ಪ್ರೇಮಗೀತೆಯೊಂದು ದಿಢೀರನೆ ಭಕ್ತಿಗೀತೆಯಾದ ಚಮತ್ಕಾರ!

ನಿನ್ನ ಸವಿನೆನಪೆ ಮನದಲ್ಲಿ…

ಚಿತ್ರ: ಅನುರಾಗ ಬಂಧನ. ಗೀತರಚನೆ: ವಿಜಯನಾರಸಿಂಹ.
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್. ಜಾನಕಿ.

ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ
ಪ್ರೀತಿಯ ಸವಿಮಾತೆ ಉಪಾಸನೆ
ನಿನ್ನ ಸಂಗದಲ್ಲಿ ಅಂಗಾಂಗ ಮಿಂಚಾಯಿತು
ಶೃಂಗಾರ ರಸಧಾರೆ ಉಸಿರಾಯಿತು ||ಪ||

ಹೂ ಬಾಣ ಹೂಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು
ಉಸಿರಾಟ ನೀನು ಬಿಸಿ ಮಿಡುಕಾಟ ನಾನು
ನಿನ್ನಲಿ ನಾ ಮರುಳಾದೆನು
ನೀನೆ ಈ ಬಾಳ ಬಾನು ||೧||

ಕಣ್ಣಲ್ಲೆ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಹೊನ್ನುಡಿ
ಮನತುಂಬ ನೀನು ನಿನ್ನ ಪ್ರತಿಬಿಂಬ ನಾನು
ನಿನ್ನ ವಿನಾ ನಾ ಬಾಳೆನೂ
ಇನ್ನೂ ದಯೆ ಬಾರದೇನು
ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ
ಬಾಳಲಿ ಬೆಳಕಾಗು ಮಹೇಶ್ವರ
ನಮ್ಮ ಕೈಹಿಡಿದು ಕಾಪಾಡು ಕರುಣಾಕರ
ನಿನ್ನಲ್ಲಿ ಶರಣಾದೆ ಶಿವಶಂಕರ
ಶರಣು ಶಿವಶಂಕರ ಶರಣು ಅಭಯಂಕರ
ಶರಣು ಶಿವಶಂಕರ ಶರಣು ಅಭಯಂಕರ ||೨||

ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಗೀತೆಗಳಲ್ಲಿ ‘ನಿನ್ನ ಸವಿನೆನಪೆ ಮನದಲ್ಲಿ ಆರಾಧನೆ’ ಗೀತೆಯೂ ಒಂದು. ‘ಅನುರಾಗ ಬಂಧನ’ ಚಿತ್ರದ ಈ ಹಾಡನ್ನು ಕಾನಡಾ ರಾಗದಲ್ಲಿ ಸಂಯೋಜಿಸಲಾಗಿದೆ. ಪ್ರೇಮದ ವರ್ಣನೆಯೊಂದಿಗೆ ಶುರುವಾಗಿ, ಭಕ್ತಿಯ ಪರವಶತೆಯೊಂದಿಗೆ ಮುಕ್ತಾಯವಾಗುವುದು ಈ ಹಾಡಿನ ವೈಶಿಷ್ಟ್ಯ. ವಿಜಯನಾರಸಿಂಹ ಅವರ ಸಾಹಿತ್ಯ, ರಾಜನ್-ನಾಗೇಂದ್ರ ಅವರ ಸಂಗೀತ ಮತ್ತು ಎಸ್. ಜಾನಕಿ ಅವರ ಇಂಪಿಂಪು ದನಿ- ಈ ಹಾಡನ್ನು ಸ್ಮರ ಣೀಯವಾಗಿಸಿವೆ. ೧೯೭೮ರಿಂದ ೧೯೭೯ರ ಅವಯಲ್ಲಿ ಆಕಾಶವಾಣಿಯಿಂದ ಮೆಚ್ಚಿನ ಗೀತೆಯಾಗಿ ಅತಿ ಹೆಚ್ಚು ಬಾರಿ ಪ್ರಸಾರವಾದದ್ದು ಈ ಗೀತೆಯ ಹೆಗ್ಗಳಿಕೆ.
