ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ…
ಚಿತ್ರ: ಏನೇ ಬರಲಿ ಪ್ರೀತಿ ಇರಲಿ. ಗೀತೆ ರಚನೆ: ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ.
ಸಂಗೀತ: ಅಶ್ವತ್ಥ್ -ವೈದಿ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ.
ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ
ಸೋತು ಹೋಯಿತೆ ಜೀವ
ಮೂಕವಾಯಿತೆ ಭಾವ
ತೂಕ ತಪ್ಪಿತೆ ಬದುಕಿಗೆ ||ಪ||
ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ
ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ
ಮನಸೆಲ್ಲ ಹೊಯ್ದಾಡಿದೆ ||೧||
ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ
ನಿಂತ ನಂಬಿಕೆ ನೆಲವೆ ಮೆಲ್ಲನೆ ಸರಿಯಿತೆ
ನೋವೊಂದೆ ಫಲವಾಯಿತೆ ||೨||
ಸುಗಮ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲ; ಚಿತ್ರರಂಗದಲ್ಲೂ ಅಪರೂಪದ, ಅನುಪಮ ಗೀತೆಗಳಿಗೆ ರಾಗ ಸಂಯೋಜಿಸಿ ದವರು ಸಿ. ಅಶ್ವತ್ಥ್. ಭೂ ಲೋಕದಲ್ಲಿ ಯಮರಾಜ, ನಾರದ ವಿಜಯ, ಕಾಕನ ಕೋಟೆ, ಆಲೆಮನೆ, ಬಾಡದ ಹೂ, ಸ್ಪಂದನ, ಅನುಪಮ, ಶಿಶುನಾಳ ಷರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಚಿನ್ನಾರಿಮುತ್ತ, ಕೊಟ್ರೇಶಿ ಕನಸು… ಹೀಗೆ, ಅಶ್ವತ್ಥ್ ಸಂಗೀತ ಸಂಯೋಜನೆಯ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಗಾಂಧಿನಗರದ ಇತಿಹಾಸವನ್ನು ಒಮ್ಮೆ ತಿರುವಿ ಹಾಕಿದರೆ- ಒಂದು ಸಿನಿಮಾದ ಹಾಡುಗಳು ಸೂಪರ್ಹಿಟ್ ಆದರೆ ಸಾಕು; ನಂತರದ ಒಂದಿಡೀ ವರ್ಷ ಆ ಚಿತ್ರದ ಸಂಗೀತ ನಿರ್ದೇಶಕ ಬ್ಯುಸಿಯಾಗಿರುತ್ತಾನೆ ಎಂಬ ಸಂಗತಿ ಸ್ಪಷ್ಟವಾಗುತ್ತದೆ.
ಆದರೆ, ಸಿ. ಅಶ್ವತ್ಥ್ ಅವರ ವಿಷಯದಲ್ಲಿ ಈ ಮಾತು ಸುಳ್ಳಾಗಿತ್ತು. ಏಕೆಂದರೆ, ಒಂದು ಸಿನಿಮಾಕ್ಕೆ ಸಂಗೀತ ನೀಡಿದ ನಂತರ, ಚಿತ್ರರಂಗಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ, ಅಲ್ಲಿಂದ ಎದ್ದು ಸುಗಮ ಸಂಗೀತ ಕ್ಷೇತ್ರಕ್ಕೆ ಬಂದುಬಿಡುತ್ತಿದ್ದರು ಅಶ್ವತ್ಥ್. ಮುಂದೆ ಒಂದೋ ಎರಡೋ ವರ್ಷಗಳು ಭಾವಗೀತೆಗಳ ರಾಗ ಸಂಯೋಜನೆಯಲ್ಲಿಯೋ, ಗಾಯನದಲ್ಲಿಯೊ ಅಥವಾ ಇನ್ಯಾವುದೋ ಹೊಸ ಸಾಹಸದಲ್ಲಿಯೋ ಕಳೆದುಹೋಗುತ್ತಿದ್ದವು. ಹೀಗೆ, ಚಿತ್ರರಂಗದಲ್ಲಿ ಎಲ್ಲರೂ ಸ್ವಲ್ಪ ಸ್ವಲ್ಪ ಮರೆತಿದ್ದಾರೆ ಎನ್ನುವಾಗ ದಢದಢನೆ ನಡೆದು ಬಂದು ಇನ್ನೊಂದು ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗೆಲುವಿನ ನಗು ಬೀರುತ್ತಿದ್ದರು ಅಶ್ವತ್ಥ್.
