ಇಬ್ಬರೂ ‘ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ…’ ಎಂಬ ಉನ್ಮಾದದ ಸ್ಥಿತಿಗೆ ಬಂದಿರುತ್ತಾರೆ. ಹೀಗಿದ್ದಾಗಲೇ ಕಳ್ಳನಂತೆ, ಒಂದೊಂದೇ ಹೆಜ್ಜೆ ಇಡುತ್ತ ಬಂದೇ ಬಿಡುತ್ತದೆ ಆಷಾಢ. ಒಂದು ವೇಳೆ ಹಸಿಬಿಸಿ ಆಸೆಗಳಿಂದ ಹುಚ್ಚಾದ ನವದಂಪತಿಗಳನ್ನು ಈ ತಿಂಗಳು ಜೊತೆಯಾಗಿರಲು ಬಿಟ್ಟರೆ, ಬಿರು ಬೇಸಿಗೆಯ ಕಾಲಕ್ಕೆ ಹೆರಿಗೆಯಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ದಿಢೀರನೆ ಜ್ವರ ಬಂದುಬಿಡುವ ಸಾಧ್ಯತೆಗಳಿರುತ್ತದೆ. ಈ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆಯನ್ನು ತಪ್ಪಿಸಬೇಕೆಂಬ ಆಶಯದಿಂದಲೇ ಒಂದು ತಿಂಗಳ ಮಟ್ಟಿಗೆ ಗಂಡ-ಹೆಂಡತಿಯನ್ನು ತಾತ್ಕಾಲಿಕವಾಗಿ ದೂರ ಇರಿಸಲಾಗುತ್ತದೆ.
ಅಂತೆಯೇ, ಆಷಾಢದ ಸಂದರ್ಭದಲ್ಲಿ, ಆಗಷ್ಟೇ ಮಳೆ ಬಿದ್ದು ಬಿತ್ತನೆ, ಕಳೆ ಕೀಳುವುದೂ ಸೇರಿದಂತೆ ರೈತರಿಗೆ ಕೈ ತುಂಬ ಕೆಲಸ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಮನೆ ಕಟ್ಟಿಸುವ/ ಖರೀದಿಸುವ ಕೆಲಸಕ್ಕೆ ನಿಂತರೆ ಮೈಮರೆವಿನ ಕಾರಣಕ್ಕೆ ಕೃಷಿ ಕೆಲಸ ಕೆಡಬಹುದು ಎಂಬ ಇನ್ನೊಂದು ಕಾರಣ ಕೂಡ ‘ಆಷಾಢದಲ್ಲಿ ಶುಭಕಾರ್ಯಗಳಿಗೆ ನಿಷಿದ್ಧ’ ಎಂಬ ಘೋಷಣೆಯ ಹಿಂದಿರಬಹುದೇನೋ ಅನಿಸುತ್ತದೆ.
ಇಂಥದೊಂದು ಸಮಜಾಯಿಷಿ ಕೊಟ್ಟ ನಂತರವೂ ಆಷಾಢ ಎಂದಾಕ್ಷಣ ‘ನವದಂಪತಿಯ’ ಇರುಳಿನ ಸಂಕಟವೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಮನಸ್ಸು, ಹದಿನೈದಿಪ್ಪತ್ತು ವರ್ಷ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಗಳ ಹಿಂದೆ ಯಾತ್ರೆ ಹೊರಡುತ್ತದೆ. ತುಂಟ ಕಂಗಳು ಅದನ್ನು ಹಿಂಬಾಲಿಸುತ್ತವೆ.
ಯಾರು ಏನೇ ಹೇಳಲಿ, ಹಳೆಯ ದಿನಗಳ ಆಚರಣೆಯೇ ಚೆಂದವಿತ್ತು. ಆಗೆಲ್ಲ- ಆಷಾಢ ಇನ್ನೂ ನಾಲ್ಕೈದು ದಿನವಿದೆ ಎನ್ನುವಾಗಲೇ ಗಂಡನ ಮನೆಯಿಂದ ತಂಗಿಯನ್ನು ಕರೆ ತರಲು ಅಣ್ಣ ತಯಾರಿ ನಡೆಸುತ್ತಿದ್ದ. ಈ ಕಡೆ- ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೇಲಿದ್ರೆ ಕೆಡುಕು ತಪ್ಪಿದ್ದಲ್ಲ ಎಂಬ ಹಳೆಯ ಮಾತನ್ನು ನಂಬಿ, ಸೊಸೆ ಅನ್ನಿಸಿಕೊಂಡಾಕೆ ಕೂಡ ಅಪ್ಪನ ಮನೆಗೆ ಹೊರಟು ನಿಲ್ಲುತ್ತಿದ್ದಳು. ಅಣ್ಣ ಬರುವುದು ಒಂದೆರಡು ದಿನ ತಡವಾದರೂ ಸಾಕು; ಹೆಣ್ಣು ಮಕ್ಕಳಿಗೆ ‘ಆಷಾಢ ಮಾಸ ಬಂದೀತಮ್ಮ/ ತೌರಿಂದ ಅಣ್ಣ ಬರಲಿಲ್ಲ/ ಎಷ್ಟು ನೆನೆಯಲಿ ಅಣ್ಣನ ದಾರಿ/ ಸುವ್ವೋ ಲಾಲಿ ಸುವ್ವಾಲಾಲಿ’ ಎಂಬ ಹಾಡು ನೆನಪಾಗಿಬಿಡುತ್ತಿತ್ತು.
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ‘ಗಂಡ’ ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ- ಹಗಲಲ್ಲಿ ಬೆಳಕೇ ಇರುತ್ತಿರಲಿಲ್ಲ. ರಾತ್ರಿ ನಿದ್ರೆ ಬರುತ್ತಿರಲಿಲ್ಲ!
ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ‘ರಾಧನ್ನು’ ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ‘ಅವಳು’ ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ! ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ‘ಹಾ, ಹೂಂ, ಸರಿ ಸರಿ…’ ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ‘ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್ತದೆ ಹೇಳು?’ ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ!
ಮರು ಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..’
ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ‘ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..’ ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ.
ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು. ‘ಈತ’ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ ಅತ್ತೆಯೂ ಬರುತ್ತಿದ್ದದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ‘ಇವನು’ ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ‘ಅವಳು’ ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳಿ. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದು ಹೋಗುತ್ತಿತ್ತು.
ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ‘ಅತೀ’ ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಎರಡು ಕುಟುಂಬಗಳ ನಡುವೆ ಇದ್ದ ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!
***
ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ‘ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ‘ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ’ ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ’ ಎಂದು ಉತ್ತರ ಕೊಟ್ಟು ದಂಗು ಬಡಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರು ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಎರಡು ವರ್ಷದವರೆಗೂ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬ ಮಾತೇ ಅರ್ಥ ಕಳೆದುಕೊಂಡಿದೆ.
ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ‘ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ

ಎಂಟು ಜನರೂ ಒಮ್ಮೆಗೇ ಗುರಿ ಮುಟ್ಟಿದರು!

