ಕರಿಹೈದನೆಂಬೋರು ಮಾದೇಶ್ವರಾ…

ಕರಿಹೈದನೆಂಬೋರು ಮಾದೇಶ್ವರಾ…

ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಸಂಗೀತ: ಅಶ್ವತ್ಥ್-ವೈದಿ. ಗಾಯನ: ಬಿ.ವಿ. ಕಾರಂತ.
ಕೋರಸ್: ಜಿ.ಕೆ. ವೆಂಕಟೇಶ್, ಸಿ. ಅಶ್ವತ್ಥ್

ಕರಿಹೈದನೆಂಬೋರು ಮಾದೇಶ್ವರಾ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರಗೇ ಶರಣು ಮಾದೇಶ್ವರ
ಮಾದೇಶ್ವರ ಗೇ ಶರಣು ಮಾದೇಶ್ವರ ||ಪ||

ಕರಿಹೈದನವ್ವನಾ ಹೆಸರೆಂದು ನಿಲ್ಲಲಿ
ಅವನ ಬಳಿ ಎಂದೆಂದು ಒಳ್ಳಿದನು ಮೆಲ್ಲಲಿ
ಅವನ ಹೆತ್ತಾ ಕಾಡು ಎಂದೆಂದೂ ಚಿಗುರಲಿ ||೧||

ಅವನ ಬಳಿ ಎಂದೆಂದು ಮಿಕ್ಕಿರಲಿ ಹೊಗರಲಿ
ಅವನ ಹಾಡಿಗಳಿರಲಿ ಎಂದೆಂದು ಸೊಗದಲಿ
ಅವನ ಬಳಿಗೆಂದೆಂದು ನಗೆಯಿರಲಿ ಮೊಗದಲಿ ||೨||

ಅವನ ಹೊಗಳುವ ಹಾಡು ಎಂದೆಂದು ಹಾಡಲಿ
ಅವನ ಬಳಿ ಎಂದೆಂದು ಹಬ್ಬವನು ಮಾಡಲಿ
ಕರಿಹೈದ ನಪ್ಪಾಜಿ ಮಾದೇಶ್ವರಾ
ಮಾದೇಶ್ವರಗೆ ಶರಣು ಮಾದೇಶ್ವರಾ ||೩||

