ಚಿಕ್ಕಂದಿನಲ್ಲಿ ಅಪ್ಪ-ಅಮ್ಮನೋ; ಅಜ್ಜಿ-ತಾತನೋ ಅಥವಾ ಗೆಳೆಯನೋ ಹೇಳಿದ್ದ ಕೆಲವು ಕತೆಗಳು ಮೇಲಿಂದ ಮೇಲೆ ಬಿಟ್ಟೂ ಬಿಡದೆ ಕಾಡುತ್ತವೆ. ಹೇಳಿಕೇಳಿ ಕಥೆಗಳಲ್ಲವೆ? ಅದೇ ಕಾರಣದಿಂದ ಅವುಗಳಲ್ಲಿ ಸತ್ಯಾಂಶ ಇರುವುದಿಲ್ಲ. ಆದರೆ, ಕತೆ ಹೇಳುವವರು ತಾವು ಪ್ರತ್ಯಕ್ಷ ಕಂಡದ್ದೇನೋ ಎಂಬಂತೆ ಆ ಘಟನೆಯನ್ನು ಬಣ್ಣಿಸಿರುತ್ತಾರೆ. ಪರಿಣಾಮ, ಕಥೆ ಕೇಳಿದವರು ಕೂಡ ಅದೆಷ್ಟೋ ದಿನಗಳವರೆಗೆ ಅದು ನಿಜವೆಂದೇ ನಂಬಿರುತ್ತಾರೆ.
ಅಂಥದೊಂದು ಪ್ರಸಂಗ ಇಲ್ಲಿದೆ ಕೇಳಿ: ಇದು ಚಂದ್ರಶೇಖರ ಆಲೂರು ಅವರ ‘ನಾನು ಒಲಿದಂತೆ ಹಾಡುವೆ’ ಪ್ರಬಂಧ ಸಂಕಲನದಿಂದ ಎತ್ತಿಕೊಂಡದ್ದು. ‘ಮೈಸೂರು ಅರಮನೆಯ ಅಷ್ಟೂ ದೀಪಗಳು ಸಂಜೆಯ ವೇಳೆ, ಏಕಕಾಲಕ್ಕೆ ಝಗ್ಗನೆ ಹೊತ್ತಿಕೊಳ್ಳುತ್ತವಲ್ಲ; ಅದು ಹೇಗೆ? ಎಂಬ ಪ್ರಶ್ನೆಗೆ ಆಲೂರರ ಗೆಳೆಯನೊಬ್ಬ ಹೇಳಿದನಂತೆ: ಮೈಸೂರು ಅರಮನೆಯಲ್ಲಿ ಅದೇನೋ ಒಂದು ವಿಶೇಷ ತಂತ್ರ ಜ್ಞಾನ ಬಳಸಿದ್ದಾರಂತೆ. ಅದೇನಪ್ಪ ಅಂದ್ರೆ ದಿನಾಲೂ ಸಂಜೆ ಮಹಾರಾಜರು ಆಸ್ಥಾನಕ್ಕೆ ಬಂದು-ಸಿಂಹಾಸನದ ಮೇಲೆ ಬಲಗಾಲು ಇಟ್ಟ ತಕ್ಷಣ ಮೈಸೂರಾದಿ ಮೈಸೂರಿನ ದೀಪಗಳೆಲ್ಲ ಝಗ್ಗನೆ ಹೊತ್ತಿಕೊಳ್ತವಂತೆ!’
ಈ ಕಥೆಯನ್ನು ನಿಜವೆಂದೇ ತುಂಬಾ ದಿನಗಳ ಕಾಲ ನಂಬಿದ್ದ ಆಲೂರು ಮತ್ತು ಮಿತ್ರರು, ಆಕಸ್ಮಿಕವಾಗಿ ಮೈಸೂರಿಗೆ ಹೋದಾಗ, ಸಂಜೆಯ ವೇಳೆ ಅವರೆಲ್ಲ ನೋಡನೋಡುತ್ತಿದ್ದಂತೆಯೇ ಅರಮನೆಯ ದೀಪಗಳು ಝಗ್ಗನೆ ಹೊತ್ತಿಕೊಂಡರೆ- ‘ಓಹ್, ಈಗ ಮಹಾರಾಜರು ಸಿಂಹಾಸನದ ಮೇಲೆ ಬಲಗಾಲು ಇಟ್ಟಿದಾರೆ ಅಂತಾಯ್ತು!’ ಅನ್ನುತ್ತಿದ್ದಂತೆ.
***
ಈಗ ಸುಮ್ಮನೇ ಒಮ್ಮೆ ಯೋಚಿಸಿ. ಮಹಾರಾಜರು ಸಿಂಹಾಸನ ಮೆಟ್ಟಿದ ತಕ್ಷಣ ದೀಪಗಳು ಹೊತ್ತಿಕೊಳ್ಳುವುದೇ ನಿಜವಾಗಿದ್ದರೆ, ಆ ದೀಪಗಳನ್ನು ಆರಿಸುವುದಕ್ಕೆ ಕೂಡ ಇನ್ನೊಂದು ಟೆಕ್ನಿಕ್ ಬಳಸಬೇಕಾಗಿತ್ತು! ಜತೆಗೆ ಒಂದು ವೇಳೆ ಅವರಿಗೆ ಜ್ವರ ಗಿರ ಬಂದು ಎರಡು ಮೂರು ದಿನ ಹಾಸಿಗೆ ಹಿಡಿದಿದ್ದರೆ?
ಉಹುಂ, ಆಗ ಇಂಥ ತುಂಟ ಯೋಚನೆಗಳು ಬರುತ್ತಿರಲಿಲ್ಲ. ಕಥೆಗಳು ಕೇಳಿದಷ್ಟೂ ಖುಷಿಕೊಡುತ್ತಿದ್ದವು. ಹೀಗೇ…
ನಿಮ್ಮದೊಂದು ಉತ್ತರ