ಗೀತಪ್ರಿಯ ನಿರ್ದೇಶನದ ‘ಅನುರಾಗ ಬಂಧನ’ ದಲ್ಲಿ ಬಸಂತ್‌ಕುಮಾರ್ ಪಾಟೀಲ್-ಆರತಿ ತಾರಾ ಜೋಡಿಯಿತ್ತು. ಜತೆಗೆ ಕಲ್ಯಾಣ್‌ಕುಮಾರ್-ಕಲ್ಪನಾ, ಆದವಾನಿ ಲಕ್ಷ್ಮೀದೇವಿ, ಸಂಪತ್, ದ್ವಾರಕೀಶ್, ನರಸಿಂಹರಾಜು, ಅಂಬರೀಷ್, ದಿನೇಶ್, ಮಂಜುಳಾ ಮುಂತಾದವರ ತಾರಾಗಣವೂ ಇತ್ತು. ಆಕಸ್ಮಿಕವಾಗಿ ಒಬ್ಬನನ್ನು ಕೊಲೆ ಮಾಡುವ ನಾಯಕ ನಂತರ ತಪ್ಪಿಗಾಗಿ ಪಶ್ಚಾತ್ತಾಪಪಟ್ಟು ಬದಲಾಗುವುದು ಹಾಗೂ ಅವನ ಸುತ್ತ ಹೆಣೆದುಕೊಳ್ಳುವ ಸಂಬಂಧಗಳ ತಾಕಲಾಟ ಈ ಚಿತ್ರದ ಕಥಾವಸ್ತು.
ಜೈಲುಪಾಲಾಗಿದ್ದ ವ್ಯಕ್ತಿ ‘ಬದಲಾಗುವ’ ಕಥಾ ಹಂದರ ಇತ್ತಲ್ಲ? ಅದೇ ಕಾರಣದಿಂದ ‘ಬದಲಾಗುವ’ ಹಾದಿಯಲ್ಲಿದ್ದ ಕೈದಿಯೊಬ್ಬನಿಂದಲೇ ಚಿತ್ರಕ್ಕೆ ಕ್ಯಾಮೆರಾ ಆನ್ ಮಾಡಿಸಿದ್ದು, ಸೆಂಟ್ರಲ್ ಜೈಲ್‌ನ ಜೈಲರ್‌ರಿಂದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿಸಿದ್ದು ಈ ಚಿತ್ರದ ಮತ್ತೊಂದು ವಿಶೇಷ. ಮುಖ್ಯಮಂತ್ರಿ ದೇವರಾಜ ಅರಸು, ಸಚಿವರಾಗಿದ್ದ ಬಂಗಾರಪ್ಪ, ಎಸ್.ಎಂ. ಯಾಹ್ಯಾ, ಪೊಲೀಸ್ ಆಯುಕ್ತ ವೀರಭದ್ರಪ್ಪ… ಹೀಗೆ ವಿಐಪಿ ಅನ್ನಿಸಿಕೊಂಡವರೆಲ್ಲ ಬಂದು ಈ ಸಿನಿಮಾ ನೋಡಿದರು, ಮೆಚ್ಚಿಕೊಂಡರು. ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ ಎಂಬ ಕಾರಣ ನೀಡಿ ಎಂಟು ವಾರ ಗಳವರೆಗೆ ತೆರಿಗೆ ವಿನಾಯಿತಿಯ ಸೌಲಭ್ಯವನ್ನೂ ಸರಕಾರ ನೀಡಿತು. ಅಷ್ಟೇ ಅಲ್ಲ, ಸೆಂಟ್ರಲ್ ಜೈಲ್‌ನಲ್ಲಿ ಕೈದಿಗಳಿಗಾಗಿಯೇ ವಿಶೇಷ ಪ್ರದರ್ಶನವನ್ನೂ ಏರ್ಪ ಡಿಸಲಾಗಿತ್ತು!