ಮೊದಲು ನಾಟಕವಾಗಿ ಜನಮನ್ನಣೆಗಳಿಸಿ, ನಂತರ ಚಲನ ಚಿತ್ರವಾಗಿಯೂ ಯಶಸ್ವಿಯಾದ ಸಿನಿಮಾಗಳ ಪಟ್ಟಿ ದೊಡ್ಡದಿದೆ. ‘ವಸಂತಸೇನಾ’ ‘ಭಕ್ತ ಪ್ರಹ್ಲಾದ‘ ‘ಸದಾ ರಮೆ’ ಸಂಪತ್ತಿಗೆ ಸವಾಲ್…’ ಇವೆಲ್ಲ ಮೊದಲು ರಂಗಭೂಮಿಯಲ್ಲಿ ಮಿಂಚಿ ನಂತರವೇ ಬೆಳ್ಳಿ ತೆರೆಯ ಮೇಲೂ ಬೆಳಗಿದ ಸಿನಿಮಾಗಳು. ಈ ಸಾಲಿಗೆ ಸೇರುವ ಇನ್ನೊಂದು ಸಿನಿಮಾ – ಕಾಕನ ಕೋಟೆ.
ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಒಂದು ಸ್ಥಳ ಕಾಕನ ಕೋಟೆ. ಅದು ಮಲೆನಾಡು ಪ್ರದೇಶ. ಅದರ ಸುತ್ತಮುತ್ತಲ ಪ್ರದೇಶವನ್ನು ಕಾಕನಕೋಟೆ ಕಾಡು ಎಂದು ಕರೆಯು ತ್ತಾರೆ. ದಶಕಗಳಿಗೂ ಹಿಂದೆ ಅಲ್ಲಿ ಹೆಚ್ಚಾಗಿ ಕಾಡು ಕುರುಬರೇ ವಾಸಿಸುತ್ತಿದ್ದರಂತೆ. ಈ ಜನ ಆಗ ಹೆಗ್ಗಡದೇವನ ಕೋಟೆಯಲ್ಲಿದ್ದ ಹೆಗ್ಗಡೆಯವರಿಗೆ ಕಪ್ಪ ಕೊಡಬೇಕಿತ್ತಂತೆ. ಅದೊಮ್ಮೆ ಕಪ್ಪ ಸಲ್ಲಿಕೆಯ ವಿಚಾರವಾಗಿಯೇ ಕಾಡು ಕುರುಬರ ನಾಯಕ ಕಾಕ ಎಂಬಾತನಿಗೂ ಹೆಗ್ಗಡೆಯವರಿಗೂ ವೈಮನಸ್ಸು ಉಂಟಾಯಿತಂತೆ. ಆ ಸಂದರ್ಭದಲ್ಲಿ ಮೈಸೂರನ್ನು ಆಳುತ್ತಿದ್ದ ದೊರೆ ರಣರ ಕಂಠೀರವ ನರಸರಾಜ ಒಡೆಯರ್. ಒಂದು ಆಕಸ್ಮಿಕ ಸಂದರ್ಭದಲ್ಲಿ ಮಹಾರಾಜರ ಪ್ರಾಣ ಉಳಿಸುವ ಮೂಲಕ ಅವರ ಒಲವುಗಳಿಸಿದ್ದ ಕಾಕ, ಮಹಾರಾಜರ ಸಹಾಯ ಪಡೆದು ತನ್ನ ಜನರನ್ನು ಕಪ್ಪ ಸಲ್ಲಿಕೆಯ ಸಂಕಟದಿಂದ ಪಾರುಮಾಡಿದನಂತೆ. ಇದಿಷ್ಟೂ ಕಾಕನ ಕೋಟೆ ಚಿತ್ರದ ಕಥಾವಸ್ತು.
‘ಕಾಕನಕೋಟೆ’ ಚಿತ್ರಕ್ಕೆ ಸಂಬಂಸಿದಂತೆ ಕೆಲವು ಸ್ವಾರಸ್ಯಗಳಿವೆ. ಏನೆಂದರೆ, ಇದು ಸಿ.ಆರ್. ಸಿಂಹ ನಿರ್ದೇಶನದ ಮೊದಲ ಚಿತ್ರ. ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಮೊದಲ ಚಿತ್ರವೂ ಇದೇ. ಅಶ್ವತ್ಥ್ ಅವರಿಗೆ ಎಲ್. ವೈದ್ಯನಾಥನ್ ಅವರ ಪರಿಚಯವಾಗಿದ್ದೂ ಈ ಚಿತ್ರ ದಲ್ಲಿಯೇ. (ಮುಂದೆ ಅಶ್ವತ್ಥ್-ವೈದಿ ಜೋಡಿ ತುಂಬ ಜನಪ್ರಿಯವಾ ಯಿತು) ಇವತ್ತು ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಎನ್ನಿಸಿಕೊಂಡಿರುವ ಇಳಯರಾಜಾ, ‘ಕಾಕನಕೋಟೆ’ಯಲ್ಲಿ ಗಿಟಾರ್ ವಾದಕರಾಗಿದ್ದರು. ಅಷ್ಟೇ ಅಲ್ಲ;‘ಕರಿಹೈದನೆಂಬೋರು ಮಾದೇಶ್ವರಾ..’ ಹಾಡನ್ನು ಬಿ.ವಿ. ಕಾರಂತ ಅವರು ಮುಖ್ಯ ಗಾಯಕ ರಾಗಿ ಹಾಡಿದಾಗ ಅವತ್ತಿನ ಮಹಾನ್ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್, ಕೋರ ಸ್‌ಗೆ ದನಿಯಾಗಿದ್ದರು.
‘ಕಾಕನಕೋಟೆ’ಯ ಹಾಡಿನ ಸಂದರ್ಭ, ಅದರ ಧ್ವನಿಮುದ್ರಣ, ತಮಗೆ ಜಿ.ಕೆ. ವೆಂಕಟೇಶ್, ವೈದ್ಯನಾಥನ್, ಇಳಯರಾಜ ಮುಂತಾದ ವರು ಜೊತೆಯಾದ ಕ್ಷಣಗಳನ್ನು ‘ಕಾಕನಕೋಟೆ’ಯ ನಿರ್ದೇಶಕ ಸಿ.ಆರ್. ಸಿಂಹ ವಿವರಿಸಿದ್ದು ಹೀಗೆ:
ಇದು ೧೯೭೪ರ ಮಾತು. ‘ನಾನು, ಲೋಕೇಶ್, ಸಿ. ಅಶ್ವತ್ಥ್, ವೆಂಕಟರಾವ್, ಶ್ರೀನಿವಾಸ ಕಪ್ಪಣ್ಣ ಮುಂತಾದವರು ಸೇರಿ ‘ನಟರಂಗ’ ಎಂಬ ಒಂದು ನಾಟಕ ತಂಡ ಕಟ್ಟಿದೆವು. ಮೊದಲಿಗೆ ನಾವು ಆಯ್ದುಕೊಂಡದ್ದು ಮಾಸ್ತಿಯವರ ಕಾಕನಕೋಟೆ. ಆ ವೇಳೆಗಾಗಲೇ ‘ರವಿ ಕಲಾವಿದರು’ ತಂಡ ಕಾಕನಕೋಟೆಯನ್ನು ರಂಗಕ್ಕೆ ತಂದಿದ್ದರು. ಅವರಿಗಿಂತ ಭಿನ್ನವಾಗಿ ನಾವು ಈ ನಾಟಕ ಪ್ರದರ್ಶಿಸಬೇಕು ಎಂಬುದು ನನ್ನ ಆಸೆ-ಹಠವಾಗಿತ್ತು. ಅದನ್ನೇ ಜತೆಗಾರರಿಗೆ ಹೇಳಿದೆ. ಎಲ್ಲರೂ ಒಪ್ಪಿದರು. ಪರಿಣಾಮ, ನಮ್ಮ ನಾಟಕ ಅಪಾರ ಜನಪ್ರೀತಿ ಪಡೆಯಿತು. ನೋಡನೋಡುತ್ತಲೇ ಐವತ್ತು ಪ್ರದರ್ಶನಗಳು ಆಗಿಹೋದವು. ಅದೊಮ್ಮೆ ನಮ್ಮ ನಾಟಕ ನೋಡಿದ ವಾದಿರಾಜ್-ಜವಾಹರ್-‘ಈ ಕತೆ ಯನ್ನೇ ಸಿನಿಮಾ ಮಾಡಿ. ನಾವು ನಿರ್ಮಾಪಕರಾಗುತ್ತೇವೆ’ ಅಂದರು.
