ಆಷಾಢ ಅಂದ್ರೆ ಸುಮ್ನೇನಾ?

July 7, 2009

ಗೆಳೆಯ, ಯುದ್ಧ ಗೆದ್ದವನ ಸಂಭ್ರಮದಲ್ಲಿದ್ದ.
‘ಏನಾಯ್ತೋ, ಟ್ವೆಂಟಿ-೨೦ ಕ್ರಿಕೆಟ್ ಮುಗಿದು ಆಗಲೇ ತಿಂಗಳಾಗ್ತಾ ಬಂತು. ಹಾಗಾಗಿ ಈಗ ನೀನು ಬೆಟ್ ಗೆದ್ದಿರೋಕೆ ಸಾಧ್ಯವಿಲ್ಲ. ಹಾಗಿದ್ರೂ ನಿಂತನಿಂತಲ್ಲೇ ಥೈಥೈ ಕುಣಿತಾ ಇದೀಯಲ್ಲ, ಏನ್ಸಮಾಚಾರ?’ ಅಂದರೆ- ಒಳಗೊಳಗೇ ನಗುತ್ತ ಹೀಗೆಂದ: ‘ಗೊತ್ತಿದೆಯಲ್ವ ನಿಂಗೂ? ಆಷಾಢ ಶುರುವಾಗಿದೆ. ಅದೇ ಕಾರಣಕ್ಕೆ ಹೆಂಡತಿ ಹೋಗಿ ಅಣ್ಣನ ಮನೆ ಸೇರ್ಕೊಂಡಿದಾಳೆ. ಅವಳ ಜೊತೆ ದಿನಕ್ಕೆ ಒಂದೆರಡಲ್ಲ, ನಲವತ್ತೆಂಟು ಬಾರಿ ಫೋನ್ ಮಾಡಿ ಮಾತಾಡ್ತಿದ್ದೆ ನಿಜ. ಆದ್ರೂ ಸಮಾಧಾನ ಆಗ್ತಾ ಇರಲಿಲ್ಲ. ನಿನ್ನೆ ಸಂಜೆ ಸೀದಾ ಅವಳ ಅಣ್ಣನ ಮನೆಗೇ ಹೋದೆ. ಸಂಪ್ರದಾಯದ ನೆಪದಲ್ಲಿ ಅವರು ಅರ್ಧಗಂಟೆ ವಾಕ್ ಹೋಗೋಕೂ ಬಿಡಲ್ಲ ಅನ್ನಿಸ್ತು. ಅದಕ್ಕೇ ಉಪಾಯ ಮಾಡ್ದೆ, ದೇವಸ್ಥಾನಕ್ಕೆ ಬರುವಂತೆ ಅವಳಿಗೆ ಐಡಿಯಾ ಕೊಟ್ಟೆ. ಅವಳೂ ಖುಷಿಯಿಂದ ಒಪ್ಪಿದ್ಲು. ದೇವಸ್ಥಾನದಲ್ಲಿ ಐದು ನಿಮಿಷ ಇದ್ದು ಸೀದಾ ಮಲ್ಟಿಪ್ಲೆಕ್ಸ್ಗೆ ಸಿನಿಮಾಕ್ಕೆ ಹೋದ್ವಿ. ಅಲ್ಲಿ ಇಬ್ರೂ ಪರಸ್ಪರ ಭೇಟಿಯಾಗಿದ್ದು ಆಯ್ತು. ಬೇಟೆ ಆಡಿದ್ದೂ ಆಯ್ತು! ನಮ್ಮ ಮದುವೆಯಾಗಿ ಇನ್ನೂ ಹದಿನೈದು ದಿನ ಕಳೆದಿಲ್ಲ. ಹಾಗಿರುವಾಗ ಸಂಪ್ರದಾಯದ ನೆಪದಲ್ಲಿ ದೂರ ಮಾಡೋಕೆ ನೋಡಿದ್ರೆ ನಾವಾದ್ರೂ ಹೇಗೆ ಇರೋಕಾಗ್ತದೆ ಹೇಳು…. ಈ ಆಷಾಢದ ಮನೆ ಹಾಳಾಗ!’
ಹೀಗೆಂದವನೇ, ಗೆಳೆಯ ಮಾತು ನಿಲ್ಲಿಸಿದ.
***
‘ಆಷಾಢದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದು’ ಎಂಬ ಮಾತು ಗೆಳೆಯನ ನೆಪದಲ್ಲಿ ಮತ್ತೆ ನೆನಪಾಯಿತು. ಹಿಂದೆಯೇ, ನಮ್ಮ ಮಧ್ಯೆ ಇವತ್ತಿಗೂ ವ್ರತದಂತೆ ಆರಣೆಯಲ್ಲಿರುವ- ‘ಆಷಾಢದಲ್ಲಿ ಹೊಸ ಮನೆ ಖರೀದಿಸಬಾರದು, ಮನೆ ಬದಲಿಸಬಾರದು, ವಾಹನ ಕೊಳ್ಳಬಾರದು, ಆಸ್ತಿ ಮಾರಬಾರದು, ಮನೆ ನಿರ್ಮಾಣಕ್ಕೆ ಪಾಯ ಹಾಕಬಾರದು, ಮದುವೆಯೂ ಸೇರಿದಂತೆ ಯಾವೊಂದು ಶುಭ ಕಾರ್ಯವೂ ಆಷಾಢ ಮಾಸದಲ್ಲಿ ನಡೆಯಬಾರದು…’ ಎಂಬಿತ್ಯಾದಿ ಮಾತುಗಳೆಲ್ಲ ಸಾಲು ದೀಪದ ಬೆಳಕಿನಂತೆ ಕಣ್ಮುಂದೆ ಬಂದು ಹೋದವು. ಆಗಲೇ ಹುಟ್ಟಿಕೊಂಡದ್ದು ಈ ಪ್ರಶ್ನೆಗಳ ಗುಚ್ಛ: ಅಲ್ಲ, ಆಷಾಢದಲ್ಲಿ ಅದ್ಯಾಕೆ ಮದುವೆಯಾಗಬಾರದು? ಯಾಕೆ ಹೊಸ ಮನೆ ಕಟ್ಟಿಸಬಾರದು ಖರೀದಿಸಬಾರದು? ಗಂಡ-ಹೆಂಡತಿ ಜೊತೆಯಾಗಿದ್ದರೆ ಈ ಆಷಾಢಕ್ಕೇನು ಕಷ್ಟ? ಈ ಮಾಸದಲ್ಲಿ ಕೂಡ ಅದದೇ ಭಾನುವಾರ, ಸೋಮವಾರ, ಮಂಗಳವಾರ… ವಗೈರೆಗಳೇ ಇದ್ದರೂ ಹೊಸದಾಗಿ ವಾಹನ ಖರೀದಿಸಬಾರದು ಎಂದರೆ ಏನರ್ಥ? ಆಷಾಢದ ನೂರೆಂಟು ಲೆಕ್ಕಾಚಾರಗಳ ಮಧ್ಯೆಯೂ ದಿನಸಿ, ಸಾಂಬಾರ ಪದಾರ್ಥಗಳು ಹಾಗೂ ತರಕಾರಿಯನ್ನು ದಿನದಿನವೂ ಖರೀದಿಸುವ ಜನ, ಆಸ್ತಿ ಖರೀದಿಯ ವಿಷಯ ಬಂದಾಗ ಮಾತ್ರ ಹಾವು ತುಳಿದವರಂತೆ ಬೆಚ್ಚುವುದೇಕೆ? ಒಂದು ವೇಳೆ ಯಾರಾದರೂ ಕಿಲಾಡಿಗಳು, ಈ ಆಷಾಢ ಮಾಸ ತುಂಬಾ ಕೆಟ್ಟದು. ಹಾಗಾಗಿ ಒಂದಿಡೀ ತಿಂಗಳು ಯಾರೂ ಊಟ ಮಾಡಬಾರದು, ಸ್ನಾನ ಮಾಡಬಾರದು ಮತ್ತು ಉಸಿರಾಡಲೂಬಾರದು ಎಂದು ಹೇಳಿಬಿಟ್ಟರೆ…?!
ಇಂಥದೊಂದು ಯೋಚನೆ ಬಂದೊಡನೆ ನಗು ಬಂತು. ಹಿಂದೆಯೇ ಆಷಾಢದ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲ ಜನ ಹಾಗೂ ಪರಿಸರದ ‘ಬದಲಾದ ಚಿತ್ರವೂ’ ಕಣ್ಮುಂದೆ ಹಾದು ಹೋಯಿತು; ಬ್ಲಾಕ್ ಅಂಡ್ ವೈಟ್ ಸಿನಿಮಾದ ದೃಶ್ಯಗಳ ಹಾಗೆ…
ಹೌದಲ್ಲವಾ? ಉಳಿದೆಲ್ಲ ಸಂದರ್ಭಗಳಲ್ಲೂ ಆಕಾಶ ಶುಭ್ರವಾಗಿರುತ್ತದೆ. ಸ್ವಚ್ಛವಾಗಿರುತ್ತದೆ. ಆದರೆ, ಆಷಾಢ ಮಾಸ ಬಂತೆಂದರೆ ಸಾಕು, ಆಕಾಶವೆಂಬೋ ಆಕಾಶ ಕೂಡ ಸ್ವಲ್ಪ ಮಂಕಾಗುತ್ತದೆ, ಮಸುಕಾದಂತೆ ಕಾಣಿಸುತ್ತದೆ. ರೈಲಿನ ಎಂಜಿನ್ನಿಂದ ಹೊರಟ ಹೊಗೆಯಂತೆ ಕಾಣುವ ಕಡುಗಪ್ಪು ಮೋಡಗಳು ಆಕಾಶದ ಚೆಲುವನ್ನೇ ಹಾಳು ಮಾಡಿರುತ್ತವೆ. ಈ ಮೋಡಗಳಲ್ಲಿರುವ ಅಷ್ಟೂ ಮಳೆ ನೀರನ್ನು ಸುರಿಸಿ, ದುಗುಡ, ದುಮ್ಮಾನವನ್ನು ಕಳೆದುಕೊಳ್ಳಬೇಕೆಂಬ ಬಯಕೆ ಆಗಸಕ್ಕಿರುತ್ತದೆ, ನಿಜ. ಆದರೆ, ತುಂಬ ಸಂದರ್ಭದಲ್ಲಿ ಮೋಡಗಳು ಮಳೆ ಸುರಿಸುವುದೇ ಇಲ್ಲ. ಬದಲಿಗೆ, ಅಮ್ಮನೊಂದಿಗೆ ‘ಠೂ’ ಬಿಟ್ಟು ಮನೆಯ ಇನ್ನೊಂದು ಮೂಲೆಗೆ ಬಂದು ಮುಖ ಊದಿಸಿಕೊಂಡು ಕೂರುವ ಮಗುವಿನಂತೆ, ಅದೇ ಆಗಸದ ಇನ್ನೊಂದು ತುದಿಗೆ ಬಂದು ಕೂತುಬಿಡುತ್ತವೆ. ಪರಿಣಾಮ, ಈ ಆಷಾಢದ ಸಂದರ್ಭದಲ್ಲಿ ಆಕಾಶದಂಥ ಆಕಾಶ ಕೂಡ ಎಲ್ಲ ಇದ್ದರೂ ಏನೂ ಇಲ್ಲ ಎಂಬಂಥ ನೋವಿನಿಂದ ಕಂಗಾಲಾಗಿರುತ್ತದೆ. ಅದಕ್ಕೇ ಹೇಳಿದ್ದು- ಆಷಾಢ ಎಂದರೆ ಖಿನ್ನತೆ. ಆಷಾಢ ಎಂದರೆ ಯಾತನೆ, ಆಷಾಢ ಎಂದರೆ ದುಗುಡ ಮತ್ತು ಆಷಾಢವೆಂದರೆ ವಿರಹ!
ಹೀಗೆ ಅಂದುಕೊಂಡಾಕ್ಷಣ ಮನಸ್ಸು ಮತ್ತೆ ಅದೇ ಹಳೆಯ ಪ್ರಶ್ನೆಗೇ ಬಂದು ನಿಲ್ಲುತ್ತದೆ: ‘ಆಷಾಢದಲ್ಲಿ ಗಂಡ-ಹೆಂಡತಿಯನ್ನು ದೂರ ಮಾಡ್ತಾರಲ್ಲ ಯಾಕೆ?’
ಹಿರಿಯರ ಜಾಣತನವನ್ನೇ ಅಂದಾಜು ಮಾಡಿಕೊಂಡು ಹೇಳುವುದಾದರೆ- ಮದುವೆಗಳ ಸೀಜನ್ ಆರಂಭವಾಗುವುದೇ ಜೇಷ್ಠ ಮಾಸದಲ್ಲಿ. ಆ ತಿಂಗಳು- ಮದುವೆ, ನಂತರದ ಒಂದಿಷ್ಟು ಶಾಸ್ತ್ರ, ದೇವಸ್ಥಾನ, ಗೆಳೆಯರ ಮನೆಗಳಿಗೆ ಯಾತ್ರೆ ಇತ್ಯಾದಿಗಳಲ್ಲೇ ಮುಗಿದು ಹೋಗುತ್ತದೆ. ಈ ಮಧ್ಯೆಯೇ ‘ಹೊಸ ಬದುಕಿನ ರಸಮಯ ಕ್ಷಣಗಳ’ ರುಚಿ ಗಂಡ-ಹೆಂಡತಿ, ಇಬ್ಬರಿಗೂ ಆಗಿರುತ್ತದೆ. ಪರಿಣಾಮ, ಇಬ್ಬರೂ ‘ನಿನ್ನ ಅರೆಗಳಿಗೆಯೂ ನಾನು ಬಿಟ್ಟಿರಲಾರೆ…’ ಎಂಬ ಉನ್ಮಾದದ ಸ್ಥಿತಿಗೆ ಬಂದಿರುತ್ತಾರೆ. ಹೀಗಿದ್ದಾಗಲೇ ಕಳ್ಳನಂತೆ, ಒಂದೊಂದೇ ಹೆಜ್ಜೆ ಇಡುತ್ತ ಬಂದೇ ಬಿಡುತ್ತದೆ ಆಷಾಢ. ಒಂದು ವೇಳೆ ಹಸಿಬಿಸಿ ಆಸೆಗಳಿಂದ ಹುಚ್ಚಾದ ನವದಂಪತಿಗಳನ್ನು ಈ ತಿಂಗಳು ಜೊತೆಯಾಗಿರಲು ಬಿಟ್ಟರೆ, ಬಿರು ಬೇಸಿಗೆಯ ಕಾಲಕ್ಕೆ ಹೆರಿಗೆಯಾಗಿ ಬಿಡುವ ಸಾಧ್ಯತೆಗಳಿರುತ್ತವೆ. ಬಿಸಿಲಿನ ತಾಪಕ್ಕೆ ಕೆಲವೊಮ್ಮೆ ದಿಢೀರನೆ ಜ್ವರ ಬಂದುಬಿಡುವ ಸಾಧ್ಯತೆಗಳಿರುತ್ತದೆ. ಈ ಮಧ್ಯೆ ಗರ್ಭದ ಭಾರ, ಹೆರಿಗೆಯ ನೋವು, ಬಾಣಂತನದ ಬಾಧೆಯನ್ನು ತಪ್ಪಿಸಬೇಕೆಂಬ ಆಶಯದಿಂದಲೇ ಒಂದು ತಿಂಗಳ ಮಟ್ಟಿಗೆ ಗಂಡ-ಹೆಂಡತಿಯನ್ನು ತಾತ್ಕಾಲಿಕವಾಗಿ ದೂರ ಇರಿಸಲಾಗುತ್ತದೆ.
ಅಂತೆಯೇ, ಆಷಾಢದ ಸಂದರ್ಭದಲ್ಲಿ, ಆಗಷ್ಟೇ ಮಳೆ ಬಿದ್ದು ಬಿತ್ತನೆ, ಕಳೆ ಕೀಳುವುದೂ ಸೇರಿದಂತೆ ರೈತರಿಗೆ ಕೈ ತುಂಬ ಕೆಲಸ ಸಿಕ್ಕಿರುತ್ತದೆ. ಈ ಸಂದರ್ಭದಲ್ಲಿ ಮನೆ ಕಟ್ಟಿಸುವ/ ಖರೀದಿಸುವ ಕೆಲಸಕ್ಕೆ ನಿಂತರೆ ಮೈಮರೆವಿನ ಕಾರಣಕ್ಕೆ ಕೃಷಿ ಕೆಲಸ ಕೆಡಬಹುದು ಎಂಬ ಇನ್ನೊಂದು ಕಾರಣ ಕೂಡ ‘ಆಷಾಢದಲ್ಲಿ ಶುಭಕಾರ್ಯಗಳಿಗೆ ನಿಷಿದ್ಧ’ ಎಂಬ ಘೋಷಣೆಯ ಹಿಂದಿರಬಹುದೇನೋ ಅನಿಸುತ್ತದೆ.
ಇಂಥದೊಂದು ಸಮಜಾಯಿಷಿ ಕೊಟ್ಟ ನಂತರವೂ ಆಷಾಢ ಎಂದಾಕ್ಷಣ ‘ನವದಂಪತಿಯ’ ಇರುಳಿನ ಸಂಕಟವೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ಮನಸ್ಸು, ಹದಿನೈದಿಪ್ಪತ್ತು ವರ್ಷ ಹಿಂದೆ ಚಾಲ್ತಿಯಲ್ಲಿದ್ದ ಆಚರಣೆಗಳ ಹಿಂದೆ ಯಾತ್ರೆ ಹೊರಡುತ್ತದೆ. ತುಂಟ ಕಂಗಳು ಅದನ್ನು ಹಿಂಬಾಲಿಸುತ್ತವೆ.