ಹಿಂದಿಯ ‘ದಾಗ್’ ಚಿತ್ರದಿಂದ ಸೂರ್ತಿ ಪಡೆದು ತಯಾರಾದ ಚಿತ್ರ ‘ಅನುರಾಗ ಬಂಧನ’. ಆದರೆ ಇಲ್ಲಿ ಆ ಚಿತ್ರದಿಂದ ಯಾವ ಸನ್ನಿವೇಶವನ್ನೂ ಹಾಗ್‌ಹಾಗೇ ಎತ್ತಿಕೊಳ್ಳಲಿಲ್ಲ. ಬದಲಿಗೆ, ಈ ನೆಲದ್ದೇ ಆದ ಕಥೆ ಹೆಣೆಯಲಾಯಿತು. ಅದಕ್ಕಾಗಿ ನಿರ್ದೇಶಕ ಗೀತಪ್ರಿಯ, ಗೀತರಚನೆಕಾರ ವಿಜಯನಾರಸಿಂಹ, ಹಂಚಿಕೆದಾರ ಕೆ.ವಿ. ಗುಪ್ತಾ, ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲ್ ಚರ್ಚೆಗೆ ಕೂತರು. ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸಲು ಆರು ತಿಂಗಳು ಹಿಡಿಯಿತು. ಈ ಕೆಲಸವೆಲ್ಲ ನಡೆದದ್ದು ಬಸಂತ್ ಅವರ ಮನೆ ಕಂ ನಿರ್ಮಾಣ ಕಚೇರಿಯಲ್ಲಿ.
ಹಾಡಿನ ಸಂದರ್ಭ ಹೀಗೆ: ನಾಯಕ ಕಾಲೇಜು ವಿದ್ಯಾರ್ಥಿ. ಹೀರೊನ ತಂಗಿ ಕೂಡ ವಿದ್ಯಾರ್ಥಿನಿ. ಒಬ್ಬ ಹುಡುಗ ಅವಳ ಹಿಂದೆ ಬೀಳುತ್ತಾನೆ. ಅವಳನ್ನು ರೇಗಿಸುತ್ತಾನೆ. ಬಗೆಬಗೆಯಲ್ಲಿ ಕಾಡುತ್ತಾನೆ. ತಂಗಿ ಯಿಂದ ಈ ವಿಷಯ ತಿಳಿದ ಹೀರೊ ‘ವಿಚಾರಿಸಲು ಹೋದರೆ’ ಆ ಪುಂಡು ಹುಡುಗ ಕುಸ್ತಿಗೇ ನಿಲ್ಲುತ್ತಾನೆ. ಹೀಗೆ ಅನಿರೀಕ್ಷಿತವಾಗಿ ಶುರುವಾದ ಹೊಡೆದಾಟ ಆ ಪುಂಡನ ಕೊಲೆಯಲ್ಲಿ ಮುಗಿಯುತ್ತದೆ. ನಾಯಕನಿಗೆ ಜೈಲುಶಿಕ್ಷೆಯಾಗುತ್ತದೆ.
ಮುಂದೆ, ಜೈಲಿಂದ ಬಿಡುಗಡೆಯಾಗಿ ಬರುವ ದಾರಿಯಲ್ಲಿ, ವೃದ್ಧೆಯೊಬ್ಬಳು ನೀರಲ್ಲಿ ಕೊಚ್ಚಿಹೋಗುತ್ತಿ ರುತ್ತಾಳೆ. ನಾಯಕ, ತಕ್ಷಣವೇ ನೀರಿಗೆ ಧುಮುಕಿ ಆಕೆಯನ್ನು ಕಾಪಾಡುತ್ತಾನೆ. ಕೃತಜ್ಞತೆ ಹೇಳುವ ನೆಪ ದಲ್ಲಿ ಈ ಅಜ್ಜಿ ನಾಯಕನನ್ನು ಮನೆಗೆ ಕರೆದೊ ಯ್ಯುತ್ತಾಳೆ. ಮಗಳಿಗೆ(ಅವಳೇ ಕಥಾನಾಯಕಿ) ‘ಅವನನ್ನು’ ಪರಿಚಯಿಸುತ್ತಾಳೆ. ‘ಅಮ್ಮನ’ ಜೀವ ಉಳಿಸಿದ ಎಂಬ ಕಾರಣಕ್ಕೆ ಮಗಳಿಗೆ ಇವನ ಮೇಲೆ ಮೋಹ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ, ಇಬ್ಬರಲ್ಲೂ ಪ್ರೀತಿ ಅರಳುತ್ತದೆ. ಅದೊಂದು ರಾತ್ರಿ, ನಾಯಕನನ್ನು, ಅವನ ಮೇಲಿರುವ ಪ್ರೀತಿಯನ್ನು ನೆನಪಿಸಿಕೊಂಡ ನಾಯಕಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’ ಎಂದು ಹಾಡಲು ಶುರುಮಾಡುತ್ತಾಳೆ. ಈ ಸಂದರ್ಭದಲ್ಲಿ ಮಲಗಿದ್ದ ತಾಯಿ, ಮಗಳ ಹಾಡು ಕೇಳಿ ಎದ್ದು ಬರುತ್ತಾಳೆ. ಅಮ್ಮನನ್ನು ಕಂಡು, ಗಾಬರಿ ಯಾಗಿ ನಾಯಕಿ, ತನ್ನ ಪ್ರೀತಿಯ ಕಥೆ ಗೊತ್ತಾಗ ದಿರಲಿ ಎಂಬ ಕಾರಣಕ್ಕೆ, ತಕ್ಷಣವೇ ದೇವರ ಫೋಟೊ ಕಡೆ ತಿರುಗಿ ಕೈಜೋಡಿಸುವ ನಾಯಕಿ- ‘ಸ್ವಾಮಿ ಶಂಕರನೆ ಶಶಿಧರನೆ ಗಂಗಾಧರ’ ಎಂದು ಹಾಡಿಬಿಡುತ್ತಾಳೆ. ಪರಿ ಣಾಮ, ಅದುವರೆಗೂ ಪ್ರೇಮಗೀತೆಯಾಗಿದ್ದ ಹಾಡು, ದಿಢೀರನೆ ಭಕ್ತಿಗೀತೆಯಾಗುತ್ತದೆ; ಮಾಯೆಯಂತೆ!
ಒಂದು ಹಾಡು ಪ್ರೇಮದಿಂದ ಭಕ್ತಿಗೆ ದಿಢೀರ್ ಬದಲಾಗುವಂಥ ‘ಚಮತ್ಕಾರ’ ಮಾಡಿದವರು ವಿಜಯನಾರಸಿಂಹ. ಚಿತ್ರಕಥೆ ಚರ್ಚೆಯ ವೇಳೆಯಲ್ಲೇ ನಾಯಕನ ಹೆಸರು ‘ಶಂಕರ’ ಎಂಬುದು ಅವರಿಗೆ ತಿಳಿದಿತ್ತು. ಈ ಹಾಡಿನ ಸಂದರ್ಭದಲ್ಲಿ ನಾಯಕಿ ಸಂತೋಷದಿಂದ ಗಾಬರಿಗೆ,ನಾಯಕ ಗಾಬರಿಯಿಂದ ಗೊಂದಲಕ್ಕೆ, ನಾಯಕಿಯ ತಾಯಿ ಭಕ್ತಿಭಾವದ ಮೋದಕ್ಕೆ ಒಳಗಾಗುವಂಥ ಸನ್ನಿವೇಶ ಸೃಷ್ಟಿಯಾಗಬೇಕು ಎಂದಿದ್ದರಂತೆ ನಿರ್ದೇಶಕ ಗೀತಪ್ರಿಯ. ಅದನ್ನೆಲ್ಲ ಮನ ದಲ್ಲಿಟ್ಟುಕೊಂಡು ಯಾವುದೋ ಧ್ಯಾನದಲ್ಲಿ ಶಾರದೆ ಯನ್ನು ಆವಾಹಿಸಿಕೊಂಡು ಹಾಡು ಬರೆದೇಬಿಟ್ಟರು ವಿಜಯನಾರಸಿಂಹ. ಮುಂದೆ ಈ ಹಾಡು, ಪ್ರೀತಿಸುವ ಎಲ್ಲ ಹುಡುಗಿಯರ ಕೊರಳ ಗೀತೆಯಾಯಿತು. ಆಟೋಗ್ರಾಫ್ ಪುಸ್ತಕಗಳ ಅಕ್ಷರವಾಯಿತು. ‘ಹುಡುಗಿ ಯರ’ ಪ್ರೀತಿಗೆ ಮುನ್ನುಡಿಯಾಯಿತು. ಕಳ್ಳಪ್ರೇಮಕ್ಕೆ ಸಾಕ್ಷಿಯೂ ಆಯಿತು!
