ಮಹಾರಾಜರು ಕಾಲಿಟ್ಟ ತಕ್ಷಣ ದೀಪಗಳು ಝಗ್ಗೆಂದು…

ಚಿಕ್ಕಂದಿನಲ್ಲಿ ಅಪ್ಪ-ಅಮ್ಮನೋ; ಅಜ್ಜಿ-ತಾತನೋ ಅಥವಾ ಗೆಳೆಯನೋ ಹೇಳಿದ್ದ ಕೆಲವು ಕತೆಗಳು ಮೇಲಿಂದ ಮೇಲೆ ಬಿಟ್ಟೂ ಬಿಡದೆ ಕಾಡುತ್ತವೆ. ಹೇಳಿಕೇಳಿ ಕಥೆಗಳಲ್ಲವೆ? ಅದೇ ಕಾರಣದಿಂದ ಅವುಗಳಲ್ಲಿ ಸತ್ಯಾಂಶ ಇರುವುದಿಲ್ಲ. ಆದರೆ, ಕತೆ ಹೇಳುವವರು ತಾವು ಪ್ರತ್ಯಕ್ಷ ಕಂಡದ್ದೇನೋ ಎಂಬಂತೆ ಆ ಘಟನೆಯನ್ನು ಬಣ್ಣಿಸಿರುತ್ತಾರೆ. ಪರಿಣಾಮ, ಕಥೆ ಕೇಳಿದವರು ಕೂಡ ಅದೆಷ್ಟೋ ದಿನಗಳವರೆಗೆ ಅದು ನಿಜವೆಂದೇ ನಂಬಿರುತ್ತಾರೆ.
ಅಂಥದೊಂದು ಪ್ರಸಂಗ ಇಲ್ಲಿದೆ ಕೇಳಿ: ಇದು ಚಂದ್ರಶೇಖರ ಆಲೂರು ಅವರ ‘ನಾನು ಒಲಿದಂತೆ ಹಾಡುವೆ’ ಪ್ರಬಂಧ ಸಂಕಲನದಿಂದ ಎತ್ತಿಕೊಂಡದ್ದು. ‘ಮೈಸೂರು ಅರಮನೆಯ ಅಷ್ಟೂ ದೀಪಗಳು ಸಂಜೆಯ ವೇಳೆ, ಏಕಕಾಲಕ್ಕೆ ಝಗ್ಗನೆ ಹೊತ್ತಿಕೊಳ್ಳುತ್ತವಲ್ಲ; ಅದು ಹೇಗೆ? ಎಂಬ ಪ್ರಶ್ನೆಗೆ ಆಲೂರರ ಗೆಳೆಯನೊಬ್ಬ ಹೇಳಿದನಂತೆ: ಮೈಸೂರು ಅರಮನೆಯಲ್ಲಿ ಅದೇನೋ ಒಂದು ವಿಶೇಷ ತಂತ್ರ ಜ್ಞಾನ ಬಳಸಿದ್ದಾರಂತೆ. ಅದೇನಪ್ಪ ಅಂದ್ರೆ ದಿನಾಲೂ ಸಂಜೆ ಮಹಾರಾಜರು ಆಸ್ಥಾನಕ್ಕೆ ಬಂದು-ಸಿಂಹಾಸನದ ಮೇಲೆ ಬಲಗಾಲು ಇಟ್ಟ ತಕ್ಷಣ ಮೈಸೂರಾದಿ ಮೈಸೂರಿನ ದೀಪಗಳೆಲ್ಲ ಝಗ್ಗನೆ ಹೊತ್ತಿಕೊಳ್ತವಂತೆ!’
ಈ ಕಥೆಯನ್ನು ನಿಜವೆಂದೇ ತುಂಬಾ ದಿನಗಳ ಕಾಲ ನಂಬಿದ್ದ ಆಲೂರು ಮತ್ತು ಮಿತ್ರರು, ಆಕಸ್ಮಿಕವಾಗಿ ಮೈಸೂರಿಗೆ ಹೋದಾಗ, ಸಂಜೆಯ ವೇಳೆ ಅವರೆಲ್ಲ ನೋಡನೋಡುತ್ತಿದ್ದಂತೆಯೇ ಅರಮನೆಯ ದೀಪಗಳು ಝಗ್ಗನೆ ಹೊತ್ತಿಕೊಂಡರೆ- ‘ಓಹ್, ಈಗ ಮಹಾರಾಜರು ಸಿಂಹಾಸನದ ಮೇಲೆ ಬಲಗಾಲು ಇಟ್ಟಿದಾರೆ ಅಂತಾಯ್ತು!’ ಅನ್ನುತ್ತಿದ್ದಂತೆ.
***
ಈಗ ಸುಮ್ಮನೇ ಒಮ್ಮೆ ಯೋಚಿಸಿ. ಮಹಾರಾಜರು ಸಿಂಹಾಸನ ಮೆಟ್ಟಿದ ತಕ್ಷಣ ದೀಪಗಳು ಹೊತ್ತಿಕೊಳ್ಳುವುದೇ ನಿಜವಾಗಿದ್ದರೆ, ಆ ದೀಪಗಳನ್ನು ಆರಿಸುವುದಕ್ಕೆ ಕೂಡ ಇನ್ನೊಂದು ಟೆಕ್ನಿಕ್ ಬಳಸಬೇಕಾಗಿತ್ತು! ಜತೆಗೆ ಒಂದು ವೇಳೆ ಅವರಿಗೆ ಜ್ವರ ಗಿರ ಬಂದು ಎರಡು ಮೂರು ದಿನ ಹಾಸಿಗೆ ಹಿಡಿದಿದ್ದರೆ?
ಉಹುಂ, ಆಗ ಇಂಥ ತುಂಟ ಯೋಚನೆಗಳು ಬರುತ್ತಿರಲಿಲ್ಲ. ಕಥೆಗಳು ಕೇಳಿದಷ್ಟೂ ಖುಷಿಕೊಡುತ್ತಿದ್ದವು. ಹೀಗೇ…

ನಿಮ್ಮ ಟಿಪ್ಪಣಿ ಬರೆಯಿರಿ