ಯಾರು ಏನೇ ಹೇಳಲಿ, ಹಳೆಯ ದಿನಗಳ ಆಚರಣೆಯೇ ಚೆಂದವಿತ್ತು. ಆಗೆಲ್ಲ- ಆಷಾಢ ಇನ್ನೂ ನಾಲ್ಕೈದು ದಿನವಿದೆ ಎನ್ನುವಾಗಲೇ ಗಂಡನ ಮನೆಯಿಂದ ತಂಗಿಯನ್ನು ಕರೆ ತರಲು ಅಣ್ಣ ತಯಾರಿ ನಡೆಸುತ್ತಿದ್ದ. ಈ ಕಡೆ- ಆಷಾಢದಲ್ಲಿ ಅತ್ತೆ-ಸೊಸೆ ಒಂದೇ ಮನೇಲಿದ್ರೆ ಕೆಡುಕು ತಪ್ಪಿದ್ದಲ್ಲ ಎಂಬ ಹಳೆಯ ಮಾತನ್ನು ನಂಬಿ, ಸೊಸೆ ಅನ್ನಿಸಿಕೊಂಡಾಕೆ ಕೂಡ ಅಪ್ಪನ ಮನೆಗೆ ಹೊರಟು ನಿಲ್ಲುತ್ತಿದ್ದಳು. ಅಣ್ಣ ಬರುವುದು ಒಂದೆರಡು ದಿನ ತಡವಾದರೂ ಸಾಕು; ಹೆಣ್ಣು ಮಕ್ಕಳಿಗೆ ‘ಆಷಾಢ ಮಾಸ ಬಂದೀತಮ್ಮ/ ತೌರಿಂದ ಅಣ್ಣ ಬರಲಿಲ್ಲ/ ಎಷ್ಟು ನೆನೆಯಲಿ ಅಣ್ಣನ ದಾರಿ/ ಸುವ್ವೋ ಲಾಲಿ ಸುವ್ವಾಲಾಲಿ’ ಎಂಬ ಹಾಡು ನೆನಪಾಗಿಬಿಡುತ್ತಿತ್ತು.
ತಮಾಷೆಯೆಂದರೆ, ಹೀಗೆ- ಕುಣಿದಾಡಿಕೊಂಡೇ ತೌರಿಗೆ ಬಂದವಳ ಸಂಭ್ರಮ ಎರಡೇ ದಿನಗಳಿಗೆ ಮುಗಿದು ಹೋಗುತ್ತಿತ್ತು. ತವರು ಮನೆಯ ನೂರು ಸಂಭ್ರಮದ ಮಧ್ಯೆಯೂ ‘ಗಂಡ’ ನೆನಪಾಗುತ್ತಿದ್ದ. ಅವನೊಂದಿಗೆ ಜಗಳವಾಡಿದ್ದು, ಠೂ ಬಿಟ್ಟಿದ್ದು, ತಲೆ ಮೇಲೆ ಮೊಟಕಿದ್ದು, ಸ್ನಾನದ ಮನೆಯಲ್ಲಿ ಸರಸವಾಡಿದ್ದು, ಒಂದೇ ತಟ್ಟೆಯಲ್ಲಿ ಹಂಚಿಕೊಂಡು ತಿಂದದ್ದು ನೆನಪಾಗಿ ಬಿಡುತ್ತಿತ್ತು. ಪರಿಣಾಮ, ಕೆನ್ನೆಯಲ್ಲಿನ್ನೂ ಅರಿಶಿಣದ ಗುರುತು ಉಳಿಸಿಕೊಂಡಿರುತ್ತಿದ್ದ ಕನ್ಯೆಗೆ- ಹಗಲಲ್ಲಿ ಬೆಳಕೇ ಇರುತ್ತಿರಲಿಲ್ಲ. ರಾತ್ರಿ ನಿದ್ರೆ ಬರುತ್ತಿರಲಿಲ್ಲ!
ಈ ಕಡೆ, ಗಂಡ ಅನ್ನಿಸಿಕೊಂಡವನ ಕಥೆಯೂ ಅದೇ. ಆಗೆಲ್ಲ, ತವರಿಗೆ ಹೋದವಳನ್ನು ಸಂಪರ್ಕಿಸಲು ಇದ್ದ ದಾರಿಯೆಂದರೆ ಕಾಗದ ಬರೆಯುವುದು! ಈ ಪುಣ್ಯಾತ್ಮನ ಕಾಗದವನ್ನು ಹೆಂಡತಿಯ ಮನೆಯಲ್ಲಿ ಎಲ್ಲರೂ ಓದುತ್ತಿದ್ದುದರಿಂದ ಅಲ್ಲಿ ಪೋಲ್ ಪೋಲಿಯಾಗಿ ಬರೆಯುವಂತಿರಲಿಲ್ಲ. ಕಾಗದ ಬಿಟ್ಟರೆ, ಹೆಂಡತಿಯನ್ನು ಸಂಪರ್ಕಿಸಲು ಇದ್ದ ಇನ್ನೊಂದು ದಾರಿಯೆಂದರೆ- ಎಸ್ಟೀಡಿ ಫೋನು! ಆಗೆಲ್ಲ, ಒಂದೂರಿನಲ್ಲಿ ತಲಾ ಇಪ್ಪತ್ತು ಮನೆಗೆ ಒಂದು ಫೋನ್ ಇರುತ್ತಿತ್ತು. ಆ ಮನೆಯ ನಂಬರ್ ಪಡೆದು ಫೋನ್ ಮಾಡಿದರೆ, ಮನೆಯ ಯಜಮಾನರು ಫೋನ್ ಎತ್ತಿಕೊಂಡು ಲೋಕಾಭಿರಾಮ ಹರಟೆಗೇ ನಿಂತುಬಿಡುತ್ತಿದ್ದರು! ಇವನಿಗೋ ಪ್ರಾಣಸಂಕಟ. ಅವರ ಕಾಡು ಹರಟೆಯನ್ನೆಲ್ಲ ತೆಪ್ಪಗೆ ಕೇಳಿಸಿಕೊಂಡು ಕಡೆಗೊಮ್ಮೆ ಸಂಕೋಚದಿಂದ ನಮ್ಮ ‘ರಾಧನ್ನು’ ಕರೀತೀರಾ ಅಂದರೆ- ಕರೆಯೋಣ ಕರೆಯೋಣ ಎಂದು ಅವರು ಹೇಳುತ್ತಿದ್ದಾಗಲೇ ಲೈನ್ ಕಟ್ ಆಗುತ್ತಿತ್ತು! ಇವನು ಇನ್ನೊಂದು ಬಾರಿ ಫೋನ್ ಮಾಡುವ ವೇಳೆಗೆ ‘ಅವಳು’ ಓಡಿ ಬಂದಿರುತ್ತಿದ್ದಳು ನಿಜ. ಆದರೆ, ಆಕೆಯ ಸುತ್ತಲೂ ಗೆಳತಿಯರ, ನೆರೆ ಹೊರೆಯವರ ಗುಂಪಿರುತ್ತಿತ್ತು. ಇವನಿಗೋ ಫೋನ್ನಲ್ಲೇ ಲಲ್ಲೆಗೆರೆಯುವ, ಮುತ್ತಿಡುವ, ಪೋಲಿ ಜೋಕು ಹೇಳುವ ಕಾತುರ! ಆದರೆ, ಇವನ ಸಂಭ್ರಮಕ್ಕೆ ದನಿಯಾಗುವ ಪರಿಸ್ಥಿತಿಯಲ್ಲಿ ಅವಳಿರುತ್ತಿರಲಿಲ್ಲ. ಈತ ಗುರ್ರ ಗುರ್ರ ಎಂದು ರೇಗಿದರೂ, ಸೆಕ್ಸಿಯಾಗಿ ಮಾತಾಡಿದರೂ ಒಂದಿಷ್ಟು ಬೈದರೂ- ಈಕೆ ‘ಹಾ, ಹೂಂ, ಸರಿ ಸರಿ…’ ಎಂದೇ ಮಾತು ಮುಗಿಸುತ್ತಿದ್ದಳು. ಇದರಿಂದ ಸಹಜವಾಗಿಯೇ ಸಿಟ್ಟಾದ ಈ ಗಂಡ ಮಹಾರಾಯ- ‘ತವರಿನ ಸುಖ ಜಾಸ್ತಿ ಆಗಿರಬೇಕು, ಹಾಗಿರುವಾಗ ನನ್ನ ನೆನಪೆಲ್ಲಿ ಬರ್ತದೆ ಹೇಳು?’ ಎಂದು ಚುಚ್ಚಿ ಪತ್ರ ಬರೆಯುತ್ತಿದ್ದ!
ಮರು ಟಪಾಲಿಗೇ ಬರುತ್ತಿದ್ದ ಅವಳ ಉತ್ತರ ಹೀಗಿರುತ್ತಿತ್ತು? ತೌರ ಸುಖದೊಳಗೆನ್ನರೆತಿಹಳು ಎನ್ನದಿರಿ/ ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು/ ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ/ ಇರುಳಿನಲಿ ಕಾಣುವುದು ನಿಮ್ಮ ಕನಸು..’
ಮೊದಲೇ ವಿರಹದ ಮಧ್ಯೆ ಬದುಕುತ್ತಿದ್ದವನಿಗೆ ಇಂಥದೊಂದು ಆರ್ದ್ರ ಭಾಷೆಯ ಪತ್ರ ಬಂದರೆ, ಮನಸು ತಡೆದೀತಾದರೂ ಹೇಗೆ? ಈತ ತಕ್ಷಣವೇ ‘ಕೋಟಿ ಯೋಜನವಿರಲಿ ದಾಟಿ ಬರುವೆನು ಹೆಣ್ಣೆ..’ ಎಂದು ಹಾಡಿಕೊಂಡೇ ಹೆಂಡತಿಯ ಮನೆಗೆ ಬಂದುಬಿಡುತ್ತಿದ್ದ.
ಫಜೀತಿಯೆಂದರೆ, ಅತ್ತೆಯ ಮನೆಯಲ್ಲಿ ಹೊಸದೊಂದು ಬಗೆಯ ಸಂಕಟ ಜೊತೆಯಾಗುತ್ತಿತ್ತು. ‘ಈತ’ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕರೆ ಅವಳೊಂದಿಗೆ ಸರಸವಾಡಬೇಕು ಎಂಬ ಅವಸರದಲ್ಲಿದ್ದರೆ ಅದಕ್ಕೆ ಅವಕಾಶವೇ ಸಿಗುತ್ತಿರಲಿಲ್ಲ. ಊಟ ಬಡಿಸಲು ಅವಳೊಂದಿಗೆ ಅತ್ತೆಯೂ ಬರುತ್ತಿದ್ದದರಿಂದ ಆಗ ಕೈ ಚಿವುಟಿ ರೋಮಾಂಚನಗೊಳ್ಳುವುದಕ್ಕೆ; ಕಣ್ಣು ಹೊಡೆದು ಖುಷಿ ಪಡುವುದಕ್ಕೆ ಆಗುತ್ತಿರಲಿಲ್ಲ. ಊಟವಾದ ನಂತರ ಹೊರಬಂದು, ಈಗ ಎರಡೇ ನಿಮಿಷದ ಮಟ್ಟಿಗೆ ಕರೆಂಟು ಹೋಗಿಬಿಟ್ಟರೆ ಸಾಕು, ತಬ್ಬಿ ಮುದ್ದಾಡಬಹುದು ಎಂದು ಇಬ್ಬರೂ ಅಂದುಕೊಳ್ಳುತ್ತಿದ್ದರು ನಿಜ. ಆದರೆ ಅವತ್ತು ದರಿದ್ರದ ಕರೆಂಟು ಹೋಗುತ್ತಲೇ ಇರಲಿಲ್ಲ! ಹಾಳಾಗಿ ಹೋಗಲಿ, ಮಲಗುವ ಮುನ್ನವಾದರೂ ಅವಳನ್ನು ತಬ್ಬಿ ಮುದ್ದಾಡಲೇಬೇಕು ಎಂದು ‘ಇವನು’ ಅಂದುಕೊಂಡಿದ್ದಾಗಲೇ- ಹೆಂಡತಿಯ ಅಣ್ಣನೋ, ಮಾವನೋ ಲಗುಬಗೆಯಿಂದ ಬಂದು ಹಾಸಿಗೆ ಹಾಸಿಕೊಡುತ್ತಿದ್ದರು. ‘ಅವಳು’ ಎಲ್ಲವನ್ನೂ ಬಾಗಿಲ ಸಂದಿಯಲ್ಲೇ ನೋಡಿ, ನಕ್ಕು, ಸಾರಿ ಕೇಳಿ, ಗಾಳಿಯಲ್ಲಿ ಹೂಮುತ್ತು ತೇಲಿಬಿಟ್ಟು ಹೋಗಿಬಿಡುತ್ತಿದ್ದಳಿ. ಇಂಥ ಗಡಿಬಿಡಿ, ಸಿಡಿಮಿಡಿ, ಆಸೆ, ಕಾತುರ ಹಾಗೂ ವಿರಹದ ಮಧ್ಯೆಯೇ ಆಷಾಢ ಕಳೆದು ಹೋಗುತ್ತಿತ್ತು.
ಸ್ವಾರಸ್ಯ ಏನೆಂದರೆ- ಈ ಒಂದು ತಿಂಗಳ ಅವಯಲ್ಲಿ ಅವಳಿಗೆ ಇವನ ಮೇಲೆ, ಇವಳಿಗೆ ಅವನ ಮೇಲೆ ‘ಅತೀ’ ಅನ್ನುವಷ್ಟು ಪ್ರೀತಿ ಹುಟ್ಟುತ್ತಿತ್ತು. ಎರಡು ಕುಟುಂಬಗಳ ನಡುವೆ ಇದ್ದ ಸಂಬಂಧದ ಬಂಧ ಗಟ್ಟಿಯಾಗುತ್ತಿತ್ತು!
***
ಹೌದು. ಇದೆಲ್ಲಾ ಹಳೆಯ ಮಧುರ ನೆನಪು. ಈಗ ಆಷಾಢಕ್ಕೆ ಹೆದರುವ ಗಂಡ-ಹೆಂಡಿರಿಲ್ಲ. ‘ಅಯ್ಯೋ, ಆಷಾಢ ಇಲ್ವಾ ನಿಮ್ಗೆ? ಎಂದು ಕೇಳಿದರೆ ಆ ಬೆಡಗಿ ನಕ್ಕು- ‘ಗೊತ್ತಲ್ಲ ನಿಮ್ಗೂ. ಆಷಾಢದಲ್ಲಿ ಅತ್ತೆ-ಸೊಸೆ ಒಂದು ಮನೇಲಿ ಇರಬಾರ್ದಂತೆ. ಗಂಡ-ಹೆಂಡತಿ ಇರಬಹುದಂತೆ! ನಮ್ಮತ್ತೆ ಊರಲಿದ್ದಾರೆ. ಹಾಗಾಗಿ ನಮ್ಗೆ ಆಷಾಢವಿಲ್ಲ’ ಅನ್ನುತ್ತಾಳೆ. ಬೆಂಗಳೂರಿನಲ್ಲೇ ಬದುಕುವ ಜೋಡಿಗಳಂತೂ ಊರಿಗೆ ಹೋಗದೆ, ಅಕ್ಕಪಕ್ಕದ ಏರಿಯಾಗಳಲ್ಲೇ ಇರುವ ಬಂಧುಗಳ ಮನೆ ಸೇರಿಕೊಳ್ಳುತ್ತಾರೆ. ಇನ್ನು ಕೆಲವರು- ಅಯ್ಯೋ ಹೋಗ್ರಿ, ಒಂದಿಡೀ ತಿಂಗಳು ಯಾರು ಒಂಟಿಯಾಗಿ ಬದುಕುತ್ತಾರೆ? ನಮಗೆ ಆಷಾಢವೂ ಬೇಡ, ಗೀಷಾಡವೂ ಬೇಡ’ ಎಂದು ಉತ್ತರ ಕೊಟ್ಟು ದಂಗು ಬಡಿಸುತ್ತಾರೆ. ಒಂದು ವೇಳೆ ಸಂಪ್ರದಾಯದ ನೆಪದಲ್ಲಿ ಆಕೆ ತವರಿಗೆ ಹೋದರೆ, ಎರಡೇ ದಿನಗಳ ನಂತರ ಅವಳ ಪತಿರಾಯರು ಅತ್ತೆ ಮನೆಗೆ ಹೋಗಿಬಿಡುತ್ತಾರೆ. ಒಂದು ರೌಂಡ್ ಸುತ್ತಾಡಿ ಬರೋಣ ಎಂದು ಹೇಳಿ, ಅತ್ತೆಯ ವಿರೋಧಕ್ಕೆ ಗೋಲಿ ಹೊಡೆದು ಹೋಗಿಯೂಬಿಡುತ್ತಾರೆ. ಹೊರಗೆ ಬಂದ ಮೇಲೆ ಇನ್ನೇನಿದೆ? ಪರಸ್ಪರ ಭೇಟಿಯಾಗುತ್ತದೆ. ಬೇಕಿರುವುದೆಲ್ಲ ಲೂಟಿಯಾಗುತ್ತದೆ! ಆಮೇಲೆ, ಏನೂ ನಡೆದೇ ಇಲ್ಲ ಎಂಬಂತೆ ಇಬ್ಬರೂ ಹುಳ್ಳಗೆ ನಗುತ್ತಾ ಮನೆಗೆ ಬರುತ್ತಾರೆ. ಈಗಿನ ದಂಪತಿಯ ಪೈಕಿ ಹೆಚ್ಚಿನವರು ಎರಡು ವರ್ಷದವರೆಗೂ ಮಗು ಬೇಡ ಎಂದು ಮೊದಲೇ ನಿರ್ಧರಿಸುವುದರಿಂದ ಆಷಾಢದಲ್ಲಿ ಒಂದಾದರೆ ಮುಂದೆ ಕಷ್ಟ ಆಗುತ್ತೆ ಎಂಬ ಮಾತೇ ಅರ್ಥ ಕಳೆದುಕೊಂಡಿದೆ.
ಪರಿಣಾಮ ಏನಾಗಿದೆಯೆಂದರೆ, ಈಗ, ಆಷಾಢ ಎಂದರೆ ‘ಅವನಿ(ಳಿ)ಲ್ಲದೆ ಇರಬೇಕಿಲ್ಲ ಎಂಬ ಸಂಕಟವಿಲ್ಲ. ಇಬ್ಬರ ಬಳಿಯೂ ಮೊಬೈಲ್ ಇರುವುದರಿಂದ ಎಸ್ಟೀಡಿ ಫೋನ್ ಮಾಡುವ ಅಗತ್ಯವಿಲ್ಲ. ಪತ್ರ ಬರೆಯುವುದೇ ಇಬ್ಬರಿಗೂ ಮರೆತಿದೆಯಾದ್ದರಿಂದ ಅಕ್ಷರ ಪ್ರೀತಿಯ ರೋಮಾಂಚನ ಕೂಡ ಇಬ್ಬರಿಗೂ ಇಲ್ಲ. ಹೀಗೆ, ಬದಲಾಗಿ ಹೋದ ಕಾಲಮಾನವನ್ನು ಮರೆತು ಹೋಗುತ್ತಿರುವ ಸಂಪ್ರದಾಯವನ್ನು ಕಂಡಾಗ ಅನಿಸುವುದಿಷ್ಟೆ: ಕಾಲಾಯ ತಸ್ಮೈ ನಮಃ

ಎಂಟು ಜನರೂ ಒಮ್ಮೆಗೇ ಗುರಿ ಮುಟ್ಟಿದರು!

June 7, 2009

ಅದು ಜಿಲ್ಲಾ ಮಟ್ದದ ಕ್ರೀಡಾಕೂಟ. ವಿಶೇಷವೆಂದರೆ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳೆಲ್ಲ ಮಾನಸಿಕ ಅಸ್ವಸ್ಥರು, ಅಂಗವಿಕಲರು. ವಿಯ ಷಡ್ಯಂತ್ರಕ್ಕೆ ಬಲಿಯಾಗಿ ದೇಹದ ಯಾವುದೋ ಒಂದು ಅಂಗವನ್ನು ಕಳೆದುಕೊಂಡವರು.
ಅವತ್ತು ನಡೆಯಲಿದ್ದುದು ನೂರು ಮೀಟರ್ ಓಟದ ಅಂತಿಮ ಸುತ್ತಿನ ಸ್ಪರ್ಧೆ. ಕಣದಲ್ಲಿ ಉಳಿದಿದ್ದವರು ಎಂಟು ಮಂದಿ. ಆ ಪೈಕಿ ಊರುಗಾಲಿನ ಸಹಾಯದಿಂದ ಓಡುವ ಒಂದು ಹುಡುಗಿ ಕೂಡ ಇದ್ದಳು. ಮೊದಲು ಗುರಿ ತಲುಪಿದವರಿಗೆ ಕಪ್ ಮತ್ತು ಶೀಲ್ಡ್ ಕೊಡಲಾಗುವುದು ಎಂದು ಸಂಘಟಕರು ಮೇಲಿಂದ ಮೇಲೆ ಘೋಷಿಸಿದ್ದರು.
ಹೇಳಿ ಕೇಳಿ ಕಣದಲ್ಲಿರುವವರು ಅಂಗವಿಕಲರು ತಾನೆ? ಹಾಗಾಗಿ ಓಟದ ಸ್ಪರ್ಧೆಯಲ್ಲಿ ಅಂಥ ಸ್ವಾರಸ್ಯವಾಗಲಿ, ರೋಚಕ ಕ್ಷಣವಾಗಲಿ ಇರುವುದಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಆದರೂ, ವಿಕಲಾಂಗರ ಓಟ ಹೇಗಿರುತ್ತದೋ ಎಂಬ ಕುತೂಹಲದಿಂದಲೇ ಒಂದಷ್ಟು ಮಂದಿ ಸ್ಟೇಡಿಯಂಗೆ ಬಂದಿದ್ದರು. ಇಂಥ ಕುತೂಹಲಿಗಳ ಮಧ್ಯೆಯೇ ಇದ್ದ ರ್ಸ್ಪಗಳ ಪೋಷಕರು-ಆಗಿಂದಾಗ್ಗೆ ಗಟ್ಟಿ ದನಿಯಲ್ಲಿ ತಮ್ಮ ಮಕ್ಕಳ ಕಡೆಗೆ ಕೈ ಮಾಡಿ ಕೂಗುತ್ತಾ-‘ವಿಷಲ್ ಹಾಕಿದ ತಕ್ಷಣ ಓಡಿಬಿಡಬೇಕು. ಫಸ್ಟ್ ಪ್ರೈಜೇ ತಗೋಬೇಕು ಗೊತ್ತಾಯ್ತಾ?’ ಎಂದು ಉಪದೇಶದ ಮಾತು ಹೇಳುತ್ತಿದ್ದರು.
ಕಡೆಗೊಮ್ಮೆ ಓಟ ಆರಂಭವಾಗುವ ಕ್ಷಣ ಬಂದೇ ಬಂತು. ಆಯೋಜಕರ ಕಡೆಯವರೊಬ್ಬರು -‘ರೆಡೀ, ಓನ್, ಟೂ, ಥ್ರೀ’ ಎಂದು, ನಂತರದ ಕೆಲವೇ ಸೆಕೆಂಡುಗಳಲ್ಲಿ ವಿಷಲ್ ಹಾಕಿದರು.
ಅಷ್ಟೇ, ಎಂಟೂ ಮಂದಿ ಓಡಲು ಶುರು ಮಾಡಿದರು. ಆ ಪೈಕಿ ಒಬ್ಬಾಕೆಗೆ ಕೈಗಳಿರಲಿಲ್ಲ. ಇನ್ನೊಬ್ಬಳಿಗೆ ಒಂದು ಕಾಲಿರಲಿಲ್ಲ. ಮತ್ತೊಬ್ಬಳಿಗೆ ದೃಷ್ಟಿ ಭಾಗ್ಯವಿರಲಿಲ್ಲ. ಮಗದೊಬ್ಬಳಿಗೆ ಬುದ್ಧಿ ಭ್ರಮಣೆ ಎಂಬ ಹಣೆಪಟ್ಟಿ ಅಂಟಿಕೊಂಡಿತ್ತು. ಆದರೆ, ಓಡುವ ಸಂದರ್ಭದಲ್ಲಿ ಮಾತ್ರ ಈ ಮಕ್ಕಳು ತಮ್ಮ ದೈಹಿಕ ನ್ಯೂನತೆಗಳನ್ನೂ ಮರೆತು ಗುರಿ ತಲುಪುವತ್ತ ಉತ್ಸಾಹದಿಂದ ಮುನ್ನುಗ್ಗಿದ್ದರು.
ಈ ಮಕ್ಕಳ ಆಮೆ ವೇಗದ ಓಟ ಕಂಡು ಕೆಲವರಿಗೆ ನಗು, ಕೆಲವರಿಗೆ ಅಚ್ಚರಿ. ಹೀಗಿದ್ದಾಗಲೇ ಊರುಗೋಲಿನ ಸಹಾಯದಿಂದಲೇ ಓಡುತ್ತಿದ್ದ ಹುಡುಗಿಯೊಬ್ಬಳು ಆಯತಪ್ಪಿ ಬಿದ್ದುಬಿಟ್ಟಳು. ಬಿದ್ದ ರಭಸಕ್ಕೆ ಚರ್ಮ ಕಿತ್ತು ಬಂದಿತ್ತು. ನೋವಿನಿಂದ ಆಕೆ ಚೀರಿಕೊಂಡಳು. ಆ ಕ್ಷಣವೇ ಮುಂದೆ ಓಡುತ್ತಿದ್ದ ಉಳಿದ ಏಳೂ ಮಕ್ಕಳು ಹಿಂತಿರುಗಿ ನೋಡಿದರು. ಎರಡೇ ನಿಮಿಷಗಳಲ್ಲಿ ಅವರ ಕಂಗಳು ಮಾತಾಡಿಕೊಂಡವು. ಎಲ್ಲರೂ ಮತ್ತೆ ಹಿಂದಕ್ಕೆ ಓಡಲು ತೊಡಗಿ, ಗಾಯಗೊಂಡಿದ್ದಾಕೆಯ ಬಳಿ ಬಂದರು. ಆಕೆಗೆ ತಮಗೆ ತಿಳಿದಂತೆ ಚಿಕಿತ್ಸೆ ನೀಡಿದರು.
ಸ್ಟೇಡಿಯಂನಲ್ಲಿ ಇದ್ದ ಜನರೆಲ್ಲ ಓಹ್, ಹೇಳಿ ಕೇಳಿ ಇವು ಬುದ್ಧಿಭ್ರಮಿತ, ಅಂಗವಿಕಲ ಮಕ್ಕಳು ತಾನೆ? ಇವುಗಳಿಗೆ ಸ್ಪರ್ಧೆ ಇದೆ ಅನ್ನೋದೇ ಮರೆತು ಹೋಗಬಹುದು ಎಂದು ಮಾತಾಡಿಕೊಂಡರು. ಇರಲಿ, ಮುಂದೇನಾದೀತೋ ಎಂದು ಅವರೆಲ್ಲ ಬೆರಗಿನಿಂದ ನೋಡುತ್ತಿದ್ದಾಗಲೇ ಗಾಯಗೊಂಡಿದ್ದ ಹುಡುಗಿಯನ್ನು ನಿಲ್ಲಿಸಿ ಎಲ್ಲರೂ ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು,ಒಂದೇ ವೇಗದಲ್ಲಿ ಓಡುತ್ತಾ ಬಂದು ಎಂಟು ಮಂದಿಯೂ ಒಟ್ಟಿಗೇ ಗುರಿ ತಲುಪಿದರು!
ಆ ಕ್ಷಣದಲ್ಲಿ ಆ ಮಕ್ಕಳ ಹೃದಯ ಮಾತಾಡಿತ್ತು! ಈ ಅಪರೂಪದ ದೃಶ್ಯ ನೋಡಿದ ಆ ಮಕ್ಕಳ ಪೋಷಕರು ಬಿಕ್ಕುತ್ತಾ ಓಡಿಬಂದು ಆ ಮಕ್ಕಳನ್ನು ಅಪ್ಪಿಕೊಂಡರು. ಅಂಗವಿಕಲ ಮಕ್ಕಳು ಪ್ರದರ್ಶಿಸಿದ ‘ದೊಡ್ಡ ಗುಣ’ ಕಂಡು ಮೂಕರಾದ ಅಕಾರಿಗಳು ಎಲ್ಲ ಮಕ್ಕಳಿಗೂ ಪ್ರತ್ಯೇಕವಾಗಿಯೇ ಒಂದೊಂದು ಕಪ್ ನೀಡಿ ತಾವೂ ಕಣ್ಣೊರಸಿಕೊಂಡರು!

ಮನುಷ್ಯ ಹೇಗೆ ಬದುಕಬೇಕು

June 7, 2009

ಕೆಲವರಿರುತ್ತಾರೆ: ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ‘ಎನಗಿಂತ ಕಿರಿಯರಿಲ್ಲ’ ಎಂದು ಹೇಳುತ್ತಲೇ ಇರುತ್ತಾರೆ. ಹಾಗೆಯೇ ಬದುಕುತ್ತಾರೆ. ತಮಗೆ ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಾ, ನನ್ನ ಬೆಳವಣಿಗೆಯ ಹಿಂದೆ ಇಂಥವರ ಕರುಣೆಯ ಕೈ ಕೆಲಸ ಮಾಡಿದೆ ಎಂದು ಹೇಳುವ ಮೂಲಕ ದೊಡ್ಡತನ ಮೆರೆಯುತ್ತಾರೆ. ಅಂಥವರ ಪೈಕಿ ಶಿವರಾಮ ಕಾರಂತರು ಪ್ರಮುಖರು.
ಕಾರಂತರು ತಮ್ಮ ‘ಚೋಮನ ದುಡಿ’ ಕಾದಂಬರಿಯನ್ನು ಅರ್ಪಿಸಿದ್ದು ದೇವಣ್ಣ ಸುಬ್ರಾಯ ಪೈ ಅವರಿಗೆ. ಪೈ ಅವರಿಗೇ ಕಾದಂಬರಿ ಅರ್ಪಿಸಿದ್ದೇಕೆ ಎಂಬುದಕ್ಕೆ ಕಾರಂತರು ಸ್ಪಷ್ಟನೆಯನ್ನೂ ಕೊಡುತ್ತಾರೆ. ಅದು ಹೀಗೆ:
ಈ ಗ್ರಂಥದ ಅರ್ಪಣೆಯ ವಿಚಾರ- ಇದನ್ನು ನನ್ನೊಬ್ಬ ಮಿತ್ರರಾದ ಕುಂದಾಪುರದ ದೇವಣ್ಣ ಸುಬ್ರಾಯ ಪೈಗಳಿಗೆ ಅರ್ಪಿಸಿದ್ದೇನೆ. ಅವರೇನು ದೊಡ್ಡ ಮನುಷ್ಯರ ವರ್ಗಕ್ಕೆ ಸೇರಿದವರಲ್ಲ. ಬಡ ಗುಮಾಸ್ತರೊಬ್ಬರು. ಆದರೆ ಅವರಿಗೆ ನನ್ನಿಂದ ಸಲ್ಲುವ ಪ್ರೇಮದ ಋಣ ಬಹಳವಿದೆ. ಎಷ್ಟೋ ಸಮಯ, ನಾನು ಅವರನ್ನು ಮರೆಯುವ ತಪ್ಪನ್ನೂ ಮಾಡಿದ್ದೇನೆ. ಈಗ ಅವರಿಗೆ ಈ ವಿಶ್ವಾಸದ ಕಾಣಿಕೆಯನ್ನು ಅರ್ಪಿಸುತ್ತಿದ್ದೇನೆ.
ನಾನು ಚಿಕ್ಕವನಾಗಿರುವಾಗ (ಈಗ ದೊಡ್ಡವನಾಗಿಲ್ಲ) ಅವರ ಬೆಂಬಲವಿಲ್ಲದಿದ್ದರೆ ನನಗೆ ಸಾಹಿತ್ಯ ಕ್ಷೇತ್ರದಲ್ಲಿ ಹಾರುವುದು ಅಸಾಧ್ಯದ ಮಾತಾಗಿತ್ತು. ತಮ್ಮ ಕಷ್ಟಾರ್ಜಿತ ಧನದಿಂದ ಅವರು ನನ್ನ ಹಿಂದಿನ ಸಾಹಸ ‘ವಸಂತ’ ಪತ್ರಿಕೆಯ ಜನ್ಮಕ್ಕೆ ಕಾರಣರಾದರು. ಅದರಿಂದಾಗಿ, ನನ್ನ ಮೊದಲಿನ ಕಾದಂಬರಿ ‘ವಿಚಿತ್ರ ಕೂಟ’ವು ಬೆಳಕನ್ನು ಕಂಡಿತು. ನನ್ನ ಅಂದಿನ ಕೆಲಸಗಳೆಲ್ಲ ತೀರ ತೊದಲು ನುಡಿಗಳಂತಿವೆ. ಅವುಗಳನ್ನು ಆಡಲು, ತಮ್ಮ ಅಪಾರ ತ್ಯಾಗದಿಂದ ಅವರೇ ವಾತಾವರಣ ಕಲ್ಪಿಸಿಕೊಟ್ಟರು. ನಾನು ಯಾವ ಸ್ಥಿತಿಯಲ್ಲಿದ್ದರೂ ಅವರ ಸಹಾಯದ ನೀರೇ, ಮುಂದಿನ ಬೆಳೆಗೆ ಕಾರಣವಾಯಿತು ಎಂಬುದನ್ನು ಮರೆಯಲಾರೆ. ಅವರು ಸಾಹಿತ್ಯ ಪ್ರೇಮಿಗಳೂ, ಹರಿಜನರ ಮೇಲೆ ಕರುಣೆಯುಳ್ಳವರೂ ಅಹುದು. ಆದುದರಿಂದ ಇದೇ ಉಚಿತ ಕಾಣಿಕೆಯೆಂದು ಅವರಿಗೆ ಅರ್ಪಿಸುತ್ತಿದ್ದೇನೆ.
****
ಈಗ ಹೇಳಿ, ಮನುಷ್ಯ ಹೇಗೆ ಬದುಕಬೇಕು ಎಂಬುದಕ್ಕೆ ಕಾರಂತರ ಈ ಬರಹವೇ ಉತ್ತರವಾಗುತ್ತದೆ. ಅಲ್ಲವೆ?

ಪಪ್ಪಂಗೆ ಒಮ್ಮೆಶಾಕ್ ಕೊಟ್ರೆ ಹ್ಯಾಗೆ?

June 7, 2009

ಮಕ್ಕಳು ಎಷ್ಟೊಂದು ಮುಗ್ಧವಾಗಿ ಯೋಚಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಈ ಪುಟ್ಟ ಕಥೆ. ಅದೊಮ್ಮೆ ಮಗುವೊಂದು ತಾಯಿಯನ್ನು ಕೇಳಿತು: ‘ಅಮ್ಮ ಅಮ್ಮ, ನಂಗೆ ಆಟ ಆಡೋಕೆ ಜತೆಗೊಂದು ಪಾಪು ಬೇಕು. ನಮ್ಮ ಮನೇಗೆ ಇನ್ನೊಂದು ಪಾಪು ತರೋಣ್ವ?’
ಮಗುವಿನ ಈ ಮುದ್ದು ಮಾತು ಕೇಳಿ ಒಳಗೊಳಗೇ ನಾಚಿಕೊಂಡ ಅಮ್ಮ ಹೇಳಿದಳು: ‘ನೋಡು ಕಂದಾ, ನಿಮ್ಮ ಡ್ಯಾಡಿ ಈಗ ಫಾರಿನ್ಗೆ ಹೋಗಿದ್ದಾರೆ. ಅವರು ವಾಪಸ್ ಬಂದ ಮೇಲೆ, ನೀನು ಕೇಳ್ತಾ ಇದೀಯಲ್ಲ ಹೊಸ ಪಾಪು; ಆ ಬಗ್ಗೆ ಮಾತಾಡ್ತೀನಿ. ನಂತರ ಸ್ವಲ್ಪ ದಿನ ಆದ ಮೇಲೆ ನಮ್ಮ ಮನೆಗೆ ಹೊಸ ಪಾಪು ಬರುತ್ತೆ. ಸರೀನಾ?’
ಈ ಕಂದ ತಕ್ಷಣವೇ ಅದೇ ಮುದ್ ಮುದ್ದು ಭಾಷೆಯಲ್ಲಿ ಹೀಗೆಂದಿತು: ‘ಪಪ್ಪ ಬರೋ ತನಕ ಕಾಯುವುದರ ಬದಲು, ಅವರು ಬರೋಕಿಂತ ಮೊದಲೇ ನೀನೇ ಒಂದು ಪಾಪು ತಂದ್ಕೋಬಿಡಮ್ಮ. ಆಗ ನಾವು ಪಪ್ಪ ಬಂದ ತಕ್ಷಣ ಅವರಿಗೆ ಹೊಸ ಪಾಪೂನ ತೋರಿಸಿ, ಶಾಕ್ ಕೊಡಬಹುದು!’
***
ಈ ಮಾತನ್ನು ಮಗು ಹೇಳಿದ್ದಕ್ಕೆ ಅದು ತಮಾಷೆ. ಅದೇ ಮಾತನ್ನು ಸ್ವಲ್ಪ ಅದಲು ಬದಲು ಮಾಡಿ ದೊಡ್ಡವರು ಹೇಳಿದ್ದರೆ… ಹೇಳಿದ್ದರೆ…?!

ಮಹಾರಾಜರು ಕಾಲಿಟ್ಟ ತಕ್ಷಣ ದೀಪಗಳು ಝಗ್ಗೆಂದು…

June 7, 2009

ಚಿಕ್ಕಂದಿನಲ್ಲಿ ಅಪ್ಪ-ಅಮ್ಮನೋ; ಅಜ್ಜಿ-ತಾತನೋ ಅಥವಾ ಗೆಳೆಯನೋ ಹೇಳಿದ್ದ ಕೆಲವು ಕತೆಗಳು ಮೇಲಿಂದ ಮೇಲೆ ಬಿಟ್ಟೂ ಬಿಡದೆ ಕಾಡುತ್ತವೆ. ಹೇಳಿಕೇಳಿ ಕಥೆಗಳಲ್ಲವೆ? ಅದೇ ಕಾರಣದಿಂದ ಅವುಗಳಲ್ಲಿ ಸತ್ಯಾಂಶ ಇರುವುದಿಲ್ಲ. ಆದರೆ, ಕತೆ ಹೇಳುವವರು ತಾವು ಪ್ರತ್ಯಕ್ಷ ಕಂಡದ್ದೇನೋ ಎಂಬಂತೆ ಆ ಘಟನೆಯನ್ನು ಬಣ್ಣಿಸಿರುತ್ತಾರೆ. ಪರಿಣಾಮ, ಕಥೆ ಕೇಳಿದವರು ಕೂಡ ಅದೆಷ್ಟೋ ದಿನಗಳವರೆಗೆ ಅದು ನಿಜವೆಂದೇ ನಂಬಿರುತ್ತಾರೆ.
ಅಂಥದೊಂದು ಪ್ರಸಂಗ ಇಲ್ಲಿದೆ ಕೇಳಿ: ಇದು ಚಂದ್ರಶೇಖರ ಆಲೂರು ಅವರ ‘ನಾನು ಒಲಿದಂತೆ ಹಾಡುವೆ’ ಪ್ರಬಂಧ ಸಂಕಲನದಿಂದ ಎತ್ತಿಕೊಂಡದ್ದು. ‘ಮೈಸೂರು ಅರಮನೆಯ ಅಷ್ಟೂ ದೀಪಗಳು ಸಂಜೆಯ ವೇಳೆ, ಏಕಕಾಲಕ್ಕೆ ಝಗ್ಗನೆ ಹೊತ್ತಿಕೊಳ್ಳುತ್ತವಲ್ಲ; ಅದು ಹೇಗೆ? ಎಂಬ ಪ್ರಶ್ನೆಗೆ ಆಲೂರರ ಗೆಳೆಯನೊಬ್ಬ ಹೇಳಿದನಂತೆ: ಮೈಸೂರು ಅರಮನೆಯಲ್ಲಿ ಅದೇನೋ ಒಂದು ವಿಶೇಷ ತಂತ್ರ ಜ್ಞಾನ ಬಳಸಿದ್ದಾರಂತೆ. ಅದೇನಪ್ಪ ಅಂದ್ರೆ ದಿನಾಲೂ ಸಂಜೆ ಮಹಾರಾಜರು ಆಸ್ಥಾನಕ್ಕೆ ಬಂದು-ಸಿಂಹಾಸನದ ಮೇಲೆ ಬಲಗಾಲು ಇಟ್ಟ ತಕ್ಷಣ ಮೈಸೂರಾದಿ ಮೈಸೂರಿನ ದೀಪಗಳೆಲ್ಲ ಝಗ್ಗನೆ ಹೊತ್ತಿಕೊಳ್ತವಂತೆ!’
ಈ ಕಥೆಯನ್ನು ನಿಜವೆಂದೇ ತುಂಬಾ ದಿನಗಳ ಕಾಲ ನಂಬಿದ್ದ ಆಲೂರು ಮತ್ತು ಮಿತ್ರರು, ಆಕಸ್ಮಿಕವಾಗಿ ಮೈಸೂರಿಗೆ ಹೋದಾಗ, ಸಂಜೆಯ ವೇಳೆ ಅವರೆಲ್ಲ ನೋಡನೋಡುತ್ತಿದ್ದಂತೆಯೇ ಅರಮನೆಯ ದೀಪಗಳು ಝಗ್ಗನೆ ಹೊತ್ತಿಕೊಂಡರೆ- ‘ಓಹ್, ಈಗ ಮಹಾರಾಜರು ಸಿಂಹಾಸನದ ಮೇಲೆ ಬಲಗಾಲು ಇಟ್ಟಿದಾರೆ ಅಂತಾಯ್ತು!’ ಅನ್ನುತ್ತಿದ್ದಂತೆ.
***
ಈಗ ಸುಮ್ಮನೇ ಒಮ್ಮೆ ಯೋಚಿಸಿ. ಮಹಾರಾಜರು ಸಿಂಹಾಸನ ಮೆಟ್ಟಿದ ತಕ್ಷಣ ದೀಪಗಳು ಹೊತ್ತಿಕೊಳ್ಳುವುದೇ ನಿಜವಾಗಿದ್ದರೆ, ಆ ದೀಪಗಳನ್ನು ಆರಿಸುವುದಕ್ಕೆ ಕೂಡ ಇನ್ನೊಂದು ಟೆಕ್ನಿಕ್ ಬಳಸಬೇಕಾಗಿತ್ತು! ಜತೆಗೆ ಒಂದು ವೇಳೆ ಅವರಿಗೆ ಜ್ವರ ಗಿರ ಬಂದು ಎರಡು ಮೂರು ದಿನ ಹಾಸಿಗೆ ಹಿಡಿದಿದ್ದರೆ?
ಉಹುಂ, ಆಗ ಇಂಥ ತುಂಟ ಯೋಚನೆಗಳು ಬರುತ್ತಿರಲಿಲ್ಲ. ಕಥೆಗಳು ಕೇಳಿದಷ್ಟೂ ಖುಷಿಕೊಡುತ್ತಿದ್ದವು. ಹೀಗೇ…

ಮತ್ತೆ ಮಳೆ ಹೊಯುತ್ತಿದೆ, ಎಲ್ಲ ನೆನೆಪಾಗುತ್ತಿದೆ…

June 7, 2009

male

ಮಳೆಗಾಲ ಶುರುವಾಗಿದೆ!
‘ಮಳೆ’ಯ ನೆನಪಾದರೆ ಸಾಕು-ತಂಗಾಳಿಯಂಥ ಆಹ್ಲಾದವೊಂದು ಮೈಮನವನ್ನು ಆವರಿಸಿಕೊಳ್ಳುತ್ತದೆ. ಅದರಲ್ಲೂ ದಶಕಗಳ ಹಿಂದೆ ಹಳ್ಳಿಗಳಲ್ಲೇ ತಮ್ಮ ಬಾಲ್ಯ ಕಳೆದವರಿಗಂತೂ-ಮಳೆ ಅಂದಾಕ್ಷಣ ಊರು, ಒಂದಿಡೀ ವಾರ ಕೆಂಪು ನೀರಿನಿಂದಲೇ ತುಂಬಿರುತ್ತಿದ್ದ ಅಲ್ಲಿನ ಕೆರೆ ನೆನಪಾಗುತ್ತದೆ. ಹಾಗೆಯೇ, ಹೊರಗೆ ಜುರ್ರೋ ಎಂದು ಮಳೆ ಸುರಿಯುತ್ತಿದ್ದರೆ- ಇದ್ಯಾಕೋ ಛಳಿಛಳಿ ಆಗ್ತಾ ಇದೆಯಲ್ಲ ಎನ್ನುತ್ತಲೇ ಬೀಡಿ ಹಚ್ಚಿಕೊಂಡು ಬೆಚ್ಚಗಾಗುತ್ತಿದ್ದ ಅಪ್ಪ/ಚಿಕ್ಕಪ್ಪನ ಚಿತ್ರ ಕಣ್ಮುಂದೆ ಬರುತ್ತದೆ ಮತ್ತು ಇದೆಲ್ಲಕ್ಕಿಂತ ಮುಖ್ಯವಾಗಿ ಮಳೆಗೆ ಸಂಬಂಸಿದಂತೆ, ಅಪ್ಪ-ಅಮ್ಮ, ತಾತ-ಅಜ್ಜಿಯವರು ಹೇಳಿದ್ದ ‘ಚಂದಮಾಮ’ದ ಕಥೆಗಳಷ್ಟೇ ಮಜದಿಂದ ಕೂಡಿದ್ದ ಕಥೆಗಳು ನೆನಪಾಗುತ್ತಿವೆ. ಅಂಥ ಒಂದೆರಡು ಕತೆಗಳಿವೆ ಇಲ್ಲಿ; ಅವುಗಳನ್ನು ಈ ಹಿಂದೆ ಕೇಳಿರದಿದ್ದರೆ- ಈಗ ಓದಿ ಖುಷಿಪಡಿ. ಈಗಾಗಲೇ ಕೇಳಿದ್ದರೆ-ಬಾಲ್ಯವನ್ನು ಮತ್ತೆ ನೆನಪು ಮಾಡಿಕೊಂಡು ಇನ್ನಷ್ಟು ಖುಷಿಪಡಿ!
ತುಂಬ ಸಂದರ್ಭದಲ್ಲಿ ಈಗಿನಂತೆಯೇ, ಹೊತ್ತು ಗೊತ್ತಿಲ್ಲದೆ ಮಳೆ ಬರುತ್ತಿತ್ತು. ಆಗೆಲ್ಲ ಅವ್ವ ನಡುಮನೆಯಲ್ಲಿ ಕುಳಿತು, ಅಲ್ಲಲ್ಲಿ ಮಳೆ ಸೋರುತ್ತಿದ್ದ ಜಾಗಕ್ಕೆ ಪಾತ್ರಗಳನ್ನಿಟ್ಟು ಹೇಳುತ್ತಿದ್ದಳು: ‘ತುಂಬ ವರ್ಷಗಳ ಹಿಂದೆ ಆಕಾಶ, ತುಂಬ ಹತ್ತಿರದಲ್ಲೇ, ಅಂದರೆ ತೆಂಗಿನಮರದ ಎತ್ತರದಲ್ಲೇ ಇತ್ತಂತೆ. ಆ ದಿನಗಳಲ್ಲಿ ಮಳೆ ಬೇಕು ಅನ್ನಿಸಿದರೆ, ಜನ ದೊಡ್ಡದೊಂದು ಕೋಲು ತಯಾರಿಸಿ, ಅದನ್ನು ಮೋಡಕ್ಕೆ ಚುಚ್ಚಿ ಮಳೆ ಬರಿಸಿಕೊಳ್ತಾ ಇದ್ರಂತೆ! (?!) ಒಂದು ಸಂದರ್ಭದಲ್ಲಿ ಘಟವಾಣಿ ಹೆಂಗಸೊಬ್ಬಳು ಭತ್ತ ಕುಟ್ಟುತ್ತಿದ್ದಳಂತೆ. ಆ ಸಂದರ್ಭದಲ್ಲಿ ಒಮ್ಮೆ ಅವಳ ಒನಕೆ ಮೇಲಿಂದ ಮೇಲೆ ಮೋಡಕ್ಕೆ ತಾಕಿತಂತೆ. ಇದರಿಂದ ಸಿಟ್ಟಿಗೆದ್ದ ಆಕೆ- ‘ನಿನ್ ಮನೆ ಹಾಳಾಗ. ಯಾಕೆ ಇಲ್ಲಿದ್ದೀಯ? ಹೋಗ್ಬಾರ್ದಾ ಮೇಲಕ್ಕೆ’ ಅಂದಳಂತೆ! ತಕ್ಷಣವೇ ಮೋಡ- ಮುನಿಸಿಕೊಂಡು ಮೇಲೆ ಮೇಲೆ ಹೋಗ್ತಾನೇ ಇತ್ತಂತೆ. ಅದೇ ವೇಳೆಗೆ ಆ ದಾರಿಯಲ್ಲಿ ಬರುತ್ತಿದ್ದ ದಾಸಯ್ಯನೊಬ್ಬ- ‘ಅಯ್ಯಯ್ಯೋ, ಒಬ್ಬನೇ ಹೋಗ್ತಾ ಇದೀಯಲ್ಲ? ನಿಂತ್ಕೊ ನಿಂತ್ಕೊ, ನಾನೂ ಬರ್ತೀನಿ ಜತೆಗೆ’ ಅಂದನಂತೆ. ತಕ್ಷಣವೇ ಮೋಡ ಅಲ್ಲಿಯೇ ನಿಂತುಕೊಂಡಿತಂತೆ. ಅವತ್ತಿಂದ ಆಕಾಶ ಅದೇ ಎತ್ತರದಲ್ಲಿದೆ! ಇದು, ಅಮ್ಮಂದಿರು ಹೇಳುತ್ತಿದ್ದ ಕತೆ.
ಈಗ ತೆಂಗಿನ ಮರದ ಎತ್ತರದಲ್ಲೇ ಆಕಾಶವಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ- ಬೆರಗೂ, ಭಯವೂ, ವಿಸ್ಮಯವೂ ಒಮ್ಮೆಗೇ ಆಗುತ್ತದೆ. ಆದರೆ, ಬಾಲ್ಯದಲ್ಲಿ ಹಾಗೆಂದೂ ಅನ್ನಿಸಲೇ ಇಲ್ಲ!
ಹೀಗೆ, ಅಮ್ಮನ ಕಥೆ ಸಾಗುತ್ತಿದ್ದ ಸಂದರ್ಭದಲ್ಲೇ ಗೋಡೆ, ಕಿಟಕಿ, ಮಾಳಿಗೆಯ ಕಿಂಡಿಯ ಮಧ್ಯೆ ಫಳಫಳಿಸುವ ಮಿಂಚು ಕಾಣಿಸುತ್ತಿತ್ತು. ಹಿಂದೆಯೇ ಭೂಮಂಡಲವೇ ನಡುಗಿ ಹೋಗಬೇಕು- ಅಂಥ ದೊಂದು ಭಾರೀ ಸದ್ದಿನ ಸಿಡಿಲು ಮೊರೆಯು ತ್ತಿತ್ತು. ಆಗ ಅಮ್ಮ ಹೇಳುತ್ತಿದ್ದಳು: ‘ಅರ್ಜುನ ಬಾಣ ಬಿಡ್ತಾ ಇದಾನೆ. ಆ ಬಾಣದ ಸದ್ದೇ ಈ ಸಿಡಿಲು. ಅವನು ಬಾಣ ಬಿಡಲು ಎದ್ದು ನಿಂತ ತಕ್ಷಣ ಅವನ ತಾಯಿ ಕುಂತಿ ದೇವಿ- ‘ಹೆಂಗಸರು, ಮಕ್ಕಳು ಇರ್ತಾರೆ ಮಗೂ. ದೊಡ್ಡ ಸದ್ದು ಮಾಡದಂಥ ಬಾಣ ಬಿಡು’ ಎಂದು ಬುದ್ಧಿಮಾತು ಹೇಳ್ತಾಳೆ. ಆದ್ರೂ ಅರ್ಜುನ ಕೇಳೋದಿಲ್ಲ. ಅವನು ಬಿಲ್ಲಿನ ದಾರವನ್ನು ಎಳೀತಾನಲ್ಲ? ಆಗ ಉಂಟಾ ಗುವ ಸದ್ದೇ ಗುಡುಗು. ಬಾಣ ಬಿಡ್ತಾನೆ ನೋಡಿ- ಅದು ಸಿಡಿಲು!’ (ಈಗ ಯೋಚಿಸಿ ದರೆ- ಅಂಥ ಬಿರುಮಳೆಯ ಮಧ್ಯೆಯೇ ಬಾಣ ಬಿಡುವ ಹೀಗ ಬಾಣ ಬಿಟ್ಟು ಮರವನ್ನೋ, ಮನುಷ್ಯನನ್ನೋ ಸುಡುವ ಅರ್ಜೆಂಟು ಅರ್ಜುನನಿಗಾದರೂ ಏನಿತ್ತು ಅನಿಸುತ್ತದೆ.)
ಸಿಡಿಲಿನ ಕಥೆ ಹೇಳುತ್ತಲೇ ತಕ್ಷಣವೇ ಕುಡುಗೋಲನ್ನೋ, ಕತ್ತಿಯನ್ನೋ ಬಾಗಿಲಿನ ಮುಂದೆ ಎಸೆಯುವಂತೆ ಹೇಳುತ್ತಿದ್ದಳು ಅಮ್ಮ. ಅದು ಸಿಡಿಲಿನಿಂದ ಮನೆಯನ್ನು ಸಂರಕ್ಷಿಸಿಕೊಳ್ಳಲು ಇದ್ದ ಉಪಾಯ. ಮಕ್ಕಳು ತಕ್ಷಣವೇ ಮನೆಯ ಮುಂದೊಂದು, ಹಿಂದೊಂದು ಕುಡುಗೋಲನ್ನು ಎಸೆದು ಬಂದು, ಕಬ್ಬಿಣದ ವಸ್ತುವಿಗೆ ಸಿಡಿಲು ಹೊಡೆಯಲ್ಲ ಅನ್ನೋದು ನಿಜವೇನಮ್ಮ ಎಂದು ಮತ್ತೆ ಮತ್ತೆ ಅನುಮಾನದಿಂದ ಕೇಳಿದರೆ- ‘ಶ್ರವಣ ಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಸಿಡಿಲು ಹೊಡೆಯದಿರಲಿ ಎಂದು ನೆತ್ತಿಯ ಮೇಲೆ ಸಲಾಕೆ ಹೊಡೆದಿದ್ದಾರೆ ಗೊತ್ತಾ?’ ಅನ್ನುತ್ತಿದ್ದಳು ಅಮ್ಮ!
ಮಳೆಗಾಲದ ಇನ್ನೊಂದು ಮಧುರ ನೆನಪೆಂದರೆ-ಕಪ್ಪೆಗಳ ವಟರ್ವಟರ್ ಸದ್ದು! ಮಳೆ ಹನಿಯುವ ಕ್ಷಣದವರೆಗೂ ಕಣ್ಣಿಗೆ ಬೀಳದಿದ್ದ ಕಪ್ಪೆಗಳು, ಮಳೆ ಬಿದ್ದ ಅರ್ಧಗಂಟೆಯೊಳಗೆ ಮನೆಯ ಆಚೀಚೆಯಿದ್ದ ಹೊಂಡಗಳಲ್ಲಿ ತುಂಬಿಕೊಂಡು ‘ಭಜನೆ’ ಆರಂಭಿಸುತ್ತಿದ್ದವು! ಅದಕ್ಕೆ ಹಿನ್ನೆಲೆಯಾಗಿಯೂ ಒಂದು ಕತೆ ಇರುತ್ತಿತ್ತು. ಅದು ಹೀಗೆ: ‘ಒಂದೆರಡಲ್ಲ, ಮೂರು ತಿಂಗಳಿಗೂ ಹೆಚ್ಚು ಅವಯ ಬೇಸಿಗೆಯ ಬಿಸಿಲಿಂದ ಕಂಗಾಲಾದ ಕಪ್ಪೆಗಳು ಮೇಲಿಂದ ಮೇಲೆ ಮಳೆಗಾಗಿ ಪ್ರಾರ್ಥಿಸುತ್ತವಂತೆ. ಕಡೆಗೊಮ್ಮೆ ಮಳೆಬಿದ್ದು ಹೊಂಡಗಳೆಲ್ಲ ತುಂಬಿಕೊಂಡಾಗ ಅದರೊಳಗೆ ಖುಷಿಯಿಂದ ಈಜು ಹೊಡೆದು, ಮುಗಿಲಿಂದ ಬಿದ್ದ ಹೊಸನೀರು ಕುಡಿದು, ಕಡೆಗೊಮ್ಮೆ ಮಳೆರಾಯನನ್ನು ಸ್ತುತಿಸಲು ಅಹೋರಾತ್ರಿ ‘ಸಂಗೀತ ಕಾರ್ಯಕ್ರಮ’ ನಡೆಸುತ್ತವಂತೆ! ಅದರ ಪರಿಣಾಮವೇ ಇಡೀ ರಾತ್ರಿ ವಟರ್ ವಟರ್!!!
* * *
ಒಮ್ಮೊಮ್ಮೆ ಏನಾಗುತ್ತಿತ್ತೆಂದರೆ, ಬೆಳ್ಳಂಬೆಳಗಿನಿಂದಲೇ ಸೋನೆ ಮಳೆ ಶುರುವಾಗು ತ್ತಿತ್ತು. ಅದರ ಮಧ್ಯೆಯೇ ಶಾಲೆ ತಲುಪಿಕೊಂಡರೆ- ಮಳೆಯ ಕಾರಣಕ್ಕೆ ದೂರದ ಊರಿಂದ ಬರುತ್ತಿದ್ದ ಶಿಕ್ಷಕರೇ ‘ಚಕ್ಕರ್’ ಹೊಡೆದಿ ರುತ್ತಿದ್ದರು. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಮೇಸ್ಟ್ರು ಬರುವುದು ಬರೀ ಅರ್ಧಗಂಟೆ ತಡವಾದರೆ, ಓಹ್ ಮೇಸ್ಟ್ರು ಬರುವುದಿಲ್ಲ ಎಂದು ಅಂದಾಜು ಮಾಡಿಕೊಂಡು ಹುಡುಗರೇ ಮನೆಗೆ ಪೇರಿ ಕೇಳುತ್ತಿದ್ದರು! ಹಾಗೆ ಮನೆಗೆ ಹೋಗುವ ಹಾದಿಯಲ್ಲೇ ಆಗಷ್ಟೇ ಹರಿದು ಬರುತ್ತಿದ್ದ ಮಳೆ ನೀರಿನಲ್ಲಿ ಎಕ್ಸ್ರ್ಸೈಜ್ ಹಾಳೆಯಿಂದ ಮಾಡಿದ ಕಾಗದದ ದೋಣಿ ಮಾಡಿ ತೇಲಿ ಬಿಟ್ಟು; ಮಳೆ ನೀರಿನ ಕೊಚ್ಚೆಯಲ್ಲಿ ಬೇಕೆಂದೇ ಕಾಲು ಮುಳುಗಿಸಿ, ಆ ಸಂದರ್ಭದಲ್ಲೇ ಮೈಮೇಲೆ ಕೆಸರು ಹಾರಿಸಿದ ಸಹಪಾಠಿಯ ಮೇಲೆ ಮನೆಯಲ್ಲಿ ಒಮ್ಮೆ, ಶಾಲೆಯಲ್ಲಿ ಮತ್ತೊಮ್ಮೆ ಚಾಡಿ ಹೇಳಿ, ಅದೇ ಕಾರಣಕ್ಕೆ ಗೆಳೆಯ/ಗೆಳತಿಯೊಂದಿಗೆ ಕೋಳಿ ಜಗಳವನ್ನೂ ಆಡಿ…
ಹೌದಲ್ಲವಾ? ದಶಕಗಳ ಹಿಂದೆ, ಶಾಲೆಗೆ ಹೋಗುತ್ತಿದ್ದ ಯಾರೊಬ್ಬರ ಬಳಿಯೂ ಛತ್ರಿ ಇರುತ್ತಿರಲಿಲ್ಲ. ಹಾಗಾಗಿ ಮಳೆ ಬಂದ ತಕ್ಷಣ ಎಲ್ಲರೂ ಪುಸ್ತಕಗಳನ್ನೇ ತಲೆಯ ಮೇಲಿಟ್ಟುಕೊಂಡು ಮನೆಯ ಕಡೆಗೆ ಅಥವಾ ಶಾಲೆಯ ಕಡೆಗೆ ಪೇರಿ ಕೇಳುತ್ತಿದ್ದರು. ಒಂದು ವೇಳೆ ಬಿರುಮಳೆಯ ಕಾರಣದಿಂದ ಪುಸ್ತಕವೆಲ್ಲ ತೊಯ್ದು ತೊಪ್ಪೆಯಾದರೂ ಅಂಥ ಸಂಕಟವೇನೂ ಯಾರಿಗೂ ಆಗುತ್ತಿರಲಿಲ್ಲ. ಮಕ್ಕಳು ಮನೆ ತಲುಪಿದ ಮರುಗಳಿಗೆಯೇ ರಪರಪನೆ ಸದ್ದು ಮಾಡುತ್ತಾ ಆಲಿಕಲ್ಲು ಬಿದ್ದರೆ, ಅದ್ಯಾವ ಮಾಯದಲ್ಲೋ ಬೀದಿಗೆ ಹೋಗಿ ಐದಾರು ಆಲಿಕಲ್ಲು ತಂದು- ಬೇಗ ‘ಆಆಆಆ ….’ ಅನ್ನು. ಆಲಿಕಲ್ಲು ನುಂಗು. ಇದು ತಿಂದ್ರೆ ಹಲ್ಲುಗಟ್ಟಿಯಾಗ್ತವೆ ಅನ್ನುತ್ತಿದ್ದಳು ಅವ್ವ.
ಹೀಗೆ ಮಳೆ ಬಂದ ಸಂದರ್ಭದಲ್ಲಿ ಒಂಟಿಯಾಗಿ ಹಳ್ಳವನ್ನೂ ದಾಟಬೇಕಾಗಿ ಬಂದರೆ, ತಕ್ಷಣವೇ – ‘ಅಲ್ಲಿ ದೆವ್ವಗಳಿವೆಯಂತೆ’ ಎಂದು ಯಾರೋ, ಎಂದೋ ಹೇಳಿದ್ದ ಮಾತು ನೆನಪಾಗುತ್ತಿತ್ತು. ಮರುಕ್ಷಣವೇ ಆ ಮಳೆಯ ಮಧ್ಯೆಯೂ ಮೈ ಬೆವರುತ್ತಿತ್ತು. ತಕ್ಷಣ ಮನೆದೇವರ ಹೆಸರನ್ನು ಜಪಿಸುತ್ತ ಜೈ ಹನುಮಾನ್, ಜೈರಾಮ್, ಜೈ ಚಾಮುಂಡೇ ಶ್ವರಿ… ಎಂದೆಲ್ಲ ಹೇಳಿಕೊಂಡರೂ ‘ದೆವ್ವ’ದ ಭಯ ಹೋಗುತ್ತಲೇ ಇರಲಿಲ್ಲ!
ಮತ್ತೆ ಕೆಲವೊಂದು ಸಂದರ್ಭಗಳಲ್ಲಿ ಸ್ಕೂಲಿಂದ ಬಂದು ಮೇಯಲು ಹೋಗಿರುತ್ತಿದ್ದ ಜಾನುವಾರುಗಳನ್ನು ಮನೆಗೆ ಹೊಡೆದುಕೊಂಡು ಬರಲು ಹೋದರೆ, ಆ ವೇಳೆಗೇ ಮಳೆ ಬಂದು ಬಿಡುತ್ತಿತ್ತು. ಮಳೆಗೆ ಬೆದರಿ ಕುರಿ, ಮೇಕೆ, ದನಗಳು ಮನೆಯ ಕಡೆಗೆ ಪೇರಿ ಕಿತ್ತರೆ, ಎಮ್ಮೆಗಳು ಸೀದಾ ಹೋಗಿ ಕೆರೆಯ ನೀರೊಳಗೆ ಮಲಗಿಬಿಡುತ್ತಿದ್ದವು! ಕೆರೆಯ ಈಚೆ ದಡದಿಂದ ಅದೆಷ್ಟೇ ಗದರಿಸಿದರೂ, ಅದೆಷ್ಟೇ ಕಲ್ಲು ಹೊಡೆದರೂ ಅವು ಏಳುತ್ತಲೇ ಇರಲಿಲ್ಲ!
ಇನ್ನು ಕೆಲ ಬಾರಿ ಆ ಭೋರ್ಗರೆವ ಮಳೆಯ ಮಧ್ಯೆ ಕೂಡ ಎಮ್ಮೆಗಳು ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಅತೀ ನಿಧಾನವಾಗಿ ನಡೆಯುತ್ತಿದ್ದವು. ಕಡೆಗೂ ಅವುಗಳೊಂದಿಗೆ ಮನೆ ತಲುಪುವ ವೇಳೆಗೆ ಮಳೆಗೆ ರಕ್ಷಣೆ ಕೊಡಲೆಂದು ಬಯ್ದಿರುತ್ತಿದ್ದ ಗೋಣಿ ಚೀಲದಿಂದ ಮಳೆ ನೀರು, ಧಾರೆಯಾಗಿ ಬೀಳುತ್ತಿತ್ತು. ಮಳೆಯಲ್ಲಿ ನೆಂದು ಪಜ್ಜಿಯಾಗಿ ಮನೆ ತಲುಪಿದ ಮಕ್ಕಳನ್ನು ಅಮ್ಮಂದಿರು ಒಳಗೆ ಕರೆದುಕೊಂಡು ಸೆರಗಿನಿಂದ ತಲೆಯೊರಸಿ, ಒಲೆ ಮುಂದೆ ಕೂರಿಸಿ- ‘ಇಲ್ಲೇ ಸ್ವಲ್ಪ ಹೊತ್ತು ಇರು. ಮೈ ಬಿಸಿಯಾಗ್ಲಿ’ ಎನ್ನುತ್ತಿದ್ದರು. ನಂತರ, ಸರಭರನೆ ಹೊರಗೆ ಬಂದು, ಒಮ್ಮೆ ಎರಡೂ ಕೈಗಳಿಂದ ಲಟಿಕೆ ಮುರಿದು- ‘ಅದ್ಯಾವ ದಯ್ಯದ ಮಳೆಯೋ, ಇದರ ಮನೆ ಹಾಳಾಗ (?!) ನನ್ನ ಮಗು ಪೂರ್ತಿ ನೆಂದು ಹೋದ್ರೂ ಬಿಡಲಿಲ್ವಲ್ಲ? ಇದಕ್ಕೇನು ಕೇಡುಗಾಲವೋ ಕಾಣೆ’ ಎಂದು ಬೈಯುತ್ತಿದ್ದರು! ಒಂದು ವೇಳೆ ಮಳೇಲಿ ನೆಂದ ಕಾರಣಕ್ಕೆ ಜ್ವರವೋ, ತಲೆನೋವೋ ಬಂದರೆ- ಹಣೆ, ಕಿವಿಯ ಸಂದು, ಕುತ್ತಿಗೆಯ ಸುತ್ತಲೂ ಅಮೃತಾಂಜನ ತಿಕ್ಕಿ, ಕೌದಿ ಹೊದಿಸಿ ಬೆಚ್ಚಗೆ ಮಲಗಿಸುತ್ತಿದ್ದರು. ಮಧ್ಯೆ ಮಧ್ಯೆ ಹಣೆ ಮುಟ್ಟಿ ಪರೀಕ್ಷಿಸುತ್ತಾ- ಈಗ ಪರವಾಗಿಲ್ಲ. ಜ್ವರ ಬಿಟ್ಟಿದೆ, ತಲೆನೋವೂ ಹೋಗಿದೆ’ ಎಂದು ತಮಗೆ ತಾವೇ ಹೇಳಿಕೊಂಡು ಹಣೆಗೊಂದು ಮುತ್ತಿಡುತ್ತಿದ್ದರು.
ಮಳೆ ಅಂದಾಕ್ಷಣ ಎಲ್ಲರ ಕಣ್ಮುಂದೆಯೂ ‘ಹಾಗೇ ಸುಮ್ಮನೆ’ ಸುಳಿದು ಹೋಗುವ ಇನ್ನೊಂದು ಚಿತ್ರ- ಛತ್ರಿ ಹಿಡಿದು, ಆ ಮಳೆಯಲ್ಲೇ ಸಂಭ್ರಮದಿಂದ ನಡೆದು ಹೋಗುವ ಪ್ರೇಮಿಗಳದು. ರಸ್ತೆಯಲ್ಲಿ ಇಡೀ ಅರ್ಧಗಂಟೆ, ಅವನೊಂದಿಗೆ ಕೈ ಕೈ ಹಿಡಿದು, ಮೈಗೆ ಮೈ ತಾಗಿಸಿಕೊಂಡು, ಯಾವುದೋ ಹಳೆಯ ಹಾಡು ಗುನುಗುತ್ತಾ ಅಥವಾ ಅವನಿಗಷ್ಟೇ ಕೇಳಿಸುವಂತೆ ಪಿಸುಮಾತನಾಡುತ್ತಾ ನಡೆದುಹೋಗಬೇಕು. ಆಗೊಮ್ಮೆ ಈಗೊಮ್ಮೆ ಮೈತಾಗುವ ಅವನ ಬಿಸಿಯುಸಿರಿಂದ ಖುಷಿಯಾಗಬೇಕು. ಅವನ ಕಣ್ಣೊಳಗೆ ಇಣುಕಿ ನೋಡಿ, ಕಣ್ಣು ಹೊಡೆಯಬೇಕು, ಹೇಗಿದ್ರೂ ಸುತ್ತಮುತ್ತ ಯಾರೂ ಇರಲ್ಲವಲ್ಲ? ಅದೇ ನೆಪದಲ್ಲಿ ಅವನಿಗೊಂದು ಮುತ್ತಿಡಬೇಕು ಎಂಬ ಹಪಹಪಿ ಪ್ರೀತಿಯ ಹೊಳಗೆ ಬಿದ್ದ ಅಷ್ಟೂ ಹುಡುಗಿಯರಿಗಿರುತ್ತದೆ. (ಇಂಥದೇ ಭಾವ ಹುಡುಗರಿಗೂ ಇರುತ್ತದೆ!) ಹಾಗೆ, ಅಂದುಕೊಂಡ ಕನಸೆಲ್ಲ ನನಸಾಗುತ್ತಿದ್ದುದು ಮಳೆ ಬಂದ ಸಂದರ್ಭದಲ್ಲೇ!
ಹೀಗೆ ಮಳೆ ಬಂದ ಸಂದರ್ಭದಲ್ಲಿ ಈ ಪ್ರೇಮಿಗಳ ಬಳಿ ಇರುತ್ತಿದ್ದುದು ಒಂದೇ ಛತ್ರಿ. ಒಂದಿಷ್ಟು ಏಕಾಂತ ಬೇಕೆಂದು ಮೊದಲೇ ಬಯಸಿದ್ದ ಇಬ್ಬರೂ ಕೈ ಕೈ ಹಿಡಿದುಕೊಂಡು ರಸ್ತೆಗಿಳಿದು, ತುಂಟಾಟಕ್ಕೆ, ಸಣ್ಣ ಜಗಳಕ್ಕೆ, ರವಷ್ಟು ಪೋಲಿತನಕ್ಕೆ ನಿಂತರೆಂದರೆ, ಅದನ್ನು ಕಂಡು ಮಳೆಯೆಂಬ ಮಳೆಯೂ ಬೆಚ್ಚಗಾಗುತ್ತಿತ್ತು. ಅವರು ಇನ್ನಷ್ಟು ಹೊತ್ತು ಜತೆ ಜತೆಗೇ ನಡೆಯಲಿ ಎಂಬ ಮಹದಾಸೆಯಿಂದ ಹನಿ ಸುರಿಸುತ್ತಿತ್ತು…
* * *
ಹೌದು. ಆಗೆಲ್ಲ ಮಳೆ ಶುರುವಾದರೆ ಸಾಕು, ಮಕ್ಕಳೆಲ್ಲ ರಾಗವಾಗಿ- ‘ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ/ಬಾರೋ ಬಾರೋ ಮಳೆರಾಯ ಬಾಳೆಯ ಗಿಡಕೆ ನೀರಿಲ್ಲ’ ಎಂದು ಹಾಡುತ್ತಿದ್ದರು. ಅಮ್ಮನ ಸೀರೆಯ ಸೆರಗೊಳಗೆ ಬೆಚ್ಚಗೆ ಮಲಗಿಕೊಂಡು ಇಡೀ ರಾತ್ರಿ ಸುರಿಯುತ್ತಿದ್ದ ಮಳೆ ಸದ್ದು ಕೇಳುತ್ತಿದ್ದರು. ಉಹುಂ, ಈಗ ಆ ಸಂಭ್ರಮವಿಲ್ಲ. ಹಳ್ಳಿಗಳ ಶಾಲೆಗಳಲ್ಲಿ ಈಗ ಹೆಚ್ಚಿನ ಮಕ್ಕಳಿಲ್ಲ. ಇರುವ ಮಕ್ಕಳನ್ನು ಕರೆದೊಯ್ಯಲು ಈಗ ಆಟೊಗಳಿವೆ. ಹಾಗಾಗಿ ಮಕ್ಕಳಿಗೆ ಮಳೆಯಲ್ಲಿ ನೆನೆವ ಸೌಭಾಗ್ಯವಿಲ್ಲ. ದೆವ್ವದ ಹೆದರಿಕೆಯಿಲ್ಲ. ಸಿಡಿಲಿನ ಕತೆ ಗೊತ್ತಿಲ್ಲ. ಹಳ್ಳಿಯ ಶಿಕ್ಷಕರೂ ಈಗ ರೈನ್ಕೋಟ್ ಧರಿಸಿ ಬೈಕ್ನಲ್ಲಿ ಬರುವುದರಿಂದ ಅವರು ಚಕ್ಕರ್ ಹೊಡೆವ ಸಂಭವವೂ ಇಲ್ಲ! ಮನೆಯ ಹಿಂಬದಿಯಿದ್ದ ಹೊಂಡ, ಊರಿನಾಚೆಗಿದ್ದ ಕೆರೆ ಏಕಕಾಲಕ್ಕೆ ಕಣ್ಮರೆಯಾಗಿರುವುದರಿಂದ ಕಪ್ಪೆಗಳ ಸಂಗೀತವೂ ಕೇಳಿಸುತ್ತಿಲ್ಲ.
ಇನ್ನು, ಬೆಂಗಳೂರಿನ ಮಳೆಗಾಲದ ಬಗ್ಗೆಯಂತೂ ಹೇಳುವುದೇ ಬೇಡ. ಇಲ್ಲಿ ಮಳೆ ಶುರುವಾದರೆ, ಮಕ್ಕಳಿರಲಿ, ದೊಡ್ಡವರಿಗೂ ಕೂಡ ಹೊರಗೆ ಹೋಗಲು ಭಯ. ಮಳೆ ನೀರಲ್ಲಿ ಸುಮ್ಮನೇ ಕಾಲಿಟ್ಟರೂ ಕೊಚ್ಚಿ ಹೋಗುವ ಭೀತಿ….
ಇದನ್ನೆಲ್ಲ ನೋಡಿದರೆ, ನಾವೆಲ್ಲ ಏನೋ ಬಹುಮುಖ್ಯವಾದುದನ್ನು ಕಳೆದುಕೊಂಡ ಸಂಕಟದ ಭಾವವೊಂದು ಮತ್ತೆ ಮತ್ತೆ ಕೈ ಜಗ್ಗಿದಂತಾಗುತ್ತದೆ; ಅಲ್ಲವೇ?

ಚಿಕ್ಕಿಕೇಳವ್ವಾ…ಯಂತಾಕಿ ಅಕ್ಕಾ !

May 31, 2009

ashwath

ಚಿತ್ರ: ನಾಗಮಂಡಲ. ಗೀತೆರಚನೆ: ಗೋಪಾಲ ಯಾಜ್ಞಿಕ್.

ಸಂಗೀತ: ಸಿ. ಅಶ್ವತ್ಥ್. ಗಾಯನ: ಶಿವಾನಂದ ಪಾಟೀಲ ಮತ್ತು ಮೇಳ.

 

ಚಿಕ್ಕಿಯಂತಾಕಿ ಅಕ್ಕಾ ಕೇಳವ್ವ

ನಿಟ್ಟುಸಿರ ನಿನಗಿನ್ನ ಸಖಿಯವ್ವಾ

ಬಿಕ್ಕು ಯಾತಕ ಬಾಲಿ? ದುಃಖ ಯಾಕವ್ವಾ?

ಬಿಟ್ಟುಸಿರ ನಿನ್ನ ಮರಿತಾವ…

 

ನೋವ ನಿನ್ನದು ಈ ಜೀವ ನಿನ್ನದು, ಈ

ನೋವ ನಿನ್ನನ್ನ ಇರಿತಾವ

ಇರಿತಾವ ಎದಿಯು ಉರಿತಾವ

ಉರಿತಾವ ಮನಸ ಮುರಿತಾವ

 

ವೇಸಗಾರ ಹೆಣ್ಣಿನಾ ನಗಿಗೆ ದಾಸನಾಗಿ ನಿಲ್ಲತಾನ

ಧ್ಯಾಸ ಇಲ್ಲದ ಮೆಲ್ಲತಾನ… ಚೆಲ್ಲತಾನ.. ಗೆಲ್ಲತಾನ

 

ಮತ್ತ ಮತ್ತ ನೋಡತಾಳ ಅತ್ತ ಇತ್ತ ಓಡತಾಳ

ಹುತ್ತುತ್ತು ಆಡಿಧಾಂಗ ಮತ್ತಷ್ಟು ಕಾಡತಾಳ

ಸುತ್ತಮುತ್ತ ಸುಳೀತಾಳ ಕೈಯ ತಾನ ಎಳೀತಾಳ

ಮುತ್ತಿಮೈಯ ನಿಲ್ಲತಾಳ ಕಣ್ಣಿನಾಗ ಕೊಲ್ಲತಾಳ

 

ಚೆಲ್ಲು ಚೆಲ್ಲು ಮಾತನಾಡಿ ಮುತ್ತರಾಶಿ ಚೆಲ್ಲತಾಳ

ನಲ್ಲನನ್ನ ಕಾಡಿ ಕೂಡಿ ಮಲ್ಲನನ್ನ ಗೆಲ್ಲತಾಳ

ನಗತಾಳ ಕೈಗಿ ಸಿಗತಾಳ, ಸಿಗಧಾಂಗ ತಾ ಸಾಗತಾಳ

ಮೆರಿತಾಳ ಸುಖ ಸುರಿತಾಳ, ಸುರಿತಾಳ ಮತ್ತು ಕರಿತಾಳ

 

ಸುರಿತಾಳ ಮತ್ತ ಕರಿತಾಳ

ಸುರಿತಾಳ ಮತ್ತ ಕರಿತಾಳ

‘ನಾಗಮಂಡಲ’ ಎಂದಾಕ್ಷಣ ಎಲ್ಲರಿಗೂ, ನಟ ಪ್ರಕಾಶ್ ರೈ ಅವರ ಅಬ್ಬಬ್ಬಬ್ಬಬ್ಬಾ ಎಂಬಂಥ ಅದ್ಭುತ ನಟನೆ, ನಟಿ ವಿಜಯಲಕ್ಷ್ಮಿಯ ಆಗಷ್ಟೇ ಅರಳಿದ ಹೂವಂಥ ಚೆಲುವು, ಬಿ. ಜಯಶ್ರೀ ಅವರ ದಿಲ್‌ಪಸಂದ್ ಅಭಿನಯ, ಹಾಡು: ನಾಗಾಭರಣರ ಸಮರ್ಥ ನಿರ್ದೇಶನ, ಜೋಗುಳದಂತಿರುವ ಸಿ. ಅಶ್ವತ್ಥ್ ಅವರ ಸಂಗೀತ ನೆನಪಾಗುತ್ತದೆ. ಈ ಸಂದರ್ಭದಲ್ಲಿಯೇ ಚಿತ್ರದುದ್ದಕ್ಕೂ ಬಿಟ್ಟೂ ಬಿಡದೆ ನೆನಪಾಗುವ ಇನ್ನೊಬ್ಬರೆಂದರೆ ಗೋಪಾಲ ಯಾಜ್ಞಿಕ್ ಅಲಿಯಾಸ್ ಗೋಪಾಲ ವಾಜಪೇಯಿ. ‘ನಾಗಮಂಡಲ’ಕ್ಕೆ ಉತ್ತರ ಕರ್ನಾಟಕ ಸೀಮೆಯ ದೇಸೀ ಸೊಗಡಿನ ಸಂಭಾಷಣೆಯನ್ನು ಮಾತ್ರವಲ್ಲ; ಅದ್ಭುತ ಅದ್ಭುತ ಎಂಬಂಥ ಹದಿನಾರು ಹಾಡುಗಳನ್ನು ಬರೆದವರೂ ವಾಜಪೇಯಿ. ಇನ್ನೂ ವಿವರಿಸಿ ಹೇಳಬೇಕೆಂದರೆ, ‘ನಾಗಮಂಡಲ’ದ ನಿಜವಾದ ಹೀರೊ ಅಂದರೆ- ತೆರೆಮರೆಯಲ್ಲೇ ಉಳಿದುಹೋದ ವಾಜಪೇಯಿಯವರೇ.

ಗೆಳೆಯರ ಬಳಗದಲ್ಲಿ ‘ಗೋವಾ’ ಎಂದೇ ಹೆಸರಾಗಿರುವ ಗೋಪಾಲ ವಾಜಪೇಯಿಯವರು- ‘ನಾಗಮಂಡಲ’ಕ್ಕೆ ಹಾಡು-ಸಂಭಾಷಣೆ ಬರೆದು ತಮ್ಮ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಎಂದು ಬದಲಿಸಿಕೊಂಡದ್ದು ಒಂದು ವಿಚಿತ್ರ, ಅನಿವಾರ್ಯ ಸಂದರ್ಭದಲ್ಲಿ. ‘ನಾಗಮಂಡಲ’ಕ್ಕೆ ಸಂಭಾಷಣೆ-ಹಾಡು ಬರೆಯುವುದಕ್ಕೆ ಒಪ್ಪಿಕೊಂಡರಲ್ಲ? ಆಗ ವಾಜಪೇಯಿಯವರು ‘ಕರ್ಮವೀರ’ ವಾರಪತ್ರಿಕೆಯ ಸಂಪಾದಕರಾಗಿದ್ದರು. ‘ಸಂಪಾದಕ’ ಅನ್ನಿಸಿಕೊಂಡರೂ ಅಂಥ ದೊಡ್ಡ ಸಂಬಳವೇನೂ ಇರಲಿಲ್ಲ. ಅಷ್ಟೇ ಅಲ್ಲ, ನೌಕರಿಯ ಗ್ಯಾರಂಟಿ ಕೂಡ ಇರಲಿಲ್ಲ. ಏಕೆಂದರೆ ಆಗ ‘ಸಂಯುಕ್ತ ಕರ್ನಾಟಕ-ಕರ್ಮವೀರ-ಕಸ್ತೂರಿ’ ಪತ್ರಿಕೆಗಳ ಒಡೆತನದ ಲೋಕಶಿಕ್ಷಣ ಟ್ರಸ್ಟ್‌ಗೆ ಕಾರ್ಯದರ್ಶಿಯಾಗಿದ್ದವರು ಸರ್ವಾಕಾರಿ ಕೆ. ಶಾಮರಾವ್. ತಮ್ಮ ಸಂಸ್ಥೆಯ ನೌಕರನೊಬ್ಬ ಬಂದು ಚಿತ್ರಕ್ಕೆ ಸಂಭಾಷಣೆ-ಹಾಡು ಬರೆಯುತ್ತಿದ್ದಾನೆ ಎಂದು ಸಣ್ಣ ಸುಳಿವು ಸಿಕ್ಕಿದ್ದರೂ, ಅವತ್ತೇ ನೌಕರಿಯಿಂದ ವಜಾ ಮಾಡಿಬಿಡುತ್ತಿದ್ದರು ಶಾಮರಾವ್.

‘ನಾಗಮಂಡಲ’ಕ್ಕೆ ಹಾಡು-ಚಿತ್ರಕಥೆ ಬರೆಯಿರಿ ಎಂದು ಪ್ರೀತಿಯಿಂದ ಗಂಟುಬಿದ್ದ ನಾಗಾಭರಣ-ಅಶ್ವತ್ಥ್‌ಗೆ ಈ ಸಂಗತಿ ವಿವರಿಸಿದ ವಾಜಪೇಯಿ ‘ನಿಮ್ಮ ಪ್ರೀತಿ-ವಿಶ್ವಾಸಕ್ಕೆ ಕಟ್ಟುಬಿದ್ದು ಬರೆದುಕೊಡ್ತೇನೆ. ಆದರೆ ಯಾವುದೇ ಕಾರಣಕ್ಕೂ ನನ್ನ ಹೆಸರು ಹಾಕಬಾರದು’ ಎಂದು ಕಂಡೀಷನ್ ಹಾಕಿದರು. ಮುಂದೆ, ಪತ್ರಿಕೆಯವರ ಮುಂದೆ ಸಿನಿಮಾಕ್ಕೆ ದುಡಿದ ತಾಂತ್ರಿಕ ವರ್ಗದವರ ಪರಿಚಯ ಮಾಡಿಕೊಡಬೇಕಾಗಿ ಬಂದಾಗ ಸಾಹಿತ್ಯ-ಸಂಗೀತ ಒದಗಿಸಿದವರ ಹೆಸರು ಹೇಳಲೇಬೇಕಾದ ಸಂದರ್ಭ ಬಂತು. ‘ಏನ್ರೀ ಮಾಡೋದು ಈಗ? ನಿಮ್ಮ ಹೆಸರು ಹೇಳಬೇಕಾಗುತ್ತೆ, ಏನು ಮಾಡೋದು?’ ಅಂದರಂತೆ ಅಶ್ವತ್ಥ್. ‘ಸರ್, ನೀವೇನಾದ್ರೂ ನನ್ನ ಹೆಸರು ಹೇಳಿದರೆ, ನಾಳೆಯೇ ಕೆಲಸ ಹೋಗುತ್ತೆ. ಈಗ ತಿನ್ನುತ್ತಿರುವ ಅನ್ನಕ್ಕೂ ಕಲ್ಲು ಬೀಳುತ್ತೆ’ ಅಂದರಂತೆ ವಾಜಪೇಯಿ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದು ವಾಜಪೇಯಿ-ಅಶ್ವತ್ಥ್ ಇಬ್ಬರ ಸಂಕಟವನ್ನೂ ಅವರಿಂದಲೇ ಕೇಳಿ ತಿಳಿದ ಗಿರೀಶ್ ಕಾರ್ನಾಡರು ಒಂದು ನಿಮಿಷ ಯೋಚಿಸಿ- ‘ವಾಜಪೇಯಿ ಎಂಬುದು ಒಂದು ಯಾಗ. ಅದನ್ನು ಮಾಡಿದ ಯಾಜ್ಞಿಕರೇ ವಾಜಪೇಯಿಗಳು. ಒಂದು ಕೆಲಸ ಮಾಡ್ರೀ ಅಶ್ವತ್ಥ್. ಹಾಡು-ಸಂಭಾಷಣೆ ಬರೆದವರ ಹೆಸರನ್ನು ‘ಗೋಪಾಲ ಯಾಜ್ಞಿಕ್’ ಅಂತ ಹೇಳಿಬಿಡಿ’ ಅಂದರಂತೆ. ಪರಿಣಾಮ, ಗೋಪಾಲ ವಾಜಪೇಯಿ ಎಂಬುದು ಗೋಪಾಲ ಯಾಜ್ಞಿಕ್ ಆಗಿಹೋಯಿತು!

* * *

ಈಗ ‘ನಾಗಮಂಡಲ’ದ ಕಥೆಯನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಕಥಾನಾಯಕಿಯ ಹೆಸರು ರಾಣಿ. ಆಕೆ-ಮಲ್ಲಿಗೆಯಂಥ ಮೈನ, ಮೃದು ಮನಸ್ಸಿನ ಮಲೆನಾಡಿನ ಹುಡುಗಿ. ಆಕೆ, ಗಿಡ-ಮರ, ನದಿ-ತೊರೆ, ಗಿಳಿ-ಅಳಿಲುಗಳ ಜತೆ ಆಡಿಕೊಂಡು ಹಸಿರ ಸಿರಿಯ ಮಧ್ಯೆ ಬೆಳೆದವಳು. ಆಕೆಯ ನಗೆ, ಮಾತು ಎಲ್ಲವೂ ತಂಪು ತಂಪು.

ಅಂಥ ರಾಣಿಯನ್ನು ಬಯಲುಸೀಮೆಯ ಒರಟ ಅಪ್ಪಣ್ಣ ಮದುವೆಯಾಗುತ್ತಾನೆ. ಮಾತು, ನಡೆ, ವ್ಯವಹಾರ- ಈ ಎಲ್ಲದರಲ್ಲೂ ಒರಟೊರಟು ಎಂಬಂತಿದ್ದ ಅವನಿಗೆ ಮದುವೆಗೆ ಮೊದಲೇ ಅದೇ ಊರಿನ ವೇಶ್ಯೆಯೊಂದಿಗೆ ಸಂಬಂಧವೂ ಇರುತ್ತದೆ.

ಇಂಥ ಅಪ್ಪಣ್ಣನನ್ನು ಮದುವೆಯಾದ ರಾಣಿ, ಮೊದಲ ರಾತ್ರಿಯಂದು ಸಿಂಗರಿಸಿಕೊಂಡು ಕೋಣೆಗೆ ಬಂದರೆ- ‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬ ಮಾತಿನ ವ್ಯಕ್ತಿರೂಪದಂತಿದ್ದ ಅಪ್ಪಣ್ಣ, ರಾಣಿಯ ಮೇಲೆ ಕರಡಿಯಂತೆ ಬೀಳುತ್ತಾನೆ. ಅವಳನ್ನು ಅನಾಮತ್ತಾಗಿ ಎತ್ತಿ ಹಾಸಿಗೆಗೆ ಎಸೆದು, ಆಕ್ರಮಣಕ್ಕೆ ಮುಂದಾಗುತ್ತಾನೆ. ಗಂಡನ ‘ಅತೀ’ ಎಂಬಂಥ ಈ ವರ್ತನೆಯಿಂದ ಬೆದರಿದ ರಾಣಿ, ಅವನಿಂದ ತಪ್ಪಿಸಿಕೊಂಡು ಓಡಿಹೋಗಿ ದೇವರಮನೆ ಸೇರಿ ಬಾಗಿಲು ಹಾಕಿಕೊಳ್ಳುತ್ತಾಳೆ. ಅವಳನ್ನು ಹೆದರಿಸಿ, ಬೆದರಿಸಿ ಬಾಗಿಲು ತೆರೆಯಿಸಲು ಅಪ್ಪಣ್ಣ ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆಲ್ಲಾ ರಾಣಿ ಮಣಿಯುವುದಿಲ್ಲ. ಆಗ- ‘ಹೆಂಗಸಾದ ಅವಳಿಗೇ ಅಷ್ಟು ಹಟವಿರುವಾಗ, ಗಂಡಸಾದ ನಾನೇನು ಕಮ್ಮಿ?’ ಎಂದುಕೊಂಡ ಅಪ್ಪಣ್ಣ, ಸಿಟ್ಟಿನ ಕೈಗೆ ಬುದ್ಧಿಕೊಟ್ಟು- ಇನ್ ಮುಂದೆಲ್ಲಾ, ಹೀಂಗ ಒಬ್ಬಳೇ ನಾಲ್ಕ್ ಗ್ವಾಡೀ ನಡುವೆ ಬಿದ್ಕಂಡಿರು. ಅಂದ್ರಽ ಇಳೀತೈತಿ ನಿನ್ ಸೊಕ್ಕು’ ಎಂದು ಮುಂಬಾಗಿಲಿಗೆ ಬೀಗ ಹಾಕಿಕೊಂಡು, ಸೀದಾ ತಾನು ‘ಇಟ್ಟುಕೊಂಡಿದ್ದವಳ’ ಮನೆಗೆ ಬಂದು ಬಿಡುತ್ತಾನೆ. ಒಂದು ಕಡೆಯಲ್ಲಿ ‘ಕಟ್ಟಿಕೊಂಡಾಕೆ ಬಿಚ್ಚಿಕೊಳ್ಳದೇ, ಬೆದರಿ ಬಚ್ಚಿಟ್ಟುಕೊಂಡು ಬಾಗಿಲು ಮುಚ್ಚಿಕೊಳ್ಳುತ್ತಾಳೆ. ಇನ್ನೊಂದು ಕಡೆಯಲ್ಲಿ ಇಟ್ಟುಕೊಂಡಾಕೆ- ಕದ ತೆರೆದು, ಕರೆದು, ಅಪ್ಪಣ್ಣನೆದುರು ತನ್ನನ್ನೇ ಇಡಿಯಾಗಿ ಬಿಚ್ಚಿಟ್ಟುಕೊಳ್ಳುತ್ತಾಳೆ.

ಈ ಸಂದರ್ಭವನ್ನು ಇನ್ನಿಲ್ಲದಷ್ಟು ಅದ್ಭುತವಾಗಿ ಹೇಳಿರುವುದು ‘ಚಿಕ್ಕಿಯಂತಾಕಿ ಅಕ್ಕಾ ಕೇಳವ್ವಾ…’ ಹಾಡು. ಈ ಹಾಡೊಳಗೆ ರಾಣಿಯ ವಿರಹ, ದುಃಖ-ಒಂಟಿತನ; ಅಪ್ಪಣ್ಣ ಮತ್ತು ಆತನ ‘ರಖಾವು’ ಅನ್ನಿಸಿಕೊಂಡವಳ ಹಸಿಹಸಿ ಬಿಸಿಬಿಸಿ ಎಂಬಂಥ ಸರಸ-ಶೃಂಗಾರದಾಟ ಬಾಪ್‌ರೇಬಾಪ್ ಎನ್ನುವಂತಿದೆ. ‘ಅಶ್ಲೀಲದ ಗಡಿ ದಾಟದೆಯೇ ಎಲ್ಲವನ್ನೂ ಹೇಳುವಂಥ, ಎಲ್ಲರೂ ಕೇಳುವಂಥ ಈ ಹಾಡನ್ನು ನೀವು ಬರೆದದ್ದು ಹೇಗೆ? ಈ ಹಾಡು ಸೃಷ್ಟಿಯಾಗಲು ನಿಮಗೆ ಸೂರ್ತಿ ಒದಗಿಸಿದ ಸಂದರ್ಭವಾದರೂ ಯಾವುದು? ಈ ಹಾಡಿನ ಹಿಂದೆಯೂ ಒಂದು ಕಥೆ ಇದೆಯಾ? ಎಂಬ ಕುತೂಹಲದ ಪ್ರಶ್ನೆಗೆ ವಾಜಪೇಯಿಯವರು ಉತ್ತರಿಸಿದ್ದು ಹೀಗೆ. ಮುಂದಿನ ಮಾತುಗಳನ್ನು ಅವರಿಂದಲೇ ಕೇಳೋಣ. ಓವರ್ ಟು ಗೋಪಾಲ ವಾಜಪೇಯಿ…

*************************

ನಾನಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ನಾಲ್ಕಾರು ಸಹಪಾಠಿ ಹುಡುಗರು ಸೇರಿ ದೇಸಾಯರೊಬ್ಬರ ವಾಡೆಯ ಮೇಲಿನ ಒಂದು ಕೋಣೆಯಲ್ಲಿ ಓದಿಕೊಳ್ಳುತ್ತಿದ್ದೆವು. ಅಲ್ಲಿ, ರಾತ್ರಿ ಇನ್ನೇನು ಕಣ್ಣಿಗೆ ಕಣ್ಣು ಹತ್ತಬೇಕೆಂಬಷ್ಟರಲ್ಲಿ ಧಪ ಧಪ ಬಾಗಿಲು ಬಡಿದ ಸದ್ದು, ಧಡ ಧಡ ಓಡಿ ಹೋದ ಸದ್ದು, ‘ಹೊಂಯ್…’ ಎಂದು ಅಳುವ ಸದ್ದು, ಬಿಕ್ಕುವ ಸದ್ದುಗಳ ಜತೆಗೆ ಗೆಜ್ಜೆ ಕಾಲುಗಳ ಸದ್ದು, ಕೈಬಳೆಗಳ ಸದ್ದು, ನಗುವಿನ ಸದ್ದು ಕೇಳಿಬರತೊಡಗಿ, ಒಂದು ವಿಚಿತ್ರ ಭಯದ ವಾತಾವರಣ ಸೃಷ್ಟಿಯಾಗುತ್ತಿತ್ತು. ನಾವೆಲ್ಲ ಗಾಬರಿಯಾಗಿ ಮುಸುಕೆಳೆದು ಮಲಗಿಬಿಡುತ್ತಿದ್ದೆವು. ಮರುದಿನ ಓಣಿಯ ಹೆಂಗಸರು ಬಾಯಿಗೆ ಸೆರಗು ಅಡ್ಡಹಿಡಿದು, ಏನೇನೋ ಪಿಸಪಿಸ ಮಾತಾಡಿಕೊಂಡು ಕಿಸಕ್ಕನೇ ನಗುತ್ತಿದ್ದುದೂ ಕಣ್ಣಿಗೆ ಬೀಳುತ್ತಿತ್ತು. ‘ದೇಸಾಯರ ಮನ್ಯಾಗ ದೆವ್ವ ಐತಿ, ಹೆಣ್ ದೆವ್ವಾ…’ ಅಂತ ಅವರೆಲ್ಲ ಮಾತಾಡಿಕೊಳ್ಳುತ್ತಿದ್ದರು. ವಾಸ್ತವವಾಗಿ ಆ ಅಳು ದೇಸಾಯರ ಹಿರಿಸೊಸೆಯ ಆರ್ತನಾದವಾಗಿರುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಬಹಳಷ್ಟು ಮೆರೆದವರು, ಉರಿದವರು ಆ ದೇಸಾಯರು. ಅಕ್ಷರಶಃ ಹೆಣ್ಣು-ಮಣ್ಣುಗಳನ್ನು ಆಳಿದವರು.

ಅವರಿಗೆ ಇಬ್ಬರು ಗಂಡುಮಕ್ಕಳು. ಆದರೆ ಇಬ್ಬರ ಸ್ವಭಾವದಲ್ಲೂ ಅಜಗಜಾಂತರ ವ್ಯತ್ಯಾಸ. ದೊಡ್ಡವ ಅಪ್ಪನಂತೆಯೇ ಮೆರೆಯುತ್ತಿದ್ದವ. ಚಿಕ್ಕವ ಸಜ್ಜನಿಕೆಗಳ ಸಾಕಾರ. ಇಬ್ಬರೂ ಮದುವೆಯ ವಯಸ್ಸಿಗೆ ಬಂದಾಗ ಶುರುವಾಯಿತು ಸಮಸ್ಯೆ. ದೊಡ್ಡವನಿಗೆ ಹೆಣ್ಣು ಕೊಡಲು ದೇಸಾಯರ ಸಮ ಅಂತಸ್ತಿನ ಜನ ಹಿಂದೇಟು ಹಾಕತೊಡಗಿದ್ದರು. ಅದಾಗಲೇ ಆತ ಒಬ್ಬಳನ್ನು ಇಟ್ಟುಕೊಂಡಿದ್ದುದೇ ಅದಕ್ಕೆ ಕಾರಣವಾಗಿತ್ತು.

ಅದು ಗೊತ್ತಿದ್ದೂ ದೇಸಾಯರು ಮಗನಿಗೆ ಬುದ್ಧಿ ಹೇಳುವ ಗೋಜಿಗೆ ಹೋಗಿರಲಿಲ್ಲ. ಮಗನಿಗೆ ಬುದ್ಧಿ ಹೇಳುವಷ್ಟು ನೈತಿಕ ಬಲ ಅವರಲ್ಲಿ ಇರಲಿಲ್ಲ. ಅವರೇ ಒಂದು ಕಾಲಕ್ಕೆ ನಡೆದ ಹಾದಿಯಲ್ಲಿ ಈಗ ಮಗ ಸಾಗಿದ್ದನಲ್ಲ?

ಇಂಥ ಸಂದರ್ಭದಲ್ಲಿ-ದೇಸಾಯರು ತಮ್ಮ ಮನೆತನದ ಗುರುಗಳ ಬಳಿ ಸಲಹೆ ಕೇಳಿದರು. ‘ಇಲ್ಲಿ ಹೆಣ್ಣು ಸಿಗದಿದ್ದರೇನು, ಅಲ್ಲೆಲ್ಲಾದ್ರೂ ದಕ್ಷಿಣ ಸೀಮಿಯಿಂದ ಒಂದು ಹೆಣ್ಣು ತಂದು ಗಂಟ್ ಹಾಕ್ರಿ,, ಎಲ್ಲಾ ಸರಿ ಆಗತೈತಿ,’ ಅಂದಿದ್ದರಂತೆ-ಗುರುಗಳು. ಸರಿ, ದೇಸಾಯರು ಹಾಗೇ ಮಾಡಿದರು. ಗುರುಗಳು ಬಂದು ನವದಂಪತಿಯನ್ನು ಹರಸಿದರು. ಆದರೆ ಅವರು ಹೇಳಿದ್ದಂತೆ ‘ಸರಿ ಆಗಬೇಕಾದ್ದು’ ಆಗಲೇ ಇಲ್ಲ. ಮದುವೆಗೆ ಮೊದಲೇ ಬಹಳ ಆಟ ಆಡಿದ್ದ ದೇಸಾಯರ ದೊಡ್ಡಮಗ, ಥೇಟ್ ‘ನಾಗಮಂಡಲ’ದ ಅಪ್ಪಣ್ಣನಂತೆಯೇ ಆಡಿಬಿಟ್ಟಿದ್ದ. ಗಂಡನ ವಿಕೃತಿಗೆ ಹೆದರಿದ ಹುಡುಗಿಗೆ ಆತನ ಇತರೆ ಸಂಬಂಧದ ಬಗ್ಗೆಯೂ ಗೊತ್ತಾಗಿ, ಸಹಕರಿಸದೇ ಉಳಿದಳು. ಇದರಿಂದ ಸಿಟ್ಟಾದ ಆತ ಇಟ್ಟುಕೊಂಡವಳನ್ನು ವಾಡೆಯ ಹಿತ್ತಲಲ್ಲಿದ್ದ ನಾಲ್ಕಂಕಣದ ಮನೆಗೇ ತಂದಿಟ್ಟುಕೊಂಡುಬಿಟ್ಟಿದ್ದ.

ಅಂತೂ, ಅಲ್ಲಿ ಪ್ರತಿ ರಾತ್ರಿ ಶುರುವಾಗುತ್ತಿತ್ತು ದೊಡ್ಡಾಟ!

ಹೀಗಿದ್ದಾಗಲೇ ಅದೊಂದು ರಾತ್ರಿ ದೇಸಾಯರ ಸೊಸೆ, ಮನೆಯೆದುರಿನ ಬಾವಿಗೆ ಬೀಳಲು ಹೊರಟದ್ದು ಕಂಡು ತಡೆದ ಜೋಗತಿ ಎಲ್ಲವ್ವ, ‘ಛೀ ಹುಚ್ಚಿ, ಇಷ್ಟಕ್ಕo ಸಾಯೂದo? ನಿಟ್ಟುಸರಂದ್ರ ಹೆಣಮಗಳಿಗೆ ಹುಟ್ಟೂತ್ಲೇ ಹಚಿಗೊಂಡ ಗೆಳತ್ಯಾರಿದ್ದಂಗ… ಸೈಸಿಕೋ ಹುಡಗೀ… ಆ ತಾಯಿ ಎಲ್ಲವ್ವ ಒಳ್ಳೇದ ಮಾಡತಾಳ,’ ಎಂದು ಹೇಳಿ ತಾನೇ ಆ ಹುಡುಗಿಗೆ ಮಾರ್ಗದರ್ಶಿಯಾಗಿ ನಿಂತಳು.

**************

ಹಾಡು ಬರೆಯಲೆಂದು ಭರಣ-ಅಶ್ವತ್ಥ್ ಜೋಡಿ ಬೆಂಗಳೂರಿನ ಮಿನರ್ವ ಸರ್ಕಲ್‌ನ ಕಾಮತ್ ಹೋಟೆಲಿನಲ್ಲಿ ರೂಮು ಮಾಡಿಕೊಟ್ಟಿದ್ದರು. ರೂಮಲ್ಲಿ ಕೂತು ಹೇಗೆ ಹಾಡು ಬರೆಯಲಿ ಎಂದು ಯೋಚಿಸುತ್ತಿದ್ದವನಿಗೆ-ಈ ಪ್ರಸಂಗ ನೆನಪಾದದ್ದೇ ತಡ, ಜೋಗತಿಯ ಮಾತುಗಳೇ ಹಾಡಿನ ಆರಂಭದ ಸಾಲುಗಳಾದವು. ಆ ಮರಿದೇಸಾಯಿ ಮತ್ತು ಆ ವೇಶ್ಯೆಯ ಆಟಗಳೇ ಹಾಡಿನ ಮುಂದುವರಿಕೆಗೆ ಕಾರಣವಾದವು….

ಇಷ್ಟು ಹೇಳಿ ಕ್ಷಣ ಮೌನವಾದರು ವಾಜಪೇಯಿ.

ಅಲ್ಲಿಗೆ, ಕಾಡುವ ಹಾಡುಗಳ ಹಿಂದೆ ಒಂದು ಕಥೆ ಇದ್ದೇ ಇರುತ್ತದೆ ಎಂಬ ಮಾತು ನೂರಾ ಒಂದನೇ ಬಾರಿಗೂ ನಿಜವಾದಂತಾಯಿತು!

ಮಕಾಡೆ ಬೀಳದ ಗೊಂಬೆಯನ್ನು ಕಂಡಾಗ ‘ಕಸ್ತೂರಿ ನಿವಾಸ’ದ ಹಾಡು ಹುಟ್ಟಿತು!

May 27, 2009

kasthuri-nivasa~3269123
ಆಡಿಸಿ ನೋಡು ಬೀಳಿಸಿ ನೋಡು…
ಚಿತ್ರ: ಕಸ್ತೂರಿ ನಿವಾಸ. ಗೀತೆರಚನೆ: ಚಿ. ಉದಯಶಂಕರ್
ಗಾಯನ: ಪಿ.ಬಿ. ಶ್ರೀನಿವಾಸ್. ಸಂಗೀತ: ಜಿ.ಕೆ. ವೆಂಕಟೇಶ್.

ಆಡಿಸಿನೋಡು ಬೀಳಿಸಿನೋಡು
ಉರುಳಿಹೋಗದು ||ಪ||
ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು
ಎಂದಿಗು ನಾನು ಹೀಗೇ ಇರುವೆ ಎಂದು ನಗುವುದು
ಹೀಗೇ ನಗುತಲಿರುವುದು ||ಆ.ಪ||

ಗುಡಿಸಲೆ ಆಗಲಿ ಅರಮನೆಯಾಗಲಿ ಆಟ ನಿಲ್ಲದೂ
ಹಿರಿಯರೆ ಇರಲಿ ಕಿರಿಯರೆ ಬರಲಿ ಬೇಧ ತೋರದು
ಕಷ್ಟವೊ ಸುಖವೊ ಅಳುಕದೆ ಆಡಿ ತೂಗುತಿರುವುದು
ಹೀಗೇ ತೂಗುತಿರುವುದು ||೧||

ಮೈಯನೆ ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು
ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು
ತಾನೇ ಉರಿದರು ದೀಪವು ಮನೆಗೆ ಬೆಳಕ ತರುವುದು
ದೀಪ ಬೆಳಕ ತರುವುದು ||೨||

ಆಡಿಸುವಾತನ ಕೈಚಳಕದಲಿ ಎಲ್ಲ ಅಡಗಿದೆ
ಆತನ ಕರುಣೆಯು ಜೀವವ ತುಂಬಿ ಕುಣಿಸಿ ನಲಿಸಿದೆ
ಆ ಕೈ ಸೋತರೆ ಗೊಂಬೆಯ ಕತೆಯೂ ಕೊನೆಯಾಗುವುದೆ
ಕೊನೆಯಾಗುವುದೇ… ||೩||

ಕನ್ನಡ ಚಿತ್ರರಂಗದ ‘ದೆಸೆ’ಯನ್ನೇ ತಿರುಗಿಸಿದ ಚಿತ್ರ ‘ಕಸ್ತೂರಿ ನಿವಾಸ’. ಈ ಸಿನಿಮಾ ತೆರೆಕಾಣುವವರೆಗೂ ಚಿತ್ರರಂಗ ಒಂದು ಸಿದ್ಧಸೂತ್ರದ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಅಂದರೆ, ಒಂದು ಕಥೆ ಕಡೆಯಲ್ಲಿ ಸುಖಾಂತ್ಯದಲ್ಲೇ ಕೊನೆಯಾ ಗುತ್ತಿತ್ತು. ತ್ಯಾಗಿ ಅನ್ನಿಸಿಕೊಂಡ ಕಥಾನಾಯಕನ ಮುಂದೆ ಕಡೆಗೆ ಎಲ್ಲರೂ ಶರಣಾಗುತ್ತಿತ್ತು. ಆಗ ಕಥಾನಾಯಕ, ನಿಂತಲ್ಲೇ ಕಣ್ತುಂಬಿಕೊಂಡು, ಎಲ್ಲವೂ ಭಗವಂತನ ಲೀಲೆ ಎಂಬರ್ಥದ ಮುಖಭಾವ ಪ್ರದರ್ಶಿಸಿ, ಎಲ್ಲರನ್ನೂ ಗ್ರೂಪ್ ಫೋಟೊಗೆ ನಿಲ್ಲಿಸಿ ಕೊಂಡು ಕೈಮುಗಿಯುತ್ತಿದ್ದ!
ಸ್ವಾರಸ್ಯವೆಂದರೆ, ಆ ದಿನಗಳಲ್ಲಿ ಪ್ರೇಕ್ಷಕರು ಕೂಡ, ಒಂದು ಸಿನಿಮಾ ಹೀಗೇ ಇರಬೇಕು ಎಂದು ನಂಬಿದ್ದರು. ಈ ನಂಬಿಕೆಯನ್ನು ಪಲ್ಲಟಗೊಳಿಸಿದ್ದು; ‘ಕಸ್ತೂರಿ ನಿವಾಸ’ದ ಹೆಚ್ಚುಗಾರಿಕೆ.
ಈಗ ಸುಮ್ಮನೇ ಒಮ್ಮೆ ‘ಕಸ್ತೂರಿ ನಿವಾಸ’ದ ಕಥೆಯನ್ನು ನೆನಪು ಮಾಡಿಕೊಳ್ಳಿ. ಕಥಾನಾಯಕ, ಕೊಡುಗೈ ದಾನಿಗಳ ವಂಶಕ್ಕೆ ಸೇರಿದವನು. ಅವರ ಕುಟುಂಬದವರಿಗೆ ಕೇಳಿದವರಿಗೆಲ್ಲ ದಾನ ಮಾಡಿ ಅಭ್ಯಾಸವೇ ಹೊರತು ಯಾರಿಂದಲೂ ‘ಪಡೆದು’ ಗೊತ್ತಿರುವುದಿಲ್ಲ. ಇಂಥ ಹಿನ್ನೆಲೆಯಿಂದ ಬಂದ ಕಥಾನಾಯಕನೊಂದಿಗೆ ಒಂದು ಪಾರಿವಾಳವೂ ಇರುತ್ತದೆ. ಆತ ಬೆಂಕಿಪೊಟ್ಟಣ ತಯಾರಿಕೆಯ ಫ್ಯಾಕ್ಟರಿ ನಡೆಸುತ್ತಿರುತ್ತಾನೆ. ಅನಿರೀಕ್ಷಿತವಾಗಿ ಆತನ ಹೆಂಡತಿ ತೀರಿಹೋಗುತ್ತಾಳೆ. ಅವಳ ನೆನಪಿಗೆ ಮಗು ಇರುತ್ತೆ. ಮುಂದೆ, ತನ್ನ ಕಂಪನಿಯಲ್ಲಿ ಕೆಲಸಕ್ಕೆ ಬರುವ ಯುವತಿಯನ್ನು ಈತ ಇಷ್ಟಪಡುತ್ತಾನೆ. ಅವಳೋ, ಅದೇ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿದ್ದವನನ್ನು ಪ್ರೀತಿಸುತ್ತಾಳೆ! ವಿಷಯ ತಿಳಿದ ನಾಯಕ, ತಾನೇ ಅವರಿಬ್ಬರ ಮದುವೆ ಮಾಡಿಸುತ್ತಾನೆ. ನಂತರ ತನ್ನ ಫ್ಯಾಕ್ಟರಿಯನ್ನು ಮ್ಯಾನೇಜರ್ ಹೆಸರಿಗೇ ಬರೆದುಕೊಡುತ್ತಾನೆ. ಈ ಮಧ್ಯೆ ನಾಯಕನ ಮಗು ಸತ್ತುಹೋಗುತ್ತದೆ. ಈ ನೋವು ಮರೆಯಲು ಆತ ನಾಯಕಿಯ ಮಗುವನ್ನೇ ಹಚ್ಚಿಕೊಳ್ಳುತ್ತಾನೆ. ಈ ವೇಳೆಗೆ, ನಾಯಕಿಯ ಗಂಡನಿಗೆ ‘ತನ್ನ ಹೆಂಡತಿ ಹಾಗೂ ತನ್ನ ಹಳೆ ಬಾಸ್ ಮಧ್ಯೆ ಏನೋ ಇದೆ’ ಎಂಬ ಅನುಮಾನ ಶುರುವಾಗುತ್ತದೆ. ಆತ ಕಿಡಿಕಿಡಿಯಾಗುತ್ತಾನೆ.
ಸುದ್ದಿ ತಿಳಿದ ಕಥಾನಾಯಕ, ಬಂಗಲೆ ಬಿಟ್ಟು ಗುಡಿಸಲಿಗೆ ಬರುತ್ತಾನೆ. ಆಗ ಅವನಲ್ಲಿ ಖರ್ಚಿಗೂ ಕಾಸಿರುವುದಿಲ್ಲ. ಪಾರಿವಾಳ ಮಾತ್ರ ಜತೆಗಿರುತ್ತೆ. ಹೀಗಿದ್ದಾಗಲೇ ಅವನ ಮನೆಗೆ ಬಂದ ನಾಯಕಿ, ‘ಊಟ ಹಾಕಿ’ ಅನ್ನುತ್ತಾಳೆ. ಕೈಲಿ ಕಾಸಿರಲ್ಲವಲ್ಲ? ಅದೇ ಕಾರಣದಿಂದ ತನ್ನ ಪ್ರೀತಿಪಾತ್ರ ಪಾರಿವಾಳವನ್ನೇ ಕೊಂದು ಊಟ ಹಾಕುತ್ತಾನೆ ನಾಯಕ. ಈಕೆ ಊಟದ ನಂತರ- ‘ಮಗೂಗೆ ಪಾರಿವಾಳ ಬೇಕಂತೆ ಕೊಡಿ’ ಅನ್ನುತ್ತಾಳೆ. ಅದಕ್ಕೆ ಉತ್ತರಿಸಲು ಸಾಧ್ಯವಾಗದೆ ಕಥಾನಾಯಕ ಸತ್ತುಹೋಗುತ್ತಾನೆ…
ಇದಿಷ್ಟು, ‘ಕಸ್ತೂರಿ ನಿವಾಸ’ದ ಸಂಕ್ಷಿಪ್ತ ಕಥೆ. ಈ ಕಥೆಯನ್ನು ೧೯೭೦ರಲ್ಲಿ ತಮಿಳಿನ ಜಿ. ಬಾಲಸುಬ್ರಹ್ಮಣ್ಯಂ ಅವರು, ಅಂದಿನ ಪ್ರಸಿದ್ಧ ನಟ ಶಿವಾಜಿಗಣೇಶನ್ಗೆ ಅಂತಾನೇ ಬರೆದರಂತೆ. ಆದರೆ, ಕಥೆ ಕೇಳಿದ ಶಿವಾಜಿ ‘ಕಥೆಯೇನೋ ಚೆನ್ನಾಗಿದೆ. ಆದರೆ ಕಡೇಲಿ ಟ್ರ್ಯಾಜಿಡಿ ಇದೆ. ಅದನ್ನು ನನ್ನ ಅಭಿಮಾನಿಗಳು ಇಷ್ಟಪಡಲ್ಲ. ಕಥಾನಾಯಕ ಸಾಯೋದು ನನಗೂ ಇಷ್ಟವಿಲ್ಲ’ ಅಂದರಂತೆ.
ಮುಂದೊಂದು ದಿನ ಈ ಕಥೆ ಕೇಳಿದ ಚಿ. ಉದಯಶಂಕರ್, ತಕ್ಷಣವೇ ದೊರೆ-ಭಗವಾನ್ರನ್ನು ಕಂಡು ನಿರ್ಮಾಣ-ನಿರ್ದೇಶನ ಎರಡೂ ನಿಮ್ಮದೇ ಇರಲಿ. ನಾನು ಸಂಭಾಷಣೆ, ಹಾಡು ಬರೆದುಕೊಡ್ತೇನೆ ಅಂದರಂತೆ. ಮುಂದೆ, ರಾಜ್ಕುಮಾರ್ ಅವರಿಗೆ ಈ ಕಥೆ ಹೇಳಿದಾಗ- ‘ಕಥೆಯೇನೋ ಚೆನ್ನಾಗಿದೆ ಉದಯಶಂಕರ್ ಅವರೇ. ಆದ್ರೆ ಟ್ರಾಜಿಡಿ ಎಂಡಿಂಗ್ ಇದೆ. ಅದನ್ನು ನನ್ನ ಅಭಿಮಾನಿಗಳು ಒಪ್ಪೋದಿಲ್ಲ. ನನಗೂ ಕ್ಲೈಮ್ಯಾಕ್ಸ್ ಇಷ್ಟವಾಗಿಲ್ಲ. ಶಿವಾಜಿಗಣೇಶನ್ ಅವರಂಥ ನಟರೇ ಬೇಡ ಅಂದ ಮೇಲೆ ನಾನು ಹೇಗೆ ಮಾಡಲಿ? ಕಥೇನ ಸುಖಾಂತ ಆಗುವಂತೆ ಬದಲಾಯಿಸಿ. ಆಗ ನೋಡೋಣ’ ಎಂದರಂತೆ.
ಆದರೆ, ಚಿ. ಉದಯಶಂಕರ್ದು ಒಂದೇ ಹಟ. ‘ಕಥೆ-ಅಂತ್ಯ ಎರಡೂ ತುಂಬಾ ಚೆನ್ನಾಗಿದೆ. ಏನೂ ಬದಲಿಸುವುದು ಬೇಡ..’ ಈ ಸಂದರ್ಭದಲ್ಲೇ ತಾವೂ ಕಥೆ ಕೇಳಿದ ರಾಜ್ ಸೋದರ ವರದಪ್ಪ ಹೇಳಿದರಂತೆ: ‘ಅಣ್ಣಾ, ಕಥೆ ಸೂಪರ್ರಾಗಿದೆ. ಒಪ್ಕೊ. ನಿಂಗೆ ದೊಡ್ಡ ಹೆಸರು ಬರುತ್ತೆ’. ಈ ಮಾತಿಗೆ ರಾಜ್- ‘ನನ್ನ ತಮ್ಮ ಇಷ್ಟಪಟ್ಟಿದ್ದಾನೆ. ಇಮೇಜಿನ ರಕ್ಷ ಣೆಗೆ ಉದಯಶಂಕರ್ ಇದ್ದಾರೆ. ಅಂದಮೇಲೆ ತಡವೇಕೆ? ಶೂಟಿಂಗ್ ಶುರುಮಾಡಿ, ಶಿವಾ ಅಂತ ಜಮಾಯಿಸ್ ಬಿಡೋಣ’ ಅಂದರಂತೆ…
‘ಕಸ್ತೂರಿ ನಿವಾಸ’ದ ಚಿತ್ರಕಥೆ ರಚನೆಯ ಸಂದರ್ಭದಲ್ಲಿ- ನಾಯಕ, ಬರಿಗೈದಾಸನಾಗಿ ಗುಡಿಸಲಲ್ಲಿ ಇದ್ದ ಸಂದರ್ಭದಲ್ಲಿ ಒಂದು ಹಾಡು ಇದ್ದರೆ ಚೆಂದ ಅನ್ನಿಸಿತಂತೆ. ‘ಗುಡಿಸಿಲಿನಲ್ಲಿ ಮಗುವಿನೊಂದಿಗೆ ಆಡುತ್ತ ಕೂತಿದ್ದಾಗ, ತನ್ನ ಆ ಕ್ಷಣದ ಸ್ಥಿತಿಯ ಬಗ್ಗೆ ತಾನೇ ಮರುಕಪಡುತ್ತ, ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುತ್ತಾ, ವಿಯಾಟದ ಮುಂದೆ ನಾವೆಲ್ಲಾ ದಾಳಗಳು ಎಂದು ವಿವರಿಸುತ್ತಾ; ‘ಎಂಥ ಸಂದರ್ಭವೇ ಎದುರಾದರೂ ನಾನು ದೇಹಿ ಅನ್ನಲಾರೆ. ಅಳುತ್ತ ಕೂರಲಾರೆ’ ಎಂದು ಕಥಾನಾಯಕ ಹಾಡಬೇಕು. ಆ ಹಾಡು ಮಗುವಿನ ಆಟಕ್ಕೂ ಅನ್ವಯಿಸುವಂಥ ಹಾಡು ಬರೆಯಿರಿ ಅಂದರಂತೆ ದೊರೆ-ಭಗವಾನ್.
ಈ ಚರ್ಚೆ ನಡೆದದ್ದು ಚೆನ್ನೈನ ಸ್ವಾಗತ್ ಹೋಟೆಲಿನಲ್ಲಿ. ಗುಡಿಸಲಿಗೆ ಬಂದು ಮಗು ಆಡ್ತಾ ಇರುತ್ತೆ ಅಂದಮೇಲೆ, ಈ ಸಂದರ್ಭಕ್ಕೆ ಒಂದು ಗೊಂಬೇನ ಇಟ್ಕೊಳ್ಳೋಣ. ವಿಯ ಮುಂದೆ ಮನುಷ್ಯ ಕೂಡ ಒಂದು ಗೊಂಬೆ ಎಂದೂ ಆ ಮೂಲಕ ಹೇಳಿದಂತಾಗುತ್ತೆ ಎಂದು ಚರ್ಚೆಯಲ್ಲಿ ಮಾತಾಗಿದೆ. ನಂತರ, ತಂಜಾವೂರ್ನ ಕುರುಲಗಂ ಹ್ಯಾಂಡಿಕ್ರಾಫ್ಟ್ನಿಂದ ಒಂದು ಗೊಂಬೆಯನ್ನೂ ತರಿಸಿದ್ದಾರೆ.
ತಂಜಾವೂರಿನ ಮಣ್ಣಿನ ಗೊಂಬೆಗಳ ವಿಶೇಷವೆಂದರೆ, ನಗುಮೊಗದ ಆ ಗೊಂಬೆಗಳು ತಳಭಾಗದಲ್ಲಿ ಭಾರವಿರುತ್ತವೆ. ಹಾಗಾಗಿ, ನೆಲದ ಮೇಲೋ, ಟೇಬಲ್ನ ಮೇಲೋ ಇಟ್ಟು ನೂಕಿದರೆ, ಅವು ಎಡಕ್ಕೂ ಬಲಕ್ಕೂ ವಾಲಾಡುತ್ತವೆಯೇ ವಿನಃ ಮಕಾಡೆ ಬೀಳುವುದಿಲ್ಲ. ಸ್ವಾಗತ್ ಹೋಟೆಲ್ನ ಟೇಬಲ್ ಮೇಲೆ ಗೊಂಬೆಯಿಟ್ಟು ಅದನ್ನೇ ಒಮ್ಮೆ ನೂಕಿದ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್- ‘ಯಾರು ಹೇಗೇ ನೂಕಿದ್ರೂ ಇದು ವಾಲಾಡುತ್ತೇ ವಿನಃ ಉರುಳಿಹೋಗಲ್ಲ. ಇದನ್ನು ತಯಾರಿಸಿದನಲ್ಲ ಶಿಲ್ಪಿ? ಅವನ ಕೈಚಳಕ ದೊಡ್ಡದು’ ಅಂದರಂತೆ. ಈ ಮಾತನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ಚಿ. ಉದಯಶಂಕರ್, ಮುಂದಿನ ಐದೇ ನಿಮಿಷದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು ಬರೆದೇಬಿಟ್ಟರು. ಅದರಲ್ಲಿ ಮಗುವಿನ ಸಂಭ್ರಮವಿತ್ತು. ನಾಯಕನ ಸಂಕಟವಿತ್ತು. ಒಂದು ಸಂದೇಶವಿತ್ತು. ಎಚ್ಚರಿಕೆಯಿತ್ತು. ನಾವೆಲ್ಲರೂ ವಿಯಾಡಿಸುವ ಗೊಂಬೆಗಳು ಎಂಬ ವಿವರಣೆಯಿತ್ತು. ‘ಆಡಿಸಿದಾತನ ಕೈಚಳಕದಲಿ ಎಲ್ಲ ಅಡಗಿದೆ’ ಎಂಬ ಸಾಲಿನಲ್ಲಿ ಗೊಂಬೆಯೊಂದಿಗೆ, ನಾಯಕನ ಬದುಕಿನ ಕಥೆಯೂ ತಳಕುಹಾಕಿಕೊಂಡಿತ್ತು.
‘ಕಸ್ತೂರಿ ನಿವಾಸ’ದಲ್ಲಿ ಈ ಹಾಡು ಎರಡು ಬಾರಿ ಬರುತ್ತದೆ. ‘ಆಡಿಸಿ ನೋಡು, ಬೀಳಿಸಿ ನೋಡು…’ವನ್ನು ಪಿ.ಬಿ. ಶ್ರೀನಿವಾಸ್ ಅವರೂ; ‘ಆಡಿಸಿದಾತ ಬೇಸರಮೂಡಿ ಆಟ ನಿಲಿಸಿದ…’ ಶೋಕಗೀತೆಯನ್ನು ಜಿ.ಕೆ. ವೆಂಕಟೇಶ್ ಅವರೂ ಹಾಡಿದ್ದಾರೆ. ‘ಆಡಿಸಿ ನೋಡು’ವಿನ ಟ್ಯೂನ್ನಲ್ಲೇ ‘ಆಡಿಸಿದಾತ…’ ಕೂಡ ಇದೆ. ಅದರ ಹಿನ್ನೆಲೆ ಕೂಡ ಸ್ವಾರಸ್ಯಕರವಾಗಿದೆ. ಮೊದಲಿಗೆ ಆ ಚಿತ್ರದಲ್ಲಿ ಶೋಕಗೀತೆಯ ಪ್ರಸ್ತಾಪವೇ ಇರಲಿಲ್ಲ. ಹಾಗಾಗಿ ‘ಆಡಿಸಿನೋಡು..’ವನ್ನು ಹಾಡಿ ಪಿ.ಬಿ.ಎಸ್. ಹೋಗಿಬಿಟ್ಟಿದ್ದರು. ಕಡೆಯಲ್ಲಿ ಕಥಾನಾಯಕನ ಕುಡಿ ಸತ್ತಾಗ, ಹಿನ್ನೆಲೆ ಸಂಗೀತದ ರೂಪದಲ್ಲಿ ಜಿ.ಕೆ. ವೆಂಕಟೇಶ್ ಅವರ ಸಹಾಯಕರಾಗಿದ್ದ ಎಲ್. ವೈದ್ಯನಾಥನ್, ವಯಲಿನ್ನಲ್ಲಿ ಶೋಕರಾಗ ನುಡಿಸಿದರಂತೆ. ಅದನ್ನು ಉದಯಶಂಕರ್ಗೆ ಕೇಳಿಸಿದಾಗ- ಅವರು- ‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ…’ ಎಂದು ಬರೆದರು. ಈಗಾಗಲೇ ಹಾಡಿ ಹೋಗಿರುವ ಪಿ.ಬಿ.ಎಸ್. ಅವರನ್ನೇ ಮತ್ತೆ ಕರೆಸಲು ಮುಜುಗರಗೊಂಡ ದೊರೆ-ಭಗವಾನ್- ‘ಸರ್, ನೀವೇ ಹಾಡಿಬಿಡಿ’ ಎಂದು ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಗೆ ಕೇಳಿಕೊಂಡರಂತೆ.
* * *
ಮುಂದೆ, ಉದಯಶಂಕರ್ ಅವರ ೬೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ೨೫೦ಗೀತೆಗಳ ಸಂಕಲನವೊಂದನ್ನು ತರಲು ಮೈಸೂರಿನ ಕಾವ್ಯಾಲಯ ಸಂಸ್ಥೆ ನಿರ್ಧರಿಸಿತು. ಹಾಡುಗಳ ಆಯ್ಕೆಗೆಂದು ಚಿ. ಉದಯಶಂಕರ್ ಜತೆಯೇ ಈಗಿನ ‘ಮಲ್ಲಿಗೆ’ ಮಾಸಿಕದ ಸಂಪಾದಕ ಎನ್.ಎಸ್. ಶ್ರೀಧರಮೂರ್ತಿ ಕುಳಿತಿದ್ದರು. ಆಗ ಮೂರ್ತಿಯವರು- ‘ಸರ್, ಸಂಕಲನಕ್ಕೆ ‘ಕಸ್ತೂರಿ ನಿವಾಸ’ದ ಹಾಡು ಸೇರಿಸೋಣ. ಅದು ಬಹಳ ಚೆನ್ನಾಗಿದೆ’ ಅಂದರಂತೆ. ಅದಕ್ಕೆ ಉದಯಶಂಕರ್- ನಾನು ಸತ್ತಾಗ ಎಲ್ರೂ ಅದನ್ನು ಖಂಡಿತ ನೆನಪು ಮಾಡ್ಕೋತಾರೆ’ ಅಂದರಂತೆ! ಈ ಮಾತಿಂದ ಮೂರ್ತಿಯವರು ತುಂಬಾ ಬೇಸರಿಸಿಕೊಂಡರಂತೆ.
ಮುಂದೆ, ಆ ಗೀತಗುಚ್ಛ ಬರುವ ಮೊದಲೇ ಉದಯಶಂಕರ್ ತೀರಿಕೊಂಡರು. ಆಗ ಪತ್ರಿಕೆಗಳು ನೀಡಿದ್ದ ಹೆಡ್ಲೈನ್: ‘ಆಡಿಸಿದಾತ ಬೇಸರಮೂಡಿ ಆಟ ಮುಗಿಸಿದ!’
* * *
ಅಂದಹಾಗೆ, ನಾಳೆ ಡಾ. ರಾಜ್ ಜನ್ಮದಿನ. ರಾಜ್ ಅಂದಾಕ್ಷಣ ‘ಆಡಿಸಿ ನೋಡು’ ಹಾಡು ನೆನಪಾಗುತ್ತದೆ. ಹಾಡು ಎಂದಾಕ್ಷಣ ಉದಯಶಂಕರ್ರ ನಗುಮೊಗ ಕಣ್ಮುಂದೆ ಬಂದು ನಿಲ್ಲುತ್ತದೆ. ಒಂದು ರೀತಿಯಲ್ಲಿ ಇದೂ ಕೂಡ ವಿವಿಲಾಸ. ಹೌದಲ್ಲವೆ?

ಸಿಗರೇಟಿನ ಬೆಂಕಿ ಕೈ ಸುಟ್ಟಾಗ ತತ್ತ್ವಪದದಂಥ ಹಾಡು ಹುಟ್ಟಿತು!

May 27, 2009

G_K_Venkatesh

ಚಿತ್ರ: ಭಕ್ತ ಕುಂಬಾರ. ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ.
ಸಂಗೀತ: ಜಿ.ಕೆ. ವೆಂಕಟೇಶ್. ಗಾಯಕ: ಪಿ.ಬಿ. ಶ್ರೀನಿವಾಸ್

ಪರತತ್ತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮವೊಂದುಳಿದು ನನಗೇನೂ ತಿಳಿದಿಲ್ಲ ||ಪ||
ಮಾನವಾ ದೇಹವು ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ||ಅ.ಪ.||

ನವಮಾಸಗಳು ಹೊಲಸಲಿ ಕಳೆದು
ನವರಂಧ್ರಗಳಾ ತಳೆದು ಬೆಳೆದು
ಬಂದಿದೆ ಭುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂಬೆ ||೧||

ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಘಳಿಗೆಯೇ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ? ||೨||

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರೀ ಕತ್ತಲೆ
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನಾ ಕೊಂಡಾಡಬೇಕು ||೩||
ವಿಠಲಾ ವಿಠಲಾ ಪಾಂಡುರಂಗ ವಿಠಲಾ
ವಿಠಲಾ ವಿಠಲಾ ಪಾಂಡುರಂಗ ವಿಠಲಾ
ಪಾಂಡುರಂಗ ವಿಠಲಾ ಜೈ ಪಾಂಡುರಂಗ ವಿಠಲಾ.
ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಗೀತೆರಚನೆಕಾರರು ಎಂದಾಕ್ಷಣ ಬೆಳ್ಳಾವೆ ನರಹರಿ ಶಾಸ್ತ್ರಿಗಳು, ವಿದ್ವಾನ್ ಲಾವಣಿ ಎಸ್. ನಂಜಪ್ಪ, ಜಿ.ವಿ. ಅಯ್ಯರ್, ಚಿ. ಸದಾಶಿವಯ್ಯ, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಚ್.ಎಲ್.ಎನ್. ಸಿಂಹ, ಎಸ್.ಕೆ. ಕರೀಂಖಾನ್, ಕು.ರಾ. ಸೀತಾರಾಮ ಶಾಸ್ತ್ರಿಗಳು ನೆನಪಾಗುತ್ತಾರೆ. ಈ ಸಂದರ್ಭದಲ್ಲಿಯೇ ನೆನಪಾಗುವ ಇನ್ನೊಂದು ಮುಖ್ಯ ಹೆಸರೇ ಹುಣಸೂರು ಕೃಷ್ಣಮೂರ್ತಿ ಅವರದು.
‘ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ/ಇಂಪನು ಇಟ್ಟವನ್ಯಾರೆ/ಹೂವಿನ ಎದೆಯಲಿ ಜೇನನು ತುಂಬಿ/ದುಂಬಿಯ ಕರೆದವನ್ಯಾರೆ’, ‘ಹಾಡು ಬಾ ಕೋಗಿಲೆ, ನಲಿದಾಡು ಬಾರೆ ನವಿಲೆ/ಸಿರಿಗನ್ನಡಾಂಬೆಯಾ ಜಯಧ್ವನಿ ಮೊಳಗಲಿ/ ಹಾಡು ಬಾ ಕೋಗಿಲೆ…’, ‘ನನ್ನ ನೀನು ನಿನ್ನ ನಾನು/ಕಾದುಕೊಂಡು ಕೂತುಕೊಂಡ್ರೆ/ಆಸೇಯು ತೀರದೆಂದು ಚಂದಮಾಮ/ಬೇಸಾರ ಕಳೆಯೋದೆಂತು ಚಂದಮಾಮ’
ಇಂಥವೇ ಮಧುರ ಗೀತೆಗಳ ಗೊಂಚಲು ಚೊಂಚಲನ್ನೇ ಕೊಟ್ಟವರು ಹುಣಸೂರು ಕೃಷ್ಣಮೂರ್ತಿ. ಚಿತ್ರಕಥಾ ಲೇಖಕನಾಗಿ ಚಿತ್ರರಂಗಕ್ಕೆ ಬಂದ ಅವರು ನಂತರ ಹಾಡು ಬರೆದರು. ಸಂಭಾಷಣೆ ಬರೆದರು. ನಟಿಸಿದರು. ನಿರ್ದೇಶನದ ಹೊಣೆ ಹೊತ್ತರು. ಜತೆಗೆ ನಿರ್ಮಾಪಕನಾಗುವ ಸಾಹಸಕ್ಕೂ ಮುಂದಾಗಿ, ಗೆದ್ದರು.
ವೀರಸಂಕಲ್ಪ, ರತ್ನಮಂಜರಿ, ಕನ್ನಿಕಾ ಪರಮೇಶ್ವರಿ ಕಥಾ, ಮಂತ್ರಶಕ್ತಿ ಹಾಗೂ ಅಡ್ಡದಾರಿ ಚಿತ್ರಗಳನ್ನು ನಿರ್ಮಿಸಿದ ಹುಣಸೂರು ಕೃಷ್ಣಮೂರ್ತಿಯವರು ನಿರ್ಮಾಪಕರಾಗಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲ. ಆದರೆ ನಿರ್ದೇಶಕನಾಗಿ, ಚಿತ್ರಸಾಹಿತಿಯಾಗಿ ಗೆದ್ದರು. ಅದರಲ್ಲೂ ೬೦ರ ದಶಕದಿಂದ ಆರಂಭಿಸಿ ೮೦ರ ದಶಕದ ಕಡೆಯವರೆಗೂ (ಅಂದರೆ, ಬದುಕಿದ್ದಷ್ಟೂ ದಿನ- ಹುಣಸೂರು ಕೃಷ್ಣಮೂರ್ತಿಯವರು ನಿಧನರಾದದ್ದು ೧೯೮೯ರ ಜನವರಿ ೧೩ರಂದು) ಪೌರಾಣಿಕ ಚಿತ್ರಗಳ ಏಕಮೇವಾದ್ವಿತೀಯ ನಿರ್ದೇಶಕ ಎನಿಸಿಕೊಂಡದ್ದು ಹುಣಸೂರು ಕೃಷ್ಣಮೂರ್ತಿ ಅವರ ಹೆಚ್ಚುಗಾರಿಕೆ. ಅವರು ನಿರ್ದೇಶಿಸಿದ ಪೌರಾಣಿಕ ಚಿತ್ರಗಳಾದರೂ ಯಾವ್ಯಾವುವು ಗೊತ್ತೆ?- ಶ್ರೀಕೃಷ್ಣ ಗಾರುಡಿ, ಭಕ್ತ ಕುಂಬಾರ, ಸತ್ಯ ಹರಿಶ್ಚಂದ್ರ, ಬಭ್ರುವಾಹನ, ಭಕ್ತ ಸಿರಿಯಾಳ, ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ, ನಂಜುಂಡೇಶ್ವರ ಮಹಿಮೆ… ಹೀಗೇ…
ಹುಣಸೂರು ಕೃಷ್ಣಮೂರ್ತಿಗಳು ಚಿತ್ರಂಗಕ್ಕೆ ಬಂದರಲ್ಲ? ಅದೂ ಸ್ವಾರಸ್ಯಕರವೇ. ಕೃಷ್ಣಮೂರ್ತಿಗಳ ತಂದೆ ಪಿಡಬ್ಲ್ಯುಡಿಯಲ್ಲಿ ನೌಕರಿಗಿದ್ದರು. ಮಗನೂ ತಮ್ಮಂತೆಯೇ ಸರಕಾರಿ ನೌಕರಿ ಸೇರಲಿ ಎಂಬುದು ಅವರಿಚ್ಛೆಯಾಗಿತ್ತು. ಆದರೆ, ಹೈಸ್ಕೂಲು ವ್ಯಾಸಂಗದ ವೇಳೆಗೇ ನಾಟಕ, ಏಕಪಾತ್ರಾಭಿನಯದ ಹುಚ್ಚು ಅಂಟಿಸಿಕೊಂಡಿದ್ದ ಹುಣಸೂರರು, ಅದೊಮ್ಮೆ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಷೇಕ್ಸ್ಪಿಯರ್ನ ‘ಒಥೆಲೊ’ ನಾಟಕದಲ್ಲಿ ಖಳನಾಯಕನ ಪಾತ್ರ ಮಾಡಿದರು. ಇವರ ಅಬ್ಬರದ ಮಾತು, ಠಾಕು ಠೀಕು ನಡೆಯನ್ನು ಕಂಡು ದಂಗಾದವರು, ಅದೇ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಹಿಂದಿ ಚಿತ್ರರಂಗದ ದೊಡ್ಡ ನಿರ್ದೇಶಕ ಕಪಾಡಿಯಾ. ನಾಟಕ ಮುಗಿದ ಕೂಡಲೇ ಹುಣಸೂರು ಕೃಷ್ಣಮೂರ್ತಿಯವರಿಗೆ ೧೦೦ ರೂ. ಬಹುಮಾನ ನೀಡಿದ ಕಪಾಡಿಯಾ, ನನ್ನ ಜತೆ ಬಾ. ಸಿನಿಮಾದಲ್ಲಿ ಕೊಡ್ತೇನೆ ಎಂದು ಹೇಳಿ ಬಾಂಬೆಗೆ ಕರೆದೊಯ್ದೇಬಿಟ್ಟರು.
ಅಲ್ಲಿ ಕೆಲವು ದಿನವಿದ್ದು ಒಂದಷ್ಟು ಅನುಭವದೊಂದಿಗೆ ಮದ್ರಾಸಿಗೆ, ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು ಹುಣಸೂರು. ಮುಂದೆ ಅವರಿಗೆ ಕೃಷ್ಣಲೀಲಾ, ರಾಜಾವಿಕ್ರಮ, ನಳದಮಯಂತಿ, ಸೋದರಿ… ಮುಂತಾದ ಚಿತ್ರಗಳಲ್ಲಿ ಸಾಹಿತ್ಯ ರಚನೆಯ ಅವಕಾಶವೇನೋ ಸಿಕ್ಕಿತು ನಿಜ. ಆದರೆ, ಅದರಿಂದ ವಿಪರೀತ ಎಂಬಂಥ ಸಂಪಾದನೆ ಖಂಡಿತ ಇರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತಿತ್ತಂತೆ.
ಹುಣಸೂರು ಕೃಷ್ಣಮೂರ್ತಿಯವರಿಗೆ ಇದ್ದ ಕೆಟ್ಟ ಚಟವೆಂದರೆ ಸಿಗರೇಟು. ಅದರಲ್ಲೂ ೫೫೫ ಬ್ರ್ಯಾಂಡಿನ ಸಿಗರೇಟು ಇದ್ದರಂತೂ ಅದರ ಖುಷಿಯೇ ಬೇರೆ. ಈ ‘ರಹಸ್ಯ’ ತಿಳಿದಿದ್ದ ಕೆಲವು ನಿರ್ಮಾಪಕರು, ಹುಣಸೂರರ ಬಳಿ ಕಥೆ-ಚಿತ್ರಕಥೆ-ಸಂಭಾಷಣೆ ಬರೆಸಿಕೊಳ್ಳಲು ಬಂದು, ಮುಂಗಡ ಅಡ್ವಾನ್ಸ್ಗೆ ಹಣದ ಬದಲು ಒಂದು ಪ್ಯಾಕ್ ಸಿಗರೇಟು ಕೊಟ್ಟು- ‘ಒಂದು ವಾರದ ನಂತರ ಶೂಟಿಂಗ್ ಶುರುಮಾಡೋಣ ಸ್ವಾಮೀ. ಎಲ್ಲಾ ನಿಮ್ಮ ಕೈಲಿದೆ. ಈ ಬಡವರನ್ನು ಮರೀಬೇಡಿ’ ಎಂದು ಪೂಸಿ ಹೊಡೆದು ಹೋಗಿಬಿಡುತ್ತಿದ್ದರಂತೆ. ಪಾಪ, ನಿಷ್ಠುರವಾಗಿ ಮಾತಾಡಿ ಅಭ್ಯಾಸವೇ ಇರದ ಹುಣಸೂರು ಕೃಷ್ಣಮೂರ್ತಿಗಳು- ಆ ಸಿಗರೇಟ್ ಪ್ಯಾಕನ್ನು ಒಡೆಯದೆ, ಅದನ್ನು ಮತ್ತೆ ಅಂಗಡಿಗೆ ಒಯ್ದು, ಮೂಲಬೆಲೆಗಿಂತ ಕಡಿಮೆ ದುಡ್ಡಿಗೆ ಅದನ್ನು ಮಾರಿ ಮನೆಗೆ ಅಗತ್ಯವಿದ್ದ ದಿನಸಿ ಸಾಮಾನು ತರುತ್ತಿದ್ದರಂತೆ! ಇಲ್ಲವಾದರೆ ಆ ಕೆಲಸವನ್ನು ಹುಣಸೂರು ಕೃಷ್ಣಮೂರ್ತಿಗಳ ಮನೆಯಲ್ಲಿದ್ದು ಅವರ ಮಕ್ಕಳಿಗೆ ಪಾಠ ಹೇಳುತ್ತಿದ್ದ ಸಿ.ವಿ. ಶಿವಶಂಕರ್ ಮಾಡುತ್ತಿದ್ದರಂತೆ.
ಸ್ವಾರಸ್ಯವೆಂದರೆ, ಹುಣಸೂರು ಅವರಿಗಿದ್ದ ಈ ‘ಅತೀ’ ಎಂಬಂಥ ಸಿಗರೇಟಿನ ಹುಚ್ಚೇ ‘ಭಕ್ತ ಕುಂಬಾರ’ದ ಸೂಪರ್ಹಿಟ್ ಗೀತೆ ‘ಮಾನವಾ ದೇಹವು ಮೂಳೆ ಮಾಂಸದ ತಡಿಕೆ’ ಹಾಡಿನ ಸೃಷ್ಟಿಗೆ ಕಾರಣವಾಯಿತು! ಈ ಹಾಡು ಹುಟ್ಟಿದ ಸಂದರ್ಭ ತಿಳಿಯುವ ಮುನ್ನ, ಭಕ್ತಕುಂಬಾರ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ನೆನಪು ಮಾಡಿಕೊಳ್ಳಿ: ‘ಆ ಕಾಲದ ಶ್ರೇಷ್ಠ ಭಕ್ತರು ಕುಂಬಾರನ ಮನೆಗೆ ಬಂದಿರುತ್ತಾರೆ. ನಮ್ಮೆಲ್ಲರ ದೈವ ಪಾಂಡುರಂಗ ವಿಠಲನ ಮಹಿಮೆಯ ಬಗ್ಗೆ ಹೇಳಿ’ ಎಂದು ಅವರೆಲ್ಲ ಕುಂಬಾರನನ್ನು ವಿನಂತಿಸುತ್ತಾರೆ. ಎದುರಿಗೆ ಕೂತವರೋ ಮಹಾಮಹಿಮರು, ಸಕಲವಿದ್ಯಾಪಾರಂಗತರು. ಅಂಥವರ ಮುಂದೆ ನಾನೆಷ್ಟರವನು ಎಂಬ ಹಿಂಜರಿಕೆಯಿಂದಲೇ ಭಕ್ತಕುಂಬಾರನ ಹಾಡು ಶುರುವಾಗಬೇಕು. ಅದು ಏಕಕಾಲಕ್ಕೆ ಪ್ರಾರ್ಥನೆಯೂ, ಕೀರ್ತನೆಯೂ, ಸಾಮಾನ್ಯನೊಬ್ಬನ ಅಸಾಮಾನ್ಯ ತಿಳಿವಳಿಕೆಯ ಗೀತೆಯೂ ಆಗಿರಬೇಕು. ಅಂಥದೊಂದು ಹಾಡು ಬರೆಯಲೆಂದು ಹುಣಸೂರು ಕೃಷ್ಣಮೂರ್ತಿಗಳು ನಿರ್ಧರಿಸಿದರು. ಪಲ್ಲವಿಯ ಸಾಲುಗಳೇನೋ ಆ ಕ್ಷಣದಲ್ಲೇ ಅವರಿಗೆ ಹೊಳೆದುಬಿಟ್ಟವು. ಆದರೆ ಎರಡು ಸಾಲು ಬರೆದ ನಂತರ ಜಪ್ಪಯ್ಯಾ ಅಂದರೂ ನಂತರದ ಸಾಲು ಹೊಳೆಯಲೇ ಇಲ್ಲ.
ಹೀಗೇ ಹತ್ತು ನಿಮಿಷ ಕಳೆದುಹೋದಾಗ- ‘ಒಂದು ಸಿಗರೇಟು ಸೇದೋಣ. ಆಗಲಾದರೂ ಏನಾದ್ರೂ ಹೊಳೆಯುತ್ತೇನೋ’ ಎಂದುಕೊಂಡು ಸಿಗರೇಟು ಹಚ್ಚಿದರು ಹುಣಸೂರು. ಎರಡು ಧಮ್ ಎಳೆದವರು ಮತ್ತೆ ಹಾಡನ್ನು ಹೇಗೆ ಮುಂದುವರಿಸುವುದು ಎಂದು ಯೋಚಿಸುತ್ತಾ ಹಾಗೇ ಮೈಮರೆತು ನಿಂತುಬಿಟ್ಟರು. ಹೀಗೇ ಐದು ನಿಮಿಷ ಕಳೆದುಹೋಯಿತು. ಉರಿಯುತ್ತಿದ್ದ ಸಿಗರೇಟು ಖಾಲಿಯಾಗಿ ಇನ್ನೊಂದು ತುದಿಯ ಬೆಂಕಿ ಬೆರಳು ತಾಕಿದಾಗಲೇ ಇವರಿಗೆ ಎಚ್ಚರ! ಬೆಂಕಿ ತಾಕಿದ ಜಾಗದ ಚರ್ಮ ಚುರುಕ್ ಎಂದಿತಲ್ಲ? ಆ ಕ್ಷಣವೇ ಸುಟ್ಟ ಜಾಗವನ್ನು ಉಜ್ಜಿಕೊಂಡರು. ಇವರು ಉಜ್ಜಿದ ರಭಸಕ್ಕೆ ಆ ಭಾಗದ ಚರ್ಮ ಕಿತ್ತುಬಂತು. ಜತೆಗೆ ಅಲ್ಲಿದ್ದ ನರ, ಮೂಳೆಗಳ ಸ್ಪರ್ಶವೂ ಆಯಿತು. ಇಷ್ಟಾದ ತಕ್ಷಣವೇ- ‘ಹಾ, ಹೊಳೆಯಿತು ಹೊಳೆಯಿತು’ ಎಂದು ಉದ್ಗರಿಸಿದ ಹುಣಸೂರು- ‘ಮನುಷ್ಯ ದೇಹ ಅಂದ್ರೆ ಇಷ್ಟೇ, ನಾವು ನಶ್ವರ ಅಂತ ಗೊತ್ತಿದ್ರೂ ಅದನ್ನು ಬಗೆಬಗೆಯಲ್ಲಿ ಅಲಂಕಾರ ಮಾಡ್ತೀವಿ. ಬೆತ್ತಲಾಗಿ ಬಂದು ಬೆತ್ತಲಾಗಿಯೇ ಹೋಗುವ ಮೊದಲು ಹೇಗೆಲ್ಲಾ ಮೆರೀತೀವಿ’ ಎಂದು ಸ್ವಗತವೆಂಬಂತೆ ಹೇಳಿಕೊಂಡರು. ಮರುಕ್ಷಣವೇ ಪೆನ್ನು-ಹಾಳೆ ತೆಗೆದುಕೊಂಡು ‘ಮಾನವಾ ಮೂಳೆ ಮಾಂಸದ ತಡಿಕೆ’ ಹಾಡು ಬರೆದೇಬಿಟ್ಟರು.
ಸುಮ್ಮನೆ ಗಮನಿಸಿ ನೋಡಿ: ‘ಭಕ್ತ ಕುಂಬಾರ’ದ ಈ ಹಾಡಿನಲ್ಲಿ ಭಕ್ತಿಯಿದೆ. ಪ್ರೀತಿಯಿದೆ. ಶರಣಾಗತಿಯಿದೆ. ಸಂದೇಶವಿದೆ. ಜೀವನದರ್ಶನವಿದೆ. ಬದುಕೆಂದರೆ ಏನು ಎಂಬ ಪ್ರಶ್ನೆಗೆ ಸರಳ ಉತ್ತರವಿದೆ. ಭಕ್ತಿಯೇ ಬದುಕಾದಾಗ ಮಾತ್ರ ಮುಕ್ತಿ ಸಾಧ್ಯ ಎಂಬ ಬುದ್ಧಿಮಾತೂ ಇದೆ. ಸ್ವಾರಸ್ಯವೆಂದರೆ, ಇವೆಲ್ಲವನ್ನೂ ಹುಣಸೂರು ಕೃಷ್ಣಮೂರ್ತಿಯವರು ಒಂದೇ ಒಂದು ಹಾಡಿನಲ್ಲಿ ಹೇಳಿಬಿಟ್ಟಿದ್ದಾರೆ.
ಅಂದಹಾಗೆ, ಹುಣಸೂರು ಕೃಷ್ಣಮೂರ್ತಿಯವರು ಒಂದು ಹಾಡಿನ ನೆಪದಲ್ಲಿ ಇಡೀ ಬದುಕಿನ ಕಥೆಯನ್ನು ‘ಬಂಗಾರದ ಮನುಷ್ಯ’ ಚಿತ್ರದ ‘ನಗುನಗುತಾ ನಲೀ ನಲೀ’ ಹಾಗೂ ಭಕ್ತ ಸಿರಿಯಾಳ ಚಿತ್ರದ ‘ಶಿವ ಶಿವ ಎಂದರೆ ಭಯವಿಲ್ಲ’ ಹಾಡುಗಳಲ್ಲೂ ಹೇಳಿದರು.
ಹೀಗೆ ತತ್ತ್ವಪದಗಳಂಥ ಹಾಡುಗಳಿಂದಲೇ ಎಲ್ಲರನ್ನೂ ಕಾಡುವ ಹುಣಸೂರರು ‘ಬಭ್ರುವಾಹನ’ಕ್ಕೆ ‘ಆರಾಸುವೆ ಮದನಾರಿ’ ಎಂಬ ಸರಸದ ಹಾಡನ್ನೂ; ರತ್ನಮಂಜರಿ ಚಿತ್ರಕ್ಕಾಗಿ ‘ಗಿಲ್ ಗಿಲ್ ಗಿಲಿ ಗಿಲಕ್ಕ/ ಕಾಲು ಗೆಜ್ಜೆ ಝಣಕ್ಕ/ ಕೈಯ ಬಳೆ ಠಣಕ್ಕ ರಂಗೆದ್ದಿತೊ, ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ’ ಎಂಬ ತಮಾಷೆ ಹಾಡುಗಳನ್ನೂ ಬರೆದರು.
ಈ ಹಾಡುಗಳನ್ನು ಬರೆದ ಸಂದರ್ಭದಲ್ಲಿ ಕೂಡ ಹುಣಸೂರು ಅವರಿಗೆ ಸೂರ್ತಿ ನೀಡಿದ್ದು- ಹೊಸ ಹೊಸ ಪದಗಳನ್ನು ಜತೆಮಾಡಿಕೊಟ್ಟಿದ್ದು- ಅವರ ಪ್ರೀತಿಪಾತ್ರ ಸಿಗರೇಟೇ!
ಈಗ ಹೇಳಿ, ಎಲ್ಲಿಯ ಮಧುರ ಹಾಡು, ಇದೆಲ್ಲಿಯ ಕಮಟುವಾಸನೆಯ ಸಿಗರೇಟು?

ಸಿಂಹ ಅವರ ವೇಷದಲ್ಲಿ ಕೈಲಾಸಂ ಬಂದಿದ್ರು, ಗೊತ್ತಾ?

May 27, 2009

simha

ಕೈಲಾಸಂ ಕುರಿತು ಇರುವ ಕತೆಗಳಿಗೆ ಲೆಕ್ಕವಿಲ್ಲ. ಆ ಪೈಕಿ ಸ್ವಾರಸ್ಯಕರ ಎಂಬಂಥ ಒಂದೆರಡು ಸ್ಯಾಂಪಲ್‌ಗಳು ಹೀಗಿವೆ. ಸ್ಯಾಂಪಲ್ ಒಂದು: ಕೈಲಾಸಂ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದರಂತೆ. ಅವರು ಹಾಸನದಲ್ಲಿ ಪ್ರೌಢಶಾಲೆಯಲ್ಲಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ.

ಈ ಕೈಲಾಸಂ ಸಾಹೇಬರು, ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಬಿಡಿಸಿ-ಉತ್ತರ ಪತ್ರಿಕೆಯ ಕೆಳಗೆ-‘ಮಾನ್ಯ ಪರೀಕ್ಷಕರೆ, ಯಾವುದಾದರೂ ಹತ್ತು ಉತ್ತರಗಳಿಗೆ ಮಾರ್ಕ್ಸ್ ಕೊಡಿ’ ಎಂದು ಬರೆದಿದ್ದರಂತೆ!

ಸ್ಯಾಂಪಲ್ ಎರಡು: ಕೈಲಾಸಂ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಅಲ್ಲಿ ಪಾಠ ಕಲಿತಿದ್ದಕ್ಕಿಂತ ಹೆಚ್ಚಾಗಿ ನಾಟಕ, ಸಂಗೀತ ಕಲಿತರು. ಈ ಮಧ್ಯೆಯೇ ಗುಂಡು ಸೇವನೆಯೂ ಆಗುತ್ತಿತ್ತು. ಅದೊಂದು ದಿನ ಕ್ಲಬ್‌ನಲ್ಲಿ ಹಾಡಿದ ಗಾಯಕನೊಬ್ಬ ತನ್ನ ಸಂಗೀತ ಜ್ಞಾನ, ಕಂಠಸಿರಿಯ ಬಗ್ಗೆ ತಾನೇ ಹೆಮ್ಮೆ ಪಡುತ್ತ- ‘ಧೈರ್ಯವಿದ್ದರೆ ಇಲ್ಲಿರುವ ಸಭಿಕರ ಪೈಕಿ ಯಾರಾದ್ರೂ ನನ್ನ ಥರಾನೇ ಹಾಡಿ ನೋಡೋಣ’ ಅಂದನಂತೆ.

ಈ ಛಾಲೆಂಜ್ ಸ್ವೀಕರಿಸಲು ಬ್ರಿಟಿಷರೇ ಹಿಂದೆ ಮುಂದೆ ನೋಡುತ್ತಿದ್ದಾಗ-ಛಕ್ಕನೆ ಮೇಲೆದ್ದ ಕೈಲಾಸಂ-ಒಂದಿಷ್ಟೂ ತಡವರಿಸದೆ ಆತನಂತೆಯೇ ಹಾಡಿ, ಎಲ್ಲರ ಶಹಭಾಷ್‌ಗಿರಿಯ ಜತೆಗೆ ಬಹುಮಾನವನ್ನೂ ಗಿಟ್ಟಿಸಿದರಂತೆ…

ಕೈಲಾಸಂ ಹೇಗಿದ್ದರು ಎಂದು ವಿವರಿಸುತ್ತಾ ಹೀಗೆಲ್ಲ ಹೇಳುವ ಜನರೇ ಮತ್ತೂ ಒಂದು ಸಾಲು ಸೇರಿಸುತ್ತಾರೆ: ‘ಕೈಲಾಸಂ ಒಂದು ಕೈಲಿ ಬುಸಬುಸನೆ ಸಿಗರೇಟು ಸೇದುತ್ತಾ, ಆಕಾಶಕ್ಕೆ ಹೊಗೆ ಬಿಡುತ್ತಾ, ತಮ್ಮ ನಾಟಕದ ಪಾತ್ರಗಳ ಸಂಭಾಷಣೆಯನ್ನು ಹೇಳ್ತಾ ಹೋಗ್ತಿದ್ರು. ಅವರ ಶಿಷ್ಯಂದಿರು ಅದನ್ನು ಬರೆದುಕೊಳ್ತಿದ್ರು. ಕೈಲಾಸಂ ಅವರಿಂದ ಡಿಕ್ಟೇಷನ್ ಪಡೆಯುವುದೇ ಸೌಭಾಗ್ಯ ಎಂದು ನಂಬಿದವರ ದೊಡ್ಡ ಹಿಂಡೇ ಅವರ ಸುತ್ತಮುತ್ತ ಇತ್ತು…’

***

ಈಗ ನಮ್ಮೊಂದಿಗಿಲ್ಲದ ಒಬ್ಬ  ವ್ಯಕ್ತಿಯ ಕುರಿತು ಇಂಥದೇ ‘ಕತೆ’ಗಳನ್ನು ಕೇಳಿದಾಗ, ಆತ ಹೀಗಿದ್ದನೇನೋ; ಹೀಗೆ ಮಾತಾಡುತ್ತಿದ್ದನೇನೋ; ಹೀಗೆ ನಡೆದಾಡುತ್ತಿದ್ದನೇನೋ ಎಂಬ ಅಂದಾಜಿನ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಅಂಥ ವ್ಯಕ್ತಿಯೊಬ್ಬನ ಪಾತ್ರವನ್ನು ರಂಗದ ಮೇಲೆ ತರುವುದಿದೆಯಲ್ಲ? ಅದು ನಿಜಕ್ಕೂ ಸವಾಲಿನ ಕೆಲಸ.

ಇಂಥದೊಂದು ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಟ ಸಿ.ಆರ್. ಸಿಂಹ ಅವರ ಹೆಚ್ಚುಗಾರಿಕೆ. ಕೈಲಾಸಂ ಅವರ ವ್ಯಕ್ತಿಚಿತ್ರವನ್ನು ‘ಟಿಪಿಕಲ್ ಟಿ.ಪಿ. ಕೈಲಾಸಂ’ ಎಂಬ ನಾಟಕದಲ್ಲಿ ಅಕ್ಷರ ರೂಪದಲ್ಲಿ ತೆರೆದಿಟ್ಟವರು ನಾಟಕಕಾರ, ನಿರ್ದೇಶಕ ಟಿ.ಎನ್. ನರಸಿಂಹನ್. ವೇದಿಕೆ ತಂಡದಿಂದ ನಟ ಸಿ.ಆರ್. ಸಿಂಹ ಆ ನಾಟಕವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಅದು ಒನ್‌ಮ್ಯಾನ್ ಶೋ. ಎರಡು ಗಂಟೆ ಇಪ್ಪತ್ತು ನಿಮಿಷಗಳ ಕಾಲ ‘ಕೈಲಾಸಂ’ ಆಗಿ ಸಿಂಹ ಇಡೀ ವೇದಿಕೆಯನ್ನೆ ಆಕ್ರಮಿಸಿಕೊಳ್ಳುವ ಪರಿಯಿದೆಯಲ್ಲ? ವಾಹ್, ಅದೊಂದು ಅದ್ಭುತ, ಅದೊಂದು ಸೋಜಿಗ, ಅದೊಂದು ಬೆರಗು ಮತ್ತು ಅದು ವರ್ಣನೆಗೆ ನಿಲುಕಲಾಗದ ಆನಂದ.

ಕೈಲಾಸಂ, ಚಟಪಟ ಮಾತಿನ; ಅಂಥದೇ ಬಿರುಸಿನ ಓಡಾಟದ ಆಸಾಮಿ. ಈ ಇಳಿವಯಸ್ಸಿನಲ್ಲಿ ಆ ಪಾತ್ರ ಮಾಡಲು ಸಿಂಹ ಅವರಿಗೆ ಸಾಧ್ಯವೇ? ಮೊನ್ನೆ, ಮೇ ೧೨ರ ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ನಾಟಕಕ್ಕೆ ಬಂದ ಎಲ್ಲರನ್ನೂ ಈ ಅನುಮಾನದ ಮುಳ್ಳು ಕಾಡುತ್ತಲೇ ಇತ್ತು. ವಯಸ್ಸಿನ ಕಾರಣದಿಂದ ಡೈಲಾಗ್ ಹೇಳುವಾಗ, ನಡೆದಾಡುವಾಗ, ಕೈಲಾಸಂ ಶೈಲಿಯಲ್ಲಿ ಡ್ಯಾನ್ಸ್ ಮಾಡಬೇಕಾಗಿ ಬಂದಾಗ ಸಿಂಹ ತಡವರಿಸಬಹುದು. ಈ ಕಾರಣದಿಂದಲೇ ನಾಟಕ ಸ್ವಲ್ಪ ಸಪ್ಪೆ ಅನ್ನಿಸಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು.

ಆದರೆ, ಹಾಗಾಗಲಿಲ್ಲ. ಸಿಂಹ-ಅದ್ಭುತವಾಗಿ ನಟಿಸಿದರು. ಅಲ್ಲಲ್ಲ, ಕೈಲಾಸಂ ಅವರೇ ಸಿಂಹ ಅವರ ವೇಷದಲ್ಲಿ ಬಂದು, ಕಲಾಕ್ಷೇತ್ರದ ಆ ಮೂಲೆಯಿಂದ ಈ ಮೂಲೆಯವರೆಗೂ ಪಾದರಸದಂತೆ ಓಡಾಡಿ, ತಮ್ಮ ಇಂಗ್ಲಿಷ್‌ಗನ್ನಡ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಒಂದೊಂದು ದೃಶ್ಯ ಮುಗಿದಾಗಲೂ ಇದೆಲ್ಲಾ ಕೈಲಾಸಂ, ಇದೆಲ್ಲ ಸಿಂಹ ಎಂದು ಖುಷಿಯಿಂದ ಚೀರುವಂತಾಗುತ್ತಿತ್ತು. ಒ ಂದು ವಿಶೇಷವೆಂದರೆ ನಾಟಕ ನಡೆದಷ್ಟೂ ಹೊತ್ತು ಸಿಂಹ ಅವರ ಮೊಗದ ತುಂಬಾ ಕೈಲಾಸಂ ಮುಖದ ಹೋಲಿಕೆಯೇ ಕಾಣುತ್ತಿತ್ತು. ಸಭಿಕರಿಗೆ ಒರಿಜನಲ್ ಸಿಂಹ, ಅವರ ಮುಖಾರವಿಂದ ಕಾಣಿಸಿದ್ದು ನಾಟಕ ಮುಗಿದ ಇಪ್ಪತ್ತು ನಿಮಿಷದ ನಂತರ!

ಅದನ್ನು ಕಂಡು ಪ್ರೇಕ್ಷಕರೊಬ್ಬರು ಖುಷಿಯಿಂದ ಉದ್ಗರಿಸಿದರು: ಕನ್ನಡಕೊಬ್ಬನೇ ಕೈಲಾಸಂ ಮತ್ತು ಕನ್ನಡಕ್ಕೊಬ್ಬರೇ ಸಿಂಹ!

-ಕಾಂತನ್