ಪ್ರೀತಿಯಲ್ಲಿ ಮೊದಲು ಮೋಹವಿರುತ್ತದೆ. ನಂತರ ಆರಾಧನೆ ಜತೆಯಾಗುತ್ತದೆ. ಈ ಎರಡೂ ಭಾವವೂ ‘ನಿನ್ನ ಸವಿನೆನಪೇ’ ಹಾಡಲ್ಲಿದೆ. ಈ ಹಾಡಿಗೆ ಸಂಬಂಸಿದ ಎಲ್ಲ ಮಾಹಿತಿ ಕೊಟ್ಟವರು ಬಸಂತ್‌ಕುಮಾರ್ ಪಾಟೀಲ್. ಅವರಿಗೆ ಪ್ರೀತಿ, ಧನ್ಯವಾದ. ಪ್ರೀತಿಸುವ ಹುಡುಗಿಯೊಬ್ಬಳ ಅನುರಾಗವನ್ನೆಲ್ಲ ಕೊರಳಲ್ಲಿ ತುಂಬಿಕೊಂಡು ಹಾಡಿದ ಎಸ್. ಜಾನಕಿ ಅಮ್ಮನ ಸಿರಿಕಂಠಕ್ಕೆ ಒಂದು ಸವಿಮುತ್ತು. ವಿಜಯನಾರಸಿಂಹ ಅವರ ಕಾವ್ಯಶಕ್ತಿಗೆ ಸಾಷ್ಟಾಂಗ ನಮಸ್ಕಾರ!
ಅಂದಹಾಗೆ, ಈ ವಾರ ‘ಹಾಡು ಹುಟ್ಟಿದ ಸಮಯ’ಕ್ಕೆ ೧೫೦ನೇ ವಾರದ ಸಂಭ್ರಮ. ಅಂಕಣವನ್ನು ಒಪ್ಪಿಕೊಂಡ ಎಲ್ಲ ಮನಸ್ಸುಗಳಿಗೂ ಕೃತಜ್ಞತೆ.
************
ತಿಂಗಳ ಹಿಂದಿನ ಮಾತು.
ಲಹರಿ ವೇಲು ಅವರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಬಸಂತ್ ಕುಮಾರ್ ಪಾಟೀಲ್ ಸಿಕ್ಕರು.’ಹಾಡು ಹುಟ್ಟಿದ ಸಮಯ’ ಅಂಕಣಕ್ಕೆ ನಾನು ಸ್ವಲ್ಪ ಮಾಹಿತಿ ಕೊಡ್ತೇನೆ.ನಿಮಗೆ ಉಪಯೋಗ ಆಗಬಹುದು ಅಂದರು.ಯಾವ ಹಾಡಿನ ಬಗ್ಗೆ ಸರ್ ಅಂದಿದ್ದಕ್ಕೆ- ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಅಂದರು.ಆ ಕ್ಷಣದ ಖುಷಿಯನ್ನು ಪದಗಳಲ್ಲಿ ವಿವರಿಸಲಾರೆ.ಯಾಕೆಂದರೆ,ಆ ಹಾಡಿನ ಬಗ್ಗೆ ಬರೆಯಲು ವರ್ಷದ ಹಿಂದೆಯೇ ಯೋಚಿಸಿದ್ದೆ.ಆದರೆ ಮಾಹಿತಿಯೇ ಇರಲಿಲ್ಲ.ಈಗ ಅಚಾನಕ್ಕಾಗಿ, ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿತ್ತು.ನಿಮ್ಮ ಬಿಡುವಿನ ಸಮಯ ತಿಳಿಸಿ…ನಾನು ಬಂದು ಮಾಹಿತಿ ತಗೋತೇನೆ ಅಂದೆ.’ನಾಳೆ ಬೆಳಗ್ಗೆನೇ ಬನ್ನಿ ಸ್ವಾಮಿ…ನಾನು ಫ್ರೀ ಇದ್ದೇನೆ’ ಅಂದರು ಬಸಂತ್.