June 7, 2009

ಅದು ಜಿಲ್ಲಾ ಮಟ್ದದ ಕ್ರೀಡಾಕೂಟ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೆಲ್ಲ ಮಾನಸಿಕ ಅಸ್ವಸ್ಥರು, ಅಂಗವಿಕಲರು. ವಿಯ ಷಡ್ಯಂತ್ರಕ್ಕೆ ಬಲಿಯಾಗಿ ದೇಹದ ಯಾವುದೋ ಒಂದು ಅಂಗವನ್ನು ಕಳೆದುಕೊಂಡವರು.
ಅವತ್ತು ನಡೆಯಲಿದ್ದುದು ನೂರು ಮೀಟರ್ ಓಟದ ಅಂತಿಮ ಸುತ್ತಿನ ಸ್ಪರ್ಧೆ. ಕಣದಲ್ಲಿ ಉಳಿದಿದ್ದವರು ಎಂಟು ಮಂದಿ. ಆ ಪೈಕಿ ಊರುಗಾಲಿನ ಸಹಾಯದಿಂದ ಓಡುವ ಒಂದು ಹುಡುಗಿ ಕೂಡ ಇದ್ದಳು. ಮೊದಲು ಗುರಿ ತಲುಪಿದವರಿಗೆ ಕಪ್ ಮತ್ತು ಶೀಲ್ಡ್ ಕೊಡಲಾಗುವುದು ಎಂದು ಸಂಘಟಕರು ಮೇಲಿಂದ ಮೇಲೆ ಘೋಷಿಸಿದ್ದರು.
ಹೇಳಿ ಕೇಳಿ ಕಣದಲ್ಲಿರುವವರು ಅಂಗವಿಕಲರು ತಾನೆ? ಹಾಗಾಗಿ ಓಟದ ಸ್ಪರ್ಧೆಯಲ್ಲಿ ಅಂಥ ಸ್ವಾರಸ್ಯವಾಗಲಿ, ರೋಚಕ ಕ್ಷಣವಾಗಲಿ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ, ವಿಕಲಾಂಗರ ಓಟ ಹೇಗಿರುತ್ತದೋ ಎಂಬ ಕುತೂಹಲದಿಂದಲೇ ಒಂದಷ್ಟು ಮಂದಿ ಸ್ಟೇಡಿಯಂಗೆ ಬಂದಿದ್ದರು. ಇಂಥ ಕುತೂಹಲಿಗಳ ಮಧ್ಯೆಯೇ ಇದ್ದ ರ್ಸ್ಪಗಳ ಪೋಷಕರು-ಆಗಿಂದಾಗ್ಗೆ ಗಟ್ಟಿ ದನಿಯಲ್ಲಿ ತಮ್ಮ ಮಕ್ಕಳ ಕಡೆಗೆ ಕೈ ಮಾಡಿ ಕೂಗುತ್ತಾ-‘ವಿಷಲ್ ಹಾಕಿದ ತಕ್ಷಣ ಓಡಿಬಿಡಬೇಕು. ಫಸ್ಟ್ ಪ್ರೈಜೇ ತಗೋಬೇಕು ಗೊತ್ತಾಯ್ತಾ?’ ಎಂದು ಉಪದೇಶದ ಮಾತು ಹೇಳುತ್ತಿದ್ದರು.
ಕಡೆಗೊಮ್ಮೆ ಓಟ ಆರಂಭವಾಗುವ ಕ್ಷಣ ಬಂದೇ ಬಂತು. ಆಯೋಜಕರ ಕಡೆಯವರೊಬ್ಬರು -‘ರೆಡೀ, ಓನ್, ಟೂ, ಥ್ರೀ’ ಎಂದು, ನಂತರದ ಕೆಲವೇ ಸೆಕೆಂಡುಗಳಲ್ಲಿ ವಿಷಲ್ ಹಾಕಿದರು.
ಅಷ್ಟೇ, ಎಂಟೂ ಮಂದಿ ಓಡಲು ಶುರು ಮಾಡಿದರು. ಆ ಪೈಕಿ ಒಬ್ಬಾಕೆಗೆ ಕೈಗಳಿರಲಿಲ್ಲ. ಇನ್ನೊಬ್ಬಳಿಗೆ ಒಂದು ಕಾಲಿರಲಿಲ್ಲ. ಮತ್ತೊಬ್ಬಳಿಗೆ ದೃಷ್ಟಿ ಭಾಗ್ಯವಿರಲಿಲ್ಲ. ಮಗದೊಬ್ಬಳಿಗೆ ಬುದ್ಧಿ ಭ್ರಮಣೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ, ಓಡುವ ಸಂದರ್ಭದಲ್ಲಿ ಮಾತ್ರ ಈ ಮಕ್ಕಳು ತಮ್ಮ ದೈಹಿಕ ನ್ಯೂನತೆಗಳನ್ನೂ ಮರೆತು ಗುರಿ ತಲುಪುವತ್ತ ಉತ್ಸಾಹದಿಂದ ಮುನ್ನುಗ್ಗಿದ್ದರು.
ಈ ಮಕ್ಕಳ ಆಮೆ ವೇಗದ ಓಟ ಕಂಡು ಕೆಲವರಿಗೆ ನಗು, ಕೆಲವರಿಗೆ ಅಚ್ಚರಿ. ಹೀಗಿದ್ದಾಗಲೇ ಊರುಗೋಲಿನ ಸಹಾಯದಿಂದಲೇ ಓಡುತ್ತಿದ್ದ ಹುಡುಗಿಯೊಬ್ಬಳು ಆಯತಪ್ಪಿ ಬಿದ್ದುಬಿಟ್ಟಳು. ಬಿದ್ದ ರಭಸಕ್ಕೆ ಚರ್ಮ ಕಿತ್ತು ಬಂದಿತ್ತು. ನೋವಿನಿಂದ ಆಕೆ ಚೀರಿಕೊಂಡಳು. ಆ ಕ್ಷಣವೇ ಮುಂದೆ ಓಡುತ್ತಿದ್ದ ಉಳಿದ ಏಳೂ ಮಕ್ಕಳು ಹಿಂತಿರುಗಿ ನೋಡಿದರು. ಎರಡೇ ನಿಮಿಷಗಳಲ್ಲಿ ಅವರ ಕಂಗಳು ಮಾತಾಡಿಕೊಂಡವು. ಎಲ್ಲರೂ ಮತ್ತೆ ಹಿಂದಕ್ಕೆ ಓಡಲು ತೊಡಗಿ, ಗಾಯಗೊಂಡಿದ್ದಾಕೆಯ ಬಳಿ ಬಂದರು. ಆಕೆಗೆ ತಮಗೆ ತಿಳಿದಂತೆ ಚಿಕಿತ್ಸೆ ನೀಡಿದರು.
ಸ್ಟೇಡಿಯಂನಲ್ಲಿ ಇದ್ದ ಜನರೆಲ್ಲ ಓಹ್, ಹೇಳಿ ಕೇಳಿ ಇವು ಬುದ್ಧಿಭ್ರಮಿತ, ಅಂಗವಿಕಲ ಮಕ್ಕಳು ತಾನೆ? ಇವುಗಳಿಗೆ ಸ್ಪರ್ಧೆ ಇದೆ ಅನ್ನೋದೇ ಮರೆತು ಹೋಗಬಹುದು ಎಂದು ಮಾತಾಡಿಕೊಂಡರು. ಇರಲಿ, ಮುಂದೇನಾದೀತೋ ಎಂದು ಅವರೆಲ್ಲ ಬೆರಗಿನಿಂದ ನೋಡುತ್ತಿದ್ದಾಗಲೇ ಗಾಯಗೊಂಡಿದ್ದ ಹುಡುಗಿಯನ್ನು ನಿಲ್ಲಿಸಿ ಎಲ್ಲರೂ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,ಒಂದೇ ವೇಗದಲ್ಲಿ ಓಡುತ್ತಾ ಬಂದು ಎಂಟು ಮಂದಿಯೂ ಒಟ್ಟಿಗೇ ಗುರಿ ತಲುಪಿದರು!
ಆ ಕ್ಷಣದಲ್ಲಿ ಆ ಮಕ್ಕಳ ಹೃದಯ ಮಾತಾಡಿತ್ತು! ಈ ಅಪರೂಪದ ದೃಶ್ಯ ನೋಡಿದ ಆ ಮಕ್ಕಳ ಪೋಷಕರು ಬಿಕ್ಕುತ್ತಾ ಓಡಿಬಂದು ಆ ಮಕ್ಕಳನ್ನು ಅಪ್ಪಿಕೊಂಡರು. ಅಂಗವಿಕಲ ಮಕ್ಕಳು ಪ್ರದರ್ಶಿಸಿದ ‘ದೊಡ್ಡ ಗುಣ’ ಕಂಡು ಮೂಕರಾದ ಅಕಾರಿಗಳು ಎಲ್ಲ ಮಕ್ಕಳಿಗೂ ಪ್ರತ್ಯೇಕವಾಗಿಯೇ ಒಂದೊಂದು ಕಪ್ ನೀಡಿ ತಾವೂ ಕಣ್ಣೊರಸಿಕೊಂಡರು!

ಮನುಷ್ಯ ಹೇಗೆ ಬದುಕಬೇಕು

June 7, 2009

ಕೆಲವರಿರುತ್ತಾರೆ: ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ‘ಎನಗಿಂತ ಕಿರಿಯರಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. ಹಾಗೆಯೇ ಬದುಕುತ್ತಾರೆ. ತಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಾ, ನನ್ನ ಬೆಳವಣಿಗೆಯ ಹಿಂದೆ ಇಂಥವರ ಕರುಣೆಯ ಕೈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುತ್ತಾರೆ. ಅಂಥವರ ಪೈಕಿ ಶಿವರಾಮ ಕಾರಂತರು ಪ್ರಮುಖರು.
ಕಾರಂತರು ತಮ್ಮ ‘ಚೋಮನ ದುಡಿ’ ಕಾದಂಬರಿಯನ್ನು ಅರ್ಪಿಸಿದ್ದು ದೇವಣ್ಣ ಸುಬ್ರಾಯ ಪೈ ಅವರಿಗೆ. ಪೈ ಅವರಿಗೇ ಕಾದಂಬರಿ ಅರ್ಪಿಸಿದ್ದೇಕೆ ಎಂಬುದಕ್ಕೆ ಕಾರಂತರು ಸ್ಪಷ್ಟನೆಯನ್ನೂ ಕೊಡುತ್ತಾರೆ. ಅದು ಹೀಗೆ:
ಈ ಗ್ರಂಥದ ಅರ್ಪಣೆಯ ವಿಚಾರ- ಇದನ್ನು ನನ್ನೊಬ್ಬ ಮಿತ್ರರಾದ ಕುಂದಾಪುರದ ದೇವಣ್ಣ ಸುಬ್ರಾಯ ಪೈಗಳಿಗೆ ಅರ್ಪಿಸಿದ್ದೇನೆ. ಅವರೇನು ದೊಡ್ಡ ಮನುಷ್ಯರ ವರ್ಗಕ್ಕೆ ಸೇರಿದವರಲ್ಲ. ಬಡ ಗುಮಾಸ್ತರೊಬ್ಬರು. ಆದರೆ ಅವರಿಗೆ ನನ್ನಿಂದ ಸಲ್ಲುವ ಪ್ರೇಮದ ಋಣ ಬಹಳವಿದೆ. ಎಷ್ಟೋ ಸಮಯ, ನಾನು ಅವರನ್ನು ಮರೆಯುವ ತಪ್ಪನ್ನೂ ಮಾಡಿದ್ದೇನೆ. ಈಗ ಅವರಿಗೆ ಈ ವಿಶ್ವಾಸದ ಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ.
ನಾನು ಚಿಕ್ಕವನಾಗಿರುವಾಗ (ಈಗ ದೊಡ್ಡವನಾಗಿಲ್ಲ) ಅವರ ಬೆಂಬಲವಿಲ್ಲದಿದ್ದರೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಹಾರುವುದು ಅಸಾಧ್ಯದ ಮಾತಾಗಿತ್ತು. ತಮ್ಮ ಕಷ್ಟಾರ್ಜಿತ ಧನದಿಂದ ಅವರು ನನ್ನ ಹಿಂದಿನ ಸಾಹಸ ‘ವಸಂತ’ ಪತ್ರಿಕೆಯ ಜನ್ಮಕ್ಕೆ ಕಾರಣರಾದರು. ಅದರಿಂದಾಗಿ, ನನ್ನ ಮೊದಲಿನ ಕಾದಂಬರಿ ‘ವಿಚಿತ್ರ ಕೂಟ’ವು ಬೆಳಕನ್ನು ಕಂಡಿತು. ನನ್ನ ಅಂದಿನ ಕೆಲಸಗಳೆಲ್ಲ ತೀರ ತೊದಲು ನುಡಿಗಳಂತಿವೆ. ಅವುಗಳನ್ನು ಆಡಲು, ತಮ್ಮ ಅಪಾರ ತ್ಯಾಗದಿಂದ ಅವರೇ ವಾತಾವರಣ ಕಲ್ಪಿಸಿಕೊಟ್ಟರು. ನಾನು ಯಾವ ಸ್ಥಿತಿಯಲ್ಲಿದ್ದರೂ ಅವರ ಸಹಾಯದ ನೀರೇ, ಮುಂದಿನ ಬೆಳೆಗೆ ಕಾರಣವಾಯಿತು ಎಂಬುದನ್ನು ಮರೆಯಲಾರೆ. ಅವರು ಸಾಹಿತ್ಯ ಪ್ರೇಮಿಗಳೂ, ಹರಿಜನರ ಮೇಲೆ ಕರುಣೆಯುಳ್ಳವರೂ ಅಹುದು. ಆದುದರಿಂದ ಇದೇ ಉಚಿತ ಕಾಣಿಕೆಯೆಂದು ಅವರಿಗೆ ಅರ್ಪಿಸುತ್ತಿದ್ದೇನೆ.
****
ಈಗ ಹೇಳಿ, ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಕಾರಂತರ ಈ ಬರಹವೇ ಉತ್ತರವಾಗುತ್ತದೆ. ಅಲ್ಲವೆ?

ಪಪ್ಪಂಗೆ ಒಮ್ಮೆಶಾಕ್ ಕೊಟ್ರೆ ಹ್ಯಾಗೆ?

June 7, 2009

ಮಕ್ಕಳು ಎಷ್ಟೊಂದು ಮುಗ್ಧವಾಗಿ ಯೋಚಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಈ ಪುಟ್ಟ ಕಥೆ. ಅದೊಮ್ಮೆ ಮಗುವೊಂದು ತಾಯಿಯನ್ನು ಕೇಳಿತು: ‘ಅಮ್ಮ ಅಮ್ಮ, ನಂಗೆ ಆಟ ಆಡೋಕೆ ಜತೆಗೊಂದು ಪಾಪು ಬೇಕು. ನಮ್ಮ ಮನೇಗೆ ಇನ್ನೊಂದು ಪಾಪು ತರೋಣ್ವ?’
ಮಗುವಿನ ಈ ಮುದ್ದು ಮಾತು ಕೇಳಿ ಒಳಗೊಳಗೇ ನಾಚಿಕೊಂಡ ಅಮ್ಮ ಹೇಳಿದಳು: ‘ನೋಡು ಕಂದಾ, ನಿಮ್ಮ ಡ್ಯಾಡಿ ಈಗ ಫಾರಿನ್ಗೆ ಹೋಗಿದ್ದಾರೆ. ಅವರು ವಾಪಸ್ ಬಂದ ಮೇಲೆ, ನೀನು ಕೇಳ್ತಾ ಇದೀಯಲ್ಲ ಹೊಸ ಪಾಪು; ಆ ಬಗ್ಗೆ ಮಾತಾಡ್ತೀನಿ. ನಂತರ ಸ್ವಲ್ಪ ದಿನ ಆದ ಮೇಲೆ ನಮ್ಮ ಮನೆಗೆ ಹೊಸ ಪಾಪು ಬರುತ್ತೆ. ಸರೀನಾ?’
ಈ ಕಂದ ತಕ್ಷಣವೇ ಅದೇ ಮುದ್ ಮುದ್ದು ಭಾಷೆಯಲ್ಲಿ ಹೀಗೆಂದಿತು: ‘ಪಪ್ಪ ಬರೋ ತನಕ ಕಾಯುವುದರ ಬದಲು, ಅವರು ಬರೋಕಿಂತ ಮೊದಲೇ ನೀನೇ ಒಂದು ಪಾಪು ತಂದ್ಕೋಬಿಡಮ್ಮ. ಆಗ ನಾವು ಪಪ್ಪ ಬಂದ ತಕ್ಷಣ ಅವರಿಗೆ ಹೊಸ ಪಾಪೂನ ತೋರಿಸಿ, ಶಾಕ್ ಕೊಡಬಹುದು!’
***
ಈ ಮಾತನ್ನು ಮಗು ಹೇಳಿದ್ದಕ್ಕೆ ಅದು ತಮಾಷೆ. ಅದೇ ಮಾತನ್ನು ಸ್ವಲ್ಪ ಅದಲು ಬದಲು ಮಾಡಿ ದೊಡ್ಡವರು ಹೇಳಿದ್ದರೆ… ಹೇಳಿದ್ದರೆ…?!