೧೯೭೯ರಲ್ಲಿ ತೆರೆಗೆ ಬಂದ ಸಿನಿಮಾ-ಏನೇ ಬರಲಿ ಪ್ರೀತಿ ಇರಲಿ. ಈ ಚಿತ್ರದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ…’ ಗೀತೆಯ ಬಗ್ಗೆ ಬರೆಯಲು ಹೊರಟಾಗ, ಅಶ್ವತ್ಥ್ ಅವರ ಗೀತಯಾತ್ರೆಯ ಬಗ್ಗೆಯೂ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಬೇಕಾಯಿತು. ಇಲ್ಲಿ ದಾಖಲಿಸಬೇಕಾದ ಇನ್ನೊಂದು ಮುಖ್ಯ ವಿಷಯವಿದೆ. ಏನೆಂದರೆ, ಸಿ. ಅಶ್ವತ್ಥ್ ಹಾಗೂ ಎಲ್. ವೈದ್ಯನಾಥನ್ ಅವರು ಒಂದಾಗಿ ಸಂಗೀತ ನಿರ್ದೇಶನ ಮಾಡಲು ಆರಂಭಿಸಿದ್ದು ‘ ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಿಂದ. ಅದಕ್ಕೂ ಮುಂಚೆ ಅಶ್ವತ್ಥ್, ಹಾಡುಗಳಿಗೆ ಟ್ಯೂನ್ ಸಿದ್ಧಮಾಡಿಕೊಂಡು ಮದ್ರಾಸಿಗೆ ಹೋಗುತ್ತಿದ್ದರು. ಅಲ್ಲಿ ರೆಕಾರ್ಡಿಂಗ್ ಸಂದರ್ಭದಲ್ಲಿ ಅರ್ಕೆಸ್ಟ್ರಾ ತಂಡವನ್ನು ಬ್ಯಾಲೆನ್ಸ್ ಮಾಡುವ ಕೆಲಸವನ್ನು ವೈದ್ಯ ನಾಥನ್ ಮುಗಿಸಿಕೊಡುತ್ತಿದ್ದರು. ಸಿನಿಮಾದ ಟೈಟಲ್ ಕಾರ್ಡ್ ನಲ್ಲಿ ಸಂಗೀತ: ಸಿ. ಅಶ್ವತ್ಥ್, ನೆರವು/ಸಹಾಯ: ಎಲ್. ವೈದ್ಯನಾಥನ್ ಎಂದು ಹಾಕಲಾಗುತ್ತಿತ್ತು.