‘ಸರಿ’ ಅಂದೆ. ನಾಟಕ ನಿರ್ದೇಶಿಸಿದ್ದ ಅನುಭವವಿತ್ತಲ್ಲ? ಅದೇ ಧೈರ್ಯದ ಮೇಲೆ ಸಿನಿಮಾ ನಿರ್ದೇಶನಕ್ಕೂ ಮುಂದಾದೆ. ನಾಟಕಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಸಿ. ಅಶ್ವತ್ಥ್, ಸಿನಿಮಾ ಅಂದಾಕ್ಷಣ ಹಿಂದೇಟು ಹಾಕಿದ. ‘ನನ್ನ ಕೈಲಿ ಆಗಲ್ಲಪ್ಪ, ನಾಟಕಕ್ಕೆ ಸಂಗೀತ ನಿರ್ದೇಶನ ಮಾಡುವುದೇ ಬೇರೆ. ಚಿತ್ರ ಸಂಗೀತವೇ ಬೇರೆ. ಸಿನಿಮಾದಲ್ಲಿ ವಾದ್ಯ ಸಂಯೋಜನೆ ಮಾಡಬೇಕು. ಹಿನ್ನೆಲೆ ಸಂಗೀತ ಮಾಡಬೇಕು. ಅವಕ್ಕೆಲ್ಲ ‘ಅರೇಂಜರ್’ ಅಂತ ಇರ್‍ತಾರೆ. ಅಂಥವರು ಯಾರೂ ನನಗೆ ಗೊತ್ತಿಲ್ಲ. ಹಾಗಾಗಿ ಇದು ನನ್ನಿಂದ ಆಗೋದಿಲ್ಲ. ಬೇರೆ ಯಾರಿಂದಲಾದ್ರೂ ಸಂಗೀತ ನಿರ್ದೇಶನ ಮಾಡಿಸಿ’ ಅಂದುಬಿಟ್ಟ.
ಆಗ ನಾನು ಹೇಳಿದೆ: ‘ಅಶ್ವತ್ಥ್, ನಾವು ಕಾಕನಕೋಟೆ ನಾಟಕವನ್ನು ಈಗಾಗಲೇ ಐವತ್ತು ಬಾರಿ ಆಡಿದ್ದಾ ಗಿದೆ. ನಾಟಕಕ್ಕೆ ಅದ್ಭುತ ಸಂಗೀತ ನೀಡಿದವ ನೀನು. ಸಿನಿಮಾಕ್ಕೆ ಆಗೋ ದಿಲ್ಲ ಅಂದ್ರೆ ಹೇಗೆ? ನಿರ್ದೇಶಕನಾಗಿ ನನಗೂ ಇದು ಮೊದಲ ಸಿನಿಮಾ. ನಾನೇ ಹೆದರ್‍ತಾ ಇಲ್ಲ. ಹಾಗಿರುವಾಗ ನೀನ್ಯಾಕೆ ಹಿಂಜರೀತೀಯ? ವಾದ್ಯ ಸಂಯೋಜನೆಗೆ ಅರೇಂಜರ್ ಒಬ್ಬರನ್ನು ಗೊತ್ತು ಮಾಡಿಕೊಂಡರಾಯ್ತು. ಈ ಕಥೆಗೆ ಎಂಥ ಸಂಗೀತ ಬೇಕೆಂದು ನಿನಗೆ ಗೊತ್ತಿದೆ. ಹಾಗಾಗಿ ನೀನೇ ಸಂಗೀತ ನಿರ್ದೇಶನ ಮಾಡು’ ಎಂದು ಧೈರ್ಯ ತುಂಬಿದೆ.