ಮಹಾರಾಜರು ಕಾಲಿಟ್ಟ ತಕ್ಷಣ ದೀಪಗಳು ಝಗ್ಗೆಂದು…

June 7, 2009

ಚಿಕ್ಕಂದಿನಲ್ಲಿ ಅಪ್ಪ-ಅಮ್ಮನೋ; ಅಜ್ಜಿ-ತಾತನೋ ಅಥವಾ ಗೆಳೆಯನೋ ಹೇಳಿದ್ದ ಕೆಲವು ಕತೆಗಳು ಮೇಲಿಂದ ಮೇಲೆ ಬಿಟ್ಟೂ ಬಿಡದೆ ಕಾಡುತ್ತವೆ. ಹೇಳಿಕೇಳಿ ಕಥೆಗಳಲ್ಲವೆ? ಅದೇ ಕಾರಣದಿಂದ ಅವುಗಳಲ್ಲಿ ಸತ್ಯಾಂಶ ಇರುವುದಿಲ್ಲ. ಆದರೆ, ಕತೆ ಹೇಳುವವರು ತಾವು ಪ್ರತ್ಯಕ್ಷ ಕಂಡದ್ದೇನೋ ಎಂಬಂತೆ ಆ ಘಟನೆಯನ್ನು ಬಣ್ಣಿಸಿರುತ್ತಾರೆ. ಪರಿಣಾಮ, ಕಥೆ ಕೇಳಿದವರು ಕೂಡ ಅದೆಷ್ಟೋ ದಿನಗಳವರೆಗೆ ಅದು ನಿಜವೆಂದೇ ನಂಬಿರುತ್ತಾರೆ.
ಅಂಥದೊಂದು ಪ್ರಸಂಗ ಇಲ್ಲಿದೆ ಕೇಳಿ: ಇದು ಚಂದ್ರಶೇಖರ ಆಲೂರು ಅವರ ‘ನಾನು ಒಲಿದಂತೆ ಹಾಡುವೆ’ ಪ್ರಬಂಧ ಸಂಕಲನದಿಂದ ಎತ್ತಿಕೊಂಡದ್ದು. ‘ಮೈಸೂರು ಅರಮನೆಯ ಅಷ್ಟೂ ದೀಪಗಳು ಸಂಜೆಯ ವೇಳೆ, ಏಕಕಾಲಕ್ಕೆ ಝಗ್ಗನೆ ಹೊತ್ತಿಕೊಳ್ಳುತ್ತವಲ್ಲ; ಅದು ಹೇಗೆ? ಎಂಬ ಪ್ರಶ್ನೆಗೆ ಆಲೂರರ ಗೆಳೆಯನೊಬ್ಬ ಹೇಳಿದನಂತೆ: ಮೈಸೂರು ಅರಮನೆಯಲ್ಲಿ ಅದೇನೋ ಒಂದು ವಿಶೇಷ ತಂತ್ರ ಜ್ಞಾನ ಬಳಸಿದ್ದಾರಂತೆ. ಅದೇನಪ್ಪ ಅಂದ್ರೆ ದಿನಾಲೂ ಸಂಜೆ ಮಹಾರಾಜರು ಆಸ್ಥಾನಕ್ಕೆ ಬಂದು-ಸಿಂಹಾಸನದ ಮೇಲೆ ಬಲಗಾಲು ಇಟ್ಟ ತಕ್ಷಣ ಮೈಸೂರಾದಿ ಮೈಸೂರಿನ ದೀಪಗಳೆಲ್ಲ ಝಗ್ಗನೆ ಹೊತ್ತಿಕೊಳ್ತವಂತೆ!’
ಈ ಕಥೆಯನ್ನು ನಿಜವೆಂದೇ ತುಂಬಾ ದಿನಗಳ ಕಾಲ ನಂಬಿದ್ದ ಆಲೂರು ಮತ್ತು ಮಿತ್ರರು, ಆಕಸ್ಮಿಕವಾಗಿ ಮೈಸೂರಿಗೆ ಹೋದಾಗ, ಸಂಜೆಯ ವೇಳೆ ಅವರೆಲ್ಲ ನೋಡನೋಡುತ್ತಿದ್ದಂತೆಯೇ ಅರಮನೆಯ ದೀಪಗಳು ಝಗ್ಗನೆ ಹೊತ್ತಿಕೊಂಡರೆ- ‘ಓಹ್, ಈಗ ಮಹಾರಾಜರು ಸಿಂಹಾಸನದ ಮೇಲೆ ಬಲಗಾಲು ಇಟ್ಟಿದಾರೆ ಅಂತಾಯ್ತು!’ ಅನ್ನುತ್ತಿದ್ದಂತೆ.
***
ಈಗ ಸುಮ್ಮನೇ ಒಮ್ಮೆ ಯೋಚಿಸಿ. ಮಹಾರಾಜರು ಸಿಂಹಾಸನ ಮೆಟ್ಟಿದ ತಕ್ಷಣ ದೀಪಗಳು ಹೊತ್ತಿಕೊಳ್ಳುವುದೇ ನಿಜವಾಗಿದ್ದರೆ, ಆ ದೀಪಗಳನ್ನು ಆರಿಸುವುದಕ್ಕೆ ಕೂಡ ಇನ್ನೊಂದು ಟೆಕ್ನಿಕ್ ಬಳಸಬೇಕಾಗಿತ್ತು! ಜತೆಗೆ ಒಂದು ವೇಳೆ ಅವರಿಗೆ ಜ್ವರ ಗಿರ ಬಂದು ಎರಡು ಮೂರು ದಿನ ಹಾಸಿಗೆ ಹಿಡಿದಿದ್ದರೆ?
ಉಹುಂ, ಆಗ ಇಂಥ ತುಂಟ ಯೋಚನೆಗಳು ಬರುತ್ತಿರಲಿಲ್ಲ. ಕಥೆಗಳು ಕೇಳಿದಷ್ಟೂ ಖುಷಿಕೊಡುತ್ತಿದ್ದವು. ಹೀಗೇ…