ಮರುದಿನ ಬೆಳಗ್ಗೆ ಸುಮ್ಮನೆ ನೆನಪಿಸಿದರೆ…ದಯವಿಟ್ಟು ತಪ್ಪು ತಿಳ್ಕೊಬೇಡಿ…ನಾನು ಬ್ಯುಸಿ ಇವತ್ತು…ನಾಳೆ ಬನ್ನಿ ಅಂದರು.ಆ ಅನಂತರ ಸತತ ೩೦ ದಿನಗಳವರೆಗೆ ನಾವು ಭೇಟಿಗೆ ಸಮಯ ಕೇಳುವುದು,ಬಸಂತ್ ಅವರು-‘ ಅಯ್ಯೋ ಸಾರ್…ಸಾರೀ ..’.ಅನ್ನುವುದು ಮಾಮೂಲಾಯಿತು.ಈ ಮಧ್ಯೆ ಮುಂಬಯಿಯಲ್ಲಿರುವ ಚಿದಂಬರ ಕಾಕತ್ಕರ್ ಅವರೂ ನಾಲ್ಕು ಸಾಲಿನ ಮಾಹಿತಿ ಕಳಿಸಿಕೊಟ್ಟರು.ಗೆಳೆಯ ನಾಗರಾಜ್ ಕೂಡ ನೆರವಿಗೆ ಬಂದರು.ಆದರೆ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಸಮಯ ಒದಗಿ ಬರಲೇ ಇಲ್ಲ.ಈ ಮಧ್ಯೆ ಅವರ ಪರಿಚಯದವರೊಬ್ಬರು ಹೋಗಿಬಿಟ್ಟರು.ಶೋಕದಲ್ಲಿರುವ ಬಸಂತ್ ಅವರಲ್ಲಿ ಪ್ರೇಮಗೀತೆಯ ಬಗ್ಗೆ ಮಾಹಿತಿ ಕೇಳಲು ಮನಸ್ಸು ಬರಲಿಲ್ಲ. ಕೊನೆಗೂ ಒಮ್ಮೆ ಕಾಲ ಕೂಡಿ ಬಂತು.ಪರಿಣಾಮ, ಹಾಡು ಹುಟ್ಟಿದ ಸಮಯ ಅಂಕಣದ ೧೫೦ ನೇ ಮಾಲಿಕೆಯಲ್ಲಿ ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ…’ಹಾಡಿನ ಕಥೆ ಅರಳಿಕೊಂಡಿತು.
ನಿಜ ಹೇಳಬೇಕೆಂದರೆ, ಪ್ರತಿ ಹಾಡಿನ ಮಾಹಿತಿ ಹುಡುಕಿ ಹೊರಟಾಗಲೂ ಇಂಥ ಸಂದರ್ಭಗಳು ಜೊತೆಯಾಗಿವೆ.ಈ ಅಂಕಣದಲ್ಲಿ ಬರೆದದ್ದೆಲ್ಲ ಚೆನ್ನಾಗಿದೆ ಅಂತ ನಾನಂತೂ ಭಾವಿಸಿಲ್ಲ.ಆಗೊಮ್ಮೆ ಈಗೊಮ್ಮೆ ಸಾಧಾರಣ ಅನ್ನುವಂಥ ಬರಹಗಳೂ ಬಂದುಹೋಗಿವೆ.ಆದರೂ,ಯಾರಿಗೂ ಗೊತ್ತಿಲ್ಲದ ಹಾಡುಗಳ ಕಥೆ ಕೇಳುವ/ಬರೆಯುವ ಉತ್ಸಾಹ ಮಾತ್ರ ಹೆಚ್ಚುತ್ತಲೇ ಇದೆ.ಹಾಡೆಂಬ ಜೋಗುಳಕ್ಕೆ ನಮಸ್ಕಾರ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: