ಹೇಳಲಾರೆನು ತಾಳಲಾರೆನು…
ಚಿತ್ರ: ಬೆಂಕಿ-ಬಿರುಗಾಳಿ. ಗೀತೆರಚನೆ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್ ಗಾಯನ: ಯೇಸುದಾಸ್, ವಾಣಿ ಜಯರಾಂ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನು
ಮೆಚ್ಚಿ ಪ್ರೀತಿಯ ಕಾಮನೆ ||ಪ||
ಎಂದೋ ನಾನು ನಿನ್ನ ಕಂಡೆ
ಅಂದೇ ಆಸೆ ಮೂಡಿದೆ
ಕೂಗಿ ಕರೆದ ಕಣ್ಣ ಭಾಷೆ
ನನ್ನ ಹೃದಯ ಕದ್ದಿದೆ ||೧||
ಸ್ವರ್ಗಲೋಕ ಇಲ್ಲೇ ತೇಲಿ
ಒಲಿದ ಜೀವ ಹಾಡಿದೆ
ಎಲ್ಲಿ ನೀನೋ ಅಲ್ಲೆ ನಾನು
ನಮ್ಮ ನಲ್ಮೆ ಕೂಡಿದೆ ||೨||
ನೋವು ನಲಿವು ತುಂಬಿಕೊಂಡು
ಪ್ರೇಮ ಪಯಣ ಸಾಗಿದೆ
ಅರಿತ ಮೇಲೆ ಬೆರೆತ ಮೇಲೆ
ರಾಗ ಧಾರೆ ಹರಿದಿದೆ ||೩||
ಸಾವಿರ ಮಾತುಗಳಲ್ಲಿ ಹೇಳಲಾಗದ ವಿಷಯವನ್ನು ಒಂದು ಹಾಡಿನ ಮೂಲಕ ಹೇಳಿಬಿಡಬಹುದು. ಅದು ಹಾಡಿಗಿರುವ ಶಕ್ತಿ. ಈ ಕಾರಣದಿಂದಲೇ ಉತ್ಕಟ ಸನ್ನಿವೇಶದ ಸಂದರ್ಭಗಳಲ್ಲಿ ಹಾಡುಗಳನ್ನು ಬಳಸುವ; ಆ ಮೂಲಕ ಸನ್ನಿವೇಶದ ತೀವ್ರತೆ ಹೆಚ್ಚುವಂತೆ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಪ್ರೀತಿ ಬದುಕಾದಾಗ, ಮನಸು ಮೈಮರೆತಾಗ, ಕನಸು ಕಣ್ಣಾದಾಗ, ಸಂಕಟ ಕೈ ಹಿಡಿದಾಗ, ಸಂಭ್ರಮ ಹೆಚ್ಚಿದಾಗ, ವಿಪರೀತ ಸಿಟ್ಟು ಬಂದಾಗ, ಪರಮಾಪ್ತರು ಕಣ್ಮರೆಯಾದಾಗ, ಪರಮಾತ್ಮ ಪ್ರತ್ಯಕ್ಷವಾದಾಗ… ಇಂಥ ಸೂಕ್ಷ್ಮ ಸಂದರ್ಭಗಳಲ್ಲಿ ಆ ಕ್ಷಣದ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳಿಂದ ಸಾಧ್ಯವೇ ಇಲ್ಲ. ಆದರೆ ಆ ಕೆಲಸವನ್ನು ಹಾಡುಗಳು ಮಾಡಬಲ್ಲವು. ಸಿನಿಮಾ ಅಂದ ಮೇಲೆ ಅದರಲ್ಲಿ ಒಂದೆರಡಾದರೂ ಹಾಡುಗಳು ಇರಲೇಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಕಾರಣದಿಂದಲೇ.
ಸ್ವಾರಸ್ಯ ಕೇಳಿ: ಒಂದು ಸಿನಿಮಾಕ್ಕೆ ಕಥೆ ಹುಡುಕಲು, ಸಂಭಾಷಣೆ ಬರೆಯಲು, ಚಿತ್ರಕಥೆ ಸಿದ್ಧಪಡಿಸಲು, ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಲು ನಿರ್ಮಾಪಕ, ನಿರ್ದೇಶಕರು ಆರೇಳು ತಿಂಗಳ ಕಾಲ ತೆಗೆದುಕೊಳ್ಳುತ್ತಾರೆ. ಆದ್ರೆ ಹಾಡುಗಳ ರಚನೆಗೆ ಮಾತ್ರ ದಮ್ಮಯ್ಯ ಅಂದರೂ ಹತ್ತು-ಹನ್ನೆರಡು ದಿನಗಳಿಗಿಂತ ಹೆಚ್ಚು ಸಮಯ ನೀಡಿದ ಉದಾಹರಣೆಗಳಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಹಾಡಿನ ಸಂದರ್ಭ ವಿಹರಿಸಿ-‘ಈಗ್ಲೇ ಆಗಬೇಕ್’ ಎಂದು ಅಪ್ಪಣೆ ಹೊರಡಿಸಿ ಹಾಡು ಬರೆಸಿಕೊಂಡ ಉದಾಹರಣೆಗಳೂ ಇವೆ.
ಒಂದು ಸಂತೋಷವೆಂದರೆ ನಮ್ಮ ಗೀತರಚನೆಕಾರರು ಇಂಥ ಸವಾಲುಗಳಿಗೆ ಸದಾ ಸ್ಪಂದಿಸುತ್ತಲೇ ಬಂದಿದ್ದಾರೆ. ತಮಗೆ ದೊರಕಿದ ೧೫-೨೦ ನಿಮಿಷಗಳ ಅಲ್ಪಾವಯಲ್ಲಿಯೇ ದಶಕಗಳ ನಂತರವೂ ನೆನಪಲ್ಲಿ ಉಳಿಯುವಂಥ ಗೀತೆಗಳನ್ನು ರಚಿಸಿದ್ದಾರೆ; ರಚಿಸುತ್ತಿದ್ದಾರೆ. ಗೀತೆರಚನೆಕಾರರಿಗೆ ಸಿಗುವ ಅಲ್ಪಾವಯ ಬಗ್ಗೆ ಹಾಡುಗಳ ರಚನೆಗೆ ಸಂಬಂಸಿದಂತೆ ಹಿರಿಯ ಗೀತೆರಚನೆಕಾರರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ:
ಗೀತೆ ರಚನೆಕಾರ ಸದಾ ಕಾಲವೂ ಎಚ್ಚರದಿಂದಿರಬೇಕು. ಹಾಡು ಸೃಷ್ಟಿಗೆ ಆತ ಸದಾ ಸಿದ್ಧನಾಗಿರಬೇಕು. ಗೀತೆರಚನೆ ಎಂಬುದು ಅವಸರದ ಹೆರಿಗೆ. ಅದು ಒಂದು ರೀತಿಯಲ್ಲಿ ಆಶುಭಾಷಣ ಸ್ಪರ್ಧೆ ಇದ್ದ ಹಾಗೆ. ಹಾಡು ಬರೆಯಲು ಸಿಗುವ ಸಮಯ ತುಂಬಾ ಕಡಿಮೆ. ಆ ಅಲ್ಪಾವಯಲ್ಲೇ ಅವನು ಮಿಂಚಬೇಕು. ಪದಗಳೊಂದಿಗೆ ಆಟ ಆಡಬೇಕು. ಹಾಡು ಕಟ್ಟಬೇಕು. ಹೀಗೆ ಹಾಡು ಹೆಣೆಯುವ ನೆಪದಲ್ಲಿ ಆ ಸಂದರ್ಭದ ತೀವ್ರತೆಯನ್ನು ಹೆಚ್ಚಿಸಬೇಕು. ಹಾಡಿನ ಪ್ರತಿ ಸಾಲೂ ಸಂದರ್ಭಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕು.