ಮತ್ತೆ ಮಳೆ ಹೊಯುತ್ತಿದೆ, ಎಲ್ಲ ನೆನೆಪಾಗುತ್ತಿದೆ…

June 7, 2009

male

ಮಳೆಗಾಲ ಶುರುವಾಗಿದೆ!
‘ಮಳೆ’ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ ಕಣ್ಮುಂದೆ ಬರುತ್ತದೆ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಮಳೆಗೆ ಸಂಬಂಸಿದಂತೆ, ಅಪ್ಪ-ಅಮ್ಮ, ತಾತ-ಅಜ್ಜಿಯವರು ಹೇಳಿದ್ದ ‘ಚಂದಮಾಮ’ದ ಕಥೆಗಳಷ್ಟೇ ಮಜದಿಂದ ಕೂಡಿದ್ದ ಕಥೆಗಳು ನೆನಪಾಗುತ್ತಿವೆ. ಅಂಥ ಒಂದೆರಡು ಕತೆಗಳಿವೆ ಇಲ್ಲಿ; ಅವುಗಳನ್ನು ಈ ಹಿಂದೆ ಕೇಳಿರದಿದ್ದರೆ- ಈಗ ಓದಿ ಖುಷಿಪಡಿ. ಈಗಾಗಲೇ ಕೇಳಿದ್ದರೆ-ಬಾಲ್ಯವನ್ನು ಮತ್ತೆ ನೆನಪು ಮಾಡಿಕೊಂಡು ಇನ್ನಷ್ಟು ಖುಷಿಪಡಿ!
ತುಂಬ ಸಂದರ್ಭದಲ್ಲಿ ಈಗಿನಂತೆಯೇ, ಹೊತ್ತು ಗೊತ್ತಿಲ್ಲದೆ ಮಳೆ ಬರುತ್ತಿತ್ತು. ಆಗೆಲ್ಲ ಅವ್ವ ನಡುಮನೆಯಲ್ಲಿ ಕುಳಿತು, ಅಲ್ಲಲ್ಲಿ ಮಳೆ ಸೋರುತ್ತಿದ್ದ ಜಾಗಕ್ಕೆ ಪಾತ್ರಗಳನ್ನಿಟ್ಟು ಹೇಳುತ್ತಿದ್ದಳು: ‘ತುಂಬ ವರ್ಷಗಳ ಹಿಂದೆ ಆಕಾಶ, ತುಂಬ ಹತ್ತಿರದಲ್ಲೇ, ಅಂದರೆ ತೆಂಗಿನಮರದ ಎತ್ತರದಲ್ಲೇ ಇತ್ತಂತೆ. ಆ ದಿನಗಳಲ್ಲಿ ಮಳೆ ಬೇಕು ಅನ್ನಿಸಿದರೆ, ಜನ ದೊಡ್ಡದೊಂದು ಕೋಲು ತಯಾರಿಸಿ, ಅದನ್ನು ಮೋಡಕ್ಕೆ ಚುಚ್ಚಿ ಮಳೆ ಬರಿಸಿಕೊಳ್ತಾ ಇದ್ರಂತೆ! (?!) ಒಂದು ಸಂದರ್ಭದಲ್ಲಿ ಘಟವಾಣಿ ಹೆಂಗಸೊಬ್ಬಳು ಭತ್ತ ಕುಟ್ಟುತ್ತಿದ್ದಳಂತೆ. ಆ ಸಂದರ್ಭದಲ್ಲಿ ಒಮ್ಮೆ ಅವಳ ಒನಕೆ ಮೇಲಿಂದ ಮೇಲೆ ಮೋಡಕ್ಕೆ ತಾಕಿತಂತೆ. ಇದರಿಂದ ಸಿಟ್ಟಿಗೆದ್ದ ಆಕೆ- ‘ನಿನ್ ಮನೆ ಹಾಳಾಗ. ಯಾಕೆ ಇಲ್ಲಿದ್ದೀಯ? ಹೋಗ್ಬಾರ್ದಾ ಮೇಲಕ್ಕೆ’ ಅಂದಳಂತೆ! ತಕ್ಷಣವೇ ಮೋಡ- ಮುನಿಸಿಕೊಂಡು ಮೇಲೆ ಮೇಲೆ ಹೋಗ್ತಾನೇ ಇತ್ತಂತೆ. ಅದೇ ವೇಳೆಗೆ ಆ ದಾರಿಯಲ್ಲಿ ಬರುತ್ತಿದ್ದ ದಾಸಯ್ಯನೊಬ್ಬ- ‘ಅಯ್ಯಯ್ಯೋ, ಒಬ್ಬನೇ ಹೋಗ್ತಾ ಇದೀಯಲ್ಲ? ನಿಂತ್ಕೊ ನಿಂತ್ಕೊ, ನಾನೂ ಬರ್ತೀನಿ ಜತೆಗೆ’ ಅಂದನಂತೆ. ತಕ್ಷಣವೇ ಮೋಡ ಅಲ್ಲಿಯೇ ನಿಂತುಕೊಂಡಿತಂತೆ. ಅವತ್ತಿಂದ ಆಕಾಶ ಅದೇ ಎತ್ತರದಲ್ಲಿದೆ! ಇದು, ಅಮ್ಮಂದಿರು ಹೇಳುತ್ತಿದ್ದ ಕತೆ.
ಈಗ ತೆಂಗಿನ ಮರದ ಎತ್ತರದಲ್ಲೇ ಆಕಾಶವಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ- ಬೆರಗೂ, ಭಯವೂ, ವಿಸ್ಮಯವೂ ಒಮ್ಮೆಗೇ ಆಗುತ್ತದೆ. ಆದರೆ, ಬಾಲ್ಯದಲ್ಲಿ ಹಾಗೆಂದೂ ಅನ್ನಿಸಲೇ ಇಲ್ಲ!
ಹೀಗೆ, ಅಮ್ಮನ ಕಥೆ ಸಾಗುತ್ತಿದ್ದ ಸಂದರ್ಭದಲ್ಲೇ ಗೋಡೆ, ಕಿಟಕಿ, ಮಾಳಿಗೆಯ ಕಿಂಡಿಯ ಮಧ್ಯೆ ಫಳಫಳಿಸುವ ಮಿಂಚು ಕಾಣಿಸುತ್ತಿತ್ತು. ಹಿಂದೆಯೇ ಭೂಮಂಡಲವೇ ನಡುಗಿ ಹೋಗಬೇಕು- ಅಂಥ ದೊಂದು ಭಾರೀ ಸದ್ದಿನ ಸಿಡಿಲು ಮೊರೆಯು ತ್ತಿತ್ತು. ಆಗ ಅಮ್ಮ ಹೇಳುತ್ತಿದ್ದಳು: ‘ಅರ್ಜುನ ಬಾಣ ಬಿಡ್ತಾ ಇದಾನೆ. ಆ ಬಾಣದ ಸದ್ದೇ ಈ ಸಿಡಿಲು. ಅವನು ಬಾಣ ಬಿಡಲು ಎದ್ದು ನಿಂತ ತಕ್ಷಣ ಅವನ ತಾಯಿ ಕುಂತಿ ದೇವಿ- ‘ಹೆಂಗಸರು, ಮಕ್ಕಳು ಇರ್ತಾರೆ ಮಗೂ. ದೊಡ್ಡ ಸದ್ದು ಮಾಡದಂಥ ಬಾಣ ಬಿಡು’ ಎಂದು ಬುದ್ಧಿಮಾತು ಹೇಳ್ತಾಳೆ. ಆದ್ರೂ ಅರ್ಜುನ ಕೇಳೋದಿಲ್ಲ. ಅವನು ಬಿಲ್ಲಿನ ದಾರವನ್ನು ಎಳೀತಾನಲ್ಲ? ಆಗ ಉಂಟಾ ಗುವ ಸದ್ದೇ ಗುಡುಗು. ಬಾಣ ಬಿಡ್ತಾನೆ ನೋಡಿ- ಅದು ಸಿಡಿಲು!’ (ಈಗ ಯೋಚಿಸಿ ದರೆ- ಅಂಥ ಬಿರುಮಳೆಯ ಮಧ್ಯೆಯೇ ಬಾಣ ಬಿಡುವ ಹೀಗ ಬಾಣ ಬಿಟ್ಟು ಮರವನ್ನೋ, ಮನುಷ್ಯನನ್ನೋ ಸುಡುವ ಅರ್ಜೆಂಟು ಅರ್ಜುನನಿಗಾದರೂ ಏನಿತ್ತು ಅನಿಸುತ್ತದೆ.)
ಸಿಡಿಲಿನ ಕಥೆ ಹೇಳುತ್ತಲೇ ತಕ್ಷಣವೇ ಕುಡುಗೋಲನ್ನೋ, ಕತ್ತಿಯನ್ನೋ ಬಾಗಿಲಿನ ಮುಂದೆ ಎಸೆಯುವಂತೆ ಹೇಳುತ್ತಿದ್ದಳು ಅಮ್ಮ. ಅದು ಸಿಡಿಲಿನಿಂದ ಮನೆಯನ್ನು ಸಂರಕ್ಷಿಸಿಕೊಳ್ಳಲು ಇದ್ದ ಉಪಾಯ. ಮಕ್ಕಳು ತಕ್ಷಣವೇ ಮನೆಯ ಮುಂದೊಂದು, ಹಿಂದೊಂದು ಕುಡುಗೋಲನ್ನು ಎಸೆದು ಬಂದು, ಕಬ್ಬಿಣದ ವಸ್ತುವಿಗೆ ಸಿಡಿಲು ಹೊಡೆಯಲ್ಲ ಅನ್ನೋದು ನಿಜವೇನಮ್ಮ ಎಂದು ಮತ್ತೆ ಮತ್ತೆ ಅನುಮಾನದಿಂದ ಕೇಳಿದರೆ- ‘ಶ್ರವಣ ಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಸಿಡಿಲು ಹೊಡೆಯದಿರಲಿ ಎಂದು ನೆತ್ತಿಯ ಮೇಲೆ ಸಲಾಕೆ ಹೊಡೆದಿದ್ದಾರೆ ಗೊತ್ತಾ?’ ಅನ್ನುತ್ತಿದ್ದಳು ಅಮ್ಮ!
ಮಳೆಗಾಲದ ಇನ್ನೊಂದು ಮಧುರ ನೆನಪೆಂದರೆ-ಕಪ್ಪೆಗಳ ವಟರ್ವಟರ್ ಸದ್ದು! ಮಳೆ ಹನಿಯುವ ಕ್ಷಣದವರೆಗೂ ಕಣ್ಣಿಗೆ ಬೀಳದಿದ್ದ ಕಪ್ಪೆಗಳು, ಮಳೆ ಬಿದ್ದ ಅರ್ಧಗಂಟೆಯೊಳಗೆ ಮನೆಯ ಆಚೀಚೆಯಿದ್ದ ಹೊಂಡಗಳಲ್ಲಿ ತುಂಬಿಕೊಂಡು ‘ಭಜನೆ’ ಆರಂಭಿಸುತ್ತಿದ್ದವು! ಅದಕ್ಕೆ ಹಿನ್ನೆಲೆಯಾಗಿಯೂ ಒಂದು ಕತೆ ಇರುತ್ತಿತ್ತು. ಅದು ಹೀಗೆ: ‘ಒಂದೆರಡಲ್ಲ, ಮೂರು ತಿಂಗಳಿಗೂ ಹೆಚ್ಚು ಅವಯ ಬೇಸಿಗೆಯ ಬಿಸಿಲಿಂದ ಕಂಗಾಲಾದ ಕಪ್ಪೆಗಳು ಮೇಲಿಂದ ಮೇಲೆ ಮಳೆಗಾಗಿ ಪ್ರಾರ್ಥಿಸುತ್ತವಂತೆ. ಕಡೆಗೊಮ್ಮೆ ಮಳೆಬಿದ್ದು ಹೊಂಡಗಳೆಲ್ಲ ತುಂಬಿಕೊಂಡಾಗ ಅದರೊಳಗೆ ಖುಷಿಯಿಂದ ಈಜು ಹೊಡೆದು, ಮುಗಿಲಿಂದ ಬಿದ್ದ ಹೊಸನೀರು ಕುಡಿದು, ಕಡೆಗೊಮ್ಮೆ ಮಳೆರಾಯನನ್ನು ಸ್ತುತಿಸಲು ಅಹೋರಾತ್ರಿ ‘ಸಂಗೀತ ಕಾರ್ಯಕ್ರಮ’ ನಡೆಸುತ್ತವಂತೆ! ಅದರ ಪರಿಣಾಮವೇ ಇಡೀ ರಾತ್ರಿ ವಟರ್ ವಟರ್!!!
* * *
ಒಮ್ಮೊಮ್ಮೆ ಏನಾಗುತ್ತಿತ್ತೆಂದರೆ, ಬೆಳ್ಳಂಬೆಳಗಿನಿಂದಲೇ ಸೋನೆ ಮಳೆ ಶುರುವಾಗು ತ್ತಿತ್ತು. ಅದರ ಮಧ್ಯೆಯೇ ಶಾಲೆ ತಲುಪಿಕೊಂಡರೆ- ಮಳೆಯ ಕಾರಣಕ್ಕೆ ದೂರದ ಊರಿಂದ ಬರುತ್ತಿದ್ದ ಶಿಕ್ಷಕರೇ ‘ಚಕ್ಕರ್’ ಹೊಡೆದಿ ರುತ್ತಿದ್ದರು. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಮೇಸ್ಟ್ರು ಬರುವುದು ಬರೀ ಅರ್ಧಗಂಟೆ ತಡವಾದರೆ, ಓಹ್ ಮೇಸ್ಟ್ರು ಬರುವುದಿಲ್ಲ ಎಂದು ಅಂದಾಜು ಮಾಡಿಕೊಂಡು ಹುಡುಗರೇ ಮನೆಗೆ ಪೇರಿ ಕೇಳುತ್ತಿದ್ದರು! ಹಾಗೆ ಮನೆಗೆ ಹೋಗುವ ಹಾದಿಯಲ್ಲೇ ಆಗಷ್ಟೇ ಹರಿದು ಬರುತ್ತಿದ್ದ ಮಳೆ ನೀರಿನಲ್ಲಿ ಎಕ್ಸ್ರ್ಸೈಜ್ ಹಾಳೆಯಿಂದ ಮಾಡಿದ ಕಾಗದದ ದೋಣಿ ಮಾಡಿ ತೇಲಿ ಬಿಟ್ಟು; ಮಳೆ ನೀರಿನ ಕೊಚ್ಚೆಯಲ್ಲಿ ಬೇಕೆಂದೇ ಕಾಲು ಮುಳುಗಿಸಿ, ಆ ಸಂದರ್ಭದಲ್ಲೇ ಮೈಮೇಲೆ ಕೆಸರು ಹಾರಿಸಿದ ಸಹಪಾಠಿಯ ಮೇಲೆ ಮನೆಯಲ್ಲಿ ಒಮ್ಮೆ, ಶಾಲೆಯಲ್ಲಿ ಮತ್ತೊಮ್ಮೆ ಚಾಡಿ ಹೇಳಿ, ಅದೇ ಕಾರಣಕ್ಕೆ ಗೆಳೆಯ/ಗೆಳತಿಯೊಂದಿಗೆ ಕೋಳಿ ಜಗಳವನ್ನೂ ಆಡಿ…