ತಾವಿಬ್ಬರೂ ಜತೆಯಾಗಿ ಸಂಗೀತ ನಿರ್ದೇಶನ ಮಾಡಲು ಕಾರಣ ವಾದ ಸಂದರ್ಭ ಮತ್ತು ‘ಪ್ರೀತಿಯ ಕನಸೆಲ್ಲಾ-‘ಹಾಡು ಸೃಷ್ಟಿಯ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಸ್ನೇಹಿತರಾದ ಸುಪ್ರಭಾ ಅವರಿಗೆ ಹಿಂದೊಮ್ಮೆ ಅಶ್ವತ್ಥ್ ಅವರೇ ಹೀಗೆ ವಿವರಿಸಿದ್ದರು:
‘ಸ್ಪಂದನ’ ಚಿತ್ರ ನಿರ್ಮಿಸಿದ್ದ ಪಿ. ಶ್ರೀನಿವಾಸ್, ಆನಂತರದಲ್ಲಿ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರ ತಯಾರಿಸಲು ಮುಂದಾದರು. ಆ ಚಿತ್ರಕ್ಕೆ ಅವರದೇ ಕಥೆ. ನಾಯಕನೂ ಅವರೇ. ನಾಯಕಿಯ ಪಾತ್ರಕ್ಕೆ ಮಂಜುಳಾ ಅವರನ್ನು ಆಯ್ಕೆ ಮಾಡಿದ್ದರು. ಸಂಗೀತ ನಿರ್ದೇಶನದ ಹೊಣೆ ನನ್ನ ಹೆಗಲಿಗೆ ಬಿದ್ದಿತ್ತು. ಈ ಸಿನಿಮಾದ ಮಾತುಕತೆಯ ಸಂದರ್ಭದಲ್ಲಿ ಪಿ. ಶ್ರೀನಿವಾಸ್ ಹಾಗೂ ನನಗೆ ಆತ್ಮೀಯರಾಗಿದ್ದ ಕೃಷ್ಣರಾವ್ ಅವರೂ ಇದ್ದರು. ಚಿತ್ರದಲ್ಲಿ ಸಂಗೀತ ಬಳಕೆ ಹೇಗಿರಬೇಕು ಎಂದು ಚರ್ಚಿಸುತ್ತಿದ್ದಾಗ ಅವರು ಹೇಳಿದರು: ‘ರೀ ಅಶ್ವತ್ಥ್, ನಿಮ್ಮದೂ- ವೈದೀದೂ ಒಳ್ಳೇ ಸಾಮರಸ್ಯದ ಜೋಡಿ ಕಣ್ರೀ. ಈವರೆಗಿನ ನಿಮ್ಮ ಚಿತ್ರ ಸಂಗೀತದ ಯಾತ್ರೆಯಲ್ಲಿ ಜತೆಗಾರನಾಗಿ ವೈದಿ ಯಾವಾಗಲೂ ಇದ್ದಾರೆ. ನೀವ್ಯಾಕೆ ಈಗ ಅಧಿಕೃತವಾಗಿ ಅಶ್ವತ್ಥ್-ವೈದಿ ಅಂತ ಜೋಡಿಯಾಗಿ ಸಂಗೀತ ನಿರ್ದೇಶನಕರಾಗಬಾರದು?’
ಕೃಷ್ಣರಾವ್ ಅವರ ಈ ಮಾತು ನನಗೆ ಒಪ್ಪಿಗೆಯಾಯಿತು. ವೈದಿ ಅವರಿಗೂ ಒಪ್ಪಿಗೆಯಾಯಿತು. ಪರಿಣಾಮವಾಗಿ-‘ ಏನೇ ಬರಲಿ ಪ್ರೀತಿ ಇರಲಿ’ ಸಿನಿಮಾದ ಮೂಲಕ ನಾವು ಜತೆಯಾಗಿ ಕೆಲಸ ಮಾಡಲು ಆರಂಭಿಸಿದೆವು.
ಹೊಸದಾಗಿ ಮದುವೆಯಾದ ದಂಪತಿಗಳ ಸುತ್ತ ಹೆಣೆಯಲಾದ ಕಥೆ ‘ಏನೇ ಬರಲಿ ಪ್ರೀತಿ ಇರಲಿ’ ಚಿತ್ರದಲ್ಲಿತ್ತು. ಮಧ್ಯಮ ವರ್ಗದವರ ಪೇಚಾಟಗಳು, ಆರ್ಥಿಕ ತೊಂದರೆ, ಅವರ ಪ್ರೀತಿ, ಸಂಕಟ… ಇತ್ಯಾದಿ ಇತ್ಯಾದಿ ಈ ಸಿನಿಮಾದ ಕಥಾವಸ್ತು. ಬಯಸಿದ್ದೆಲ್ಲಾ ಬಾಳಲ್ಲಿ ಸಿಗದೇ ಹೋದಾಗ ನಾಯಕ ಅಸಹಾಯಕನಾಗಿ ಕೂತುಬಿಡುವ ಒಂದು ಸಂದರ್ಭವಿತ್ತು. ಅಲ್ಲಿಗೆ ಒಂದು ಹಾಡು ಹಾಕಿದರೆ ಚೆಂದ ಎಂದು ನನಗೆ ಅನ್ನಿಸಿತು. ಅದನ್ನೇ ಶ್ರೀನಿವಾಸ್ಗೆ ಹೇಳಿದೆ. ನನ್ನ ಮಾತು ಅವರಿಗೂ ಇಷ್ಟವಾಯ್ತು. ಹಾಡನ್ನು ಯಾರಿಂದ ಬರೆಸುವುದು ಎಂದುಕೊಂಡಾಗ ನೆನಪಾದದ್ದು ಕವಿ ಲಕ್ಷ್ಮೀ ನಾರಾಯಣ ಭಟ್ಟರು. ಈ ಹಿಂದೆ ‘ಸ್ಪಂದನ’ ಚಿತ್ರಕ್ಕೂ ಭಟ್ಟರು-‘ ಎಂಥಾ ಮರುಳಯ್ಯ ಇದು ಎಂಥಾ ಮರುಳೂ…’ ಎಂಬ ಗೀತೆ ಬರೆದುಕೊಟ್ಟಿದ್ದರು. ಅದೇ ಸೆಂಟಿಮೆಂಟ್ ಜತೆಗಿಟ್ಟುಕೊಂಡು ಭಟ್ಟರಲ್ಲಿ ಹೊಸ ಗೀತೆಗೆ ಮನವಿ ಮಾಡಿಕೊಂಡೆವು. ಭಟ್ಟರು ತುಂಬ ಸಂಭ್ರಮದಿಂದ ‘ಪ್ರೀತಿಯ ಕನಸೆಲ್ಲಾ ಕರಗಿ ಹೋಯಿತೆ ಕೊನೆಗೂ’… ಗೀತೆ ಬರೆದುಕೊಟ್ಟರು.
ಈ ಹಾಡಿಗೆ ರಾಗ ಸಂಯೋಜಿಸಿದ ಸಂದರ್ಭ ಇದೆಯಲ್ಲ? ಅದು ಬಹಳ ವಿಶೇಷವಾದದ್ದು. ಹಾಡಿನ ಸಂಯೋಜನೆಗೆ ಕೂತಾಗ ವೈದಿ ಹಾರ್ಮೋನಿಯಂ ತಂದ್ರು. ಮದ್ರಾಸಿನ ಹೋಟೆಲ್ ರೂಂನಲ್ಲಿ ಕುಳಿತೆವು. ಆಗೆಲ್ಲ ನಾನು-ವೈದಿ ಸಂವಾದ ನಡೆಸುತ್ತಿದ್ದುದು ಹೆಚ್ಚಾಗಿ ಇಂಗ್ಲಿಷಿನಲ್ಲೇ. qsಟ್ಠ oಠಿZಠಿ ಠಿeಛಿ oಟ್ಞಜ ಅoeಡಿZಠಿe ಅಂದ್ರು ವೈದಿ. ಎರಡು ನಿಮಿಷದ ನಂತರ, ನಾನು ಈ ಗೀತೆಯನ್ನು ಹಾಡಿದಾಗ, ವೈದಿ ಭಾವಪರವಶರಾಗಿ ಅತ್ತೇ ಬಿಟ್ರು. ಆಗಲೇ ನನಗೆ ಅನ್ನಿಸಿಬಿಡ್ತು: ‘ಈ ಹಾಡಲ್ಲಿ, ಈ ಸಂಗೀತದಲ್ಲಿ ಏನೋ ಆಕರ್ಷಣೆ ಇದೆ…’
ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಹೇಳಬೇಕು. ಈ ಗೀತೆಯನ್ನು ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸುವುದೆಂದು ನಿರ್ಧರಿಸಲಾಗಿತ್ತು. ಜೆಮಿನಿ ಸ್ಟುಡಿ ಯೋದಲ್ಲಿ ರೆಕಾರ್ಡಿಂಗ್. ಆರ್ಕೆಸ್ಟ್ರಾ ತಂಡದವರೆಲ್ಲ ಸಿದ್ಧವಾಗಿದ್ದರು. ಎಸ್ಪಿ ಕೂಡಾ ಹಾಡಲು ಸಿದ್ಧರಾಗಿ ಬಂದರು. ಆಗ ವೈದಿ ಹೇಳಿದರು: ಅಶ್ವತ್ಥ್, ನಾನು ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡುತ್ತೇನೆ. ನೀವು ಆ ಕಡೆಯಲ್ಲಿ ನಿಂತು ೧,೨,೩-೧,೨,೩ ಹೇಳಿ ಎಂದರು. (ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಸ್ವರ ತಾಳದ ಏರಿಳಿತವನ್ನು ಗಾಯಕರು ಹಾಗೂ ವಾದ್ಯಗಾರರಿಗೆ ತಿಳಿಸಲೆಂದು ೧,೨,೩ ಹೇಳಲಾಗುತ್ತದೆ.) ಆ ರೀತಿ ಮಾಡಲು ನನಗೆ ಸಂಕೋಚ, ಭಯ ಇತ್ತು. ಹಾಗಾಗಿ- ‘ಇಲ್ರೀ, ನನ್ನಿಂದ ಈ ಕೆಲಸ ಆಗಲ್ಲ’ ಅಂದುಬಿಟ್ಟೆ. ಅದೇನೂ ಅಂಥ ಕಷ್ಟವಲ್ಲ ಅಶ್ವತ್ಥ್. ನೀವು ಸುಮ್ನೆ ೧,೨,೩ ಹೇಳ್ತಾ ಹೋಗಿ ಎಂದು ವೈದಿ ಇನ್ನಿಲ್ಲದಂತೆ ಹೇಳಿದರು. ನನಗೆ ಅದ್ಯಾಕೋ ಆ ಕೆಲಸ ಮಾಡಲು ಧೈರ್ಯ ಬರಲಿಲ್ಲ. ಸುಮ್ಮನಾಗಿಬಿಟ್ಟೆ. ಇದನ್ನು ಗಮನಿಸಿದ ಎಸ್ಪಿ ಅವರು- ನಾನೇ ಆರ್ಕೆಸ್ಟ್ರಾ ಬ್ಯಾಲೆನ್ಸ್ ಮಾಡ್ತೇನೆ ಬಿಡಿ’ ಎಂದರು. ಹಾಗೆಯೇ ಮಾಡಿದರು!
ಮೂರನೇ ಟೇಕ್ನಲ್ಲಿ ಹಾಡು ಓಕೆ ಆಯಿತು. ನಂತರ ಪಿ.ಎನ್. ಶ್ರೀನಿವಾಸ್ ಹಾಗೂ ಕೃಷ್ಣರಾವ್ ಈ ಹಾಡು ಕೇಳಿ ಮೆಚ್ಚಿಕೊಂಡರು. ನಮ್ಮ ಕೃಷ್ಣರಾವ್ ಅವರ ಸ್ನೇಹಿತನೊಬ್ಬ ಇದ್ದ. ಕುಮಾರ್ ಎಂದು ಅವನ ಹೆಸರು. ಅವನು ಕೊಳಲು ವಾದಕ. ಅವನಿಗೆ ಅದೇನೋ ಮನೆ ಕಡೆಯ ತೊಂದರೆ. ಈ ಕಾರಣಕ್ಕೇ ಕುಡಿಯಲು ಕಲಿತಿದ್ದ. ಅವನು, ಈ ಹಾಡು ಕೇಳಿದವನೇ-ಈ ಹಾಡೊಳಗೆ ನನ್ನ ಸಂಕಟವೆಲ್ಲಾ ಇದೆ ಅಂದ. ಈ ಹಾಡನ್ನು ಪದೇ ಪದೆ ಕೇಳೋದು, ಮತ್ತೆ ಕುಡಿದು ಬಿಕ್ಕಳಿಸೋದು… ಹೀಗೇ ಮಾಡ್ತಾ ಇದ್ದ. ಮಧ್ಯರಾತ್ರಿ ೧.೩೦ ಆದರೂ ಆ ಮಹರಾಯನ ಅಳು ನಿಲ್ಲಲೇ ಇಲ್ಲ.