ಹೆಚ್ಚಿನ ಸಂದರ್ಭಗಳಲ್ಲಿ ಇಂಥದೇ ನಿರ್ದಿಷ್ಟ ಸಂದರ್ಭದಲ್ಲಿ ಹಾಡು ಬರಬೇಕು ಎಂದು ಸಿನಿಮಾ ತಯಾರಿಯ ಹಂತದಲ್ಲಿಯೇ ನಿರ್ಧರಿಸಲಾಗುತ್ತದೆ. ನಂತರ, ಅದನ್ನು ಸಂಗೀತ ನಿರ್ದೇಶಕ ಹಾಗೂ ಗೀತೆರಚನೆಕಾರರಿಗೆ ತಿಳಿಸಲಾಗುತ್ತದೆ. ಆ ನಂತರದಲ್ಲಿ ಮೊದಲು ಟ್ಯೂನ್ ಸಿದ್ಧವಾಗುತ್ತದೆ. ನಂತರ ಆ ಟ್ಯೂನ್ಗೆ ಹೊಂದಿಕೆಯಾಗುವಂತೆ ಚಿತ್ರ ಸಾಹಿತಿಗಳು ಹಾಡು ಬರೆಯುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಮೊದಲೇ ಹಾಡು ಬರೆಸಿ ನಂತರ ಟ್ಯೂನ್ ಮಾಡುವುದೂ ಉಂಟು.
ಕೆಲವೊಂದು ಆಕಸ್ಮಿಕ ಸಂದರ್ಭದಲ್ಲಿ ಮಾತ್ರ, ಈ ತೆರನಾದ ಸಿದ್ಧ ಸೂತ್ರಗಳೆಲ್ಲ ಅರ್ಥ ಕಳೆದುಕೊಳ್ಳುತ್ತವೆ. ಏಕೆಂದರೆ, ಆಗ ನಿರ್ಮಾಪಕ-ನಿರ್ದೇಶಕರು ಒಂದು ಖಚಿತ ಸಂದರ್ಭವನ್ನು ವಿವರಿಸುವುದೇ ಇಲ್ಲ. ಬದಲಾಗಿ-‘ಜನರಲ್ಲಾಗಿ ಬರೆದು ಬಿಡಿ ಸಾರ್’ ಅಂದಿರುತ್ತಾರೆ.( ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯಿರಿ ಅಂದ್ರೆ ಏನರ್ಥ?) ತಮಾಷೆ ಕೇಳಿ: ಇಂಥ ಸಂದರ್ಭದಲ್ಲಿ ಕೂಡ ಗೀತರಚನೆಕಾರ ನಿರಾಕರಣೆಯ ಮಾತಾಡುವಂತಿಲ್ಲ. ಬದಲಿಗೆ, ನನಗಿದು ಸತ್ವಪರೀಕ್ಷೆಯ ಸಂದರ್ಭ ಎಂದುಕೊಂಡೇ ಆತ ಗೀತೆರಚನೆಗೆ ತೊಡಗಬೇಕು. ಅಚಾನಕ್ಕಾಗಿ ಎದುರಾದ ಪರೀಕ್ಷೆಯಲ್ಲಿ ‘ಪಾಸ್’ ಆಗಬೇಕು!