ಹೌದಲ್ಲವಾ? ದಶಕಗಳ ಹಿಂದೆ, ಶಾಲೆಗೆ ಹೋಗುತ್ತಿದ್ದ ಯಾರೊಬ್ಬರ ಬಳಿಯೂ ಛತ್ರಿ ಇರುತ್ತಿರಲಿಲ್ಲ. ಹಾಗಾಗಿ ಮಳೆ ಬಂದ ತಕ್ಷಣ ಎಲ್ಲರೂ ಪುಸ್ತಕಗಳನ್ನೇ ತಲೆಯ ಮೇಲಿಟ್ಟುಕೊಂಡು ಮನೆಯ ಕಡೆಗೆ ಅಥವಾ ಶಾಲೆಯ ಕಡೆಗೆ ಪೇರಿ ಕೇಳುತ್ತಿದ್ದರು. ಒಂದು ವೇಳೆ ಬಿರುಮಳೆಯ ಕಾರಣದಿಂದ ಪುಸ್ತಕವೆಲ್ಲ ತೊಯ್ದು ತೊಪ್ಪೆಯಾದರೂ ಅಂಥ ಸಂಕಟವೇನೂ ಯಾರಿಗೂ ಆಗುತ್ತಿರಲಿಲ್ಲ. ಮಕ್ಕಳು ಮನೆ ತಲುಪಿದ ಮರುಗಳಿಗೆಯೇ ರಪರಪನೆ ಸದ್ದು ಮಾಡುತ್ತಾ ಆಲಿಕಲ್ಲು ಬಿದ್ದರೆ, ಅದ್ಯಾವ ಮಾಯದಲ್ಲೋ ಬೀದಿಗೆ ಹೋಗಿ ಐದಾರು ಆಲಿಕಲ್ಲು ತಂದು- ಬೇಗ ‘ಆಆಆಆ ….’ ಅನ್ನು. ಆಲಿಕಲ್ಲು ನುಂಗು. ಇದು ತಿಂದ್ರೆ ಹಲ್ಲುಗಟ್ಟಿಯಾಗ್ತವೆ ಅನ್ನುತ್ತಿದ್ದಳು ಅವ್ವ.
ಹೀಗೆ ಮಳೆ ಬಂದ ಸಂದರ್ಭದಲ್ಲಿ ಒಂಟಿಯಾಗಿ ಹಳ್ಳವನ್ನೂ ದಾಟಬೇಕಾಗಿ ಬಂದರೆ, ತಕ್ಷಣವೇ – ‘ಅಲ್ಲಿ ದೆವ್ವಗಳಿವೆಯಂತೆ’ ಎಂದು ಯಾರೋ, ಎಂದೋ ಹೇಳಿದ್ದ ಮಾತು ನೆನಪಾಗುತ್ತಿತ್ತು. ಮರುಕ್ಷಣವೇ ಆ ಮಳೆಯ ಮಧ್ಯೆಯೂ ಮೈ ಬೆವರುತ್ತಿತ್ತು. ತಕ್ಷಣ ಮನೆದೇವರ ಹೆಸರನ್ನು ಜಪಿಸುತ್ತ ಜೈ ಹನುಮಾನ್, ಜೈರಾಮ್, ಜೈ ಚಾಮುಂಡೇ ಶ್ವರಿ… ಎಂದೆಲ್ಲ ಹೇಳಿಕೊಂಡರೂ ‘ದೆವ್ವ’ದ ಭಯ ಹೋಗುತ್ತಲೇ ಇರಲಿಲ್ಲ!
ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಸ್ಕೂಲಿಂದ ಬಂದು ಮೇಯಲು ಹೋಗಿರುತ್ತಿದ್ದ ಜಾನುವಾರುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋದರೆ, ಆ ವೇಳೆಗೇ ಮಳೆ ಬಂದು ಬಿಡುತ್ತಿತ್ತು. ಮಳೆಗೆ ಬೆದರಿ ಕುರಿ, ಮೇಕೆ, ದನಗಳು ಮನೆಯ ಕಡೆಗೆ ಪೇರಿ ಕಿತ್ತರೆ, ಎಮ್ಮೆಗಳು ಸೀದಾ ಹೋಗಿ ಕೆರೆಯ ನೀರೊಳಗೆ ಮಲಗಿಬಿಡುತ್ತಿದ್ದವು! ಕೆರೆಯ ಈಚೆ ದಡದಿಂದ ಅದೆಷ್ಟೇ ಗದರಿಸಿದರೂ, ಅದೆಷ್ಟೇ ಕಲ್ಲು ಹೊಡೆದರೂ ಅವು ಏಳುತ್ತಲೇ ಇರಲಿಲ್ಲ!
ಇನ್ನು ಕೆಲ ಬಾರಿ ಆ ಭೋರ್ಗರೆವ ಮಳೆಯ ಮಧ್ಯೆ ಕೂಡ ಎಮ್ಮೆಗಳು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಅತೀ ನಿಧಾನವಾಗಿ ನಡೆಯುತ್ತಿದ್ದವು. ಕಡೆಗೂ ಅವುಗಳೊಂದಿಗೆ ಮನೆ ತಲುಪುವ ವೇಳೆಗೆ ಮಳೆಗೆ ರಕ್ಷಣೆ ಕೊಡಲೆಂದು ಬಯ್ದಿರುತ್ತಿದ್ದ ಗೋಣಿ ಚೀಲದಿಂದ ಮಳೆ ನೀರು, ಧಾರೆಯಾಗಿ ಬೀಳುತ್ತಿತ್ತು. ಮಳೆಯಲ್ಲಿ ನೆಂದು ಪಜ್ಜಿಯಾಗಿ ಮನೆ ತಲುಪಿದ ಮಕ್ಕಳನ್ನು ಅಮ್ಮಂದಿರು ಒಳಗೆ ಕರೆದುಕೊಂಡು ಸೆರಗಿನಿಂದ ತಲೆಯೊರಸಿ, ಒಲೆ ಮುಂದೆ ಕೂರಿಸಿ- ‘ಇಲ್ಲೇ ಸ್ವಲ್ಪ ಹೊತ್ತು ಇರು. ಮೈ ಬಿಸಿಯಾಗ್ಲಿ’ ಎನ್ನುತ್ತಿದ್ದರು. ನಂತರ, ಸರಭರನೆ ಹೊರಗೆ ಬಂದು, ಒಮ್ಮೆ ಎರಡೂ ಕೈಗಳಿಂದ ಲಟಿಕೆ ಮುರಿದು- ‘ಅದ್ಯಾವ ದಯ್ಯದ ಮಳೆಯೋ, ಇದರ ಮನೆ ಹಾಳಾಗ (?!) ನನ್ನ ಮಗು ಪೂರ್ತಿ ನೆಂದು ಹೋದ್ರೂ ಬಿಡಲಿಲ್ವಲ್ಲ? ಇದಕ್ಕೇನು ಕೇಡುಗಾಲವೋ ಕಾಣೆ’ ಎಂದು ಬೈಯುತ್ತಿದ್ದರು! ಒಂದು ವೇಳೆ ಮಳೇಲಿ ನೆಂದ ಕಾರಣಕ್ಕೆ ಜ್ವರವೋ, ತಲೆನೋವೋ ಬಂದರೆ- ಹಣೆ, ಕಿವಿಯ ಸಂದು, ಕುತ್ತಿಗೆಯ ಸುತ್ತಲೂ ಅಮೃತಾಂಜನ ತಿಕ್ಕಿ, ಕೌದಿ ಹೊದಿಸಿ ಬೆಚ್ಚಗೆ ಮಲಗಿಸುತ್ತಿದ್ದರು. ಮಧ್ಯೆ ಮಧ್ಯೆ ಹಣೆ ಮುಟ್ಟಿ ಪರೀಕ್ಷಿಸುತ್ತಾ- ಈಗ ಪರವಾಗಿಲ್ಲ. ಜ್ವರ ಬಿಟ್ಟಿದೆ, ತಲೆನೋವೂ ಹೋಗಿದೆ’ ಎಂದು ತಮಗೆ ತಾವೇ ಹೇಳಿಕೊಂಡು ಹಣೆಗೊಂದು ಮುತ್ತಿಡುತ್ತಿದ್ದರು.
ಮಳೆ ಅಂದಾಕ್ಷಣ ಎಲ್ಲರ ಕಣ್ಮುಂದೆಯೂ ‘ಹಾಗೇ ಸುಮ್ಮನೆ’ ಸುಳಿದು ಹೋಗುವ ಇನ್ನೊಂದು ಚಿತ್ರ- ಛತ್ರಿ ಹಿಡಿದು, ಆ ಮಳೆಯಲ್ಲೇ ಸಂಭ್ರಮದಿಂದ ನಡೆದು ಹೋಗುವ ಪ್ರೇಮಿಗಳದು. ರಸ್ತೆಯಲ್ಲಿ ಇಡೀ ಅರ್ಧಗಂಟೆ, ಅವನೊಂದಿಗೆ ಕೈ ಕೈ ಹಿಡಿದು, ಮೈಗೆ ಮೈ ತಾಗಿಸಿಕೊಂಡು, ಯಾವುದೋ ಹಳೆಯ ಹಾಡು ಗುನುಗುತ್ತಾ ಅಥವಾ ಅವನಿಗಷ್ಟೇ ಕೇಳಿಸುವಂತೆ ಪಿಸುಮಾತನಾಡುತ್ತಾ ನಡೆದುಹೋಗಬೇಕು. ಆಗೊಮ್ಮೆ ಈಗೊಮ್ಮೆ ಮೈತಾಗುವ ಅವನ ಬಿಸಿಯುಸಿರಿಂದ ಖುಷಿಯಾಗಬೇಕು. ಅವನ ಕಣ್ಣೊಳಗೆ ಇಣುಕಿ ನೋಡಿ, ಕಣ್ಣು ಹೊಡೆಯಬೇಕು, ಹೇಗಿದ್ರೂ ಸುತ್ತಮುತ್ತ ಯಾರೂ ಇರಲ್ಲವಲ್ಲ? ಅದೇ ನೆಪದಲ್ಲಿ ಅವನಿಗೊಂದು ಮುತ್ತಿಡಬೇಕು ಎಂಬ ಹಪಹಪಿ ಪ್ರೀತಿಯ ಹೊಳಗೆ ಬಿದ್ದ ಅಷ್ಟೂ ಹುಡುಗಿಯರಿಗಿರುತ್ತದೆ. (ಇಂಥದೇ ಭಾವ ಹುಡುಗರಿಗೂ ಇರುತ್ತದೆ!) ಹಾಗೆ, ಅಂದುಕೊಂಡ ಕನಸೆಲ್ಲ ನನಸಾಗುತ್ತಿದ್ದುದು ಮಳೆ ಬಂದ ಸಂದರ್ಭದಲ್ಲೇ!
ಹೀಗೆ ಮಳೆ ಬಂದ ಸಂದರ್ಭದಲ್ಲಿ ಈ ಪ್ರೇಮಿಗಳ ಬಳಿ ಇರುತ್ತಿದ್ದುದು ಒಂದೇ ಛತ್ರಿ. ಒಂದಿಷ್ಟು ಏಕಾಂತ ಬೇಕೆಂದು ಮೊದಲೇ ಬಯಸಿದ್ದ ಇಬ್ಬರೂ ಕೈ ಕೈ ಹಿಡಿದುಕೊಂಡು ರಸ್ತೆಗಿಳಿದು, ತುಂಟಾಟಕ್ಕೆ, ಸಣ್ಣ ಜಗಳಕ್ಕೆ, ರವಷ್ಟು ಪೋಲಿತನಕ್ಕೆ ನಿಂತರೆಂದರೆ, ಅದನ್ನು ಕಂಡು ಮಳೆಯೆಂಬ ಮಳೆಯೂ ಬೆಚ್ಚಗಾಗುತ್ತಿತ್ತು. ಅವರು ಇನ್ನಷ್ಟು ಹೊತ್ತು ಜತೆ ಜತೆಗೇ ನಡೆಯಲಿ ಎಂಬ ಮಹದಾಸೆಯಿಂದ ಹನಿ ಸುರಿಸುತ್ತಿತ್ತು…
* * *
ಹೌದು. ಆಗೆಲ್ಲ ಮಳೆ ಶುರುವಾದರೆ ಸಾಕು, ಮಕ್ಕಳೆಲ್ಲ ರಾಗವಾಗಿ- ‘ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ/ಬಾರೋ ಬಾರೋ ಮಳೆರಾಯ ಬಾಳೆಯ ಗಿಡಕೆ ನೀರಿಲ್ಲ’ ಎಂದು ಹಾಡುತ್ತಿದ್ದರು. ಅಮ್ಮನ ಸೀರೆಯ ಸೆರಗೊಳಗೆ ಬೆಚ್ಚಗೆ ಮಲಗಿಕೊಂಡು ಇಡೀ ರಾತ್ರಿ ಸುರಿಯುತ್ತಿದ್ದ ಮಳೆ ಸದ್ದು ಕೇಳುತ್ತಿದ್ದರು. ಉಹುಂ, ಈಗ ಆ ಸಂಭ್ರಮವಿಲ್ಲ. ಹಳ್ಳಿಗಳ ಶಾಲೆಗಳಲ್ಲಿ ಈಗ ಹೆಚ್ಚಿನ ಮಕ್ಕಳಿಲ್ಲ. ಇರುವ ಮಕ್ಕಳನ್ನು ಕರೆದೊಯ್ಯಲು ಈಗ ಆಟೊಗಳಿವೆ. ಹಾಗಾಗಿ ಮಕ್ಕಳಿಗೆ ಮಳೆಯಲ್ಲಿ ನೆನೆವ ಸೌಭಾಗ್ಯವಿಲ್ಲ. ದೆವ್ವದ ಹೆದರಿಕೆಯಿಲ್ಲ. ಸಿಡಿಲಿನ ಕತೆ ಗೊತ್ತಿಲ್ಲ. ಹಳ್ಳಿಯ ಶಿಕ್ಷಕರೂ ಈಗ ರೈನ್ಕೋಟ್ ಧರಿಸಿ ಬೈಕ್ನಲ್ಲಿ ಬರುವುದರಿಂದ ಅವರು ಚಕ್ಕರ್ ಹೊಡೆವ ಸಂಭವವೂ ಇಲ್ಲ! ಮನೆಯ ಹಿಂಬದಿಯಿದ್ದ ಹೊಂಡ, ಊರಿನಾಚೆಗಿದ್ದ ಕೆರೆ ಏಕಕಾಲಕ್ಕೆ ಕಣ್ಮರೆಯಾಗಿರುವುದರಿಂದ ಕಪ್ಪೆಗಳ ಸಂಗೀತವೂ ಕೇಳಿಸುತ್ತಿಲ್ಲ.
ಇನ್ನು, ಬೆಂಗಳೂರಿನ ಮಳೆಗಾಲದ ಬಗ್ಗೆಯಂತೂ ಹೇಳುವುದೇ ಬೇಡ. ಇಲ್ಲಿ ಮಳೆ ಶುರುವಾದರೆ, ಮಕ್ಕಳಿರಲಿ, ದೊಡ್ಡವರಿಗೂ ಕೂಡ ಹೊರಗೆ ಹೋಗಲು ಭಯ. ಮಳೆ ನೀರಲ್ಲಿ ಸುಮ್ಮನೇ ಕಾಲಿಟ್ಟರೂ ಕೊಚ್ಚಿ ಹೋಗುವ ಭೀತಿ….
ಇದನ್ನೆಲ್ಲ ನೋಡಿದರೆ, ನಾವೆಲ್ಲ ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಜಗ್ಗಿದಂತಾಗುತ್ತದೆ; ಅಲ್ಲವೇ?