ಈ ಮಾತಿಗೆ ಒಪ್ಪಿದ ಅಶ್ವತ್ಥ್, ನಂತರ ಜಿ.ಕೆ. ವೆಂಕಟೇಶ್ ಅವರಿಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿ-‘ಸಾರ್, ನಮಗೆ ಮ್ಯೂಸಿಕ್ ಅರೇಂಜರ್ ಒಬ್ಬರು ಬೇಕು‘ ಅಂದಿದ್ದಾರೆ. ‘ನೀವು ಮದ್ರಾಸ್‌ಗೆ ಬನ್ನಿ, ವ್ಯವಸ್ಥೆ ಮಾಡೋಣ’ ಅಂದಿದ್ದಾರೆ ವೆಂಕಟೇಶ್. ಅದಕ್ಕೆ ಒಪ್ಪಿದ ಅಶ್ವತ್ಥ್, ಮದ್ರಾಸ್‌ನ ಪ್ರಸಾದ್ ಸ್ಟುಡಿಯೋಕ್ಕೆ ಹೋದಾಗ-ಎಲ್. ವೈದ್ಯ ನಾಥನ್ ಹಾಗೂ ಇಳಯರಾಜರನ್ನು ಪರಿಚಯಿಸಿ, ಇವರಿಬ್ಬರೂ ನನ್ನ ಶಿಷ್ಯರು. ನಿಮಗೆ ಮ್ಯೂಸಿಕ್ ಅರೇಂಜರ್ ಆಗಿ ಸಹಾಯ ಮಾಡ್ತಾರೆ. ಯಾರು ಬೇಕೊ ಆಯ್ದುಕೊಳ್ಳಿ ಅಂದರಂತೆ. ನಂತರ ‘ಕಾಕನಕೋಟೆ’ಯ ಕಥೆ ಕೇಳಿ-ಈ ಕಥೆಗೆ ಅಗತ್ಯವಿರೋದು ರಫ್ ಅನ್ನಿಸುವಂಥ ಸಂಗೀತ. ಅದನ್ನು ಅರೇಂಜ್ ಮಾಡೋಕೆ ವೈದೀನೇ ಸರಿ. ಅವರನ್ನೇ ಇಟ್ಕೊಳ್ಳಿ ಅಂದರಂತೆ. ನಂತರ ಪಕ್ಕದಲ್ಲಿದ್ದ ಇಳಯರಾಜ ಅವರತ್ತ ತಿರುಗಿ-‘ನೀನು ಗಿಟಾರ್ ನುಡಿಸು ರಾಜಾ’ ಅಂದರಂತೆ.
‘ಕರಿ ಹೈದನೆಂಬೋರು ಮಾದೇಶ್ವರಾ…’ ಹಾಡಿನ ಸಂದರ್ಭದ ಚಿತ್ರಣದಲ್ಲಿ ನಾಟಕ ಹಾಗೂ ಸಿನಿಮಾಕ್ಕೆ ಒಂದು ವ್ಯತ್ಯಾಸವಿದೆ. ಭೇಟಿಯ ಸಂದರ್ಭದಲ್ಲಿ ಹೆಗ್ಗಡೆಯವರು ತನ್ನನ್ನು ಬಂಸುತ್ತಾರೆ ಎಂಬ ಸುದ್ದಿ ಕಾಕನಿಗೆ ಸಿಕ್ಕಿರುತ್ತದೆ. ಅದರಿಂದ ಪಾರಾಗಲು ಆತ ಒಂದು ಉಪಾಯ ಹೆಣೆದಿರುತ್ತಾನೆ. ‘ಸತ್ತು ಹೋಗಿರುವ ಒಂದು ಹಾವಿನೊಂದಿಗೆ ನೀನು ಮರದ ಮೇಲೆ ಕೂತಿರು. ಹೆಗ್ಗಡೆಯ ಕಡೆಯವರು ನನ್ನನ್ನು ಬಂಸಲು ಬಂದಾಕ್ಷಣ ಅವರ ಮೇಲೆ ಹಾವನ್ನು ಎಸೆದುಬಿಡು’ ಎಂದು ತನ್ನ ಕಡೆಯ ಹುಡುಗನಿಗೆ ಹೇಳಿಕೊಟ್ಟಿರುತ್ತಾನೆ. ಸಂದರ್ಭ ಹಾಗೆಯೇ ಒದಗಿ ಬರುತ್ತದೆ. ಹಾವು ಕಂಡು ಹೆಗ್ಗಡೆ ಕಡೆಯ ಜನ ಹೆದರಿ ಗಲಿಬಿಲಿಗೊಂಡಾಗ, ಕಾಕ ತಪ್ಪಿಸಿಕೊಳ್ಳುತ್ತಾನೆ. ಇದು ನಾಟಕದಲ್ಲಿರುವ ಸನ್ನಿವೇಶ.