ಇದೆಲ್ಲ ನನ್ನ ಕಣ್ಣೆದುರೇ ನಡೀತಿತ್ತು ನೋಡಿ, ಹಾಗಾಗಿ ಸಹಜ ವಾಗಿಯೇ ಖುಷಿಯಾಗ್ತಾ ಇತ್ತು. ಒಂದು ಹಾಡಿಗೆ ಹೀಗೆ ಹತ್ತಾರು ಮಂದಿಯನ್ನು ಕಾಡುವ ಶಕ್ತಿ ಬರಬೇಕಾದರೆ ಅದಕ್ಕೆ ಎಸ್ಪಿ ಬಾಲಸುಬ್ರಹ್ಮಣಂ ಅವರ ದನಿಯಲ್ಲಿನ ಮಾಧುರ್ಯವೇ ಕಾರಣ ಅನ್ನಿಸ್ತು. ಅವರಿಗೆ ಅಭಿನಂದನೆ ಹೇಳೋಣ ಅನ್ನಿಸ್ತು. ಅದು ಅಪರಾತ್ರಿ. ಸವಿನಿದ್ರೆಯ ಸಮಯ. ಪೋನ್ ಮಾಡಲು ಇದು ಸಮಯವಲ್ಲ ಎಂದು ಗೊತ್ತಿದ್ದೂ ಡಯಲ್ ಮಾಡಿಬಿಟ್ಟೆ. ಅವರು ಹಲೋ ಎಂದ ತಕ್ಷಣ- ಬಾಲು ಅವರೇ, ನಮಸ್ಕಾರ. ನಿಮ್ಮ ದನಿಯಿಂದ ನನ್ನ ಈ ಹಾಡಿಗೆ ಜೀವ ಬಂದಿದೆ. ನಾವೆಲ್ಲರೂ ಇಷ್ಟು ಹೊತ್ತು ಆ ಹಾಡನ್ನೇ ಕೇಳ್ತಾ ಇದ್ವಿ. ಧನ್ಯವಾದಗಳು’ ಅಂದೆ.
ಆಗ ಬಾಲು ಏನೆಂದರು ಗೊತ್ತೇ? ಈಟ qsಟ್ಠ hಟಡಿ ಡಿeZಠಿ ಐZಞ ಈಟಜ್ಞಿಜ ಘೆಟಡಿ ಅoeಡಿZಠಿeಜಿ, ಐZಞ ಔಜಿoಠಿಛ್ಞಿಜ್ಞಿಜ ಠಿಟ qsಟ್ಠ್ಟ oಟ್ಞಜ. ಐಠಿ ಜಿo ಠಿeಛಿ ಟಞmಟoಜಿಠಿಜಿಟ್ಞ ಡಿeಜ್ಚಿe eZo bಟ್ಞಛಿ ಠಿeಛಿ ಞZಜಜ್ಚಿ (ನಾನು ಏನ್ಮಾಡ್ತಾ ಇದ್ದೆ ಗೊತ್ತಾ ಅಶ್ವತ್ಥ್? ಆ ಹಾಡನ್ನೇ ಕೇಳ್ತಾ ಇದ್ದೆ. ನಿಮ್ಮ ಅಪೂರ್ವ ಸಂಯೋಜನೆಯಿಂದ ಈ ಹಾಡಿಗೊಂದು ಕಳೆ ಬಂದಿದೆ) ಅಂದರು. ಎಸ್ಪಿ ಅವರಂಥ ಮಹಾನ್ ಗಾಯಕನಿಂದ ಈ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಭಾವುಕನಾಗಿ-‘ಬಾಲು ಅವರೇ, ನಿಮ್ಮ ಮಾತು ದೊಡ್ಡದು, ಮನಸೂ ದೊಡ್ಡದು’ ಎಂದು ಹೇಳಿ ಪೋನ್ ಇಟ್ಟೆ.