ಚಿಕ್ಕಿಕೇಳವ್ವಾ…ಯಂತಾಕಿ ಅಕ್ಕಾ !

May 31, 2009

ashwath

ಚಿತ್ರ: ನಾಗಮಂಡಲ. ಗೀತೆರಚನೆ: ಗೋಪಾಲ ಯಾಜ್ಞಿಕ್.

ಸಂಗೀತ: ಸಿ. ಅಶ್ವತ್ಥ್. ಗಾಯನ: ಶಿವಾನಂದ ಪಾಟೀಲ ಮತ್ತು ಮೇಳ.

 

ಚಿಕ್ಕಿಯಂತಾಕಿ ಅಕ್ಕಾ ಕೇಳವ್ವ

ನಿಟ್ಟುಸಿರ ನಿನಗಿನ್ನ ಸಖಿಯವ್ವಾ

ಬಿಕ್ಕು ಯಾತಕ ಬಾಲಿ? ದುಃಖ ಯಾಕವ್ವಾ?

ಬಿಟ್ಟುಸಿರ ನಿನ್ನ ಮರಿತಾವ…

 

ನೋವ ನಿನ್ನದು ಈ ಜೀವ ನಿನ್ನದು, ಈ

ನೋವ ನಿನ್ನನ್ನ ಇರಿತಾವ

ಇರಿತಾವ ಎದಿಯು ಉರಿತಾವ

ಉರಿತಾವ ಮನಸ ಮುರಿತಾವ

 

ವೇಸಗಾರ ಹೆಣ್ಣಿನಾ ನಗಿಗೆ ದಾಸನಾಗಿ ನಿಲ್ಲತಾನ

ಧ್ಯಾಸ ಇಲ್ಲದ ಮೆಲ್ಲತಾನ… ಚೆಲ್ಲತಾನ.. ಗೆಲ್ಲತಾನ

 

ಮತ್ತ ಮತ್ತ ನೋಡತಾಳ ಅತ್ತ ಇತ್ತ ಓಡತಾಳ

ಹುತ್ತುತ್ತು ಆಡಿಧಾಂಗ ಮತ್ತಷ್ಟು ಕಾಡತಾಳ

ಸುತ್ತಮುತ್ತ ಸುಳೀತಾಳ ಕೈಯ ತಾನ ಎಳೀತಾಳ

ಮುತ್ತಿಮೈಯ ನಿಲ್ಲತಾಳ ಕಣ್ಣಿನಾಗ ಕೊಲ್ಲತಾಳ

 

ಚೆಲ್ಲು ಚೆಲ್ಲು ಮಾತನಾಡಿ ಮುತ್ತರಾಶಿ ಚೆಲ್ಲತಾಳ

ನಲ್ಲನನ್ನ ಕಾಡಿ ಕೂಡಿ ಮಲ್ಲನನ್ನ ಗೆಲ್ಲತಾಳ

ನಗತಾಳ ಕೈಗಿ ಸಿಗತಾಳ, ಸಿಗಧಾಂಗ ತಾ ಸಾಗತಾಳ

ಮೆರಿತಾಳ ಸುಖ ಸುರಿತಾಳ, ಸುರಿತಾಳ ಮತ್ತು ಕರಿತಾಳ

 

ಸುರಿತಾಳ ಮತ್ತ ಕರಿತಾಳ

ಸುರಿತಾಳ ಮತ್ತ ಕರಿತಾಳ

‘ನಾಗಮಂಡಲ’ ಎಂದಾಕ್ಷಣ ಎಲ್ಲರಿಗೂ, ನಟ ಪ್ರಕಾಶ್ ರೈ ಅವರ ಅಬ್ಬಬ್ಬಬ್ಬಬ್ಬಾ ಎಂಬಂಥ ಅದ್ಭುತ ನಟನೆ, ನಟಿ ವಿಜಯಲಕ್ಷ್ಮಿಯ ಆಗಷ್ಟೇ ಅರಳಿದ ಹೂವಂಥ ಚೆಲುವು, ಬಿ. ಜಯಶ್ರೀ ಅವರ ದಿಲ್‌ಪಸಂದ್ ಅಭಿನಯ, ಹಾಡು: ನಾಗಾಭರಣರ ಸಮರ್ಥ ನಿರ್ದೇಶನ, ಜೋಗುಳದಂತಿರುವ ಸಿ. ಅಶ್ವತ್ಥ್ ಅವರ ಸಂಗೀತ ನೆನಪಾಗುತ್ತದೆ. ಈ ಸಂದರ್ಭದಲ್ಲಿಯೇ ಚಿತ್ರದುದ್ದಕ್ಕೂ ಬಿಟ್ಟೂ ಬಿಡದೆ ನೆನಪಾಗುವ ಇನ್ನೊಬ್ಬರೆಂದರೆ ಗೋಪಾಲ ಯಾಜ್ಞಿಕ್ ಅಲಿಯಾಸ್ ಗೋಪಾಲ ವಾಜಪೇಯಿ. ‘ನಾಗಮಂಡಲ’ಕ್ಕೆ ಉತ್ತರ ಕರ್ನಾಟಕ ಸೀಮೆಯ ದೇಸೀ ಸೊಗಡಿನ ಸಂಭಾಷಣೆಯನ್ನು ಮಾತ್ರವಲ್ಲ; ಅದ್ಭುತ ಅದ್ಭುತ ಎಂಬಂಥ ಹದಿನಾರು ಹಾಡುಗಳನ್ನು ಬರೆದವರೂ ವಾಜಪೇಯಿ. ಇನ್ನೂ ವಿವರಿಸಿ ಹೇಳಬೇಕೆಂದರೆ, ‘ನಾಗಮಂಡಲ’ದ ನಿಜವಾದ ಹೀರೊ ಅಂದರೆ- ತೆರೆಮರೆಯಲ್ಲೇ ಉಳಿದುಹೋದ ವಾಜಪೇಯಿಯವರೇ.

ಗೆಳೆಯರ ಬಳಗದಲ್ಲಿ ‘ಗೋವಾ’ ಎಂದೇ ಹೆಸರಾಗಿರುವ ಗೋಪಾಲ ವಾಜಪೇಯಿಯವರು- ‘ನಾಗಮಂಡಲ’ಕ್ಕೆ ಹಾಡು-ಸಂಭಾಷಣೆ ಬರೆದು ತಮ್ಮ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಎಂದು ಬದಲಿಸಿಕೊಂಡದ್ದು ಒಂದು ವಿಚಿತ್ರ, ಅನಿವಾರ್ಯ ಸಂದರ್ಭದಲ್ಲಿ. ‘ನಾಗಮಂಡಲ’ಕ್ಕೆ ಸಂಭಾಷಣೆ-ಹಾಡು ಬರೆಯುವುದಕ್ಕೆ ಒಪ್ಪಿಕೊಂಡರಲ್ಲ? ಆಗ ವಾಜಪೇಯಿಯವರು ‘ಕರ್ಮವೀರ’ ವಾರಪತ್ರಿಕೆಯ ಸಂಪಾದಕರಾಗಿದ್ದರು. ‘ಸಂಪಾದಕ’ ಅನ್ನಿಸಿಕೊಂಡರೂ ಅಂಥ ದೊಡ್ಡ ಸಂಬಳವೇನೂ ಇರಲಿಲ್ಲ. ಅಷ್ಟೇ ಅಲ್ಲ, ನೌಕರಿಯ ಗ್ಯಾರಂಟಿ ಕೂಡ ಇರಲಿಲ್ಲ. ಏಕೆಂದರೆ ಆಗ ‘ಸಂಯುಕ್ತ ಕರ್ನಾಟಕ-ಕರ್ಮವೀರ-ಕಸ್ತೂರಿ’ ಪತ್ರಿಕೆಗಳ ಒಡೆತನದ ಲೋಕಶಿಕ್ಷಣ ಟ್ರಸ್ಟ್‌ಗೆ ಕಾರ್ಯದರ್ಶಿಯಾಗಿದ್ದವರು ಸರ್ವಾಕಾರಿ ಕೆ. ಶಾಮರಾವ್. ತಮ್ಮ ಸಂಸ್ಥೆಯ ನೌಕರನೊಬ್ಬ ಬಂದು ಚಿತ್ರಕ್ಕೆ ಸಂಭಾಷಣೆ-ಹಾಡು ಬರೆಯುತ್ತಿದ್ದಾನೆ ಎಂದು ಸಣ್ಣ ಸುಳಿವು ಸಿಕ್ಕಿದ್ದರೂ, ಅವತ್ತೇ ನೌಕರಿಯಿಂದ ವಜಾ ಮಾಡಿಬಿಡುತ್ತಿದ್ದರು ಶಾಮರಾವ್.