‘ಬೆಂಕಿ-ಬಿರುಗಾಳಿ’ ಚಿತ್ರದ ಸೂಪರ್ ಹಿಟ್ ಗೀತೆ-‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ… ಹೀಗೆ ಸೃಷ್ಟಿಯಾದ ಸಂದರ್ಭವನ್ನು ವಿವರಿಸುವ ಮುನ್ನ ಪೂರಕ ಮಾಹಿತಿಯಂತೆ ಇಷ್ಟೆಲ್ಲ ಹೇಳಬೇಕಾಯಿತು. ವಿಷ್ಣು ವರ್ಧನ್-ಜಯಮಾಲಾ ಅಭಿನಯದಲ್ಲಿ ಚಿತ್ರಿಸಿರುವ ಈ ಹಾಡಿಗೆ ದನಿಯಾಗಿರುವವರು ಯೇಸುದಾಸ್-ವಾಣಿ ಜಯರಾಂ. ಈ ಹಾಡು ಬರೆದವರು-ದೊಡ್ಡರಂಗೇಗೌಡ. ವಿಶೇಷ ಏನೆಂದರೆ ದೊಡ್ಡರಂಗೇಗೌಡರು ಈ ಹಾಡು ಬರೆದದ್ದು ತೀರಾ ತೀರಾ ಆಕಸ್ಮಿಕವಾಗಿ. ಆ ಸಂದರ್ಭವನ್ನು ಗೌಡರು ವಿವರಿಸಿದ್ದು ಹೀಗೆ:
೭೦ ಹಾಗೂ ೮೦ರ ದಶಕದಲ್ಲಿ ಚಿತ್ರರಂಗದ ಸಮಸ್ತ ಚಟುವಟಿಕೆ ನಡೆಯುತ್ತಿದ್ದುದು ಚೆನ್ನೈನಲ್ಲಿ. ಮೂಲತಃ ಕಾಲೇಜು ಉಪನ್ಯಾಸಕನಾಗಿದ್ದವ ನಾನು. ಸಿನಿಮಾಗಳಿಗೆ ಹಾಡು ಬರೆಯಬೇಕಾದ ಸಂದರ್ಭ ಬಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಶನಿವಾರ ಕಾಲೇಜು ಮುಗಿಸಿಕೊಂಡು ಚೆನ್ನೈಗೆ ಹೋಗುತ್ತಿದ್ದೆ. ಭಾನುವಾರ ಬೆಳಗಿನಿಂದ ಸಂಜೆಯೊಳಗೆ ಹಾಡುಗಳನ್ನು ಬರೆದುಕೊಟ್ಟು, ಅವತ್ತೇ ರಾತ್ರಿ ಹೊರಟು ಸೋಮವಾರ ಬೆಳಗಿನ ಜಾವಕ್ಕೇ ಬೆಂಗಳೂರು ತಲುಪಿಕೊಳ್ಳುತ್ತಿದ್ದೆ. ನಂತರ ಕಾಲೇಜಿನ ನಂಟು ಮುಂದುವರಿಸುತ್ತಿದ್ದೆ.
ಹೀಗಿದ್ದಾಗಲೇ ವಿಷ್ಣು ವರ್ಧನ್ ಅಭಿನಯದ ‘ಮಿನುಗಲೆ ಮಿನುಗಲೆ ನಕ್ಷತ್ರ’ ಹೆಸರಿನ ಸಿನಿಮಾಕ್ಕೆ ಹಾಡು ಬರೆಯಲು ಕರೆಬಂತು. ಅದಕ್ಕೆ ಮಾರುತಿ ಶಿವರಾಂ ನಿರ್ದೇಶನ, ಜಿ.ಕೆ. ವೆಂಕಟೇಶ್ ಅವರ ಸಂಗೀತವಿತ್ತು. ಪದ್ಧತಿಯಂತೆ ಒಂದು ಶನಿವಾರ ಚೆನ್ನೈಗೆ ಹೊರಟೆ. ಅಲ್ಲಿನ ಸ್ವಾಗತ್ ಹೋಟೆಲಿನಲ್ಲಿ ಉಳಿದುಕೊಂಡೆ. ಮರುದಿನ ಬೆಳಗ್ಗೆ ಸೀದಾ ಪ್ರಸಾದ್ ಸ್ಟುಡಿಯೋಗೆ ಹೋದೆ. ಜಿ.