ಮರುದಿನ ಬೆಳಗ್ಗೆ ಅದೇ ಜೆಮಿನಿ ಸ್ಟುಡಿಯೋದಲ್ಲಿ ನನ್ನ ಸಂಗೀತ ನಿರ್ದೇಶನದಲ್ಲಿ ಇನ್ನೊಂದು ಚಿತ್ರದ ರೆಕಾರ್ಡಿಂಗ್ ಇತ್ತು. ಅಲ್ಲಿಗೆ ವೈದಿ ಕೂಡ ಬಂದಿದ್ದರು. ನನ್ನನ್ನು ಕಂಡವರೇ ಕೈ ಕುಲುಕಿ- ‘ಅಶ್ವತ್ಥ್, ಎಂಥ ಅದ್ಭುತ ಸಂಯೋಜನೆಯಯ್ಯಾ ನಿನ್ನದು? ನಾನು, ನಿನ್ನೆ ರಾತ್ರಿ ಕನಿಷ್ಠ ಪಕ್ಷ ಹತ್ತು ಬಾರಿಯಾದರೂ ಆ ಹಾಡು ಕೇಳಿದ್ದೇನೆ. ಮನಸ್ಸು ಹಾಗೂ ಹೃದಯವನ್ನು ಏಕಕಾಲಕ್ಕೆ ಆವರಿಸಿಕೊಂಡ ಗೀತೆ ಅದು. ಗಾಯನಕ್ಕಿಂತ ರಾಗ ಸಂಯೋಜನೆ ಚೆಂದ. ಸಂಗೀತಕ್ಕಿಂತ ಗಾಯನವೇ ಚೆಂದ ಎಂದು ನನಗಂತೂ ಪದೇ ಪದೆ ಅನ್ನಿಸ್ತಾ ಇತ್ತು’ ಅಂದರು. ಏಕಕಾಲದಲ್ಲಿ ಒಬ್ಬ ಗಾಯಕ, ಒಬ್ಬ ಸಂಗೀತ ಸಂಯೋಜಕ ಹಾಗೂ ವಾದ್ಯ ಸಂಯೋಜಕರು ಒಂದು ಹಾಡಿನಿಂದ ಪ್ರಭಾವಿತರಾದರಲ್ಲ… ಅಂಥದೊಂದು ಗೀತೆಗೆ ನಾನು ಸಂಗೀತ ಸಂಯೋಜನೆ ಮಾಡಿದೆನಲ್ಲ? ಅದು ನನ್ನ ಬದುಕಿನ ಮಹತ್ವದ ಕ್ಷಣ ಎಂದೇ ಭಾವಿಸ್ತೇನೆ…’
ಹೀಗೆಂದು ಮಾತು ಮುಗಿಸಿದ್ದರು ಅಶ್ವತ್ಥ್ .
***
ಸಮಯ ಸಿಕ್ಕರೆ ಈ ಅಪರೂಪದ ಹಾಡು ಕೇಳಿ. ಎಂಥ ಅರಸಿಕನಿಗೂ ಹಾಡು ಇಷ್ಟವಾಗುತ್ತದೆ. ಆನಂತರ ಅದನ್ನು ಮರೆಯುವುದೇ ಕಷ್ಟವಾಗುತ್ತದೆ!
ನಿಮ್ಮದೊಂದು ಉತ್ತರ