‘ನಾಗಮಂಡಲ’ಕ್ಕೆ ಹಾಡು-ಚಿತ್ರಕಥೆ ಬರೆಯಿರಿ ಎಂದು ಪ್ರೀತಿಯಿಂದ ಗಂಟುಬಿದ್ದ ನಾಗಾಭರಣ-ಅಶ್ವತ್ಥ್‌ಗೆ ಈ ಸಂಗತಿ ವಿವರಿಸಿದ ವಾಜಪೇಯಿ ‘ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಕಟ್ಟುಬಿದ್ದು ಬರೆದುಕೊಡ್ತೇನೆ. ಆದರೆ ಯಾವುದೇ ಕಾರಣಕ್ಕೂ ನನ್ನ ಹೆಸರು ಹಾಕಬಾರದು’ ಎಂದು ಕಂಡೀಷನ್ ಹಾಕಿದರು. ಮುಂದೆ, ಪತ್ರಿಕೆಯವರ ಮುಂದೆ ಸಿನಿಮಾಕ್ಕೆ ದುಡಿದ ತಾಂತ್ರಿಕ ವರ್ಗದವರ ಪರಿಚಯ ಮಾಡಿಕೊಡಬೇಕಾಗಿ ಬಂದಾಗ ಸಾಹಿತ್ಯ-ಸಂಗೀತ ಒದಗಿಸಿದವರ ಹೆಸರು ಹೇಳಲೇಬೇಕಾದ ಸಂದರ್ಭ ಬಂತು. ‘ಏನ್ರೀ ಮಾಡೋದು ಈಗ? ನಿಮ್ಮ ಹೆಸರು ಹೇಳಬೇಕಾಗುತ್ತೆ, ಏನು ಮಾಡೋದು?’ ಅಂದರಂತೆ ಅಶ್ವತ್ಥ್. ‘ಸರ್, ನೀವೇನಾದ್ರೂ ನನ್ನ ಹೆಸರು ಹೇಳಿದರೆ, ನಾಳೆಯೇ ಕೆಲಸ ಹೋಗುತ್ತೆ. ಈಗ ತಿನ್ನುತ್ತಿರುವ ಅನ್ನಕ್ಕೂ ಕಲ್ಲು ಬೀಳುತ್ತೆ’ ಅಂದರಂತೆ ವಾಜಪೇಯಿ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದು ವಾಜಪೇಯಿ-ಅಶ್ವತ್ಥ್ ಇಬ್ಬರ ಸಂಕಟವನ್ನೂ ಅವರಿಂದಲೇ ಕೇಳಿ ತಿಳಿದ ಗಿರೀಶ್ ಕಾರ್ನಾಡರು ಒಂದು ನಿಮಿಷ ಯೋಚಿಸಿ- ‘ವಾಜಪೇಯಿ ಎಂಬುದು ಒಂದು ಯಾಗ. ಅದನ್ನು ಮಾಡಿದ ಯಾಜ್ಞಿಕರೇ ವಾಜಪೇಯಿಗಳು. ಒಂದು ಕೆಲಸ ಮಾಡ್ರೀ ಅಶ್ವತ್ಥ್. ಹಾಡು-ಸಂಭಾಷಣೆ ಬರೆದವರ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಅಂತ ಹೇಳಿಬಿಡಿ’ ಅಂದರಂತೆ. ಪರಿಣಾಮ, ಗೋಪಾಲ ವಾಜಪೇಯಿ ಎಂಬುದು ಗೋಪಾಲ ಯಾಜ್ಞಿಕ್ ಆಗಿಹೋಯಿತು!

* * *

ಈಗ ‘ನಾಗಮಂಡಲ’ದ ಕಥೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಕಥಾನಾಯಕಿಯ ಹೆಸರು ರಾಣಿ. ಆಕೆ-ಮಲ್ಲಿಗೆಯಂಥ ಮೈನ, ಮೃದು ಮನಸ್ಸಿನ ಮಲೆನಾಡಿನ ಹುಡುಗಿ. ಆಕೆ, ಗಿಡ-ಮರ, ನದಿ-ತೊರೆ, ಗಿಳಿ-ಅಳಿಲುಗಳ ಜತೆ ಆಡಿಕೊಂಡು ಹಸಿರ ಸಿರಿಯ ಮಧ್ಯೆ ಬೆಳೆದವಳು. ಆಕೆಯ ನಗೆ, ಮಾತು ಎಲ್ಲವೂ ತಂಪು ತಂಪು.

ಅಂಥ ರಾಣಿಯನ್ನು ಬಯಲುಸೀಮೆಯ ಒರಟ ಅಪ್ಪಣ್ಣ ಮದುವೆಯಾಗುತ್ತಾನೆ. ಮಾತು, ನಡೆ, ವ್ಯವಹಾರ- ಈ ಎಲ್ಲದರಲ್ಲೂ ಒರಟೊರಟು ಎಂಬಂತಿದ್ದ ಅವನಿಗೆ ಮದುವೆಗೆ ಮೊದಲೇ ಅದೇ ಊರಿನ ವೇಶ್ಯೆಯೊಂದಿಗೆ ಸಂಬಂಧವೂ ಇರುತ್ತದೆ.

ಇಂಥ ಅಪ್ಪಣ್ಣನನ್ನು ಮದುವೆಯಾದ ರಾಣಿ, ಮೊದಲ ರಾತ್ರಿಯಂದು ಸಿಂಗರಿಸಿಕೊಂಡು ಕೋಣೆಗೆ ಬಂದರೆ- ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ಮಾತಿನ ವ್ಯಕ್ತಿರೂಪದಂತಿದ್ದ ಅಪ್ಪಣ್ಣ, ರಾಣಿಯ ಮೇಲೆ ಕರಡಿಯಂತೆ ಬೀಳುತ್ತಾನೆ. ಅವಳನ್ನು ಅನಾಮತ್ತಾಗಿ ಎತ್ತಿ ಹಾಸಿಗೆಗೆ ಎಸೆದು, ಆಕ್ರಮಣಕ್ಕೆ ಮುಂದಾಗುತ್ತಾನೆ. ಗಂಡನ ‘ಅತೀ’ ಎಂಬಂಥ ಈ ವರ್ತನೆಯಿಂದ ಬೆದರಿದ ರಾಣಿ, ಅವನಿಂದ ತಪ್ಪಿಸಿಕೊಂಡು ಓಡಿಹೋಗಿ ದೇವರಮನೆ ಸೇರಿ ಬಾಗಿಲು ಹಾಕಿಕೊಳ್ಳುತ್ತಾಳೆ. ಅವಳನ್ನು ಹೆದರಿಸಿ, ಬೆದರಿಸಿ ಬಾಗಿಲು ತೆರೆಯಿಸಲು ಅಪ್ಪಣ್ಣ ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆಲ್ಲಾ ರಾಣಿ ಮಣಿಯುವುದಿಲ್ಲ. ಆಗ- ‘ಹೆಂಗಸಾದ ಅವಳಿಗೇ ಅಷ್ಟು ಹಟವಿರುವಾಗ, ಗಂಡಸಾದ ನಾನೇನು ಕಮ್ಮಿ?’ ಎಂದುಕೊಂಡ ಅಪ್ಪಣ್ಣ, ಸಿಟ್ಟಿನ ಕೈಗೆ ಬುದ್ಧಿಕೊಟ್ಟು- ಇನ್ ಮುಂದೆಲ್ಲಾ, ಹೀಂಗ ಒಬ್ಬಳೇ ನಾಲ್ಕ್ ಗ್ವಾಡೀ ನಡುವೆ ಬಿದ್ಕಂಡಿರು. ಅಂದ್ರಽ ಇಳೀತೈತಿ ನಿನ್ ಸೊಕ್ಕು’ ಎಂದು ಮುಂಬಾಗಿಲಿಗೆ ಬೀಗ ಹಾಕಿಕೊಂಡು, ಸೀದಾ ತಾನು ‘ಇಟ್ಟುಕೊಂಡಿದ್ದವಳ’ ಮನೆಗೆ ಬಂದು ಬಿಡುತ್ತಾನೆ. ಒಂದು ಕಡೆಯಲ್ಲಿ ‘ಕಟ್ಟಿಕೊಂಡಾಕೆ ಬಿಚ್ಚಿಕೊಳ್ಳದೇ, ಬೆದರಿ ಬಚ್ಚಿಟ್ಟುಕೊಂಡು ಬಾಗಿಲು ಮುಚ್ಚಿಕೊಳ್ಳುತ್ತಾಳೆ. ಇನ್ನೊಂದು ಕಡೆಯಲ್ಲಿ ಇಟ್ಟುಕೊಂಡಾಕೆ- ಕದ ತೆರೆದು, ಕರೆದು, ಅಪ್ಪಣ್ಣನೆದುರು ತನ್ನನ್ನೇ ಇಡಿಯಾಗಿ ಬಿಚ್ಚಿಟ್ಟುಕೊಳ್ಳುತ್ತಾಳೆ.