ಸಿನಿಮಾ ಮಾಡುವಾಗ, ಹಾವಿನ ಬದಲಿಗೆ ಕಾಡಾನೆ ಹಿಂಡು ಬಂತು ಎಂದು ಕೂಗಿಸಿದರೆ ಚೆಂದ ಅನ್ನಿಸಿತಂತೆ. ಹಾಗೆಯೇ ಮಾಡಿದೆ. ಈ ದೃಶ್ಯಕ್ಕೂ ಮುಂಚೆ, ತಮ್ಮ ಕಾಡಿನ ದೈವವನ್ನು ಆವಾಹಿಸಿಕೊಂಡು ಕಾಕ ಮೈಮರೆಯಬೇಕು. ಅವನನ್ನು ಕಂಡು ಅವನ ಕಡೆಯ ಜನರೆಲ್ಲಾ ಮಾದೇಶ್ವರಾ ಮಾದೇಶ್ವರಾ ಎಂಬ ಆವೇಶದ, ಭಕ್ತಿಯ, ಪ್ರಾರ್ಥನೆಯಂಥ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಈ ಸಂದರ್ಭದಲ್ಲಿ ಕೇಳಿಬರುವುದೇ ‘ಕರಿಹೈದ ನೆಂಬೋರು ಮಾದೇಶ್ವರಾ…‘ ಹಾಡು.
ಕಾಡಲ್ಲಿರುವ ಜನ ಹಾಡುವ ಗೀತೆ ಅಂದ ಮೇಲೆ ಅದಕ್ಕೆ ಗಡಸುತನ ಬೇಕು. ಅಂಥದೊಂದು ಗಡಸುತನ ಬಿ.ವಿ. ಕಾರಂತ ಅವರ ದನಿಗಿದೆ ಅನ್ನಿಸಿದಾಗ ಅವರಿಂದಲೇ ಹಾಡಿಸಲು ಅಶ್ವತ್ಥ್ ಮುಂದಾದರು. ಹಿಮ್ಮೇಳದ ದನಿಯಾಗಿ ಕೋರಸ್ ಹಾಡುವವರು ಬೇಕು ಅನ್ನಿಸಿದಾಗ, ವೈದ್ಯನಾಥನ್‌ಗೆ ಈ ವಿಷಯ ತಿಳಿಸಲು ಮುಂದಾದರು. ಆಗ ರೀರೆಕಾರ್ಡಿಂಗ್‌ಗೆ ಬಂದಿದ್ದ ಜಿ.ಕೆ. ವೆಂಕಟೇಶ್-‘ನಾನೇ ಕೋರಸ್‌ನಲ್ಲಿ ಹಾಡ್ತೇನೆ’ ಅಂದರಂತೆ. (ಅಂದಿನ ಸಂದರ್ಭದಲ್ಲಿ ದಕ್ಷಿಣ ಭಾರತದ ನಂಬರ್ ಒನ್ ಸಂಗೀತ ನಿರ್ದೇಶಕ ಅನ್ನಿಸಿಕೊಂಡಿದ್ದವರು ಜಿ.ಕೆ. ವೆಂಕಟೇಶ್. ಅಂಥವರು ತಾವೇ ಮುಂದಾಗಿ ಕೋರಸ್ ಹಾಡಿದ್ದು ಅವರ ದೊಡ್ಡತನಕ್ಕೆ ಸಾಕ್ಷಿ.) ಅವರ ಜತೆಗೇ ಅಶ್ವತ್ಥ್ ಕೂಡ ದನಿಗೂಡಿಸಿ ದರು. ಪರಿಣಾಮ, ಮೂವರು ಸಂಗೀತ ನಿರ್ದೇಶಕರು ಒಂದೇ ಹಾಡಿಗೆ ದನಿ ನೀಡಿದಂತಾಯಿತು….’