ಕೆ. ವೆಂಕಟೇಶ್, ಟ್ಯೂನ್ ಕೇಳಿಸಿದರು. ಆ ಸಿನಿಮಾಕ್ಕೆಂದು ಮಧ್ಯಾಹ್ನದೊಳಗೇ ಐದು ಹಾಡುಗಳನ್ನು ಬರೆದು ಮುಗಿಸಿದೆ. (ಮುಂದೆ ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆಯಾಗಲಿಲ್ಲ.) ಬಂದ ಕೆಲಸ ಮುಗೀತು ಎಂಬ ನಿರಾಳ ಭಾವದಲ್ಲಿ ನಾನಿದ್ದಾಗಲೇ ಅಲ್ಲಿಗೆ ಎಚ್.ಡಿ. ಗಂಗರಾಜು ಬಂದರು. ನನ್ನನ್ನು ಕಂಡವರೇ-‘ಮೇಸ್ಟ್ರೆ, ಎವಿಎಂಸಿ ಥಿಯೇಟರ್ಗೆ ಹೋಗೋಣ ಬನ್ನಿ. ಅಲ್ಲಿ ಸ್ವಲ್ಪ ಕೆಲಸ ಇದೆ’ ಎಂದು ಹೊರಡಿಸಿಯೇ ಬಿಟ್ರು. ಅಲ್ಲಿ ಬಂದು ನೋಡಿದರೆ-ಒಂದು ಸಿನಿಮಾದ ಚರ್ಚೆ ನಡೀತಿತ್ತು. ಅದೇ-ಬೆಂಕಿ ಬಿರುಗಾಳಿ. ವಿಷ್ಣು ವರ್ಧನ್, ಜಯಮಾಲಾ, ಶಂಕರ್ನಾಗ್ ತಾರಾಗಣವೆಂದು ನಿರ್ಧರಿಸಿದ್ದಾಗಿತ್ತು. ತಿಪಟೂರು ರಘು ನಿರ್ದೇಶನ, ಎಂ. ರಂಗರಾವ್ ಸಂಗೀತದ ಹೊಣೆ ಹೊತ್ತಿದ್ದರು.
ನಾನು ಎವಿಎಂಸಿ ಥಿಯೇಟರಿಗೆ ಹೋದಾಗ ಅಲ್ಲಿ ಯೇಸುದಾಸ್, ವಾಣಿ ಜಯರಾಂ, ಎಂ. ರಂಗರಾವ್, ತಿಪಟೂರು ರಘು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಇದ್ದರು. ನನ್ನನ್ನು ಕಂಡ ತಿಪಟೂರು ರಘು-‘ನೋಡಿ ಸಾರ್, ನಮ್ಮ ಹೊಸ ಸಿನಿಮಾಕ್ಕೆ ಹಾಡು ಬೇಕು. ಈಗಾಗಲೇ ಟ್ಯೂನ್ ಸಿದ್ಧವಾಗಿದೆ. ಸಂಗೀತ ಕೂಡ ರೆಡಿಯಾಗಿದೆ. ಆದರೆ ಸಾಹಿತ್ಯ ಇಲ್ಲ. ದಯವಿಟ್ಟು ಹಾಡು ಬರೆದುಕೊಡಿ’ ಅಂದ್ರು.
ತೀರಾ ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶ ಕಂಡು ಖುಷಿ, ಅಚ್ಚರಿ ಎರಡೂ ಆಯ್ತು. ಒಂದೆರಡು ನಿಮಿಷ ಯೋಚಿಸಿ-‘ಆಯ್ತು, ಬರೆದುಕೊಡ್ತೀನಿ. ಸಂದರ್ಭ ಏನೂಂತ ಹೇಳಿ’ ಅಂದೆ. ಆಗ ತಿಪಟೂರು ರಘು ಅವರು-‘ಅಯ್ಯೋ, ಈ ಹಾಡಿಗೆ ಅಂಥ ಮಹತ್ವವಾದ ಸಂದರ್ಭವೇನೂ ಇಲ್ಲ, ಜನರಲ್ ಡ್ಯೂಯೆಟ್ ಸಾಂಗ್ ಅಷ್ಟೇ. ಜನರಲ್ಲಾಗಿ ಯೋಚಿಸಿ ಬರೆದುಬಿಡಿ ಸಾರ್’ ಅಂದ್ರು.