ಈ ಸಂದರ್ಭವನ್ನು ಇನ್ನಿಲ್ಲದಷ್ಟು ಅದ್ಭುತವಾಗಿ ಹೇಳಿರುವುದು ‘ಚಿಕ್ಕಿಯಂತಾಕಿ ಅಕ್ಕಾ ಕೇಳವ್ವಾ…’ ಹಾಡು. ಈ ಹಾಡೊಳಗೆ ರಾಣಿಯ ವಿರಹ, ದುಃಖ-ಒಂಟಿತನ; ಅಪ್ಪಣ್ಣ ಮತ್ತು ಆತನ ‘ರಖಾವು’ ಅನ್ನಿಸಿಕೊಂಡವಳ ಹಸಿಹಸಿ ಬಿಸಿಬಿಸಿ ಎಂಬಂಥ ಸರಸ-ಶೃಂಗಾರದಾಟ ಬಾಪ್‌ರೇಬಾಪ್ ಎನ್ನುವಂತಿದೆ. ‘ಅಶ್ಲೀಲದ ಗಡಿ ದಾಟದೆಯೇ ಎಲ್ಲವನ್ನೂ ಹೇಳುವಂಥ, ಎಲ್ಲರೂ ಕೇಳುವಂಥ ಈ ಹಾಡನ್ನು ನೀವು ಬರೆದದ್ದು ಹೇಗೆ? ಈ ಹಾಡು ಸೃಷ್ಟಿಯಾಗಲು ನಿಮಗೆ ಸೂರ್ತಿ ಒದಗಿಸಿದ ಸಂದರ್ಭವಾದರೂ ಯಾವುದು? ಈ ಹಾಡಿನ ಹಿಂದೆಯೂ ಒಂದು ಕಥೆ ಇದೆಯಾ? ಎಂಬ ಕುತೂಹಲದ ಪ್ರಶ್ನೆಗೆ ವಾಜಪೇಯಿಯವರು ಉತ್ತರಿಸಿದ್ದು ಹೀಗೆ. ಮುಂದಿನ ಮಾತುಗಳನ್ನು ಅವರಿಂದಲೇ ಕೇಳೋಣ. ಓವರ್ ಟು ಗೋಪಾಲ ವಾಜಪೇಯಿ…

*************************

ನಾನಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ನಾಲ್ಕಾರು ಸಹಪಾಠಿ ಹುಡುಗರು ಸೇರಿ ದೇಸಾಯರೊಬ್ಬರ ವಾಡೆಯ ಮೇಲಿನ ಒಂದು ಕೋಣೆಯಲ್ಲಿ ಓದಿಕೊಳ್ಳುತ್ತಿದ್ದೆವು. ಅಲ್ಲಿ, ರಾತ್ರಿ ಇನ್ನೇನು ಕಣ್ಣಿಗೆ ಕಣ್ಣು ಹತ್ತಬೇಕೆಂಬಷ್ಟರಲ್ಲಿ ಧಪ ಧಪ ಬಾಗಿಲು ಬಡಿದ ಸದ್ದು, ಧಡ ಧಡ ಓಡಿ ಹೋದ ಸದ್ದು, ‘ಹೊಂಯ್…’ ಎಂದು ಅಳುವ ಸದ್ದು, ಬಿಕ್ಕುವ ಸದ್ದುಗಳ ಜತೆಗೆ ಗೆಜ್ಜೆ ಕಾಲುಗಳ ಸದ್ದು, ಕೈಬಳೆಗಳ ಸದ್ದು, ನಗುವಿನ ಸದ್ದು ಕೇಳಿಬರತೊಡಗಿ, ಒಂದು ವಿಚಿತ್ರ ಭಯದ ವಾತಾವರಣ ಸೃಷ್ಟಿಯಾಗುತ್ತಿತ್ತು. ನಾವೆಲ್ಲ ಗಾಬರಿಯಾಗಿ ಮುಸುಕೆಳೆದು ಮಲಗಿಬಿಡುತ್ತಿದ್ದೆವು. ಮರುದಿನ ಓಣಿಯ ಹೆಂಗಸರು ಬಾಯಿಗೆ ಸೆರಗು ಅಡ್ಡಹಿಡಿದು, ಏನೇನೋ ಪಿಸಪಿಸ ಮಾತಾಡಿಕೊಂಡು ಕಿಸಕ್ಕನೇ ನಗುತ್ತಿದ್ದುದೂ ಕಣ್ಣಿಗೆ ಬೀಳುತ್ತಿತ್ತು. ‘ದೇಸಾಯರ ಮನ್ಯಾಗ ದೆವ್ವ ಐತಿ, ಹೆಣ್ ದೆವ್ವಾ…’ ಅಂತ ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ವಾಸ್ತವವಾಗಿ ಆ ಅಳು ದೇಸಾಯರ ಹಿರಿಸೊಸೆಯ ಆರ್ತನಾದವಾಗಿರುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಬಹಳಷ್ಟು ಮೆರೆದವರು, ಉರಿದವರು ಆ ದೇಸಾಯರು. ಅಕ್ಷರಶಃ ಹೆಣ್ಣು-ಮಣ್ಣುಗಳನ್ನು ಆಳಿದವರು.

ಅವರಿಗೆ ಇಬ್ಬರು ಗಂಡುಮಕ್ಕಳು. ಆದರೆ ಇಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸ. ದೊಡ್ಡವ ಅಪ್ಪನಂತೆಯೇ ಮೆರೆಯುತ್ತಿದ್ದವ. ಚಿಕ್ಕವ ಸಜ್ಜನಿಕೆಗಳ ಸಾಕಾರ. ಇಬ್ಬರೂ ಮದುವೆಯ ವಯಸ್ಸಿಗೆ ಬಂದಾಗ ಶುರುವಾಯಿತು ಸಮಸ್ಯೆ. ದೊಡ್ಡವನಿಗೆ ಹೆಣ್ಣು ಕೊಡಲು ದೇಸಾಯರ ಸಮ ಅಂತಸ್ತಿನ ಜನ ಹಿಂದೇಟು ಹಾಕತೊಡಗಿದ್ದರು. ಅದಾಗಲೇ ಆತ ಒಬ್ಬಳನ್ನು ಇಟ್ಟುಕೊಂಡಿದ್ದುದೇ ಅದಕ್ಕೆ ಕಾರಣವಾಗಿತ್ತು.

ಅದು ಗೊತ್ತಿದ್ದೂ ದೇಸಾಯರು ಮಗನಿಗೆ ಬುದ್ಧಿ ಹೇಳುವ ಗೋಜಿಗೆ ಹೋಗಿರಲಿಲ್ಲ. ಮಗನಿಗೆ ಬುದ್ಧಿ ಹೇಳುವಷ್ಟು ನೈತಿಕ ಬಲ ಅವರಲ್ಲಿ ಇರಲಿಲ್ಲ. ಅವರೇ ಒಂದು ಕಾಲಕ್ಕೆ ನಡೆದ ಹಾದಿಯಲ್ಲಿ ಈಗ ಮಗ ಸಾಗಿದ್ದನಲ್ಲ?

ಇಂಥ ಸಂದರ್ಭದಲ್ಲಿ-ದೇಸಾಯರು ತಮ್ಮ ಮನೆತನದ ಗುರುಗಳ ಬಳಿ ಸಲಹೆ ಕೇಳಿದರು. ‘ಇಲ್ಲಿ ಹೆಣ್ಣು ಸಿಗದಿದ್ದರೇನು, ಅಲ್ಲೆಲ್ಲಾದ್ರೂ ದಕ್ಷಿಣ ಸೀಮಿಯಿಂದ ಒಂದು ಹೆಣ್ಣು ತಂದು ಗಂಟ್ ಹಾಕ್ರಿ,, ಎಲ್ಲಾ ಸರಿ ಆಗತೈತಿ,’ ಅಂದಿದ್ದರಂತೆ-ಗುರುಗಳು. ಸರಿ, ದೇಸಾಯರು ಹಾಗೇ ಮಾಡಿದರು. ಗುರುಗಳು ಬಂದು ನವದಂಪತಿಯನ್ನು ಹರಸಿದರು. ಆದರೆ ಅವರು ಹೇಳಿದ್ದಂತೆ ‘ಸರಿ ಆಗಬೇಕಾದ್ದು’ ಆಗಲೇ ಇಲ್ಲ. ಮದುವೆಗೆ ಮೊದಲೇ ಬಹಳ ಆಟ ಆಡಿದ್ದ ದೇಸಾಯರ ದೊಡ್ಡಮಗ, ಥೇಟ್ ‘ನಾಗಮಂಡಲ’ದ ಅಪ್ಪಣ್ಣನಂತೆಯೇ ಆಡಿಬಿಟ್ಟಿದ್ದ. ಗಂಡನ ವಿಕೃತಿಗೆ ಹೆದರಿದ ಹುಡುಗಿಗೆ ಆತನ ಇತರೆ ಸಂಬಂಧದ ಬಗ್ಗೆಯೂ ಗೊತ್ತಾಗಿ, ಸಹಕರಿಸದೇ ಉಳಿದಳು. ಇದರಿಂದ ಸಿಟ್ಟಾದ ಆತ ಇಟ್ಟುಕೊಂಡವಳನ್ನು ವಾಡೆಯ ಹಿತ್ತಲಲ್ಲಿದ್ದ ನಾಲ್ಕಂಕಣದ ಮನೆಗೇ ತಂದಿಟ್ಟುಕೊಂಡುಬಿಟ್ಟಿದ್ದ.

ಅಂತೂ, ಅಲ್ಲಿ ಪ್ರತಿ ರಾತ್ರಿ ಶುರುವಾಗುತ್ತಿತ್ತು ದೊಡ್ಡಾಟ!

ಹೀಗಿದ್ದಾಗಲೇ ಅದೊಂದು ರಾತ್ರಿ ದೇಸಾಯರ ಸೊಸೆ, ಮನೆಯೆದುರಿನ ಬಾವಿಗೆ ಬೀಳಲು ಹೊರಟದ್ದು ಕಂಡು ತಡೆದ ಜೋಗತಿ ಎಲ್ಲವ್ವ, ‘ಛೀ ಹುಚ್ಚಿ, ಇಷ್ಟಕ್ಕo ಸಾಯೂದo? ನಿಟ್ಟುಸರಂದ್ರ ಹೆಣಮಗಳಿಗೆ ಹುಟ್ಟೂತ್ಲೇ ಹಚಿಗೊಂಡ ಗೆಳತ್ಯಾರಿದ್ದಂಗ… ಸೈಸಿಕೋ ಹುಡಗೀ… ಆ ತಾಯಿ ಎಲ್ಲವ್ವ ಒಳ್ಳೇದ ಮಾಡತಾಳ,’ ಎಂದು ಹೇಳಿ ತಾನೇ ಆ ಹುಡುಗಿಗೆ ಮಾರ್ಗದರ್ಶಿಯಾಗಿ ನಿಂತಳು.

**************

ಹಾಡು ಬರೆಯಲೆಂದು ಭರಣ-ಅಶ್ವತ್ಥ್ ಜೋಡಿ ಬೆಂಗಳೂರಿನ ಮಿನರ್ವ ಸರ್ಕಲ್‌ನ ಕಾಮತ್ ಹೋಟೆಲಿನಲ್ಲಿ ರೂಮು ಮಾಡಿಕೊಟ್ಟಿದ್ದರು. ರೂಮಲ್ಲಿ ಕೂತು ಹೇಗೆ ಹಾಡು ಬರೆಯಲಿ ಎಂದು ಯೋಚಿಸುತ್ತಿದ್ದವನಿಗೆ-ಈ ಪ್ರಸಂಗ ನೆನಪಾದದ್ದೇ ತಡ, ಜೋಗತಿಯ ಮಾತುಗಳೇ ಹಾಡಿನ ಆರಂಭದ ಸಾಲುಗಳಾದವು. ಆ ಮರಿದೇಸಾಯಿ ಮತ್ತು ಆ ವೇಶ್ಯೆಯ ಆಟಗಳೇ ಹಾಡಿನ ಮುಂದುವರಿಕೆಗೆ ಕಾರಣವಾದವು….

ಇಷ್ಟು ಹೇಳಿ ಕ್ಷಣ ಮೌನವಾದರು ವಾಜಪೇಯಿ.

ಅಲ್ಲಿಗೆ, ಕಾಡುವ ಹಾಡುಗಳ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ ಎಂಬ ಮಾತು ನೂರಾ ಒಂದನೇ ಬಾರಿಗೂ ನಿಜವಾದಂತಾಯಿತು!