***
ಈವರೆಗೂ ಓದಿದ್ದು ಸಿಂಹ ಅವರ ಅನುಭವದ ಮಾತು. ‘ಕಾಕನ ಕೋಟೆ’ ಹಾಡಿಗೆ ಸಂಬಂಸಿದ ಇನ್ನೊಂದು ರೋಚಕ ಘಟನೆಯನ್ನು ಅಶ್ವತ್ಥ್ ಅವರೇ ಅದೊಮ್ಮೆ ನೆನಪಿಸಿಕೊಂಡಿದ್ದು ಹೀಗೆ: ಕಾಕನಕೋಟೆಯ ದಟ್ಟ ಅರಣ್ಯದಲ್ಲಿ ‘ಒಂದು ದಿನ ಕರಿಹೈದ ಕಾಡಲ್ಲಿ ಅಲೆದಾನೋ… ಎಂಬ ಇನ್ನೊಂದು ಗೀತೆ ಚಿತ್ರೀಕರಣವಾಗುತ್ತಿತ್ತು, ನಾನು ಹಾಗೂ ನನ್ನ ಮಿತ್ರ ಚಿಂತಾಮಣಿ ಅಲ್ಲಿಗೆ ಹೋಗಿದ್ವಿ. ಸಂಜೆ ಗೆಸ್ಟ್ ಹೌಸ್‌ನಿಂದ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಹೊರಟೆವು. ನಮಗೆ ಚಿತ್ರೀಕರಣದ ಸ್ಥಳ ಗೊತ್ತಿರಲಿಲ್ಲ, ಸಂಜೆ ೭ರ ಸಮಯ, ಮಬ್ಬು ಕತ್ತಲು, ಆ ಜಾಗಕ್ಕೆ ಹೋಗೋಕೆ ನದಿ ದಾಟಬೇಕಿತ್ತು. ಅಲ್ಲಿದ್ದ ತೆಪ್ಪ ನಡೆಸುವ ನಾವಿಕ, ‘ನನಗೆ ಜಾಗ ಗೊತ್ತು ಸಾರ್, ಕರೆದುಕೊಂಡು ಹೋಗ್ತೇನೆ’ ಅಂದ. ನಾವು ತೆಪ್ಪ ಹತ್ತಿದ್ವಿ. ಮಾರ್ಗ ಮಧ್ಯದಲ್ಲಿ ನದಿ ಉಕ್ಕಿ ಬಂತು, ನಮ್ಮ ನಾವಿಕನಿಗೆ ದಾರಿ ತಪ್ಪಿತು. ಅಲ್ಲಿ ಚಿತ್ರೀಕರಣದ ಜಾಗವೂ ತಿಳಿಯಲ್ಲಾ ಅಂತಾನೆ, ವಾಪಸ್ ಹೋಗುವ ದಾರಿಯೂ ತಿಳಿಯುತ್ತಿಲ್ಲಾ ಅಂತಾನೆ. ನಾವು ಇದೇನಪ್ಪಾ ಗತಿ ಅಂತ ಯೋಚಿಸುತ್ತಿರುವಾಗಲೇ ದೂರದಲ್ಲಿ ‘ಡಿಂಕ್ಟಾಟ ಡಿಂಕ್ಟಾ… ಕರಿಹಯ್ದ..’ ಎಂಬ ದನಿ ಕೇಳಿಸಿತು. ಆ ಹಾಡಿನ ಜಾಡು ಹಿಡಿದು ನಾವು ದಡ ಸೇರಿದೆವು. ನಿಜಕ್ಕೂ ಆವತ್ತು ನಮ್ಮನ್ನು ಕಾಪಾಡಿದ್ದು ಆ ಮಹದೇಶ್ವರನೇ.

1 Comment »

  1. 1
    ಶಾಮಲ Says:

    ಶ್ರೀ ಮಣಿಕಾಂತ್ ಅವರೇ,
    ಬಹಳ ಸ್ವಾರಸ್ಯಕರ ವಿಷಯಗಳನ್ನು ಸಂಗ್ರಹಿಸಿ ಹಂಚಿಕೊಂಡಿದ್ದೀರಿ.

    ಹಾಡಿನ ಮೂಲ ಅರಸಿ ಹೋಗುವ ನಿಮ್ಮ ಹವ್ಯಾಸ ಮೆಚ್ಚುವಂಥದು!

    ಧನ್ಯವಾದಗಳು,
    ಶಾಮಲ


RSS Feed for this entry

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: