ಭಾವುಕರಾದ ಮನ್ನಾಡೇ ಒಂದು ಗೀತೆಯನ್ನು ಉಚಿತವಾಗಿ ಹಾಡಿದರು!

October 25, 2009

manna_pic

ಕಣ್ಣಿಲ್ಲವೇನೋ, ನಿಜ ಕಾಣದೇನೋ…
ಚಿತ್ರ: ಮಾರ್ಗದರ್ಶಿ. ಗೀತೆರಚನೆ: ವಿಜಯ ನಾರಸಿಂಹ
ಗಾಯನ: ಮನ್ನಾಡೇ. ಸಂಗೀತ: ಎಂ. ರಂಗರಾವ್.

ಕಣ್ಣಿಲ್ಲವೇನೋ, ನಿಜ ಕಾಣದೇನೋ
ಈ ಕುರುಡು ಲೋಕದಲ್ಲಿ ಸರಿದಾರಿ ಎಲ್ಲೋ
ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ
ದಯೆ ಸತ್ತ ಮೇಲೆ ಧರ್ಮ ದೂರಾಗದೇನೋ ||ಪ||

ನೀ ಅಂಜದಂತೆ ನಿಜಕಾಗಿ ಹೋದೆ
ಮುಳ್ಳಾಗಿ ಬಾಳ ಹಾದಿ ನೀ ನಿಂತೆ ಬೇರೆ
ಈ ಅಂಧಕಾರ ನೀಗಿ ಮಾರ್ಗದರ್ಶಿ ಯಾರೋ
ಈ ಸುಳ್ಳಿಗಾಗಿ ಸೋಲೆ ಸತ್ಯ ಗೆಲ್ಲದೋ ||೧||

ಹಿಡಿಮಣ್ಣೇ ಈ ಕಾಯ ಇದರಲ್ಲಿ ಅನ್ಯಾಯ
ಸುಖ-ದುಃಖ ಕಂದಾಯ, ಯಾರಲ್ಲೋ ಸಂದಾಯ ||೨||

ಕಳೆದ ಒಂದು ತಿಂಗಳಿಂದ ಮೇಲಿಂದ ಮೇಲೆ ಸುದ್ದಿಯಾಗುತ್ತಿರುವವರು ಗಾಯಕ ಮನ್ನಾಡೇ. ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು; ಕಳೆದ ಹತ್ತು ವರ್ಷಗಳಿಂದಲೂ ಅವರು ಬೆಂಗಳೂರಿನಲ್ಲಿಯೇ ವಾಸವಿರುವುದು; ತೊಂಬತ್ತೊಂದರ ಈ ಇಳಿವಯಸ್ಸಿನಲ್ಲೂ ಅವರು ಆಲ್ಟೋ ಕಾರು ಓಡಿಸುವುದು… ಇವೆಲ್ಲಾ ಮನ್ನಾಡೇಯವರು ಪದೇಪದೆ ಸುದ್ದಿಯಾಗಲು ಕಾರಣಗಳಾದವು.
ಬಹುಮಂದಿಗೆ ಗೊತ್ತಿರಲಿಕ್ಕಿಲ್ಲ. ಒಂದು ಪ್ರಾರ್ಥನೆಯಂತಿರುವ ‘ಜಯತೆ ಜಯತೆ ಸತ್ಯಮೇವ ಜಯತೆ’ಯನ್ನು ಹಾಡಿರುವವರು ಇದೇ ಮನ್ನಾಡೇ. ಅವರೊಂದಿಗಿರುವ ಹೆಣ್ಣುದನಿ ಸುಮನ್ ಕಲ್ಯಾಣ್ಪುರ್ ಅವರದು. ಅಂದಹಾಗೆ, ‘ಜಯತೆ ಜಯತೆ’ ಹಾಡಿರುವುದು ಕಲ್ಪವೃಕ್ಷ ಚಿತ್ರದಲ್ಲಿ. ಅದನ್ನು ಬರೆದವರು ಕು.ರಾ. ಸೀತಾರಾಮ ಶಾಸ್ತ್ರಿ.
ಇಲ್ಲಿ, ಮನ್ನಾಡೇ ಬಗ್ಗೆ ನಾಲ್ಕು ಮಾತು. ಮನ್ನಾಡೇ ಉತ್ತರ ಕೋಲ್ಕೊತಾದವರು. ಅವರ ಒರಿಜಿನಲ್ ಹೆಸರು ಪ್ರಬೋದ್ ಚಂದ್ರ ಡೇ. ಬಾಲ್ಯದಲ್ಲಿ ಮಾತ್ರವಲ್ಲ, ಕಾಲೇಜು ದಿನಗಳಲ್ಲಿ ಕೂಡ ಮನ್ನಾಡೇ ಅವರಿಗೆ ಸಂಗೀತದಲ್ಲಿ, ಹಾಡುಗಾರಿಕೆಯಲ್ಲಿ ಅಂಥ ವಿಶೇಷ ಒಲವೇನೂ ಇರಲಿಲ್ಲ. ಕಾಲೇಜಿನಲ್ಲಂತೂ, ಅವರು ಕುಸ್ತಿ ಹಾಗೂ ಬಾಕ್ಸಿಂಗ್ ಪಟುವಾಗಿ ದೊಡ್ಡ ಹೆಸರು ಮಾಡಿದ್ದರು.
ಆದರೆ, ಪದವಿ ಮುಗಿಯುತ್ತಿದ್ದಂತೆಯೇ ಉದ್ಯೋಗದ ಅನ್ವೇಷಣೆಗೆ ನಿಂತರಲ್ಲ? ಆ ದಿನಗಳಲ್ಲಿ ಅವರಿಗಿದ್ದ ದೊಡ್ಡ ಆಸರೆಯೆಂದರೆ ಚಿಕ್ಕಪ್ಪ ಕೃಷ್ಣ ಚಂದ್ರಡೇ ಅವರದ್ದು. ಅವರು ಬಾಂಬೆಯಲ್ಲಿ ಸಂಗೀತ ನಿರ್ದೇಶಕರಾಗಿದ್ದರು. ಚಿಕ್ಕಪ್ಪನ ನೆರಳಿಗೆ ಬಂದ ಮನ್ನಾಡೇ, ತುಂಬ ಬೇಗನೆ ಸಂಗೀತ ಕಲಿತರು. ಹಾಡುಗಾರಿಕೆಯಲ್ಲಿ ಪಳಗಿದರು. ಮುಂದೆ, ತಮ್ಮ ೨೨ನೇ ವಯಸ್ಸಿನಲ್ಲಿ ‘ತಮನ್ನಾ’ ಸಿನಿಮಾಕ್ಕಾಗಿ ‘ಸುರಯ್ಯಾ’ ಅವರೊಂದಿಗೆ ಡ್ಯೂಯೆಟ್ ಸಾಂಗ್ ಹಾಡಿದರು ಮನ್ನಾಡೇ. ಸಿನಿಮಾ ಹಿಟ್ ಆಯಿತು.
ಇಂಥ ಹಿನ್ನೆಲೆಯ ಮನ್ನಾಡೇ- ‘ಜಯತೆ ಜಯತೆ…’ ಸೇರಿದಂತೆ ಕನ್ನಡದಲ್ಲಿ ಒಟ್ಟು ಏಳು ಹಾಡುಗಳನ್ನು ಹಾಡಿದ್ದಾರೆ. ಅವುಗಳೆಂದರೆ ‘ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಜಗವಿದು ಸೋಜಿಗ’, ‘ನೀರೆ ನೀನು ಬಾರೆ’, ಕಲಾವತಿ ಚಿತ್ರದ ‘ಕುಹು ಕುಹೂ ಎನ್ನುತ ಹಾಡುವ…’ (ರಚನೆ: ಕುವೆಂಪು), ಮಾರ್ಗದರ್ಶಿ ಚಿತ್ರದ ಎರಡು ಹಾಡುಗಳು ಹಾಗೂ ಇನ್ನೊಂದು.
ಅದು, ಮಹಮದ್ ರಫಿಯವರು ಖ್ಯಾತಿಯ ತುತ್ತ ತುದಿಯಲ್ಲಿದ್ದ ಸಂದರ್ಭ. ಆಗ ಅವರನ್ನು ಸಂದರ್ಶಿಸಿದ ಪತ್ರಕರ್ತರೊಬ್ಬರು- ‘ಈಗ ನೀವೇ ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದೀರಿ. ಈ ಸಂದರ್ಭದಲ್ಲೂ ನಿಮ್ಮನ್ನು ಕಾಡುವ ಧ್ವನಿ ಯಾರದು? ನಿಮ್ಮ ಫೇವರಿಟ್ ಗಾಯಕ ಯಾರು’ ಎಂದು ಪ್ರಶ್ನಿಸಿದರು.
ಆಗ ಮಹಮ್ಮದ್ ರಫಿ ಹೇಳಿದ್ದರು: ‘ಇವತ್ತು ಜಗತ್ತು ನನ್ನ ಹಾಡು ಕೇಳುವ ಮೂಡ್ನಲ್ಲಿದೆ ನಿಜ. ಆದರೆ ನಾನು ಮನ್ನಾಡೇಯವರ ಹಾಡು ಕೇಳುವುದಕ್ಕೆ ಹಪಹಪಿಸ್ತಾ ಇದೀನಿ. ನನ್ನ ಫೇವರಿಟ್ ಗಾಯಕ ಅಂದ್ರೆ ಅವರೇ. ಅವರೊಬ್ಬರೇ…’
* * *
ಇಂಥ ಜಬರ್ದಸ್ತ್ ಹಿನ್ನೆಲೆಯ ಮನ್ನಾಡೇ ಅವರು, ‘ಮಾರ್ಗದರ್ಶಿ’ ಸಿನಿಮಾಕ್ಕೆ ಹಾಡಿದರಲ್ಲ? ಅದೂ ಒಂದು ಸ್ವಾರಸ್ಯಕರ ಕಥೆ. ಅದನ್ನು ತಿಳಿಯುವ ಮೊದಲು ’ಮಾರ್ಗದರ್ಶಿ’ ಸಿನಿಮಾದ ಕಥೆ ಹಾಗೂ ‘ಕಣ್ಣಿಲ್ಲವೇನೋ ನಿಜ ಕಾಣದೇನೋ’ ಹಾಡಿನ ಹಿನ್ನೆಲೆ ತಿಳಿಯೋಣ.
ದೇಶಕ್ಕೆ ಸ್ವಾತಂತ್ರ್ಯ ಬಂತಲ್ಲ? ಆ ನಂತರದಲ್ಲಿ ನೆಹರೂ ಅವರು ಕೈಗಾರಿಕೆಗೆ ಮಹತ್ವ ನೀಡಿದರು. ಬಹಳಷ್ಟು ಮಹಾನಗರಗಳಲ್ಲಿ ಒಂದರ ಹಿಂದೊಂದು ಕೈಗಾರಿಕೆಗಳು ಆರಂಭವಾದವು. ನೌಕರಿಯ ಆಸೆಯಿಂದ ಜನ ನಗರಗಳಿಗೆ ದುಗುಡ ಹೋಗತೊಡಗಿದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಗ್ರಾಮಗಳಲ್ಲಿ ಜನರೇ ಇಲ್ಲವಾಗಬಹುದು. ಗ್ರಾಮಗಳಿಲ್ಲದೆ ಭಾರತವಿಲ್ಲ ಎಂಬ ಗಾಂಜಿಯ ಆತಂಕ ನಿಜವಾಗಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದ್ದ ಸಂದರ್ಭ ಅದು. ಹೀಗಿದ್ದಾಗಲೇ ಹಳ್ಳಿಗಳ ಜನರಿಗೆ ಶಿಸ್ತು, ಸ್ವಚ್ಛತೆ, ಕಾನೂನು ಪಾಲನೆ, ವಿದ್ಯೆಯ ಮಹತ್ವ, ನೈರ್ಮಲ್ಯ, ಹಳ್ಳಿಗಳಿಗೆ ಅಗತ್ಯವಾಗಿ ಬೇಕಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ತಿಳಿಹೇಳುವ ಸಂದೇಶದ ಸಿನಿಮಾ ಒಂದನ್ನು ನಿರ್ಮಿಸಲು ಶ್ರೀಕಾಂತ್ ಅಂಡ್ ಶ್ರೀಕಾಂತ್ ಪ್ರೊಡಕ್ಷನ್ಸ್ ಸಂಸ್ಥೆ ಮುಂದೆ ಬಂತು. ಎಂ.ಆರ್. ವಿಠಲ್ಗೆ ನಿರ್ದೇಶನದ ಹೊಣೆ ಹೊರಿಸಿತು. ಆಗ ವಿಠಲ್ ಕಣ್ಣಿಗೆ ಬಿದ್ದ ಕಾದಂಬರಿಯೇ ತ.ರಾ.ಸು. ಅವರ ಮಾರ್ಗದರ್ಶಿ ಕಾದಂಬರಿ.
ಕಾದಂಬರಿಯನ್ನು, ತುಂಬ ಇಷ್ಟಪಟ್ಟ ವಿಠಲ್, ಈ ಸಿನಿಮಾಕ್ಕೆ ನೀವೇ ಸಂಭಾಷಣೆ, ಚಿತ್ರಕಥೆ ಬರೀಬೇಕು ಎಂದು ತ.ರಾ.ಸು. ಅವರನ್ನು ಒತ್ತಾಯಿಸಿ, ಒಪ್ಪಿಸಿದರು. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಸಿನಿಮಾದ ಕಥೆ ಇಷ್ಟು- ಅದೊಂದು ಹಳ್ಳಿ. ಅದು ನಗರದ ನಾಗರಿಕತೆಯಿಂದ ದೂರ ದೂರ. ಅದು ಕಳ್ಳರ ಕಾರಸ್ಥಾನವೇ ಆಗಿರುತ್ತದೆ. ಆ ಹಳ್ಳಿಯ ಒಂದಷ್ಟು ಮಂದಿ ಕೂಡ ಕಳ್ಳರ ಕಡೆಗೆ ಸೇರಿಕೊಂಡಿರುತ್ತಾರೆ. ಆ ಊರಿಗೆ ರಸ್ತೆ ಸಂಪರ್ಕವೇ ಇರುವುದಿಲ್ಲ. ಒಂದು ವೇಳೆ ರಸ್ತೆ ಮಾಡಿಸಿದರೆ, ಅದರಿಂದ ಪೊಲೀಸರು ಊರಿಗೆ ಬರಬಹುದು. ತಮ್ಮ ಕಳ್ಳ ವ್ಯವಹಾರ ಎಲ್ಲರಿಗೂ ಗೊತ್ತಾಗಬಹುದು. ನಂತರ ತಮ್ಮ ದಂಧೆಗೆ ಕಡಿವಾಣ ಬೀಳಬಹುದು ಎಂಬ ಕಾರಣಕ್ಕೆ, ಹಳ್ಳಿಗೆ ರಸ್ತೆ ಮಾಡುವುದಕ್ಕೇ ಕಳ್ಳರು ಅವಕಾಶ ಕೊಡುವುದಿಲ್ಲ.
ಹೀಗಿರುವಾಗ, ಅದೇ ಹಳ್ಳಿಯ ಯುವಕನೊಬ್ಬ ಮೈಸೂರಿಗೆ ಬಂದು ಪದವೀಧರನಾಗುತ್ತಾನೆ. ನಂತರ ತನ್ನ ಜತೆಗಾರರ ನೆರವಿನಿಂದ ಊರಿಗೆ ರಸ್ತೆ ಸಂಪರ್ಕ ಒದಗಿಸಲು; ನಾಗರಿಕ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಾನೆ. ಆಗ ಊರಲ್ಲಿದ್ದ ಕೇಡಿಗರ ಗುಂಪು ಅವನಿಗೆ ಹೆಜ್ಜೆ ಹೆಜ್ಜೆಗೂ ಕಾಟ ಕೊಡುತ್ತದೆ. ಆ ಸಂದರ್ಭದಲ್ಲಿ ಅಶರೀರವಾಣಿಯ ಮಾತಿನಂತೆ ಈ ಹಾಡು ಕೇಳಿಬರುತ್ತದೆ: ‘ಕಣ್ಣಿಲ್ಲವೇನೋ, ನಿಜ ಕಾಣದೇನೋ…’
ಹಾಡು ಬರಬೇಕಾದ ಸಂದರ್ಭವನ್ನು ವಿಠಲ್ ವಿವರಿಸಿದರು: ‘ಹೊರಜಗತ್ತಿನ ಸಂಪರ್ಕವೇ ಇರಲ್ಲವಲ್ಲ? ಹಾಗಾಗಿ ಆ ಹಳ್ಳಿಯಲ್ಲಿ ರಾತ್ರಿಯಷ್ಟೇ ಅಲ್ಲ, ಹಗಲೂ ಕತ್ತಲು ಕವಿದಿರುತ್ತೆ. ಎಂದರು. ಹೇಳಿ ಕೇಳಿ, ಅದು ಕಳ್ಳರ ಸಂತೆಯಂತಿರುತ್ತೆ. ಅಲ್ಲಿ ಸುಳ್ಳಿನದೇ ದರ್ಬಾರು. ಆದರ್ಶ, ಸತ್ಯ, ದಯೆ, ಧರ್ಮ ಯಾವುದೂ ಆ ಊರಲ್ಲಿ ಇರಲ್ಲ. ಕಳ್ಳತನವೇ ಬದುಕು ಅಂದುಕೊಂಡವರನ್ನು ಸರಿದಾರಿಯಲ್ಲಿ ಮುನ್ನಡೆಸುವ ಒಬ್ಬ ಲೀಡರ್ ಇರುವುದೇ ಇಲ್ಲ’ ಎಂದರು.
ಈ ಮಾತುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕಿದ ವಿಜಯ ನಾರಸಿಂಹ ‘ಕಣ್ಣಿಲ್ಲವೇನೋ, ನಿಜ ಕಾಣದೇನೋ… ಈ ಕುರುಡು ಲೋಕದಲ್ಲಿ ಸರಿದಾರಿ ಎಲ್ಲೋ…’ ಎಂದು ಆರಂಭಿಸಿ ಹತ್ತು ನಿಮಿಷದಲ್ಲಿ ಇಡೀ ಹಾಡು ಬರೆದು ಮುಗಿಸಿದರು. ಚಿತ್ರದ ಕ್ಲೈಮ್ಯಾಕ್ಸ್ಗೆ ಕುವೆಂಪು ಅವರ ‘ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ’ ಗೀತೆ ಅಳವಡಿಸಲು ವಿಠಲ್ ನಿರ್ಧರಿಸಿದ್ದರು. ಮೊದಲಿಂದಲೂ ಮನ್ನಾಡೇ ಅಭಿಮಾನಿಯಾಗಿದ್ದ ವಿಠಲ್, ಕ್ಲೈಮ್ಯಾಕ್ಸ್ ಗೀತೆಯನ್ನು ಅವರಿಂದಲೇ ಹಾಡಿಸಲು ನಿರ್ಧರಿಸಿದ್ದರು. ಮೊದಲು ಈ ಮಾತಿಗೆ ಮನ್ನಾಡೇ ಕೂಡ ಒಪ್ಪಿದ್ದರು. ಮದ್ರಾಸಿನಲ್ಲಿ ಹಾಡುಗಳ ರೆಕಾರ್ಡಿಂಗ್ ಎಂದೂ ನಿರ್ಧರಿಸಲಾಗಿತ್ತು. ಆದರೆ, ಕೆಲಸದ ಒತ್ತಡದಿಂದ ಮದ್ರಾಸಿಗೆ ಬರುವ ಕಾರ್ಯಕ್ರಮ ರದ್ದಾಯಿತು. ಆಗ ವಿಠಲ್ರನ್ನು ಸಂಪರ್ಕಿಸಿದ ಮನ್ನಾಡೇ- ‘ಒಂದು ಕೆಲ್ಸ ಮಾಡಿ. ನೀವೆಲ್ಲ ಬಾಂಬೆಗೇ ಬನ್ನಿ. ಇಲ್ಲಿನ ಆರ್ಕೆಸ್ಟ್ರಾ ಟೀಂ ಇಟ್ಕೊಂಡೇ ಹಾಡ್ತೇನೆ. ರೆಕಾರ್ಡ್ ಮಾಡಿಕೊಂಡು ಹೋಗಿ’ ಎಂದರು.
ಆ ದಿನಗಳಲ್ಲಿ ಬಾಂಬೆ ಆರ್ಕೆಸ್ಟ್ರಾ ತುಂಬಾ ದುಬಾರಿ ಎಂದೇ ಹೆಸರಾಗಿತ್ತು. ‘ನಡೆ ಮುಂದೆ…’ಯಲ್ಲಿ ಕೋರಸು ಹಾಡುಗಾರರೂ ಇದ್ದರು. ಅವರನ್ನು ಬಾಂಬೆಗೆ ಕರೆದೊಯ್ದು ಹಾಡಿಸುವಂಥ ಆರ್ಥಿಕ ಚೈತನ್ಯ ನಿರ್ಮಾಪಕರಿಗೆ ಇರಲಿಲ್ಲ. ತಕ್ಷಣವೇ ತಲೆ ಓಡಿಸಿದ ನಿರ್ದೇಶಕ ವಿಠಲ್ ’ನಡೆ ಮುಂದೆ ನಡೆ ಮುಂದೆ…’ ಗೀತೆಯನ್ನು ಪಿ.ಬಿ. ಶ್ರೀನಿವಾಸ್ರಿಂದ ಹಾಡಿಸಿಬಿಟ್ಟರು. ಕೋರಸ್ ಇಲ್ಲದ ‘ಕಣ್ಣಿಲ್ಲವೇನೋ..’ ಗೀತೆಯನ್ನು ಮನ್ನಾಡೇಗೆ ಮೀಸಲಿಟ್ಟರು. ನಂತರ ಮದ್ರಾಸ್ನಲ್ಲಿಯೇ ವಾದ್ಯ ಸಂಗೀತ ಕಲಾವಿದರನ್ನು ಸೇರಿಸಿ- ಎಂ. ರಂಗರಾವ್ ಅವರಿಂದಲೇ ಟ್ರ್ಯಾಕ್ನಲ್ಲಿ ಹಾಡಿಸಿದರು. ನಂತರ ರೆಕಾರ್ಡಿಂಗ್ ತಟ್ಟೆಯ ಒಂದು ಬದಿಯಲ್ಲಿ ಟ್ರ್ಯಾಕ್ನಲ್ಲಿ ಹಾಡಿದ್ದನ್ನು ಧ್ವನಿಮುದ್ರಿಸಿಕೊಂಡು, ಇನ್ನೊಂದು ಬದಿಯಲ್ಲಿ ಕೇವಲ ಹಿನ್ನೆಲೆ ಸಂಗೀತವನ್ನಷ್ಟೇ ಟೇಪ್ ಮಾಡಿಕೊಂಡರು. (ಮೂರೂವರೆ ದಶಕಗಳ ಹಿಂದೆಯೇ ಇಂಥ ಸಾಹಸ ಮಾಡಿದ್ದು ಅದ್ಭುತವೆಂದೇ ಹೇಳಬೇಕು!) ನಂತರ ನಿರ್ಮಾಪಕ ಶ್ರೀಕಾಂತ್, ಸಂಗೀತ ನಿರ್ದೇಶಕ ರಂಗರಾವ್, ಗೀತೆರಚನೆಕಾರ ವಿಜಯ ನಾರಸಿಂಹ ಅವರೊಂದಿಗೆ ಬಾಂಬೆಗೆ ಹೋಗಿ ಮನ್ನಾಡೇ ಅವರಿಗೆ ಎಲ್ಲವನ್ನೂ ವಿವರಿಸಿದರು.
ಒಂದು ಹಾಡಿಗಾಗಿ ಇಷ್ಟೆಲ್ಲ ಕಷ್ಟಪಟ್ಟಿದ್ದು ತಿಳಿದು, ಭಾವುಕರಾದ ಮನ್ನಾಡೇ-‘ನನ್ನ ವಿಷಯವಾಗಿ ನಿಮಗಿರುವ ಪ್ರೀತಿ-ಅಭಿಮಾನ ದೊಡ್ಡದು. ನೀವೆಲ್ಲ ಒಂದು ಹಾಡಿಗಾಗಿ ಅಷ್ಟು ದೂರದಿಂದ ಬಂದಿದ್ದೀರಿ. ನಿಮಗೆ ಇನ್ನೊಂದು ಹಾಡನ್ನು ಉಚಿತವಾಗಿ ಹಾಡ್ತೇನೆ’ ಎಂದರಂತೆ. ನಂತರ ಟ್ರ್ಯಾಕ್ಸಾಂಗ್ ಕೇಳಿಸಿಕೊಂಡು ಎಲ್ಲರೂ ವಾಹ್ವಾಹ್ ಎನ್ನುವಂತೆ ‘ಕಣ್ಣಿಲ್ಲವೇನೋ… ನಿಜ ಕಾಣದೇನೋ…’ ಹಾಡಿದರು. ಅದು ಮುಗಿದ ತಕ್ಷಣವೇ- ಇನ್ನೊಂದನ್ನು ಹಾಡ್ತೀನಿ ಅಂದೆನಲ್ಲ? ಅದೂ ಕೊಡಿ’ ಅಂದರಂತೆ. ಈ ಮಾತಿಂದ ಎಲ್ಲರಿಗೂ ಖುಷಿಯಾಯಿತು. ತಕ್ಷಣ ವಿಜಯ ನಾರಸಿಂಹ ಬರೆದಿದ್ದ ’ಅಣು ಅಣುವಿನಲ್ಲಿ ವಿಷ ದ್ವೇಷ ಜ್ವಾಲೆ, ಭೈರವನ ರುದ್ರಲೀಲೆ’ ಹಾಡು ತೋರಿಸಿದ ವಿಠಲ್- ‘ಇದನ್ನೂ ಹಾಡಿ ಸರ್’ ಎಂದರಂತೆ. ಪರಿಣಾಮ, ಮನ್ನಾಡೇ ಅವರ ಸಿರಿಕಂಠದಿಂದ ಬೋನಸ್ ರೂಪದಲ್ಲಿ ‘ಅಣು ಅಣುವಿನಲ್ಲೂ…’ ಗೀತೆ ಕನ್ನಡಕ್ಕೆ ದಕ್ಕಿತು.
ಈ ಹಾಡಿನ ಪ್ರಸಂಗದೊಂದಿಗೆ ಹೇಳಲೇಬೇಕಾದ ಇನ್ನೊಂದು ಮಾತೆಂದರೆ- ನಟ ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋಗೆ ಶುಕ್ರದೆಸೆ ಆರಂಭವಾದದ್ದು ಕೂಡ ‘ಮಾರ್ಗದರ್ಶಿ’ ಸಿನಿಮಾದ ಚಿತ್ರೀಕರಣದ ಮೂಲಕವೇ.
ಅಲ್ಲ, ಹಾಡಿನ ಕಥೆಗೆ ಕೈಹಾಕಿದರೆ, ಸ್ಟುಡಿಯೋದ ಕಥೆಯೂ ಜತೆಯಾಯಿತಲ್ಲ? ಅದಲ್ಲವೆ ಸ್ವಾರಸ್ಯ?

ಪುಟ್ಟ ಮನೆಯ ಅವಸರ ಮತ್ತು ಒತ್ತಡದಲ್ಲಿಯೇ ಈ ಹಾಡು ಹುಟ್ಟಿದ ಬಗೆ

October 25, 2009

ಸವಿ ನೆನಪುಗಳು ಬೇಕು…
ಚಿತ್ರ: ಅಪರಿಚಿತ. ಗೀತೆರಚನೆ: ರಾಮದಾಸ ನಾಯ್ಡು
ಗಾಯನ: ವಾಣಿ ಜಯರಾಂ. ಸಂಗೀತ: ಎಲ್. ವೈದ್ಯನಾಥನ್.

ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ
ಕಾಡುತಿದೆ ಮನವಾ…
ಸವಿನೆನಪುಗಳು ಬೇಕು, ಸವಿಯಲೀ ಬದುಕೂ ||ಪ||

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನಾ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನಾ ಎದೆಬಡಿತ ಗುಂಡಿನಾ ದನಿಗಿರಿದು
ಮಾಸುತಿದೆ ಕನಸೂ ||೧||

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನಾ ಭೀತಿಯಲಿ ನಾ ಬಂದಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವಾ ಹೂವೊಂದು ಕಮರುವಾ ಭಯದಲ್ಲಿ
ಸಾಗುತಿದೆ ಬದುಕೂ ||೨||
ನಾಯಕನ ವಿಷಯವಾಗಿ ಚಿತ್ರರಂಗದಲ್ಲಿ ಒಂದಿಷ್ಟು ನಂಬಿಕೆಗಳಿವೆ. ಏನೆಂದರೆ- ಹೀರೊ ಅನಿಸಿಕೊಂಡಾತ ಸುರಸುಂದರಾಂಗ ಆಗಿರಬೇಕು. ಅವನಿಗೆ ಡ್ಯಾನ್ಸು ಗೊತ್ತಿರಬೇಕು. ಫೈಟು ತಿಳಿದಿರಬೇಕು. ಕಾನೂನು ಕೈಗೆತ್ತಿಕೊಳ್ಳುವ ‘ಅವಸರ’ ಅವನಿಗಿರಬೇಕು. ಹೀರೊ ಅನ್ನಿಸಿಕೊಂಡ ಕಾರಣಕ್ಕೇ ಆತ ಏಕಕಾಲಕ್ಕೆ ಹತ್ತು ಮಂದಿಯನ್ನು ಚಚ್ಚಿ ಹಾಕಬೇಕು… ಇಂಥ ಎಲ್ಲ ನಂಬಿಕೆಗಳನ್ನೂ ಉಲ್ಟಾ ಮಾಡಿದವರು ಕಾಶೀನಾಥ್. ಸಾಧಾರಣ ರೂಪಿನವರೂ ಹೀರೊ ಆಗಿ ಗೆಲ್ಲಬಹುದು. ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಕಥೆ ಮುಖ್ಯವೇ ಹೊರತು ನಾಯಕನೋ, ನಾಯಕಿಯೋ ಅಲ್ಲ ಎಂಬುದನ್ನು ಆಗಿಂದಾಗ್ಗೆ ಪ್ರೂವ್ ಮಾಡುತ್ತಲೇ ಬಂದದ್ದು ಕಾಶೀನಾಥ್ ಅವರ ಹೆಚ್ಚುಗಾರಿಕೆ.
ಕಾಶೀನಾಥ್ ಅಂದಾಕ್ಷಣ ಎಲ್ಲರಿಗೂ ನೆನಪಾಗುವ ಸಿನಿಮಾ ‘ಅನುಭವ’. ಅದರ ಹಿಂದೆಯೇ- ಅವಳೇ ನನ್ನ ಹೆಂಡ್ತಿ, ತಾಯಿಗೊಬ್ಬ ತರ್ಲೆ ಮಗ, ಅಜಗಜಾಂತರ, ಹಲೋ ಯಮ, ಮನ್ಮಥಲೀಲೆ ಸಿನಿಮಾಗಳೂ ನೆನಪಾಗುವುದುಂಟು. ಹಾಗೆಯೇ ಕಾಶೀನಾಥ್ ‘ಮಹಾತ್ಮೆ’ಯ ಇನ್ನೊಂದು ಮುಖವನ್ನೂ ಪರಿಚಯಿಸುವ ‘ಅನಂತನ ಅವಾಂತರ’ ಸಿನಿಮಾ ನೆನಪಿಗೆ ಬಂದಾಗಲೆಲ್ಲ ಅಭಿಮಾನ, ಅಚ್ಚರಿ, ಅಸಮಾಧಾನ, ಕಸಿವಿಸಿ ಮತ್ತು ಥ್ರಿಲ್ ಒಟ್ಟೊಟ್ಟಿಗೇ ಆಗಿಬಿಡುವುದುಂಟು.
ಕನ್ನಡ ಚಿತ್ರರಂಗದಲ್ಲಿ ಹೀರೊ ಆಗಿ ಗೆಲ್ಲಬೇಕೆಂದರೆ, ಗಾಡ್ಫಾದರ್ಗಳ ಬೆಂಬಲ ಬೇಕು. ‘ನಮ್ಮವರು’ ಎನ್ನಿಸಿಕೊಂಡ ಒಂದಿಬ್ಬರು ನಿರ್ಮಾಪಕರು ಬೆನ್ನಿಗಿರಬೇಕು. ಹಾಗೆಯೇ, ಒಂದು ಸಿನಿಮಾ ಗೆಲ್ಲಬೇಕಾದರೆ ಅದು ತಾಂತ್ರಿಕವಾಗಿಯೂ ಶ್ರೀಮಂತವಾಗಿರಬೇಕು. ಭವ್ಯವಾದ ಸೆಟ್ಗಳಿಂದ ಕೂಡಿರಬೇಕು. ಆದರೆ, ಮೇಲೆ ವಿವರಿಸಿದ ಯಾವುದೇ ‘ಅರ್ಹತೆ’ ಇಲ್ಲದಿದ್ದರೂ ತಮ್ಮ ಸಿನಿಮಾಗಳನ್ನು ಗೆಲ್ಲಿಸಿದ್ದು ಕಾಶೀನಾಥ್ ಅವರ ಹೆಚ್ಚುಗಾರಿಕೆ. ಅವರು ಚಿತ್ರರಂಗ ಪ್ರವೇಶಿಸಿದ್ದು ‘ಅಪರೂಪದ ಅತಿಥಿಗಳು’ ಎಂಬ ಸಿನಿಮಾದ ಮೂಲಕ. ತಮ್ಮ ಚಿತ್ರರಂಗ ಪ್ರವೇಶ, ಕೌಟುಂಬಿಕ ಹಿನ್ನೆಲೆಯ ಬಗ್ಗೆ ಅವರು ಸ್ವಾರಸ್ಯಕರವಾಗಿ ವಿವರಿಸಿದ್ದು ಹೀಗೆ:
ನಮ್ಮದು ಕುಂದಾಪುರ ಸಮೀಪದ ಕೋಟೇಶ್ವರ. ನನ್ನ ಹೈಸ್ಕೂಲ್ವರೆಗಿನ ಶಿಕ್ಷಣ ಕುಂದಾಪುರ, ಲಿಂಗನಮಕ್ಕಿ ಹಾಗೂ ಜೋಗ್ಫಾಲ್ಸ್ನಲ್ಲಿ ನಡೆಯಿತು. ಮುಂದೆ, ನಮ್ಮ ತಂದೆಯವರು ಬೆಂಗಳೂರಿಗೆ ಬಂದರು. ಜಯನಗರ ನಾಲ್ಕನೇ ಬ್ಲಾಕ್ನಲ್ಲಿ ‘ಗಾಯತ್ರಿ ಜನರಲ್ ಸ್ಟೋರ್ಸ್’ ಹೆಸರಿನ ಅಂಗಡಿ ತೆರೆದರು. ವ್ಯಾಪಾರ ತುಂಬ ಜೋರಾಗಿಯೇ ನಡೆಯಿತು. ಈ ಮಧ್ಯೆ ನನ್ನ ಪದವಿ ಶಿಕ್ಷಣ ಕೂಡ ಮುಗಿಯಿತು. ಆಗಲೇ ನನ್ನನ್ನು ಕರೆದ ತಂದೆಯವರು- ‘ಮುಂದೆ ಏನು ಮಾಡಬೇಕು ಅಂತಿದೀಯ? ಓದುತ್ತೀಯಾ ಅಥವಾ ಅಂಗಡಿ ವ್ಯಾಪಾರ ನೋಡಿಕೋಳ್ತೀಯಾ?’ ಎಂದರು.
ಆ ವೇಳೆಗೆ ಚಿತ್ರರಂಗ ಸೇರಬೇಕು. ಹೀರೊ ಆಗಬೇಕು. ಸಿನಿಮಾ ನಿರ್ದೇಶಿಸಬೇಕು… ಇಂಥವೇ ಆಸೆಗಳು ನನ್ನ ಜತೆಗಿದ್ದವು. ತಂದೆಯವರಿಗೆ ಇದನ್ನೇ ಹೇಳಿದೆ. ‘ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷಿಸ್ತೇನೆ, ಸ್ವಲ್ಪ ದುಡ್ಡು ಕೊಡಿ’ ಎಂದೆ. ನಮ್ಮ ಕುಟುಂಬದಲ್ಲಿ ಯಾರೊಬ್ಬರಿಗೂ ಸಿನಿಮಾದ ಅಥವಾ ಸಂಗೀತದ ಗಂಧ-ಗಾಳಿ ಇರಲಿಲ್ಲ. ಪರಿಚಯವಿಲ್ಲದ, ಅನುಭವವೂ ಇಲ್ಲದ ಕ್ಷೇತ್ರಕ್ಕೆ ಹೋಗಿ ದುಡ್ಡು ಕಳ್ಕೋಬೇಡ ಎಂದು ತಂದೆ ಎಚ್ಚರಿಸಿದರು. ಮನೆಯಲ್ಲಿ ಎಲ್ಲರೂ ತಂದೆಯ ಮಾತಿನ ಪರವಾಗಿಯೇ ನಿಂತರು. ಒಂದಿಷ್ಟು ಮಂದಿ ಬಂಧುಗಳೂ ನನಗೆ ಬುದ್ಧಿ ಹೇಳಿ ಹೋದರು.
ಆದರೆ ನಾನು ಹಟ ಬಿಡಲಿಲ್ಲ. ಚಿತ್ರರಂಗಕ್ಕೆ ಹೋಗೋದೇ ಸೈ ಎಂದು ಪಟ್ಟು ಹಿಡಿದೆ. ನಂತರ ತಂದೆಯವರ ಬಳಿ ಹೋಗಿ- ‘ಒಂದು ವೇಳೆ ನಾನು ಅಂಗಡಿ ನೋಡಿಕೊಳ್ತೇನೆ ಅಂದ್ರೆ ಹೊಸದೊಂದು ಅಂಗಡಿ ತೆಗೆದುಕೊಡ್ತೀರ ಅಲ್ವ? ಅದಕ್ಕೆ ಮೀಸಲಾಗಿರುವ ಹಣದಲ್ಲಿ ಅರ್ಧ ಮಾತ್ರ ಕೊಡಿ. ಬಿಜಿನೆಸ್ ಆರಂಭಿಸೋಕೆ ಕೊಡ್ತಾ ಇದೀನಿ ಅಂತಾನೇ ಕೊಡಿ. ಈ ಪುಟ್ಟ ಗಂಟಿನಲ್ಲಿಯೇ ಚಿತ್ರರಂಗಕ್ಕೆ ಹೋಗಿ ಬರ್ತೀನಿ. ಒಂದು ವೇಳೆ ಈ ಪ್ರಯತ್ನದಲ್ಲಿ ಸೋತುಹೋದ್ರೆ ಮುಂದೆ ಸಿನಿಮಾದ ಸಹವಾಸಕ್ಕೆ ಹೋಗಲ್ಲ. ನೀವು ಹೇಳಿದ ಹಾಗೆ ಕೇಳಿಕೊಂಡು ಅಂಗಡಿ ವ್ಯಾಪಾರ ನೋಡಿಕೊಂಡು ಇದ್ದುಬಿಡ್ತೀನಿ’ ಅಂದೆ.
ಈ ವೇಳೆಗೆ, ನನ್ನ ನಿರ್ಧಾರದ ಬಗ್ಗೆ ತಂದೆಯವರಿಗೆ ಅರ್ಥವಾಗಿತ್ತು. ‘ಸರಿ, ನಿನ್ನಿಷ್ಟ’ ಎಂದು ಒಂದಿಷ್ಟು ದುಡ್ಡು ಕೊಟ್ಟರು. ಆ ಪುಟ್ಟ ಮೊತ್ತದಲ್ಲಿಯೇ ‘ಅಪರೂಪದ ಅತಿಥಿಗಳು’ ಸಿನಿಮಾ ತಯಾರಿಸಿದೆ. ಅವತ್ತಿಗೆ ನನಗೆ ಚಿತ್ರರಂಗದ ಪರಿಚಯವಿರಲಿಲ್ಲ. ಚಿತ್ರರಂಗಕ್ಕೂ ನನ್ನ ಪರಿಚಯವಿರಲಿಲ್ಲ. ಆದರೆ, ನನ್ನೊಳಗೆ ಉತ್ಸಾಹವಿತ್ತು, ಹಟವಿತ್ತು, ಛಲವಿತ್ತು. ಒಂದು ಹೊಸ ಟ್ರೆಂಡ್ ಆರಂಭಿಸಬೇಕೆಂಬ ಹಪಹಪಿಯಿತ್ತು. ಅಂಗಡಿಗಿದ್ದ ‘ಗಾಯತ್ರಿ ಜನರಲ್ ಸ್ಟೋರ್ಸ್’ ಎಂಬ ಹೆಸರನ್ನೇ ತಗೊಂಡು ಗಾಯತ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿನಿಮಾ ತೆಗೆದೆ. ಮೊದಲ ಸಿನಿಮಾದಿಂದ ನನಗೆ ಹೆಸರು ಬಂತು. ಹಾಕಿದ ಬಂಡವಾಳದ ಜತೆಗೆ ಒಂದಿಷ್ಟು ಲಾಭವೂ ದಕ್ಕಿತು. ನನ್ನ ಈ ಯಶಸ್ಸು ಕಂಡು ತಂದೆಯವರಿಗೆ ಖುಷಿಯಾಯಿತು. ‘ಇದೇ ರಂಗದಲ್ಲಿ ಮುಂದುವರಿ’ ಎಂದರು.ಮುಂದೆ ತಯಾರಾದದ್ದೇ ‘ಅಪರಿಚಿತ!’
‘ಅಪರಿಚಿತ’, ಒಂದು ರೋಚಕ ಕಥೆಯ ಪತ್ತೇದಾರಿ ಚಿತ್ರ. ಸಸ್ಪೆನ್ಸ್, ಥ್ರಿಲ್ಲರ್ ಎನ್ನಿಸಿಕೊಂಡ ಸಿನಿಮಾವೊಂದು ಹೇಗಿರಬೇಕು ಎಂಬ ಪ್ರಶ್ನೆಗೆ ‘ಅಪರಿಚಿತ’ ಸಿನಿಮಾ ಅತ್ಯುತ್ತಮ ಉದಾಹರಣೆ. ಸಾಮಾನ್ಯವಾಗಿ, ಪತ್ತೇದಾರಿ ಸಿನಿಮಾಗಳಲ್ಲಿ ಹಾಡುಗಳಿರುವುದಿಲ್ಲ. ಒಂದು ವೇಳೆ ಇದ್ದರೂ, ಅದು ಜನಪ್ರಿಯವಾಗಿರುವುದಿಲ್ಲ. ಆದರೆ, ಅಪರಿಚಿತ ಸಿನಿಮಾದಲ್ಲಿ ಹಾಗಾಗಲಿಲ್ಲ. ನಾಯಕಿಯ ಮೇಲೆ ಚಿತ್ರಿಸಿದ ‘ಸವಿನೆನಪುಗಳು ಬೇಕು ಸವಿಯಲೀ ಬದುಕು’ ಎಂಬ ಹಾಡು ಆ ಸಿನಿಮಾವನ್ನೂ ಮೀರಿ ಜನಪ್ರಿಯವಾಯಿತು. ಕನ್ನಡದ ಸೂಪರ್ಹಿಟ್ ಗೀತೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
ಈ ಹಾಡು ಬರೆದವರು ರಾಮದಾಸ್ ನಾಯ್ಡು. ಇವತ್ತಿಗೂ, ಹಾಡು ಕೇಳುವ ಎಲ್ಲರನ್ನೂ ನೆನಪುಗಳ ಉಯ್ಯಾಲೆಯಲ್ಲಿ ಜೀಕಿ ಖುಷಿಪಡಿಸುವ ಈ ಹಾಡು ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆಗೆ ಕಾಶೀನಾಥ್ ಹೇಳಿದರು: ಅಪರಿಚಿತ ಸಿನಿಮಾದ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ನಡೆಸ್ತಾ ಇದ್ವಿ. ಆಗ ನನ್ನೊಂದಿಗೆ ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್, ರಾಮದಾಸ್ ನಾಯ್ಡು ಹಾಗೂ ಇನ್ನೊಂದಿಬ್ಬರು ಇದ್ರು. ನಾಯಕಿ ಒಬ್ಬನನ್ನು ಪ್ರೀತಿಸಿರುತ್ತಾಳೆ. ಬದುಕು, ಜಗಳ, ಮಾತು, ಮುನಿಸು, ಸರಸ, ವಿರಸ, ನೋವು, ನಲಿವು ಎಲ್ಲವೂ ಅವನೊಂದಿಗೇ. ಈ ಜನ್ಮವೆಂಬುದು ಅವನೊಬ್ಬನಿಗೇ ಮೀಸಲು ಎಂದೆಲ್ಲ ಆಕೆ ಅಂದುಕೊಂಡಿರುತ್ತಾಳೆ. ಅವನೊಂದಿಗಿನ ಹೊಸ ಬದುಕಿನ ಬಗ್ಗೆ ಕನಸು ಕಂಡಿರುತ್ತಾಳೆ. ಹೀಗಿದ್ದಾಗಲೇ ಕಥೆಗೆ ಒಂದು ದಿಢೀರ್ ತಿರುವು ಸಿಗುತ್ತದೆ. ಕೊಲೆಯೊಂದರ ತನಿಖೆಗೆಂದು ನಾಯಕಿಯ ಗೆಳೆಯ ಹೋಗಿಬಿಡುತ್ತಾನೆ. ಅವನ ನೆನಪಲ್ಲಿ ತೇಲಿಹೋದ ನಾಯಕಿ ಒಂದು ಹಾಡಿನ ಮೂಲಕ ತನ್ನ ಅಷ್ಟೂ ಸಂಕಟ ಹೇಳಿಕೊಳ್ಳಬೇಕು…
ಕಥೆಯ ಚರ್ಚೆಗೆಂದು ಕುಳಿತಿದ್ದವರು ಹೀಗೆಲ್ಲ ಮಾತಾಡಿಕೊಂಡಾಗಲೇ ನನಗನ್ನಿಸಿತು ಏನೆಂದರೆ, ಪ್ರತಿಯೊಬ್ಬರೂ ದಿನದಿನವೂ ನೆನಪುಗಳೊಂದಿಗೇ ಬದುಕುತ್ತಾರೆ. ಈ ನೆನಪುಗಳು ಕೆಲವೊಮ್ಮೆ ಅಳಿಸುತ್ತವೆ, ಕೆಲವೊಮ್ಮೆ ನಗಿಸುತ್ತವೆ. ಕೆಲವೊಮ್ಮೆ ಸಿಟ್ಟಿಗೇಳುವಂತೆ ಮಾಡುತ್ತವೆ. ಒಂದೊಂದು ಸಂದರ್ಭದಲ್ಲಿ ಪಶ್ಚಾತ್ತಾಪ ಪಡುವಂತೆಯೂ ಮಾಡಿಬಿಡುತ್ತವೆ. ಸ್ವಾರಸ್ಯವೆಂದರೆ, ಎಲ್ಲರೂ ಒಳ್ಳೆಯ ನೆನಪುಗಳೊಂದಿಗೆ ಮಾತ್ರ ಬದುಕಲು ಇಷ್ಟಪಡುತ್ತಾರೆ. ಆದರೆ, ಬೇಡಬೇಡವೆಂದರೂ ಕೆಟ್ಟ ನೆನಪುಗಳೂ ಆಗಿಂದಾಗ್ಗೆ ಕೈ ಜಗ್ಗುತ್ತಲೇ ಇರುತ್ತವೆ…
ಇಂಥದೊಂದು ಯೋಚನೆ ಬಂದಾಗ ನಾನು ಅದನ್ನೇ ಸಂಗಡಿಗರಿಗೂ ಹೇಳಿದೆ, ‘ಇಲ್ಲಿ ನಾಯಕಿ ತನ್ನ ಗೆಳೆಯನೊಂದಿಗೆ ಸರಸವಾಡಿದ್ದು, ವಾಕಿಂಗ್ ಹೋಗಿದ್ದು, ಜಗಳವಾಡಿದ್ದು, ಕಿಲಕಿಲನೆ ನಕ್ಕಿದ್ದು, ಅವನು ಜತೆಗಿಲ್ಲವೆಂದು ಹೆದರಿದ್ದು, ಅವನನ್ನೇ ಹೆದರಿಸಿದ್ದು… ಮುಂತಾದ ಕ್ಷಣಗಳನ್ನು ನೆನಪು ಮಾಡಿಕೊಂಡು ಹಾಡ್ತಾಳೆ ನಿಜ. ಆದರೆ ಸಿನಿಮಾ ನೋಡಲು ಬಂದವರಿಗೆ, ಅವರವರ ಭಾವನೆಗಳೊಂದಿಗೆ ‘ಮಾತಾಡುವಂಥ’ ಹಾಡಾದರೆ ಚೆಂದ ಅನ್ನೋದು ನನ್ನ ಅಭಿಪ್ರಾಯ. ಹಾಗಾಗಿ ಸವಿನೆನಪು ಬೇಕು, ಕಹಿನೆನಪು ಸಾಕು ಎಂಬರ್ಥದ ಸಾಲುಗಳು ಹಾಡಲ್ಲಿ ಬರಲಿ’.
ಈ ಮಾತಿಗೆ ಎಲ್ಲರೂ ಸಮ್ಮತಿ ಸೂಚಿಸಿದರು. ನಂತರದ ಕ್ಷಣಗಳಲ್ಲಿ ಯಾವುದೋ ಲಹರಿಯಲ್ಲಿ ತೇಲಿಹೋದ ಎಲ್. ವೈದ್ಯನಾಥನ್ ಒಂದು ಸೊಗಸಾದ ಟ್ಯೂನ್ ಹೇಳಿದರು. ಅದನ್ನು ಕೇಳಿಸಿಕೊಂಡ ರಾಮದಾಸ್ ನಾಯ್ಡು, ‘ಸವಿನೆನಪುಗಳು ಬೇಕು ಸವಿಯಲೀ ಬದುಕು…’ ಎಂದು ಬರೆದರು. ತಕ್ಷಣ ಅಲ್ಲಿದ್ದವರೆಲ್ಲ – ‘ಮನಸ್ಸು ಸವಿನೆನಪುಗಳಿಗಾಗಿ ಹಂಬಲಿಸುತ್ತದೆ ನಿಜ. ಆದರೆ, ಹೆಚ್ಚಾಗಿ ಕಹಿ ನೆನಪುಗಳೇ ಕಾಡುತ್ತವೆ’ ಎಂಬುದು ಹೈಲೈಟ್ ಆಗಲಿ. ಏಕೆಂದರೆ, ನಾಯಕಿ ಕೂಡ ಬೇಸರದಲ್ಲಿದ್ದಾಗಲೇ ಈ ಹಾಡು ಬರುತ್ತದೆ ಎಂದೆವು.
ನಂತರದ ಕೆಲವೇ ಕ್ಷಣಗಳಲ್ಲಿ ಎಲ್ಲರ ಮನಸಿನೊಂದಿಗೂ ಮಾತಾಡಿ ಬಂದವರಂತೆ ಹಾಡು ಬರೆದೇಬಿಟ್ಟರು ರಾಮದಾಸ ನಾಯ್ಡು. ಅದನ್ನು ವಾಣಿ ಜಯರಾಂ, ವಿಷಾದವೆಂಬುದು ನಾಭಿಯಿಂದ ಉಕ್ಕುಕ್ಕಿ ಬಂದ ಭಾವದಲ್ಲಿ ಹಾಡಿಬಿಟ್ಟರು. ಮುಂದೆ ಸಿನಿಮಾ ಬಿಡುಗಡೆಯಾದಾಗ ಎಲ್ಲರೂ ಆ ಹಾಡಿನ ಬಗ್ಗೆಯೇ ಮಾತಾಡಲು ಶುರುಮಾಡುತ್ತಿದ್ದರು. ಮೆಚ್ಚಿನ ಚಿತ್ರಗೀತೆಗಳ ಪಟ್ಟಿಯಲ್ಲೂ ಆ ಹಾಡಿಗೆ ತುಂಬ ದಿನಗಳ ಕಾಲ ಮೊದಲ ಸ್ಥಾನವೇ ಇತ್ತು. ಈಗಲೂ ಆ ಹಾಡು ಕೇಳಿದಾಗಲೆಲ್ಲ-ಮೂವತ್ತೊಂದು ವರ್ಷಗಳ ಹಿಂದೆ (ಅಪರಿಚಿತ ಸಿನಿಮಾ ತೆರೆಕಂಡದ್ದು ೧೯೭೮ರಲ್ಲಿ) ಜಯನಗರದ ನಮ್ಮ ಪುಟ್ಟ ಮನೆಯಲ್ಲಿ ನಡೆಸಿದ ಮಾತುಕತೆ, ಒತ್ತಡದಲ್ಲಿ, ಅವಸರದ ಮಧ್ಯೆಯೇ ಈ ಹಾಡು ಹುಟ್ಟಿದ ಸಂದರ್ಭ ನೆನಪಾಗುತ್ತದೆ. ಹಾಡು ಕೇಳಿದಾಗಲೆಲ್ಲ ಯಾವುದೊ ಸಿಹಿ ನೆನಪು, ಜತೆಗೇ ಒಂದು ಕಹಿ ನೆನಪು ಕೈ ಜಗ್ಗಿದಂತಾಗಿ ಖುಷಿಯೂ ಒಟ್ಟೊಟ್ಟಿಗೇ ಆಗಿಬಿಡುತ್ತದೆ…

ಇಷ್ಟು ಹೇಳಿ ಕ್ಷಣ ಮೌನವಾದರು ಕಾಶೀನಾಥ್. ಅವರು ಯಾವುದೋ ಹೊಸ ನೆನಪಲ್ಲಿ ತೇಲಿಹೋಗುತ್ತಿದ್ದಾರೆ ಎಂಬುದಕ್ಕೆ ಅಲ್ಲಿ ಸಾಕ್ಷಿಯಿತ್ತು…

ಆಟೋದವನ ನಿಟ್ಟುಸಿರ ಮಾತು ಈ ಹಾಡಿಗೆ ಪ್ರೇರಣೆಯಾಯಿತು.

October 25, 2009

JayanthKaikini1

ಚಿತ್ರ: ಗೆಳೆಯ. ಗೀತೆರಚನೆ: ಜಯಂತ ಕಾಯ್ಕಿಣಿ
ಸಂಗೀತ: ಮನೋಮೂರ್ತಿ. ಗಾಯನ: ಸೋನು ನಿಗಮ್.

ಈ ಸಂಜೆ ಯಾಕಾಗಿದೆ ನೀನಿಲ್ಲದೆ, ಈ ಸಂಜೆ ಯಾಕಾಗಿದೆ?
ಈ ಸಂತೆ ಸಾಕಾಗಿದೆ ನೀನಿಲ್ಲದೆ, ಈ ಸಂತೆ ಸಾಕಾಗಿದೆ ||ಪ||
ಏಕಾಂತವೇ ಆಲಾಪವು ಏಕಾಂಗಿಯ ಸಲ್ಲಾಪವು
ಈ ಮೌನ ಬಿಸಿಯಾಗಿದೆ.. ಓ.. ಈ ಮೌನ ಬಿಸಿಯಾಗಿದೆ
ಈ ಸಂಜೆ ಯಾಕಾಗಿದೆ… ಈ ಸಂಜೆ ಯಾಕಾಗಿದೆ? ||ಅ.ಪ.||

ಈ ನೋವಿಗೆ ಕಿಡಿ ಸೋಕಿಸಿ ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೆ ನನ್ನೀ ಕ್ಷಣ
ನೆನಪೆಲ್ಲವೂ ಹೂವಾಗಿದೆ, ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೆ… ಈ ಜೀವ ಕಸಿಯಾಗಿದೆ ||೧||

ನೀನಿಲ್ಲದೆ ಆ ಚಂದಿರ ಈ ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ ಬೆಳದಿಂಗಳು ಅಸುನೀಗಿದೆ
ಆಕಾಶದಿ ಕಲೆಯಾಗಿದೆ, ಈ ಸಂಜೆಯಾ ಕೊಲೆಯಾಗಿದೆ
ಈ ಗಾಯ ಹಸಿಯಾಗಿದೆ… ಈ ಗಾಯ ಹಸಿಯಾಗಿದೆ ||೨||
ಗದುಗಿನ ನಾರಣಪ್ಪ, ತುಂಬ ಬೇಗ ಎದ್ದವನೇ ಸ್ನಾನ ಮಾಡಿ, ಒದ್ದೆಬಟ್ಟೆಯಲ್ಲೇ ಗದುಗಿನ ವೀರನಾರಾಯಣನ ದೇವಸ್ಥಾನಕ್ಕೆ ಬರುತ್ತಿದ್ದನಂತೆ. ಅಲ್ಲಿ ಒಂದು ನಿರ್ದಿಷ್ಟ ಕಂಬವನ್ನು ಒರಗಿ ಕೂತು, ಒದ್ದೆಬಟ್ಟೆ ಆರುವವರೆಗೂ ಬರೆಯುತ್ತಿದ್ದನಂತೆ. ಬಟ್ಟೆ ಒಣಗಿದ ನಂತರ ಅವನಿಗೆ ಕಾವ್ಯ ಹೊಳೆಯುತ್ತಿರಲಿಲ್ಲವಂತೆ. ಬಟ್ಟೆ ಒಣಗಿದ ನಂತರ ಒಂದು ಹೊಸ ಸಾಲು ಬೇಕೆಂದರೂ ಆತನೂ ಮರುದಿನ ಬೆಳಗಿನವರೆಗೂ ಕಾಯಬೇಕಿತ್ತಂತೆ!
ಕನ್ನಡದ ಮಹಾಕಾವ್ಯ ಎಂದೇ ಹೆಸರಾಗಿರುವ ‘ಕರ್ಣಾಟಕ ಭಾರತ ಕಥಾಮಂಜರಿ’ಯನ್ನು ಗದುಗಿನ ನಾರಣಪ್ಪ ಹೇಗೆ ಬರೆದ ಎಂಬ ಕುತೂಹಲದ ಪ್ರಶ್ನೆಗೆ ಹಿರಿಯರೆಲ್ಲ ಹೇಳುವ ಜನಜನಿತ ಉತ್ತರದ ಒಂದು ಸ್ಯಾಂಪಲ್ ಇದು.

ಚಲನಚಿತ್ರಗಳಿಗೆ, ತಾವು ಕಾಣದ ದೃಶ್ಯಗಳಿಗೆ, ಹಾಗೇ ಸುಮ್ಮನೆ ಅಂದಾಜು ಮಾಡಿಕೊಂಡು ಹಾಡು ಬರೆಯುವ ಚಿತ್ರಸಾಹಿತಿಗಳ ಬಗ್ಗೆ ಯೋಚಿಸುವಾಗಲೆಲ್ಲ ಗದುಗಿನ ನಾರಣಪ್ಪನ ಕಥೆ ನೆನಪಾಗುತ್ತದೆ. ಹಿಂದೆಯೇ ಒಂದಿಷ್ಟು ಪ್ರಶ್ನೆಗಳು ಎದ್ದುನಿಲ್ಲುತ್ತವೆ. ಏನೆಂದರೆ, ಸಿನಿಮಾಗಳಿಗೆ ಹಾಡು ಬರೆಯುವುದಿದೆಯಲ್ಲ, ಅದೊಂದು ಕಲೆಯಾ? ಮ್ಯಾಜಿಕ್ಕಾ? ಅಕ್ಷರಗಳೊಂದಿಗಿನ ಆಟವಾ? ಪದಕ್ಕೆ ಪದ ಜೋಡಿಸುವ ಹುಡುಗಾಟವಾ? ಅದೊಂದು ಧ್ಯಾನವಾ? ತಪಸ್ಸಾ? ಅಥವಾ, ಹೀಗೆ ಹಾಡು ಬರೆಯುವುದು ಕೆಲವರಿಗಷ್ಟೇ ದೈವದತ್ತವಾಗಿ ಒಲಿದ ವಿಶೇಷ ಸೌಭಾಗ್ಯವಾ? ಇಷ್ಟಕ್ಕೂ ಒಂದು ಹಾಡು ಬರೆಯಬೇಕಾದರೆ- ಪ್ರಶಾಂತ ವಾತಾವರಣ, ಹಾಡು ಬರೆಯಲು ಮೂಡ್ ಬರುವಂಥ (ಬರಿಸುವಂಥ) ವಿಶೇಷ ಅನುಕೂಲಗಳು ಏನಾದರೂ ಇರಲೇಬೇಕಾ?

ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಜಯಂತ ಕಾಯ್ಕಿಣಿಯವರು ಉತ್ತರಿಸಿದ್ದು ಹೀಗೆ: ‘ಹಾಡು ಬರೆಯಲು ಒಳ್ಳೆಯ ಮೂಡ್ ಬೇಕು. ಮೂಡ್ ಚೆನ್ನಾಗಿರಬೇಕು ಅಂದರೆ ಅಲ್ಲಿ ಪ್ರೈವೇಸಿ ಇರಬೇಕು. ಅಂಥದೊಂದು ಏಕಾಂತ ಬೇಕೆಂದರೆ ಹೋಟೆಲಿಗೇ ಹೋಗಬೇಕು. ಅಲ್ಲಿ ಎ.ಸಿ. ರೂಮ್ ಸಿಕ್ಕಿಬಿಟ್ಟರೆ, ಆ ರೂಮಿನಲ್ಲಿ ಸುವಾಸನಾಭರಿತ ಗಂಧದಕಡ್ಡಿಯನ್ನು ಹಚ್ಚಿಟ್ಟರೆ ಹಾಡು ಬರೆಯಲು ಮನಸ್ಸು ಬರುತ್ತೆ’ ಎಂದು ಕೆಲವರು ಹೇಳುವುದುಂಟು. ಆದರೆ ನನಗೆ ಅಂಥ ಯಾವ ಫೆಸಿಲಿಟಿಯ ಅಗತ್ಯವೂ ಇಲ್ಲ ಅನಿಸುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ- ಹಾಡು ಬರೆಯಬೇಕು ಎಂದರೆ, ಮೊದಲಿಗೆ ಟ್ಯೂನ್ ಇಷ್ಟವಾಗಬೇಕು. ಟ್ಯೂನ್ ಇಷ್ಟವಾಗಿಬಿಟ್ಟರೆ, ಎಲ್ಲಿಯಾದರೂ ಸರಿ, ಹಾಡು ಬರೆಯುವ ಉಮೇದಿ ಬರುತ್ತದೆ. ಒಂದು ಉದಾಹರಣೆ ಕೇಳಿ: ಇನ್ನೂ ಬಿಡುಗಡೆಯಾಗದ ‘ಪರಿಚಯ’ ಎಂಬ ಚಿತ್ರಕ್ಕೆ ಒಂದು ಲವ್ ಸಾಂಗ್ ಬೇಕೆಂದು ನಿರ್ದೇಶಕರಾದ ಸಂಜಯ್ ಕೇಳಿದ್ದರು. ಆ ಚಿತ್ರದ ಸಂಗೀತ ನಿರ್ದೇಶಕ ಜೆಸ್ಸಿಗಿಫ್ಟ್. ಅವರು ಕೇಳಿಸಿದ ಟ್ಯೂನ್ ನನಗೆ ತುಂಬ ಇಷ್ಟವಾಯಿತು. ಈ ಸಂದರ್ಭದಲ್ಲಿ ನಮ್ಮ ತಾಯಿಯವರು ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದರು. ಅಮ್ಮನನ್ನು ಆ ಸ್ಥಿತಿಯಲ್ಲಿ ನೋಡಿದಾಗಲೇ ‘ಓ ನನ್ನ ಒಲವೇ’ ಎಂಬ ಸಾಲು ಹೊಳೆಯಿತು. ಅದನ್ನೇ ಜತೆಗಿಟ್ಟುಕೊಂಡು ಹಾಡು ಬರೆದೆ…

ಒಂದು ಹಾಡು ಅಥವಾ ಹಾಡಿನ ಸಾಲು ಚಿತ್ರಸಾಹಿತಿಗೆ ಹೇಗೆಲ್ಲಾ ಹೊಳೆಯುತ್ತದೆ ಎಂಬುದಕ್ಕೆ ‘ಮುಂಗಾರು ಮಳೆ’ ಚಿತ್ರದ ‘ಕುಣಿದು ಕುಣಿದು ಬಾರೆ’ ಹಾಡು ಚೆಂದದ ಉದಾಹರಣೆ. ಆ ಹಾಡು ಸೃಷ್ಟಿಯಾದ ಸಂದರ್ಭ ಹೀಗೆ: ನಾನು ಗದಗ್ಗೆ ಯಾವುದೋ ಕಾರ್ಯಕ್ರಮಕ್ಕೆಂದು ಹೋಗಿದ್ದೆ. ಅಲ್ಲಿನ ರೆಸ್ಟೋರೆಂಟ್ನಲ್ಲಿ ತಿಂಡಿಗೆ ಹೋಗಿದ್ದಾಗಲೇ ಯೋಗರಾಜ ಭಟ್ ಅವರಿಂದ ಫೋನ್ ಬಂತು. ಅವರು ಮೊದಲು ಕಥೆ ವಿವರಿಸಿದರು. ನಂತರ ಟ್ಯೂನ್ ಕೇಳಿಸಿದರು. ಹಿಂದೆಯೇ ‘ಸ್ವಲ್ಪ ಅರ್ಜೆಂಟಿದೆ ಸಾರ್. ಬೇಗ ಹಾಡು ಬೇಕಲ್ಲ?’ ಅಂದರು.
ಟ್ಯೂನ್ ವಿಪರೀತ ಇಷ್ಟವಾಗಿತ್ತಲ್ಲ? ಅದೇ ಕಾರಣದಿಂದ- ‘ಇಡೀ ಹಾಡನ್ನು ಎಸ್ಸೆಮ್ಮೆಸ್ನಲ್ಲಿ ಕಳಿಸ್ತೇನೆ. ಆಗಬಹುದಾ?’ ಅಂದೆ. ಭಟ್ಟರು- ‘ನಿಜಕ್ಕೂ ಇದೊಂದು ಹೊಸ ಪ್ರಯೋಗ. ಆಗೇ ಬಿಡಲಿ ಸಾರ್’ ಎಂದರು. ಗದಗ್ನ ರೆಸ್ಟೋರೆಂಟ್ನಲ್ಲೇ ಪಲ್ಲವಿಯನ್ನು ಎಸ್ಎಂಎಸ್ ಮಾಡಿದೆ. ಮುಂದೆ ಹುಬ್ಬಳ್ಳಿಗೆ, ಸ್ನೇಹಿತರ ಮನೆಗೆಂದು ಹೋದಾಗ ಒಂದು ಚರಣ ಹೊಳೆಯಿತು. ಅದನ್ನೂ ಎಸ್ಸೆಮ್ಮೆಸ್ ಕಳಿಸಿದೆ. ಮುಂದೆ ಗೋಕರ್ಣದ ನಮ್ಮ ಮನೆಗೆ ಬಂದಾಗ ಎರಡನೇ ಚರಣ ಹೊಳೆಯಿತು. ಅದನ್ನೂ ಎಸ್ಸೆಮ್ಮೆಸ್ ಮಾಡಿದೆ. ಹೀಗೆ ಗೋಕರ್ಣದಿಂದ ಕಳಿಸಿದ ಎಸ್ಸೆಮ್ಮೆಸ್ನಲ್ಲಿ- ‘ಹೂವಿಗೆ ಬಣ್ಣ ತಂದವನೇ, ಪರಿಮಳದಲ್ಲಿ ಅರಳುವ ಬಾರೋ’ ಎಂಬ ಸಾಲಿನ ನಂತರ ‘ನನ್ನನು ಹುಡುಕಿ ತೆಗೆದವನೇ ಜತೆಗೆ ಕಳೆದು ಹೋಗುವ ಬಾರೋ’ ಎಂಬ ಸಾಲಿನ ಎಸ್ಸೆಮ್ಮೆಸ್ಸು ಯೋಗರಾಜ ಭಟ್ ಅವರಿಗೆ ಸಿಗಲೇ ಇಲ್ಲ! ಅವರು ಹಾಡು ಇಷ್ಟೇ ಇರಬೇಕು ಎಂದುಕೊಂಡು- ತಮಗೆ ಎಷ್ಟು ಎಸ್ಸೆಮ್ಮೆಸ್ ಬಂದಿತ್ತೋ ಅಷ್ಟನ್ನೇ ಶೂಟ್ ಮಾಡಿಕೊಂಡು ಬಂದುಬಿಟ್ಟರು!
ಸರ್, ‘ಗೆಳೆಯ’ ಚಿತ್ರದ ‘ಈ ಸಂಜೆ ಯಾಕಾಗಿದೇ’ ಹಾಡಿನ ಹಿಂದಿರುವ ಕಥೆ ಬೇಕು ಎಂದಾಗ ಕಾಯ್ಕಿಣಿಯವರು ಅಚಾನಕ್ಕಾಗಿ ಹೇಳಿದ ಎರಡು ಸ್ವಾರಸ್ಯಕರ ಪ್ರಸಂಗಗಳಿವು.
ಇರಲಿ. ಈಗ ‘ಗೆಳೆಯ’ ಚಿತ್ರದ ವಿಷಯಕ್ಕೆ ಬರೋಣ. ೨೦೦೭ರಲ್ಲಿ ತೆರೆಕಂಡ ಈ ಸಿನಿಮಾದ ಹೈಲೈಟ್ ಎಂದರೆ- ‘ಈ ಸಂಜೆ ಯಾಕಾಗಿದೇ’ ಹಾಡು. ಆ ಸಿನಿಮಾ ಗೆದ್ದಿದ್ದೇ ಈ ಹಾಡಿನಿಂದ ಎಂದು ಇವತ್ತಿಗೂ ಹಲವರು ವಾದಿಸುವುದುಂಟು. ಅದು ಉತ್ಪ್ರೇಕ್ಷೆಯ ಮಾತಲ್ಲ. ಈ ಹಾಡಿನ ಸಂದರ್ಭ ಹೀಗಿದೆ: ‘ಗೆಳೆಯ’ದ ನಾಯಕರುಗಳಾದ ತರುಣ್ ಸುರ್ ಹಾಗೂ ಪ್ರಜ್ವಲ್ ದೇವರಾಜ್ ಆಪ್ತಮಿತ್ರರು. ತರುಣ್ ಒಂದು ಗ್ಯಾರೇಜ್ ಇಟ್ಟಿರುತ್ತಾನೆ. ಅಲ್ಲಿಗೆ, ಊರ ಗೌಡನ ಕಾರು ರಿಪೇರಿಗೆ ಬಂದಿರುತ್ತೆ. ರಿಪೇರಿ ಮುಗಿದ ವೇಳೆಗೇ ಅಲ್ಲಿಗೆ ಬಂದ ಪ್ರಜ್ವಲ್- ‘ಒಂದೇ ಒಂದ್ಸಲ ಇದನ್ನು ಡ್ರೈವ್ ಮಾಡ್ತೇನೆ’ ಅನ್ನುತ್ತಾನೆ. ಗೆಳೆಯನಿಗೆ ‘ಇಲ್ಲ’ ಅನ್ನಲಾಗದ ತರುಣ್ ‘ಆಗಲಿ’ ಅನ್ನುತ್ತಾನೆ. ಪ್ರಜ್ವಲ್ ಡ್ರೈವ್ ಮಾಡುವಾಗ ಆ ಕಾರು ದುರಾದೃಷ್ಟವಶಾತ್ ಅಪಘಾತಕ್ಕೆ ಈಡಾಗುತ್ತೆ. ಕಾರ್ ರಿಪೇರಿಗೆಂದು ಪ್ರಜ್ವಲ್ ಸಾಲ ಮಾಡುತ್ತಾನೆ. ಮುಂದೆ ಸಾಲ ತೀರಿಸಲಾಗದೆ ಅವನು ಒದ್ದಾಡುವುದನ್ನು ಕಂಡ ತರುಣ್, ಹಳ್ಳಿಯನ್ನು ಬಿಟ್ಟು ಗೆಳೆಯನೊಂದಿಗೆ ಬೆಂಗಳೂರಿಗೆ ಬರುತ್ತಾನೆ. ಬೆಂಗಳೂರಿನಲ್ಲಿ ಇಬ್ಬರೂ ಒಂದೊಂದು ರೌಡಿಗುಂಪು ಸೇರಿಕೊಳ್ಳುತ್ತಾರೆ. ಬೆಂಗಳೂರಿಗೆ ಬಂದ ನಂತರವೂ ತರುಣ್ಗೆ ಹಳ್ಳಿಯಲ್ಲಿದ್ದ ಪ್ರೇಯಸಿಯ ನೆನಪು ಬಿಟ್ಟೂಬಿಡದೆ ಕಾಡುತ್ತದೆ. ಅವಳೊಂದಿಗೆ ಕುಣಿದದ್ದು,ನಲಿದದ್ದು, ಟೂ ಬಿಟ್ಟಿದ್ದು, ಜಗಳವಾಡಿದ್ದು, ರಾಜಿ ಮಾಡಿಕೊಂಡಿದ್ದು, ಆಣೆ-ಪ್ರಮಾಣ ಮಾಡಿದ್ದು… ಎಲ್ಲವೂ ಕ್ಷಣಕ್ಷಣವೂ ನೆನಪಾಗುತ್ತದೆ. ಅದರಲ್ಲೂ ಸಂಜೆಯ ವೇಳೆಯಲ್ಲಂತೂ ಅವಳ ನೆನಪು ಧುತ್ ಧುತ್.
ಹೀಗಿರುವಾಗಲೇ ಅದೊಂದು ಸಂಜೆ ಇವನು ತನ್ನಷ್ಟಕ್ಕೆ ತಾನೇ- ‘ಈ ಅಪರಿಚಿತ ಊರಲ್ಲಿ ಯಾರದೋ ತಲೆಯೊಡೆದು ಬದುಕುವುದಕ್ಕಿಂತ, ಊರಲ್ಲಿ ಅವಳೊಂದಿಗೆ ಇದ್ದಿದ್ರೆ ಎಷ್ಟು ಚೆಂದ ಇರ್ತಿತ್ತಲ್ವ?’ ಎಂದುಕೊಳ್ಳುತ್ತಾನೆ. ಆಗಲೇ ಅವನ ನಿಟ್ಟುಸಿರಿನಂತೆ, ಎಲ್ಲ ಪ್ರೇಮಿಗಳ ಪ್ರಾರ್ಥನೆಯಂತೆ, ಕರುಳಿಂದ ನುಗ್ಗಿ ಬಂದ ಸಂಗೀತದಂತೆ; ವಿರಹದ ಹೊಸ ರೂಪಿನಂತೆ ಹಾಡು ಕೇಳಿಸುತ್ತದೆ: ‘ಈ ಸಂಜೆ ಯಾಕಾಗಿದೇ, ನೀನಿಲ್ಲದೆ…’
ಈ ಹಾಡಿನ ಮೊದಲ ಸಾಲು ಹೊಳೆದದ್ದು ಹೇಗೆ? ನೀವು ಅದನ್ನು ಬರೆದದ್ದು ಎಲ್ಲಿ? ಆಗ ಹಗಲೋ ಇಲ್ಲ ರಾತ್ರಿಯೋ? ಅಥವಾ ಮುಸ್ಸಂಜೆಯಲ್ಲೇ ನೀವು ಹಾಡು ಬರೆದಿರೋ ಹೇಗೆ? ಎಂಬ ಪ್ರಶ್ನೆಗೆ ಜಯಂತ್ ಉತ್ತರಿಸಿದ್ದು ಹೀಗೆ: ‘ಗೆಳೆಯ’ ಚಿತ್ರಕ್ಕೆ ‘ಮನಸಲ್ಲಿ ಮಾತಾಡುವೆ’ ಎಂಬ ಹಾಡು ಬರೆದು ಆಗಿತ್ತು. ಆಕಾಶ್ ಸ್ಟುಡಿಯೋದಲ್ಲಿ ಅದರ ರೆಕಾರ್ಡಿಂಗ್ ಇತ್ತು. ಆಟೊದಲ್ಲಿ ಸ್ಟುಡಿಯೋಗೆ ಹೊರಟೆ. ಆಗಲೇ ಸಂಜೆಯಾಗುತ್ತಿತ್ತು. ಉದ್ದಕ್ಕೂ ಗಿಜಿಗಿಜಿ ಟ್ರಾಫಿಕ್ಕು. ಆಟೊ ಓಡಲಾರದೆ ಓಡುತ್ತಿತ್ತು. ಈ ಸಂದರ್ಭದಲ್ಲಿಯೇ ಡ್ರೈವರ್ ಮಾತಿಗಿಳಿದು ಹೇಳಿದ: ‘ಸಾರ್, ಈ ಆಟೋ ಡ್ರೈವರ್ ಬದುಕು ಸಾಕಾಗಿ ಹೋಗಿದೆ. ಆಟೊಗೆ ಹತ್ತಿದ ಜನ ಬೇಗ ಹೋಗಪ್ಪಾ, ಬೇಗ ಹೋಗಪ್ಪಾ’ ಅಂತಾರೆ. ಆದರೆ ‘ಸಾರ್, ಉದ್ದಕ್ಕೂ ಟ್ರಾಫಿಕ್ಕು. ಹೇಗೆ ಬೇಗ ಹೋಗುವುದು? ಕೆಲವರು ಸಿಗ್ನಲ್ ಲೈಟ್ ಕಂಡ ನಂತರವೂ ಬೇಗ ಹೋಗಪ್ಪಾ ಅನ್ನುತ್ತಾರೆ. ರೋಡ್ ಫ್ರೀ ಇದ್ರೆ ನಾವೇ ಹೋಗ್ತೇವೆ. ಉದ್ದಕ್ಕೂ ಟ್ರಾಫಿಕ್ ಕಂಡ ನಂತರವೂ ಹಾಗೆ ಹೇಳಿದ್ರೆ ಹೇಗೆ ಸಾರ್? ನನಗಂತೂ ಈ ಸಂಜೆ ಯಾಕಾದ್ರೂ ಆಗುತ್ತೋ? ಪ್ರತಿ ದಿನವೂ ಸಂಜೆಯಾದ ತಕ್ಷಣ ಸಂತೆಗೆ ಬಂದವರ ಹಾಗೆ ಜನ ಯಾಕಾದ್ರೂ ರಸ್ತೆಗೆ ಬಂದುಬಿಡ್ತಾರೊ ಅನ್ನಿಸ್ತದೆ. ಈ ಸಂಜೆಯ ರಗಳೆಯಿಂದ ನನಗಂತೂ ಸಾಕಾಗಿ ಹೋಗಿದೆ’ ಅಂದ.
ಆಟೊ ಡ್ರೈವರ್ನ ಮಾತುಗಳನ್ನೇ ಮೆಲುಕು ಹಾಕುತ್ತಾ ಸ್ಟುಡಿಯೊಗೆ ಬಂದೆ. ಆಗ ‘ಗೆಳೆಯ’ ಚಿತ್ರದ ನಿರ್ದೇಶಕ ಹರ್ಷ- ‘ಸರ್, ಸಂಜೆಯ ಹೊತ್ತು ‘ಅವಳ ನೆನಪಲ್ಲಿ’ ಹೀರೊ ತೇಲಿ ಹೋದ ಸಂದರ್ಭಕ್ಕೆ ಒಂದು ವಿರಹಗೀತೆ ಬೇಕು ಅಂದರು. ಹಿಂದೆಯೇ ಟ್ಯೂನ್ ಕೇಳಿಸಿದರು. ತಕ್ಷಣವೇ ನನಗೆ ಆಟೊದವನ- ‘ಈ ಸಂಜೆ ಯಾಕಾದ್ರೂ ಆಗುತ್ತೋ? ಜನ ಸಂಜೆ ಹೊತ್ತು ಸಂತೆಗೆ ಬಂದವರ ಹಾಗೆ ಯಾಕಾದ್ರೂ ಬರ್ತಾರೋ’ ಎಂಬ ಮಾತುಗಳು ನೆನಪಾದವು. ಅವುಗಳನ್ನೇ ಇಟ್ಟುಕೊಂಡು- ‘ಈ ಸಂಜೆ ಯಾಕಾಗಿದೇ, ಈ ಸಂತೆ ಸಾಕಾಗಿದೆ’ ಎಂದು ಬರೆದೆ. ಗೆಳತಿಯ ಧ್ಯಾನದಲ್ಲಿ ಅವನು ಹಾಡ್ತಾನಲ್ಲ? ಅದಕ್ಕೇ ಈ ಸಾಲುಗಳ ಮಧ್ಯೆ ‘ನೀನಿಲ್ಲದೆ’ ಎಂಬ ಹೊಸ ಪದ ಸೇರಿಸಿದೆ. ಆಗ ಇಡೀ ಹಾಡಿಗೆ ಒಂದು ಹೊಸತನ ಬಂದಂತಾಯ್ತು. ನಂತರ, ಪ್ರೇಮದ ಆಲಾಪಕ್ಕೆ ಸಾಕ್ಷಿಯಾಗುವ ಕಾಡು, ಬೆಟ್ಟ, ಬೆಳದಿಂಗಳು, ನಕ್ಷತ್ರ, ತಂಗಾಳಿ, ಹೂವು, ಚಂದಿರ… ಇವೆಲ್ಲ, ಅದೇ ಪ್ರೇಮಿಯನ್ನು ಆತ ವಿರಹಿಯಾದಾಗ ಬಿಟ್ಟೂಬಿಡದೆ ಕಾಡುತ್ತವೆ. ಮೇಲಿಂದ ಮೇಲೆ ಅಣಕಿಕಸುತ್ತವೆ ಅಂದುಕೊಂಡೆ. ಆಗಲೇ ಎರಡೂ ಚರಣಗಳು ಒಂದರ ಹಿಂದೊಂದು ಹೊಳೆದುಬಿಟ್ಟವು…’
ಹಾಡುಗಳ ಕಥೆ ಇಷ್ಟೇ ಎಂಬಂತೆ ಮೌನವಾದರು ಜಯಂತ್. ಕಾಕತಾಳೀಯವೆಂಬಂತೆ ಅವರ ಮಾತು ಮುಗಿದಾಗ ಸಂಜೆಯಾಗಿತ್ತು. ಹೊರಡುವ ಮುನ್ನ ಗೆಳೆಯನ ಮೊಬೈಲು ಹಾಡಲು ಶುರುಮಾಡಿತು: ‘ಈ ಸಂಜೆ ಯಾಕಾಗಿದೇ…’

ಆಲದ ಮರದಡಿ ಧ್ಯಾನಿಸುತ್ತ ಕೂತವನಿಗೆ ಶಾರದೆಯ ಹಾಡು ಒಲಿಯಿತು!

September 28, 2009

ಕಣಕಣದೆ ಶಾರದೆ…
ಚಿತ್ರ: ಆಪ್ತಮಿತ್ರ. ಗಾಯನ: ಮಧು ಬಾಲಕೃಷ್ಣ
ಗೀತೆರಚನೆ: ಕವಿರಾಜ್. ಸಂಗೀತ: ಗುರುಕಿರಣ್

ಕಣಕಣದೆ ಶಾರದೆ, ಕಲೆತಿಹಳು ಕಾಣದೆ
ವನವನದಲ್ಲೂ ಕುಹುಕುಹು ಗಾನ
ಝರಿಝರಿಯಲ್ಲೂ ಜುಳುಜುಳು ಧ್ಯಾನ
ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ||

ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು
ಪ್ರತಿ ಎದೆಯಾಳದಲು ಲಯ ತಾಳ ಗೀತೆ ಬದುಕಿನಲು
ಕೊರಳಿನಲಿ ಕೊಳಲಿನಲಿ ಚೆಲುವಿನಲಿ ಒಲವಿನಲಿ
ಒಲಿದು ಉಲಿದು ನಲಿದು ಹರಿದು ಬರುವುದು ಶ್ರುತಿಲಯವು ||೧||

ಕುಲ ನೆಲದಾಚೆ ಅರಿಯುವ ಭಾಷೆ ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ ಸಪ್ತಸ್ವರಗಳಿಗೆ
ನಿಪಮಪನಿ ಸನಿಪನಿಸ ಗಸನಿಸಗ
ಮಪಮಪಗ ನಿಮಪಮ ಸನಿಪನಿ ಗಸನಿಸ ||೨||
‘ಆಪ್ತಮಿತ್ರ’ ಚಿತ್ರದ ಈ ಸನ್ನಿವೇಶ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಪ್ರೇಮಾ ಸೆಕೆಂಡ್ ಹೀರೊಯಿನ್. ಆಕೆಯ ತಾತನ ಪಾತ್ರಧಾರಿ ಶಿವರಾಂ. ಈ ತಾತ-ಮೊಮ್ಮಗಳು, ನಾಯಕ ರಮೇಶ್ ಮನೆಯ ಔಟ್ಹೌಸ್ನಲ್ಲಿ ಇರುತ್ತಾರೆ. ಅದೊಂದು ದಿನ ಬೆಳ್ಳಂಬೆಳಗ್ಗೆಯೇ ಹಾರ್ಮೋನಿಯಂ ನುಡಿಸುತ್ತಾ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿರುತ್ತಾರೆ ಪ್ರೇಮಾ. ತುಸು ಕರ್ಕಶ ಅನ್ನುವಂಥ ಸಂಗೀತ ಹಾಗೂ ಹಾಡು ಕೇಳಿದ ಕಥಾನಾಯಕ ರಮೇಶ್ರ ಗೆಳೆಯ ವಿಷ್ಣುವರ್ಧನ್- ‘ಅಯ್ಯೋ, ಇದ್ಯಾರಪ್ಪಾ ಬೆಳಗ್ಗೆ ಬೆಳಗ್ಗೇನೇ ರಾಗ ಶುರುಮಾಡಿ ನನ್ನ ನಿದ್ರೇನ ಹಾಳು ಮಾಡಿದರಲ್ಲ’ ಎಂದುಕೊಂಡೇ ಹಾಸಿಗೆಯಲ್ಲಿ ಹೊರಳುತ್ತಿರುತ್ತಾರೆ. ಆ ನಂತರದಲ್ಲೂ ಆ ಹಾಡಾಗಲಿ, ಸಂಗೀತವಾಗಲಿ ನಿಲ್ಲುವುದಿಲ್ಲ. ಒಂದೆಡೆ ಕರ್ಕಶ ಸಂಗೀತದ ಹಿಂಸೆ, ಇನ್ನೊಂದೆಡೆ ಬೆಳಗಿನ ನಿದ್ರೆ ಹಾಳಾಯಿತು ಎಂಬ ಸಿಟ್ಟಿನಿಂದ ಎದ್ದು ಬಂದ ವಿಷ್ಣುವರ್ಧನ್ಗೆ, ಆ ಸಂಗೀತ ಮತ್ತು ಹಾಡು ಔಟ್ಹೌಸ್ನಿಂದ ಕೇಳಿಬರುತ್ತಿದೆ ಎಂದು ಅರ್ಥವಾಗುತ್ತದೆ.
ಸಿಡಿಮಿಡಿಯಿಂದಲೇ ಶಿವರಾಂ ಅವರನ್ನು ಹೊರಗೆ ಕರೆಯುವ ವಿಷ್ಣುವರ್ಧನ್ ಆಗ್ರಹದ ಧ್ವನಿಯಲ್ಲಿ ಹೀಗೆ ಹೇಳುತ್ತಾರೆ: ‘ನೋಡಿ, ಈ ಮನೆಯಲ್ಲೇ ವಾಸಕ್ಕೆ ಇರಬೇಕು ಅನ್ನುವುದಾದರೆ, ಇವತ್ತಿಂದಲೇ ಈ ಸಂಗೀತ ಕಾರ್ಯಕ್ರಮವನ್ನು ನೀವು ಬಂದ್ ಮಾಡಬೇಕು. ಇಲ್ಲ ಅಂದರೆ…’
ಈ ಮಾತಿನಿಂದ ವ್ಯಗ್ರಳಾದ ಪ್ರೇಮಾ- ‘ಬೇಕಾದರೆ ನಾವು ಈ ಜಾಗ ಬಿಟ್ಟು ಹೋಗ್ತೇವೆ. ಆದರೆ ಸಂಗೀತವನ್ನು ಬಿಡುವುದಿಲ್ಲ. ಅದರ ಮಹತ್ವ ನಿಮಗೇನು ಗೊತ್ತು? ಸಂಗೀತದ ಗಂಧ-ಗಾಳಿಯ ಪರಿಚಯವೂ ಇಲ್ಲದವರ ಬಳಿ ಮಾತಾಡಿ ಏನು ಪ್ರಯೋಜನ?’ ಎಂದೆಲ್ಲ ಕಟುವಾಗಿ ಮಾತನಾಡಿ ಹೋಗಿಬಿಡುತ್ತಾಳೆ.
ವಿಷ್ಣುವರ್ಧನ್ ಏನೊಂದೂ ಮಾತನಾಡದೆ ಮನೆಗೆ ಹಿಂದಿರುಗುತ್ತಾರೆ. ಒಂದೆರಡು ನಿಮಿಷದ ನಂತರ ಹಾಡೊಂದು ಅಲೆಅಲೆಯಾಗಿ ಕೇಳಿಬರುತ್ತದೆ- ‘ಕಣ ಕಣದೆ ಶಾರದೆ, ಕಲೆತಿಹಳು ಕಾಣದೇ…’ ಹಾಡು ಮತ್ತು ಸಂಗೀತದ ಧ್ವನಿ ಕೇಳಿದ ನಾಯಕಿ, ಇದೆಲ್ಲಿಂದ ಬರುತ್ತಿದೆ ಈ ಮಧುರ ರಾಗಾಲಾಪ ಎಂದು ತಿಳಿಯಲು ಓಡುತ್ತಾ ಮೆಟ್ಟಿಲೇರಿ ಹಾಡು ಕೇಳಿಸುತ್ತಿದ್ದ ಕೋಣೆಗೆ ಬಂದವಳೇ ಬೆಕ್ಕಸಬೆರಗಾಗಿ ನಿಂತುಬಿಡುತ್ತಾಳೆ. ಏಕೆಂದರೆ, ಕಥಾನಾಯಕ ವಿಷ್ಣುವರ್ಧನ್, ಹಾರ‍್ಮೋನಿಯಂ ಬಾರಿಸಿಕೊಂಡು ತನ್ಮಯನಾಗಿ ಹಾಡುತ್ತಿರುತ್ತಾನೆ. ಕೆಲವೇ ನಿಮಿಷಗಳ ಹಿಂದಷ್ಟೇ- ‘ನಿಮಗೆ ಸಂಗೀತದ ಮಹಿಮೆ ಗೊತ್ತಿಲ್ಲ, ಸಂಗೀತದ ಗಂಧ-ಗಾಳಿ ಕೂಡ ಇಲ್ಲ ಎಂದು ಟೀಕಿಸಿದ್ದೆನಲ್ಲ’ ಎಂದು ನೆನಪು ಮಾಡಿಕೊಂಡು ಪ್ರೇಮಾ ಕಂಗಾಲಾದ ಕ್ಷಣದಲ್ಲಿಯೇ ನಾಯಕ ತಬಲಾ ಕೈಗೆತ್ತಿಕೊಳ್ಳುತ್ತಾನೆ. ನಂತರದಲ್ಲಿ ಸಂಗೀತದ ಒಂದೊಂದೇ ಸಾಧನಕ್ಕೆ ಹೊರಳಿಕೊಳ್ಳುತ್ತಾನೆ. ಹಾಡು ಮುಗಿಯುತ್ತಿದ್ದಂತೆಯೇ- ‘ನಿಮ್ಮ ಸಂಗೀತ eನದ ಬಗ್ಗೆ ತಿಳಿಯದೇ ನಾನು ದುಡುಕಿ ಮಾತಾಡಿಬಿಟ್ಟೆ. ದಯವಿಟ್ಟು ಕ್ಷಮಿಸಿ’ ಎನ್ನುತ್ತಾಳೆ ನಾಯಕಿ…
ಅಂದಹಾಗೆ, ಈ ಹಾಡು ಬರೆದವರು ಕವಿರಾಜ್. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಯಡೂರು ಎಂಬ ಗ್ರಾಮದವರಾದ ಕವಿರಾಜ್, ಓದಿದ್ದು ಬಿ.ಎಸ್ಸಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಮುಗಿಸಿದ ಕವಿರಾಜ್, ಕಾಲೇಜು ದಿನಗಳಲ್ಲಿ ಒಂದಿಷ್ಟು ಪ್ರೇಮಗೀತೆಗಳನ್ನು ಬರೆದರು ನಿಜ. ಆದರೆ ಅವುಗಳನ್ನು ಹುಡುಗಿಯರಿಗೆ ಕೊಡುವುದಿರಲಿ, ತೋರಿಸುವ ಸಾಹಸವನ್ನೂ ಮಾಡಲಿಲ್ಲ. ಕಡೆಗೊಂದು ದಿನ, ಧೈರ್ಯ ಮಾಡಿ ಆಪ್ತಮಿತ್ರನೊಬ್ಬನಿಗೆ ತೋರಿಸಿದರು. ಆತ- ‘ವಾಹ್ , ತುಂಬಾ ಚೆನ್ನಾಗಿ ಬರೆದಿದ್ದೀ ಕಣೋ’ ಎಂದ. ಒಂದೆರಡು ದಿನಗಳ ನಂತರ ಕವನವೊಂದನ್ನು ಕಾಲೇಜಿನ ನೋಟಿಸ್ ಬೋರ್ಡ್ಗೇ ಹಾಕಿಬಿಟ್ಟ. ಪರಿಣಾಮ ಸಹ್ಯಾದ್ರಿ ಕಾಲೇಜಿನ ಅಂಗಳದಲ್ಲಿ ವರ್ಲ್ಡ್ ಫೇಮಸ್ ಆಗಿ ಹೋದರು ಕವಿರಾಜ್. ನಂತರದ ದಿನಗಳಲ್ಲಿ ಅವರ ಸಹಪಾಠಿಗಳು ಮಾತ್ರವಲ್ಲ, ಅಧ್ಯಾಪಕರು ಕೂಡ- ‘ನೀವು ಚೆನ್ನಾಗಿ ಕವಿತೆ ಬರೀತೀರ. ಮುಂದುವರಿಸಿ’ ಅಂದರಂತೆ.
ಪದವಿಯ ನಂತರ ಸ್ವಲ್ಪ ದಿನದ ಮಟ್ಟಿಗೆ ಪದ್ಯ ಬರೆಯುವುದನ್ನೇ ಮರೆತ ಕವಿರಾಜ್, ಉದರನಿಮಿತ್ತಂ- ಬೆಂಗಳೂರಿಗೆ ಬಂದರು. ಮೆಡಿಕಲ್ ರೆಪ್ರಸೆಂಟೇಟಿವ್ ಆದರು. ಔಷಧ ಮಾರಾಟ ಹಾಗೂ ಮಾತ್ರೆ-ಟಾನಿಕ್ನ ಮಹಾತ್ಮೆ ಸಾರುತ್ತಾ ಬೆಂಗಳೂರನ್ನು ಗಿರಗಿರಗಿರ ಸುತ್ತಿದರು. ಆ ನೌಕರಿಯಲ್ಲಿ ಕೈತುಂಬ ಸಂಬಳವಿತ್ತು ನಿಜ. ಆದರೆ ಆತ್ಮಸಂತೋಷ ಅಂತೀವಲ್ಲ? ಅದು ಇರಲಿಲ್ಲ. ಅದೊಂದು ದಿನ, ಈ ಮೆಡಿಕಲ್ ರೆಪ್ ಕೆಲಸ ಸಾಕು ಎಂದು ನಿರ್ಧರಿಸಿದ ಕವಿರಾಜ್, ಸಿನಿಮಾಕ್ಕೆ ಹಾಡು ಬರೆದೇ ಯಾಕೆ ಬದುಕಬಾರದು ಎಂದು ಯೋಚಿಸಿದರು. ನಂತರ ಅದು ಹೇಗೋ ಸಂಗೀತ ನಿರ್ದೇಶಕ ಗುರುಕಿರಣ್ರ ಮನೆ ವಿಳಾಸ ಪತ್ತೆಹಚ್ಚಿ, ಒನ್ ಫೈನ್ ಡೇ ಅವರ ಮನೆಯ ಬಾಗಿಲು ಬಡಿದೇ ಬಿಟ್ಟರು.
ಆ ಸಂದರ್ಭವನ್ನು ಕವಿರಾಜ್ ವಿವರಿಸುವುದು ಹೀಗೆ: ‘ನನಗೆ ಅದಕ್ಕೂ ಮುಂಚೆ, ಗುರುಕಿರಣ್ರ ಪರಿಚಯವಿರಲಿಲ್ಲ. ಯಾರ ಶಿಫಾರಸು ಪತ್ರವೂ ನನ್ನಲ್ಲಿರಲಿಲ್ಲ. ಆದರೂ ಒಂದು ಭಂಡ ಧೈರ್ಯದೊಂದಿಗೆ, ವಿಶ್ವಾಸದೊಂದಿಗೆ ಹೋದೆ. ನನ್ನ ಪರಿಚಯ, ಹಿನ್ನೆಲೆ, ಹೇಳಿಕೊಂಡೆ. ಗೀತರಚನೆಕಾರ ಆಗಬೇಕು ಅಂತಿದೀನಿ ಸಾರ್. ದಯವಿಟ್ಟು ಅವಕಾಶ ಕೊಡಿ ಅಂದೆ. ನನ್ನ ಹಳೆಯ ಪದ್ಯಗಳನ್ನು ತೋರಿಸಿದೆ. ಅದನ್ನೆಲ್ಲ ನೊಡಿದ ಗುರುಕಿರಣ್- ‘ಸರಿ, ಈಗ ಒಂದು ಟ್ಯೂನ್ ಕೇಳಿಸ್ತೀನಿ. ಅದನ್ನು ಕೇಳಿಸ್ಕೊಂಡು ಹಾಡು ಬರೆದುಕೊಂಡು ಬನ್ನಿ’ ಎಂದರು.
ಆ ವೇಳೆಗಾಗಲೇ ತುಂಬ ಜನಪ್ರಿಯರಾಗಿದ್ದ, ಬ್ಯುಸಿಯಾಗಿದ್ದ ಗುರುಕಿರಣ್ರಿಂದ ನಾನು ಅಂಥ ಅಪರೂಪದ ಕಾಣಿಕೆಯನ್ನು ನಿರೀಕ್ಷಿಸಿರಲಿಲ್ಲ. ಒಂದು ವೇಳೆ ಅವರೇನಾದರೂ, ‘ನಾನಿವತ್ತು ಬ್ಯುಸಿ ಇದೀನಿ. ನಾಳೆ ಬನ್ನಿ’ ಅಂದಿದ್ರೆ, ಮತ್ತೆ ಆ ಕಡೆಗೆ ಹೋಗ್ತಾ ಇದ್ದೆನೋ ಇಲ್ಲವೋ ಗೊತ್ತಿಲ್ಲ. ಆದರೆ ಹೊಸಬನಾದ ನನ್ನನ್ನು ‘ಹಾಡು ಬರ‍್ಕೊಂಡು ಬಾ’ ಅಂದರಲ್ಲ? ಆ ಮಾತು ಕೇಳಿ ನಾನು ಗಾಳಿಯಲ್ಲೇ ತೇಲಾಡಿದೆ. ಆ ಕ್ಷಣದ ನನ್ನ ಸಂಭ್ರಮವನ್ನೆಲ್ಲ ಜತೆಗಿಟ್ಟುಕೊಂಡು- ‘ನನ್ನಲಿ ನಾನಿಲ್ಲ ಮನದಲಿ’ ಹಾಡು ಬರೆದೆ. ೨೦೦೨ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ ‘ಕರಿಯಾ’ ಚಿತ್ರಕ್ಕೆ ಈ ಹಾಡು ಬಳಕೆಯಾಯಿತು. ಹಾಡು ಮತ್ತು ಸಿನಿಮಾ ಸೂಪರ್ಹಿಟ್ ಆಯಿತು.’
ಹೀಗೆ, ಮೊದಲ ಹಾಡಿಂದಲೇ ಜಾಕ್ಪಾಟ್ ಹೊಡೆದ ಕವಿರಾಜ್- ‘ಆಪ್ತಮಿತ್ರ’ ಚಿತ್ರಕ್ಕೆ ಹಾಡು ಬರೆದದ್ದು ಹೇಗೆ? ‘ಕಣಕಣದೆ ಶಾರದೆ’ ಹಾಡು ಅವರಿಗೆ ಒಲಿದದ್ದು ಎಲ್ಲಿ ಮತ್ತು ಹೇಗೆ? ಸಂಗೀತ ಅಭ್ಯಾಸ ಮಾಡುವ ಸಂದರ್ಭದಲ್ಲೇನಾದರೂ ಅವರು ಈ ಹಾಡು ಬರೆದರೋ ಹೇಗೆ? ಇಂಥವೇ ಕುತೂಹಲದ ಪ್ರಶ್ನೆಗಳಿಗೆ ಖುದ್ದು ಕವಿರಾಜ್ ಉತ್ತರಿಸಿದ್ದು ಹೀಗೆ:
‘ಕರಿಯಾ’ ಚಿತ್ರದಲ್ಲಿ ನನ್ನ ಕೈಹಿಡಿದ ಗುರುಕಿರಣ್, ನಂತರದಲ್ಲಿ ತಮ್ಮ ಸಂಗೀತ ನಿರ್ದೇಶನದ ಹಲವು ಚಿತ್ರಗಳಲ್ಲಿ ಅವಕಾಶ ಕೊಟ್ಟರು. ೨೦೦೩ರಲ್ಲಿ ದ್ವಾರಕೀಶ್ ನಿರ್ಮಾಣದ ‘ಆಪ್ತಮಿತ್ರ’ ಶುರುವಾದಾಗ- ನನ್ನನ್ನು ಕರೆದು- ‘ಒಂದು ಹಾಡು ಬರಿ’ ಅಂದರು. ಚಿಕ್ಕಂದಿನಿಂದಲೂ ವಿಷ್ಣುವರ್ಧನ್ರ ಕಟ್ಟಾ ಅಭಿಮಾನಿ ನಾನು. ಅವರಿಗೇ ಒಂದು ಹಾಡು ಬರೆವ ಅವಕಾಶ ಸಿಕ್ಕಿತ್ತು. ನಾನಂತೂ ಥ್ರಿಲ್ಲಾಗಿ ಹೋದೆ. ಡ್ಯುಯೆಟ್ ಸಾಂಗ್ ಇರಬೇಕು ಅಂದುಕೊಂಡು ‘ಆಯ್ತು ಸಾರ್’ ಬರೀತೀನಿ ಅಂದೆ. ನಂತರ ಒಂದು ಟ್ಯೂನ್ ಕೇಳಿಸಿದ ಗುರುಕಿರಣ್- ‘ಇದು ಶಾಸ್ತ್ರೀಯ ಸಂಗೀತದ ಹಾಡಾಗಬೇಕು. ಹುಶಾರಾಗಿ ಯೋಚಿಸಿ, ಚೆನ್ನಾಗಿ ಬರಿ’ ಅಂದರು.
ಶಾಸ್ತ್ರೀಯ ಸಂಗೀತದ ಬಗ್ಗೆ ನನಗೆ ಅಂಥ ಒಳ್ಳೆಯ eನವಿರಲಿಲ್ಲ. ಹಾಗಾಗಿ, ಗುರುಕಿರಣ್ರ ಮಾತು ಕೇಳಿ ಥರಗುಟ್ಟಿಹೋದೆ. ಯಾಕೋ ಇದು ನನ್ನಿಂದ ಆಗದ ಕೆಲಸ ಅನಿಸಿತು. ಅದನ್ನೇ ಗುರುಕಿರಣ್ಗೆ ಹೇಳಿದೆ. ಅವರು- ‘ಹೆದರಬೇಡ. ನೀನು ಬರೀತೀಯ. ಸ್ವಲ್ಪ ಟೈಮ್ ತಗೋ. ಕೂಲ್ ಆಗಿರು’ ಎಂದರು. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕೂಡ ಅದೇ ಮಾತು ಹೇಳಿ ‘ಬೆಸ್ಟ್ ಆಫ್ ಲಕ್’ ಎಂದರು.
ಬೆಂಗಳೂರಿನ, ಬಸವೇಶ್ವರ ನಗರದಲ್ಲಿರುವ ಆಲದ ಮರದ ಪಾರ್ಕ್ಗೆ ಆವಾಗಾವಾಗ ಹೋಗುವುದು ನನ್ನ ಅಭ್ಯಾಸ. ಅದೊಂದು ಸಂಜೆ ಹೋಗಿ ಪಾರ್ಕ್ನಲ್ಲಿ ಕೂತಿದ್ದೆ. ಬೃಹತ್ತಾದ ಆ ಆಲದಮರದ ತುಂಬಾ ನೂರಾರು ಹಕ್ಕಿಗಳಿದ್ದವು. ಎಲ್ಲವೂ ಅಲ್ಲಿಯೇ ಗೂಡು ಕಟ್ಟಿಕೊಂಡಿದ್ದವು. ಕೆಲವು ಆಗಲೇ ಗೂಡು ಸೇರಿದ್ದವು. ಮತ್ತೆ ಕೆಲವು ಗೂಡಿಗೆ ಮರಳುತ್ತಿದ್ದವು. ಇಡೀ ಪಾರ್ಕಿನ ತುಂಬಾ ಹಕ್ಕಿಗಳದ್ದೇ ಕಲರವ. ಸುಮ್ಮನೇ ಒಮ್ಮೆ ಕತ್ತೆತ್ತಿ ನೋಡಿದರೆ, ಎಲೆ ಎಲೆಯ ಮೇಲೂ ಹಕ್ಕಿಗಳೇ ಕಂಡವು. ‘ಈ ಹಕ್ಕಿಗಳಿಗೂ ಒಂದು ಭಾಷೆ ಕಲಿಸಿದ್ದಾಳಲ್ಲ? ಅವುಗಳಿಗೂ ‘ಬುದ್ಧಿ’ ನೀಡಿದ್ದಾಳಲ್ಲ? ಆ ಶಾರದೆಯ ಮಹಿಮೆ ದೊಡ್ಡದು’ ಎಂದು ನನಗೆ ನಾನೇ ಹೇಳಿಕೊಂಡೆ. ನಂತರ, ಎಲೆ ಎಲೆಗೂ ಹಕ್ಕಿಗಳೇ ಎಂಬುದನ್ನೇ ಮನದಲ್ಲಿಟ್ಟುಕೊಂಡು- ‘ಕಣ ಕಣದೆ ಶಾರದೆ’ ಎಂದು ಒಂದು ಹಾಳೆಯಲ್ಲಿ ಗೀಚಿಕೊಂಡೆ. ನಂತರ, ಆ ಶಾರದಾಂಬೆ, ಮನುಷ್ಯರಿಗೆ ಮಾತ್ರವಲ್ಲ, ಎಲ್ಲ ಪಕ್ಷಿಗಳಿಗೂ ಸಿರಿಕಂಠ ನೀಡಿದ್ದಾಳಲ್ಲ, ಅದು ಸೋಜಿಗವಲ್ಲವೆ? ಹಿಂದೆಯೇ ಕಾಡಿನ ಒಂದು ಮೂಲೆಯಲ್ಲಿ ಹರಿವ ತೊರೆಯ ಸದ್ದಿಗೂ ಒಂದು ಲಯವಿರುತ್ತದೆ. ಇದೂ ಒಂದು ರೀತಿಯಲ್ಲಿ ಆ ದೇವಿಯ ಮಹಿಮೆ ಎನ್ನಿಸಿ ವಿಸ್ಮಯವಾಯಿತು. ಈ ಎರಡೂ ಸಾಲುಗಳನ್ನು ಸೇರಿಸಿ- ‘ವನವನದಲ್ಲೂ ಕುಹುಕುಹು ಗಾನ, ಝರಿ ಝರಿಯಲ್ಲೂ ಜುಳುಜುಳು ಧ್ಯಾನ, ವಿಧವಿಧದಾ ನಾದ ಅವಳು ನುಡಿಸುತಿಹಳು’ ಎಂದು ಬರೆದೆ.
ಹೀಗೆ, ದಿಢೀರನೆ ಕೈಹಿಡಿದ ಸಾಲುಗಳ ಬಗ್ಗೆ ಯೋಚಿಸುತ್ತಿದ್ದಾಗಲೇ ಮನುಷ್ಯರು ಸಂಗೀತವನ್ನು ಹೇಗೆಲ್ಲ ಬಳಸುತ್ತಾರೆ ಎಂದು ನೆನಪು ಮಾಡಿಕೊಂಡೆ: ನಮ್ಮ ಜನ ‘ಹುಟ್ಟಿದಾಗ ಒಂದುಹಾಡು ಕಟ್ತಾರೆ. ಸತ್ತಾಗಲೂ ಒಂದು ಹಾಡು ಹೇಳ್ತಾರೆ’ ಅನ್ನಿಸ್ತು. ಅದನ್ನೇ ‘ಜನನಕೂ ಹಾಡು ಮರಣಕೂ ಹಾಡು’ ಎಂದು ಬದಲಿಸಿಕೊಂಡೆ. ಹಿಂದೆಯೇ- ಪ್ರತಿಯೊಬ್ಬರಿಗೂ ಅವರದೇ ಆದ ರಾಗಮಾಧುರ್ಯವಿದೆ ಅನ್ನಿಸಿತು. ಅದನ್ನು ‘ಪ್ರತಿ ಎದೆಯಾಳದೊಳು…’ ಸಾಲಿನಲ್ಲಿ ತಂದೆ. ಸಂಗೀತಕ್ಕೆ ಜಾತಿ, ಭಾಷೆ, ಮೇಲು ಕೀಳೆಂಬ ಕಟ್ಟುಪಾಡಿಲ್ಲ. ಪರಿಶ್ರಮಿಗಳಿಗೆ ಅದು ಖಂಡಿತ ಒಲಿಯುತ್ತದೆ ಎಂದು ಹೇಳಲು- ‘ಕುಲ ನೆಲದಾಚೆ…’ ಸಾಲು ಬಳಸಿದೆ! ಆಲದ ಮರದಡಿ ಧ್ಯಾನಿಸುತ್ತಾ ಕೂತವನಿಗೆ ಕೆಲವೇ ನಿಮಿಷಗಳಲ್ಲಿ ಹಾಡು ಒಲಿದಿತ್ತು… ನಂತರ ಮನೆಗೆ ಬಂದು ಹಾಡನ್ನು ಇಡಿಯಾಗಿ ‘ಶಾರ್ಪ್’ ಮಾಡಿದೆ. ಹಾಡು ಕಂಡು ಗುರುಕಿರಣ್, ವಿಷ್ಣುವರ್ಧನ್ ತುಂಬ ಖುಷಿಪಟ್ಟರು. ಮುಂದೆ ಚಿತ್ರ ತೆರೆಕಂಡಾಗ ಹಾಡು ಕೇಳಿ ಚಿತ್ರಪ್ರೇಮಿಗಳೂ ಚಪ್ಪಾಳೆ ಹೊಡೆದರು…
ಹೀಗೆನ್ನುತ್ತಾ ಭಾವುಕರಾದರು ಕವಿರಾಜ್. ಅವರ ಕಂಗಳಲ್ಲಿ ಜಗತ್ತು ಗೆದ್ದವನ ಸಂಭ್ರಮವಿತ್ತು….

ಅವತ್ತು ಕೆಎಸ್ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು!

September 28, 2009

7075

ಇದು ೧೯೯೦ರ ಮಾತು.
ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ ೭೫ ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ ‘ಸಹಾಯಕರಂತೆ’ ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆಯೇ ಬರೆದರಲ್ಲ? ಆ ವಿಷಯವಾಗಿಯೇ ಅವರು ಮಾತಾಡಲಿದ್ದಾರಾ? ಭರ್ತಿ ಐವತ್ತು ವರ್ಷಗಳ ಕಾಲ ಪ್ರೀತಿ-ಪ್ರೇಮದ ಜಪದಲ್ಲೇ ಕೆಎಸ್ನ ಉಳಿದುಬಿಟ್ಟರು ಅಂದರೆ- ಅವರ ಮನಸ್ಸು ಕದ್ದ ಬೆಡಗಿ(ಯರು) ತುಂಬ ಸುಂದರಿಯೇ ಇರಬೇಕು. ಅವರ ನೆನಪಲ್ಲಿಯೇ ತೇಲಿಹೋಗಿ ಕೆಎಸ್ನ ಒಂದರ ಹಿಂದೊಂದು ಪದ್ಯ ಬರೆದಿರಬೇಕು. ಹಳೆಯ ಪ್ರೇಮ ಮತ್ತು ಹಳೆಯ ಪ್ರೇಯಸಿಯರು ನೆನಪಾದಾಗೆಲ್ಲ ಅವರಿಗೆ ಒಂದೊಂದು ಪದ್ಯ ಹೊಳೆದಿರಬೇಕು. ಅಂದಹಾಗೆ, ಕೆಎಸ್ನ ಅವರ ಪತ್ನಿಗೆ ಇದೆಲ್ಲ ಗೊತ್ತಿಲ್ಲವಾ? ಎಲ್ಲ ಗೊತ್ತಿದ್ದೂ ಅವರು ಸುಮ್ಮನಿದ್ದಾರಾ? ಗಂಡ ಹೀಗೆ ಒಂದರ ಹಿಂದೊಂದು ಪ್ರೇಮ ಕವಿತೆ ಬರೀತಾ ಇದ್ದಾಗೆಲ್ಲ ಅವರಿಗೆ ಸಂತೋಷ, ಬೆರಗು, ಅಭಿಮಾನ ಮತ್ತು ಅನುಮಾನ ಒಟ್ಟೊಟ್ಟಿಗೇ ಬಂದುಬಿಡಲ್ವ? ಈ ವಿಷಯವಾಗಿ ಅವರು ಅವಾಗವಾಗ ಜಗಳ ಮಾಡೋದಿಲ್ವ?
ಅವತ್ತು ಕಾರ್ಯಕ್ರಮಕ್ಕೆ ಬಂದಿದ್ದ ನೂರಾರು ಕಿರಿಯರಿಗೆ ಇಂಥವೇ ಕೆಟ್ಟ ಕುತೂಹಲದ ಪ್ರಶ್ನೆಗಳು ಕ್ಷಣಕ್ಷಣಕ್ಕೂ ಕಾಡಿದ್ದವು. ಎಲ್ಲರೂ ಕವಿಗಳ ನಿರೀಕ್ಷೆಯಲ್ಲಿದ್ದಾಗಲೇ, ದಸರಾ ರಜೆ ಕಳೆಯಲು ಅಜ್ಜಿಯ ಮನೆಗೆ ಮಕ್ಕಳು ಬರ‍್ತಾರಲ್ಲ? ಆ ಖುಷಿಯಲ್ಲಿ ಬಂದೇಬಿಟ್ಟರು ಕೆ.ಎಸ್.ನ. ಅವರೊಂದಿಗೆ ಶ್ರೀಮತಿ ವೆಂಕಮ್ಮನವರಿದ್ದರು. ಇಬ್ಬರ ನಡಿಗೆಯಲ್ಲೂ ತಾಳಮೇಳವಿತ್ತು. ವೇಗದಲ್ಲಿ ಮಂದಹಾಸವಿತ್ತು. ಕೆಎಸ್ನ ಅವತ್ತು ಮಲ್ಲಿಗೆ ಬಿಳುಪಿನ ಜುಬ್ಬಾ- ಪಂಚೆ ಧರಿಸಿದ್ದರು. ವೆಂಕಮ್ಮನವರು ಗಾಢ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕಾರ್ಯಕ್ರಮದುದ್ದಕ್ಕೂ ದಂಪತಿಯರು ಪರಸ್ಪರರ ಬಗ್ಗೆ ಅದೆಷ್ಟು ಕೇರ್ ತಗೊಂಡರು ಅಂದರೆ-ವಾಹ್, ಜಗತ್ತಿನ ಆದರ್ಶ ದಂಪತಿ ಅಂದರೆ ಇವರೇ ಇರಬೇಕು ಎಂಬ ಭಾವ ಹಲವರಿಗೆ ಬಂದದ್ದು ಸುಳ್ಳಲ್ಲ. ಏಕೆಂದರೆ ಕೆಎಸ್ನ ಅವರ ಹಣೆಯ ಮೇಲೆ ಒಂದೇ ಒಂದು ಬೆವರಹನಿ ಕಂಡರೂ ಸಾಕು, ಅದನ್ನು ಒರೆಸಲು ವೆಂಕಮ್ಮನವರು ಮುಂದಾಗುತ್ತಿದ್ದರು. ಹಾಗೆಯೇ ವೆಂಕಮ್ಮನವರು ಒಂದೆರಡು ನಿಮಿಷದ ಮಟ್ಟಿಗೆ ಸಪ್ಪೆ ಮುಖಭಾವದಲ್ಲಿ ಕೂತರೂ ಕೆಎಸ್ನ-‘ಏನಾಯ್ತು ನಿಂಗೆ? ಯಾಕೆ ಸಪ್ಪಗಾಗಿ ಬಿಟ್ಟೆ? ಆಯಾಸ ಆಯ್ತಾ? ಎಂಬರ್ಥದಲ್ಲಿ ಪ್ರಶ್ನೆ ಹಾಕುತ್ತಿದ್ದರು.
ವಿಶೇಷವೆಂದರೆ-ಅವತ್ತು ಕೆಎಸ್ನ ಅವರ ನಂತರ ಶ್ರೀಮತಿ ವೆಂಕಮ್ಮನವರೂ ನಾಲ್ಕು ಮಾತಾಡಿದರು! ಅದಕ್ಕೆ ಕಾರಣವಾದದ್ದು ಕಿರಿಯರೊಬ್ಬರ ತುಂಟ ಪ್ರಶ್ನೆ. ಅವರು ಸಹಜ ಕುತೂಹಲದಿಂದಲೇ ಕೇಳಿದ್ದರು: ‘ಕೆಎಸ್ನ ಅವರ ಪದ್ಯದಲ್ಲಿ ಬರುವ ಪದುಮ, ಶಾರದೆ, ಶಾನುಭೋಗರ ಮಗಳು, ಕಾಮಾಕ್ಷಿ, ಕನಕ… ಹೆಸರಿನ ಹುಡುಗಿಯರು (?) ಬೇರೆ ಬೇರೆ ಊರಿನವರೋ ಅಥವಾ ಇವೆಲ್ಲ ತಮ್ಮ ಕಾವ್ಯದ ನಾಯಕಿಗೆ ಕೆಎಸ್ನ ಇಟ್ಟುಕೊಂಡ ಹೆಸರುಗಳೋ? ಅವರ ಕಾವ್ಯದ ನಾಯಕಿ ಯಾರು? ತಮ್ಮ ನಾಯಕಿಯರೊಂದಿಗೆ ಕೆಎಸ್ನ ಒಂದೇ ಒಂದು ದಿನವಾದರೂ ಜಗಳ ಮಾಡಲೇ ಇಲ್ಲವೆ? ಬರೀ ಪ್ರೀತಿ-ಪ್ರೇಮದ ಬಗ್ಗೆ ಮಾತ್ರ ಅವರು ಪದ್ಯ ಬರೆದಿದ್ದಾರೆ. ಜಗಳವಾಡಿದ ಬಗ್ಗೆ ಒಂದೇ ಒಂದು ಕವಿತೆಯೂ ಇಲ್ಲವಲ್ಲ, ಯಾಕೆ?’
ಕೆಣಕುವಂತಿದ್ದ ಈ ಪ್ರಶ್ನೆಗೆ ಕೆಎಸ್ನ ಉತ್ತರಿಸಲಿಲ್ಲ. ಸುಮ್ಮನೆ ನಸುನಕ್ಕರು. ಆಗ ಮಾತು ಶುರು ಮಾಡಿದ ವೆಂಕಮ್ಮನವರು ಹೀಗೆಂದರು:‘ಇವರ ಪದ್ಯಗಳಲ್ಲಿ ಬರುವ ಪದುಮ, ಶಾರದೆ, ಕಾಮಾಕ್ಷಿ, ಕನಕ, ಶಾನುಭೋಗರ ಮಗಳು… ಎಲ್ಲವೂ ನಾನೇ. ವೆಂಕಮ್ಮ ಅನ್ನೋ ಹೆಸರು ಅಷ್ಟೇನೂ ಚೆನ್ನಾಗಿಲ್ಲ ಅನ್ನಿಸಿರಬೇಕು ಇವರಿಗೆ. ಆ ಕಾರಣದಿಂದಲೇ ಬೇರೆ ಹೆಸರು ಬಳಸಿದ್ದಾರೆ. ಇವರು ಒಂದು ದಿನ ಕೂಡ ಜಗಳ ಮಾಡಲೇ ಇಲ್ಲ. ತುಂಬಾ ಬೇಸರವಾದರೆ, ಸಿಟ್ಟು ಬಂದರೆ ಆಗ ಯಾರೊಂದಿಗೂ ಮಾತನಾಡದೆ ಕೂತುಬಿಡ್ತಿದ್ರು. ಆಗ ನಮಗೆಲ್ಲ ‘ರಾಯರು ಸಿಟ್ಟಾಗಿದ್ದಾರೆ’ ಎಂದು ಅರ್ಥವಾಗುತ್ತಿತ್ತು. ಅಂಥ ವೇಳೆಯಲ್ಲಿ ನಾನೂ ಅವರನ್ನು ಕೆಣಕಲು ಹೋಗುತ್ತಿರಲಿಲ್ಲ. ಅವರೊಂದಿಗೆ ಒಮ್ಮೆ ಕೂಡ ಜಗಳ ಮಾಡಲಿಲ್ಲವಲ್ಲ ಎಂದು ಸ್ವಲ್ಪ ಬೇಸರವಿದೆ. ಹಾಗೆಯೇ ಜಗಳ ಮಾಡದೆಯೇ ಬದುಕಿದ ವಿಷಯವಾಗಿ ಹೆಮ್ಮೆಯೂ ಇದೆ…’
ವೆಂಕಮ್ಮನವರ ಮಾತು ಮುಗಿಯುತ್ತಿದ್ದಂತೆಯೇ ಒಮ್ಮೆ ಕತ್ತೆತ್ತಿ ನೋಡಿದ ಕೆ.ಎಸ್.ನ ಮತ್ತೆ ನಸುನಕ್ಕರು. ತಕ್ಷಣವೇ ಅವರದೊಂದು ಕವಿತೆ ನೆನಪಾಯಿತು. ಆ ಪದ್ಯ, ತುಂಬ ಪ್ರಾಯದ ಹುಡುಗಿಯ ಥರಾ, ಅವಳ ಜಂಬದ ನಗುವಿನ ಥರಾ, ವಯ್ಯಾರದ ನಡಿಗೆಯ ಥರಾ, ಕಾಲ್ಗೆಜ್ಜೆಯ ಸದ್ದಿನ ಥರಾ, ಕೈಬಳೆಯ ನಾದದ ಥರಾ, ಘಮ್ಮೆನ್ನುವ ಮಲ್ಲಿಗೆಯ ಪರಿಮಳದ ಥರಾ, ಜೀವ ಝಲ್ಲೆನಿಸುವ ಎದೆಯ ಮಧ್ಯದ ಸುವಾಸನೆಯ ಥರಾ ಶುರುವಾಗುತ್ತದೆ. ನದಿಯಂತೆ ಬಾಗಿ, ಬೀಗಿ, ಬಳುಕಿ ಸಾಗುತ್ತದೆ. ಅದನ್ನು ಕವಿ ಹೇಳುವುದು ಹೀಗೆ:
ಒಬ್ಬಳೇ ಬಂದಳು/ ನಡೆನಡೆದು ಕನಕ!/ನಗುನಗುತ ಬಂದಳು/ನನ್ನೆದೆಯ ತನಕ
ಬರುವ ಸಡಗರದಲ್ಲಿ/ಸದ್ದಾಯ್ತು ಚಿಲಕ;/ ಬಂದು ನಿಂತಳು ಇಲ್ಲಿ/ಎತ್ತರಿಸಿ ಬೆಳಕ.
……………………
……………………
ನೀಲ ಗಗನದ ನಡುವೆ/ಚಂದಿರನ ಹೊರಳು ಮೌನಮಾಯೆಯ ನಡುವೆ/ರಾಗಗಳ ಹೊರಳು.
ಕಣ್ಣೆತ್ತಿ ನೋಡಿದಳು/ಕಣ್ತುಂಬ ಕನಕ; ಗಾಳಿಯಲಿ ತುಂಬಿಗಳು/ಝಂಕಾರ ಪದಕ.
ಪದ್ಯ ಮುಂದುವರಿದಂತೆಲ್ಲ ಖುಷಿಯಾಗುತ್ತದೆ. ರೋಮಾಂಚನವಾಗುತ್ತದೆ. ಆಗಿರುವ ವಯಸ್ಸನ್ನೂ ಮರೆತು ಪ್ರೀತಿಸುವ ಮನಸ್ಸಾಗುತ್ತದೆ. ಕೆ.ಎಸ್.ನ ಅವರ ಜಮಾನಾದಲ್ಲಿ ಪ್ರೇಮಿಗಳಿಗೆ ಇದ್ದ (?) ಪ್ರೈವೇಸಿ ನೆನೆದು ಅಸೂಯೆಯಾಗುತ್ತದೆ!
****
ಕೆಎಸ್ನ ಅವರ ಪದ್ಯ, ಅವರ ಕಾಲದ ಪ್ರೇಮ, ಅವರಿಗೆ ಸಿಕ್ಕ ರೋಮಾಂಚನ ತುಂಬ ಇಷ್ಟವಾಗುತ್ತದೆ ನಿಜ. ಆದರೆ, ಆ ಕಾಲದವರಂತೆ ಪ್ರೇಮಿಸುವುದು ಈಗ ಸಾಧ್ಯವೇ ಇಲ್ಲವೇನೋ. ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತ ಹೋದರೆ, ಒಮ್ಮೆ ನಗುಬರುತ್ತದೆ. ಹಿಂದೆಯೇ ‘ಹೌದಲ್ವಾ?’ ಅನ್ನಿಸಿ ಅಚ್ಚರಿಯಾಗುತ್ತದೆ.
ಕೇಳಿ: ಇವತ್ತು ಪ್ರೀತಿಯ ಹೊಳೆಗೆ ಬಿದ್ದವರೆಲ್ಲ ‘ರೋಮಾಂಚನದಲ್ಲಿ’ ಮುಳುಗದೇ ಇರಲು ಮುಖ್ಯ ಕಾರಣವಾಗಿರುವುದು ಮೊಬೈಲು! ಇವತ್ತು ಎಷ್ಟೋ ಮಂದಿಗೆ ಪ್ರೀತಿ ಚಿಗುರುವುದೇ ಒಂದು ಎಸ್ಸೆಮ್ಮೆಸ್, ಒಂದು ಕಾಲ್ ಮೂಲಕ! ಹಾಗೆಯೇ ಅದೇ ಮಧುರ ಪ್ರೇಮ ಲಟಾರನೆ ಮುರಿದು ಬೀಳುವುದೂ ಒಂದು ಎಸ್ಸೆಮ್ಮೆಸ್ಸು ಅಥವಾ ಒಂದು ಫೋನ್ ಕಾಲ್ ಮೂಲಕವೇ ಎಂಬುದು ವಿಪರ‍್ಯಾಸ. ಈಗ ಎಲ್ಲಿ ಸರಸವೂ, ಸಿಹಿಮುತ್ತೂ ಮೊಬೈಲಿನ ಪಿಸಪಿಸ ಮಾತುಗಳಲ್ಲೇ ಮುಗಿದು ಹೋಗುತ್ತದೆ. ಈಗಿನ ಕಾಲದಲ್ಲಿ ಯಾವ ಹುಡುಗನೂ ‘ಅವಳ’ ಮೇಲೆ ಪದ್ಯ ಬರೆಯುವುದಿಲ್ಲ. ಬದಲಿಗೆ ರಿಂಗ್ಟೋನ್ ಕಳಿಸುತ್ತಾನೆ, ಕೇಳಿಸುತ್ತಾನೆ! ಒಂದು ಗ್ರೀಟಿಂಗ್ ಕಾರ್ಡಿನೊಂದಿಗೆ ಅವಳ ಮುಂದೆ ದೈನೇಸಿಯಂತೆ ನಿಲ್ಲುವುದಿಲ್ಲ. ಬದಲಿಗೆ ಅವಳಿಗೆ ಭರ್ತಿ ಹದಿನೈದು ಸಾವಿರದ ಮೊಬೈಲು ಕೊಡಿಸುತ್ತಾನೆ. ಆಮೇಲೆ ದಿನದ ಇಪ್ಪತ್ನಾಲ್ಕು ಗಂಟೆಯೂ ಅವಳೊಂದಿಗೆ ‘ಟಚ್’ನಲ್ಲಿರುತ್ತಾನೆ. ಒಂದು ದಿನವೂ ತಪ್ಪಿಸದೆ ಮಾತಾಡುವುದರಿಂದ ಹುಡುಗನಿಗಾಗಲಿ, ಹುಡುಗಿಗಾಗಲಿ ಎಲ್ಲರ ಕಣ್ತಪ್ಪಿಸಿ ಭೇಟಿಯಾಗಬೇಕಾದ ಮಹದಾಸೆ ಇರುವುದಿಲ್ಲ ಅಥವಾ ಭೇಟಿಯಾದರೂ, ಆಗಲೂ ಹೊಸ ರಿಂಗ್ಟೋನ್ ಕೇಳಿಸುವ, ಏನನ್ನೋ ಕದಿಯುವ ‘ಅವಸರ’ ಮಾತ್ರ ಇರುತ್ತದೆ. ಅಂಥ ಭೇಟಿಯಲ್ಲೂ ಮೊಬೈಲಿನಲ್ಲಿ ಅವನೋ, ಅವಳೋ ಹದಿನೈದಿಪ್ಪತ್ತು ನಿಮಿಷ ಮಾತಿಗೆ ನಿಂತರೆ- ಆ ಕಾರಣಕ್ಕೇ ಜಗಳ ಶುರುವಾಗಿಬಿಡುತ್ತದೆ. ಉಹುಂ, ನಂತರದಲ್ಲಿ ‘ಅವರ’ ಪ್ರೇಮ ಮತ್ತೆ ಹಳೆಯ ಟ್ರ್ಯಾಕ್ಗೆ ಬರುವುದಿಲ್ಲ.
ಈ ದಿನಗಳಲ್ಲಿ ಪ್ರೇಮಿಗಳಿಗೆ ಇರುವ ಅಡೆತಡೆಗಳನ್ನು ಗಮನಿಸಿದರೂ ಅಚ್ಚರಿಯಾಗುತ್ತದೆ. ಏಕೆಂದರೆ, ಇವತ್ತು ಅವರ ರಕ್ಷಣೆಗೆ ಜನರೂ ಇಲ್ಲ. ಪ್ರಕೃತಿಯೂ ಇಲ್ಲ. ಒಂದೇ ಮಾತಲ್ಲಿ ಹೇಳಬೇಕೆಂದರೆ, ಇವತ್ತು ಪ್ರೀತಿಯ ಹೊಳೆಗೆ ಬಿದ್ದ ಹುಡುಗ/ಹುಡುಗಿ ಕೆಲಸಕ್ಕೆ ಸೇರಿರುತ್ತಾರೆ; ಕಾಲೇಜಿಗೂ ಹೋಗುತ್ತಿರುತ್ತಾರೆ. ಅವರದು ಪ್ರಧಾನಮಂತ್ರಿಯಷ್ಟೇ ಬ್ಯುಸಿ ಶೆಡ್ಯೂಲ್. ಮಧ್ಯಾಹ್ನ ಅವಳಿಗೊಂದು ಮೆಸೇಜು ಕಳಿಸಲು ಇವನು ಮೊಬೈಲು ಎತ್ತಿಕೊಂಡರೆ, ಅದೇ ವೇಳೆಗೆ ಬಾಸ್ ಕರೆದಿರುತ್ತಾನೆ. ಇವಳು ‘ಸಂಜೆ’ ಬೇಗ ಸಿಗೋಣವಾ ಎಂದು ಅವನಿಗೆ ಮೆಸೇಜು ಬಿಟ್ಟು, ಹತ್ತು ನಿಮಿಷ ಮೊದಲೇ ಆಫೀಸು ಬಿಟ್ಟರೂ, ಗಿಜಿಗಿಜಿ ಟ್ರಾಫಿಕ್ಕಿಗೆ ಸಿಕ್ಕಿಕೊಂಡ ಕಾರಣದಿಂದ ಕಾಫಿಡೇ ತಲುಪುವ ವೇಳೆಗೆ ಎಂಟೂವರೆ ದಾಟಿರುತ್ತದೆ. ಒಂಬತ್ತೂವರೆಯ ಒಳಗೆ ಮನೇಲಿರಬೇಕು; ಬಟ್ಟೆ ಅಥವಾ ಕೈ ಬೆರಳಿನಲ್ಲಿ ‘ಅವನು’ ಹಾಕಿರುವ ಪರ್ಫ್ಯೂಮ್ನ ಘಮವೋ, ಸಿಗರೇಟಿನ ಘಾಟೋ ಅಂಟಿಕೊಳ್ಳಬಾರದು ಎಂದು ‘ಇವಳು’ ವಿಪರೀತ ಎಚ್ಚರಿಕೆ ವಹಿಸುವುದರಿಂದ ಜತೆಯಲ್ಲಿ ಕೂತಿದ್ದರೂ ಅವನು ಮುಟ್ಟುವಂತಿಲ್ಲ. ಮುತ್ತಿಡುವಂತಿಲ್ಲ!
ಹೋಗಲಿ, ಮನೆಮಂದಿಯ ‘ಅಡ್ಡಿಯೇ ಇಲ್ಲ ಅಂದುಕೊಂಡರೂ ಈ ದಿನಗಳಲ್ಲಿ ಪ್ರೇಮಿಗಳಿಗೆ ಸ್ವಾತಂತ್ರ್ಯವಿಲ್ಲ. ಪಾರ್ಕಿಗೆ ಹೋದರೆ ಪೊಲೀಸರು ಕಾಡುತ್ತಾರೆ. ಕಾಫಿಡೇಲಿ ಕುಳಿತರೆ ಪುಂಡರು ಕೆಣಕುತ್ತಾರೆ. ಹುಡುಗ-ಹುಡುಗಿ ಇಬ್ಬರೂ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದರಂತೂ ಸಹೋದ್ಯೋಗಿಗಳೇ ಅಣಕಿಸಿಬಿಡುತ್ತಾರೆ. ಇನ್ನು, ಮನೆಯಲ್ಲಿ ಸಣ್ಣದೊಂದು ಕಿರಿಕ್ ಆಗಿಬಿಟ್ಟರೂ ಸಾಕು, ಅಪ್ಪ-ಅಮ್ಮ ಮೊದಲು ಕೆಲಸ ಬಿಡಿಸುತ್ತಾರೆ. ದಿನದಿನವೂ ಮೊಬೈಲು ಚೆಕ್ ಮಾಡುತ್ತಾರೆ ಅಥವಾ ಆ ಹುಡುಗನ್ನೇ ಕರೆಸಿ ಬುದ್ಧಿ ಹೇಳಿಸುತ್ತಾರೆ. ಹುಡುಗಿಯನ್ನು ಊರೇ ಬಿಡಿಸುತ್ತಾರೆ! ಈ ಯಾವುದಕ್ಕೂ ಹುಡುಗ-ಹುಡುಗಿ ಕೇರ್ ಮಾಡದೆ ಅಡ್ಡಾಡಿಕೊಂಡಿದ್ದರು ಅಂದುಕೊಳ್ಳಿ: ಅಂಥವರನ್ನು ಒಂದಷ್ಟು ದಿನ ಸೂಕ್ಷ್ಮವಾಗಿ ಗಮನಿಸುವ ಪ್ರಮೋದ್ ಮುತಾಲಿಕ್ ಕಡೆಯ ಜನ ಅವಸರದಲ್ಲಿ ತಾಳಿ ಕಟ್ಟಿಸಿ ಮದುವೆ ಮುಗಿಸಿಬಿಡುತ್ತಾರೆ! ಒಮ್ಮೆ ಮದುವೆಯ ಬಂಧನಕ್ಕೆ ಈಡಾದ ಮೇಲೆ- ನಗುವುದಕ್ಕೆ, ಅವಳ ನೆನಪಲ್ಲಿ ‘ಚಿತ್’ ಆಗುವುದಕ್ಕೆ, ಏನನ್ನೋ ಕಲ್ಪಿಸಿಕೊಂಡು ಸಡಗರ ಪಡುವುದಕ್ಕೆ ಅವಕಾಶ ಎಲ್ಲಿದೆ ಹೇಳಿ?
ಇದನ್ನೆಲ್ಲ ನೆನಪು ಮಾಡಿಕೊಂಡರೆ, ಈಗಿನ ಕಾಲದ ಪ್ರೇಮಿಗಳ ಬಗ್ಗೆ ‘ಅಯ್ಯೋಪಾಪ’ ಅನ್ನಿಸುತ್ತದೆ. ಮರುಕವಾಗುತ್ತದೆ. ‘ಮಾಡರ್ನ್’ ಎನ್ನುವಂಥ ಥಳುಕು, ಬಳುಕು, ಒಂದಿಷ್ಟು ವಿಶೇಷ ಅನುಕೂಲಗಳು ಇರಲಿಲ್ಲ ಎಂಬುದನ್ನು ಬಿಟ್ಟರೆ ಹಳೆಯ ಕಾಲದ ಪ್ರೀತಿಯೇ ಚೆನ್ನಾಗಿತ್ತು: ಕೆಎಸ್ನ ಕಾಲದ ಪ್ರೇಮಿಗಳು ತುಂಬ ಖುಷಿಯಿಂದ ಇದ್ದರು ಎಂದು ಸಂಕೋಚವಿಲ್ಲದೆ ಹೇಳುವ ಆಸೆಯಾಗುತ್ತದೆ. ಆ ಸಂದರ್ಭಗಳಲ್ಲಿ ಮತ್ತೆ ನೆನಪಾಗುವುದು ಅವೇ ಕೆಎಸ್ನ ಕವಿತೆಯ ಮುಂದುವರಿದ ಸಾಲುಗಳು. ಕವಿತೆ, ನಿಂತು ಹೋಗಿದ್ದ ಹಾಡಿನಂತೆ, ಅಮ್ಮನ ಚೆಂದದ ಡ್ಯಾನ್ಸಿನಂತೆ ಹೀಗೆ ತೆರೆದುಕೊಳ್ಳುತ್ತದೆ:
ತಲೆಬಾಗಿ ನೋಡಿದಳು/ಕನ್ನಡಿಯ ಕಡೆಗೆ/ ಅಲ್ಲಿ ಉತ್ತರವಿತ್ತು/ಹೂವಿಟ್ಟ ಜಡೆಗೆ!
……………………
ಕೈ ಹಿಡಿದು ಕೇಳದೆನು/ಸಿಟ್ಟೇನೆ, ಕನಕ! ನಿಟ್ಟುಸಿರ ನಟ್ಟಿದಳು/ನನ್ನೆದೆಯ ತನಕ.
ಬಿಗಿದಪ್ಪಿ ಕೇಳಿದೆನು/ಕಣ್ಣಬಳಿ, ಕನಕ ಬೆಳ್ದಿಂಗಳಿಳಿದಿತ್ತು/ಆ ಮುಖದ ತನಕ
ಹೌದಲ್ಲವಾ? ಪ್ರೇಮಿಗಳು ಇರಬೇಕಾದದ್ದೇ ಹೀಗೆ. ಇಲ್ಲ ಅನ್ನುವುದಾದರೆ, ಇಡೀ ದಿನದಲ್ಲಿ ಹತ್ತಿರವೇ ಇದ್ದರೂ ಸರಸವಾಡಲಿಲ್ಲ ಎನ್ನುವುದಾದರೆ ಅವರು ಯಾಕೆ ಪ್ರೀತಿಯ ಮಾತಾಡಬೇಕು? ಯಾಕಾದರೂ ಅವರು ಪ್ರೇಮಿಗಳಾಗಬೇಕು? ಹೀಗೆಲ್ಲ ಅಂದುಕೊಂಡಾಗಲೇ ದಶಕಗಳ ಹಿಂದೆ ಮನೆ ಮನೆಗಳಲ್ಲೂ ನಡೆದ ಪ್ರೇಮಕತೆಗಳು ಆ ಕಾಲದ ಜನರಿಂದ ರಸವತ್ತಾದ ಕಾಮೆಂಟರಿಯಂತೆ ಕೇಳಿಬರುತ್ತದೆ. ಎಲ್ಲ ಅಡೆತಡೆಗಳ ಮಧ್ಯೆಯೂ ಅವರು ಎಲ್ಲೆಲ್ಲಿ, ಹೇಗೆಲ್ಲ ಭೇಟಿಯಾಗಿದ್ದರು? ಏನೇನೆಲ್ಲ ಮಾತಾಡಿಕೊಂಡಿದ್ದರು ಎಂಬುದನ್ನೂ ಅದೇ ಕಾಮೆಂಟರಿ ಮಾತುಗಳಲ್ಲಿ ಕೇಳಿಸಿಕೊಂಡಾಗಲೇ ಕೆಎಸ್ನರ ಪದ್ಯದ ಕಡೆಯ ಸಾಲು ನಿದ್ರಿಸುವ ಮಗುವಿನ ದಿವ್ಯ ನಗೆಯಂತೆ; ಅವಳ (ನ) ಅನುರಾಗದ ಪಿಸುಮಾತಿನಂತೆ ಕೇಳಿಸುತ್ತದೆ. ಕವಿತೆಯಲ್ಲಿ ‘ಅವನು’ ಹೇಳುತ್ತಾನೆ:
ಮುತ್ತಿಟ್ಟು ಕೇಳಿದೆನು/(ಗುಟ್ಟಾಗಿ) ಕನಕ! ಕಣ್ಣೆತ್ತಿ ನೋಡಿದಳು/ಚಂದಿರನ ತನಕ!
****
‘ಮಾತಿಗೆ ಮೀರಿದ್ದು’ ಅಂತಾರಲ್ಲ- ಅದಷ್ಟೂ ಕಡೆಯ ಸಾಲುಗಳಲ್ಲಿದೆ. ಅವನು ಮುತ್ತಿಡುವುದು, ಗುಟ್ಟಾಗಿ ಕೇಳುವುದು ಸಹಜ ಮತ್ತು ಅನಿವಾರ್ಯ. ಅದಕ್ಕೆ ಅವಳು ಒಂದೇ ಮಾತಲ್ಲಿ ಉತ್ತರಿಸಿದ್ದರೆ ಅಂಥ ವಿಶೇಷ ಇರುತ್ತಿರಲಿಲ್ಲ. ಆದರೆ ಅವಳು ಮಾತೇ ಆಡುವುದಿಲ್ಲ. ಸುಮ್ಮನೇ ಕಣ್ಣೆತ್ತಿ ನೋಡುತ್ತಾಳೆ- ಆ ನೋಟ ಚಂದಿರನನ್ನೂ ತಲುಪಿಬಿಡುತ್ತವೆ. ಅವನನ್ನೇ ತಾಕಿ ಬಿಡುತ್ತದೆ!
ಇದೆಲ್ಲ ನಿಜವಾ? ಇದಿಷ್ಟೂ ನಡೆದಿದ್ದಾ? ಪತ್ನಿ ವೆಂಕಮ್ಮನವರೊಂದಿಗೆ ಒಂದು ದಿನ ಆಡಿದ ರೊಮ್ಯಾಂಟಿಕ್ ಆಟವನ್ನೇ ಕೆಎಸ್ನ ಪದ್ಯವಾಗಿಸಿಬಿಟ್ಟರಾ? ಇದ್ದರೂ ಇರಬಹುದು!
ಅವರ ಕಾವ್ಯಶಕ್ತಿಗೆ ನಮಸ್ಕಾರ. ಅವರಿಗೂ…

‘ಅವನನ್ನು’ ಅಮೆರಿಕದ ಜನ ತಲೆಯೊಳಗೆ ಸಗಣಿ ತುಂಬಿಕೊಂಡ ಪೆಕರಾ ಅಂದಿದ್ದರು.

September 28, 2009

dr-q

ಅಂಥ ಅಮೆರಿಕನ್ನರ ಮುಂದೆಯೇ ‘ಆತ’ ನಂಬರ್ ಒನ್ ಮೆದುಳು ಶಸ್ತ್ರಚಿಕಿತ್ಸಾ ತಜ್ಞನಾಗಿ ಬೆಳೆದು ನಿಂತ!
ವೈದ್ಯರೊಬ್ಬರ ಮಗ ವೈದ್ಯನಾಗುವುದು, ತಹಸೀಲ್ದಾರರ ಮಗ ಡಿ.ಸಿ. ಆಗುವುದು, ಇನ್ಸ್ಪೆಕ್ಟರ್ ಮಗ ಡಿವೈಎಸ್ಪಿ ಆಗುವುದು, ಶಾಸಕನ ಮಗ ಶಾಸಕನೇ ಆಗುವುದು, ಶಿಕ್ಷಕರ ಮಗ ಲೆಕ್ಚರರ್ ಆಗುವುದು… ಉಹುಂ, ಇದ್ಯಾವುದೂ ಸುದ್ದಿಯಲ್ಲ. ಆದರೆ, ಕಳ್ಳನೊಬ್ಬನ ಮಗ ಐಎಎಸ್ ಮಾಡಿಬಿಟ್ಟರೆ-ಅದು ಸುದ್ದಿ. ತಿರುಪೆ ಎತ್ತುತ್ತಿದ್ದವನು ಚಿತ್ರ ನಟನಾದರೆ- ಅದು ಸುದ್ದಿ. ಕೊಳೆಗೇರಿಯ ಹುಡುಗನೊಬ್ಬ ಕೋಟ್ಯಾಪತಿಯಾದರೆ, ಅದೂ ಸುದ್ದಿ. ಅನಾಥಾಶ್ರಮದಲ್ಲಿ ಬೆಳೆದ ಹುಡುಗಿಯೊಬ್ಬಳು ವಿಶ್ವಸುಂದರಿಯಾಗಿಬಿಟ್ಟರೆ- ಅದಪ್ಪಾ ಸುದ್ದಿ.
ಇಂಥದೊಂದು ‘ಪವಾಡ’ ನಡೆಯಬೇಕಾದರೆ – ಗೆಲ್ಲಬೇಕೆಂಬ ಹಠವಿರಬೇಕು. ಗೆದ್ದೇ ತೀರುತ್ತೇನೆ ಎಂಬ ಛಲವಿರಬೇಕು. ಕಣ್ಮುಂದೆ ಗುರಿಯಿರಬೇಕು. ಸಮಸ್ಯೆಗಳನ್ನು ಎದುರಿಸುವ ಧೈರ್ಯವಿರಬೇಕು. ಒಂದು ಎತ್ತರ ತಲುಪಿಕೊಂಡ ನಂತರವೂ ಹೊಸದನ್ನು ಕಲಿಯುವ ಆಸೆಯಿರಬೇಕು, ಆಸಕ್ತಿಯಿರಬೇಕು. ಶ್ರದ್ಧೆ ಇರಬೇಕು. ಆಗ ಮಾತ್ರ ‘ಅಸಾಧ್ಯ’ ಎಂಬುದೆಲ್ಲಾ ‘ಸಾಧ್ಯ’ವಾಗಿಬಿಡುತ್ತದೆ. ಗೌರಿ ಶಂಕರದ ಎತ್ತರ ಕೂಡ ಬರೀ ಇನ್ನೂರು ಮೆಟ್ಟಿಲಿನ ಬೆಟ್ಟದಂತೆ ಕಾಣುತ್ತದೆ.
ಒಂದು ಕಾಲದಲ್ಲಿ ಅಮೆರಿಕದಲ್ಲಿ ಕೂಲಿ ಮಾಡುತ್ತಿದ್ದ; ಡರ್ಟಿ ಮೆಕ್ಸಿಕನ್ ಎಂದು ಅಮೆರಿಕನ್ನರಿಂದ ಉಗಿಸಿಕೊಂಡ; ಬೀದಿಯಲ್ಲಿ ಭಿಕ್ಷುಕನಂತೆ ಬಾಲ್ಯ ಕಳೆದ ಹುಡುಗನೊಬ್ಬ ಅದೇ ಅಮೆರಿಕದಲ್ಲಿ ಈಗ ನಂ.೧ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಹೆಸರಾಗಿದ್ದಾನೆ. ಅವನ ಯಶೋಗಾಥೆಯನ್ನು ವಿವರಿಸುವ ನೆಪದಲ್ಲಿ, ಮೇಲಿನ ಮಾತುಗಳನ್ನು ಹೇಳಬೇಕಾಯಿತು.
***
ನಮ್ಮ ಕಥಾನಾಯಕನ ಹೆಸರು ಆಲ್ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಈತ ಮೆಕ್ಸಿಕೋ ದೇಶದವನು. ಇವನ ತಂದೆ ಪೆಟ್ರೋಲ್ ಬಂಕ್ ಒಂದರಲ್ಲಿ ಸಣ್ಣ ನೌಕರಿಯಲ್ಲಿದ್ದ. ಮನೆಯಲ್ಲಿ ಅವನ ದುಡಿಮೆಯನ್ನೇ ನಂಬಿಕೊಂಡು ಹೆಂಡತಿ ಹಾಗೂ ಐವರು ಮಕ್ಕಳಿದ್ದರು. ಬರುತ್ತಿರುವ ಸಂಪಾದನೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಅನ್ನಿಸಿದಾಗ, ಅನಿವಾರ್ಯವಾಗಿ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಕಳುಹಿಸಲಾಯಿತು. ಆದರೆ, ಮಕ್ಕಳೆಲ್ಲ ಚಿಕ್ಕವರಿದ್ದರಲ್ಲ? ಆ ಕಾರಣಕ್ಕೆ ಅವರಿಗೆ ಯಾವೊಂದು ಕೆಲಸವೂ ಸಿಗಲಿಲ್ಲ. ಪರಿಣಾಮ, ಮನೆಯಲ್ಲಿ ಮಧ್ಯಾಹ್ನದ ಬಡತನ. ಈ ಸಂದರ್ಭದಲ್ಲಿಯೇ ಮೆಕ್ಸಿಕೋದಲ್ಲಿ ಆಂತರಿಕ ಗಲಭೆ ಶುರುವಾಯಿತು. ಅದೊಂದು ದಿನ ಆಲ್ಫ್ರೆಡೋ ಕ್ವಿನಾನ್ಸ್ನ ಮನೆಗೇ ನುಗ್ಗಿದ ಪುಂಡರು, ಮನೆಯಲ್ಲಿದ್ದ ಅಷ್ಟೂ ವಸ್ತುಗಳನ್ನು ಹೊತ್ತೊಯ್ದರು. ಆ ನಂತರದಲ್ಲಿಯೂ ಗಲಭೆಕೋರರ ಕಾಟ ಮುಂದುವರಿದಾಗ, ಕ್ವಿನಾನ್ಸ್ನ ತಂದೆ ಊರು ಬಿಡುವ ನಿರ್ಧಾರಕ್ಕೆ ಬಂದ.
ಊರನ್ನೇನೋ ಬಿಟ್ಟಿದ್ದಾಯಿತು. ಮುಂದಿನ ಬದುಕು ಹೇಗೆ? ಎಂದು ಕ್ವಿನಾನ್ಸ್ನ ಕುಟುಂಬದವರು ದಿಕ್ಕುಗಾಣದೆ ನಿಂತಿದ್ದಾಗ, ಅವನ ಬಂಧುಗಳು ನೆರವಿಗೆ ಬಂದರು. ‘ಅಮೆರಿಕಾದ ತೋಟಗಳಲ್ಲಿ ಕೂಲಿ ಕೆಲಸ ಸಿಗುತ್ತದೆ. ಬಂದುಬಿಡು’ ಎಂದರು. ಕ್ವಿನಾನ್ಸ್ನ ತಂದೆ ಹಿಂದೆ ಮುಂದೆ ಯೋಚಿಸದೆ ಸಂಸಾರ ಸಮೇತ ಬಂದೇ ಬಿಟ್ಟ. ಅಮೆರಿಕದ ಶ್ರೀಮಂತರ ತೋಟದಲ್ಲಿ ಮಾಲಿಯಾಗಿ, ಕೂಲಿಯವನಾಗಿ ಕೆಲಸಕ್ಕೆ ಸೇರಿಕೊಂಡ. ತನ್ನ ಸಂಪಾದನೆ ಯಾವ ಮೂಲೆಗೂ ಸಾಲುವುದಿಲ್ಲ ಎನ್ನಿಸಿದಾಗ ಮಕ್ಕಳನ್ನೂ ಕೂಲಿ ಕೆಲಸಕ್ಕೆ ಸೇರಿಸಿದ.
ಕ್ವಿನಾನ್ಸ್ ಮತ್ತು ಅವನ ತಂದೆ ಕೆಲಸ ಮಾಡುತ್ತಿದ್ದುದು ಹತ್ತು ಎಕರೆ ವಿಶಾಲದ ಜಮೀನಿನಲ್ಲಿ. ಅಲ್ಲಿ ಟೊಮೆಟೋ, ಕೋಸು, ಬೀನ್ಸ್, ಆಲೂಗಡ್ಡೆ ಸೇರಿದಂತೆ ತರಹೇವಾರಿಯ ತರಕಾರಿ ಬೆಳೆಯುತ್ತಿದ್ದರು. ತೋಟದ ಒಂದು ಮೂಲೆಯಲ್ಲಿ ಸಣ್ಣದೊಂದು ರೂಮನ್ನು ಕ್ವಿನಾನ್ಸ್ನ ಕುಟುಂಬಕ್ಕೆ ಬಿಟ್ಟುಕೊಡಲಾಗಿತ್ತು. ಕ್ವಿನಾನ್ಸ್ನ ಅಪ್ಪ ಬೆಳಗಿನಿಂದ ಸಂಜೆಯವರೆಗೂ ಬಿರುಬಿಸಿಲಿನಲ್ಲಿ ತೋಟದ ಈ ಬದಿಯಿಂದ ಆ ಬದಿಯವರೆಗೂ ಪಹರೆ ತಿರುಗುತ್ತಿದ್ದ. ಮಧ್ಯಾಹ್ನ ಊಟಕ್ಕೆಂದು ಬಂದವನು, ಆಕಸ್ಮಿಕವಾಗಿ ಮಾಲೀಕರು ಬಂದರೆ, ಅರ್ಧಕ್ಕೇ ಊಟಬಿಟ್ಟು ಓಡಿಹೋಗಿ ಅವರ ಮುಂದೆ ನಡುಬಾಗಿಸಿ ನಿಲ್ಲುತ್ತಿದ್ದ. ಅವನನ್ನು ಕಂಡ ಮಾಲೀಕರು-ಡರ್ಟಿ ಮೆಕ್ಸಿಕನ್ ಎಂದೇ ಮಾತು ಶುರು ಮಾಡುತ್ತಿದ್ದರು. ಚಿಕ್ಕದೊಂದು ತಪ್ಪಿಗೂ ಡರ್ಟಿ ಬಾಸ್ಟರ್ಡ್ ಎಂದು ಬಯ್ಯುತ್ತಿದ್ದರು. ಸಿಟ್ಟು ಬಂದರೆ ಒದ್ದೇ ಬಿಡುತ್ತಿದ್ದರು. ಇಂಥ ಸಂದರ್ಭಗಳಲ್ಲಿ ತಿರುಗಿ ಮಾತಾಡುವ, ಉತ್ತರ ಹೇಳುವ ಅವಕಾಶ ಕ್ವಿನಾನ್ಸ್ನ ತಂದೆಗೆ ಇರಲೇ ಇಲ್ಲ. ಹಾಗೇನಾದರೂ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಿತ್ತು. ಅಮೆರಿಕನ್ನರನ್ನು ಅವರ ದೇಶದಲ್ಲಿಯೇ ನಿಂದಿಸಿದ ಕಾರಣಕ್ಕೆ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು. ಹಾಗಾಗಿ ಕ್ವಿನಾನ್ಸ್ನ ತಂದೆ ಎಲ್ಲ ಅವಮಾನವನ್ನೂ ಹಲ್ಲುಕಚ್ಚಿ ಸಹಿಸಿಕೊಂಡ.
ಅಪ್ಪ ಕೂಲಿ ಮಾಡುತ್ತಿದ್ದನಲ್ಲ? ಅದೇ ತೋಟದಲ್ಲಿ ಕ್ವಿನಾನ್ಸ್ ಕೂಡ ಕೆಲಸಕ್ಕಿದ್ದ-ತೋಟದಲ್ಲಿ ಬೆಳೆದ ತರಕಾರಿಗಳನ್ನು ಆಯ್ದು ತಂದು ಟ್ರಕ್ಗೆ ತುಂಬುವುದು, ಅವಾಗವಾಗ ತೋಟದಲ್ಲಿ ಕಳೆ ಕೀಳುವುದು ಅವನ ಕೆಲಸವಾಗಿತ್ತು. ಹೀಗೆ ತರಕಾರಿ ತುಂಬುತ್ತಿದ್ದ ಹುಡುಗನನ್ನು ಶ್ರೀಮಂತ ಅಮೆರಿಕನ್ನರು ಅಣಕಿಸುತ್ತಿದ್ದರು. ಗೇಲಿ ಮಾಡುತ್ತಿದ್ದರು. ನಿನಗೆ ಇಂಗ್ಲಿಷೇ ಬರಲ್ವಲ್ಲೋ ಮೆಕ್ಸಿಕನ್ ಎಂದು ಅಪಹಾಸ್ಯ ಮಾಡುತ್ತಿದ್ದರು. ‘ನಿಮ್ಮ ತಲೆಯೊಳಗೆ ಬರೀ ಸಗಣಿ ತುಂಬಿದೆ ಕಣ್ರೋ. ನಿಮ್ಮಂಥೋರು ಏನಿದ್ರೂ ಜೀತ ಮಾಡೋಕೇ ಸೈ. ನಿಮಗೆ ಯಾವತ್ತೂ ತಲೆ ಓಡಲ್ಲ ಕಣ್ರೋ’ ಎಂದೆಲ್ಲ ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ಮುಂದೊಂದು ದಿನ ಇದನ್ನೆಲ್ಲ ನೆನಪು ಮಾಡಿಕೊಂಡು ಕ್ವಿನಾನ್ಸ್ ಹೀಗೆ ಹೇಳಿದ್ದ:
ಅಮೆರಿಕಾದ ಜನ ಹೀಗೆಲ್ಲ ಮಾತಾಡಿದಾಗ ಸಂಕಟವಾಗುತ್ತಿತ್ತು. ಸಿಟ್ಟು ಬರುತ್ತಿತ್ತು. ಅವರಿಗೆ ತಿರುಗಿ ಉತ್ತರ ಕೊಡುವ ಆಸೆಯಾಗುತ್ತಿತ್ತು. ಆದರೆ, ನನಗೆ ಚಂದದ ಇಂಗ್ಲಿಷು ಗೊತ್ತಿರಲಿಲ್ಲ. ಅವರಿಗಿಂತ ಚೆನ್ನಾಗಿ ಬದುಕಬೇಕೆಂಬ ಆಸೆಯಿತ್ತು. ಆದರೆ ಹಣವಿರಲಿಲ್ಲ. ಊಟಕ್ಕೂ ಗತಿಯಿರಲಿಲ್ಲ. ಅಷ್ಟೇ ಅಲ್ಲ, ಹಾಕಿಕೊಳ್ಳಲು ಚೆಂದದ ಬಟ್ಟೆಗಳೂ ಇರಲಿಲ್ಲ. ಇಡೀ ವರ್ಷ ಒಂದು ಜೀನ್ಸ್ ಪ್ಯಾಂಟ್ನಲ್ಲಿಯೇ ಬದುಕಿದೆ. ಕೊಳೆಯಾದಾಗೆಲ್ಲ ರಾತ್ರಿ ಒಗೆದು, ಬೆಳಗ್ಗೆ ಮತ್ತೆ ಅದನ್ನೇ ಧರಿಸುತ್ತಿದ್ದೆ. ಈ ಸಂಕಟದ ಮಧ್ಯೆಯೇ ನನಗೊಂದು ಹಟ ಬಂದುಬಿಟ್ಟಿತ್ತು. ಡರ್ಟಿ ಮೆಕ್ಸಿಕನ್, ನಿಂಗೆ ಇಂಗ್ಲಿಷು ಬರಲ್ಲ ಕಣೋ ಎಂದಿದ್ದರಲ್ಲ? ಅದೇ ಅಮೆರಿಕನ್ನರ ಮುಂದೆ ತಲೆ ಎತ್ತಿ ತಿರುಗಬೇಕು. ನಿಮ್ಮ ತಲೆಯೊಳಗೆ ಏನೂ ಇಲ್ಲ ಅಂದರಲ್ಲ? ನಿಮ್ಮ ಮೆದುಳು ಪೂರ್ತಾ ಖಾಲಿ ಎಂದು ಹಂಗಿಸಿದ್ದರಲ್ಲ? ಅದೇ ಅಮೆರಿಕನ್ನರು ನನ್ನೆದುರು ತಲೆಬಾಗಿ ನಿಲ್ಲುವಂತೆ ಮಾಡಬೇಕು ಎಂಬ ಹಟ ಜತೆಯಾಗಿಬಿಟ್ಟಿತ್ತು…
ಇಂಥದೊಂದು ನಿರ್ಧಾರವನ್ನು ಅಂಗೈಲಿ ಹಿಡಿದುಕೊಂಡೇ ಕ್ವಿನಾನ್ಸ್ ಮನೆಗೆ ಬಂದಾಗ, ಮೂಲೆಯಲ್ಲಿ ನಡುಗುತ್ತಾ ಕೂತಿದ್ದ ಅವನ ತಂದೆ, ಮಗನ ಕೈಹಿಡಿದು ಬಿಕ್ಕಳಿಸುತ್ತಾ ಹೇಳಿದನಂತೆ: ‘ಮಗಾ, ನನ್ನ ಥರಾನೇ ಕಣ್ಣೀರಿನಲ್ಲೇ ಕೈ ತೊಳೆಯಬೇಕು ಅನ್ನೋದಾದ್ರೆ ಈ ಕೆಲಸವನ್ನೇ ಮುಂದುವರಿಸು. ದೊಡ್ಡ ಮನುಷ್ಯ ಆಗಬೇಕು ಅನ್ನೋ ಆಸೆ ಇದ್ರೆ ನಾಳೆಯಿಂದಲೇ ಸ್ಕೂಲಿಗೆ ಹೋಗು…’
ಮರುದಿನವೇ ಮೆಕ್ಸಿಕೋಗೆ ಮರಳಿದ ಕ್ವಿನಾನ್ಸ್ ಶಾಲೆಗೆ ಸೇರಿಕೊಂಡ. ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣ ಮುಗಿಸಿದ. ಪ್ರೌಢಶಾಲಾ ಶಿಕ್ಷಣ ಮುಗಿಸಲು ಹಣದ ತೊಂದರೆ ಎದುರಾಯಿತು. ಆಗ ಒಂದು ವರ್ಷ ಸ್ಕೂಲು ಬಿಡಲು ಕ್ವಿನಾನ್ಸ್ ನಿರ್ಧರಿಸಿದ. ಹಾಗೆ ಶಾಲೆ ಬಿಟ್ಟವನು ಸೀದಾ ಅಮೆರಿಕಾದ ಫಾರ್ಮ್ ಹೌಸ್ಗೆ ಬಂದ. ತೋಟದ ಮಾಲಿ ಕೆಲಸಕ್ಕೆ ಸೇರಿಕೊಂಡ. ಊಟ ಮಾಡಿದರೆ ದುಡ್ಡು ಖರ್ಚಾಗಿ ಹೋಗುತ್ತದೆ ಎಂದುಕೊಂಡು ಒಂದಿಡೀ ವರ್ಷ (ತೋಟದ ಮಾಲೀಕರಿಗೆ ಗೊತ್ತಾಗದಂತೆ) ಟೊಮೆಟೋ, ಮೂಲಂಗಿ, ಕೋಸು, ಬೀನ್ಸ್ ತಿಂದುಕೊಂಡೇ ಬದುಕಿಬಿಟ್ಟ.
ಹೀಗೆ, ಒಂದು ವರ್ಷ ದುಡಿದ ಹಣವನ್ನು ಜತೆಗಿಟ್ಟುಕೊಂಡು ಮೆಕ್ಸಿಕೋಗೆ ಮರಳಿ, ಹೈಸ್ಕೂಲು ಶಿಕ್ಷಣಕ್ಕೆ ಸೇರಿಕೊಂಡನಲ್ಲ ಆಗ ಕ್ವಿನಾನ್ಸ್ನ ದಾರಿ ಸುಗಮವಿರಲಿಲ್ಲ. ಆತ ವಾಸವಿದ್ದ ಊರಿನಿಂದ ಶಾಲೆ ತುಂಬಾ ದೂರವಿತ್ತು. ಪರಿಣಾಮವಾಗಿ, ಬೆಳಗ್ಗೆ ನಾಲ್ಕು ಗಂಟೆಗೇ ಆತ ಏಳಬೇಕಿತ್ತು. ಅವಸರದಿಂದಲೇ ಬಸ್ಸು ಹಿಡಿಯಬೇಕಿತ್ತು. ಮಧ್ಯಾಹ್ನ ಮನೆಗೆ ವಾಪಸಾಗಲು ಬಸ್ ಇರಲಿಲ್ಲ. ಹಾಗಾಗಿ ಭರ್ತಿ ಎಂಟು ಮೈಲಿ ದೂರವನ್ನು ಆತ ನಡೆದೇ ಬರಬೇಕಿತ್ತು. ವರ್ಷವಿಡೀ ಬಿರುಬಿಸಿಲು ಅಥವಾ ಜಡಿ ಮಳೆ ಯಾವುದಾದರೊಂದು ಸದಾ ಕ್ವಿನಾನ್ಸ್ಗೆ ಕಾಟ ಕೊಡುತ್ತಲೇ ಇತ್ತು.
ಈ ಸಂಕಟದ ಮಧ್ಯೆಯೂ ಕ್ವಿನಾನ್ಸ್ ಡಿಸ್ಟಿಂಕ್ಷನ್ನಲ್ಲಿ ಪಾಸಾದ. ಈ ಸಂದರ್ಭದಲ್ಲಿಯೇ-ಮೆಕ್ಸಿಕೋದಲ್ಲಿಯೇ ಉಳಿದರೆ, ಯಾವುದಾದರೂ ಕಂಪನಿಯಲ್ಲಿ ಗುಮಾಸ್ತನಾಗಬಹುದೇ ಹೊರತು ಅದಕ್ಕಿಂತ ದೊಡ್ಡ ಹುದ್ದೆಗೆ ಹೋಗುವುದು ಸಾಧ್ಯವಿಲ್ಲ ಎಂದು ಕ್ವಿನಾನ್ಸ್ಗೆ ಅರ್ಥವಾಗಿ ಹೋಯಿತು. ಆತ ತಕ್ಷಣವೇ ಅಮೆರಿಕದ ಹಾದಿ ಹಿಡಿದ. ಅಮೆರಿಕದಲ್ಲಿ ಬದುಕಬೇಕೆಂದರೆ ಅಲ್ಲಿನ ಇಂಗ್ಲಿಷ್ ಕಲೀಬೇಕು ಅನ್ನಿಸಿದಾಗ ಒಂದಿಷ್ಟು ಡಿಕ್ಷನರಿ ಜತೆಗಿಟ್ಟುಕೊಂಡು ಕೆಲವೇ ದಿನಗಳಲ್ಲಿ ಅಮೆರಿಕನ್ ಇಂಗ್ಲಿಷು ಕಲಿತೇಬಿಟ್ಟ. ನಂತರ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡ. ಈ ಸಂದರ್ಭದಲ್ಲಿ ಕ್ವಿನಾನ್ಸ್ ಮಾಡಿದ ಜಾಣತನದ ಕೆಲಸವೆಂದರೆ, ಸಂಜೆ ಕಾಲೇಜಿಗೆ ಸೇರಿಕೊಂಡದ್ದು.
ವಿಜ್ಞಾನದ ವಿಷಯ ಆಯ್ದುಕೊಂಡ ಕ್ವಿನಾನ್ಸ್, ಕಾಲೇಜು ಮುಗಿದ ತಕ್ಷಣ ಲೈಬ್ರರಿ ಸೇರಿಕೊಳ್ಳುತ್ತಿದ್ದ. ಆತನ ಕಣ್ಮುಂದಿನ ಗುರಿ ನಿಚ್ಚಳವಿತ್ತು. ಇವತ್ತಲ್ಲ ನಾಳೆ, ಇಡೀ ಅಮೆರಿಕದ ಜನ ತನ್ನತ್ತ ಬೆರಗಿನಿಂದ ನೋಡುವಂಥ ಸಾಧನೆ ಮಾಡಬೇಕೆಂಬ ಮಹದಾಸೆ ಅವನೊಳಗಿತ್ತು. ಈ ಹಠದಿಂದಲೇ ಓದಲು ಕೂರುತ್ತಿದ್ದ. ಕಡೆಗೊಂದು ದಿನ, ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತು. ಪರಿಣಾಮ, ಉನ್ನತ ದರ್ಜೆಯಲ್ಲಿ ಆತ ಡಿಗ್ರಿ ಪಡೆದ. ನಂತರ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸದಿಂದ ಸಿಗುವ ಸಂಬಳದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಅನ್ನಿಸಿದಾಗ, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಖಾಸಗಿಯಾಗಿ ಟ್ಯೂಶನ್ ಹೇಳುವುದಕ್ಕೂ ಮುಂದಾದ.
ಹೀಗೆ, ಪೈಸೆಗೆ ಪೈಸೆ ಸೇರಿಸಿಕೊಂಡು ಕನಸಿನ ಹಿಂದೆ ಬಿದ್ದಿದ್ದಾಗಲೇ ಅಮೆರಿಕದ ಸಾವಿರಾರು ವಿದ್ಯಾರ್ಥಿಗಳು ಡ್ರಗ್ಸ್ನ ದಾಸರಾಗಿರುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಯಿತು. ತಕ್ಷಣವೇ, ಡ್ರಗ್ಸ್ ಸೇವನೆಯಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು ಎಂಬ ವಿಷಯವಾಗಿ ಕ್ವಿನಾನ್ಸ್ ಒಂದು ಪ್ರಬಂಧ ಬರೆದು ಪ್ರಕಟಿಸಿದ. ಈ ಸಂಶೋಧನೆಗೆ ಪ್ರೊ. ಹೋಗೋ ಮೋರಾ ಎಂಬಾತ ಗೈಡ್ ಆಗಿದ್ದರು. ಕ್ವಿನಾನ್ಸ್ನ ಪ್ರಬಂಧವನ್ನು ಕಂಡ ಅವರು, ಇದಕ್ಕಿಂತ ಚೆನ್ನಾಗಿ ಬರೆಯಲು ನನ್ನಿಂದ ಕೂಡ ಸಾಧ್ಯವಿಲ್ಲ. ಮಾನವ ದೇಹದ ಅತಿ ಸೂಕ್ಷ್ಮ ಅಂಗವೆಂದರೆ ಮೆದುಳು. ಅದರ ಬಗ್ಗೆ, ಅದರ ಕಾರ್ಯ ಚಟುವಟಿಕೆ, ಅದಕ್ಕೆ ಬರುವ ಕಾಯಿಲೆ, ಅದಕ್ಕೆ ಪರಿಹಾರ… ಮುಂತಾದ ವಿಷಯದ ಬಗ್ಗೆ ಅಕಾರಯುತವಾಗಿ ಮಾತಾಡಲು ತುಂಬ ತಿಳಿವಳಿಕೆ ಇರಬೇಕು. ಅಂಥ ಬುದ್ಧಿ ನಿನಗಿದೆ. ನೀನು ಯಾಕೆ ಡಾಕ್ಟರಾಗಬಾರದು? ನೀನೇಕೆ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಗಬಾರದು? ಎಂದರು. ಅಷ್ಟಕ್ಕೇ ಸುಮ್ಮನಾಗದೆ ಹಾರ್ವರ್ಡ್ನ ಮೆಡಿಕಲ್ ಕಾಲೇಜಿಗೆ ಶಿಷ್ಯನ ಪ್ರಬಂಧವನ್ನು ಕಳಿಸಿಕೊಟ್ಟರು. ಅವನಿಗೆ ವೈದ್ಯ ಶಿಕ್ಷಣಕ್ಕೆ ಸೀಟು ಕೊಡುವಂತೆಯೂ ಆಗ್ರಹಿಸಿದರು.
ಕ್ವಿನಾನ್ಸ್ನ ಪ್ರಬಂಧ ಕಂಡದ್ದೇ ಹಾರ್ವರ್ಡ್ ವಿವಿಯ ಎಲ್ಲರೂ ಬೆರಗಾದರು. ಆತನಿಗೆ ರತ್ನಗಂಬಳಿಯ ಸ್ವಾಗತ ಕೊಟ್ಟರು. ಕೆಲವೇ ವರ್ಷಗಳ ಹಿಂದೆ ಕ್ವಿನಾನ್ಸ್ನಿಂದ ಜೀತ ಮಾಡಿಸಿಕೊಂಡಿದ್ದ ಅಮೆರಿಕ ಸರಕಾರ, ತಾನೇ ಮುಂದಾಗಿ ಅವನಿಗೆ ಅಮೆರಿಕನ್ ಪೌರತ್ವ ನೀಡಿತು. ಸ್ಕಾಲರ್ಶಿಪ್ ನೀಡಿತು. ವಾಸಕ್ಕೆ ಮನೆ ಕೊಟ್ಟಿತು. ಷರತ್ತಿಲ್ಲದೆ ಸಾವಿರಾರು ಡಾಲರ್ ಸಾಲ ನೀಡಿತು.
ಹಳೆಯ ಗಾಯ, ಹಳೆಯ ಅವಮಾನ- ಈ ಎರಡನ್ನೂ ನೆನಪಿಟ್ಟುಕೊಂಡೇ ಕ್ವಿನಾನ್ಸ್ ಓದು ಮುಂದುವರಿಸಿದ. ಈ ಅಮೆರಿಕನ್ನರಿಂದ ಗೌರವ ಪಡೆಯಲೇಬೇಕು ಎಂಬ ಹಠದಿಂದಲೇ ಅಧ್ಯಯನಕ್ಕೆ ತೊಡಗಿಸಿಕೊಂಡ. ಕಡೆಗೂ ಅವನ ಛಲವೇ ಗೆದ್ದಿತು. ನರರೋಗ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕ್ವಿನಾನ್ಸ್ ನಂತರದ ಎರಡೇ ವರ್ಷದಲ್ಲಿ ‘ಅಮೆರಿಕದ ಅತ್ಯುತ್ತಮ ಮೆದುಳು ಶಸ್ತ್ರ ಚಿಕಿತ್ಸಾ ತಜ್ಞ’ ಎಂದು ಹೆಸರು ಮಾಡಿದ.
***
ಈಗ, ಅಮೆರಿಕದ ಬಾಲ್ಟಿಮೋರ್ನಲ್ಲಿರುವ ಜಾನ್ಸ್ಹಾಫ್ಕಿನ್ಸ್ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾನೆ ಕ್ವಿನಾನ್ಸ್. ಮೆದುಳು ಕ್ಯಾನ್ಸರ್ಗೆ ತುತ್ತಾದವರನ್ನು ಬದುಕಿಸುವ ಮಹಾವೈದ್ಯ ಎಂದೇ ಅವನಿಗೆ ಹೆಸರಿದೆ. ಬದುಕುವುದೇ ಇಲ್ಲ ಎಂಬ ಹಂತಕ್ಕೆ ಹೋಗಿದ್ದ ರೋಗಿಗಳೆಲ್ಲ ಕ್ವಿನಾನ್ಸ್ನ ಕೈ ಚಳಕದಿಂದ ಹೊಸ ಬದುಕು ಕಂಡಿದ್ದಾರೆ. ಅಮೆರಿಕ ಸರಕಾರ, ಅವನಿಗೆ ಎಲ್ಲ ಅತ್ಯುನ್ನತ ಪ್ರಶಸ್ತಿಗಳನ್ನೂ ನೀಡಿ ಗೌರವಿಸಿದೆ. ಆ ಮೂಲಕ ತನ್ನ ಖ್ಯಾತಿಯನ್ನೂ ಹೆಚ್ಚಿಸಿಕೊಂಡಿದೆ.
ಇವತ್ತು, ಖ್ಯಾತಿಯ ಗೌರಿಶಂಕರದಲ್ಲಿ ಕುಳಿತಿದ್ದರೂ ೪೦ರ ಹರೆಯದ ಕ್ವಿನಾನ್ಸ್ ಬದಲಾಗಿಲ್ಲ. ಮೈಮರೆತಿಲ್ಲ. ಅಹಮಿಕೆಗೆ ಬಲಿಯಾಗಿಲ್ಲ. ಆತ ಹೇಳುತ್ತಾನೆ: ಒಂದು ಕಾಲದಲ್ಲಿ ಇದೇ ಅಮೆರಿಕದಲ್ಲಿ ಭಿಕ್ಷುಕನಂತೆ ಬದುಕಿದೆ. ಈ ಊರಲ್ಲಿ ತಲೆಎತ್ತಿಕೊಂಡು, ಅಮೆರಿಕನ್ನರಿಗೆ ಸರಿಸಮನಾಗಿ ಬದುಕಬೇಕೆಂಬ ಆಸೆಯಿತ್ತು. ಅದೀಗ ನನಸಾಗಿದೆ. ಅಮೆರಿಕದ ಹುಡುಗಿಯನ್ನೇ ಮದುವೆಯಾಗಿದ್ದೇನೆ. ನನಗೆ ಭವಿಷ್ಯದಲ್ಲಿ ನಂಬಿಕೆಯಿಲ್ಲ. ಇವತ್ತೇ ಕಡೆಯ ದಿನ ಅಂದುಕೊಂಡೇ ಕೆಲಸ ಶುರುಮಾಡ್ತೀನಿ. ಮೆದುಳಿನ ಶಸ್ತ್ರಚಿಕಿತ್ಸೆ ಅಂದರೆ ಸಾವಿನೊಂದಿಗೆ ಸರಸ ಇದ್ದಂತೆ. ಅದು ದೇವರ ಜತೆಗಿನ ಹೋರಾಟ. ನನ್ನ ಕೈ ಚಳಕದ ಸತ್ವ ಪರೀಕ್ಷೆ. ಅದರಲ್ಲಿ ಗೆಲ್ಲಲೇಬೇಕು ಅಂದುಕೊಂಡೇ ಕೆಲಸ ಶುರು ಮಾಡ್ತೀನಿ. ಜೀಸಸ್, ನಿನ್ನ ವಿರುದ್ಧವೇ ಹೋರಾಡ್ತಾ ಇದೀನಿ. ನನಗೆ ಗೆಲುವಾಗುವಂತೆ ಆಶೀರ್ವದಿಸು ಎಂದು ಪ್ರಾರ್ಥಿಸಿದ ನಂತರವೇ ಆಪರೇಷನ್ ಥಿಯೇಟರಿಗೆ ನಡೆದುಹೋಗ್ತೀನಿ. ಮುದ್ದೆ ಮುದ್ದೆಯಂಥ, ಅಮೀಬಾದ ಚಿತ್ರದಂಥ ಮೆದುಳನ್ನು ಕಂಡಾಗ, ಅದರಲ್ಲಿ ಅತಿ ಸೂಕ್ಷ್ಮ ಭಾಗವೊಂದನ್ನು ಕತ್ತರಿಸಿ ತೆಗೆಯಬೇಕಾಗಿ ಬಂದಾಗ ನನಗೂ ಜೀವ ಝಲ್ ಅನ್ನುತ್ತೆ ನಿಜ. ಆದರೆ, ಆಗೆಲ್ಲ ನನಗೆ ನಾನೇ ಧೈರ್ಯ ಹೇಳಿಕೊಂಡು ಕೆಲಸ ಮಾಡ್ತೀನಿ. ಅದೃಷ್ಟ, ಸ್ವಪ್ರಯತ್ನ, ರೋಗಿಯ ಮನೋಸ್ಥೈರ್ಯ ಹಾಗೂ ಜೀಸಸ್ನ ಕರುಣೆಯಿಂದ ಪ್ರತಿ ಸಂದರ್ಭದಲ್ಲೂ ನಾನು ಗೆದ್ದಿದೀನಿ ಎನ್ನುತ್ತಾನೆ ಕ್ವಿನಾನ್ಸ್.
****
ಒಂದು ಕಾಲದಲ್ಲಿ ನಿನ್ನ ಮೆದುಳೇ ಖಾಲಿ ಕಣೋ ಎಂದು ಅಣಕಿಸಿದ್ದ ಅಮೆರಿಕದ ಜನರಿಂದಲೇ ಶ್ರೇಷ್ಠ ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಎಂದು ಕರೆಸಿಕೊಂಡನಲ್ಲ ಕ್ವಿನಾನ್ಸ್? ಅವನಿಗೆ ಲಾಲ್ಸಲಾಮ್ ಎನ್ನುವ ಆಸೆಯಾಗುತ್ತದೆ. ಹಿಂದೆಯೇ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಚೀರಿ ಹೇಳಬೇಕೆನಿಸುತ್ತದೆ. ಅಲ್ಲವೇ?

ಹಾಡು ಬರೆದ ಕವಿಯನ್ನು ಎತ್ತಿಕೊಂಡು ಮುದ್ದಾಡಿದ್ದರು ಪುಟ್ಟಣ್ಣ!

August 25, 2009

ಚಿತ್ರ: ಪಡುವಾರಹಳ್ಳಿ ಪಾಂಡವರು. ಗೀತೆರಚನೆ: ದೊಡ್ಡರಂಗೇಗೌಡ.
ಸಂಗೀತ: ವಿಜಯ ಭಾಸ್ಕರ್. ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ.

ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ
ಅನ್ನ ನೀಡಿದ ಈ ಮಣ್ಣನು ನಾ ಹೇಗೆ ತಾನೆ ಮರೆಯಲಿ ||ಪ||

ಈ ಗಾಳಿ ಈ ನೀರು ನನ್ನ ಒಡಲು
ಈ ಬೀದಿ ಈ ಮನೆಯೆ ನನ್ನ ತೊಟ್ಟಿಲು
ಈ ಕೆಂಚ ಈ ಮಾಚ ಎಲ್ಲಾ ಹೆಸರು
ಎಂದೆಂದು ನನ್ನೆದೆಯ ಹಚ್ಚನೆಯ ಹಸಿರು ||೧||

ಈ ಗೌರಿ ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ ಊರೆಲ್ಲಾ ಕುಣಿದೆ
ಕಾಳವ್ವ ಸುಬ್ಬವ್ವ ನನ್ನ ಎತ್ತಾಡಿ
ಹರಸಿದ ತಾಯಿಯರ ಹೇಗೆ ಮರೆಯಲಿ? ||೨||

ಈ ಜೀವ ಈ ದೇಹ ಅರೆದು ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದೂ ತಿಳಿದು
ಬಾನತ್ತ ಭುವಿಯತ್ತ ಪೆಚ್ಚಾಗಿ ನೋಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ ||೩||
‘ಅವರ ಪ್ರತಿಯೊಂದು ಚಿತ್ರದಲ್ಲೂ ಹೊಸತನವಿರುತ್ತದೆ. ಅಪರೂಪದ ಕಥೆ ಇರುತ್ತದೆ. ಮಧುರ ಹಾಡುಗಳಿರುತ್ತವೆ. ಒಂದು ಸಂದೇಶವಿರುತ್ತದೆ. ಚಿತ್ರಪ್ರೇಮಿಗಳನ್ನು ಥಿಯೇಟರಿಗೆ ಕರೆತರಬಲ್ಲ ‘ಶಕ್ತಿ’ ಇರುತ್ತದೆ. ಆದರೆ, ಪುಟ್ಟಣ್ಣ ಕಣಗಾಲರ ಪ್ರತಿಯೊಂದು ಸಿನಿಮಾದಲ್ಲೂ ಅತೀ ಅನ್ನಿಸುವಷ್ಟು ಮೆಲೋಡ್ರಾಮಾ ಇರುತ್ತೆ. ಹೆಣ್ಣನ್ನು ಅವರು ವೈಭವೀಕರಿಸಿ ತೋರಿಸ್ತಾರೆ. ಬೆಳ್ಳಿಮೋಡ, ಗೆಜ್ಜೆಪೂಜೆ, ಶರಪಂಜರ, ಉಪಾಸನೆ, ಎಡಕಲ್ಲು ಗುಡ್ಡದ ಮೇಲೆ, ಶುಭಮಂಗಳ, ಬಿಳೀ ಹೆಂಡ್ತಿ… ಈ ಎಲ್ಲ ಸಿನಿಮಾಗಳಲ್ಲೂ ಆಗಿರುವುದೇ ಅದು. ಅದರರ್ಥ ಇಷ್ಟೆ: ಹೆಣ್ಣನ್ನು ವೈಭವೀಕರಿಸದೆ ಸಿನಿಮಾ ಮಾಡೋಕೆ ಪುಟ್ಟಣ್ಣನಿಗೆ ಬಹುಶಃ ಬರೋದಿಲ್ಲ…’
ಇಂಥದೊಂದು ಆರೋಪ ಪುಟ್ಟಣ್ಣ ಕಣಗಾಲ್ ಅವರ ಮೇಲಿತ್ತು. ಇದಕ್ಕೆ ಉತ್ತರವೆಂಬಂತೆ ಗ್ರಾಮೀಣ ಹಿನ್ನೆಲೆಯ ಕಥೆ ಹೊಂದಿರುವ ಸಿನಿಮಾ ನಿರ್ದೇಶಿಸಬೇಕು ಅಂದುಕೊಂಡಿದ್ದರು ಪುಟ್ಟಣ್ಣ. ಇದೇ ಸಂದರ್ಭಕ್ಕೆ ಸರಿಯಾಗಿ, ೧೯೭೭ರ ಮಹಾಚುನಾವಣೆಯಲ್ಲಿ ಇಂದಿರಾಗಾಂ ಸೋತರು. ಅಕಾರ ಕಳೆದುಕೊಂಡರು. ಭಾರತೀಯ ಜನಸಂಘದ ಮೇಲೆ ಒಲವು ಹೊಂದಿದ್ದ ಪುಟ್ಟಣ್ಣ, ಹಲವು ಪಕ್ಷಗಳು ಸೇರಿ ಒಂದು ಸರ್ವಾಕಾರಿ ಆಡಳಿತವನ್ನು ಕೊನೆಗಾಣಿಸಿದವು ಎಂದೇ ನಂಬಿದ್ದರು, ಪರಿಚಿತರೆಲ್ಲರ ಬಳಿ ಅದನ್ನೇ ಹೇಳುತ್ತಿದ್ದರು. ಈ ಸಂದರ್ಭದಲ್ಲಿಯೇ- ಹಳ್ಳಿಯೊಂದರಲ್ಲಿ ಕೊಬ್ಬಿಹೋಗಿದ್ದ ಪಟೇಲನೊಬ್ಬನ ಕಥೆ ಇಟ್ಟುಕೊಂಡು, ಅವನನ್ನು ಬಗ್ಗುಬಡಿಯುವ ಯುವಕರ ಕಥಾವಸ್ತುವಿನ ಸಿನಿಮಾ ಮಾಡಬಾರದೇಕೆ ಎಂಬ ಯೋಚನೆ ಅವರಿಗೆ ಬಂತು. ತಕ್ಷಣವೇ ‘ಗ್ರಾಮಾಯಣ’ ಕಾದಂಬರಿಯಿಂದ ದೊಡ್ಡ ಹೆಸರು ಮಾಡಿದ್ದ ರಾವ್‌ಬಹದ್ದೂರ್ ಅವರನ್ನು ಸಂಪರ್ಕಿಸಿದರು. ಅವರಿಂದ ಗ್ರಾಮೀಣ ಹಿನ್ನೆಲೆಯ ಕಥೆಯೊಂದನ್ನು ಬರೆಸಿದರು. ಕೌರವ ಪಾಂಡವರ ಗುಣಗಳು ಮಹಾಭಾರತದ ನಂತರವೂ ಅಸ್ತಿತ್ವದಲ್ಲಿವೆ ಎಂದು ಸೂಚ್ಯವಾಗಿ ಹೇಳಲು ಆ ಚಿತ್ರಕ್ಕೆ ‘ಪಡುವಾರಹಳ್ಳಿ ಪಾಂಡವರು’ ಎಂದು ಹೆಸರಿಟ್ಟರು.
ಇದೇ ಸಂದರ್ಭದಲ್ಲಿ ದೊಡ್ಡರಂಗೇಗೌಡ ಅವರ ಹದಿನಾಲ್ಕು ಕವಿತೆಗಳ ಸಂಕಲನ ‘ನಾಡಾಡಿ’ ಬಿಡುಗಡೆಯಾಗಿತ್ತು. ಅದು, ಮಾರ್ಕ್ಸ್‌ವಾದ ಎಲ್ಲರನ್ನೂ ಆವರಿಸಿಕೊಂಡಿದ್ದ ಕಾಲ. ಕವನಗಳಿಂದಲೇ ಕ್ರಾಂತಿ ಮಾಡಬಹುದು ಎಂಬ ಭ್ರಮೆ ಎಲ್ಲ ಕವಿಗಳನ್ನೂ ಮುತ್ತಿಕೊಂಡಿದ್ದ ಕಾಲ. ಈ ಕಾರಣದಿಂದಲೇ ‘ನಾಡಾಡಿ’ ಸಂಕಲನದಲ್ಲಿ ಹೆಚ್ಚಾಗಿ ಕ್ರಾಂತಿಗೀತೆಗಳೇ ಇದ್ದವು. ಆ ಪೈಕಿ ‘ಧಣಿ ಪುರಾಣ’ ಎಂಬ ಕವಿತೆ ಪುಟ್ಟಣ್ಣ ಕಣಗಾಲರಿಗೆ ತುಂಬಾ ಹಿಡಿಸಿತ್ತು. ಆ ಕವಿತೆಯಲ್ಲಿ ಶ್ರೀಮಂತ ಪಟೇಲನ ದೌರ್ಜನ್ಯದ ವಿರುದ್ಧ ಸಿಡಿದೆದ್ದ ನಾಲ್ಕೈದು ಕ್ರಾಂತಿಕಾರಿ ತರುಣರ ಹೋರಾಟದ ವಿವರವಿತ್ತು. ಅದನ್ನು ಓದಿ ಖುಷಿಯಾದ ಪುಟ್ಟಣ್ಣ, ತಮ್ಮ ಹೊಸ ಚಿತ್ರಕ್ಕೆ ಗೌಡರಿಂದಲೇ ಹಾಡು ಬರೆಸಲು ನಿರ್ಧರಿಸಿದರು. ಈ ಕುರಿತು ಮಾತುಕತೆ ನಡೆಸಲು ಕಾವೇರಿ ಕಾಂಟಿನೆಂಟಲ್ ಹೋಟೆಲ್‌ಗೆ ದೊಡ್ಡರಂಗೇಗೌಡರನ್ನು ಕರೆಸಿಕೊಂಡು ಹೇಳಿದರು:
‘ನೋಡಿ ಗೌಡ್ರೆ, ಪುಟ್ಟಣ್ಣ ಕಣಗಾಲ್ ಬರೀ ಹೆಣ್ಣಿನ ವೈಭವೀಕರಣದ ಸಿನಿಮಾ ಮಾಡ್ತಾನೆ ಅನ್ನೋ ಆರೋಪ ನನ್ನ ಮೇಲಿದೆ. ಅದು ಸುಳ್ಳು. ಗ್ರಾಮೀಣ ಹಿನ್ನೆಲೆಯ ಸಿನಿಮಾಗಳನ್ನೂ ನಾನು ಮಾಡಬಲ್ಲೆ ಅಂತ ತೋರಿಸಬೇಕು. ಹಾಗೆಂದೇ ಈಗ ‘ಪಡುವಾರಹಳ್ಳಿ ಪಾಂಡವರು’ ಸಿನಿಮಾ ತೆಗೀತಾ ಇದೀನಿ. ‘ನಾಡಾಡಿ’ ಕವನ ಸಂಕಲನ ಓದಿದ ಮೇಲೆ ನಿಮ್ಮಿಂದಲೇ ಹಾಡು ಬರೆಸಬೇಕು ಅನ್ನಿಸ್ತು. ಅದರಲ್ಲಿರುವ ‘ಧಣಿ ಪುರಾಣ’ ಕವಿತೆಯ ವಿಷಯವೇ ನಮ್ಮ ಸಿನಿಮಾದ ಕಥಾವಸ್ತು ಅಂದರೂ ತಪ್ಪೇನಿಲ್ಲ. ಗೀತೆಯ ಸನ್ನಿವೇಶದ ಬಗ್ಗೆ ಹೇಳ್ತೇನೆ. ನಿಮ್ಮ ಮೇಸ್ಟ್ರ ಕೆಲಸಕ್ಕೆ ಐದು ದಿನ ರಜೆ ಹಾಕಿ, ನಾಡಿದ್ದು ಗುರುವಾರ, ಬೆಳಗ್ಗೆ ಒಂಬತ್ತು ಗಂಟೆಗೆ ಜಯಮಹಲ್ ಪ್ಯಾಲೇಸ್ ಹೋಟೆಲ್‌ಗೆ ಬರ‍್ತೀರಾ?’
ಮುಂದೆ ಏನಾಯಿತು ಸಾರ್? ಎಂದರೆ, ಅದನ್ನು ದೊಡ್ಡರಂಗೇಗೌಡರು ತುಂಬ ಉತ್ಸಾಹದಿಂದ ಬಣ್ಣಿಸುವುದು ಹೀಗೆ: ‘ಅವತ್ತಿನ ದಿನಗಳಲ್ಲಿ ಪುಟ್ಟಣ್ಣ ಕಣಗಾಲ್ ಅವರ ಸಿನಿಮಾಕ್ಕೆ ಹಾಡು ಬರೆಯುವುದು ಎಲ್ಲರ ಕನಸಾಗಿತ್ತು. ಪುಟ್ಟಣ್ಣನ ಸಿನಿಮಾಕ್ಕೆ ಹಾಡು ಬರೆದೆ ಅನ್ನೋದು ಒಂದು ಹೆಚ್ಚುಗಾರಿಕೆ ಕೂಡ ಆಗಿತ್ತು. ಅನಿರೀಕ್ಷಿತವಾಗಿ ಸಿಕ್ಕಿದ ಅವಕಾಶದಿಂದ ನಾನೂ ಥ್ರಿಲ್ ಆದೆ. ಪುಟ್ಟಣ್ಣ ಹೇಳಿದ ಸಮಯಕ್ಕಿಂತ ಮೊದಲೇ ಜಯಮಹಲ್ ಪ್ಯಾಲೇಸ್‌ಗೆ ಹೋದೆ…
ಒಂದು ದೊಡ್ಡ ಹಾಲ್‌ನಲ್ಲಿ ಕುಳಿತಿದ್ದರು ಪುಟ್ಟಣ್ಣ. ಅವರ ಪಕ್ಕದಲ್ಲಿ ಹಾರ‍್ಮೋನಿಯಂ ಜತೆ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಕುಳಿತಿದ್ದರು. ಈ ಇಬ್ಬರ ಮುಂದೆ ಒಂದು ದೊಡ್ಡ ಹಿತ್ತಾಳೆ ತಟ್ಟೆಯಿತ್ತು. ಅದರ ತುಂಬ ಸಾವಿರಕ್ಕೂ ಹೆಚ್ಚು ದಾಸವಾಳದ ಹೂಗಳಿದ್ದವು. ಅವುಗಳಿಗೆ ಘಮಘಮಘಮಾ ಎನ್ನುವಂಥ ಪರ್‌ಫ್ಯೂಮ್ ಸಿಂಪಡಿಸಲಾಗಿತ್ತು. ಕವಿಯ ಕೋಮಲ ಮನಸ್ಸಿಗೆ ಪೂರಕ ಅನ್ನಿಸುವಂಥ ಆ ವಾತಾವರಣ ನೋಡಿ ನನಗಂತೂ ಹಿಡಿಸಲಾರದಷ್ಟು ಆನಂದವಾಯಿತು.
ಐದಾರು ನಿಮಿಷದ ಉಭಯ ಕುಶಲೋಪರಿಯ ನಂತರ, ಪುಟ್ಟಣ್ಣನವರು ಸನ್ನಿವೇಶ ವಿವರಿಸುತ್ತಾ ಹೀಗೆಂದರು: ‘ಪಡುವಾರಹಳ್ಳಿಯ ಪಟೇಲ, ತನ್ನ ವಿರುದ್ಧ ನಿಂತ ವಿದ್ಯಾವಂತ ನಾಯಕನ ಮೇಲೆ ಒಂದು ಅಪವಾದ ಹೊರಿಸಿ, ಆತನಿಗೆ ಊರಿಂದ ಬಹಿಷ್ಕಾರ ಹಾಕಿಸುತ್ತಾನೆ. ಕಥಾನಾಯಕ, ಹೆಗಲಿಗೆ ಒಂದು ಬ್ಯಾಗ್ ನೇತುಹಾಕಿಕೊಂಡು ಮನೆಯಿಂದ ಹೊರಬಂದು, ಹತ್ತಿಪ್ಪತ್ತು ಹೆಜ್ಜೆ ನಡೆದು ಬಂದು, ಒಮ್ಮೆ ಹಿಂದಿರುಗಿ ನೋಡುತ್ತಾನೆ. ಆಗ, ಅವನಿಗೆ ತಾನು ಬಿಟ್ಟು ಹೋಗುತ್ತಿರುವ ಊರು, ಅಲ್ಲಿರುವ ಜನ, ಪರಿಸರ, ಅವರೊಂದಿಗಿನ ಕರುಳುಬಳ್ಳಿ ಸಂಬಂಧ… ಎಲ್ಲವೂ ನೆನಪಾಗಿ ನಿಂತಲ್ಲೇ ಭಾವುಕನಾಗುತ್ತಾನೆ. ಕಣ್ತುಂಬಿಕೊಳ್ಳುತ್ತಾನೆ. ಅದಕ್ಕೆ ಹಿನ್ನೆಲೆಯಾಗಿ ಒಂದು ಹಾಡು ಬೇಕು. ಒಂದು ಕೆಲ್ಸ ಮಾಡಿ ಗೌಡ್ರೆ. ನೀವು ನಿಮ್ಮ ಊರು/ಹಳ್ಳಿ ತೊರೆದು ಮೊದಲ ಬಾರಿಗೆ ಬೆಂಗಳೂರಿಗೆ ಬಂದ್ರಿ ನೋಡಿ, ಆಗ ನಿಮಗೆ ಏನನ್ನಿಸಿತ್ತೋ ಅದನ್ನೇ ಬರೀರಿ…’
ಪುಟ್ಟಣ್ಣನವರು ಹೀಗೆಂದ ಮರುಕ್ಷಣವೇ ನನ್ನ ಬಾಲ್ಯ ನೆನಪಾಯಿತು. ಅದೇ ಮೊದಲ ಬಾರಿಗೆ ಓದಲಿಕ್ಕೆಂದು ಬೆಂಗಳೂರಿಗೆ ಬರಲು ನಿರ್ಧರಿಸಿದಾಗ- ಊರಲ್ಲಿ, ಮನೆಮುಂದೆ ನಿಂತು ಗೋಳೋ ಎಂದು ಅತ್ತದ್ದು ನೆನಪಾಯಿತು. ನಮ್ಮ ಮನೆ, ಅದರ ಗೋಡೆಗೆ ಮೆತ್ತುತ್ತಿದ್ದ ಮಣ್ಣು, ನಾವಿದ್ದ ಬೀದಿ, ಅಲ್ಲಿನ ಗಾಳಿ, ನೀರು, ಹಾಲು ನೀಡಿದ ಗೌರಿ ಹಸು ಎಲ್ಲವೂ ನೆನಪಿಗೆ ಬಂತು. ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ಕಾಳವ್ವ, ಲಕ್ಕವ್ವರ ಚಿತ್ರ ಕಣ್ಮುಂದೆ ಬಂತು. ಅನಕ್ಷರಸ್ಥ ಗೆಳೆಯರಾದ ಮಾಚ, ಕೆಂಚರ ಮುಗ್ಧ ನಡೆ, ನುಡಿ ನೆನಪಾಯಿತು. ಆಗಲೇ- ಬೆಂಗಳೂರಿಗೆ ಬಂದು ಈಗಾಗಲೇ ದಶಕವೇ ಕಳೆದುಹೋಗಿದ್ದರೂ ಎಲ್ಲರ ನೆನಪೂ ಹಸಿರಾಗಿದೆಯಲ್ಲ? ಅನ್ನಿಸಿತು. ಹಿಂದೆಯೇ, ನಮ್ಮೂರಿನ ಚೆಲುವಿನ ಮುಂದೆ, ಈ ಬೆಂಗ್ಳೂರು ಏನೇನೂ ಅಲ್ಲ ಅನ್ನಿಸಿಬಿಡ್ತು. ಆ ಖುಷಿಯಲ್ಲಿಯೇ- ‘ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ನಾನು ಮರೆಯಲಿ’ ಎಂಬ ಸಾಲು ಹೊಳೆಯಿತು. ಅದನ್ನೇ ಪಲ್ಲವಿಯನ್ನಾಗಿಸಿಕೊಂಡು ನನ್ನ ಬಾಲ್ಯದ ಅನುಭವ, ನನ್ನ ಗೆಳೆಯರು, ನಮ್ಮೂರ ಹೆಂಗಸರ ಹೆಸರನ್ನೆಲ್ಲ ಹಾಡಲ್ಲಿ ತಂದೆ.
ಮೂರನೇ ಚರಣ ಬರೆಯುವ ವೇಳೆಗೆ ನನ್ನ ಊರಲ್ಲಿ ಪಟೇಲರ ಕುಮ್ಮಕ್ಕಿನಿಂದ ನಡೆದ ಜಗಳ, ಹೊಡೆದಾಟ, ಊರಲ್ಲಿ ಚಾಲ್ತಿಯಲ್ಲಿದ್ದ ಜೀತಪದ್ಧತಿ, ಅದರಿಂದ ಬಡವರು, ಅನಕ್ಷರಸ್ಥರು ಅನುಭವಿಸುತ್ತಿದ್ದ ಕಷ್ಟ… ಎಲ್ಲವೂ ಒಂದೊಂದಾಗಿ ನೆನಪಿಗೆ ಬಂತು. ಲೋಕದಲ್ಲಿ ಎಷ್ಟೇ ಬದಲಾವಣೆಯಾದರೂ ಅವರಿಗೆ ಜೀತದಿಂದ, ಶೋಷಣೆಯಿಂದ ಮುಕ್ತಿಯೇ ದೊರೆತಿಲ್ಲವಲ್ಲ ಅನ್ನಿಸಿದಾಗ ಅದೆಲ್ಲವನ್ನೂ ಮೂರನೇ ಚರಣದಲ್ಲಿ ತಂದೆ. ಶೋಷಿತರನ್ನು ‘ಪಂಜರದ ಹಕ್ಕಿಗಳು’ ಎಂದು ಕರೆದೆ. ನಿಜ ಹೇಳಬೇಕೆಂದರೆ, ನನ್ನ ಆತ್ಮಚರಿತ್ರೆಯ ಒಂದು ಭಾಗವೇ ಹಾಡಾಗಿಬಿಡ್ತು…
ಹಾಡು ಬರೆಯೋದು, ಅದಕ್ಕೆ ಸಂಗೀತ ಸಂಯೋಜಿಸುವುದು, ನಂತರ ಒಮ್ಮೆ ಹಾಡಿಸಿ ಫೈನಲ್ ಮಾಡುವುದು. ಇದಕ್ಕೆ ಪುಟ್ಟಣ್ಣ ಮೂರು ದಿನಗಳನ್ನು ಮೀಸಲಿಟ್ಟಿದ್ದರು. ಮೂರನೇ ದಿನ ಸಂಜೆ ಹಾಡು ಕೇಳಿದ ಪುಟ್ಟಣ್ಣ- ‘ಗೌಡ್ರೆ, ಈ ಹಾಡಿಂದ ನನ್ನ ಮನಸ್ಸು ಗೆದ್ದುಬಿಟ್ರಿ. ನನ್ನ ಸಿನಿಮಾ ಖಂಡಿತ ಗೆಲ್ಲುತ್ತೆ. ನಿಮ್ಮ ಹಾಡು ಹಳ್ಳಿಯಲ್ಲಿ ಕಳೆದ ದಿನಗಳನ್ನು ಮಾತ್ರವಲ್ಲ; ದೇಶಪ್ರೇಮದ ಅರಿವನ್ನೂ ಮೂಡಿಸುವಂತಿದೆ…’ ಎಂದು ಖುಷಿಯಿಂದ ಹೇಳಿದರಂತೆ. ನಂತರ ಹೋಟೆಲಿನಲ್ಲಿದ್ದ ಅಷ್ಟೂ ಜನರ ಮುಂದೆ, ಆಗ ಸಣಕಲರಂತಿದ್ದ ದೊಡ್ಡರಂಗೇಗೌಡರನ್ನು ಅನಾಮತ್ತಾಗಿ ಮೇಲೆತ್ತಿ ಮುದ್ದಾಡಿದರಂತೆ. ನಂತರ, ಕ್ಯಾಮರಾಮನ್ ಆಗಿದ್ದ ನಟಿ ಆರತಿಯವರ ತಮ್ಮ ದತ್ತುವನ್ನು ಕರೆದು- ‘ಇವರ ಫೊಟೊ ತಗೊಳಪ್ಪಾ. ಅ ಛಿZ ಔqsಜ್ಚಿಜಿoಠಿ ಜಿo ಆಟ್ಟ್ಞ’ ಎಂದೆಲ್ಲ ಹೊಗಳಿದರಂತೆ.
ಅಷ್ಟಕ್ಕೇ ಸುಮ್ಮನಾಗದೆ, ಅಂದಿನ ಕನ್ನಡಪ್ರಭದ ಸಿನಿಮಾ ವಿಭಾಗದ ಮುಖ್ಯಸ್ಥರಾಗಿದ್ದ ನಾರಾಯಣಸ್ವಾಮಿಯವರಿಗೆ ಹೇಳಿ ಗೌಡರ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನೂ ಬರೆಸಿದರಂತೆ.
ಈ ಎಲ್ಲ ಬೆಳವಣಿಗೆಗಳಿಂದ ಉಬ್ಬಿಹೋಗಿದ್ದ ಗೌಡರು- ‘ಸರ್, ನಿಮಗೆ ನನ್ನ ಹಾಡು ಇಷ್ಟವಾದದ್ದು ಸಂತೋಷ. ನಾನು ಹೋಗಿ ಬರ‍್ತೀನಿ’ ಎಂದರಂತೆ. ತಕ್ಷಣವೇ ಅವರನ್ನು ತಡೆದ ಪುಟ್ಟಣ್ಣ- ‘ಅಯ್ಯೋ ಕವಿಗಳೇ, ನೀವು ಹೀಗೇ ಹೋಗೋದಾ? ಬೇಡ ಬೇಡ, ನಾನೇ ನಿಮ್ಗೆ ಡ್ರಾಪ್ ಕೊಡ್ತೇನೆ’ ಎಂದು ಹೇಳಿ ಸ್ವತಃ ಅವರೇ ಕಾರು ಓಡಿಸಿಕೊಂಡು ಬಂದು ಡ್ರಾಪ್ ಕೊಟ್ಟರಂತೆ…
* * *
ಇದನ್ನೆಲ್ಲ ನೆನಪು ಮಾಡಿಕೊಂಡು ದೊಡ್ಡರಂಗೇಗೌಡರು ಈಗಲೂ ಹೇಳುತ್ತಾರೆ. ಒಂದು ಹಾಡು ಮೆಚ್ಚಿಕೊಂಡು ಗೀತೆರಚನೆಕಾರನಿಗೆ ಡ್ರಾಪ್ ಕೊಡುವಂಥ ದೊಡ್ಡ ಮನಸ್ಸು ಪುಟ್ಟಣ್ಣನಿಗಿತ್ತು. ಅವತ್ತು ನಮ್ಮ ಬೀದಿಯ ಜನರೆಲ್ಲ ಇಡೀ ದಿನ ಸಂಭ್ರಮಿಸಿದ್ದು ಈಗಲೂ ನನ್ನ ಕಣ್ಣಮುಂದಿನ ಚಿತ್ರದಂತಿದೆ…

ಎರಡು ಸಂದರ್ಭಕ್ಕೆ ಬರೆದ ಹಾಡು ಮೂರನೇ ಸಂದರ್ಭಕ್ಕೂ ಹೊಂದಿಕೊಂಡಿತು!

August 25, 2009

ಯುಗಯುಗಗಳೆ ಸಾಗಲಿ…
ಚಿತ್ರ: ಹೃದಯಗೀತೆ. ಗೀತೆರಚನೆ: ಎಂ.ಎನ್. ವ್ಯಾಸರಾವ್.
ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ-ಚಿತ್ರಾ.

ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೆ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ, ನಮ್ಮ ಪ್ರೀತಿ ಶಾಶ್ವತ ||ಪ||

ನಡುಗಲಿ ಭುವಿ ಬಿರಿಯಲಿ, ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು ಮೈತುಂಬಾ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೆ ಈ ದೂರವೇಕೆ? ||೧||

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರಾ ಈ ಪ್ರೇಮ ಬರಲಾರದಿಂದೆಂದೂ ಸಾವು
ವಹಿಸೂ ಈ ಮೌನ, ಮನದಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ, ಈ ಲೋಕವೆ ನೂಕಲಿ
ಎಂದೆಂದು ಸಂಗಾತಿ ನೀನೇ ||೨||
೯೦ರ ದಶಕದಲ್ಲಿ ಬಂದ ಅತ್ಯುತ್ತಮ ಚಿತ್ರಗಳಲ್ಲಿ ‘ಹೃದಯಗೀತೆ’ಯೂ ಒಂದು. ವಿಷ್ಣುವರ್ಧನ್-ಖುಷ್ಬೂ-ಭವ್ಯಾ ತಾರಾಗಣದಲ್ಲಿದ್ದ ಈ ಚಿತ್ರ ನಿರ್ದೇಶಿಸಿದವರು ಭಾರ್ಗವ. ಛಾಯಾಗ್ರಹಣ ನಿರ್ದೇಶನ ಮಾಡಿದವರು ರಾಜಾರಾಂ.
‘ಹೃದಯಗೀತೆ’ ಸಿನಿಮಾ ಮಾತ್ರವಲ್ಲ, ಅದರ ಹಾಡುಗಳೂ ಸೂಪರ್ ಹಿಟ್ ಆದವು. ಅದರಲ್ಲೂ ‘ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ’ ಗೀತೆಯಂತೂ ಆ ದಿನಗಳಲ್ಲಿ ಹದಿಹರೆಯದವರ ಮೆಚ್ಚಿನ ಹಾಡಾಗಿತ್ತು. ತಮ್ಮ ಪ್ರೇಮದ ಮಹತ್ವ ವಿವರಿಸಲು ಒಂದು ಒಳ್ಳೆಯ ಸಾಲು ಹುಡುಕುತ್ತಿದ್ದ ಜನ, ಈ ಹಾಡು ಕಂಡೊಡನೆ ನಿಯನ್ನೇ ಕಂಡಂತೆ ಖುಷಿಪಟ್ಟರು. ಪರಿಣಾಮ- ‘ಯುಗಯುಗಗಳೇ ಸಾಗಲಿ’ ಹಾಡಿನ ಸಾಲುಗಳು ಪ್ರೇಮಿಗಳ ಮಾತುಕತೆಯ ಸಂದರ್ಭದಲ್ಲಿ ಮಾತ್ರವಲ್ಲ, ಆಟೋಗ್ರಾಫ್ ಪುಸ್ತಕಗಳಲ್ಲೂ ಜಾಗ ಪಡೆದುಕೊಂಡವು. ಎಲ್ಲ ವಯೋಮಾನದವರ ಮನದ ಪಿಸುಮಾತಾಗಿ ನೂರೆಂಟು ರೀತಿಯಲ್ಲಿ ಪ್ರಕಟವಾಗತೊಡಗಿದವು.
ಸರ್ವರಿಗೂ, ಸರ್ವಕಾಲಕ್ಕೂ ಸಲ್ಲುವಂಥ ಹಾಡು ಎಂಬುದು- ‘ಯುಗಯುಗಗಳೇ ಸಾಗಲಿ’ ಗೀತೆಯ ಹೆಚ್ಚುಗಾರಿಕೆ. ಇದನ್ನು ಬರೆದವರು ಎಂ.ಎನ್. ವ್ಯಾಸರಾವ್. ಅವರು ಈ ಹಾಡು ಬರೆದದ್ದು ಎಲ್ಲಿ ಮತ್ತು ಹೇಗೆ? ಅವರಿಗೆ ಈ ಹಾಡಿನ ಸಾಲುಗಳು ಹೊಳೆದ ಸಂದರ್ಭವಾದರೂ ಎಂಥಾದ್ದು ಎಂದು ತಿಳಿಯುವ ಮುನ್ನ- ‘ಹೃದಯಗೀತೆ’ ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ನೆನಪು ಮಾಡಿಕೊಳ್ಳಿ.
ಚಿತ್ರದ ನಾಯಕ ಎಂದಿನಂತೆ ಒಳ್ಳೆಯವನು. ಆತ, ಸುತ್ತಲಿರುವ ಹತ್ತು ಮಂದಿಗೆ ಒಳಿತನ್ನು ಬಯಸುವ, ಇನ್ನೊಬ್ಬರ ಕಷ್ಟಕ್ಕೆ ಮರುಗುವ; ಕರಗುವ ಗುಣಸಂಪನ್ನ. ಇಂಥವನಿಗೆ, ಅಥ್ಲೀಟ್ ಆಗಿದ್ದ ಶ್ರೀಮಂತ ಕುಟುಂಬದ ಹಿನ್ನೆಲೆಯ ಕಥಾನಾಯಕಿ ಪರಿಚಯವಾಗುತ್ತಾಳೆ. ಪರಿಚಯ, ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗುತ್ತದೆ. ವಿಷಯ ಗೊತ್ತಾದಾಗ ನಾಯಕಿಯ ತಂದೆ- ‘ನಾವೇನು, ನಮ್ಮ ಅಂತಸ್ತೇನು? ಹೀಗಿರುವಾಗ ನೀನು ಅದ್ಯಾರೋ ಅಬ್ಬೇಪಾರಿಯನ್ನು ಪ್ರೀತ್ಸೋದಾ’ ಎಂದು ಅಬ್ಬರಿಸುತ್ತಾನೆ. ಈ ಮಾತಿಗೆ ತಲೆಕೆಡಿಸಿಕೊಳ್ಳದ ನಾಯಕಿ, ನಾಯಕನಿದ್ದ ಊರಿಗೆ ಬಂದು ಒಂದು ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ, ಕ್ರೀಡಾಭ್ಯಾಸವನ್ನು ಮುಂದುವರಿಸಿರುತ್ತಾಳೆ. ಈ ಮಧ್ಯೆ ನಾಯಕಿಗೆ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ವಿದೇಶದಿಂದ ಆಹ್ವಾನ ಬರುತ್ತದೆ. ಆಕೆ ಹೊರಡುವ ತಯಾರಿಯಲ್ಲಿದ್ದಾಗಲೇ ಆಕೆಯ ಮನೆ ಮಾಲೀಕನೇ ಅತ್ಯಾಚಾರ ನಡೆಸಲು ಮುಂದಾಗುತ್ತಾನೆ. ಆತ್ಮರಕ್ಷಣೆಗೆ ಮುಂದಾದ ನಾಯಕಿ, ಆತನನ್ನು ಕೊಲೆ ಮಾಡುತ್ತಾಳೆ. ಅದೇ ವೇಳೆಗೆ ಅಲ್ಲಿಗೆ ಬಂದ ನಾಯಕ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಕ್ಷಣಕ್ಕೇ ಪೊಲೀಸರೂ ಬರುತ್ತಾರೆ. ತಕ್ಷಣವೇ, ಗೆಳತಿಯ ಭವಿಷ್ಯ ಹಾಳಾಗದಿರಲಿ ಎಂಬ ಸದುದ್ದೇಶದಿಂದ, ಆ ಕೊಲೆಯನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡು ಮಾನಸಿಕ ಅಸ್ವಸ್ಥನಂತೆ ನಾಟಕವಾಡುತ್ತಾನೆ ನಾಯಕ. ಈ ಕಾರಣದಿಂದಲೇ ಪೊಲೀಸರು ನಾಯಕನನ್ನು ಮಾನಸಿಕ ಅಸ್ವಸ್ಥರಿದ್ದ ಆಸ್ಪತ್ರೆಗೆ ಸೇರಿಸುತ್ತಾರೆ. ಅಲ್ಲಿ ಇವನ ‘ನಾಟಕದ ಬಗ್ಗೆ’ ತಿಳಿದುಕೊಳ್ಳುವ ಎರಡನೇ ನಾಯಕಿ(ಆಕೆ ವೈದ್ಯೆ)- ‘ಈ ನಾಟಕವೆಲ್ಲ ಯಾಕೆ?’ ಎಂದು ಕೇಳುತ್ತಾಳೆ. ಆಗ ತನ್ನ ಪ್ರೀತಿಯ ಕಥೆಯನ್ನು ವಿವರಿಸಿ ಹೇಳುತ್ತಾನೆ ನಾಯಕ. ಆಗ ಫ್ಲಾಶ್‌ಬ್ಯಾಕ್‌ನಲ್ಲಿ ಈ ಹಾಡು ಬರುತ್ತದೆ.
ಮುಂದೆ, ಏನೇನೋ ಆಗುತ್ತದೆ. ವಿದೇಶದಿಂದ ಹಿಂತಿರುಗಿದ ನಾಯಕಿಗೆ ಆಕೆಯ ತಂದೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನೊಂದಿಗೆ ಮದುವೆ ಮಾಡಿಬಿಡುತ್ತಾನೆ. ಈ ವಿಷಯ ತಿಳಿದಾಗ, ಅದುವರೆಗೂ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದ ನಾಯಕ, ನಿಜಕ್ಕೂ ಹುಚ್ಚನೇ ಆಗಿಬಿಡುತ್ತಾನೆ. ಈ ವೇಳೆಗಾಗಲೇ ಆಸ್ಪತ್ರೆಯಲ್ಲಿದ್ದ ವೈದ್ಯೆ, ನಾಯಕನನ್ನು ಪ್ರೀತಿಸುತ್ತಿರುತ್ತಾಳೆ, ಆರಾಸುತ್ತಿರುತ್ತಾಳೆ. ಮಾನಸಿಕ ಅಸ್ವಸ್ಥನಾದ ಆತನನ್ನು ಮತ್ತೆ ‘ಸರಿ ಮಾಡುವ’ ಸದಾಶಯದಿಂದ- ‘ನಿನ್ನೊಂದಿಗೆ ಸುಖ-ದುಃಖ ಹಂಚಿಕೊಳ್ಳಲು ನಾನಿದ್ದೇನೆ ಹೆದರಬೇಡ’ ಎಂದು ಧೈರ್ಯ ಹೇಳುವ ಸಂದರ್ಭದಲ್ಲಿ ಮತ್ತೆ ಇದೇ ಹಾಡು ರಿಪೀಟ್ ಆಗುತ್ತದೆ!
* * *
ತಮ್ಮ ಚಿತ್ರಕ್ಕೆ ಕವಿಗಳಿಂದ ಹಾಡು ಬರೆಸಬೇಕು ಎಂಬುದು ಭಾರ್ಗವ ಅವರ ಆಸೆಯಾಗಿತ್ತು. ಈ ಕಾರಣದಿಂದಲೇ ಅವರು- ದೊಡ್ಡರಂಗೇಗೌಡ, ಎಂ.ಎನ್. ವ್ಯಾಸರಾವ್ ಹಾಗೂ ಸು. ರುದ್ರಮೂರ್ತಿ ಶಾಸ್ತ್ರಿಗಳನ್ನು ಕಾನಿಷ್ಕ ಹೋಟೆಲಿಗೆ ಕರೆಸಿಕೊಂಡು, ಹಾಡುಗಳ ಸಂದರ್ಭ ವಿವರಿಸಿ- ‘ಸಾರ್, ಮೊದಲು ಎಲ್ಲರೂ ಹಾಡು ಬರೆದುಬಿಡಿ. ನಂತರ ಎಲ್ಲರೂ ಜತೆಯಾಗಿ ಕೂತು ವಿಚಾರ ವಿನಿಮಯ ಮಾಡೋಣ. ಬೇಕಾದ್ರೆ ಒಂದು ಕವಿಗೋಷ್ಠಿಯನ್ನೂ ನಡೆಸೋಣ’ ಎಂದು ತಮಾಷೆ ಮಾಡಿದರಂತೆ.
ನಂತರ ವ್ಯಾಸರಾವ್ ಬಳಿಗೆ ಬಂದು ಮತ್ತೆ ಸನ್ನಿವೇಶ ನೆನಪಿಸಿ- ‘ಸಾರ್, ನೀವು ಬರೆಯುವ ಹಾಡು ಎರಡು ಸಂದರ್ಭಗಳಲ್ಲಿ ಬರುವಂಥಾದ್ದು. ಒಂದು: ನಾಯಕ-ನಾಯಕಿ ಸಂತೋಷದಲ್ಲಿ ಇದ್ದಾಗ ಹಾಡುವಂಥಾದ್ದು. ಇನ್ನೊಂದು: ಪ್ರೇಯಸಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಾಯಕನನ್ನು ಸಂತೈಸಲು ಎರಡನೇ ನಾಯಕಿ ಹಾಡುವಂಥಾದ್ದು. ಹಾಡು ಒಂದೇ; ಆದರೆ ಅದರ ಭಾವ ಹಾಗೂ ಸನ್ನಿವೇಶಗಳು ಬೇರೆ. ಈವರೆಗೂ ಅವೆಷ್ಟೋ ಪ್ರೇಮಗೀತೆಗಳು ಬಂದಿವೆ. ಅವೆಲ್ಲಕ್ಕಿಂತ ಡಿಫರೆಂಟ್ ಅಂಥದೊಂದು ಪ್ರೇಮಗೀತೆ ಬೇಕು’ ಅಂದರಂತೆ. ಮುಂದೆ ಏನಾಯ್ತು ಎಂಬುದನ್ನು ಸಂಭ್ರಮದಿಂದ ವ್ಯಾಸರಾವ್ ಹೇಳಿದ್ದು ಹೀಗೆ:
‘ಭಾರ್ಗವರ ಮಾತು ಮುಗಿಯುತ್ತಿದ್ದಂತೆಯೇ ಅಲ್ಲಿಗೆ ಬಂದ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಒಂದು ಟ್ಯೂನ್ ಕೇಳಿಸಿದರು. ಆ ಟ್ಯೂನ್‌ನಲ್ಲಿ ಎಂಥದೋ ಸೆಳೆತವಿತ್ತು. ನನ್ನನ್ನು ಅದು ಬಹುವಾಗಿ ಕಾಡಿತು. ತಕ್ಷಣವೇ, ಆ ಕಡೆಗೆ ಸಮಾಧಾನವೂ ಆಗುವಂಥ, ಈ ಕಡೆ ಪ್ರೇಮದ ಉತ್ಕಟತೆಯನ್ನೂ ವಿವರಿಸುವಂಥ ಸಾಲುಗಳ ಕುರಿತು ಯೋಚಿಸಿದೆ. ಹಾಗೆ ಯೋಚಿಸುತ್ತಿದ್ದಾಗಲೇ- ಪ್ರೀತಿ ಒಂದು ದಿನದ್ದಲ್ಲ, ಒಂದು ತಿಂಗಳಿನದಲ್ಲ, ಒಂದು ವರ್ಷದ್ದಲ್ಲ, ಅದು ಯುಗಯುಗಗಳಲ್ಲೂ ನೆನಪಾಗಿ ಇರುವಂಥಾದ್ದು ಅನ್ನಿಸಿತು. ಈ ಸಂದರ್ಭದಲ್ಲಿಯೇ ಆಗಷ್ಟೇ ಪ್ರೀತಿಯ ಹೊಳೆಗೆ ಬಿದ್ದ ಹುಡುಗ-ಹುಡುಗಿಯರು ಪಾರ್ಕಿನಲ್ಲೋ, ಕಾಲೇಜಿನ ಕಾರಿಡಾರಿನಲ್ಲೋ, ಪ್ರೇಮಪತ್ರದ ಸಾಲುಗಳಲ್ಲೋ, ಕನಸಿನಲ್ಲೋ ಮಾತಾಡುವುದನ್ನು ನೆನಪು ಮಾಡಿಕೊಂಡೆ.
ಹೌದಲ್ಲವಾ? ಮನುಷ್ಯ ಅನ್ನಿಸಿಕೊಂಡವರಿಗೆ ಇರುವುದೇ ನೂರು ವರ್ಷದ ಆಯಸ್ಸು. ಇದು ಕಾಲೇಜು ಹುಡುಗ-ಹುಡುಗಿಯರಿಗೂ ಗೊತ್ತಿರುತ್ತದೆ. ಆದರೂ ಅವರು (ಮತ್ತು ಪ್ರೀತಿಗೆ ಬಿದ್ದ ಮಧ್ಯವಯಸ್ಸಿನವರೂ)- ‘ಯುಗಯುಗಗಳೇ ಕಳೆದ್ರೂ ನಾನು ನಿನ್ನನ್ನೇ ಪ್ರೀತಿಸ್ತೀನಿ ಅನ್ನುತ್ತಾರೆ. ಮನೆಮಂದಿಯ ಕಾಕದೃಷ್ಟಿ ಬಿದ್ದರೆ ಸಾಕು, ನಮ್ಮ ಪ್ರೀತಿಗೆ ಕಲ್ಲು ಬೀಳುತ್ತೆ ಎಂದು ಗೊತ್ತಿದ್ದರೂ- ಆಕಾಶವೇ ಬಿದ್ದರೂ ನಮ್ಮ ಪ್ರೀತಿಗೆ ಸೋಲಿಲ್ಲ(?) ಎನ್ನುತ್ತಾರೆ. ಸಮುದ್ರ ಉಕ್ಕಿ ಹರಿದರೂ ನಾವು ಪ್ರೀತಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ’ ಎಂದೂ ಸೇರಿಸುತ್ತಾರೆ…
ಇಂಥವೇ ಪ್ರಸಂಗಗಳನ್ನು ನೆನಪು ಮಾಡಿಕೊಂಡಾಗಲೇ-ನಮ್ಮದು ಕೃಷ್ಣ-ಸತ್ಯಭಾಮೆಯನ್ನು ನೆನಪಿಸುವ ಪ್ರೇಮ ಎನ್ನುವ ಇನ್ನೊಂದು ಮಾತೂ ನೆನಪಾಯಿತು. ಯುಗಗಳೇ ಕಳೆದುಹೋಗಿದ್ರೂ ಜನ ಇನ್ನೂ ಆ ಮಧುರ ಪ್ರೇಮವನ್ನು ನೆನಪಿಟ್ಟುಕೊಂಡಿದ್ದಾರೆ ಅನ್ನಿಸಿದಾಗ ‘ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ…’ ಎಂಬ ಸಾಲು ಹೊಳೆಯಿತು. ಮುಂದೆ ಒಂದೊಂದೇ ಸಾಲುಗಳು ಆಕಸ್ಮಿಕವಾಗಿ ಕೈಹಿಡಿಯುತ್ತಾ ಹೋದವು. ಪರಿಣಾಮ, ಉಳಿದವರಿಗಿಂತ ಬೇಗನೆ ಹಾಡು ಬರೆದೆ. ನಂತರ ಅದನ್ನು ಭಾರ್ಗವ ಅವರಿಗೆ ಕೊಟ್ಟೆ. ಆ ಹಾಡಿನ ಬಗ್ಗೆ ಅವರಿಗೇನೊ ಅಷ್ಟೊಂದು ಒಲವಿದ್ದಂತೆ ಕಾಣಲಿಲ್ಲ. ಆದರೆ, ಹಾಡಿನ ಸಾಹಿತ್ಯ ಗಮನಿಸಿದ ರಾಜನ್-ನಾಗೇಂದ್ರ- ‘ಇದು ಸೂಪರ್‌ಹಿಟ್ ಸಾಂಗ್ ಆಗುತ್ತೆ ರೀ’ ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರ್ಗವ ಅವರ ಪಟ್ಟಿಯಲ್ಲಿ ನನ್ನ ಹಾಡಿಗೆ ಕೊನೆಯ ಸ್ಥಾನವಿತ್ತು.
ಚಿತ್ರ ಬಿಡುಗಡೆಯಾದ ಬಳಿಕ- ಎಲ್ಲರೂ ಈ ಹಾಡನ್ನೇ ಗುನುಗತೊಡಗಿದರು. ಕಾಲೇಜು ಯುವಕ-ಯುವತಿಯರಿಗಂತೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಹಾಡೇ ಸಿಕ್ಕಂತಾಯಿತು. ಆ ಸಂದರ್ಭದಲ್ಲಿಯೇ ಫೋನ್ ಮಾಡಿದ ನಿರ್ದೇಶಕ ಭಾರ್ಗವ- ‘ಸಾರ್, ಸೂಪರ್ ಹಿಟ್ ಸಾಂಗ್ ಕೊಟ್ಟಿದೀರ. ನಿಮಗೆ ಸಾವಿರ ನಮಸ್ಕಾರ ಹೇಳಿದ್ರೂ ಸಾಲದು’ ಎಂದರು…’
ಲಹರಿಗೆ ಬಿದ್ದವರಂತೆ ಈ ವಿಷಯ ತಿಳಿಸಿದ ವ್ಯಾಸರಾವ್ ಕಡೆಗೆ ಸ್ವಗತವೆಂಬಂತೆ ಹೇಳಿದರು: ‘ಈ ಒಂದು ಹಾಡಿಂದ ನನಗೆ ಎಷ್ಟೊಂದು ಜನರ ಪ್ರೀತಿ, ವಿಶ್ವಾಸ, ಮಮಕಾರ, ಹೆಸರು, ಜನಪ್ರಿಯತೆ ಸಿಕ್ಕಿತಲ್ಲ ಎಂದು ನೆನಪಿಸಿಕೊಂಡರೆ- ಈಗಲೂ ಬೆರಗು, ಸಂತೋಷ ಎರಡೂ ಜತೆಜತೆಗೇ ಆಗುತ್ತೆ…’
* * *
ಒಂದು ಸ್ವಾರಸ್ಯ ಕೇಳಿ: ಈ ಸಿನಿಮಾ ಹಿಟ್ ಆಯಿತಲ್ಲ! ಆ ನಂತರ ವಿಷ್ಣುವರ್ಧನ್ ಅವರು ಯಾವುದೇ ಊರಿಗೆ ಹೋದರೂ ಸರಿ; ಅಲ್ಲಿ ಅಭಿಮಾನಿಗಳೆಲ್ಲ ಒಕ್ಕೊರಲಿನಿಂದ- ‘ಸಾರ್, ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ’ ಹಾಡು ಹೇಳಿ ಅನ್ನುತ್ತಿದ್ದರಂತೆ. ಅವರು ಹೀಗೆ ಹಾಡಿದಾಗ ಅದನ್ನು ಕಲಾವಿದ-ಪ್ರೇಕ್ಷಕರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಹೋಲಿಸಿಕೊಂಡು ಖುಷಿಪಡುತ್ತಿದ್ದರಂತೆ! ಇದನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಿದ್ದ ವಿಷ್ಣುವರ್ಧನ್- ‘ನನ್ನ ಅಭಿಮಾನಿಗಳ ಮುಂದೆ ನನ್ನ ಹೃದಯದ ಭಾಷೆಯನ್ನೇ ಹಾಡಾಗಿಸಲು ಅನುಕೂಲ ಮಾಡಿಕೊಟ್ಟಿದ್ದೀರಿ ಸರ್. ಧನ್ಯವಾದ’ ಎಂದು ಅದೊಮ್ಮೆ ವ್ಯಾಸರಾವ್ ಅವರಿಗೇ ಹೇಳಿದರಂತೆ.
ಅಲ್ಲಿ, ಸಿನಿಮಾದಲ್ಲಿ ಎರಡು ಭಿನ್ನ ಸಂದರ್ಭಗಳಿಗೆಂದು ಬರೆದ ಹಾಡು ನಿಜ ಬದುಕಿನಲ್ಲಿ ಮತ್ತೊಂದು ವಿಭಿನ್ನ ಸಂದರ್ಭಕ್ಕೂ ಅನ್ವಯವಾಯಿತಲ್ಲ; ಅದಲ್ಲವೆ ಸ್ವಾರಸ್ಯ?

ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ!

August 25, 2009

ಒಂದು ಕಾಲವಿತ್ತು.

ಆಗೆಲ್ಲ, ಭವಿಷ್ಯ ತಿಳಿಯ ಬೇಕು ಅನ್ನುವವರು, ಸೀದಾ ಜ್ಯೋತಿಷಿಗಳ ಬಳಿಗೆ ಹೋಗುತ್ತಿದ್ದರು. ಆಂಗೈ ತೋರಿಸುತ್ತಿದ್ದರು. ಕವಡೆ ಬಿಡುತ್ತಿದ್ದರು. ನಂತರ, ಅವರು ಹೇಳಿದ್ದಕ್ಕೆಲ್ಲ ‘ಸರಿ ಸ್ವಾಮಿ, ನಿಜ ಸ್ವಾಮಿ, ಹೌದು ಸ್ವಾಮಿ’ ಎಂದು ಹೂಂಗುಟ್ಟಿ ಎದ್ದು ಬರುತ್ತಿದ್ದರು. ಜ್ಯೋತಿಷಿಗಳ ಬಳಿಗೆ ಹೋಗಲು ಒಪ್ಪದವರು-ತಮ್ಮ ಹೆಸರಿನ ಮೊದಲಕ್ಷರ ಯಾವ ರಾಶಿಯದು ಎಂದು ತಿಳಿದು, ಕುತೂಹಲದಿಂದಲೇ ಪಂಚಾಂಗದ ಕಡೇ ಪುಟಗಳಲ್ಲಿದ್ದ ಭವಿಷ್ಯ ಓದುತ್ತಿದ್ದರು. ಮುಂದೆ, ಹುಟ್ಟಿದ ದಿನಾಂಕ ಹಾಗೂ ತಿಂಗಳಿನ ಆಧಾರದ ಮೇಲೆ ಭವಿಷ್ಯ ಹೇಳುವ/ನೋಡುವ ಸ್ಕೀಮು ಜಾರಿಗೆ ಬಂತು. ಭವಿಷ್ಯವನ್ನು ನಂಬದವರು ಕೂಡ ಒಂದು ಕುತೂಹಲದಿಂದ ಅದನ್ನು ಓದಿ, ಕೇಳಿ, ತಿಳಿದು ಖುಷಿಪಟ್ಟರು. ಸ್ವಾರಸ್ಯವೆಂದರೆ, ಈ ಎರಡೂ ವೆರೈಟಿಯ ಭವಿಷ್ಯಗಳಲ್ಲಿ ಹೆಚ್ಚು-ಕಡಿಮೆ ಆಗುವ ಸಾಧ್ಯತೆಗಳು ತುಂಬಾ ಇದ್ದವು. ಹೇಗೆಂದರೆ, ಜ್ಯೋತಿಷ್ಯ ಹೇಳುವವರು ಪರಿಚಿತರೇ ಆಗಿದ್ದರೆ; ನಮ್ಮಿಂದ ಉಪಕಾರಕ್ಕೆ ಒಳಗಾಗಿದ್ದರೆ-ಕಂಡದ್ದನ್ನು (?!) ಕಂಡಹಾಗೆ ಹೇಳುವ ಸಾಧ್ಯತೆ ತೀರಾ ಕಮ್ಮಿಯಿತ್ತು. ಹಾಗೆಯೇ, ಜನ್ಮದಿನಾಂಕ ತಪ್ಪಾಗಿ ನಮೂದಾಗಿದ್ದರೆ, ಆಗ ಕೂಡ ಭವಿಷ್ಯದ ಸಾಲುಗಳಲ್ಲಿ ಹೆಚ್ಚು ಕಡಿಮೆ ಆಗುವ ಸಂಭವವಿತ್ತು.
ಹೀಗಿರುವಾಗ, ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ.
ಕೆಲವರಿರುತ್ತಾರೆ. ಅವರ ಪತ್ರಗಳು ಮಾರುದ್ದ ಇರುತ್ತವೆ ನಿಜ. ಆದರೆ ಆ ಪತ್ರಗಳಲ್ಲಿ ಒಂದೇ ವಿಷಯವನ್ನೂ ಮತ್ತೆ ಮತ್ತೆ ರಿಪೀಟ್ ಮಾಡಿರುತ್ತಾರೆ. ಅದನ್ನು ಓದಿದವರು- ‘ಹುಚ್ಚು, ಮುಂಡೇದು, ಒಂದೇ ವಿಷಯವನ್ನು ಹತ್ತು ಬಾರಿ ಬರ‍್ದಿದೆ. ಮಾಡೋಕೆ ಕೆಲ್ಸ ಇಲ್ಲ ಅನ್ಸುತ್ತೆ’ ಎಂದು ಗೊಣಗುತ್ತಾರೆ. ಹೀಗೆ, ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರಲ್ಲ? ಅಂಥವರಿಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ. ರಿಸ್ಕ್‌ಗೆ ಕೈ ಹಾಕಲು ಹೆದರಿಕೆ ಇರುತ್ತದೆ. ಬೇರೆಯವರು ನಮ್ಮ ಮಾತನ್ನು ಲಕ್ಷ್ಯಗೊಟ್ಟು, ಕೇಳಲಾರರು ಎಂಬ ಶಂಕೆಯಿರುತ್ತದೆ. ಗೆಳೆಯ/ಗೆಳತಿ ನನ್ನ ಪತ್ರದ ಪ್ರತಿ ಸಾಲುಗಳನ್ನೂ ಓದುತ್ತಾನೋ(ಳೋ) ಇಲ್ಲವೋ ಎಂಬ ಅನುಮಾನವಿರುತ್ತದೆ. ಹೀಗೆ ಓದಿ ಹಾಗೆ ಮರೆತುಬಿಟ್ಟರೆ… ಎಂಬ ಸಂಕಟವಿರುತ್ತದೆ. ಈ ಕಾರಣದಿಂದಲೇ ಅವರು ಬರೆದದ್ದನ್ನೇ ಮತ್ತೆ ಮತ್ತೆ ಬರೆದಿರುತ್ತಾರೆ. ತೀರಾ ಸಾಮಾನ್ಯ ಎಂಬಂಥ ವಿಷಯ ಬರೆಯುವ ಮೊದಲೇ, ಇದು ಬಹಳ ಗುಟ್ಟಿನ ವಿಷಯ. ನೀನು ಒಬ್ಬನೇ (ಳೇ) ಇದ್ದಾಗ ಓದು ಪ್ಲೀಸ್… ಎಂದೂ ಸೇರಿಸಿ ರುತ್ತಾರೆ! ಪತ್ರವನ್ನು ಪೋಸ್ಟ್/ಕೊರಿಯರ್ ಮಾಡಿದ ಮರುದಿನವೇ ಫೋನ್ ಮಾಡಿ- ‘ಕಾಗದ ಬಂತಾ? ಲೆಟರ್ ಸಿಕ್ತಾ?’ ಎಂದು ಮೇಲಿಂದ ಮೇಲೆ ಕೇಳಿ ಪ್ರಾಣ ತಿನ್ನುತ್ತಾರೆ.
ಕೆಲವರು, ತಮ್ಮ ಪತ್ರವನ್ನು ದೊಡ್ಡ ಅಕ್ಷರ ಗಳಿಂದ ಆರಂಭಿಸುತ್ತಾರೆ. ಆದರೆ ಪತ್ರದ ಕೊನೆ ತಲುಪುವ ವೇಳೆಗೆ ಅವರು ಹೇಳಬೇಕಿರುವ ವಿಷಯದಲ್ಲಿ ಮುಕ್ಕಾಲು ಭಾಗವನ್ನಷ್ಟೇ ಹೇಳಿರುತ್ತಾರೆ. ಉಳಿದದ್ದನ್ನೂ ಹೇಳಲೇ ಬೇಕಲ್ಲ? ಕಾರಣಕ್ಕೆ ಮಾರ್ಜಿನ್‌ನಲ್ಲಿರುವ ಜಾಗದಲ್ಲಿ ಅಕ್ಷರ ಇನ್ನಿಲ್ಲದ ಸರ್ಕಸ್ ಮಾಡಿ ಜೋಡಿಸುತ್ತಾರೆ! ಇಂಥ ಅಕ್ಷರಗಳ ಒಡೆಯರಿಗೆ, ಜೀವನದಲ್ಲಿ ಒಂದು ಯೋಜನೆ, ಶಿಸ್ತು ಇರುವುದಿಲ್ಲ. ತಿಂಗಳ ಮೊದಲಿನಲ್ಲಿ ಬಿಂದಾಸ್ ಆಗಿ ಖರ್ಚು ಮಾಡಿಕೊಂಡು ಓಡಾಡುವ ಈ ಜನ, ತಿಂಗಳ ಕಡೆಗೆ-ಥತ್ ಜೇಬು ಖಾಲಿ ಎಂದು ಹೇಳಿಕೊಂಡೇ ಅಡ್ಡಾಡುತ್ತಿರುತ್ತಾರೆ.
ಪತ್ರ ಬರೆದು ಮುಗಿಸಿದ ನಂತರ, ‘ಮರೆತ ಮಾತು’ ಎಂದು ಬರೆದು ಅದರ ಕೆಳಗೆ ಒಂದು ದಪ್ಪ ಗೆರೆ ಎಳೆದು, ಅದುವರೆಗೂ ಹೇಳದಿದ್ದ ಒಂದು ವಿಚಾರವನ್ನು ಹೇಳುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕುತ್ತಿರುತ್ತಾರೆ. ಸ್ವಾರಸ್ಯ ವೆಂದರೆ, ಇದು ಅವರ ಪ್ಲಸ್ ಪಾಯಿಂಟ್ ಮಾತ್ರವಲ್ಲ, ಮೈನಸ್ ಪಾಯಿಂಟೂ ಆಗಿರುತ್ತದೆ. ಏಕೆಂದರೆ, ಬದುಕಿನ ಬಗ್ಗೆ ಒಂದು ಪ್ಲಾನ್ ಇರುವುದಿಲ್ಲವಲ್ಲ? ಅದೇ ಕಾರಣಕ್ಕೆ ಅವರು ಸ್ವಲ್ಪ ಸೋಮಾರಿಯ ಬದುಕು ಸಾಗಿಸಲು ಶುರುಮಾಡುತ್ತಾರೆ. ಈ ಕಾರಣದಿಂದಲೇ ಜತೆಗಿದ್ದವರ ಟೀಕೆಗೆ, ತಾತ್ಸಾರಕ್ಕೆ ಗುರಿಯಾಗುತ್ತಾರೆ.
ಎರಡು ಸಾಲುಗಳ ಮಧ್ಯೆ ಸ್ವಲ್ಪ ಜಾಸ್ತಿ ಎನ್ನುವಷ್ಟು ಅಂತರಬಿಟ್ಟು ಬರೀತಾರಲ್ಲ? ಅವರಿಗೆ ನಾನುಂಟು ಮೂರು ಲೋಕವುಂಟು ಎಂಬ ಭ್ರಮೆಯಿರುತ್ತದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಅಹಮಿಕೆಯಿರುತ್ತದೆ. ಬಡಾಯಿ ಕೊಚ್ಚಿಕೊಳ್ಳುವ ಹವ್ಯಾಸವಿರುತ್ತದೆ. ಹತ್ತು ಮಂದಿಯನ್ನು ‘ಇಂಪ್ರೆಸ್’ ಮಾಡುವ ‘ಕಲೆ’ ಸಿದ್ಧಿಸಿರುತ್ತದೆ. ಈ ಕಾರಣದಿಂದಲೇ ಅವರನ್ನು ಹಲವರು ಟೀಕಿಸುತ್ತಾರೆ. ಬಯ್ಯುತ್ತಾರೆ. ರೇಗಿಸುತ್ತಾರೆ. ಗೇಲಿ ಮಾಡುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜನ ಕೇರ್ ಮಾಡುವುದಿಲ್ಲ. ತಲೆಕೆಡಿಸಿಕೊಳ್ಳುವುದೂ ಇಲ್ಲ. ಬದಲಿಗೆ, ಹತ್ತು ಮಂದಿಯ ಮುಂದೆ ‘ಪುಂಗಿ ಊದಲು’ ಹೊರಟೇ ಬಿಡುತ್ತಾರೆ.
‘ನಾನೇ ಬೇರೆ, ನನ್ನ ಸ್ಟೈಲೇ ಬೇರೆ’ ಎಂಬಂಥ ಕೆಟಗರಿಯ ಜನ-ತಮ್ಮ ಪತ್ರಗಳಲ್ಲಿ ಆದಷ್ಟೂ ಹೊಸ ಪದಗಳನ್ನು ಬಳಸುತ್ತಾರೆ. ಆ ಮೂಲಕ
ಓದುವವರನ್ನು ಕನ್‌ಫ್ಯೂಸ್‌ಗೆ ಕೆಡವುತ್ತಾರೆ. ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು, ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನನಗೆ ಗೊತ್ತಿದೆ ಎಂದು ತೋರಿಸಿಕೊಳ್ಳಬೇಕು ಎಂಬ ಹಪಹಪಿಯಿಂದಲೇ ಅವರು ಹೀಗೆ ಮಾಡಿರುತ್ತಾರೆ. ಸ್ವಾರಸ್ಯವೆಂದರೆ, ಹಾಗೆ ಬಳಸಿದ ಪದ ಅಥವಾ ವಿಷಯದ ಬಗ್ಗೆ ಅವರಿಗೇ ಸಮಗ್ರವಾಗಿ ಗೊತ್ತಿರುವುದಿಲ್ಲ. ಯಾರಾದರೂ ಪಟ್ಟು ಹಿಡಿದು ಪ್ರಶ್ನೆ ಹಾಕಿದರೆ, ಏನಾದರೂ ಹಾರಿಕೆಯ ಉತ್ತರ ಕೊಟ್ಟು ಕಾಗೆ ಹಾರಿಸುತ್ತಾರೆ.
ಒಂದು ಸಾಲು ಬರೆಯುವುದು, ನಂತರ ಅದನ್ನು ಹೊಡೆದು ಹಾಕುವುದು; ಒಂದು ಪದ ಬರೆಯುವುದು, ನಂತರ ಅದನ್ನೂ ಹೊಡೆದು ಹಾಕಿ ಬೇರೊಂದು ಪದ ಬರೆಯುವುದು-ಹೀಗೆ ಮಾಡು ತ್ತಾರಲ್ಲ? ಆ ಜನ ‘ಅಯ್ಯೋಪಾಪ’ ಎಂಬ ವರ್ಗಕ್ಕೆ ಸೇರಿದವರು. ಹೇಗೆ ಬರೆದರೆ ಏನಾಗಿಬಿಡುತ್ತೋ ಎಂಬ ಭಯ ಅವರನ್ನು ಕಾಡುತ್ತಿರುತ್ತದೆ. ಹಾಗಾಗಿ ಅವರು, ಮಾಡಿದ ತಪ್ಪನ್ನು ತುಂಬ ಬೇಗ ಒಪ್ಪಿಕೊಂಡು ಬಿಡುತ್ತಾರೆ. ಅಷ್ಟೇ ಅಲ್ಲ, ಯಾವುದೇ ಅಭಿಪ್ರಾಯವಿರಲಿ, ಅದನ್ನು ಹತ್ತು ಮಂದಿ ಒಪ್ಪಿಕೊಂಡರೆ ಹಿಂದೆ ಮುಂದೆ ಯೋಚಿಸದೆ ಹನ್ನೊಂದನೆಯವರಾಗಿ ತಾವೂ ಒಪ್ಪಿಬಿಡುತ್ತಾರೆ.
ಕೆಲವರಿರುತ್ತಾರೆ. ಅವರ ಅಕ್ಷರಗಳು ಮಣಿ ಪೋಣಿಸಿದಷ್ಟು ಮುದ್ದು ಮುದ್ದಾಗಿರುತ್ತವೆ. ಅವರ ಬರಹದಲ್ಲಿ ತಪ್ಪುಗಳಿರುವುದಿಲ್ಲ. ಉತ್ಪ್ರೇಕ್ಷೆ ಇರುವುದಿಲ್ಲ. ಇಂಥವರ ವ್ಯಕ್ತಿತ್ವದಲ್ಲಿ ಕೆಲವರಲ್ಲಿ ವಿಪರೀತ ಧಾರಾಳತನ; ರೇಜಿಗೆ ಹುಟ್ಟಿಸುವಂಥ ಜಿಪುಣತನ-ಎರಡೂ ಇರುತ್ತದೆ. ಸ್ವಾರಸ್ಯವೆಂದರೆ, ಈ ಮುದ್ದು ಅಕ್ಷರಗಳ ಮಂದಿಗೆ ಬೊಂಬಾಟ್ ಎಂಬಂಥ ‘ಗೆಳೆಯರ ಬಳಗ’ ಇರುತ್ತದೆ. ಅಭಿಮಾನಿಗಳ ವೃಂದ ವಿರುತ್ತದೆ. ಇವರು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದೇ ಇಲ್ಲ. ಹಾಗಿದ್ದರೂ, ಅದೇನು ಕಾರಣವೋ ಏನೋ; ಶತ್ರುಗಳು ಅನಿಸಿಕೊಂಡ ಜನ ಕೂಡ ಅವರನ್ನು ಇಷ್ಟಪಡುತ್ತಾರೆ. ಮುದ್ದಾದ ಅಕ್ಷರಗಳ ಮಂದಿಗೆ ಹತ್ತು ಮಂದಿಯ ಸಂಕಟ ಕೇಳುವುದರಲ್ಲಿ, ಅದಕ್ಕೊಂದು ಪರಿಹಾರ ಹೇಳುವುದರಲ್ಲಿ ಏನೋ ಸಂತಸ! ಆದರೆ, ತಮ್ಮ ನೋವನ್ನು ಹೆಚ್ಚಿನ ಸಂದರ್ಭದಲ್ಲಿ ಹೇಳಿಕೊಳ್ಳುವುದೇ ಇಲ್ಲ. ಈ ಕಾರಣದಿಂದಲೇ ಹಲವರು- ‘ಅವನಿಗೇನ್ರಿ ಕಷ್ಟ,! ಮಹಾರಾಜ, ಮಹಾರಾಜನ ಥರಾ ಇದಾನೆ…’ ಎಂದು ಮಾತಾಡಿಕೊಳ್ಳುತ್ತಾರೆ. ಎಷ್ಟೊಂದು ಖುಷಿಯಾಗಿ ದ್ದಾನಲ್ಲ ಎಂದುಕೊಂಡು ಹೊಟ್ಟೆ ಉರಿದುಕೊಳ್ಳುತ್ತಾರೆ ಕೂಡಾ…
ಕೆಲವರ ಗುಣ ಹೀಗೆ: ಅವರು ಪತ್ರ ಬರೆಯುವುದು ಫುಲ್‌ಸ್ಕೇಪ್ ಹಾಳೆಯಲ್ಲೇ. ಅದರ ಎರಡೂ ಬದಿಯಲ್ಲಿ ಜಾಗವಿದೆ ಎಂದು ಅವರಿಗೂ ಗೊತ್ತಿರುತ್ತದೆ. ಹಾಗಿದ್ದರೂ, ಒಂದಕ್ಕೊಂದು ಸಾಲು ಅಂಟಿಕೊಳ್ಳುವಂತೆ ಪತ್ರ ಬರೆದಿರುತ್ತಾರೆ. ಅಕ್ಷರಗಳು ಸಣ್ಣದಿರುತ್ತವೆ. ಪುಟ ತಿರುಗಿಸಿ ಬರೆದರೆ ಏನೋ ಕಳೆದುಹೋಗುತ್ತೆ ಎಂದು ಕೊಂಡವರಂತೆ ಹಾಳೆಯ ಕೊನೆಗೇ ಇರುವೆ ಗಾತ್ರದ ಅಕ್ಷರಗಳಲ್ಲಿ ಮಾತು ಮುಗಿಸಿರುತ್ತಾರೆ. ಅನುಮಾನವೇ ಬೇಡ. ಇಂಥ ಕೈ ಬರಹದ ಜನ ಜಿಪುಣರು. ಅವರ ಜಿಪುಣತನದ ಬಗ್ಗೆ ತಮಾಷೆಗಳಿರುತ್ತವೆ, ಕಥೆಗಳಿರುತ್ತವೆ. ಆದರೂ ಈ ಜನ ಜಿಪುಣತನದಿಂದ ಆಚೆಗೆ ಬರುವುದಿಲ್ಲ. ಹೋಗಲಿ, ಫುಲ್‌ಸ್ಕೇಪ್ ಹಾಳೆಯ ಇನ್ನೊಂದು ಬದಿಯಲ್ಲಿ ಬರೆಯುವ ಉದಾರತೆಯನ್ನೂ ತೋರುವುದಿಲ್ಲ.
ಪದಗಳ ಮಧ್ಯೆ ಹೆಚ್ಚು ಗ್ಯಾಪ್ ಬಿಟ್ಟು ಬರೆಯುತ್ತಾರಲ್ಲ? ಅಂಥ ಹೆಣ್ಣು ಮಕ್ಕಳಿಗೆ ಹತ್ತು ಮಂದಿ ಮೆಚ್ಚುವಂಥ ಸೌಂದರ್ಯವಿರುತ್ತದೆ. ಫ್ಯಾಷನಬಲ್ ಆಗಿ ಮಾತಾಡುವ ‘ಕಲೆ’ ಅವರಿಗೆ ಒಲಿದಿರುತ್ತದೆ. ಒಂದು ದೊಡ್ಡ ಸಾಧನೆ ಮಾಡುವಂಥ ಕೆಪ್ಯಾಸಿಟಿ ಅವರಿಗಿರುತ್ತದೆ ನಿಜ. ಆದರೆ, ‘ಸಾಧನೆ’ಗೆ ಶ್ರಮಿಸುವ ಉತ್ಸಾಹವೇ ಇವರಿಗಿರುವುದಿಲ್ಲ. ಅಂಥ ದೊಡ್ಡ ಶ್ರದ್ಧೆಯೂ ಇರುವುದಿಲ್ಲ. ಹಾಗಾಗಿ, ದೊಡ್ಡ ‘ಎತ್ತರ’ ತಲುಪಿಕೊಳ್ಳಬಲ್ಲ ಸಾಮರ್ಥ್ಯವಿದ್ದರೂ ಇವರು ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿಯುತ್ತಾರೆ.
ಅಕ್ಷರಗಳನ್ನು ಒತ್ತಿ ಒತ್ತಿ ಬರೆಯುತ್ತಾರಲ್ಲ? ಅವರು ದೂರ್ವಾಸನ ವಂಶದವರು. ತಕ್ಷಣವೇ ಸಿಟ್ಟಾಗುತ್ತಾರೆ. ಯಕ್ಕಾಮಕ್ಕಾ ಬಯ್ಯುತ್ತಾರೆ. ಗೆಟ್‌ಔಟ್ ಅಂದೂಬಿಡುತ್ತಾರೆ. ಅಂದಹಾಗೆ, ಇವರೊಳಗೆ ‘ಸ್ವಾರ್ಥ’ ಹೆಚ್ಚಿರುತ್ತದೆ. ಪ್ರತಿಯೊಂದು ಕೆಲಸವನ್ನೂ ಅವರು ಲೆಕ್ಕಾಚಾರದಿಂದಲೇ ಮಾಡುತ್ತಾರೆ. ಎದುರು ನಿಂತವರಿಗೆ ಒಂದು ನಮಸ್ಕಾರ ಹೊಡೆಯ ಬೇಕಾಗಿ ಬಂದರೆ, ಅದರಿಂದ ಏನಾದರೂ ಉಪಯೋಗವಿದೆಯಾ ಎಂದೇ ಯೋಚಿಸುತ್ತಾರೆ.
ಚಿತ್ತುಗಳಿಲ್ಲದೆ ಅಕ್ಷರಗಳಿಂದ ಪತ್ರ ಆರಂಭಿಸಿ ಗಡಿಬಿಡಿಯಲ್ಲಿ ಮುಗಿಸುವ ಜನರಿದ್ದಾರಲ್ಲ? ಅಂಥವರಿಗೆ ತಾಳ್ಮೆ ಕಡಿಮೆ. ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅವರು ಮೊದಲು ತೋರಿದ ಉತ್ಸಾಹವನ್ನು ಕಡೆಗೆ ತೋರುವುದಿಲ್ಲ. ಈ ಕಾರಣದಿಂದಲೇ ಅವರು ‘ಯಡವಟ್ರಾಯ’ ಎಂದು ಕರೆಸಿಕೊಳ್ಳುತ್ತಾರೆ. ಒಂದು ಕೆಲಸದಲ್ಲಿ ಯಶಸ್ಸು ಪಡೆಯುವ ಮೊದಲೇ ಇನ್ನೊಂದಕ್ಕೂ ಕೈ ಹಾಕಿ ಫಜೀತಿಗೆ ಸಿಕ್ಕಿಕೊಳ್ಳುತ್ತಾರೆ.
ಕೆಲವರು ಫುಲ್‌ಸ್ಕೇಪ್ ಹಾಳೆಯಲ್ಲಿಯೇ ಬರೆದಿರುತ್ತಾರೆ. ಹಾಳೆಯ ತುಂಬಾ ಬರೆದಿರುತ್ತಾರೆ. ಆದರೆ ಅಲ್ಲಿ ಫುಲ್‌ಸ್ಟಾಪ್, ಕಮಾ, ಅಲ್ಪವಿರಾಮ, ಪ್ರಶ್ನಾರ್ಥಕ ಚಿಹ್ನೆ… ಯಾವುದೂ ಇರುವುದಿಲ್ಲ. ಒಂದು ವಾಕ್ಯ ಮುಗಿದದ್ದು ಎಲ್ಲಿ? ಹೊಸ ವಾಕ್ಯ ಶುರುವಾಗಿದ್ದೆಲ್ಲಿ ಎಂಬುದೇ ಓದುವವರಿಗೆ ಅರ್ಥವಾಗುವುದಿಲ್ಲ. ಹೀಗೆ ಬರೀತಾರಲ್ಲ- ಅವರಿಗೆ ತಮ್ಮ ಮನಸ್ಸಿನ ಮೇಲೇ ನಿಯಂತ್ರಣವಿರುವುದಿಲ್ಲ. ಅವರ ಕೈ ಮತ್ತು ಬುದ್ಧಿ ಒಟ್ಟೊಟ್ಟಾಗಿ ಓಡುವುದಿಲ್ಲ.
ಪತ್ರಗಳ ಮಧ್ಯೆ, ತಮ್ಮದೇ ಬರವಣಿಗೆಯ ಮಧ್ಯೆ ಏಕಾಏಕಿ ಬೇರೊಂದು ಭಾಷೆಯ ಪದ ಬಳಸುವ ಅಭ್ಯಾಸ ಕೆಲವರಿಗಿರುತ್ತದೆ. ಇಂಥವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದು ನೌಕರಿಯಲ್ಲಿ, ಒಂದು ಕೆಲಸದಲ್ಲಿ, ಒಂದು ಸಂಸ್ಥೆಯಲ್ಲಿ, ಒಂದೇ ಮನೆಯಲ್ಲಿ ಈ ಜನ ಹೆಚ್ಚು ದಿನ ಇರುವುದಿಲ್ಲ. ಸಣ್ಣ ಬೇಸರವಾದರೂ ಸಾಕು, ತಕ್ಷಣ ಮನಸ್ಸು ಬದಲಿಸಿ ಎದ್ದುಹೋಗಿಬಿಡುತ್ತಾರೆ. ಇಂಥವರು, ವಹಿಸಿ ಕೊಂಡ ಕೆಲಸವನ್ನು ಹತ್ತುಮಂದಿ ಒಪ್ಪುವಂತೆ ಮಾಡುತ್ತಾರೆ ನಿಜ. ಆದರೆ, ಅವರು ಒಂದೇ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ, ಹತ್ತು ಮಂದಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವುದೂ ಇಲ್ಲ.
ಒಂದು ಪತ್ರದಲ್ಲಿ ಸ್ವಲ್ಪ ಜಾಸ್ತಿಯೇ ಮಾರ್ಜಿನ್ ಬಿಟ್ಟು ಬರೆಯುತ್ತಾರಲ್ಲ? ಅಂಥವರು ಹಣಕಾಸಿನ ವಿಷಯದಲ್ಲಿ ತುಂಬ ಎಚ್ಚರ ವಹಿಸುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ -ತಮಗೆ ಲಾಸ್ ಆಗದಂತೆ ನೋಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ಗೆಳೆಯರ ಮುಂದೆ, ನಾನು ಧಾರಾಳಿ ಎಂದು ತೋರಿಸಿಕೊಳ್ಳಲೂ ಪ್ರಯತ್ನಿಸುತ್ತಾರೆ!
ಕೆಲವರಿಗೆ, ಅತೀ ಎಂಬಂಥ ಆತ್ಮವಿಶ್ವಾಸವಿರುತ್ತದೆ. ನಾನು ಯಾವತ್ತೂ ತಪ್ಪು ಮಾಡೋದೇ ಇಲ್ಲ ಎಂಬ ‘ಅಹಂ’ ಇರುತ್ತದೆ. ಇಂಥ ವರು ಪ್ರತಿಯೊಂದನ್ನೂ ಸಂಕ್ಷಿಪ್ತವಾಗಿ ಬರೆಯುತ್ತಾರೆ ನಿಜ. ಆದರೆ, ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದನ್ನೇ ಮರೆತುಬಿಟ್ಟಿರುತ್ತಾರೆ. uಛಿ ZಜZಜ್ಞಿ, ನಾನು, ಅಂದ್ರೆ ಸುಮ್ನೇನಾ ಎಂಬ ಅಹಮಿಕೆಯೇ ಅವರ ಕೆಲಸ ಕೆಡಿಸಿರುತ್ತದೆ.
ಅದು ಪತ್ರವಿರಬಹುದು, ನೋಟ್ಸ್ ಇರಬಹುದು, ಅರ್ಜಿ ಇರ ಬಹುದು… ಅದರಲ್ಲೂ ಕೆಲವೇ ಶಬ್ದಗಳಲ್ಲಿ ಮಾತು ಮುಗಿಸಿ ಕಡೆಗೆ ಸಹಿ ಮಾಡುವುದನ್ಣೇ ಮರೆಯುವ ಭೂಪತಿಗಳೂ ಇರುತ್ತಾರೆ. ಅನು ಮಾನವೇ ಬೇಡ; ಅವರೆಲ್ಲ ಸೋಮಾರಿ ಸುಬ್ಬಣ್ಣರೇ ಆಗಿರುತ್ತಾರೆ!
* * * *
ಒಂದು ಸರಳ ಸತ್ಯ ಏನೆಂದರೆ, ಕೈ ಇಲ್ಲದವರಿಗೂ ಭವಿಷ್ಯವಿರುತ್ತದೆ. ಹಾಗಾಗಿ, ಬರೆಯಲು ಬಾರದವರಿಗೆ ಭವಿಷ್ಯ ಇಲ್ಲವೆ ಎಂಬ ಕೊಂಕು ಪ್ರಶ್ನೆ ಬೇಡ. ಪರಿಚಿತರ, ಗೆಳೆಯ/ಗೆಳತಿಯರ, ಬಂಧುಗಳ ಹಳೆಯ ಪತ್ರವೋ, ಬರಹದ ಸ್ಯಾಂಪಲ್ಲೋ ಜತೆಗಿದ್ದರೆ ಅದನ್ನು ಅಂಗೈಲಿ ಹಿಡಿದುಕೊಂಡೇ ಲೇಖನ ಓದಿ. ಆಗ, ‘ಎದುರಿಗಿಲ್ಲದವರ ನಡವಳಿಕೆಯ’ ದಿವ್ಯ ದರ್ಶನವಾಗಿ- ‘ಅರೆ ಹೌದಲ್ವಾ?’ ಅನಿಸಬಹುದು, ಏನೂ ಅನ್ನಿಸದೆಯೂ ಇರಬಹುದು!

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ…

August 3, 2009

ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬಯಸಿದ್ದೆಲ್ಲ ಸಿಗುವುದು ಸಾಧ್ಯವೂ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ.

* ಪ್ರಕಾಶ, ಒಂದು ಖಾಸಗಿ ಕಂಪನಿಯಲ್ಲಿ ಸೆಕ್ಷನ್ ಇನ್‌ಚಾರ್ಜ್. ಅವನ ಕೈ ಕೆಳಗೆ ಆರು ಮಂದಿ ಕೆಲಸ ಮಾಡುತ್ತಾರೆ. ಆ ಕಂಪನಿಯಲ್ಲಿ ಸಂಬಳ ಜೋರಾಗಿದೆ. ಪಿ.ಎಫ್., ಬೋನಸ್, ರಜೆ ಸೇರಿದಂತೆ ಇತರೆ ಅನುಕೂಲಗಳೂ ಚೆನ್ನಾಗಿವೆ. ಈಗಾಗಲೇ ಪ್ರಕಾಶ ಭರ್ತಿ ಏಳು ಲಕ್ಷಕ್ಕೆ ಒಂದು ಮನೆಯನ್ನು ಲೀಸ್‌ಗೆ ಪಡೆದಿದ್ದಾನೆ. ಮೈಸೂರಿಗೆ ಸಮೀಪದಲ್ಲಿ ಒಂದು ಸೈಟನ್ನೂ ಖರೀದಿಸಿದ್ದಾನೆ. ಕೆನರಾಬ್ಯಾಂಕ್‌ನಿಂದ ಪಡೆದ ಎಂಟುಲಕ್ಷ ರೂಪಾಯಿಗಳ ಸಾಲವಿದೆ ಅನ್ನೋದು ಬಿಟ್ಟರೆ, ಅವನದು ಹೊರೆಯೇ ಇಲ್ಲದ ಸಂತೃಪ್ತ ಬದುಕು. ಇಚ್ಛೆಯನ್ನರಿತು ಬದುಕುವ ಹೆಂಡತಿ ಇದ್ದಾಳೆ. ಹತ್ತು ಮಂದಿಗೆ ಇಷ್ಟವಾಗುವಂಥ ಮಕ್ಕಳಿವೆ. ಸಮಾಜದಲ್ಲಿ, ಪ್ರಕಾಶನಿಗೆ ಒಂದು ಸ್ಥಾನಮಾನವೂ ಇದೆ…ಆದರೂ, ಪ್ರಕಾಶನಿಗೆ ನೆಮ್ಮದಿಯಿಲ್ಲ. ಅವನ ಜತೆಗೇ ಓದಿಕೊಂಡ ಒಂದಿಬ್ಬರು ತಹಶೀಲ್ದಾರ್ ಹುದ್ದೆಯಲ್ಲಿದ್ದಾರೆ. ಇನ್ನೊಂದಿಬ್ಬರು ಅಮೆರಿಕಾದಲ್ಲಿದ್ದಾರೆ. ಅವರ ಬಳಿ ಕಾರುಗಳಿವೆ. ಆಗಲೇ ಸ್ವಂತ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದನ್ನೆಲ್ಲ ಸುಮ್ಮನೇ ನೆನಪಿಸಿಕೊಂಡರೂ ಸಾಕು; ಪ್ರಕಾಶ ಖಿನ್ನನಾಗುತ್ತಾನೆ. ಜತೆಗೇ ಆಡಿದವರು, ಜತೆಗೇ ಓದಿದವರು, ಜತೆಗೇ ಬೆಳೆದವರು ಈಗ ಹೇಗಿದ್ದಾರಲ್ಲ ಎಂಬ ಒಂದೇ ಒಂದು ಯೋಚನೆ ಅವನನ್ನು ಹಣ್ಣಾಗಿಸುತ್ತದೆ. ಆಗಲೇ, ನಾನೂ ಅವರಂತೆಯೇ ಇದ್ದಿದ್ದರೆ… ಎಂದು ಯೋಚಿಸಿ ನಿಟ್ಟುಸಿರಾಗುತ್ತಾನೆ.

* ಗೌರಿಯ ಗಂಡ ಬಿಜಿನೆಸ್‌ಮನ್. ಹೊರಗೆ ಸ್ವಲ್ಪ ಜೋರಾಗಿದ್ದಾನೆ. ಮಾತೂ ಸ್ವಲ್ಪ ಒರಟೇ. ಆದರೆ, ಮನೆಯೊಳಗೆ ಮಾತ್ರ-ಅಮ್ಮಾವ್ರ ಗಂಡ. ಪ್ರತಿ ತಿಂಗಳ ಆದಾಯವನ್ನೂ ತಪ್ಪದೇ ಗೌರಿಗೆ ಒಪ್ಪಿಸುತ್ತಾನೆ. ಹೇಳಿ ಕೇಳಿ ಬಿಜಿನೆಸ್‌ಮನ್ ನೋಡಿ; ಹಾಗಾಗಿ ಒಂದಿಷ್ಟು ಕೈಬಿಗಿ ಹಿಡಿದು ಖರ್ಚು ಮಾಡುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಅಸಮಾಧಾನ, ಸಿಡಿಮಿಡಿ, ತಾತ್ಸಾರ. ‘ಪಕ್ಕದ್ಮನೆ ಪಂಕಜಾಳ ಗಂಡನ್ನ ನೋಡಿ ಕಲಿತುಕೊಳ್ರೀ- ಮೊನ್ನೆ ಅವಳು ಹಾಗೇ ಸುಮ್ಮನೆ ಮಾತಾಡುತ್ತಾ, ‘ಸೀರೆ ತಗೋಬೇಕಿತ್ತು’ ಅಂದಳಂತೆ. ಅಷ್ಟಕ್ಕೇ ಅವನು ಮರುಮಾತಾಡದೆ, ಆರು ಸಾವಿರ ರೂ. ತೆಗೆದು ಟೇಬಲ್ ಮೇಲಿಟ್ಟು ಹೋದನಂತೆ. ನೀವೂ ಇದೀರ ದಂಡಕ್ಕೆ! ಆರು ಸಾವಿರ ಕೇಳಿದ್ರೆ ಎರಡು ಸಾವಿರ ಕೊಟ್ಟು ಹೋಗಿಬಿಡ್ತೀರ’ ಎಂದೆಲ್ಲ ಅವಳು ಅವಾಗವಾಗ ಜೋರು ಮಾಡುತ್ತಾಳೆ. ಚುಚ್ಚಿ ಮಾತಾಡುತ್ತಾಳೆ. ಸ್ವಾರಸ್ಯವೆಂದರೆ, ಗೌರಿಯ ಬಳಿ ಕಡಿಮೆಯೆಂದರೂ ನಲವತ್ತೆಂಟು ಭರ್ಜರಿ ಸೀರೆಗಳಿವೆ. ಅವುಗಳನ್ನೆಲ್ಲ ಉಟ್ಟುಕೊಂಡು ಮೆರೆವ ಆಸೆ ಅವಳಿಗೆ ಖಂಡಿತ ಇಲ್ಲ. ಆದರೆ, ಸಂಸಾರದ ವಿಷಯಕ್ಕೆ ಬಂದಾಗ, ಅವಳಿಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತಿದೆ. ನನ್ನ ಗಂಡನೂ ಪಕ್ಕದ್ಮನೆಯವಳ ಗಂಡನ ಥರಾನೇ ಇರಬಾರದಿತ್ತೆ ಅನಿಸುತ್ತದೆ…
* ಅದು ದುಬಾರಿ ಡೊನೇಷನ್ ಪಡೆವ ಸ್ಕೂಲು. ಅಲ್ಲಿ ಮಕ್ಕಳು ಮಾತ್ರವಲ್ಲ, ಅವರ ತಂದೆ-ತಾಯಿಗೂ ಸಂದರ್ಶನವಿದೆ. ಪಾಸು ಆದರೆ ಮಾತ್ರ ಸೀಟು. ತಿಂಗಳು ತಿಂಗಳಿಗೂ ಶುಲ್ಕದ ಹೆಸರಿನಲ್ಲಿ ಐದೂವರೆ ಸಾವಿರ ಕೊಡಬೇಕು. ಒಂದು ಸಂತೋಷವೆಂದರೆ, ಆ ಶಾಲೆಯಲ್ಲಿ ಆಟ, ಪಾಠ, ಶಿಸ್ತು… ಎಲ್ಲವನ್ನೂ ತುಂಬ ಚೆನ್ನಾಗಿ ಕಲಿಸುತ್ತಾರೆ. ಈ ಶಾಲೆಯಲ್ಲಿ ಆರನೇ ತರಗತಿಯಲ್ಲಿದ್ದಾಳೆ ಪ್ರಿಯಾಂಕ. ತಮ್ಮ ಶಾಲೆಯಿಂದ ಅರ್ಧ ಕಿಲೋಮೀಟರು ದೂರವಿರುವ ಇನ್ನೊಂದು ಶಾಲೆಯ ಮೇಲೆ ಅವಳಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ಅಪ್ಪನ ಬಳಿ ಹೇಳುತ್ತಾಳೆ: ‘ನೋಡಿ ಪಪ್ಪಾ, ನಂಗೆ ಈ ಸ್ಕೂಲು ಇಷ್ಟವಾಗೊಲ್ಲ. ‘ಆ’ ಸ್ಕೂಲಿನಲ್ಲಿ ಹೋಂವರ್ಕೇ ಕೊಡಲ್ಲ, ಗೊತ್ತಾ? ಆದ್ರೂ ಅಲ್ಲಿ ಓದುವವರಿಗೆ ‘ಎ’ ಗ್ರೇಡ್ ಕೊಡ್ತಿದಾರೆ. ಮುಂದಿನ ವರ್ಷ ನನ್ನನ್ನು ಅಲ್ಲಿಗೇ ಸೇರಿಸಿ…

* ಸಾವಿತ್ರಮ್ಮನವರಿಗೆ ಸೊಸೆಯ ಮೇಲೆ ಮೊದಲಿಂದಲೂ ಸಿಡಿಮಿಡಿ. ಅವಳು ಕೂತರೂ ತಪ್ಪು, ನಿಂತರೂ ತಪ್ಪು. ಯಾವಾಗಲೂ ಗಂಡನಿಗೆ ಅಂಟಿಕೊಂಡೇ ಇರುತ್ತಾಳೆ ಎಂಬುದು ಅವರ ದೂರು. ಹೀಗೆ ದೂರುವಾಗಲೇ ಅವರು ಇನ್ಯಾವುದೋ ಉದಾಹರಣೆ ಹೇಳುತ್ತಾರೆ. ಯಾರೋ ಹುಡುಗಿಯ ಹೆಸರು ಹೇಳಿ- ‘ಅಂಥವಳನ್ನು ಸೊಸೆಯಾಗಿ ಪಡೆಯಲು ಪುಣ್ಯ ಮಾಡಿರಬೇಕು…’ ಎನ್ನುತ್ತಾರೆ. ಈ ಮಾತಿನ ಹಿಂದೆ, ಆ ಹುಡುಗಿಗೆ ವರದಕ್ಷಿಣೆಯ ರೂಪದಲ್ಲಿ ನೀಡಿದ ಎರಡು ಲಕ್ಷ ನಗದು, ಒಂದು ಸೈಟು, ಐದು ತೊಲೆ ಬಂಗಾರ… ಎಲ್ಲವೂ ಸೇರಿರುತ್ತದೆ. ಹಾಗೆ, ವರದಕ್ಷಿಣೆಯೊಂದಿಗೆ ಬಂದ ಹುಡುಗಿ ಅತ್ತೆ ಮನೆಯಲ್ಲಿ ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾಳೆ ಎಂಬ ಸರಳ ಸತ್ಯವನ್ನು ಸಾವಿತ್ರಮ್ಮ ಮಾತಿನ ಮಧ್ಯೆ ಮರೆತೇ ಬಿಡುತ್ತಾರೆ. ಅದೇ ಸಂದರ್ಭದಲ್ಲಿ, ಸೊಸೆ ತುಂಬ ಪ್ರೀತಿಯಿಂದ ಮಾಡುವ ಉಪಚಾರವನ್ನೂ ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರ ಮನಸ್ಸು ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುತ್ತಿರುತ್ತದೆ.

* ಹರೀಶ ಕೆಲಸಕ್ಕೆ ಸೇರಿ ಈಗಿನ್ನೂ ಆರು ತಿಂಗಳಾಗಿದೆ. ಅವನಿಗೆ ಭರ್ತಿ ಹದಿನೆಂಟು ಸಾವಿರ ಸಂಬಳವಿದೆ. ಅವನದೇ ಕೆಲಸ ಮಾಡುವ, ನಾಲ್ಕು ವರ್ಷ ಸೀನಿಯಾರಿಟಿ ಹೊಂದಿರುವ ಸಹೋದ್ಯೋಗಿಗೆ ಇಪ್ಪತ್ತೆರಡು ಸಾವಿರವಿದೆ. ಕೆಲಸ ಮಾತ್ರವಲ್ಲ, ಜವಾಬ್ದಾರಿ ಕೂಡ ಜಾಸ್ತಿ ಇದೆ. ಆದರೆ ಹರೀಶನಿಗೆ ಇದೇನೂ ಕಾಣಿಸುತ್ತಿಲ್ಲ. ನನಗಿಂತ ಅವನಿಗೆ ನಾಲ್ಕು ಸಾವಿರ ರೂ. ಜಾಸ್ತಿ ಸಂಬಳ ಎಂಬುದಷ್ಟೇ ಕಾಣುತ್ತದೆ. ಅದನ್ನೇ ಗೆಳೆಯರೊಂದಿಗೆ ಹೀಗೆ ಹೇಳಿಕೊಳ್ಳುತ್ತಾನೆ: ‘ಆ ನನ್ಮಗ ಏನು ಅಂತ ನಂಗೆ ಗೊತ್ತಿಲ್ವಾ? ಅವನಿಗೆ ಕೆಲಸವೇ ಗೊತ್ತಿಲ್ಲ. ಆದರೆ ಅವ್ನು ದಿನಾಲೂ ಬಾಸ್‌ಗೆ ಬಕೆಟ್ ಹಿಡೀತಾನೆ. ಹಾಗಾಗಿ ಸಂಬಳ ಜಾಸ್ತಿ ಇದೆ…’
ತಾನು ಹೇಳುತ್ತಿರುವ ಮಾತು ಅರ್ಧ ಸತ್ಯ, ಅರ್ಧ ಸುಳ್ಳು ಎಂದು ಹರೀಶನಿಗೇ ಚೆನ್ನಾಗಿ ಗೊತ್ತಿರುತ್ತದೆ. ಈಗ ಸಿಗುತ್ತಿರುವ ಸಂಬಳದಲ್ಲಿ ಮಹರಾಜನಂತೆ ಬದುಕುತ್ತಿರುವುದರ ಅರಿವೂ ಅವನಿಗಿರುತ್ತದೆ. ಆದರೂ ಕೈಗೆ ಸಿಗದ ಕನಸಿನ ಬೆನ್ನೇರಿಯೇ ಅವನು ಯೋಚಿಸುತ್ತಿರುತ್ತಾನೆ!

* ಹೆಂಡತಿ ಸ್ವಲ್ಪ ಫ್ಯಾಷನಬಲ್ ಆಗಿಲ್ಲ ಎನ್ನುವುದು ಮೈಕೇಲ್‌ನ ಚಿಂತೆಗೆ ಕಾರಣ. ಅವಳು ತೆಳ್ಳಗಿದ್ದಾಳೆ. ಬೆಳ್ಳಗೂ ಇದ್ದಾಳೆ. ಸೈಡ್ ಆಂಗಲ್‌ನಿಂದ ನೋಡಿದರೆ, ಒಂದಿಬ್ಬರು ಚಿತ್ರ ನಟಿಯರ ಹಾಗೂ ಕಾಣುತ್ತಾಳೆ ನಿಜ. ಆದರೆ, ಅವಳಿಗೆ ಹಸಿ ಬಿಸಿ ಪ್ರೀತಿಯಲ್ಲಿ ಆಸಕ್ತಿಯಿಲ್ಲ. ಬೆಳಗ್ಗೆ ಎದ್ದವಳೇ ಗಂಡನಿಗೆ ಕಾಫಿ ಮಾಡಿಕೊಟ್ಟು ಅಡುಗೆ ಮನೆ ಸೇರಿ ಬಿಡುತ್ತಾಳೆ. ನಂತರ, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಪೂಜೆ, ತಿಂಡಿ, ಆಪ್ತರಿಗೆ ಫೋನ್ ಮಾಡುವುದು… ಇದರಲ್ಲೇ ಸಮಯ ಕಳೆದು ಹೋಗುತ್ತದೆ. ಮಧ್ಯೆ ಈ ಮೈಕೇಲ್ ಸರಸವಾಡಲು ಬರುತ್ತಾನೆ ನಿಜ. ಇವಳೋ ಅವನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಹೋಗಲಿ, ರಾತ್ರಿಯಾದರೂ ಅವನ ರಸಿಕತೆಗೆ, ಸರಸಕ್ಕೆ ಹೆಚ್ಚಿನ ಅವಕಾಶವಿದೆಯಾ ಅಂದರೆ ಅದೂ ಇಲ್ಲ.
‘ಆಗೆಲ್ಲ ಅಯ್ಯೋ ಏನ್ರೀ ಇದು ಅಸಹ್ಯಾ, ನಂಗೆ ಒಂಚೂರೂ ಇಷ್ಟವಾಗಿಲ್ಲಪ್ಪಾ’ ಅಂದೇಬಿಡುತ್ತಾಳೆ ಮಹರಾಯರೆ, ಅವಳು ಹಾಗೆ ಹೇಳಿದಾಗೆಲ್ಲ ಮೈಕೇಲ್‌ಗೆ ಪಕ್ಕದ್ಮನೆಯ ವಯ್ಯಾರಿ ನೆನಪಿಗೆ ಬರುತ್ತಾಳೆ. ಒಂದೆರಡು ಸಂದರ್ಭದಲ್ಲಿ ಅವಳ ಹೊಕ್ಕಳು ಕಾಣುವಂತೆ ಸೀರೆಯುಟ್ಟು ಸಂಜೆ ವಾಕಿಂಗ್ ಹೋದದ್ದನ್ನು; ಸ್ವಲ್ಪ ಬೋಲ್ಡ್ ಆಗಿ ಮಾತಾಡುವುದನ್ನು ಮೈಕೇಲನೇ ಪ್ರತ್ಯಕ್ಷ ಕಂಡಿದ್ದಾನೆ. ಈ ಕಾರಣದಿಂದಲೇ ಅಂಥ ಹೆಂಡತಿ ಸಿಗಬಾರದಿತ್ತೆ ಎಂದು ಯೋಚಿಸುತ್ತಾನೆ. ಹೆಂಗಸರು, ಅದರಲ್ಲೂ ಗೃಹಿಣಿ ಅನ್ನಿಸಿಕೊಂಡವರು ಹಾಗೆಲ್ಲ ಬೋಲ್ಡ್ ಆಗಿ ವರ್ತಿಸಿದರೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ ಎಂಬುದು ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೂ, ಇಲ್ಲದ್ದರ ಕಡೆಗೇ ಅವನ ಧ್ಯಾನ…

ಈವರೆಗೂ ಹೇಳಿದ ಉದಾಹರಣೆಗಳೆಲ್ಲ ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಕಾಣುತ್ತಲೇ ಇರುವಂಥವು. ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುವ ಜನರ ಬಗ್ಗೆ ದಿನವಿಡೀ ಉದಾಹರಣೆಗಳನ್ನೂ ನೀಡಬಹುದು. ಅದು ಹೀಗೆ: ಒಂದಿಬ್ಬರು ಆಸಾಮಿಗಳು ಅಂದುಕೊಳ್ಳಿ. ದಿನವೂ ಹತ್ತಿರದ ಪೇಟೆಗೋ; ಮಾರ್ಕೆಟ್ಟಿಗೋ ಹೋಗಿ ಬರುವುದು ಅವರ ದಿನಚರಿ. ಆಟೊಗೆ ಕೊಡುವಷ್ಟು ಕಾಸಿರುವುದಿಲ್ಲವಲ್ಲ? ಹಾಗಾಗಿ ಬಸ್ಸಿಗೇ ಹೋಗಬೇಕು. ಇವರು ಬರುವ ವೇಳೆಗೆ ಬಸ್ ಹೊರಟಿರುತ್ತದೆ. ಹೇಗೋ ಓಡೋಡಿ ಬಂದು ಬಸ್ ಹತ್ತುತ್ತಾರೆ. ನಂತರ ‘ಸದ್ಯ, ಬಸ್ ಸಿಕ್ತು’ ಎಂದು ಖುಷಿ ಪಡುವುದಿಲ್ಲ. ಬದಲಿಗೆ, ‘ಏನ್ ರಶ್ಶುರೀ’ ಎಂದು ರಾಗ ಎಳೆಯುತ್ತಾರೆ. ಆಗಲೇ ಇವರಿಗೆ ‘ಸೀಟಿಲ್ಲವಲ್ಲ’ ಎಂಬ ಚಿಂತೆ ಶುರುವಾಗುತ್ತೆ. ಒಂದೆರಡು ಸ್ಟಾಪ್‌ನ ನಂತರ ಸೀಟೂ ಸಿಗುತ್ತೆ. ಈ ಪುಣ್ಯಾತ್ಮರು ಆಗಲಾದರೂ ಸುಮ್ಮನಾಗೊಲ್ಲ. ‘ಛೆ, ಕಿಟಕಿ ಪಕ್ಕ ಸೀಟು ಸಿಗಲಿಲ್ಲವಲ್ಲ…’ ಎಂದು ಚಡಪಡಿಸಲು ಶುರು ಮಾಡುತ್ತಾರೆ!

‘ಇನ್ನು ಕಾಲೇಜಿಗೆ ಹೋಗುವ ಮಕ್ಕಳು ಅಪ್ಪ/ಅಮ್ಮನಿಗೆ ಛೇಡಿಸುತ್ತಾರಲ್ಲ? ಅದನ್ನು ಹೇಳದಿರುವುದೇ ಮೇಲು. ಮಕ್ಕಳು ಕಾಲೇಜಿಗೆ ಹೋಗುತ್ತಾರೆ ಎಂದು ಗೊತ್ತಾದ ತಕ್ಷಣ ಅಪ್ಪ/ಅಮ್ಮ ತಾವು ಕೊಡಿಸಿಟ್ಟಿದ್ದ ಹಣವನ್ನೆಲ್ಲ ಹೊಂದಿಸಿ ಮೊಬೈಲು ತೆಗೆದುಕೊಡ್ತಾರೆ. ಮೊಬೈಕು ಕೊಡಿಸಲು ಪ್ರಯತ್ನಿಸುತ್ತಾರೆ. ಅವರ ಸಂಕಟ ಮಕ್ಕಳಿಗೆ ಆರ್ಥವಾಗದ್ದೇನೂ ಅಲ್ಲ. ಆದರೂ, ಮೊಬೈಲ್‌ಗೆ ಕ್ಯಾಮರಾ ಇಲ್ಲ ಎಂಬ ನೆಪ; ಮೊಬೈಕು ಸೆಕೆಂಡ್ ಹ್ಯಾಂಡು ಎಂಬ ನೆಪಗಳನ್ನು ಮುಂದೆ ಮಾಡಿ ಕ್ಯಾತೆ ತೆಗೆಯುತ್ತಾರೆ. ಈ ಮೊಬೈಲು/ಮೊಬೈಕು ಖರೀದಿಸಲು ಅಪ್ಪ/ಅಮ್ಮನಿಗೆ ಅದೆಷ್ಟು ಕಷ್ಟವಾಗಿರಬಹುದು, ಹಣ ಸಾಕಾಗದೆ ಹೋದಾಗ ಅವರು ಗೆಳೆಯ/ಗೆಳತಿ; ಸಂಬಂಕರ ಮುಂದೆ ದೈನೇಸಿಯಂತೆ ನಿಂತು ಹೇಗೆ ಪ್ರಾರ್ಥಿಸಿರಬಹುದು? ಅವರು- ‘ನಮ್ಮಲ್ಲಿ ಹಣವಿಲ್ಲ’ ಎಂದು ನಿಷ್ಠುರವಾಗಿ ಹೇಳಿದ ಸಂದರ್ಭದಲ್ಲಿ ಅವಮಾನದಿಂದ ಹೇಗೆ ಕುಗ್ಗಿ ಹೋಗಿರಬಹುದು ಎಂದು- ಉಹುಂ, ಯಾವ ಮಕ್ಕಳೂ ಯೋಚಿಸುವುದಿಲ್ಲ. ಒಂದು ಸ್ವಾರಸ್ಯವೆಂದರೆ, ಹೀಗೆಲ್ಲ ಮಕ್ಕಳ ಪೋಷಕರಿಗೇ ದಬಾಯಿಸಿ ಮಾತಾಡಲು- ಮೊಬೈಲು/ಮೊಬೈಕು ಚೆನ್ನಾಗಿಲ್ಲ ಎಂಬುದಕ್ಕಿಂತ, ನನ್ನಲ್ಲಿ ಇಲ್ಲದ್ದು ಸಹಪಾಠಿಗಳ ಬಳಿ ಇದೆ ಎಂಬ ಹೊಟ್ಟೆಕಿಚ್ಚೇ ಕಾರಣವಾಗಿರುತ್ತದೆ ಎಂಬುದು ಸುಳ್ಳಲ್ಲ.
****
ಯಾಕೆ ಹೀಗಾಗುತ್ತದೆ? ಇರುವುದೆಲ್ಲವನ್ನೂ ಬಿಟ್ಟು ಇಲ್ಲದ್ದಕ್ಕೆ ಈ ಹಾಳು ಮನಸೇಕೆ ಮನಸ್ಸು ಆಸೆಪಡುತ್ತದೆ ಎಂಬ ಪ್ರಶ್ನೆಗೆ ‘ಇದಮಿತ್ಥಂ’ ಎಂಬಂಥ ಉತ್ತರವಿಲ್ಲ. ಆದರೆ, ಅಂಥದೊಂದು ತಹತಹಕ್ಕೆ ಆಸೆಯೇ (ದುರಾಸೆಯೇ) ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬಯಸಿದ್ದೆಲ್ಲ ಸಿಗುವುದು ಸಾಧ್ಯವೂ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ. ಹೀಗೆ ಆಸೆ ಪಡುವ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿಕೊಂಡಿದ್ದ ‘ಪಾಲಿಗೆ ಬಂದದ್ದು ಪಂಚಾಮೃತ’, ‘ಕೈಗೆಟುಕದ ದ್ರಾಕ್ಷಿ ಯಾವತ್ತೂ ಹುಳಿ’ ಎಂಬಂಥ ಮಾತುಗಳು ಮರೆತೇ ಹೋಗಿರುತ್ತವೆ.
ಪರಿಣಾಮವಾಗಿಯೇ, ಎಲ್ಲರೂ ‘ಆಸೆ’ಯೆಂಬ ಮೋಹಿನಿಯ ಹಿಂದೆ ಬೀಳುತ್ತಾರೆ. ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ ಎಂದು ವೇದಾಂತ ಹೇಳುವವನೇ ಒಮ್ಮೆ ತನ್ನ ಬೋಳು ನೆತ್ತಿಯನ್ನು ಸವರಿಕೊಂಡು ಎದುರಿಗೆ ಕೂತವನ ಹಿಪ್ಪೆ ಕೂದಲಿನ ತಲೆಯನ ಹಿಪ್ಪೆ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಅವನಿಗಿರುವಂಥ ಜೊಂಪೆ ಜೊಂಪೆ ಕೂದಲು ನನಗೂ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಯೋಚನೆಯೇ ಅವನನ್ನು ಆವರಿಸಿಕೊಂಡಿರುತ್ತದೆ. ತನ್ನ ಮಾತಿಗೆ ಪರವಶರಾಗುವ ಸಾವಿರಾರು ಜನ, ಈ ಮಾತುಗಾರಿಕೆಯಿಂದಲೇ ಸಮಾಜದಲ್ಲಿ ಸಿಕ್ಕಿರುವ ಸ್ಥಾನಮಾನ, ಎಲ್ಲವನ್ನೂ ಆತ ಮರೆತುಬಿಡುತ್ತಾನೆ. ನೊಂದಿರುವ ಸಾವಿರ ಮಂದಿಗೆ ಸಮಾಧಾನ ಹೇಳುವ ಅವನ ಮನಸ್ಸೂ ಇರದುದರ ಕುರಿತೇ ಚಿಂತಿಸುತ್ತಿರುತ್ತದೆ!
ಅಂದಹಾಗೆ, ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಮೈತುಂಬ ಒಡವೆ ಹೇರಿಕೊಂಡಿದ್ದರೂ- ನಿಮ್ಮ ಆಫೀಸಿನಲ್ಲಿ ಯಾರೋ ಅಪರಿಚಿತರಿಗೆ ದಾನ ಮಾಡೋಕೆ ಹಣವಿರುತ್ತೆ. ನಾನು ಒಂದು ಒಡವೆ ಕೇಳಿದ್ರೆ ದುಡ್ಡಿಲ್ಲ ಅಂತೀರಲ್ರಿ? ಎಂದು ರೇಗುವ ಹೆಂಡತಿ; ಮಾವನ ಕೃಪೆಯಿಂದಳೇ ನೌಕರಿ ಪಡೆದೂ- ‘ನಿಮ್ಮಪ್ಪ ಒಂದು ಸೈಟು ಕೊಡಲಿಲ್ವಲ್ಲೇ’ ಎಂದು ಹೆಂಡತಿಗೆ ಕಿಚಾಯಿಸುವ ಗಂಡ; ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣದಿಂದಲೇ ಮದುವೆಗೆ ಒಪ್ಪದೆ, ಬೆಂಗಳೂರಿನ ಗಂಡೇ ಬೇಕು ಎಂದು ಹಟ ಹಿಡಿಯುವ ಹುಡುಗಿ; ಯಾವುದೋ ಗಾಳಿಮಾತು ಕೇಳಿ, ಅದನ್ನೇ ನಿಜವೆಂದು ಭಾವಿಸಿ- ಛೆ, ನಾನು ಅಂಥ ಕಡೆ ಕೆಲಸ ಮಾಡಬೇಕಿತ್ತು…’ ಎಂದು ಮೇಲಿಂದ ಮೇಲೆ ಹೇಳಿಕೊಂಡು ನರಳುವ ನಾವು-ನೀವು ಅವರು-ಇವರು… ಸದಾ ಇರದುದರ ಕಡೆಗೇ ಯೋಚಿಸುವವರೇ.
**
ಅಂದ ಹಾಗೆ, ಇಷ್ಟೆಲ್ಲ ಬರೆದ ಮೇಲೆ, ಇಡೀ ಲೇಖನವನ್ನು ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ನನಗೂ ಅನ್ನಿಸಿದೆ. ಕುತೂಹಲದಿಂದ (?) ಓದುತ್ತ ಕಡೆಯ ಸಾಲಿಗೆ ಬಂದಾಗ- ಈ ವಿಷಯದ ಬಗ್ಗೆ ಇನ್ನೂ ಚೆನ್ನಾಗಿ ಬರೀಬೇಕಿತ್ತು ಎಂಬ ಭಾವ ಓದುಗರನ್ನೂ ಕಾಡುತ್ತಿರಬಹುದು! ಅದಕ್ಕೇ ಹೇಳಿದ್ದು: ಇರುವುದೆಲ್ಲವ ಬಿಟ್ಟು…