ಇಂಥದೇ ಎಂದು ಸಂದರ್ಭ ಇದ್ದಾಗ, ಅದನ್ನು ಒಂದು ರೀತಿಯಲ್ಲಿ ಕಲ್ಪಿಸಿಕೊಂಡು ನಾಯಕ-ನಾಯಕಿಯರ ಮಾತುಗಳು ಹೀಗೇ ಇರಬಹುದೇನೋ ಎಂದು ಅಂದಾಜು ಮಾಡಿಕೊಂಡು ಬರೆಯುವುದು ಸುಲಭ. ಆದರೆ, ಜನರಲ್ಲಾಗಿ ಯೋಚಿಸಿ ಡ್ಯೂಯೆಟ್ ಸಾಂಗ್ ಬರೆಯುವುದು ಹೇಗೆ? ನಾನು ಈ ತಾಕಲಾಟದ ಮಧ್ಯೆಯೇ ಬರೆಯಲು ಕುಳಿತಿದ್ದೆ. ಸುತ್ತಮುತ್ತ ಚಿತ್ರ ತಂಡದ ಬಾಕಿ ಜನರಿದ್ದರು. ಮೊದಲ ಐದಾರು ನಿಮಿಷದಲ್ಲಿ ಏನೆಂದರೆ ಏನೂ ಹೊಳೆಯಲಿಲ್ಲ. ಅದೇ ಬೇಸರದಲ್ಲಿ ಒಮ್ಮೆ ತಲೆ ಎತ್ತಿದೆ. ನನ್ನನ್ನು ನೋಡಿದವರು-‘ಆಯ್ತಾ ಸಾರ್?’ ಎಂದು ಕೇಳುವುದೆ?
ನನ್ನ ಸಂಕಟ ನನಗೆ. ಇವರಿಗೆ ತಮಾಷೆ ಅಂದುಕೊಂಡೆ. ನಂತರದ ಒಂದೆರಡು ನಿಮಿಷದಲ್ಲಿ -‘ಸಾರ್, ಏನಾದ್ರೂ ಹೊಳೀತಾ?’ ಎಂಬ ಪ್ರಶ್ನೆಯನ್ನು ಎಂ. ರಂಗರಾವ್ ಮತ್ತು ತಿಪಟೂರು ರಘು ಕೂಡ ಕೇಳಿದರು. ನನ್ನ ಮನಸ್ಸಿನ ಸಂಕಟವನ್ನು ಯಾರಿಗೂ ಹೇಳುವಂತಿಲ್ಲವಲ್ಲ ಅನಿಸ್ತು. ಇಂಥದೊಂದು ಯೋಚನೆ ಬಂದಾಗಲೇ ಮಿಂಚು ಹೊಳೆದಂತಾಯ್ತು. ಹೆಚ್ಚಿನ ಸಿನಿಮಾಗಳಲ್ಲಿ ಪ್ರೀತಿಯಲ್ಲಿ ಮುಳುಗಿದ ನಾಯಕ-ನಾಯಕಿ ಕೂಡ ಪರಸ್ಪರ ಭಾವನೆಗಳನ್ನು ಹೇಳಲಾರದ, ಸುಮ್ಮನಿರಲೂ ಆಗದಂಥ ಮನಸ್ಥಿತಿಯಲ್ಲಿ ಬದುಕ್ತಾ ಇರ್ತಾರಲ್ವ? ಹಾಗಾಗಿ ‘ಹೇಳಲಾರೆನು ತಾಳಲಾರೆನು ನನ್ನ ಮನಸಿನ ಭಾವನೆ’ ಎಂಬುದನ್ನೇ ಹಾಡಿನ ಮೊದಲು ಸಾಲು ಮಾಡಿದರೆ ಹೇಗೆ ಅನ್ನಿಸ್ತು. ಈ ಸಾಲು ಎಂ. ರಂಗರಾವ್ ಅವರು ಕೇಳಿಸಿದ್ದ ಟ್ಯೂನ್ಗೆ ತುಂಬಾ ಚನ್ನಾಗಿ ಹೊಂದಿಕೊಳ್ತಾ ಇತ್ತು. ಹೀಗೆ ಯೋಚಿಸುತ್ತಿದ್ದಾಗಲೇ ಸರಸರನೆ ಪಲ್ಲವಿಯ ಸಾಲುಗಳು ಹೊಳೆದುಬಿಟ್ಟವು.
ಸಂಕೋಚದಿಂದಲೇ ಅವುಗಳನ್ನು ರಂಗರಾವ್ ಅವರಿಗೆ ತೋರಿಸಿದೆ. ರಾಯರು ‘ಅದ್ಭುತ’ ಎಂದು ಉದ್ಗರಿಸಿದರು. ‘ಮುಂದುವರಿಸಿ ಸಾರ್’ ಎಂದು ಹುರಿದುಂಬಿಸಿದರು. ಆ ನಂತರದಲ್ಲಿ ಎಲ್ಲವೂ ಸರಾಗ, ಸರಾಗ. ಮುಂದಿನ ಹತ್ತೇ ನಿಮಿಷದ ಅವಯಲ್ಲಿ ಪ್ರೇಮಿಗಳ ಮನದ ಮಾತಾಗುವಂಥ ಒಂದು ಯುಗಳ ಗೀತೆ ಸೃಷ್ಟಿಯಾಗಿ ಹೋಯ್ತು. ನಿಜ ಹೇಳಬೇಕೆಂದರೆ, ಅವತ್ತು ಚೆನ್ನೈನಲ್ಲಿ ಬೇರೆ ಯಾವ ಗೀತ ರಚನೆಕಾರರೂ ಸಿಗಲಿಲ್ಲ ಎಂಬ ಕಾರಣಕ್ಕೆ ನನ್ನಿಂದ ಹಾಡು ಬರೆಸಿದ್ದರು! ಆ ಕ್ಷಣದ ಸತ್ವಪರೀಕ್ಷೆಯಲ್ಲಿ ನಾನು ಗೆದ್ದಿದ್ದೆ. ಮುಂದೆ ಆ ಗೀತೆಯ ಪ್ರತಿ ಅಕ್ಷರನ್ನೂ ಅಕ್ಕರೆಯಿಂದ ಹಾಡಿದ ಯೇಸುದಾಸ್-ವಾಣಿಜಯರಾಂ, ಅದನ್ನೊಂದು ಸ್ಮರಣೀಯ ಯುಗಳ ಗೀತೆಯನ್ನಾಗಿ ಮಾಡಿಬಿಟ್ಟರು….’
ಇಪ್ಪತ್ತಾರು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯನ್ನು ನೆನಪಿಸಿಕೊಂಡು ಮತ್ತೆ ಮತ್ತೆ ಖುಷಿ ಪಡುತ್ತಲೇ ಹಾಡಿನ ಕತೆಗೆ ಮಂಗಳ ಹಾಡಿದರು ದೊಡ್ಡರಂಗೇಗೌಡ.
***
ಅನಿರೀಕ್ಷಿತವಾಗಿ ಹಾಡು ಬರೆಯಬೇಕಾಗಿ ಬಂದಾಗ ಕವಿಯೊಬ್ಬ ಅನುಭವಿಸುವ ತಳಮಳ-ಚಿತ್ರದಲ್ಲಿ ಒಂದು ಯುಗಳ ಗೀತೆಗೆ ವಸ್ತುವಾದದ್ದು ವಿಚಿತ್ರ ಮತ್ತು ಸ್ವಾರಸ್ಯ. ಅಲ್ಲವೇ?
ತುಂಬಾ ಚೆನ್ನಾಗಿದೆ ಆದರೆ ನನಗೆ ಒಬ್ಬ ಹುಡುಗ ಹುಡುಗಿಗೆ ಬರೆದಿರುವ ಪತ್ರಗಳು ಬೇಕು